ಭಾನುವಾರ, ಅಕ್ಟೋಬರ್ 7, 2012

ಕ್ಷಮಿಸಿ, ನಾ ಅರಳಲೇಬೇಕು..!

 ladaiprakaashana krupe
ನಾಟಕ

(ಬೆಂಜಮಿನ್ ಮೊಲಾಯಿಸ್ ಜೀವನಾಧಾರಿತ)

ಸುಧಾ ಚಿದಾನಂದಗೌಡ




ಪಾತ್ರವಿವರ

ಬೆಂಜಮಿನ್ ಮೊಲಾಯಿಸ್  : ದಕ್ಷಿಣ ಆಫ್ರಿಕಾದ ಕಪ್ಪು ಕವಿ. (ಬಿಳಿಯ ಪೊಲೀಸ್ ಫಿಲಿಪ್ ಸೆಲೆಪೆಯನ್ನು ಕೊಂದ
                      ಆರೋಪದ ಮೇಲೆ ಗಲ್ಲು ಶಿಕ್ಷೆಗೊಳಗಾಗುತ್ತಾನೆ)
ಜನರಲ್                ಬೋಥಾನ ಜೈಲ್ ಉನ್ನತ ಅಧಿಕಾರಿಗಳಲ್ಲೊಬ್ಬ.
ವಿಲಿಯಂ              : ಪತ್ರಕರ್ತ, ಜನರಲ್ ಇವನನ್ನು ಬಾತ್ಮೀದಾರನಂತೆ ಬಳಸಿಕೊಳ್ಳುತ್ತಾನೆ
ಥಾಮಸ್              : ಯುವನೀಗ್ರೋ ,ಬೆಂಜಮಿನ್ ಅಭಿಮಾನಿ
ಅಬ್ರಹಾಂ              : ಪ್ರಬುದ್ಧ ನೀಗ್ರೋ. ಕವಿಗೋಷ್ಟಿಯ ಸಂಘಟಕ
ಸೂಸಾನ್ನ              : ನೀಗ್ರೋ ಯುವತಿ, ತನ್ನ ಜನಾಂಗದ ಸ್ಥಿತಿಗತಿಗಳ ಕುರಿತು ಚಿಂತಿಸುವವಳು
ಮರಿಯಂ             :  ಮಧ್ಯವಯಸ್ಕ ನೀಗ್ರೋ ಮಹಿಳೆ, ಸೂಸಾನ್ನಳ ಸೋದರಸಂಬಂಧಿ, ಸ್ವಾತಂತ್ರ್ಯದ ಹಂಬಲಿಕೆಯುಳ್ಳವಳು                ಬಿಳಿಯ ಪೊಲೀಸ್ ಮುಖ್ಯಸ್ಥ: ಜನರಲ್ ಆಣತಿಯಂತೆ ಕಾರ್ಯನಿರ್ವಹಿಸುವವನು
ಬಿಳಿಯ ನ್ಯಾಯಾಧೀಶ
ಇತರೆ                : ನಿಗ್ರೋ ನಾಗರಿಕರು, ಪೊಲೀಸರು

ದೃಶ್ಯ ೧

ಕ್ರಿ.ಶ.೧೯೮೨ನೇ ಇಸ್ವಿ ಮಳೆಗಾಲ
ಮೇಮ್ ಲೋದಿ ಗ್ರಾಮ
ಪ್ರಿಟೋರಿಯಾ
ದಕ್ಷಿಣ ಆಫ್ರಿಕಾ

ನೀಗ್ರೋ ೧    ಕವಿಗೋಷ್ಟಿಯಂತೆ..? ಮೇಮ್ ಲೋದಿಯ ಬುದ್ಧಿಜೀವಿಗಳಿಗೆ ಸಡಗರ. ನಾವು ಕೇಳೋಣ..

ನೀಗ್ರೋ ೨    ಹೂಂ..ಜೊತೆಗೆ ಆತಂಕ. ಕೆಲವರಲ್ಲಿ ಭಯಕೂಡ..  ಇರಬೇಕಾದ್ದೇ ಮತ್ತೆ..ಬಿಳಿಯ ಪೊಲೀಸರ ಓಡಾಟ ಹೆಚ್ಚಾಗಿರುವುದನ್ನು ಗಮನಿಸಿದೆಯ?

ನೀಗ್ರೋ ೩    ಹೆದರಿದರು ತೋರಿಸಿಕೊಳ್ಳಬಾರದು ಕಣ್ರಯ್ಯಾ... ನೋಡಿ, ಕೆಲವು ಯುವಕರು ಉದ್ವಿಗ್ನತೆಯಲ್ಲಿರುವರು. ಯಾರೇನು ಹೇಡಿಗಳಲ್ಲ ಇಲ್ಲಿ..

ನೀಗ್ರೋ ೧    ಹೆದರುವುದು ಹೇಡಿಗಳ ಕೆಲಸ ಎಂದು ಜೈಲೊಳಗಿಂದಲೇ ಗರ್ಜಿಸಿದ್ದಾರಲ್ಲ ಮಂಡೆಲಾ!

ಥಾಮಸ್     ಅವರು..ಬರ್‍ತಾರೆ ತಾನೆ..?

ಅಬ್ರಹಂ         ಯಾರಯ್ಯಾ..? (ರೇಗುವನು)

ಥಾಮಸ್     (ಉಗುಳು ನುಂಗುತ್ತ) ಅದೇ.. ..ಅವರು..

ಅಬ್ರಹಂ     (ಪ್ರಸನ್ನತೆ, ಹೆಮ್ಮೆಯಿಂದ) ಬೆಂಜಮಿನ್ ಮೊಲಾಯಿಸ್..? ಖಂಡಿತಾ ಬರ್‍ತಾರೆ. ತಪ್ಪಿಸೋದಿಲ್ಲ. ಅನುಮಾನವೇ ಇಟ್ಟುಕೋಬೇಡಯ್ಯಾ. ಬೆಂಜಮಿನ್ ಬಂದೇ ಬರ್‍ತಾರೆ. ಕವನ ಬರೆಯುವ ಹುಲಿಗೆ ಇವರೆಲ್ಲ ಲೆಕ್ಕವಾ?(ಬಿಳಿಯ ಪೋಲಿಸರತ್ತ ತಿರಸ್ಕಾರದ ನೋಟ ಹರಿಸುವನು)

ನೀಗ್ರೋ ೨     ಬಂದ್ರೂಬ॒ಂದ್ರೂ॒

ನೀಗ್ರೋ    ೩    ಓಹ್, ಇವರೇನಾ..ಇಷ್ಟು ಚಿಕ್ಕವರಾ.. ..?

(ಸಭೆ ನಿಶ್ಯಬ್ದವಾಗುವುದು ಬೆಂಜಮಿನ್ ಪ್ರವೇಶಿಸಿ ಮೆಲುದನಿಯಲ್ಲಿ ಪಕ್ಕದಲ್ಲಿದ್ದವರೊಡನೆ ಸಂಭಾಷಿಸುತ್ತ ವೇದಿಕೆಯೇರಿ ನಿಲ್ಲುವನು. ಸಮೂಹಗೀತೆಯಿಲ್ಲ. ಸ್ವಾಗತವಿಲ್ಲ. ನಿರೂಪಣೆಯಿಲ್ಲ. ಪರಿಚಯ ಭಾಷಣವೂ ಇಲ್ಲ. ಅಪ್ಪಟ ಕಪ್ಪುವರ್ಣದ ಗೂಂಗುರು ಕೂದಲು, ದಪ್ಪತುಟಿ, ಸಣ್ಣ ಕಣ್ಣುಗಳ, ಸರಳವಾದ ಸೂಟ್‌ನಲ್ಲಿರುವನು. ಅವನ ಸೆಟೆದ ಎದೆ, ಮಿಂಚಿನ ದೃಷ್ಟಿ, ಏನನ್ನೂ ಹೇಳದೆ ಮೌನವಾಗಿ ಜೇಬಿನಿಂದ ಕಾಗದವನ್ನು ತೆಗೆದು, ಬಿಡಿಸಿ, ಕವನ ಓದಲಾರಂಭಿಸುವನು.)

ಬೆಂಜಮಿನ್ ಮೊಲಾಯಿಸ್.
   
ನಾವು ಗೂಬೆಗಳಲ್ಲ.
    ಕತ್ತಲ ಗುಹೆ ನಮ್ಮ ಮನೆಯಲ್ಲ.
    ಮಲೆತು ನಿಂತ ನೀರು.
ಸೂರ್ಯನಿಲ್ಲದ ನೆಲ ನಾವೊಲ್ಲೆವು.
    ಈ ಕ್ಷಣ ಉಸಿರು ನಿಂತರೆ ಭಯವಿಲ್ಲ.
ನಮ್ಮದಾದ ನೆಲಕ್ಕೆ ರಕ್ತ ಹರಿಸುತ್ತೇವೆ.
ಒಳಗನ್ನು ಫಲಗೊಳಿಸುತ್ತೇವೆ.
    ಸ್ವಚ್ಛ ಗಾಳಿ, ಬೆಳಕಿಲ್ಲದ ಪ್ರಪಂಚ
    ಸ್ವಾತಂತ್ರ್ಯ ರವಿಯಿಲ್ಲದ ಆಕಾಶ
    ನಾವೊಲ್ಲೆವು.....

(ವೀಕ್ಷಕರಲ್ಲಿ ಸೂಸಾನ್ನ ಮತ್ತು ಮರಿಯಂ ಕುಳಿತಿರುವರು.. ..ಪ್ರೇಕ್ಷಕ ವರ್ಗದಲ್ಲಿ ಅಬ್ಬಾ..ಆಹಾ..ಉದ್ಗಾರಗಳು.. ..)

ಮರಿಯಂ:    ಎಷ್ಟು ಚೆನ್ನಾದ ನುಡಿ..! ಸತ್ಯವಾಗಬಹುದಿದ್ದರೆ ಎಷ್ಟು ಚೆನ್ನಿತ್ತು.! ಈ ಸ್ವಾತಂತ್ರ್ಯವೆಂಬುದು ಬಂದಾಗ ನಿಮ್ಮ ಮಾವ ನನ್ನನ್ನೂ ಮನುಷ್ಯಳಂತೆ ಕಾಣಬಹುದು ಅಲ್ಲವಾ.. ನರಕದ ಪಂಜರದಿಂದ ಪಾರಾಗಬಹುದಿತ್ತು ಅಲ್ಲವಾ ? ಒಳ್ಳೆ ಕಲ್ಪನೆ. ಒಳ್ಳೇದು..ಒಳ್ಳೇದು..

ಸೂಸಾನ್ನ        ಕಲ್ಪನೆ ಎಂದೇಕೆ ಅಂದುಕೊಳ್ಳಬೇಕು ಅತ್ತೇ..? ನಿಜವಾಗಲಾರದೇನು ಇದು..ಕೇಳಿಬಿಡೋಣ..

ಮರಿಯಂ        ಬೇಡ ಬೇಡ ಸುಮ್ಮನಿರು..ಅವರೇನೆಂದುಕೊಂಡಾರು..

ಥಾಮಸ್        ಕನಸುಗಳಿಗೆ ಸ್ವಾತಂತ್ರ್ಯದ ಬಣ್ಣಗಳನ್ನು ಮೆತ್ತಿರುವಂತಿದೆ ಈ ಕವಿತೆಗಳು..

ಬೆಂಜಮಿನ್‌ಮೊಲಾಯಿಸ್  ಇದು ಕೇವಲ ಕನಸಲ್ಲ ತಮ್ಮಾ..ನಾಳೆ ನಿಜವಾಗಬೇಕಾದ್ದು. ತಡವಾಗಬಹುದು..ಆದರೆ ಸ್ವಾತಂತ್ರ್ಯದ
ಬಣ್ಣಗಳು ನಮ್ಮ ಆತ್ಮಗಳನ್ನು ಖಂಡಿತ ತಾಗುವವು..

(ಬಿಳಿಯ ಪೊಲಿಸರ ಬೂಟುಗಳ ಟಕಟಕ ಶಬ್ದ ನೆರೆದವರ ಕಿವಿ ಬಿರಿಯುವುದು. ಬೆಂಜಮಿನ್ ಅತ್ತ ಲಕ್ಷ ಕೊಡದೆ, ಕವನ ವಾಚನ ಮುಂದುವರೆಸುವನು. ಪೊಲೀಸರಲ್ಲೊಬ್ಬ ಮೈಕನ್ನೂ, ಕಾಗದವನ್ನೂ ಒಟ್ಟಿಗೆ ಕಿತ್ತುಕೊಳ್ಳವನು. ಸಭೆ ಧಿಗ್ಗನೆ ಎದ್ದು ನಿಲ್ಲುವುದು. ಎಲ್ಲ ಕಣ್ಣುಗಳು ಕೆಂಡಗಳಾಗುವವು. ಬೆಂಜಮಿನ್ ಮೊಲಾಯಿಸ್ ಶಾಂತನಾಗಿ ಕೈಗಳೆರಡನ್ನೂ ಮೇಲೆತ್ತಿ ಸುಮ್ಮನಿರುವಂತೆ ಸೂಚಿಸುವನು. ನಂತರ ಏನೆಂಬಂತೆ ಪೊಲೀಸರತ್ತ ನೋಡುವನು.)

ಬಿಳಿಯ ಪೊಲೀಸ್         (ಒರಟಾಗಿ) ನಡೀ....

ಬೆಂಜಮಿನ್ ಮೊಲಾಯಿಸ್        (ಅಚ್ಚರಿಯಿಂದ) ಯಾಕೆ?

ಬಿಳಿಯ ಪೊಲೀಸ್ ಮುಖ್ಯಸ್ಥ    ಠಾಣೆಗೆ ನಡಿ.

ಬೆಂಜಮಿನ್ ಮೊಲಾಯಿಸ್         ಅದೇ ಯಾಕೇಂತಾ?

ಬಿಳಿಯ ಪೊಲೀಸ್ ಮುಖ್ಯಸ್ಥ    ಅದನ್ನ ಅಲ್ಲೆ ಹೇಳ್ತೇವೆ.

ಬೆಂಜಮಿನ್ ಮೊಲಾಯಿಸ್        ನನ್ನನ್ನು ಅರೆಸ್ಟ್ ಮಾಡ್ತಿದೀರಾ?

ಬಿಳಿಯ ಪೊಲೀಸ್ ಮುಖ್ಯಸ್ಥ    ಒಂದು ರೀತಿಯಲ್ಲಿ ಹೌದು.

ಬೆಂಜಮಿನ್ ಮೊಲಾಯಿಸ್        ವಾರೆಂಟ್ ಇದೆಯೇ?

ಬಿಳಿಯ ಪೊಲೀಸ್ ಮುಖ್ಯಸ್ಥ    ಅದೆಲ್ಲ ಪದ್ಧತಿ ನಿಮಗೆ ಅನ್ವಯಿಸುವುದಿಲ್ಲ.

ಬೆಂಜಮಿನ್ ಮೊಲಾಯಿಸ್        ನಮಗೆ ಅಂದರೆ ಕರಿಯರಿಗೆ?

ಬಿಳಿಯ ಪೊಲೀಸ್ ಮುಖ್ಯಸ್ಥ     ಸುಮ್ಮನೆ ನಡಿ. ಹೆಚ್ಚು ಪ್ರಶ್ನಿಸಬೇಡ (ರಟ್ಟೆಗೆ ಕೈ ಹಾಕುವನು)

ಬೆಂಜಮಿನ್ ಮೊಲಾಯಿಸ್    (ಮೃದುವಾಗಿಯೇ ಬಿಡಿಸಿಕೊಳ್ಳುತ್ತಾ) ಠಾಣೆಗೆ ಬರಲು ಅಭ್ಯಂತರವೇನಿಲ್ಲ ನನಗೆ. ಆದರೆ ಕಾರಣ ಹೇಳಿ.

ಬಿಳಿಯ ಪೊಲೀಸ್ ಮುಖ್ಯಸ್ಥ    (ಜನರತ್ತ ದೃಷ್ಟಿ ಬೀರುತ್ತ) ಅದನ್ನ ಅಲ್ಲಿಯೇ ಹೇಳ್ತೀವಿ ನಡೀ. ಇಲ್ದಿದ್ರೆ ಇಲ್ಲಿ ನಡಿಯೋ ರಕ್ತಪಾತಕ್ಕೆ ನೀನೆ ಜವಾಬ್ದಾರನಾಗ್ತೀಯ.

(ಜನರ ಗುಂಪಿನಲ್ಲಿ ಗೊಂದಲ ಗುಜುಗುಜು ಕ್ಷಣ ಯೋಚಿಸಿ, ಜನರೆಡೆಗೆ ತಿರುಗಿ)

ಬೆಂಜಮಿನ್ ಮೊಲಾಯಿಸ್        (ಗಟ್ಟಿಯಾಗಿ) ಶಾಂತಿಯಿಂದಿರಿ ಮತ್ತೆ ಭೇಟಿಯಾಗೋಣ. (ಪೊಲೀಸರತ್ತ ತಿರುಗಿ) ನಡೆಯಿರಿ.

(ಜಿಟಿಜಿಟಿ ಜಿನುಗವ ಮಳೆಯಲ್ಲಿ ಬೆಂಜಮಿನ್ ಮೊಲಾಯಿಸ್ ಬಿಳಿಯ ಪೊಲೀಸ್‌ರೊಂದಿಗೆ ನಿರ್ಗಮಿಸುವನು. ಅವರ ಕಡೆ ದಿಟ್ಟಿಸುತ್ತ.)


ದೃಶ್ಯ ೨

ಕ್ರಿ.ಶ.೧೯೮೪ರ ಜುನ್ ತಿಮಗಳು
ಕೇಂದ್ರ ಕಾರಾಗೃಹ
ಪ್ರಿಟೋರಿಯ

ಬೆಂಜಮಿನ್ ಮೊಲಾಯಿಸ್: ಈ ಕೊಠಡಿಯ ಸಂಖ್ಯೆ ಎಷ್ಟೆಂಬುದು ನನಗೆ ತಿಳಿದಿಲ್ಲ. ಅಷ್ಟೇಕೆ, ಹಗಲು ರಾತ್ರಿಗಳ ವ್ಯತ್ಯಾಸವೂ
ಗೊತ್ತಾಗುತ್ತಿಲ್ಲ. ಒಳಗೆ ಯಾವಾಗಲೂ ನಸುಗತ್ತಲಿನ ಮಬ್ಬು ಬೆಳಕು, ತಾಜಾ ಹವಾ, ಒಳ್ಳೆಯ ನೀರು ಕುಡಿದು ಎಷ್ಟು ದಿನಗಳಾಗಿರಬಹುದು? (ಲೆಕ್ಕ ಹಾಕಲೆತ್ನಿಸಿ) ಊಹೋ... ಒಂದು ವರ್ಷ...?ಅಲ್ಲ, ಎರಡು ವರ್ಷಗಳ ಮೇಲಾಗಿರಬಹುದೇ? ಸರಿಯಾಗಿ ಎಣಿಸಲಾಗುತ್ತಿಲ್ಲ. ಮಿದುಳು ಹಿಂದಿನಂತೆ ಚುರುಕಾಗಿ ಕೆಲಸ ಮಾಡುತ್ತಿಲ್ಲ. ಕೈ, ಕಾಳು, ಕೀಲುಸಂದಿಗಳ ಭಯಂಕರ ನೋವು ಬೇರೆ ಕಾಡುತ್ತದೆ. ಈ ಕೊಠಡಿಯಲ್ಲೋ ಒಂದು ಸಣ್ಣಗಾಯವೂ ಸೆಪ್ಟಿಕ್ ಆಗಿ, ಇನ್‌ಫೆಕ್ಷನ್ ತಗುಲಿಕೊಳ್ಳಲು ಪ್ರಶಸ್ತವಾಗಿದೆ. ಮನೆಯಲ್ಲಿದ್ದಾಗ ತನ್ನ ಕೊಠಡಿ, ಬಟ್ಟೆ, ಪುಸ್ತಕ, ಮೇಜು, ಕುರ್ಚಿ, ಹಾಸಿಗೆ, ಮಂಚ ಎಲ್ಲ ಎಷ್ಟು ನೀಟಾಗಿಡುತ್ತದೆ. ಅಮ್ಮ, ಅತ್ತಗೆಯರೇ ಮೆಚ್ಚುಗೆ ಸೂಚಿಸುತ್ತಿದ್ದರು. ಈಗ ಅವರೆಲ್ಲ ಏನು ಮಾಡುತ್ತಿರಬಹುದು? ಪಾಪ, ಅಮ್ಮ ಅತ್ತು, ಅತ್ತು ಕಣ್ಣೀರು ಬತ್ತಿಸಿಕೊಂಡಿರಬಹುದು. ಅಪ್ಪ ಮಾಮೂಲಿನಂತೆ ಕುರ್ಚಿಯ ಮೇಲೊರಗಿ, ’ಬೆಂಜಮಿನ್ ಕವನ ಬರೆಯಲು ಆರಂಭಿಸಿದೊಡನೆ ಪೆನ್ ಕಿತ್ತು ಬಿಸಾಡಬೇಕಾಗಿತ್ತು. ಆಗ ಜೈಲು, ಗೀಲು ಏನೂ ತಂಟೆಯಿರುತ್ತಿರಲಿಲ್ಲ’ ಎಂದು ಚಿಂತಿಸುತ್ತಿರಬಹುದು. ಹುಷ್, ಕೆಳಹೊಟ್ಟೆಯ ನೀರನ್ನು ಖಾಲಿ ಮಾಡಬೇಕೆನ್ನಿಸುತ್ತಿದೆ. ದಿನಕ್ಕೆ ಒಂದೇ ಬಾರಿ ಪಾಯಿಖಾನೆಗೆ ಹೋಗುವ ರಾಜಭೋಗ! ಉಳಿದ ಸಮಯದಲ್ಲಿ ಏನು ಮಾಡಬೇಕೆನಿಸಿದರೂ ಈ ಸೆಲ್‌ನ ಮೂಲೆಯಲ್ಲೇ ಮಾಡಿಕೋಬೇಕು. ಎಷ್ಟೋ ಸಲ ಆ ವಾಸನೆ ಹೊಟ್ಟೆ ತೊಳಸಿ, ವಾಂತಿ ಮಾಡಿಕೊಂಡಿದ್ದೇನೆ. ಬರುಬರುತ್ತ ವಾಸನೆ, ಮಬ್ಬುಗತ್ತಲು, ಒಂಟಿತನ, ಮೌನ ಎಲ್ಲ ಅಭ್ಯಾಸವಾದವು.

(ಕಿರ್ರನೆ ಬಾಗಿಲು ತೆರೆದುಕೊಳ್ಳುವುದು. ಬಂದವನು ಬಿಳಿಯ ಪೊಲೀಸ್‌ನವನಾದ್ದರಿಂದ ನೋಡುವ ಗೋಜಿಗೆ ಹೋಗುವುದಿಲ್ಲ.)

ಬೆಂಜಮಿನ್ ಮೊಲಾಯಿಸ್;    ಏನು ಹರ್‍ಕೊತಾನೋ ಹರ್‍ಕೊಳ್ಳಿ, ನನ್ನ ಮುಗುಳ್ನಗೆ ಮಾತ್ರ ಮುಖದ ಮೇಲದ್ದೇ ಇರುತ್ತೆ. ಅವನನ್ನು ಇನ್ನಷ್ಟು ರೇಗಿಸಲು!

(ಬಿಳಿಯ ಪೊಲೀಸ್ ಮುಖ್ಯಸ್ಥ ಒರಟಾಗಿ ಭುಜವನ್ನಿಡಿದು ತಿರುಗಿಸುವನು. ಕೂದಲು ಹಿಡಿದು ತಲೆ ಹಿಂದಕ್ಕೆ ಜಗ್ಗುವನು. ನೋವಿನಿಂದ ಚೀರಬೇಕೆನಿಸಿದರೂ ನುಂಗಿಕೊಂಡು ಮೆಲ್ಲಗೆ ನಗುವನು ಬೆಂಜಮಿನ್. ಮುಖ್ಯಸ್ಥನ ಪಳಗಿದ ಕೈ ರಪ್ಪನೆ ಮುಖಕ್ಕೆ ರಾಚುವುದು. ಉಪ್ಪುಪ್ಪಾಗಿ ನಾಲಿಗೆಗೆ ರಕ್ತ ಅಂಟುವುದು. ಕಾಲು ತೊಡರಿ ಬೀಳುತ್ತಿದ್ದವನನ್ನು ಅದುಮಿ ಹಿಡಿದು.)

ಬಿಳಿಯ ಪೊಲೀಸ್ ಮುಖ್ಯಸ್ಥ    ಏಳು, ನ್ಯಾಯಾಲಯಕ್ಕೆ ಹೋಗ್ಬೇಕು.

ಬೆಂಜಿಮಿನ್ ಮೊಲಾಯಿಸ್    (ಸಿಟ್ಟು ಬೇಡವೆಂದರೂ ಒತ್ತಿಕೊಂಡು ಬಂದು) ಎಷ್ಟು ಸಲ ಹೋಗೋದು ನಿಮ್ಮ ಅನ್ಯಾಯಾಲಯಕ್ಕೆ?

(ಎರಡು ವರ್ಷಗಳಲ್ಲಿ ಹೊಡೆದೂ ಹೊಡೆದೂ ಸುಸ್ತಾಗಿಹೋಗಿದ್ದ ಬಿಳಿಯ ಪೊಲೀಸ್ ಮುಖ್ಯಸ್ಥ. ಬೆಂಜಮಿನ್ ಮೊಲಾಯಿಸ್‌ನನ್ನು ಎಳೆದುಕೊಂಡು ಹೋಗಿ ವಾಹನದಲ್ಲಿ ಸರಕು ತುಂಬುವಂತೆ ತುರುಕುವನು. ಪುನಃ ಅದೇ ಪ್ರಿಟೋರಿಯದ ರಸ್ತೆಗಳು. ಸಾಲು ಮನೆಗಳು. ಬೀದಿಯಲ್ಲಿ ಓಡಾಡುವ ಜನ, ಯಾರಿಗೂ ಒಳಗಿರುವವರ ಗುರುತು ಹತ್ತದಂತೆ ಗಾಜು ಏರಿಸಿದ ವಾಹನ...)


 ದೃಶ್ಯ೩

(ಲಕಲಕಿಸುವ ಟೇಬಲ್, ಛೇರ್, ಫ್ಯಾನ್, ಹೂಕುಂಡಗಳು, ಮೇಜಿನ ಆಚೀಚೆ ಹಿಂದಿಬ್ಬರು ಬಿಳಿಯ ವಕೀಲರುಗಳು, ಅಷೆತ್ತರದ ಕುರ್ಚಿಯಲಿ ಕುಳಿತಿರುವ ಜಡ್ಜ್, ಅವನಲ್ಲಿ ಅಹಂಕಾರ, ಕಣ್ಣುಗಳಲ್ಲಿ ತಿರಸ್ಕಾರ ಕಾಣುತ್ತಿದೆ. ಅವನ ತಲೆಯ ಮೇಲೆ ನಿರಂಕುಶ ಜನರಲ್ ಬೋಥಾನ ಚಿತ್ರ.)

ಬಿಳಿಯ ವಕೀಲ        (ಕನ್ನಡಿ ಸರಿಪಡಿಸಿಕೊಳ್ಳುತ್ತಾ) ಏನು ಯೋಚನೆ ಮಾಡಿದೆ?

ಬೆಂಜಮಿನ್ ಮೊಲಾಯಿಸ್     (ಮುಗುಳ್ನಗುತ್ತಾ) ಯಾವುದರ ಬಗ್ಗೆ?

ಬಿಳಿಯ ವಕೀಲ     (ಹುಬ್ಬುಗಂಟಿಕ್ಕುತ್ತಾ) ಕೋರ್ಟಿನೊಂದಿಗೆ ಹುಡುಗಾಟ ಆಡಬೇಡ. ಕವನ ಬರೆದಷ್ಟು ಸುಲಭವಲ್ಲ ಕಾನೂನಿನಿಂದ ತಪ್ಪಿಸಿಕೊಳ್ಳೋದು.

ಬೆಂಜಮಿನ್ ಮೊಲಾಯಿಸ್  ಕಾನೂನಿಗೆ ವಿರುದ್ಧವಾದುದ್ದೇನನ್ನೂ ನಾನು ಮಾಡಿಲ್ಲವಲ್ಲ?

ಬಿಳಿಯ ವಕೀಲ        ಹಾಗಾದರೆ ಪಿಲಿಪ್ಸ್ ಸೆಲಿಪೆ ನಿನಗೊತ್ತಿಲ್ಲ?

ಬೆಂಜಮಿನ್ ಮೊಲಾಯಿಸ್     ಇಲ್ಲ!

ಬಿಳಿಯ ವಕೀಲ        ೧೯೮೨ನೇ ವರ್ಷದಲ್ಲಿ ನೀನವನೊಂದಿಗೆ ಗೆಳೆಯನಾಗಿದ್ದಿಲ್ಲ?

ಬೆಂಜಮಿನ್ ಮೊಲಾಯಿಸ್     ಇಲ್ಲ.

ಬಿಳಿಯ ವಕೀಲ        ಗೆಳೆಯನಂತೆ ನಟಿಸಿ, ಕೊನೆಗೆ ಅವನನ್ನು ಕೊಂದು ಹಾಕಲಿಲ್ಲ?

ಬೆಂಜಮಿನ್ ಮೊಲಾಯಿಸ್  ಖಂಡಿತಾ ಇಲ್ಲ.

ಬಿಳಿಯ ವಕೀಲ         ನೀನು ಸುಳ್ಳು ಹೇಳ್ತಿದೀ. ಸರ್ಕಾರದ ನಿಷ್ಠಾವಂತ ಪೊಲೀಸರನ್ನು ಕೊಲ್ಲುವುದೇ ನಿನ್ನ ಕೆಲಸ.

ಬೆಂಜಮಿನ್ ಮೊಲಾಯಿಸ್  ಅಲ್ಲ. ನನ್ನ ಕೆಲಸ ಕವನ ಬರೆಯುವುದು ಮಾತ್ರ.

ಬಿಳಿಯ ವಕೀಲ        ನೀನೇನು ದೊಡ್ಡ ಕವಿ. ವಿದ್ವಾಂಸನೋ?

ಬೆಂಜಮಿನ್ ಮೊಲಾಯಿಸ್     ಅಲ್ವೇ ಅಲ್ಲ. ನಾನೇನೂ ದೊಡ್ಡ ಕಾವ್ಯ ಬರೆದಿಲ್ಲ. ಒಂದಿಷ್ಟು ಕವಿತೆಗಳನ್ನು ಬರೆದಿದ್ದೇನಷ್ಟೇ.

ಬಿಳಿಯ ವಕೀಲ        ನೀನು ಬರೆದ ಕವಿತೆಗಳು ಆಡಳಿತಕ್ಕೆ ವಿರುದ್ಧವಾಗೇ ಇವೆಯಲ್ಲ?

ಬೆಂಜಮಿನ್ ಮೊಲಾಯಿಸ್     (ನಗುತ್ತಾ)ಅದಕ್ಕೆ ನಾನು ಜವಾಬ್ದಾರನಲ್ಲ. ನಾನು ನನ್ನ ಜನರ ಪರವಾಗಿ ಬರೆಯುತ್ತೇನಷ್ಟೇ.

ಬಿಳಿಯ ವಕೀಲ         ಇಂಥ ಮಾತುಗಳಿಮಧ ನ್ಯಾಯಾಲಯ ಮೋಸ ಹೋಗಲಾರದು.

ಬೆಂಜಮಿನ್ ಮೊಲಾಯಿಸ್    ಮೋಸ ಮಾಡುವ ಉದ್ದೇಶ ನನಗಿಲ್ಲ. ಫಿಲಿಪ್ಸ್ ಸೆಲಿಪೆ ಎಂಬ ಪೊಲೀಸ್ ಸಹಜವಾಗಿ ಸತ್ತನೆಂಬುದು ಎಲ್ಲರಿಗೂ ಗೊತ್ತಿದೆ. ನೀವದನ್ನು ಕೊಲೆ ಎಂದು ಕರೆದು. ಆಪಾದನೆ ನನ್ನ ಮೇಲೆ ಹೊರಿಸಿದರೆ, ನಾಳೆ ಪ್ರಪಂಚ ನಿಮ್ಮನ್ನೂ, ನಿಮ್ಮ ನ್ಯಾಯಾಲಯವನ್ನೂ ನೋಡಿ ನಗುತ್ತದೆ.

ಜಡ್ಜ್    ನಿನ್ನ ಮಾತು ಅತಿಯಾಯ್ತು ಬೆಂಜಮಿನ್, ದೇಶದ್ರೋಹದ ಸಾಹಿತ್ಯ ಸೃಷ್ಟಿಸಿದ್ದಲ್ಲದೇ, ಕಾನೂನನ್ನೇ ಅಪಹಾಸ್ಯ ಮಾಡ್ತೀದೀ.... ನಿನ್ನ ಅಪರಾಧವನ್ನು ಒಪ್ಪಿಕೊಂಡರೆ ನಿನಗೇ ಒಳಿತು.

ಬೆಂಜಮಿನ್ ಮೊಲಾಯಿಸ್     ನಾನು ಯಾವ ಅಪರಾಧವನ್ನು ಮಾಡಿಲ್ಲ.

ಜಡ್ಜ್            ಅಪರಾಧ ಸಾಬೀತಾಗಿದೆ. ನಿನಗೆ ಮರಣದಂಡನೆಯನ್ನು ಕೂಡ ವಿಧಿಸಬಹುದು. ಗೊತ್ತೇ?

ಬೆಂಜಮಿನ್ ಮೊಲಾಯಿಸ್    ನನ್ನ ಉತ್ತರದಲ್ಲಿ ಬದಲಾವಣೆಯೇನೂ ಇಲ್ಲ.

(ಇಡೀ ಕೋರ್ಟು ಸಿಟ್ಟಿನಿಂದ ಉರಿಯುವುದು, ಬೆಂಜಮಿನ್ ಮಾತ್ರ ಮುಗುಳ್ನಗುವನು, ಯಥಾಪ್ರಕಾರ ಬೆಂಜಮಿನ್ ಮೊಲಾಯಿಸ್‌ನನ್ನು ಮಬ್ಬುಗತ್ತಲಿನ ಸೆರೆಮನೆಯ ಕೊಠಡಿಗೆ ದೂಡುವರು, ದಿನಗಳು ಕಳೆಯತೊಡಗುವವು.)


ದೃಶ್ಯ ೪
ಜನರಲ್            ಬೇಡ.. ..ಬೇಡ..

ವಿಲಿಯಂ            ಇಲ್ಲ ಹಾಗೆ ಮಾಡಲಾಗುವುದಿಲ್ಲ

ಜನರಲ್            ನೀನೇನು ಕರಿಯನೋ..?   

ವಿಲಿಯಂ    ಕರಿಯನಲ್ಲ ನಾನು..ಖಂಡಿತ ಕರಿಯನಲ್ಲ. ಆದರೆ..ನೋಡಿ..ಅವನು.. ಆ ಬೆಂಜಮಿನ್ನು.. ಸಣ್ಣ ಸಣ್ಣ ಪದ್ಯ ಬರೆದು ದೊಡ್ಡದಾಗೆ ಹೆಸರು ಮಾಡಿಬಿಟ್ಟಿದಾನೆ..ಗೆಳೆಯರ ಬಳಗ ದೊಡ್ಡದಿದೆ ಅವನದು..

ಜನರಲ್    ಹೇಳಿದಷ್ಟು ಮಾಡು..ಕೇಳಿಸಿತೇ? ಹೇಳಿದಷ್ಟು ಮಾತ್ರ..ಗೊತ್ತಿರುವುದನ್ನೆಲ್ಲ ವರದಿ ಮಾಡಬೇಡ ಜನರೆದುರು..ತಿಳಿಯಿತೇ..?   

ವಿಲಿಯಂ    (ಸ್ವಗತ-ಸುದ್ದಿಗಾರರ ಕರ್ತವ್ಯ ಬಲುಕೆಟ್ಟದ್ದು..ಕೃತಜ್ಞಹೀನದ್ದು..) ಆದರೆ ನೋಡಿ..ಸಾವು ತನ್ನಷ್ಟಕ್ಕೆ ತಾನೆ ಸುದ್ದಿಯಾಗಬಲ್ಲದು..

ಜನರಲ್            ಸಾವು ಘಟಿಸುವವರೆಗು ಸುಮ್ಮನಿರು. ಗದ್ದಲವಾಗುವುದು ಬೇಡ..       

ವಿಲಿಯಂ            ಅಂದರೆ..ತೀರ್ಪು ಆಗಲೆ ಜಾರಿಯಾಗಿದೆ ಹಾಗಾದರೆ..ಬೆಂಜಮಿನ್‌ಗೆ ಗಲ್ಲು?॒

ಜನರಲ್    ನನ್ನ ಮಾತುಗಳನ್ನು ನಿನ್ನ ಬಾಯಿ ಮುಂಚಿತವಾಗಿ ಕದಿಯುವುದು ಬೇಡ. ಸುದ್ದಿಗಳೆಲ್ಲವು ನಿನ್ನ ಸ್ವಂತದ್ದಲ್ಲ..ತಿಳಿ..       

ವಿಲಿಯಂ            ಅವನ ಕವಿತೆಗಳೆ ಸುದ್ದಿ ಹರಡಬಲ್ಲವು..

ಜನರಲ್            ಹಾಂ..ಕವಿತೆ..? (ಸ್ವಗತ ಜೈಲಿನಲ್ಲು ಬರೆದಿರಬಹುದಲ್ಲವೆ?॒ ಹಾಂ..) ಅವುಗಳು ಎಲ್ಲೆಲ್ಲಿದಾವೆ
ತಂದುಕೊಡು..ನೀನೇ ತರಬೇಕು ಸಿಕ್ಕ ತಕ್ಷಣ..       

ವಿಲಿಯಂ    ಸಿಕ್ಕ ತಕ್ಷಣ ಏನ್ಬಂತೂ.. ..ಇ॒ಲ್ಲೆ ಇವೆ ನನ್ನ ಕಿಸೆಯೊಳಗೆ..ಅವುಗಳ ಪ್ರತಿ ಮಾಡಿಸಿ ತಂದೆ ಸಾಧ್ಯವಾದರೆ ಪ್ರಕಟಿಸುವ ಅಂತ....(ತಟ್ಟನೆ ನಾಲಿಗೆ ಕಚ್ಚಿಕೊಳ್ಳುವನು)ಅಯ್ಯೋ ಹೇಳಿಬಿಟ್ಟೆನಲ್ಲಾ..ಥೂ, ಸತ್ಯ ನುಡಿಯುವ ನನ್ನ ನಾಲಿಗೆಯೇ..ನೀನೆ ನನಗೆ ಶತೃ..

ಜನರಲ್    ಪ್ರಕಟಿಸೋದಾ..?ಎಷ್ಟು ದಿನಗಳು ಬದುಕಬೇಕೆಂದು ಲೆಕ್ಕ ಹಾಕಿದ್ದೀಯೇನು.॒? ಕೊಡಿಲ್ಲಿ..ಅದೊಂದು ದಿನ ಬರುತ್ತೆ..ಈ ಕಾವ್ಯಗೀವ್ಯ ಎಲ್ಲ ನಿಷಿದ್ಧವಾಗಿರುತ್ತೆ ನನ್ನ ಕೈ ಕೆಳಗೆ.. ..   

ವಿಲಿಯಂ    (ಸ್ವಗತ) ಮುಗೀತು... ಇವುಗಳ ಕಥೆ ಮುಗೀತು..ಕ್ಷಮಿಸು ಬೆಂಜಮಿನ್.. ಅಯ್ಯೋ.. .. ವಾರ್ತೆಗಳ ಹರಡುವ ಬಾಯಿಗೆ ಮೊದಲ ಉರುಳು ಬೀಳಲಿ...

ಜನರಲ್            ಏನೋ ಅಂದೆಯಲ್ಲ.. ..?           

ವಿಲಿಯಂ            ಏನಿಲ್ಲ.. ..ಏನಿಲ್ಲ.. ..

ಜನರಲ್    ನಿಗ ಇರಲಿ ನಾಲಿಗೆ ಮೇಲೆ.. .. ಬೆಂಜಮಿನ್ ಕುರಿತ ಯಾವ ಸುದ್ದಿಯೂ ನಿನ್ನಿಂದ ಹೊರಹೋಗುವುದು ಬೇಡ.. ..        

ವಿಲಿಯಂ            ಹಾಗೆ ಆಗಲಿ.. ..(ಸ್ವಗತ- ಹೀಗೆ ಹೇಳದೆ ವಿಧಿಯಿಲ್ಲ..)

ಜನರಲ್            ಅಲ್ಲಿಯ ಸುದ್ದಿ.. ..ಅವನ ಗೆಳೆಯರ ಸುದ್ದಿ.. ..ತಕ್ಷಣ ನನಗೆ ಸಿಗಬೇಕು.. ..ತಕ್ಷಣ..

ವಿಲಿಯಂ    ಹಾಗೇ ಆಗಲಿ..ನಾನಿನ್ನು ಬರಲೇ.. ..?( ಸ್ವಗತ-ನನಗೇ ಉಸಿರುಗಟ್ಟುತ್ತಿದೆ ಇಲ್ಲ.. ..ಅವನ ಕವನಗಳಿಗಾಗುವ ಗತಿಯನ್ನು ನೋಡಲಾರೆ..ನೋಡಲಾರೆ..)

ಜನರಲ್    ನಡಿ..ನಿನ್ನ ಈ ಹೊತ್ತಿನ ಕೆಲಸ ನಿಜವಾಗಿ ಮುಗೀತು.. ..

(ವಿಲಿಯಂ ಹೋದಬಳಿಕ ಕವನಗಳ ಹಾಳೆಗಳನ್ನು ಸಿಟ್ಟಿನಿಂದ ನೋಡುತ್ತ ಚೂರುಚೂರಾಗಿ ಹರಿಯುವನು..    ಮುಷ್ಟಿಯಲ್ಲಿ ಉಂಡೆ ಮಾಡುತ್ತಾ..ಕೊನೆಗೆ ಕೆಳಗೆ ಹಾಕಿ ತುಳಿಯುವನು..)

ದೃಶ್ಯ ೫

ಕ್ರಿ ಶ. ೧೯೮೫, ಅಕ್ಟೋಬರ್ ೧೮

ಕೊಠಡಿಯ ಬಾಗಿಲು ತೆರೆದುಕೊಳ್ಳುವುದು. ಪೊಲೀಸರ ಗುಂಪು ಒಳಬರುವುದು. ಮುಖ್ಯಸ್ಥ ಸನ್ನೆ ಮಾಡುವನು. ಒಬ್ಬ ಮುಂದೆ ಬಂದು ಬೂದಿಬಣ್ಣದ ಕಾಗದವನ್ನು ಎದುರಿಗೆ ಹಿಡಿದು,

ಬಿಳಿಯ ಪೊಲೀಸ್    ಬೆಂಜಮಿನ್ ಮೊಲಾಯಿಸ್ ಎಂಬ ಹೆಸರಿನ ದೇಶದ್ರೋಹಿ ಬಂಡಾಯವೇಳುವಂತೆ ಜನರನ್ನು ಕವನಗಳ ಮೂಲಕ ಪ್ರಚೋದಿಸಿದ್ದಲ್ಲದೆ, ಆಡಳಿತದ ನಿಷ್ಠಾವಂತ ಪೊಲೀಸ್ ಫಿಲಿಪ್ಸ್ ಸೆಲಿಪೆಯನ್ನು ಕೊಂದು ಹಾಕಿರುವುದಾ ಸಾಬೀತಾಗಿ, ಬೆಂಜಮಿನ್ ಮೊಲಾಯಿಸ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಊe shouಟಜ be hಚಿಟಿgeಜ ಣiಟಟ ಜeಚಿಣh. ಪರಮಾಧಿಕಾರಿ ಭೋಥಾರ ಸಿಹಿಯೊಂದಿಗೆ ಈ ಆಜ್ಞೆ ಹೊರಡಿಸಲಾಗಿದೆ.

(ಬೆಂಜಮಿನ್ ಮೊಲಾಯಿಸ್ ಒಂದು ಕ್ಷಣ ಸ್ತಬ್ಧನಾಗುವನು. ಅನಂತರ ಮುಗುಳ್ನಗುತ್ತ ಎದ್ದು ನಿಲ್ಲುವನು. ಅಷ್ಟೂ ಜನ ಅಂಗರಕ್ಷಕರಂತೆ ಹಿಂಬಾಲಿಸುವರು. ಕಬ್ಬಣದ ಸರಳುಗಳ ಬಾಗಿಲು ಎದುರಾಗುವುದು. ಅದರಾಚೆಗೆ ನೇಣುಗಂಬದ ಕೋಣೆ! ಬೆಂಜಮಿನ್ ಮೊಲಾಯಿಸ್ ನಿಂತಲ್ಲೇ ನಿಂತು ತಲೆಯೆತ್ತಿ ಸೂರನ್ನು ದಿಟ್ಟಿಸಿ, ಕಣ್ಮುಚ್ಚಿಕೊಂಡು ಪ್ರಾರ್ಥಿಸುವನು.)

ಬೆಂಜಮಿನ್ ಮೊಲಾಯಿಸ್    ನಾನು ಮತ್ತೆ ಆಫ್ರಿಕಾದ ನೀಗ್ರೋನಾಗಿಯೇ ಹುಟ್ಟಬಯಸ್ತೇನೆ. ದೇವರೇ. ಆಗ ಈ ನೆಲ ಸ್ವತಂತ್ರವಾಗಿರಲಿ. ನನ್ನ ಜನರ ಕೈಯಲ್ಲಿ ಆಡಳಿತವಿರಲಿ. ಅವರೆಲ್ಲ ಮನುಷ್ಯರಂತೆ ಬದುಕಲಿ.

(ಮುಗುಳ್ನಗೆಯನ್ನು ಮುಖಕ್ಕೆ ತಂದುಕೊಂಡು ಕೋಣೆಯೊಳಗಡೆ ಕಾಲಿಡುವನು. ಹೊರಗೆ. ನಸುಕಿನ ಸೂರ್ಯ ಮೆಲ್ಲಗೆ ಮೇಲೇರತೊಡಗುವನು.)

ವೇದಿಕೆ ಕತ್ತಲಾಗುವುದು.

   ******************************************************************************************************

ಸುಧಾ ಚಿದಾನಂದಗೌಡ
ಹಗರಿಬೊಮ್ಮನಹಳ್ಳಿ-೫೮೩೨೧೨
ಬಳ್ಳಾರಿ(ಜಿಲ್ಲೆ)

ಶನಿವಾರ, ಅಕ್ಟೋಬರ್ 6, 2012

"ಭೂಮಿ ಮತ್ತು ರಂಗಭೂಮಿ ಎರಡೂ ಅತಂಕದಲ್ಲಿವೆ"- ಚಿದಂಬರರಾವ್ ಜಂಬೆ

(hasirele.blogspot.com) krupe


ನಾಡಿನ ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆಯವರ ಕೊಡುಗೆ ಅಪಾರವಾದದ್ದು. ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ ಮತ್ತು ಸಾಣೆಹಳ್ಳಿಯ ಶಿವಸಂಚಾರ ಈ ಮೂರೂ ಪ್ರಮುಖ ರಂಗಶಾಲೆಗಳಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವ ರಂಗನಿರ್ದೇಶಕ ಮತ್ತು ಚಿಂತಕ ಚಿದಂಬರರಾವ್ ಜಂಬೆಯವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. 
(ಚಿತ್ರಗಳು-ಹರ್ಷಕುಮಾರ್ ಕುಗ್ವೆ)

ಆಧುನಿಕ ರಂಗಭೂಮಿಯ ಇಂದಿನ ಟ್ರೆಂಡ್ ಏನಾಗಿದೆ?
ಈ ’ಆಧುನಿಕತೆ’ ಎನ್ನುವುದನ್ನೇ ಆಲೋಚನೆ ಮಾಡಬೇಕಾಗಿದೆ. ಏಕೆಂದರೆ ಇಂದು ಆಧುನಿಕತೆ ಎಂದು ಕರೆಯುವುದು ಕೇವಲ ತಾಂತ್ರಿಕವಾಗಿಯೇ ವಿನಃ ವಸ್ತುಸಂವಿಧಾನದಲ್ಲಿ ಆದಂತಹ ಬದಲಾವಣೆಗಳನ್ನು ಇಟ್ಟುಕೊಂಡು ನಾವು ಆಧುನಿಕತೆಯನ್ನು ನೋಡುತ್ತಿಲ್ಲ. ಈಗ ತಾಂತ್ರಿಕವಾಗಿ ಅಷ್ಟೇನು ಬದಲಾವಣೆಗಳು ಆಗಿಲ್ಲ ಎಂಬುದು ನನ್ನ ಅಭಿಪ್ರಾಯ. ವಸ್ತು ಸಂವಿಧಾನದಲ್ಲಿ ಕೂಡ ಹೇಳಿಕೊಳ್ಳುವಂತಹಾ ಬಹಳಷ್ಟು ಏನೂ ಬಂದಿಲ್ಲ. ಇಂದು ಆಧುನಿಕ ಅಂದರೆ ಜಾಗತಿಕರಣದ ವೇಗದಲ್ಲಿ ಹೋಗುತ್ತಿರುವುದರಿಂದ ಅದನ್ನೇ ಆಧುನಿಕತೆ ಎನ್ನುವ  ಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ವಾಸ್ತವದಲ್ಲಿ ಅದು ಆಧುನಿಕತೆಯಲ್ಲ. ಅದರ ಹೊರತಾಗಿ ಜಾಗತಿಕರಣವನ್ನು ನಿರಾಕರಣೆ ಮಾಡುವಂತಾದ್ದು ಅಥವಾ ಆ ವೇಗಕ್ಕೆ ಸಿಲುಕಿಕೊಳ್ಳದೇ ಇರುವ ಯಾವುದಾದರೂ ಒಂದು ಮಾರ್ಗವಿದ್ದರೆ  ಅದನ್ನ ನಾವು ಆಧುನಿಕತೆ ಎಂದು ಕರೆಯಬಹುದು.

ನಮ್ಮ ಪಾರಂಪರಿಕವಾದ ರಂಗಭೂಮಿಗೂ ಇಂದಿನ ರಂಗಭೂಮಿಗೂ ಭಿನ್ನತೆಗಳು ಹೇಗೆ ವ್ಯಕ್ತಗೊಂಡಿವೆ?
ನಮ್ಮ ಪಾರಂಪರಿಕವಾಗಿ ಬಂದಂತಹ ರಂಗಭೂಮಿ ಎಷ್ಟೋ ಬಾರಿ ಆಧುನಿಕ ರಂಗಭೂಮಿಯನ್ನು ಮೀರಿ ನಿಲ್ಲುವಂತಹ ಸಂದರ್ಭವನ್ನು ನೋಡುತ್ತೇವೆ. ಉದಾಹರಣೆಗೆ ಭವಭೂತಿಯ ಉತ್ತರ ರಾಮಚರಿತವನ್ನೇ ನೋಡಿ. ಸಮರ್ಥವಾಗಿ ನಮ್ಮ ಸಮಕಾಲೀನ ಯಾವ ನಾಟಕದಲ್ಲಿ ಬರದೇ ಇರುವ ಆಧುನಿಕತೆಯನ್ನ ಭವಭೂತಿ ಹೇಳುತ್ತಾನೆ. ಏಕೆಂದರೆ ಆ ನಾಟಕದಲ್ಲಿ ಅರುಂಧತಿ ಒಬ್ಬ ಸ್ತ್ರೀವಾದಿಯಾಗಿ, ಒಬ್ಬ ಮಹಿಳಾವಾದಿಯಾಗಿ ಕೊನೆಯಲ್ಲಿ ರಾಮನ ಜೊತೆಗೆ ಸೀತೆ ಹೋಗಬೇಕು ಅನ್ನುವ ತೀರ್ಮಾನ ನೀಡುತ್ತಾಳೆ. ಪ್ರಸವ ವೇದನೆ ತಡೆಯಲಾಗದೆ ನೀರಿಗೆ ಹಾರಿ ಬಿಡುವ ಸೀತೆಯನ್ನು ಗಂಗೆ ಮತ್ತು ಭೂಮಿ ಸೇರಿ ಬದುಕಿಸುತ್ತಾರೆ. ಅರುಂಧತಿ ಬಂದು ಇಡೀ ಅಯೋದ್ಯಾ ಪುರದ ಜನರನ್ನ ಕರೆಸಿ ನಿಲ್ಲಿಸಿ ದೇವಾನು ದೇವತೆಗಳ ಸಮ್ಮುಖದಲ್ಲಿ ಸೀತೆಯ ಅಗ್ನಿಪರೀಕ್ಷೆಯಾದಮೇಲೆ ಮತ್ತೆ ಮತ್ತೆ ಅನುಮಾನವುದೇನಿದೆ? ಇನ್ನೊಂದು ಹೆಣ್ಣಿನ ಮೇಲೆ ಅನುಮಾನ ಪಡುವಂತಾ ಮನೋಭಾವ ಬಹಳ ಅಶ್ಲೀಲವಾದದ್ದು. ಅದಕ್ಕೆ ನಾನು ಹೇಳುತ್ತಿದ್ದೇನೆ ಶ್ರೀರಾಮ ಸೀತೆಯನ್ನ ಕರೆದೊಯ್ಯಬೇಕು ಎಂದು. ನೀವೇನು ಹೇಳುತ್ತೀರಿ? ಎಂದು ಕೇಳುತ್ತಾಳೆ. ಅಯೋದ್ಯಾ ಪುರ ಜನರೆಲ್ಲಾ ಬಂದು ಸೀತಾ ದೇವಿಯ ಕಾಲಿಗೆ ಬೀಳ್ತಾರೆ. ಇದು ವಾಲ್ಮೀಕಿ ರಾಮಾಯಣ ಅಲ್ಲ ಆದ್ರೆ ಭವಭೂತಿ ಸೃಷ್ಟಿಸಿದ ರಾಮಾಯಣ ಇದು. ಈ ನಾಟಕ ಸುಮಾರು ೬-೭ ನೇ ಶತಮಾನದಲ್ಲಿ ಬರೆದಂತಹ ನಾಟಕ. ಆದರೆ ಅದು ಇವತ್ತಿಗೂ ಕೂಡ ಅದು ಯಾವ ಆಧುನಿಕತೆಗೂ ಕಮ್ಮಿ ಇಲ್ಲದಂತಹ ನಾಟಕ ಅದು. ಕೆಲವೊಮ್ಮೆ ವಸ್ತುವು ಪೌರಾಣಿಕವಾಗಿದ್ದ ಹೊತ್ತಿಗೂ ಕೂಡ ಅದು ಹೇಳುವಂತಹ ಆಶಯ ಏನಿದೆ ಎಂದು ನೋಡಬೇಕು. ಅದು ತನ್ನ ಕಾಲವನ್ನೂ ಮೀರಿ ಹೇಳುವಂತದ್ದಿರಬಹುದು. ರಂಗನಿರ್ದೇಶಕರಾದ ರಘುನಂದನ ಅವರು ಪ್ರತಿಮಾ ಭಾಸವಿ ನಾಟಕ ಮಾಡಿದ್ದರು. ಅದು ನನಗೆ ಬಹಳ ಇಷ್ಟವಾದ ನಾಟಕ. ಅದು ಅದರಲ್ಲಿ ಭರತ ಶಿಕ್ಷಣಕ್ಕೆ ಹೋಗಿರುತ್ತಾನೆ. ಅಲ್ಲಿಂದ ವಾಪಾಸು ಬರುವಾಗ ಶೂ ಮತ್ತು ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬರುತ್ತಾನೆ. ಬಂದವನು ಸುಮಂತನ ಬಳಿ ಇವರಿಗೆ ಯಾವ ರೀತಿ ನಮಸ್ಕರಿಸಬೇಕು ಎಂದು ಕೇಳುತ್ತಾನೆ. ಮನೆಗೆ ಬಂದಾಗ ಯಾರಿಗೆ ಹೇಗೆ ನಮಸ್ಕಾರ ಮಾಡಬೇಕು ಎಂದು ಗೊತ್ತಿಲ್ಲದೆ ಇದ್ದರೆ ಶಿಕ್ಷಣ ಏನಾಗಿದೆ ಅನ್ನುವುದನ್ನು ಯೋಚಿಸುವ ರೀತಿ ರಘುನಂದನ್ ಅದನ್ನು ಬಹಳ ಚೆನ್ನಾಗಿ ಮಾಡಿದ್ದರು. 

ಜಾಗತೀಕರಣದಂತಹ ಪ್ರಕ್ರಿಯೆಗಳು ರಂಗಭೂಮಿಯನ್ನು ಪ್ರಭಾವಿಸುತ್ತಿಲ್ಲವೇ?
ಅದು ಕೇವಲ ರಂಗಭೂಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಲಾಗುವುದಿಲ್ಲ. ಯಾಕೆಂದರೆ ನಾಟಕ ಮಾಡುವವರೂ ಸಹ ನಮ್ಮಂತಹ ಮನುಷ್ಯ ಜೀವಿಗಳೆ. ಇಂದು ನಾವೆಲ್ಲ ಬದುಕುತ್ತಿರುವ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದೆ ಇರುವಂತಹ ರೀತಿಯಲ್ಲಿಯೇ ಈ ಜಾಗತೀಕರಣ ನಮ್ಮನ್ನು ಎಳೆದುಕೊಂಡು ಹೋಗುತ್ತಿರುತ್ತದೆ. ನಮ್ಮ ಶತ್ರುಗಳು ಎದುರುಗಡೆ ಇದ್ದಾಗ ನಾವು ನೇರವಾಗಿ ಹೋರಾಟ ನಡೆಸಬಹುದು ಆದರೆ ಅದು ಅಘೋಷಿತವಾಗಿದ್ದಾಗ ಹೋರಾಟ ಮಾಡುವುದಕ್ಕೂ ಗೊತ್ತಾಗುವುದಿಲ್ಲ. ಎಲ್ಲಿಗೆ ಎಂದು ಬಾಣ ಬಿಡುವುದು? ಈ ತರದ ಒಂದು ಗೊಂದಲದಲ್ಲಿ ನಾವಿದ್ದೇವೆ. ಹಾಗಾಗಿ ರಂಗಭೂಮಿ ಒಂದೇ ಅಲ್ಲ ಭೂಮಿ ಮತ್ತು ರಂಗಭೂಮಿ ಎರಡೂ ಅತಂಕದಲ್ಲಿದೆ. ಭೂಮಿ ಅಂದರೆ ನಾನು ಕೃಷಿ ಸಂಸ್ಕೃತಿ. ಕೃಷಿಗೂ ಮತ್ತು ಸಂಸ್ಕೃತಿಗೂ ಭಾಳ ದೊಡ್ಡ ಸಂಬಂಧ ಇದೆ. ಕೃಷಿ ಇಲ್ದೇ ಇರ್ತಿದ್ರೆ ಸಂಸ್ಕೃತಿ ಏನಾಗ್ತಿತ್ತು ಯಾವ ರೀತಿ ಬೆಳಿತಿತ್ತೊ ಗೊತ್ತಿಲ್ಲ. ಕೃಷಿಗೂ ಮತ್ತು ಭೂಮಿಗೂ ಭಾಳ ದೊಡ್ಡ ಸಂಬಂಧ ಇದೆ. ಈ ಅಗ್ರಿಕಲ್ಚರ್‌ಗೆ ಬರುವ ರೋಗಗಳೆವೂ ಕಲ್ಚರ್‌ಗೆ ಬಂದಿವೆ. ಕೃಷಿಗೆ ಮತ್ತು ಭೂಮಿಗೆ ಇರುವಂತಹ ಎಲ್ಲಾ ಆತಂಕ ತಲ್ಲಣಗಳು ನಮ್ಮ ಈ ರಂಗಭೂಮಿಯಲ್ಲೂ ಇವೆ. 
ಹಿಂದೆ ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ ಎಂದು ಭಿನ್ನತೆ ಇದ್ದಂತೆ ಇಂದು ರಂಗಭೂಮಿಯಲ್ಲಿ ವೃತ್ತಿಪರರು ಮತ್ತು ಹವ್ಯಾಸಿಗಳ ನಡುವೆ ಭಿನ್ನತೆ ಉಂಟಾಗಿದ್ದು ಶ್ರೇಷ್ಠತೆಯ ಪ್ರಶ್ನೆ ಅಂತರಂಗದಲ್ಲಿದೆ ಎನ್ನಿಸುತ್ತದೆ. ಎನು ಹೇಳುತ್ತೀರಿ? 
ಇದು ಶ್ರೇಷ್ಠತೆಯ ಪ್ರಶ್ನೆ ಅಲ್ಲ. ಇಂದು ರಂಗಭೂಮಿಯನ್ನೇ ಪೂರ್ಣವಾಗಿ ನಂಬಿಕೊಂಡು ಕೆಲಸ ಮಾಡುತ್ತೇವೆಂದರೆ  ಅದರಿಂದ ಊಟ ಮಾಡಲು ಸಾಧ್ಯವಿಲ್ಲ. ಏಕೆಂದರೆ ಆ ರೀತಿಯಲ್ಲಿ ರಂಗಭೂಮಿ ಬೆಳೆಯಲೇ ಇಲ್ಲ.  ಅಷ್ಟೇ ವರ್ಷಗಳಲ್ಲಿ ಕೆಲಸ ಮಾಡಿದ ಬೇರೆ ಯಾವುದೇ ಕ್ಷೇತ್ರವಾದರೆ ಅವರು ಎಷ್ಟೋ ದುಡಿದು ಸಂಪಾದನೆ ಮಾಡಬಹುದು. ೩೦-೩೫ ವರ್ಷ ರಂಗಭೂಮಿಲಿ ಕೆಲಸ ಮಾಡಿದರೂ ಸಹ ಬದುಕಲು ಅವರು ಬಹಳ ಕಷ್ಟಪಡಬೇಕಾಗಿದೆ. ಬಸವಣ್ಣನವರು ಹೇಳಿದಾರೆ ಕಾಯಕವೇ ಕೈಲಾಸ ಅಂತ, ಕೈಲಾಸ ಸೇರೋವರೆಗೂ ನಾವು ಕಾಯಕವೇ ಮಾಡ್ತಿರೋದು ಅಂತ. ರಂಗ ಭೂಮಿಗೆ ಹೇಳಿ ಮಾಡಿಸಿದ ಮಾತಿದು. ಕೃಷಿಗೂ ಅಷ್ಟೇ ಸರಿಹೊಂದುವ ಮಾತಿದು. ರಂಗಭೂಮಿಯಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುವವರ ಅವರ ವಿಷಯ ಬೇರೆ. ಅವರ ಬಗ್ಗೆ ನಾನು ಹೇಳಲು ಹೋಗುವುದಿಲ್ಲ. ಆದರೆ ಯಾರು ರಂಗಭೂಮಿಯನ್ನು ನಿಜವಾಗಿ ಅಪ್ಪಿಕೊಂಡು ಕೆಲಸ ಮಾಡ್ತಿದಾರೋ ಅವರು ಬಹಳ ಏನೂ ಸಂಪಾದನೆ ಮಾಡಲಾಗುವುದಿಲ್ಲ. ಆದರೆ ಬಹಳ ಪ್ರೀತಿಯಿಂದ ಕೆಲಸ ಮಾಡುವ ಅವರಿಗೆ ಅವರಿಗೆ ಅದೇ ಜೀವ ಆಗಿರುತ್ತದೆ. ಇಷ್ಟೂ ವರ್ಷಗಳಲ್ಲಿ ರಂಗಭೂಮಿಯನ್ನು ಬಿಟ್ಟು ಬೇರೇನೂ ಮಾಡಿಲ್ಲ ನಾನು. ಈಗ ಬೇರೆ ಏನಾದರೂ ಮಾಡಬೇಕೆಂದರೂ ಸಾಧ್ಯವಿಲ್ಲ. ಇಲ್ಲೇ ಇದ್ದು ಮಾಡಬೇಕಿರುವುದು ಅನಿವಾರ್ಯ. ಇದರಲ್ಲೇ ಹೋಗಬೇಕು, ಇದರಲ್ಲೇ ಮುಕ್ತಿ ಕಾಣ ಬೇಕಾಗಿದೆ ಅಷ್ಟೆ,
ದೃಶ್ಯ ಮಾಧ್ಯಮಗಳ ಪ್ರವೇಶ ರಂಗಭೂಮಿಗೆ ಪೆಟ್ಟು ನೀಡಿದೆ ಎನ್ನಿಸುವುದಿಲ್ಲವೆ? 
ಇಲ್ಲ ನಾನು ಈ ಸಿನಿಮಾ ಮತ್ತು ಕಿರುತೆರೆಗಳನ್ನು ರಂಗಭೂಮಿಗೆ ಒಂದು ಸವಾಲು ಎಂದು ನಾನು ಯಾವತ್ತಿಗೂ ಹೇಳುವುದಿಲ್ಲ. ಅದರಲ್ಲಿ ಒಂದು ಗ್ಲಾಮರ್ರೇ ಬೇರೆ ಇದೆ.

ರಂಗಭೂಮಿಯ ಅನೇಕ ಪ್ರತಿಭೆಗಳು ಕಿರುತೆರೆಯಲ್ಲಿ ನೆಲೆಕಂಡುಕೊಳ್ಳುತ್ತಿದ್ದಾರಲ್ಲ? 
ಅದನ್ನು ನಾನು ಒಪ್ತೇನೆ. ಅದು ಇಲ್ಲಿ ಬದುಕುವುದು ಕಷ್ಟವಾದ ಕಾರಣ ಬದುಕಿನ ಅನಿವಾರ್ಯತೆಗಳ ಕಾರಣದಿಂದ ಅಲ್ಲಿಗೆ ಹೋಗಬೇಕಾಗಿದೆ ಎನ್ನಬಹುದು. ಅದರರ್ಥ ಜನರು ರಂಗಭೂಮಿಯನ್ನು ನಿರಾಕರಣೆ ಮಾಡಿದಾರೆ ಎಂದಲ್ಲ.  ಏಕೆಂದರೆ ಇದು ಜೀವಂತ ಪ್ರದರ್ಶನ. ನಾವೂ ನೀವೂ ಹೇಗೆ ಕುಳಿತುಕೊಂಡು ಮಾತನಾಡುತ್ತಿದ್ದೇವೋ ಹಾಗೆ ರಂಗಭೂಮಿ ಎಂಬುದು ಆ ಊರಿನ ಆ ಕ್ಷಣದಲ್ಲಿ ಸಂಭವಿಸುವ ಘಟನೆ ಅದು ಆ ಒಂದು ಸಮುದಾಯ ಮತ್ತು ಈ ನಟರು ಸೇರಿ ಹುಟ್ಟುವ ಅನುಭವ ಅದು. ಹಾಗಾಗಿ ಜನ ಯಾವತ್ತೂ ಕೂಡ ಒಂದು ಜೀವಂತ ಅನುಭವಕ್ಕಾಗಿ ತಮ್ಮನ್ನು ತೆರೆದುಕೊಳ್ಳುತ್ತಾರೆ. ಆ ಜೀವಂತ ಅನುಭವ ಬೇಕು ಎನ್ನವ ಒಂದು ಸಮುದಾಯ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲ್ಲಿಯವರೆಗೆ ಈ ರಂಗಭೂಮಿಯಂತಹ ಮಾದ್ಯಮಗಳಿಗೆ ಸೋಲಿಲ್ಲ. ಈಗ ಕಿರುತೆರೆಯೂ ಸೋಲುತ್ತಿದೆ. ಜನರು ನೋಡಿ ನೋಡಿ ಸುಸ್ತಾಗಿಬಿಟ್ಟಿದ್ದಾರೆ. ಸಿನಿಮಾಗಳವರೂ ಕೂಡ ಪಾಪ, ಎಲ್ಲರೂ ಕೂಡ ಅಷ್ಟೇ ಕಷ್ಟದಲ್ಲಿರ‍್ತಾರೆ. ಈ ಯಕ್ಷಗಾನ ಕಲೆ ಇದೆಯಲ್ಲ, ಅದೂ ಕೂಡ ಕಷ್ಟದಲ್ಲಿದೆ ಆದರೂ ಕೂಡ ಅವರು ಆರು ತಿಂಗಳುಗಳ ಕಾಲ ಸತತವಾಗಿ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆಯೋ ರೀತಿ ಕಂಡರೆ ಆಶ್ಚರ‍್ಯವಾಗುತ್ತದೆ. ಜಾಗತೀಕರಣದ ಪ್ರಭಾವದ ನಡುವೆಯೂ ಈ ಜನ ತಮ್ಮ ಕಲೆಯನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಆದ್ರೆ ಈ ರೀತಿಯ ಕಲೆಯನ್ನು ನಂಬಿಕೊಂಡು ಬಂದ ಜನ ಎಷ್ಟೇ ವರ್ಷ ಕಲೆಗಾಗಿ ತಮ್ಮನ್ನು ಮುಡಿಪಾಗಿಟ್ಟರೂ ಕೂಡ ಕೊನೆಗೂ ಅದರಲ್ಲಿರುವವನು ಒಬ್ಬ ಕಲಾವಿದನಾಗಿಯೇ ಉಳಿಯುತ್ತಾನೆ. ಗಣ್ಯ ವ್ಯಕ್ತಿ ಎಂಬ ಪಟ್ಟ ಇತರೆ ಬೇರೆ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ದುಡಿದವರಿಗೆ ಸಿಗುತ್ತದೆ. ಆದರೆ ನಮ್ಮ ಕಲಾವಿದರು ಅದನ್ನು ಕಡೆಗಣಿಸಿ ತಮ್ಮ ಕಲೆಯನ್ನೇ ಸರ್ವಸ್ವ ಅನ್ನುವ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕಲೆಗಾಗಿ ಜೀವನಾನ ಮುಡಿಪಾಗಿಸಿಟ್ಟಿದ್ದಾರೆ. ನಾವು ಆದರ್ಶವನ್ನು ಹೇಳುವುದು ಎಷ್ಟು ಸುಲಭವೋ ಅದನ್ನು ಅನುಸರಿಸುವುದು ಅಷ್ಟೇ ತ್ರಾಸದಾಯಕವಾದ್ದು. ಕಲೆಗಾಗಿ ದುಡಿಯುತ್ತಿರುವವರನ್ನು ಗುರುತಿಸಿ ಅವರ ಜೀವನದ ಸುಭದ್ರತೆಗೆ ಏನಾದರೊಂದು ಪರ್ಯಾಯ ವ್ಯವಸ್ಥೆಯಾಗಬೇಕಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯಂತಹ ಘಟಕಗಳು ಈ ದಿಸೆಯಲ್ಲಿ ಯಾವತ್ತೂ ಚಿಂತನೆಯನ್ನೇ ಮಾಡಿಲ್ಲ. ರಂಗಸಂಸ್ಕೃತಿಯನ್ನು ಕಟ್ಟುವ ರೀತಿಯಲ್ಲಿ ರಂಗಾಯಣದಂತಹ ಅನೇಕ ರಂಗಸಂಸ್ಥೆಗಳಿವೆ ಅವುಗಳ ಉದ್ಧಾರವಾಗಬೇಕಿದೆ. 

ನಿಮಗೆ ರಂಗಭೂಮಿಯೊಂದಿಗೆ ನಂಟು ಬೆಳೆದಿದ್ದು ಹೇಗೆ? 
ನನ್ನ ವಿದ್ಯಾಭ್ಯಾಸ ಮುಗಿದ ಮೇಲೆ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣನವರ ಸುದೈವದಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತು. ಅವರೊಂದಿಗೆ ಸಂಸ್ಥೆ ಕಟ್ಟುವ ಸುದೈವ ಸಿಕ್ಕು ಆ ಮೂಲಕ ನನಗೆ ಬಹಳಷ್ಟು ಅನುಭವ ಸಿಕ್ಕಿತು. ೨೨ ವರ್ಷಗಳಲ್ಲಿ ಸುಬ್ಬಣ್ಣ ನಮ್ಮ ಆಸರೆಯ ಸೂರಿನಂತಿದ್ದರು. ನಂತರ ರಂಗಾಯಣದಂತಹ ಸಾರ್ವಜನಿಕ ಸಂಸ್ಥೆಗೆ ಬಂದಾಗ ಜವಾಬ್ದಾರಿಗಳು ಬದಲಾದವು. ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದ ನಾವು ಸಾರ್ವಜನಿಕ ಸಂಸ್ಥೆಗೆ ಬಂದಾಗ ಬಹಳಷ್ಟು ಬದಲಾವಣೆಗಳಾದವು. ಜನರೊಂದಿಗೆ ನೇರವಾದ ಸಂಪರ್ಕ ಸರ್ಕಾರದೊಂದಿಗೆ ಗುದ್ದಾಟ, ಕಲಾವಿದರೊಂದಿಗೆ ಒಡನಾಟ ಬೆದು ಒಂದು ದೊಡ್ಡ ಅನುಭವ ಸಿಕ್ಕಿತು. ಮುಂದೆ ನನಗೆ ರಂಗಾಯಣದ ಅವಧಿ ಮುಗಿಸಿದಾಗ ಸಾಣೆಹಳ್ಳಿಯ ಪಂಡಿತರಾಧ್ಯ ಸ್ವಾಮಿಗಳು ನನ್ನನ್ನು ಕರೆದು ರಂಗಶಾಲೆ ಕಟ್ಟುವ ಬಗ್ಗೆ ಮಾತಾಡಿದರು. ಆಗ ಆರ್ಥಿಕವಾಗಿ ರಂಗಶಾಲೆ ಸೋತಿರುವುದರ ಬಗ್ಗೆ ಮಾತಾಡಿ, ನಿಮಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಅವಕಾಶ ಇದ್ದರೆ ನನಗೆ ಕೆಲಸ ಮಾಡಲು ಸಾಧ್ಯ ಎಂದಾಗ ’ನಾನು ಮಕ್ತವಾಗಿರುತ್ತೇನೆ ನೀವು ಬಂದು ಮಾಡಿ’ ಎಂದರು. ನಂತರ ನನಗೆ ಅದೊಂದು ದೊಡ್ಡ ಸವಾಲಾಗಿತ್ತು. ನಂತರ ಎರಡು ವರ್ಷಗಳು ಅಲ್ಲಿ ಕೆಲಸ ಮಾಡಿದೆ. ಆಗ ರಂಗಶಾಲೆ ಒಂದು ವ್ಯವಸ್ಥೆಗೆ ಬಂದಿತ್ತು. ಮುಂದೆ ರಾಷ್ಟ್ರೀಯ ನಾಟಕ ಶಾಲೆಯಿಂದ ಅವಕಾಶ ಬಂತು. ಆಗ ಸ್ವಾಮಿಗಳಲ್ಲಿ ಹೋಗಲು ಅವಕಾಶ ಮಾಡಿಕೊಡಿ ಅಂದಾಗ ಕಳಿಸಲು ನಿರಾಕರಿಸಿದರು. ಹೀಗೆ ಮೂರು ತರದ ಮೂರು ಸಂಸ್ಥೆಗಳೊಂದಿಗೆ ಒಡನಾಟ ಬೆಳೆಯಿತು. ಅನುಭವವೂ ದೊರೆಯಿತು.
ರಂಗಭೂಮಿಯಿಂದ ನೀವು ಪಡೆದುಕೊಂಡಿರುವುದೇನು?
ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಸಂವೇದನೆಯನ್ನು, ಪ್ರೀತಿಯನ್ನು, ಮನುಷ್ಯ ಕಾಳಜಿಗಳನ್ನು ರಂಗಭೂಮಿ ನನನಗೆ ಕಟ್ಟಿಕೊಟ್ಟಿದೆ. ಇದು ಬಹಳ ಮುಖ್ಯ. ಅದಕ್ಕಿಂತ ಏನು ಬೇಕು? ಅದನ್ನು ಉಳಿಸಿಕೊಂಡರೆ ಸಾಕು. 

ನಾಡಿನ ಪ್ರಮುಖ ರಂಗಶಾಲೆಗಳನ್ನು ಕಟ್ಟಿಬೆಳೆಸುವಲ್ಲಿ ವಿಶೇಷ ಪಾತ್ರವಹಿಸಿರುವ ನಿಮಗೆ ರಂಗಶಾಲೆಯ ಕುರಿತು ಇದ್ದ ಪರಿಕಲ್ಪನೆಗಳೇನು? 
ಒಂದು ರಂಗಶಾಲೆಯನ್ನು ಕಟ್ಟುವ ಸಂದರ್ಭದಲ್ಲಿ ಅದರ ಪರಿಕಲ್ಪನೆ ಯಾವ ರೀತಿ ಎಂಬುದು ಮುಖ್ಯ. ನಂತರ ಅದನ್ನು ಅನುಷ್ಠಾನಗೊಳಿಸುವ ಅಂಶ. ಹೆಚ್ಚು ಒತ್ತು ನೀಡಿಕೊಂಡು ಶಿಕ್ಷಣದಲ್ಲಿ ರಂಗ ಭೂಮಿಯ ಅಂಶಗಳನ್ನು ಸೇರಿಸುತ್ತಾ ಹೋಗಬೇಕು. ಅದನ್ನು ಒಂದು ವಿಷಯವಾಗಿ ತೆಗೆದುಕೊಂಡಲ್ಲಿ ಬಹಳ ಇಷ್ಟವಾಗುತ್ತದೆ ಹಾಗೂ ಪ್ರಯೋಜನ ಆಗುವಂತಾದ್ದು. ಇದರಿಂದಾಗಿ ಸಮಾಜದ ಜೊತೆಗೆ ನೇರವಾದ ಸಂಪರ್ಕ ಇರುತ್ತದೆ. ಇದರಿಂದ ಅದರೊಂದಿಗೆ ಬರುವ ವಿದ್ಯಾರ್ಥಿಗಳು ಹಾಗೂ ನಾಟಕ ನೋಡುವ ಸಮುದಾಯ ಬೆಳೆಯುತ್ತ ಹೋಗುವ ಕಾರ್ಯ ಆಗಬೇಕು. ಆ ವಿದ್ಯಾರ್ಥಿ ಒಬ್ಬ ನಟನಾಗಿ ಬೆಳೆಯುವ ವಾತಾವರಣ ಸೃಷ್ಟಿಯಾಗಬೇಕು. ಅದನ್ನು ಪರಂಪರೆಯಿಂದ ಕೃಷಿ ಮಾಡಿ ಬೆಳೆಸಬೇಕಾಗುತ್ತದೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಯಕ್ಷಗಾನ ಕಲಾವಿದರು ತಮ್ಮ ಕಲೆಯನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಇಲ್ಲಿ ಆ ಅವಕಾಶ ಕಡಿಮೆ. ಇಲ್ಲಿ ಒಬ್ಬ ನಟ ಬೆಳಕು ನಿರ್ವಹಣೆ, ಪ್ರಸಾದನಗಳಂತಹ ಎಲ್ಲಾ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಇದರಿಂದ ನಟನೆ ಬೆಳೆಯಲು ಸಾದ್ಯವಿಲ್ಲ. ಆದುದರಿಂದ ಅಭಿನಯ ಪ್ರಯೋಗಶಾಲೆಯಂತಹ ವ್ಯವಸ್ಥೆಯನ್ನು ನೀಡಬೇಕು. ಇದರಿಂದ ನಾವು ಒಬ್ಬ ನಟನನ್ನು ಬೆಳೆಸಲು ಸಾದ್ಯ. ನೀನಾಸಂ ಇರಬಹುದು ಅಥವಾ ಸಾಣೆಹಳ್ಳಿಯ ಶಿವ ಸಂಚಾರ ಇರಬಹುದು. ಅವರೆಲ್ಲಾ ನಟರನ್ನು ಬೆಳೆಸುವ ನಿಟ್ಟಿನಲ್ಲಿ ಬೇರೆ ತರದ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಬೆಳೆಸುವ ಪೂರಕ ವಾತಾವರಣವನ್ನು ಸೃಷ್ಟಿ ಮಾಡಿಲ್ಲ. ಈ ವಾತಾವರಣ ಸೃಷ್ಟಿಯಾಗಬೇಕು. 
 
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ರಂಗಭೂಮಿ ಶಿಕ್ಷಣವನ್ನು ನೀಡು ಪ್ರಯತ್ನವನ್ನು ಸರ್ಕಾರ ಆರಂಭಿಸಿದೆ. ಆದರೆ ಈ ನಿಟ್ಟಿನಲ್ಲಿ ಒಂದು ಪಠ್ಯಕ್ರಮವಾಗಲೀ, ನಾಟಕ ಶಿಕ್ಷಕರ ಪೂರಕ ವಾತಾವರಣಗಳಾಗಲೀ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣದಲ್ಲಿ ನಾಟಕ ಶಿಕ್ಷಣ ಹೇಗೆ ಸಾಧ್ಯ? 
ಸರ್ಕಾರದ ವ್ಯವಸ್ಥೆಯಲ್ಲಿ ಕಲಾವಿದರು ಹೋಗಿ ಸೇರಿದರೆ ತಮ್ಮ ಸಂವೇದನೆಗಳನ್ನು ಕಳೆದುಕೊಂಡುಬಿಡುತ್ತಾರೆ. ಪೂರಕ ವಾತಾವರಣ ಶಾಲೆಗಳಲ್ಲಿ ಇರುವುದಿಲ್ಲ. ಶಾಲಾಶಿಕ್ಷಕರಾಗಿದ್ದ ಬಹಳ ದೊಡ್ಡ ಸಂಗೀತಗಾರರಾದ ಪರಮೇಶ್ವರ್ ಹೆಗ್ಡೆ ರಾಜೀನಾಮೆ ಕೊಟ್ಟ ಹೊರಗಡೆ ಬಂದರು.  ಕಲೆಗೆ ಬೆಲೆ ಸಿಗುದುದೇ ಇದಕ್ಕೆ ಕಾರಣ. ನಾಟಕ ಶಿಕ್ಷಕರು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು. ಅಂದರೆ ಮಕ್ಕಳಲ್ಲಿ ಒಂದು ಸಂವೇದನೆ ಸೃಷ್ಟಿ ಮಾಡುವಂತಹ ಅವಕಾಶವಿರಬೇಕು. ಮಕ್ಕಳು ಎಷ್ಟೆಷ್ಟು ಸಂವೇನಾಶೀಲರಾಗುತ್ತಾರೋ ಅಷ್ಟು ಬೆಳೆಯಲು ಸಾದ್ಯ. ಆದರೆ ನಮ್ಮ ಸರಕಾರದೊಂದಿಗೆ ಗುದ್ದಾಡುವ ಕಾರ್ಯ ಸಾದ್ಯವಿಲ್ಲ. ವ್ಯವಸ್ಥೆಯಲ್ಲಿರುವ ಏರುಪೇರುಗಳಿಂದ  ಕಲೆಗಾರನಿಗೆ ಬೆಳೆಯಲು ಸಾಧ್ಯವಿಲ್ಲದಾಗಿದೆ. ನಮ್ಮ ನಾಟಕದ ಮೇಸ್ಟ್ರು ಅಟೆಂಡರ್ ಅಗಿ ಕೆಲಸ ಮಾಡುವ ಪರಿಸ್ಥಿತಿ ಅಲ್ಲಿದೆ. ಆದರೆ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಅವರನ್ನು ತೊಡಗುವಂತೆ ಮಾಡಲು ಸಾಧ್ಯವಿದೆ. ನಮ್ಮ ಶಿಕ್ಷಣವ್ಯವಸ್ಥೆಯಲ್ಲಿರುವ ಡ್ರಾಯಿಂಗ್ ಶಿಕ್ಷಕರಿರಲಿ, ಕ್ರಾಫ್ಟ್ ಶಿಕ್ಷಕರಿರಲಿ ಇವರೆಲ್ಲಾ ಸೇರಿ ಮುಖ್ಯವಾಹಿನಿಯೊಂದಿಗೆ ಹೇಗೆ ಕಾರ್ಯನಿರ್ವಹಿಸಿ ಮಕ್ಕಳ ಮನೋವಿಕಾಸಕ್ಕೆ, ಅವರಲ್ಲಿ ಸಂವೇದನೆ ಬೆಳೆಸುವ ನಿಟ್ಟಿನಲ್ಲಿ ಸಹಾಯವಾಗಬದುದೆಂದು ನಾವು ಪ್ರಯೋಗಾತ್ಮಕವಾಗಿ ಕ್ಷೇತ್ರಕಾರ್ಯದಲ್ಲಿ ಮಾಡಿ ತೋರಿಸಿದ್ದೇವೆ. ಹಲವಾರು ನಾಟಕದ ಶಿಕ್ಷಕರು ಈಗಾಗಲೇ ಅದ್ಭುತ ಕೆಲಸಗಳನ್ನು ಮಾಡಿಯೂ ತೋರಿಸಿದ್ದಾರೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಅಧಿಕಾರಿಗಳೊಂದಿಗೆ ಒದ್ದಾಡುವುದು ಬಹಳ ಕಷ್ಟವಿದೆ. ವ್ಯವಸ್ಥೆಯೊಳಗಿರುವ ತರತಮ ವ್ಯವಸ್ಥೆಯೂ ಕಲಾವಿದರಿಗೆ ಒಗ್ಗುವುದಿಲ್ಲ. 

ಒಬ್ಬ ರಂಗಕರ್ಮಿಯಾಗಿ ಇಂದಿನ ಸಾಮಾಜಿಕ ರಾಜಕೀಯ ಸಂದರ್ಭದ ಕುರಿತು ಏನು ಹೇಳುತ್ತೀರಿ?
ನಮ್ಮ ಸಂದರ್ಭದ ದುರಂತ ಏನೆಂದರೆ ಇಂದು ಯಾವ ಚಳವಳಿಯನ್ನೂ ಮಾಡಲಾಗದ ಒಂದು ದುಸ್ಥಿತಿ ಇದೆ. ಎಲ್ಲಾ ಚಳವಳಿಗಳನ್ನೂ ಕ್ಯಾಪಿಟಲೈಸ್ ಮಾಡಿಕೊಂಡುಬಿಡಲಾಗುತ್ತಿದೆ. ಕೆಲವೊಮ್ಮೆ ಯೋಚಿಸಿದಾಗ ಈ ಕಾಲದಲ್ಲಿ ಬದುಕಲಿಕ್ಕೇ ಅರ್ಹತೆ ನಮಗೇ ಇಲ್ಲವೇನೋ ಅನ್ನಿಸಿಬಿಡುತ್ತದೆ. ಆದರೂ ಇದೊಂದು ಕಾಲಘಟ್ಟದವರೆಗೆ ಮಾತ್ರ ಅನ್ನಿಸುತ್ತದೆ. ರಾಜಕೀಯದಲ್ಲಿ ವಿಕೇಂದ್ರೀಕರಣ ಬಂದ ಮೇಲೆ ವಿಧಾನಸೌಧದಿಂದ ಗ್ರಾಮಪಂಚಾಯಿತಿ ಮಟ್ಟಕ್ಕೂ ಭ್ರಷ್ಟಾಚಾರ ಮುಂದುವರೆಯಿತು. ಆದರೆ ಜನರು ಇದನ್ನು ಎಲ್ಲಿಯವರೆಗೆ ಸಹಿಸಿಕೊಮಡಿರಲು ಸಾಧ್ಯ. ಇದೆಲ್ಲಾ ಕೊನೆಗೊಳ್ಳಲೇಬೇಕು. 



ಗುರುವಾರ, ಸೆಪ್ಟೆಂಬರ್ 27, 2012

ರಂಗಾಯಣದಲ್ಲಿ ಚಿಂತನ ಚಿತ್ತಾರ..


avadhi krupe
ಈಗಲೂ ಸ್ವರ್ಗದಲ್ಲಿರುವ ಚಿಂತಕ ಡಿ. ಆರ್ . ನಾಗರಾಜ್ ಅವರು ಇಲ್ಲೇ ಇದ್ದಾಗ ಅನುವಾದಿಸಿದ
ಪುಸ್ತಕವೊಂದರ ಹೆಸರು: ವಸಂತ ಸ್ಮೃತಿ.
ಇದು ನಿಮಗೂ ತಿಳಿದಿರುವ ಹಾಗೆ ರೂಮಿ ಕವಿತೆಗಳ ಅನುವಾದ ಸಂಕಲನ. ಇದರಲ್ಲಿ ‘ದಾರಿ ತಪ್ಪಿದ
ಗಿಡುಗ’ ಎಂಬ ಹೆಸರಿನ ಕವಿತೆ ಇದೆ.
ಈ ಇಂಥಹ ಕವಿತೆಯನ್ನೇ ಬಾಳಿದ ಕಥೆಯಂತೆ ಚಿತ್ರಕಾರ ವ್ಯಾನ್ ಗೋನ ಜೀವನ ಭಾಸವಾಗುತ್ತದೆ; ಒಡಲು
ಮತ್ತು ಒಡಹುಟ್ಟಿನ ಮೂಲವನ್ನು
ಹಿಡಿದು ಅಲ್ಲಾಡಿಸುತ್ತದೆ. ಅಂದಹಾಗೆ; ಈ ಪುಸ್ತಕದ ಮರುಮುದ್ರಣ ಕನ್ನಡದಲ್ಲಿ ಕೆಲವು ತಿಂಗಳ
ಹಿಂದಷ್ಟೇ ಆಗಿದೆ (ನವಕರ್ನಾಟಕ ಪ್ರಕಾಶನ).
ಹೊಸ ತಲೆಮಾರಿನ ಹುಡುಗರು ಅದರಲ್ಲೂ ಮೈಸೂರಿನ ರಂಗಾಯಣದ ಗಾಳಿಯಲ್ಲಿ ಸುಳಿದಾಡುವವರಲ್ಲಿ ಈ
ಪುಸ್ತಕ: ನೋವಿಗದ್ದಿದ ಕುಂಚ ಹೊಸ
ಸಂಚಲನವನ್ನು ಉಂಟು ಮಾಡಿದೆ. ಈ ಕೃತಿಯ ಚರ್ಚೆ – ಸಂವಾದವು ೨೯.೦೯.೨೦೧೨ ರಂದು ರಂಗಾಯಣದ
ಶ್ರೀರಂಗದಲ್ಲಿ ಸಂಜೆ ೫ ಗಂಟೆಗೆ ಜರುಗಲಿದೆ.
ದಯವಿಟ್ಟು ನೀವು ನಿಮ್ಮ ಸ್ನೇಹಿತರು ಕೂಡಿ ಬನ್ನಿ. ಇದೇ ಸಂಧರ್ಭದಲ್ಲಿ ಈ ಸಲದ ಕಾರ್ಯಕ್ರಮದ
ಆಹ್ವಾನ ಪತ್ರಿಕೆಯನ್ನು ರೂಪಿಸಿರುವ ಮೈಸೂರಿನ ಚಿತ್ರಕಾರ ಕೆ.ಜೆ. ಸಚ್ಚಿದಾನಂದ ಅವರಿಗೆ
‘ಚಿಂತನ ಚಿತ್ತಾರ’ದ ವಂದನೆಗಳು.

ಹೀಗೊಬ್ಬ ಕತ್ತರಿ ಕಲಾ ಮಾಂತ್ರಿಕ, ಸಾಂಝೀ ಕಲೆಯ ಸರದಾರ ಹುಸೈನ್


- ಮೌನೇಶ್
varthabharathi

ಬಣ್ಣ, ಮಣ್ಣು, ಪ್ಲಾಸ್ಟರ್ ಪ್ಯಾರಿಸ್, ಪೈಬರ್ ಹೀಗೆ ಬೇರೆ ಬೇರೆ ವಸ್ತುಗಳಿಂದ ಕಲಾಕೃತಿ ರಚಿಸುವುದನ್ನು ನಾವು ಕಂಡಿದ್ದೇವೆ. ಆದರೆ ಕಾಗದ ಕತ್ತರಿಸಿಯೇ ಅದ್ಭುತ ಕಲಾಕೃತಿಗಳನ್ನು ರೂಪಿಸುವ ಕಲಾವಿದನನ್ನು ನೀವು ಕಂಡಿದ್ದೀರಾ..? ಹಾಗಾದರೆ ಇಲ್ಲಿ ಕೇಳಿ..ಇವರ ಕೈಗೆ ಕತ್ತರಿ ಮತ್ತೊಂದು ಕಾಗದ ಕೊಟ್ಟರೆ ಸಾಕು, ಅದ್ಭುತವನ್ನೇ ಸೃಷ್ಟಿಸಬಲ್ಲರು. ಈ ಕತ್ತರಿ ಮಾಂತ್ರಿಕನ ಹೆಸರು ಎಸ್.ಎಫ್. ಹುಸೈನ್. ಮೂಲತಃ ಮಂಡ್ಯದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತ ವ್ಯವಿದ್ದಾರೆ. ಇವರಿಗೆ ಅದ್ಯಾವ ಕಲೆ ಸಿದ್ಧಿಸಿ ದೆಯೋ ದೇವರೇ ಬಲ್ಲ. ಆದರೆ ಇವರ ಕೈಯಿಂದ ರೂಪಪಡಕೊಂಡ ಕಲಾಕೃತಿಗಳಂತೂ ಎಂತವರನ್ನೂ ಮರುಳು ಮಾಡಬಲ್ಲದು. ಯಾವುದೇ ಕಾಗದವನ್ನು ತನ್ನದೇ ದೃಷ್ಟಿ ಕೋನದಲ್ಲಿ ಸೂಕ್ಷ್ಮವಾಗಿ ಕತ್ತರಿಸಿ ಇವರಿಂದ ಮೂಡುವ ಮುಖವಾಡ, ಗೊಂಬೆ, ಪ್ರಾಣಿ,ಪಕ್ಷಿ, ರಾಜ-ರಾಣಿಯರ ಕಲಾಕೃತಿಗಳಂತೂ ಕಣ್ಣಿಗೆ ಕಟ್ಟುತ್ತವೆ. ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ ಎಂಬ ಮಾತೊಂದಿದೆ. ಅದರಲ್ಲೂ ಈ ಕಾಗದವನ್ನು ಕತ್ತರಿಸಿ ಕಲಾಕೃತಿಗಳನ್ನು ರಚಿಸುವ ಮನ ಮೋಹಕ ಸಾಂಝೀ ಕಲೆಯಲ್ಲಿ ಹುಸೈನ್ ಹಿಡಿತ ಸಾಧಿಸಿರುವುದು ನಿಜಕ್ಕೂ ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲ ಎನ್ನಬಹುದು.ಕೇವಲ ಕಾಗದ ಕತ್ತರಿಸಿ ಕಲಾಕೃತಿ ನಿರ್ಮಿಸು ವುದು ಮಾತ್ರ ಇವರ ಕಾರ್ಯವಲ್ಲ. ಜೊತೆಗೆ ಕಾಗದ ಕಲೆಯ ಕುರಿತಾಗಿ ಇವರು ಸಾಕಷ್ಟು ರೀತಿಯ ಸಂಶೋಧನೆಗಳನ್ನು ತನ್ನದೇ ಹಂತದಲ್ಲಿ ನಡೆಸುತ್ತಾ ಬಂದಿದ್ದಾರೆ.

ಅಪರೂಪದ ಕಲಾವಿದ ಮೈಸೂರು ಹುಸೇನ್...
ಎಸ್.ಎಫ್. ಹುಸೈನ್ (ಸಯ್ಯದ್ ಫಕ್ರುದ್ದೀನ್ ಹುಸೈನ್) ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನ ಸಮುದ್ರ ಎಂಬಲ್ಲಿಯವರು.ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ಪಡೆದಿರುವ ಇವರು, ಮೈಸೂರು ಹುಸೈನ್ ಎಂದೇ ಹೆಸರು ಪಡೆದವರು. ಮೈಸೂರಿನಲ್ಲಿರುವ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಪೈನ್ ಆರ್ಟ್ಸ್, ವೈಜಯಂತಿ ಕಲಾ ಶಾಲೆಯಲ್ಲಿ ಡಿಪ್ಲೊಮಾ ಇನ್ ಪೈನ್ ಆರ್ಟ್ಸ್, ಆರ್ಟ್ ಮಾಸ್ಟರ್(ಎ.ಎಂ), ಜೆ.ಡಿ. ಹಾಗೂ ಪೈಂಟಿಂಗ್ ಬಿ.ಎಪ್.ಎ. ವ್ಯಾಸಂಗ ಮಾಡಿದ್ದಾರೆ.

ಏನಿದು ಸಾಂಝೀ ಕಲೆ..
ಇದು ಕಳೆದ ಹಲವು ಶತಮಾನ ಗಳಿಂದ ಭಾರತದಲ್ಲಿ ರೂಢಿಯಲ್ಲಿರುವ ಒಂದು ಬಗೆಯ ಜಾನಪದ ಕಲೆ. ಕಾಗದವನ್ನು ಮನಮೋಹಕ ವಿನ್ಯಾಸಗಳಲ್ಲಿ ಕತ್ತರಿಸಿ,ಮದುವೆ ಮೊದಲಾದ ಶುಭ ಕಾರ್ಯಕ್ರಮಗಳಲ್ಲಿ ಅಲಂಕಾರಕ್ಕೆ ಉಪಯೋಗಿಸುತ್ತಾರೆ. ಈ ಕಲೆ ಭಕ್ತಿಯ ಹೆಸರಿನಲ್ಲಿ ಹುಟ್ಟಿಕೊಂಡ ಕಾರಣ ದೇವಾಲಯಗಳ ಅಲಂಕಾರಕ್ಕೂ ಬಳಕೆಯಾಗುತ್ತದೆ. ಸರಳವಾಗಿ ಹೇಳುವುದಾದರೆ ಇದು ಕಲಾತ್ಮಕವಾಗಿ ಕಾಗದವನ್ನು ಕತ್ತರಿಸುವ ಕಲೆ.ಹುಸೈನ್‌ರವರು ಕಳೆದ ಹಲವು ವರ್ಷಗಳ ಕಲಾ ಬದುಕಿನಲ್ಲಿ ಕಂಡುಕೊಂಡಂತೆ, ಈ ಸಾಂಝೀ ಕಲೆ, ರಂಗೋಲಿಗೂ ಆಧಾರವಂತೆ.‘ಸಾಂಝೀ’ ಪದಕ್ಕೆ ಅತ್ಯಂತ ಖಚಿತವಾದ ಮೂಲ ಇದ್ದಂತಿಲ್ಲ. ಅಲಂಕರಣ ಎಂಬರ್ಥದ ‘ಸಜಾವಟ್’ ಅಥವ ‘ಸಜ್ಜಾ’ ಎಂಬ ಪದ ಇದರ ಮೂಲವಿರಬಹುದು.
ಕೆಲವರು ‘ಸಂಧ್ಯಾ’ ಎಂಬ ಸಂಸ್ಕೃತ ಪದವೇ ಇದರ ಮೂಲ ಪದ ಎನ್ನುತ್ತಾರೆ. ಹಿಂದಿಯ ‘ಸಾಂಜ್’ (ಸಾಯಂಕಾಲ) ಸಹಾ ಈ ಶಬ್ದದ ಹುಟ್ಟಿಗೆ ಕಾರಣ ಇರಬಹುದು. ಬಹಳ ಹಿಂದೆ ಇದು ಬೆಳೆದು ಬಂದ ಮಥುರಾ ಮತ್ತು ಬೃಂದಾವನದ ಭಾಗಗಳಲ್ಲಿ (ಮುಖ್ಯವಾಗಿ ಬೃಜಭಾಷೆ ಉಪಯೋಗದಲ್ಲಿದ್ದ ಭಾಗಗಳಲ್ಲಿ) ಸಂಜೆಯ ವೇಳೆಗೆ ದಂಪತಿಗಳು ಮನೆಯ ಬಾಗಿಲು ಅಥವಾ ಜಗಲಿಯಲ್ಲಿ ಕುಳಿತು ಪರಸ್ಪರ ಸಂಭಾಷಿಸುತ್ತ ರಚಿಸುತ್ತಿದ್ದ ಆಕೃತಿಗಳೆಂದು ಇವು ಹೇಳಲಾಗುತ್ತದೆ.
ರಂಗೋಲಿ ರಚನೆಗೂ ಸಾಂಝಿಯೇ ಮೂಲವಾಗಿತ್ತಂತೆ. ಕಾಗದವನ್ನು ವಿವಿಧ ಮಡಿಕೆಗಳನ್ನಾಗಿ ಮಾಡಿ, ಅದನ್ನು ಪ್ರಮಾಣಬದ್ಧವಾಗಿ ಕತ್ತರಿಸಿ ಅದನ್ನು ನೆಲದ ಮೇಲೆ ಹಾಸಿ ಬಣ್ಣ ಬಣ್ಣದ ರಂಗೋಲಿ ಹುಡಿಯನ್ನು ಉದುರಿಸಿ, ಕಾಗದವನ್ನು ನಿಧಾನವಾಗಿ ಮೇಲೆತ್ತಿದರೆ ಸುಂದರ ರಂಗೋಲಿ ತಯಾರಾದಂತೆ.
ಅಂತಹಾ ಸಾಂಝಿ ಕಲೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಹುಸೈನ್, ಸಾಂಝೀ ಕಲೆಯ ಬಗ್ಗೆ ರಾಜ್ಯಾದ್ಯಂತ ಮಾಹಿತಿ ಪಸರಿಸುವ ಕಾರ್ಯ ನಡೆಸುತ್ತಿದ್ದಾರೆ. ರಾಜ್ಯದ ವಿವಿಧೆಡೆಗಳಲ್ಲಿ ನಡೆದಿರುವ ಇವರ ಕಲಾಕೃತಿಗಳ ಪ್ರದರ್ಶನ ಹಾಗೂ ಸಾಂಝೀ ಕಲಾಶಿಬಿರದ ತರಬೇತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಕಲಾಶಿಬಿರಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದು, ನೂರಾರು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಮೆ ಇವರದು.
ಪ್ರಾಣಿಗಳ ಮುಖವಾಡ, ಮನುಷ್ಯರ ಮುಖದ ಪ್ರತಿಬಿಂಬ, ಬಗೆಬಗೆಯ ಆಕೃತಿಗಳು, ದೀಪ, ಹಕ್ಕಿಗಳು ಹೀಗೆ ಇವರ ಕೈಯಿಂದ ಮೂಡುವ ಕಲಾಕೃತಿಗಳು ನೋಡುಗರನ್ನಂತೂ ಬೆರಗುಗೊಳಿಸುತ್ತದೆ. ತನ್ನ ಕಲಾ ಪ್ರೌಢಿಮೆಗೆ ಈಗಾಗಲೇ ಹಲವಾರು ಬಿರುದು ಸಮ್ಮಾನಗಳನ್ನು ಪಡೆದಿ ರುವ ಹುಸೈನ್‌ರಿಗೆ ಈ ಕಲೆಯನ್ನು ಮತ್ತೊಬ್ಬರಿಗೆ ಹೇಳಿಕೊಡುವುದರಲ್ಲಿ ಹೆಚ್ಚು ಆಸಕ್ತಿ. ಕಲೆ ಮತ್ತು ಕಲಾವಿದರು ಎಲ್ಲಡೆಯಲ್ಲಿ ಇರಬೇಕು ಎಂದು ಬಯಸುವ ಹುಸೈನ್ ಕರೆದಲ್ಲೆಲ್ಲಾ ಹೋಗಿ ತಮ್ಮ ಕಲಾವಂತಿಕೆಯನ್ನು ಪಸರಿಸುವ ಕಾರ್ಯ ಮಾಡುತ್ತಿದ್ದಾರೆ. ಇವರು ನಿಮ್ಮೂರಿಗೂ ಬರಬೇಕಾ.. ನಿಮ್ಮ ಊರಿನ ಮಕ್ಕಳೊಂದಿಗೆ ಬೆರೆಯಬೇಕಾ.. ಹಾಗಿದ್ದರೆ ತಡ ಯಾಕೆ.. 9845153277 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.

ಶುಕ್ರವಾರ, ಸೆಪ್ಟೆಂಬರ್ 21, 2012

ಇವಾಳಜ್ಜಿ ಮತ್ತು ಆದಮಜ್ಜನ ರಂಗಪ್ರವೇಶ - ಇಸ್ಮತ್ ಫಜೀರ್

varthabharathi krupe

ಮಂಗಳೂರಿನ ಉತ್ಸಾಹಿ ಯುವ ರಂಗ ಪ್ರತಿಭೆಗಳು ಸೇರಿಕೊಂಡು ಇತ್ತೀಚೆಗೆ ಕಟ್ಟಿದ ‘ಜರ್ನಿ ಥಿಯೇಟರ್ ಗ್ರೂಪ್’ ತನ್ನ ಪಯಣದ ಮೊದಲ ನಡೆಯನ್ನು ‘ಇವಾಳಜ್ಜಿಯೂ ಆದಮಜ್ಜನೂ’ ಎಂಬ ಪ್ರಖರ ಸ್ತ್ರೀವಾದಿ ಚಿಂತನೆಯ ನಾಟಕದ ಮೂಲಕ ಯಶಸ್ವಿಯಾಗಿ ದಾಖಲಿಸಿದೆ. ಸುಮಾರು ಒಂದು ಗಂಟೆಯ ನಾಟಕಕ್ಕೆ ಗಟ್ಟಿ ಕತೆಯೊಂದರ ಬಲವಿಲ್ಲದಿದ್ದಾಗ್ಯೂ ತಾವು ಪ್ರತಿಪಾದಿಸ ಹೊರಟ ಸ್ತ್ರೀ ಸಮಾನತೆ ಮತ್ತು ಮಹಿಳಾ ಸ್ವಾತಂತ್ರದ ಚಿಂತನೆಯನ್ನು ವಿಶಿಷ್ಟ ಶೈಲಿಯ ಸಂಭಾಷಣೆ ಮತ್ತು ಶ್ರೇಷ್ಠ ಗುಣಮಟ್ಟದ ಅಭಿನಯದ ಮೂಲಕ ಯುವರಂಗ ಪ್ರತಿಭೆಗಳಾದ ಮಂಜುಳಾ ಸುಬ್ರಹ್ಮಣ್ಯ ಮತ್ತು ವಿದ್ದು ಉಚ್ಚಿಲ್ ಸಮರ್ಥವಾಗಿ ಮಂಡಿಸಿದ್ದಾರೆ. ನಾಟಕ ಪ್ರಾರಂಭವಾಗಿ ಹತ್ತು ನಿಮಿಷಗಳ ವರೆಗೂ ಈ ನಾಟಕದ ಕಥೆ ಮತ್ತು ಥೀಮ್ ಏನಿರಬಹುದೆಂದು ಪ್ರೇಕ್ಷಕನಿಗೆ ಹೊಳೆಯುವುದೇ ಇಲ್ಲ. ಆದರೂ ಕೂಡಾ ಮಂಜುಳಾ ಸುಬ್ರಹ್ಮಣ್ಯ ಮತ್ತು ವಿದ್ದು ಉಚ್ಚಿಲ್ ತಮ್ಮ ಅಪೂರ್ವ ಶೈಲಿಯ ಸಂಭಾಷಣೆಯ ಮೂಲಕ ಪ್ರಾರಂಭದಿಂದಲೇ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೊಂದು ಸ್ತ್ರೀವಾದಿ ಚಿಂತನೆಯ ನಾಟಕವಾದರೂ ಈ ನಾಟಕದ ಶೀರ್ಷಿಕೆಯೂ ಬಹಳ ಅರ್ಥಗರ್ಭಿತ.
ಭೂಮಿಯಲ್ಲಿ ಆದಿಪಿತ ಆದಂ ಮತ್ತು ಆದಿಮಾತೆ ಈವ್ ಮೊಟ್ಟ ಮೊದಲಾಗಿ ಬದುಕು ಕಟ್ಟುವಂತೆಯೇ ಮನುಷ್ಯನ ವಾಸನೆಯೂ ಇಲ್ಲದ ದ್ವೀಪದಲ್ಲಿ ಅವರೀರ್ವರ ಹೊರತಾಗಿ ಬೇರೆ ಮಾನವ ಜೀವವಿರುವುದಿಲ್ಲ. ಈ ನಿಟ್ಟಿನಲ್ಲಿ ‘ಇವಾಳಜ್ಜಿಯೂ ಆದಮಜ್ಜನೂ’ ಶೀರ್ಷಿಕೆ ಅತ್ಯಂತ ಸೂಕ್ತವಾಗಿಯೇ ಇದೆ. ಹೆಣ್ಣಿನ ಒಡಲಾಳದ ಬೇಗುದಿಯನ್ನು ಮನ ಮುಟ್ಟುವಂತೆ ಅಭಿನಯಿಸಿ ಮಂಜುಳಾ ತನ್ನ ಪಾತ್ರ ಕ್ಕೆ ಜೀವ ತುಂಬಿದ್ದಾರೆ. ಆದರೆ ಮನುಷ್ಯ ಸಂಕುಲದ ಬೆಳವಣಿಗೆಯಲ್ಲಿ ಸ್ತ್ರೀ ಕುಲದ ಅಗತ್ಯ ಮತ್ತು ಮಹತ್ವದ ಕುರಿತಂತೆ ನಡೆಯುವ ಸಂಭಾಷಣೆಯಲ್ಲಿ ಸ್ತ್ರೀ ಪಾತ್ರಧಾರಿಯ ಧ್ವನಿಯಲ್ಲಿ ಅಗತ್ಯಕ್ಕಿಂತ ತುಸು ಹೆಚ್ಚಿನ ಏರಿಳಿತವಿತ್ತು.
ಒಂಟಿ ಮಹಿಳೆಯು ಬದುಕನ್ನು ಎದುರಿಸುವ ರೀತಿಯನ್ನು ನಟಿ ಸಮರ್ಥವಾಗಿ ಅಭಿವ್ಯಕ್ತಿಸಿ ತನ್ನ ಪ್ರತಿಪಾದನೆಗೆ ಹೆಚ್ಚಿನ ತೂಕ ನೀಡಿದ್ದಾರೆ. ಇಲ್ಲಿ ಗಂಡಿನ ಪಲಾಯನವಾದ, ಮತ್ತು ಹೆಣ್ಣಿನ ಸ್ಥಾಯಿಭಾವದ ಕುರಿತ ಅಭಿವ್ಯಕ್ತಿ ಯೂ ಸುಂದರವಾಗಿ ಮೂಡಿಬಂದಿದೆ. ನಿರ್ಜನ ದ್ವೀಪದಲ್ಲಿ ಒಂಟಿಯಾಗಿ ಬದುಕು ಸಾಗಿಸುವ ಹೆಣ್ಣು ತನಗೊಂದು ಸಂಗಾತಿ ಸಿಕ್ಕಾಗ ಅಲ್ಲೇ ಮನು ಕುಲದ ಬೆಳವಣಿಗೆಯ ಕುರಿತಂತೆ ಯೋಚಿಸುವುದು ಹೆಣ್ಣಿನ ಸ್ಥಾಯಿ ಭಾವವಾದರೆ, ಮನುಷ್ಯವಾಸವಿಲ್ಲದ ದ್ವೀಪದಿಂದ ಒಮ್ಮೆ ಪಾರಾಗಿ ಹೋಗುವುದು ಹೇಗೆಂಬ ಗಂಡಿನ ಚಿಂತೆಯೇ ಇಲ್ಲಿ ಕಾಣಸಿಗುವ ಪಲಾಯನವಾದ.
ಸ್ತ್ರೀ ಸಮಾನತೆಯ ಕುರಿತ ಸಂಭಾಷಣೆಯಲ್ಲಿ ಕಟುವಾಗಿಯೇ ಮಾತನಾಡುವ ನಟಿ ಅದರ ಮಧ್ಯೆಯೂ ಸ್ತ್ರೀ ಸಹಜವಾದ ವಾತ್ಸಲ್ಯವನ್ನು ಅಭಿವ್ಯಕ್ತಿಸುವಲ್ಲಿ ಯಶ ಕಂಡಿದ್ದಾರೆ. ಸಂಸಾರದ ಬಂಧನದಲ್ಲಿ ಕೂಡುವ ಕುರಿತಂತೆ ಗಂಡಿನ ತವಕವೂ, ತಾಯ್ತನಕ್ಕೆ ತುಡಿಯುವ ಹೆಣ್ಣಿನ ಅಭಿಲಾಷೆಯೂ ಇಲ್ಲಿ ವಿಭಿನ್ನ ರೀತಿಯಲ್ಲಿ ಕಾಣಸಿಗುತ್ತದೆ.
ಒಂಟಿ ಹೆಣ್ಣು ಮುಂದೆ ತನಗೆ ಹುಟ್ಟಲಿರುವ ಮಗು ಹೆಣ್ಣಾಗಲಿ ಎಂದು ಆಶಿಸುವ ಮೂಲಕ ಸ್ತ್ರೀ ಅಬಲೆಯಲ್ಲ ಎನ್ನುವ ತನ್ನ ವಾದವನ್ನು ಮತ್ತೆ ಪುಷ್ಟೀಕರಿಸುತ್ತಾಳೆ. ಇದು ಸ್ತ್ರೀ ಕುಲದ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಬಲ ಪ್ರತಿಪಾದನೆಯೂ ಹೌದು. ಅತ್ಯಂತ ಸರಳ ವೇಷಭೂಷಣ ಮತ್ತು ಸರಳ ರಂಗಸಜ್ಜಿಕೆಯ ಮೂಲಕ ಕಡಿಮೆ ಖರ್ಚಿನಲ್ಲಿ ರಂಗಪ್ರದರ್ಶನ ಏರ್ಪಡಿಸಿದ ವಿದ್ದು ಉಚ್ಚಿಲ್‌ರ ಕ್ರಿಯಾಶೀಲತೆ ನಾಟಕದುದ್ದಕ್ಕೂ ಗಮನ ಸೆಳೆಯು ತ್ತದೆ.ಕೆಲವೊಂದು ಇತಿಮಿತಿಗಳಿದ್ದಾಗಿಯೂ ಯುವ ರಂಗ ಪ್ರತಿಭೆಗಳ ಸಮ್ಮಿಲನದ ಈ ನಾಟಕವನ್ನು ಒಂದು ಉತ್ತಮ ನಾಟಕವೆನ್ನಲಡ್ಡಿಯಿಲ್ಲ.

 

ಭಾನುವಾರ, ಸೆಪ್ಟೆಂಬರ್ 9, 2012

ನಗರ ಭ್ರಮೆಯೂ…ಬಹುಮುಖಿ ನಾಟಕವೂ

ನಗರ ಜೀವನದ ಹುಸಿಸಂಬಂಧಗಳನ್ನ,ಭಂಡತನಗಳನ್ನ. ಢಾಂಬಿಕ ನಡೆಗಳನ್ನ ತೆರೆದಿಡುವ ನಾಟಕಗಳನ್ನು ಕನ್ನಡದಲ್ಲಿ ಮೊದಲು ಬರೆಯಲು ತೊಡಗಿದವರು ಲಂಕೇಶರು. ಪಾತ್ರಗಳು ಒದ್ದಾಡುವ ಹುಂಬುತನದಲ್ಲಿಯೇ ನಗರ ಜೀವನದ ಅಸ್ತವ್ಯಸ್ತ ಬದುಕಿನ ಪಲ್ಲಟಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಅವರ ಕ್ರಮ ನಾಟಕಗಳಿಂದ ನಾಟಕಗಳಿಗೆ ಜಿಗಿಯುತ್ತ ನಾಟಕೀಯತೆ ಮತ್ತಷ್ಟು ಬಿಗಿಗೊಂಡು ಸಂಕೀರ್ಣವಾದ ವಿಭಿನ್ನಗುಣವುಳ್ಳ ನಾಟಕಗಳು ಲಂಕೇಶರಿಂದ ಸೃಷ್ಟಿಗೊಂಡವು. ಆದರೆ ಅವರು ಮೊದಮೊದಲು ಬರೆದ ನಾಟಕಗಳ ಕೇಂದ್ರ ಪಾತ್ರದ ಸಂದಿಗ್ಧತೆ ನಂತರದ ನಾಟಕಗಳಲ್ಲಿ ವ್ಯಷ್ಟಿಪ್ರಜ್ಞೆಯಿಂದ ಸಮಷ್ಟಿಪ್ರಜ್ಞೆಗೆ ದಾಟಿದಂತೆ ಕಾಣುತ್ತವೆ ಹೊರತು ಲಂಕೇಶರ ಯಾವ ನಾಟಕಗಳೂ ನಾಟಕೀಯ ಭಾವತೀವ್ರತೆಯನ್ನು ಬಿಟ್ಟುಕೊಟ್ಟಿಲ್ಲ. ಹಾಗಾಗಿ ಅವರ ಎಲ್ಲ ನಾಟಕಗಳೂ ಅತ್ತ್ಯುತ್ತಮವಾಗಿಯೇ ಇವೆ. ಅದೆಷ್ಟೋ ವರ್ಷಗಳಾದ ಮೇಲೆ ಅಂಥದೇ ಸೊಗಡಿನ ನಾಟಕವೊಂದು ಕನ್ನಡ ಸಾಹಿತ್ಯಲೋಕದಲ್ಲಿ ಬಂದಿದೆ.
ಅದೇ..! ನಗರ ಜೀವನದ ನಾಗರೀಕ ಜಗತ್ತಿನ ಗೆಲ್ಲುವ ಕುದುರೆಗಳೂ, ಬದುಕಲು ಹಂಬಲಿಸುವ ಸಾಮಾನ್ಯನೂ, ಅಸ್ತಿತ್ವದ ಬೇರು ಗಟ್ಟಿಗೊಳಿಸಲು ಒದ್ದಾಡುವ ವ್ಯಕ್ತಿಗಳು, ಕಥನ ಕಟ್ಟುವ ಕಲೆಗಾರಿಕೆಯೂ… ಒಂದೇ ವಸ್ತುವಿನ ಒಳಗೆ ಅಡಕಗೊಂಡ ಪಾಕದಂತೆ ವಿವೇಕ ಶಾನಭಾಗರು ತಮ್ಮ ಬಹುಮುಖಿ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಕಥನ ತಂತ್ರ ಬಹಳ ಸರಳ ಎನ್ನಿಸಬಹುದಾದ ರೀತಿಯಲ್ಲಿದ್ದಾಗ್ಯೂ ದೃಶ್ಯಗೊಳ್ಳುವ ಹಂತದಲ್ಲಿ ನಟ-ನಿರ್ದೇಶಕ ತೊಡಗಿಕೊಳ್ಳುವುದು – ಅಂದರೆ ಹೆಚ್ಚು ಕಡಿಮೆ ಪಾತ್ರದ ಆವರಣವೊಂದು ತಯಾರಾಗುವುದು – ಶೇಖರ ಕೆಂಪೇಗೌಡ ಆದ ಹಾಗಿರುತ್ತದೆ. ಒಂದು ಪಾತ್ರ ಹೊರಡುವ ಹಾದಿಯಲ್ಲಿ ಮತ್ತೊಂದು ಕಥನದ ಪಾತ್ರ ಎದುರಾಗುತ್ತದೆ. ತ್ರಿವಿಧ ವಿಕಾರಗಳು ಸೂತ್ರಿಕರಿಸಲ್ಪಟ್ಟ ನಾಟಕದ ಬಂಧದೊಳಗೆ ಒದಗಿಬಂದಿದ್ದಾವೆ ಹೊರತು ಖಾಲಿಯಾದ ಟೂತ್ ಪೇಸ್ಟ ಹಾಗೆ ಒತ್ತಿ ಬಂದಿಲ್ಲವೆನ್ನುವುದು ರಚನಾವಿನ್ಯಾಸದಲ್ಲಿಯೇ ಕಾಣಬರುತ್ತದೆ. ನಾಟಕದ ಆರಂಭವೇ ಕ್ರಿಯಾತ್ಮಕವಾಗಿ ಸಂಜಯನನ್ನು ಸ್ಟೋರಿ ಹುಡುಕಿಕೊಂಡು ಬರಬೇಕಾದ ಸಂಕಷ್ಟಕ್ಕೆ ನೂಕುತ್ತದೆ. ಬಿರಾಜದಾರನ ಅಂಧಕಾಲತ್ತಿನ ಮೊದಲ ವರದಿಯ-ದುರ್ಗಲಾಲ್ ಸ್ಟೋರಿ- ಮಾದರಿಯಲ್ಲಿ ಹೊಸ ಹುಡುಗರೂ ಸ್ಟೋರಿ ಮಾಡಬೇಕೆಂಬುದು ಹೊಸ ಹುರುಪಿಗೆ ಕಿರಕಿರಿಯಾದರೂ ತಲೆ ಮ್ಯಾಲೆ ಹೊಡೆದಂತ ಸ್ಟೋರಿ ಕೊಡಬೇಕು ಅನ್ನೋದು ಮುಖ್ಯ ಆಗುತ್ತದೆ.
ಜೀವನ; ಹಿಸ್ಟರಿ ಮಿಸ್ಟರಿ ಅಂತಿದೆ ಹೋತ. ಅದೇ ಏನಾದರೂ ಮಾಡು. ಬೆಂಗಳೂರಲ್ಲೇನೂ ಸಿಗಲ್ಲ. ಹಂಪಿಗೋ ಮೈಸೂರಿಗೋ ಹೋಗು. ಯೂ ಮೇ ಫೈಂಡ್ ಯುವರ್ ದುರ್ಗಲಾಲ್. ಬೇಕಾದರೆ ಆ ಸ್ಟೋರೀನ ಓದಿಕೊಂಡು ಹೋಗು. ನನ್ನ ಹತ್ತಿರ ಜರಾಕ್ಷ ಇದೆ.
ಈ ಮಾತು ಸಂಜಯನಿಗೆ ಮುಂದಲ ದೃಶ್ಯದಲ್ಲಿ ಸಿಗುವ ಕೆಂಪೇಗೌಡನನ್ನ ನಂಬಲು ಪ್ರೇರಣೆ ಕೊಡುತ್ತದೆ. ಸಂಪಾದಕನ ತಲೆ ಒಳಗಿದ್ದದ್ದು ಹಿಸ್ಟರಿ ಅಂತ ಗೊತ್ತಾದ ಗೆಳೆಯನ ಸಲಹೆ ನಾಟಕ ಬೀಜಾಂಕುರ ಮಾಡುತ್ತದೆ. ಗುಡಿಗಾರ ಗಲ್ಲಿಯ ಸಂಜು ಬೇರು ಬಿಡಿಸಿಕೊಳ್ಳುವ ತವಕದಲ್ಲಿ ತನಗೆ ತಾನೆ ಕಗ್ಗಂಟು ಸುತ್ತಿಕೊಂಡು ನಗರ ಜೀವನದ ನಾನಾ ಮುಖಗಳ ಬೆನ್ನು ಬೀಳುತ್ತಾನೆ. ಆಗ ತೋರುವ ಬಣ್ಣದ ಬಹುಮುಖಗಳು ಒಂದೊಂದಾಗಿ ತಮ್ಮ ಕತೆಗಳನ್ನ ಹೇಳಿಕೊಳ್ಳುತ್ತವೆ. ಸಂಪಾದಕ ಬಿರಾಜದಾರ, ಶೇಖರ, ನಾಯಕ್, ಜಕ್ಕೂಜಿ ಅಲ್ಲದೆ ಹಂದರದಲ್ಲಿ ಕಥನಕ್ಕೆ ಪೂರಕವಾಗಿ ಬರುವ ಪಾತ್ರಗಳ ಸೋಗೂ ಒಂದರ ಹಿಂದೆ ಒಂದು ಓಡುತ್ತದೆ. ಮಾನಸಿಕ ನೆಮ್ಮದಿಯನ್ನೂ ಮಾರುವ ದಂಧೆಯ ರೂಪ ಬದಲಾಗಿದೆ. ನಂಬುವವರ ನಂಬಿಕೆಗೆ ತಕ್ಕ ಕತೆಗಳು ಊರ್ಮಿಳೆ ಅಡುಗೆ ಮಾಡಿದಷ್ಟೆ ಸುಲಭದ್ದಾಗಿದೆ, ನವರಸಗಳು ಮೇಳೈಸಿಕೊಂಡು ತಯಾರಾದ ವರದಿ ಪತ್ರಿಕೆಯ ಆಫಿಸ ತಲುಪುವ ಹೊತ್ತು ಮತ್ತು ಬಿರಾಜದಾರನ ಅದೃಷ್ಟ, ಸಂಜಯನ ನಶೀಬು,ಜಕ್ಕೂಜಿಯ ಲಕ್ಕು,ಪರದೇಶಿ ಶೇಖರನ ಪರಿಸ್ಥಿತಿಗಳು ಹೀಗೆ ಒಟ್ಟು ನಾಟಕದಲ್ಲಿ ವ್ಯಾಪಾರದ ಬುದ್ದಿಯನ್ನು ಬಲಗೊಳಿಸುತ್ತಿರುವ ಜಗತ್ತು ಅನಾವರಣಗೊಳ್ಳುತ್ತದೆ. ಇಲ್ಲಿ ಎಲ್ಲರ ಜುಟ್ಟು ಬೇರೊಬ್ಬನ ಕೈಯಲ್ಲಿ ಸಿಕ್ಕಿದೆ. ಈ ಎಲ್ಲ ಪಾತ್ರಗಳ ಅಂಕೆಯನ್ನು ಏಳು ಸಮುದ್ರದಾಚೆಯ ರಕ್ಕಸರ ಕಾವಲಿನ, ಏಳು ಹೆಡೆಯ ಸರ್ಪಗಾವಲಿನ ಬಂಧನದಲ್ಲಿ ಇಟ್ಟಿಲ್ಲ ಅನ್ನೋದು ವಾಸ್ತವದ ಅರಿವಾಗಿದೆ.
ಭ್ರಮೆಯ ಭಾವ ಲೋಕವೇ ಪೀಕಲಾಟದಲ್ಲಿ ಬಿದ್ದದ್ದು ಕಂಡರು ಯಾವುದು ಯಾವುದನ್ನು ನಿರ್ದೇಶಿಸುತ್ತಿದೆ ಅನ್ನುವುದು ಮಾತ್ರ ಅಸ್ಪಷ್ಟ. ಇಲ್ಲಿ ಊಹಾಪೋಹಗಳ ನಡುವೆ ಪೇಪರ್ ಹಾಸಿಕೊಂಡು ಕುಳಿತಿರುವ ಸಂಪಾದಕ, ಪಾರ್ಟಿ ನಡೆವಲ್ಲಿ ಇನವೆಷ್ಟಿಗೇಶನ್ ನಡೆಸುವ ನಾಯಕ್, ಕನಸು ಮತ್ತು ಪ್ರೀತಿಗಾಗಿ ಕನವರಿಸುವ ಶಕ್ಕೂ ಶೇಖರ, ಉರ್ಮಿಳೆ ಸಂಜೂ, ಜಕ್ಕೂ ಮತ್ತವನ ಮಹಿಳಾ ಭಕ್ತಗಣ ಎಲ್ಲರೂ ಅಸ್ವಸ್ಥರಾಗಿದ್ದೂ ಸ್ವಾಸ್ಥ್ಯ ಜೀವನ ಅರಸುತ್ತಿದ್ದಾರೆ. ಗದ್ದಲದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಂಜಯನ ಅಸಹಾಯಕತೆಗೆ ಖಾಸಾ ಗೆಳೆಯ ಜಗನ್ನಾಥ ಆಸರಾಗುತ್ತಾನೆ. ಇಲ್ಲಿ ಊರಿನ ಬೇರೊಂದು ಒರತೆಯಾಗಿ ನಿಲ್ಲುತ್ತದೆ, ಆದರೆ ಊರಿನ ಕೊಂಡಿಯನ್ನೇ ಕಳಚಿಕೊಂಡ ಮತ್ತೊಂದು ಪಾತ್ರದ ತಳಮಳಕ್ಕೆ ಜಗನ್ನಾಥ ಜಕ್ಕೂಜಿಯಾಗಿ ವರ್ತಿಸುತ್ತಾನೆ. ಅರೆಸ್ಟ್ ಹಿಮ್ ಎಂಬ ಸೂಚನೆ ಸಾಕು. ಆಸರಿಲ್ಲದ ಬಳ್ಳಿ ಯಕಃಶ್ಚಿತ್ ಹುಳುವಾಗಿ ಜೇಡರ ಬಲಿಯೊಳಗೆ ಸಿಕ್ಕಿಬೀಳುತ್ತದೆ.
ಸಾಮಾನ್ಯನೊಬ್ಬ ವ್ಯವಸ್ಥೆಗೆ ವ್ಯಂಗ್ಯವಾಗಿ, ತುಘಲಕನಿಗೆ ಪ್ರತಿಯಾಗಿ -ಆಝೀಜ್- ಕಾಣಿಸಿಕೊಳ್ಳುವ ನಾಟಕೀಯತೆ ಇಲ್ಲಿ ಧ್ವನಿಸುವ ಶೇಖರನಲ್ಲಿ ಸಾಧ್ಯವಾಗದಿರುವುದು ಮೋಜಾಗಿದೆ. ಆತ ಬಂಧನಕ್ಕೊಳಗಾಗಿದ್ದಾನೆ. ನಿದ್ದೆಗೆ ಜಾರಿರುವ, ಕಿವುಡಾಗಿರುವ ಅನುಕಂಪಕ್ಕೆ ತನ್ನ ಹೊಸಹೊಸ ರೂಪದ ಕತೆಗಳನ್ನ ಹೇಳಿಕೊಳ್ಳುತ್ತಲೇ ಇರುವಾಗ ಥಟ್ಟನೆ ಕತ್ತಲಾವರಿಸಿಕೊಳ್ಳುವವರೆಗೂ ಸಾಧ್ಯತೆಗಳನ್ನ ಹುಡುಕುತ್ತ ಹೋಗುತ್ತಾನೆ. ಬಿಗಿಯಾದ ನಾಟಕದ ಬಂಧದಲ್ಲಿ ಶಹರ ಜೀವನಕ್ರಮ ಬೋಗಸ್ ಆಗಿ ದಾಖಲಾಗುತ್ತದೆ. ಒಟ್ಟು ಈ ಕಾಲಘಟ್ಟದ ಅತಂತ್ರ ಅಸ್ಥಿರತೆಯನ್ನು, ಪೊಳ್ಳುತನದ ಪುರಾಣವನ್ನು ನಾಟಕ ಆಪ್ತವಾಗಿ ಚಿತ್ರಿಸುತ್ತದೆ.
————-ಮಹಾದೇವ ಹಡಪದ.

ಕನ್ನಡ ನಾಟಕ – ಪರಂಪರೆ ಆಗಬೇಕು

ನಾಟಕದ ಬಗ್ಗೆ ಎಲ್ಲರೂ ಮಾತಾಡಲು ಸುರುಮಾಡುತ್ತಾರೆ, ಕೆಲವರು ಹಾಗಿರಬೇಕಿತ್ತು ಹೀಗಿರಬೇಕಿತ್ತು ಎಂಬಿತ್ಯಾದಿ ಆಶಾವಾದದ ಉಚಿತ ಸಲಹೆಗಳನ್ನು ಕೊಡಲು ಪ್ರಾರಂಭಿಸುತ್ತಾರೆ. ನಾಟಕದ ತಳಹದಿ ಯಾವ ರೂಪದಲ್ಲೇ ಇರಲಿ ತಮ್ಮ ತಲೆಯೊಳಗಿನ ಚಿತ್ರದ ಗಡಿ ದಾಟಿಕೊಂಡು ನಾಟಕ ನೋಡುವುದೇ ಇಲ್ಲ. ಹಾಗೆ ಮಾತಾಡುವವರು ಚಿತ್ರಗಳ ಬಗ್ಗೆ ಮಾತಾಡುವುದಿಲ್ಲ, ಕವಿತೆಗಳ ಬಗ್ಗೆ ಮಾತಾಡುವುದಿಲ್ಲ ಶಿಲ್ಪಗಳ ಕುರಿತಾಗಿ ಮಾತಾಡುವುದಿಲ್ಲ..! ಆಶ್ಚರ್ಯವೆಂದರೆ ನಾಟ್ಯಭಂಗಿಗಳ ಬಗ್ಗೆ ಸಹಿತ ವಿವೇಚನೆ ಮಾಡುವುದಿಲ್ಲ. ಸಾಧಾರಣವಾಗಿ ನಾಟಕ ನೋಡಿದ ಮೇಲೆ ಒಂದು ಸಣ್ಣ ಚರ್ಚೆ ಇಟ್ಟಾಗ ಪ್ರೇಕ್ಷಕರಲ್ಲಿ ಕೆಲವು ಗೊಂದಲಗಳು ಏಳುತ್ತವೆ. ಅದ್ಯಾವದೋ ನೆನಪಿನ ಸುರುಳಿಯಲ್ಲಿ ಇಡೀ ನಾಟಕ ಗ್ರಹಿಸಿರುತ್ತಾರಾದ್ದರಿಂದ ಅದೇ ತೆರನಾದ ಭಾವಪ್ರಪಂಚದ ಒಳಹೊಗಲು ಪ್ರಯತ್ನಿಸುತ್ತಿರುತ್ತಾರೆ. ಒಮ್ಮೆ ರಸವತ್ತಾಗಿ ಅಭಿನಯಿಸಲ್ಪಟ್ಟ ನಾಟಕವೊಂದು ಮತ್ತೊಮ್ಮೆ ಅಷ್ಟೆ ರಸವತ್ತಾಗಿ ತಟ್ಟಬೇಕಾದ್ದು ಏನೂ ಇರುವುದಿಲ್ಲ. ಅದು ಸಂಪೂರ್ಣ ನಟ/ನಟಿಯ ಅಭಿವ್ಯಕ್ತಿಯಾಗಿ ರೂಪಗೊಳ್ಳುವುದು ಭಾವತುಂಬಿ ಅಬಿನಯಿಸಿದಾಗ ಮಾತ್ರ… ಆದರೆ ನಾವು ದಿನನಿತ್ಯದ ಬದುಕಿನಲ್ಲಿ ಅಂಥ ಭಾವಪೂರ್ಣವಾದ ಕ್ಷಣಗಳನ್ನ ಕಂಡಿದ್ದ ಕಾರಣಕ್ಕಾಗಿ ನಾಟಕ ನೋಡುಗನೊಂದಿಗೆ ಸಹ ಪ್ರಯಾಣ ಆರಂಭಿಸಿಬಿಟ್ಟಿರುತ್ತದೆ. ಅಷ್ಟು ಸಹಜವಾಗಿ ನಮ್ಮ ಒಳ-ಹೊರಗೇಕಾಗಿ ನಾಟಕದ ಎರಡು ಸಂವಹನಗಳು ಸಾಧ್ಯವಾಗುತ್ತಿರುತ್ತವೆ. ಅಂಥ ಸಂವಾದ ಬೇರೆ ಯಾವ ಮಾಧ್ಯಮದಿಂದ ಸಾಧ್ಯವಾಗಲಾರದು ಎಂದು ಹೇಳಲಾಗದು ಯಾಕಂದ್ರೆ ಆ ಎಲ್ಲ ಕಲಾಪ್ರಕಾರಗಳು ತನ್ನ ಅರಿವಿನ ವಿಸ್ತಾರದಲ್ಲಿ ಕೊಡುಕೊಳ್ಳುವ ಒಂದು ವ್ಯಾಪಾರ ಮನೋಧರ್ಮವನ್ನು ಬೆಳೆಸಿಕೊಂಡಿರುತ್ತವೆ.
ಈಗ ಹೊಸ ಹುಡುಗರು ಸಾಲುಗಟ್ಟಿ ನಾಟಕಕ್ಕೆ ಬರುತ್ತಿದ್ದಾರೆ. ವರ್ಷವೊಂದರಲ್ಲಿ ಕನ್ನಡ ರಂಗಭೂಮಿಯಲ್ಲಿ ಕನಿಷ್ಟ ಎಂಬತ್ತು ಜನ ಯುವಕರು ನಾಟಕದ ವಿಷಯದ ಮೇಲೆ ಡಿಪ್ಲೋಮ ಪದವಿ ಪಡೆದುಕೊಳ್ಳುತ್ತಾರೆ. ಇದೊಂದು ಸಂತಸದ ಸಂಗತಿ ಆದರೂ ಅವರ ಅಧ್ಯಯನ ಕ್ರಮದಲ್ಲಿ ಸಹಜತೆಗೆ ಹೊರತಾದ ಕೆಲ ಕೋತಿ ಚೇಷ್ಟೆಗಳು, ತಂತ್ರಗಳು, ಸಿದ್ಧಮಾದರಿಯ ಅಭಿನಯಗಳು ರೂಢಿಯಾಗಿಬಿಡುತ್ತವೆ. ಕನ್ನಡ ಅಕ್ಷರಗಳ ಸ್ಪಷ್ಟ ಉಚ್ಛಾರಣೆ ಕಲಿಸುವುದರೊಂದಿಗೆ ದೇಹಸಂಸ್ಕಾರ ಮಾಡಿಸುವುದರೊಳಗೆ ಅವರ ಕಲಿಕೆಯ ಆಸಕ್ತಿ ನಿಂತು ಹೋಗಿಬಿಟ್ಟಿರುತ್ತದೆ. (ಇದು ನನಗು ಅನ್ವಯಿಸುತ್ತದೆ) ಮುಂದೆ ಅವರ ಮುಖದ ಮುಂದಿನ ಕನಸುಗಳೆಲ್ಲ ಬೆಂಗ್ಳೂರು ಒಳಗೊಂಡು ರಚಿತವಾಗುವ ಕಾರಣಕ್ಕೋ ಏನೋ ಬಂದ ಯುವಕರು ಹಾಗೆ ಎಲ್ಲೋ ಕಾಣದಾಗಿಬಿಡುತ್ತಾರೆ. ಆ ಫ್ರೇಮ್ ಸಂಸ್ಕೃತಿಗೆ ಬೇಕಾದ ಅಭಿನಯದ ಮಾದರಿಯನ್ನ ಅವರು ಕಲಿಯದ ಕಾರಣಕ್ಕಾಗಿ ಏನೋ ಅವರು ಅಷ್ಟಾಗಿ ಸ್ಕ್ರೀನ್ ಮೇಲೆ ಕಾಣಿಕೊಳ್ಳುವುದಿಲ್ಲ. ಇದೆಲ್ಲ ಆಗುವ ಹೊತ್ತಿಗೆ ಅವರ ಉತ್ಸಾಹವೇ ಹಿಂಗಿ ತಾಂತ್ರಿಕ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿಬಿಡುತ್ತಾರೆ. ನೋಡಿ ರಂಗದ ಮೇಲೆ ನಿಂತು ನಾಟಕ ಮಾಡುವ ಹೊತ್ತಲ್ಲಿ ಅವರ ಅಭಿವ್ಯಕ್ತಿಗೆ ಬಹು ಆಯಾಮಗಳು ಒದಗಿ ಬಂದು ಪ್ರೇಕ್ಷಕರೊಳಗೆ ಹತ್ತೆಂಟು ಪ್ರಶ್ನೆಗಳನ್ನು ಪ್ರಚೋದಿಸಿದ ನಟ ಹೀಗೆ ಎಲ್ಲೋ ಕಾಣದಾದಾಗ ಕನ್ನಡ ರಂಗಭೂಮಿ ಪರಂಪರೆ ಆಗಿ ಉಳಿಯುವುದಾದರೂ ಹೇಗೆ? ಅದಿರಲಿ ನಟನೊಬ್ಬ ಹತ್ತೆಂಟು ವರ್ಷಗಳ ಕಾಲ ಬರೀ ನಾಟಕದ ಸಾಧನೆಯೊಳಗೆ ಬದುಕಿ ಉಳಿಯುವುದು ಕಷ್ಟ, ಯಾವನೋ ಒಬ್ಬ ಹಾಗೆ ಬದುಕುತ್ತೇನೆಂದು ಹಠ ಹಿಡಿದರೂ ಅವನ ಸ್ವಂತ ಬದುಕಿನ ಸಂಕಟಗಳನ್ನು ಯಾವ ಮುಖವಾಣಿಯಲ್ಲಿ ಹೇಳಿಕೊಳ್ಳಬೇಕು? ಇನ್ನು ಕೆಲ ನಟರು ಹೊಟ್ಟೆ-ಬಟ್ಟೆಗೆ ಬೇರೆ ಬೇರೆ ಕೆಲಸಗಳನ್ನು ನಚ್ಚಿಕೊಂಡು ಬಿಡುವಿನ ಸಂದರ್ಭದಲ್ಲಿ ನಾಟಕ ಮಾಡುತ್ತ ಬಂದಿದ್ದಾರೆ. ಅಂಥವರು ಸಹಿತ ಈ ತರಬೇತಾದ ಹೊಸ ಹುಡುಗರನ್ನ ಕೊಂಚ ‘ಏನು ಮಾಡುತ್ತಾರೋ ನೋಡೋಣ’ ಎಂಬ ವಕ್ರದೃಷ್ಟಿಯಲ್ಲಿ ನೋಡುವಾಗ ಅವರ ಪರಂಪರೆ ಇವರಿಗೆ ಬಳುವಳಿಯಾಗಿ ಬರುವುದಾದರೂ ಹೇಗೆ ಸಾಧ್ಯ? ಇನ್ನು ತರಬೇತಾದ ಕೆಲವರು ಹವ್ಯಾಸವೆಂದು ನಾಟಕ ಮಾಡುವವರನ್ನು ಗರ್ವದಿಂದ ನೋಡುವುದೂ ಒಂದಿದೆ… ಅದು ತಾವು ಆ ಕುರಿತಾಗಿ ತಿಳುವಳಿಕೆ ಉಳ್ಳವರು ಎಂಬ ಸೊಕ್ಕು ಅದು-ಹಾಗಂದ ಮಾತ್ರಕ್ಕೆ ಅವರನ್ನು ದೂರಿಕೊಂಡು ಅವರು ಅಲ್ಲಿ ಓದಿದವರು ಇವರು ಇಲ್ಲಿ ಓದಿದವರು ಎಂದು ಮಾತೃ ಸಂಸ್ಥೆಯೊಂದಿಗಿನ ಇವರ ಹೊಟ್ಟೆಕಿಚ್ಚನ್ನ ಹೊಸ ಹುಡುಗರ ಮೇಲೆ ತೀರಿಸಿಕೊಳ್ಳಲು ಪ್ರಯತ್ನಿಸುವುದು ಇದ್ದೆ ಇರುತ್ತದೆ. ಇದೆಲ್ಲದರ ನಡುವೆ ಹೊಸ ತಲೆಮಾರಿನ ನಮಗೆಲ್ಲ ನಾಟಕ ಪರಂಪರೆಯಾಗಿ ಉಳಿಸಬೇಕೆಂಬ ಆಶಯವೇನೋ ಇದೆ..1 ಆದರೆ ಕನ್ನಡದ ನಟನಾ ಪರಂಪರೆ ಗಟ್ಟಿಯಾಗುಳಿಯಲು ನಮ್ಮ ನೆಲದ ಒಂದು ಅಭಿನಯ ಪದ್ಧತಿ ಕುರಿತಾದ ಸಂಶೋಧನೆ ಆಗಲಾರದ ಹೊರತು ಮತ್ತು ನಾಟಕದಲ್ಲಿ ನಟಿಸುವ ನಟನಿಗೆ ಪಗಾರ ಸಿಗದ ಹೊರತು ನಾಟಕ ಪರಂಪರೆಯಾಗಿ ಉಳಿಯಲಾರದು. ನಾಲ್ಕು ನಾಟಕ ಮಾಡಿದವ ನಿರ್ದೇಶನ ಮಾಡಲು ಆರಂಭಿಸುತ್ತಾನೆ. ತನ್ನದೇ ಆದ ಸರ್ಕಲ್ಲೊಂದರ ಮೂಲಕ ಪ್ರಚಾರಕ್ಕೆ ಬಿದ್ದು ಶ್ರೇಷ್ಟತೆಯ ಗುಂಗಿನಲ್ಲಿ ಮುಳುಗಿಬಿಡುತ್ತಾನೆ. ಅಂಥವರೆಲ್ಲ ನಾಟಕ ಪರಂಪರೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಾರರು. ಹೌದು ನಾಟಕ ಪರಂಪರೆ ಆಗಲೇಬೇಕು
mahadev hadapad
             

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...