ಸೋಮವಾರ, ಡಿಸೆಂಬರ್ 24, 2012

ನಾಟಕ - ಹಾಡುಗಳೇ ನೈಜ ದಲಿತ ಸಾಹಿತ್ಯ -ಸಂದರ್ಶನ: ಡಿ.ಎಂ. ಕುರ್ಕೆ ಪ್ರಶಾಂತ



ತಮ್ಮ ಬದುಕಿನ ಬಹುಭಾಗವನ್ನು ದಲಿತ ಸಂಘಟನೆ ಮತ್ತು ಹೋರಾಟಕ್ಕೆ ಮೀಸಲಿಟ್ಟಿರುವ ಡಾ. ಚೆನ್ನಣ್ಣ ವಾಲೀಕಾರ, 80-90ರ ದಶಕದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ದಲಿತ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಅವರ ಸಾಹಿತ್ಯ ದಲಿತರ ಬದುಕು, ನೋವು, ಅಪಮಾನ, ಜಮೀನ್ದಾರಿ ವ್ಯವಸ್ಥೆಯ ಕೌರ್ಯದ ಸ್ಫೋಟಕ ಅಭಿವ್ಯಕ್ತಿಯಾಗಿದೆ. `ಮರದ ಮೇಲಿನ ಗಾಳಿ', `ಕರಿತೇಲಿ ಮಾನವನ ಜೀಪದ ಹಾಡು', `ಪ್ಯಾಂಥರ್ ಪದ್ಯಗಳು', `ಬಂಡೆದ್ದ ದಲಿತರ ಬೀದಿ ಹಾಡುಗಳು', `ಕಪ್ಪು ಕತೆಗಳು', `ಕುತ್ತದಲ್ಲಿ ಕುದ್ದವರ ಕತೆಗಳು', `ಹೆಪ್ಪುಗಟ್ಟಿದ ಸಮುದ್ರ', `ಗ್ರಾಮಭಾರತ', `ವ್ಯೋಮಾವ್ಯೋಮ' ಸೇರಿದಂತೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಚೆನ್ನಣ್ಣ ರಚಿಸಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅನುಭವ ಚೆನ್ನಣ್ಣ ಅವರದು. ಅವರಿಗೀಗ, ಬೆಳಗಾವಿಯಲ್ಲಿ ಡಿ. 29-30ರಂದು ನಡೆಯುವ `ಅಖಿಲ ಭಾರತ 4ನೇ ದಲಿತ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷ ಗೌರವ. ಈ ಸಂದರ್ಭದಲ್ಲಿ ಚೆನ್ನಣ್ಣನವರೊಂದಿಗೆ `ಸಾಪ್ತಾಹಿಕ ಪುರವಣಿ'ಯೊಂದಿಗೆ ಮಾತನಾಡಿದರು.
ದಲಿತ ಸಾಹಿತ್ಯದ ಇಂದಿನ ಸ್ಥಿತಿಗತಿ ಬಗ್ಗೆ ಏನನ್ನಿಸುತ್ತದೆ?
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕನ್ನಡ ದಲಿತ ಸಾಹಿತ್ಯ ಪ್ರಬಲವಾಗಿಯೇ ಬೆಳೆದಿದೆ. ಆದರೆ ಮರಾಠಿ ದಲಿತ ಸಾಹಿತ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಆತ್ಮಕತೆಗಳು ತುಸು ಕಡಿಮೆ. ಮರಾಠಿ ದಲಿತ ಸಾಹಿತ್ಯದಲ್ಲಿ ತನ್ನ ತಾಯಿ ವೇಶ್ಯೆ, ತನ್ನ ಬದುಕು ಇಂತಹ ಕೆಳಮಟ್ಟದ ಸ್ಥಿತಿಯಿಂದ ಬಂದಿದ್ದು ಎನ್ನುವುದನ್ನು ಅಲ್ಲಿನ ಸಾಹಿತಿಗಳು ಮುಕ್ತವಾಗಿ ಅಭಿವ್ಯಕ್ತಿಸಿದ್ದಾರೆ. ನಮ್ಮಲ್ಲಿ ಇಂತಹ ಅಭಿವ್ಯಕ್ತಿ ಕಡಿಮೆ. ನಾಟಕ ಮತ್ತು ಹಾಡುಗಳೇ ನೈಜ ದಲಿತ ಸಾಹಿತ್ಯ.
ನಿರಕ್ಷರಿ ದಲಿತರನ್ನು ಚಳವಳಿಗಳಿಗೆ ಪ್ರಭಾವಿಸಲು ಮತ್ತು ಜಾಗೃತಗೊಳಿಸಲು ನಾಟಕ ಮತ್ತು ಹಾಡುಗಳಿಗಿಂತ ಉತ್ತಮ ಮಾಧ್ಯಮ ಮತ್ತೊಂದಿಲ್ಲ. ದಲಿತ ಚಳವಳಿ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿಯೇ ಬೆಳೆದಿವೆ. ಆದರೆ ಪ್ರಸಕ್ತ ದಲಿತ ಚಳವಳಿ ಮತ್ತು ಸಾಹಿತ್ಯದಲ್ಲಿ ಅಂತರವಿದೆ. ದಲಿತ ಸಾಹಿತ್ಯಕ್ಕಿಂತ ಇಂದಿನ ದಲಿತ ಸಂಘಟನೆಗಳ ಸ್ಥಿತಿಗತಿಗಳ ಬಗ್ಗೆ ಮುಖ್ಯವಾಗಿ ಅವಲೋಕಿಸಬೇಕಿದೆ.   
ದಲಿತ ಸಾಹಿತಿಗಳ ಅನುಭವ ಮತ್ತು ಸಂವೇದನೆ ಆಡುನುಡಿಯಲ್ಲಿ ಅಭಿವ್ಯಕ್ತಗೊಂಡಿದೆ. ಆದರೆ ಇಂದಿನ ಯುವ ದಲಿತ ಸಾಹಿತ್ಯ  ಜನಪ್ರಿಯ ಸಾಹಿತ್ಯದ ಪರಿಭಾಷೆಗೆ ಒಳಗಾಗುತ್ತಿದೆ. ಇದರಿಂದಾಗಿ ದಲಿತ ಸಂವೇದನೆಗಳು
ದೂರವಾಗುವುದಿಲ್ಲವೆ?
ನೋವು, ಹಸಿವು, ಬದುಕಿನ ಸಂಕಟಗಳ ಅರಿವು ಸಾಹಿತಿಗೆ ಇರಬೇಕು. ಇದರಿಂದ ಆತ ತನ್ನ ಅನುಭವಗಳನ್ನು ಕಟ್ಟಿಕೊಡಲು ಸಾಧ್ಯ. ನಾವುಗಳು ಹಳ್ಳಿಗಳಿಂದ ಬಂದ ಜನ. ಪ್ರಾಮಾಣಿಕ ಬರಹಕ್ಕೆ ಪ್ರಾಮುಖ್ಯ ನೀಡಿದೆವು. ಅಕ್ಷರಸ್ಥ ಭಾಷೆ ಸತ್ತ ಭಾಷೆ, ಆಡುವ ಭಾಷೆ ಜೀವಂತ ಎನ್ನುವ ನಿಲುವಿನಲ್ಲಿ ಉತ್ಪ್ರೇಕ್ಷೆ, ಅಲಂಕಾರ, ಅತಿಶಯೋಕ್ತಿ ಇಲ್ಲದೆ ಬರೆದೆವು. ಹೈದರಾಬಾದ್ ಕರ್ನಾಟಕದ ಗ್ರಾಮ್ಯ ಭಾಷೆಯಲ್ಲಿ ನನ್ನ ಬರವಣಿಗೆಗಳು ಇದ್ದರೆ, ದೇವನೂರು ಮಹಾದೇವ ಅವರ ಬರವಣಿಗೆಗಳಿಗೆ ಹಳೇ ಮೈಸೂರು ಭಾಗದ ಭಾಷೆಯ ಸೊಗಡಿದೆ. ಆಯಾ ಭಾಗದ ಸಾಹಿತಿಗಳು ಅಲ್ಲಿನ ಗ್ರಾಮ್ಯ ಭಾಷೆಯಲ್ಲಿ ಬರವಣಿಗೆಯನ್ನು ದಾಖಲಿಸಿದ್ದಾರೆ. ದಲಿತ ಸಾಹಿತ್ಯ ನಗರಗಳಲ್ಲಿ ಹುಟ್ಟುವ ಸಾಧ್ಯತೆ ಕಡಿಮೆ. ಪ್ರಶಸ್ತಿಗೋ ಇಲ್ಲವೇ ಸ್ವಹಿತಾಸಕ್ತಿಗಾಗಿಯೋ ವಸ್ತುಸ್ಥಿತಿಯ ಬದುಕನ್ನು ತಿರುಚಿ ಉತ್ಪ್ರೇಕ್ಷಿಸಿ ಬರೆಯಲಾಗುತ್ತಿದೆ. ಆದರೆ ಇಂತಹ ಸಾಹಿತ್ಯಗಳು ದಲಿತ ಪಂಥದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂಬುವುದು ನನ್ನ ನಂಬಿಕೆ.  
ದಶಕಗಳಿಂದ ದಲಿತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೀರಿ. ಅಂದು ಮತ್ತು ಇಂದಿನ ಸಂಘಟನೆಯಲ್ಲಿ ವ್ಯತ್ಯಾಸ ಆಗಿದೆಯಾ?
ಆಗ, ಸಂಘಟನೆ ಅಥವಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಹಳ್ಳಿಗಳಲ್ಲಿ ಜನರು ಸ್ವ ಪ್ರೇರಣೆಯಿಂದ ಅನ್ನ, ನೀರು ಕೊಟ್ಟು ಸಹಕಾರ ನೀಡುತ್ತಿದ್ದರು. ದುಡ್ಡು ಕೊಡುತ್ತೇವೆ ತೆಗೆದುಕೊಳ್ಳಿ, ನೀವು ಸಂಘಟನೆ ಮಾಡಿಕೊಳ್ಳಿ, ನಿಮ್ಮ ತಂಟೆ ಬೇಡ ಎನ್ನುವ ಮಂದಿ ಈಗ  ಬಹಳ ಸಂಖ್ಯೆಯಲ್ಲಿ ಇದ್ದಾರೆ.
ದಲಿತ ಸಂಘರ್ಷ ಸಮಿತಿ ಸ್ಥಾಪಕರಲ್ಲಿ ಒಬ್ಬರಾದ ಬಿ. ಕೃಷ್ಣಪ್ಪನವರು ಬದುಕಿರುವವರೆಗೂ ಸಂಘಟನೆಗೆ ಶಿಸ್ತು ಇತ್ತು. ಹೋರಾಟಗಳು ಪ್ರಾಮಾಣಿಕವಾಗಿದ್ದವು. ಆನಂತರ ದೇವನೂರು ಮಹಾದೇವ ಅವರು ದಸಂಸ ಮುನ್ನಡೆಸುವಾಗ ಕೆಲವರು ವಿನಾಕಾರಣ ಜಗಳ ತೆಗೆದರು. ಇದರಿಂದ ನೊಂದ ಅವರು ಸಂಘಟನೆಯಿಂದ ಅಂತರ ಕಾಯ್ದುಕೊಂಡರು. ಪ್ರಾಮಾಣಿಕರು ಸಂಘಟನೆಯಿಂದ ದೂರ ಸರಿದಂತೆ ರಾಜಕೀಯ ಮನೋಭಾವದವರು ತಳವೂರಿದರು. ರಾಜ್ಯದಲ್ಲಿ 34 ದಲಿತ ಸಂಘಟನೆಗಳಿವೆ ಎನ್ನುವ ಅಂದಾಜಿದೆ. ಎಡಗೈ, ಬಲಗೈ ತಾರತಮ್ಯ ಸಂಘಟನೆಗಳಲ್ಲೂ ಇದೆ.
ದಲಿತ ಸಂಘರ್ಷ ಸಮಿತಿಯ ಸಂಚಾಲಕತ್ವಕ್ಕೆ ಹಾತೊರೆಯುವವರು ಹೆಚ್ಚಾದರೇ ಹೊರತು, ಸಂಘಟನೆಗೆ ಶಿಸ್ತು ರೂಪಿಸಿ ಪ್ರಾಮಾಣಿಕತೆಯಿಂದ ಮುನ್ನಡೆಸುವವರು ಕಡಿಮೆಯಾದರು. ದೊಡ್ಡ ದೊಡ್ಡ ಮಾತು ಹೇಳಿದೊಡ್ಡಿ(ಪಾಯಖಾನೆ)ಯಲ್ಲಿ ಕೂಡುವ ಜನ ನಮ್ಮಲ್ಲಿ ಹೆಚ್ಚಾಗಿದ್ದಾರೆ. ಅಂಬೇಡ್ಕರ್‌ರ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಹೋರಾಟ ನಡೆಸಿದವರು ನಗಣ್ಯರಾದರು. ಚಳವಳಿಗಳಲ್ಲೂ ರಾಜಕಾರಣ ನುಸುಳಿದ ಮೇಲಂತೂ ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸಿತು. ಸಾಮೂಹಿಕತೆಗೆ ಒತ್ತು ನೀಡುತ್ತಿದ್ದ ದಲಿತ ಸಂಘಟನೆಗಳು, ವ್ಯಕ್ತಿ ಕೇಂದ್ರಿತವಾದವು.
ಬರಹಕ್ಕಿಂತ ನೀವು ಹೆಚ್ಚು ತೊಡಗಿಸಿಕೊಂಡಿದ್ದು ಸಂಘಟನೆಯಲ್ಲಿ. ವೃತ್ತಿ, ಕುಟುಂಬ, ಸಂಘಟನೆ ದಿನಗಳು ಹೇಗಿದ್ದವು?
ದಲಿತ ಸಾಹಿತ್ಯ ಮತ್ತು ಚಳವಳಿಗೆ ಪ್ರಮುಖ ತಿರುವು ನೀಡಿದ ಬಸವಲಿಂಗಪ್ಪನವರ `ಬೂಸಾ' ಪ್ರಕರಣವೇ ನನ್ನ ಬದುಕಿನಲ್ಲೂ ಮಹತ್ವದ ಬದಲಾವಣೆಗೆ ಮುನ್ನುಡಿ ಬರೆಯಿತು. ಆಗ ರಾಯಚೂರಿನಲ್ಲಿ ಅಧ್ಯಾಪಕನಾಗಿದ್ದೆ. ಬರಹಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದ ನಾನು, ಬಸವಲಿಂಗಪ್ಪನವರನ್ನು ಬೆಂಬಲಿಸಿ ಹೋರಾಟದಲ್ಲಿ ತೊಡಗಿದೆ. ದಲಿತರು ತಮ್ಮ ಹಕ್ಕುಗಳ ಪ್ರತಿಪಾದನೆಗೆ ಚಳವಳಿ ಅನಿವಾರ್ಯ ಎಂಬುದು ಅರಿವಾಯಿತು. ಅಲ್ಲಿಂದ ಸಂಘಟನೆ ಮತ್ತು ಹೋರಾಟವೇ ಪ್ರಮುಖವಾಯಿತು.
ತಿರುಗಾಟ ಆರಂಭವಾದ ನಂತರ ಕುಟುಂಬದ ಜವಾಬ್ದಾರಿ ಪೂರ್ಣ ನನ್ನ ಹೆಂಡತಿಯದ್ದೇ. ಎಸ್‌ಟಿಡಿ, ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ತೂಗಿಸಿದಳು. ನನ್ನವಳು, ಸಂಸಾರದ ಜವಾಬ್ದಾರಿ ಹೊತ್ತು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರಿಂದಲೇ ಚಳವಳಿಯಲ್ಲಿ ತೊಡಗಲು ಸಾಧ್ಯವಾಗಿದ್ದು.
ಜಾಗೃತಿ ಮತ್ತು ಬದಲಾವಣೆಗೆ ಸಮ್ಮೇಳನ ಯಾವ ರೀತಿ ಪೂರಕ ಆಗಬಲ್ಲದು?
ಎರಡು ದಿನಗಳ ಸಮ್ಮೇಳನದಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ಇರುವ ಅಲ್ಪ ಅವಧಿಯಲ್ಲೇ ಮುಕ್ತ ಚರ್ಚೆ ನಡೆಯಬೇಕು. ಮೇಲ್ವರ್ಗಗಳ ವಿರುದ್ಧಕ್ಕಿಂತ ಇಂದು ನಮ್ಮ ಜನರ ವಿರುದ್ಧವೇ ಹೋರಾಟ ನಡೆಸಬೇಕಾದ ಸ್ಥಿತಿಯ ಬಗ್ಗೆಯೂ ವಿವೇಚಿಸಬೇಕಿದೆ. ಭಾಷಣ, ಸಾಹಿತ್ಯದಿಂದ ದಲಿತರ ಬದುಕು ಸುಧಾರಿಸದು. ಆದರೆ ಇಂತಹ ಸಮ್ಮೇಳನಗಳ ಮೂಲಕ ನಮ್ಮ ಸ್ಥಿತಿಗತಿಗಳ ಬಗ್ಗೆ ಚರ್ಚಿಸಬಹುದು. ರಾಜಕಾರಣಿಗಳನ್ನು ಕರೆಸಿ ನಮ್ಮ ಹಕ್ಕೊತ್ತಾಯಗಳನ್ನು ವಿವರಿಸಬಹುದು. ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳ ಜಾರಿ ಹೊಣೆಯನ್ನು ಅಧ್ಯಕ್ಷರು ಮತ್ತು ಸಂಚಾಲಕರು ವಹಿಸಿಕೊಳ್ಳಬೇಕು. ಸಮ್ಮೇಳನದ ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಿರ್ಣಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು.
ಚಿತ್ರ: ಜಿ.ಎಸ್.ಕೃಷ್ಣಕುಮಾರ್

ಶುಕ್ರವಾರ, ಡಿಸೆಂಬರ್ 21, 2012

ಕನ್ಹೈಲಾಲರ ವಿಸ್ಮಯಕಾರಿ ರಂಗ ಪ್ರಯೋಗಗಳು




ನನಗಾಗ ಸುಮಾರು 10-12 ವರ್ಷ. ಆವಾಗಿಂದಲೆ ಶುರುವಾಗಿತ್ತು ನನ್ನ ಸಿನಿಮಾ-ನಾಟಕದ ಗೀಳು. ಬೆಳಗಿನ ಕ್ಲಾಸಿಗೆ ಚಕ್ಕರ್ ಹೊಡೆದು ಮಾರ್ನಿಂಗ್ ಷೋ, ಮಧ್ಯಾಹ್ನದ ಕ್ಲಾಸಿಗೆ ಚಕ್ಕರ್ ಹೊಡೆದು ಮ್ಯೋಟಿನಿ ನೋಡುವುದು ನನಗಾಗ ದಿನ ನಿತ್ಯದ ಕಾರ್ಯಕ್ರಮ. ಸಾಯಂಕಾಲ ಇನ್ನೂ ಒಂದು ಸಿನಿಮಾ ನೋಡುವ ಪ್ಲಾನೊಂದು ಹೊಳೆಯಿತು. ಮೊದಲಿಂದಲೂ ಗಣಿತಕ್ಕೂ ನನಗೂ ಕಡು ವೈರ. ಆದ್ದರಿಂದ ಮನೆಯವರ ಮುಂದೆ ನಾನು ಸಂಜೆ ಟ್ಯೂಷನ್ನಿಗೆ ಹೋಗಬೇಕೆಂದು ಹಟ ಹಿಡಿದೆ. ಇಲ್ಲದಿದ್ದರೆ ಆ ವರ್ಷದ ಪರೀಕ್ಷೆಯಲ್ಲಿ ನನಗೆ ದೊಡ್ಡ ಕೋಳಿಮೊಟ್ಟೆ ಸಿಗುತ್ತದೆಂದು ಹೆದರಿಸಿದೆ.
ಕೊನೆಗೆ ಟ್ಯೂಷನ್ನಿಗೆ ಕಳಿಸಲು ಒಪ್ಪಿದರು. ಸಾಯಂಕಾಲ ಟ್ಯೂಷನ್ನಿಗೆ ಕೊಕ್ಕು ಕೊಟ್ಟು ಸಂಜೆ ಷೋ ಅನ್ನೂ ಪ್ರತಿದಿನ ನೋಡತೊಡಗಿದೆ. ಆಗ ನನಗೆ ಓದು ಅಂದರೆ ವಾಕರಿಕೆ. ಸಿನಿಮಾ ಅಂದರೆ ಪ್ರಾಣ.ಆಗಾಗ ಕಿಲಾರಿರಸ್ತೆಯ ತುದಿಗಿದ್ದ ಸುಬ್ಬಯ್ಯನಾಯ್ಡು ಅವರ ರಂಗಭೂಮಿಯಲ್ಲಿ ನಾಟಕ ನೋಡಲು ಮತ್ತೆ ಮತ್ತೆ ಹೋಗುತ್ತಿದ್ದೆ. ಅಲ್ಲಿ ಅಭಿನಯವಾಗುತ್ತಿದ್ದ  `ಭಕ್ತ ಅಂಬರೀಶ',  `ದೇವದಾಸಿ' ,  `ಎಚ್ಚಮನಾಯಕ'  ನಾಟಕಗಳು ಈಗಲೂ ಕಣ್ಣಿಗೆ ಟ್ಟಿದಂತಿವೆ. ಚಿಂದೋಡಿ ಕಂಪನಿಯವರ `ಟಿಪ್ಪೂ ಸುಲ್ತಾನ್' ನಾಟಕವೂ ಅಲ್ಲಿ ಅಭಿನಯವಾಗಿತ್ತು. ಚಿಂದೋಡಿ ವೀರಪ್ಪನವರ ಟಿಪ್ಪೂ ಸುಲ್ತಾನ್ ಅಭಿನಯ ನೋಡಿ ಕರಗಿ ಹೋಗುತ್ತಿದ್ದೆ.
ಅದೇ ರೀತಿ ಗುರುರಾಜುಲು ನಾಯ್ಡು, ಲಕ್ಷ್ಮೀದೇವಿ, ಮಹದೇವ ಸ್ವಾಮಿ ಕಂಪನಿಯ ಶ್ರಿಕಂಠಸ್ವಾಮಿ, ಗುಬ್ಬಿ ಕಂಪನಿಯ ಬಸವರಾಜು - ಇವರೆಲ್ಲಾ ಆ ಕಾಲದಲ್ಲಿ ನನ್ನ ಮನ ಸೆಳೆದ ನಟರು. ಕಿಲಾರಿ ರಸ್ತೆ ತುದಿಯ ಸುಬ್ಬಯ್ಯ ನಾಯ್ಡು ಅವರ ರಂಗಶಾಲೆ, ಗಾಂಧಿನಗರದ ಗುಬ್ಬಿ ಕಂಪನಿಯವರ ರಂಗಶಾಲೆ, ಸಿಟಿಮಾರ್ಕೆಟ್ಟಿನ ಬಳಿಯ ಮಹದೇವಸ್ವಾಮಿ ಕಂಪನಿಯ ರಂಗಶಾಲೆ ನನ್ನ ಬಾಲ್ಯದ ರಂಗ ಪ್ರಪಂಚದ ಮೇರೆಗಳು.
 
ನನಗೆ ಭಾವುಕ ಅಭಿನಯ ತುಂಬಾ ಮೆಚ್ಚುಗೆಯಾಗುತ್ತಿತ್ತು. ಶ್ರಿಕಂಠ ಸ್ವಾಮಿ, ಹರಿಶ್ಚಂದ್ರ ಪಾತ್ರದಲ್ಲಿ ಚಂದ್ರಮತಿ ಲೋಹಿತಾಶ್ವರನ್ನು ಹರಾಜು ಹಾಕುವ ದೃಶ್ಯ, `ಟಿಪ್ಪೂ ಸುಲ್ತಾನ್'  ನಾಟಕದಲ್ಲಿ ಟಿಪ್ಪೂ ಪಾತ್ರಧಾರಿ ಮೀರ್‌ಸಾದಿಕನ ವಂಚನೆಯಿಂದ ಬಳಲಿ `ಅಲ್ಲಾ ಹೊ  ಅಕ್ಬರ್'  ಅಂತ ಜಯಘೋಷಣೆ ಮಾಡುತ್ತಾ ಯುದ್ಧಕ್ಕೆ ಹೋಗುವ ದೃಶ್ಯ - ಇಂಥವುಗಳನ್ನು ನೋಡಿದಾಗ ನನಗೆ ಕಣ್ಣಲ್ಲಿ  ನೀರು ತಾನಾಗಿ ತಾನೇ ಸುರಿಯತೊಡಗುತ್ತಿತ್ತು.
ಅದೇ ರೀತಿ ಸಿನಿಮಾದಲ್ಲಿ ನನ್ನ ಮೆಚ್ಚಿನ ನಟ ಶಿವಾಜಿಗಣೇಶನ್, `ವೀರಪಾಂಡ್ಯ ಕಟ್ಟಬೊಮ್ಮನ್',    `ಕಂದನ್ ಕರುಣೈ'  ಸಿನಿಮಾಗಳಲ್ಲಿ ಶಿವಾಜಿ ಉಸಿರು ಬಿಗಿಹಿಡಿದು ನೀಳವಾದ ಸಂಭಾಷಣೆಗಳನ್ನು ತಡೆಯಿಲ್ಲದೆ ಹೇಳುವುದನ್ನು ಕೇಳಿ ಮಂತ್ರಮುಗ್ಧನಾಗುತ್ತಿದ್ದೆ. ಅದೇ ಥರ ರಾಜಕುಮಾರ್ ಅವರ ಭಕ್ತಿ ಸಿನಿಮಾಗಳಲ್ಲಿ ಅವರ ಭಾವುಕ ಅಭಿನಯ ನೋಡಿ ನನ್ನ ಮನಸ್ಸು ತುಂಬಿ ಬರುತ್ತಿತ್ತು. `ಭಕ್ತ ಕನಕದಾಸ' ಸಿನಿಮಾವನ್ನು ಲೆಕ್ಕವಿಲ್ಲದಷ್ಟು ಸಾರಿ ನೋಡಿದ್ದೆ. ಆ ಭಾವುಕ ಸಿನಿಮಾಗಳ ಡೈಲಾಗುಗಳನ್ನು ಉರು ಹಚ್ಚಿ ಯಥಾವತ್ತಾಗಿ ಗೆಳೆಯರ, ನೆಂಟರ ಮುಂದೆ ಒಪ್ಪಿಸಿ ಭೇಷ್‌ಗಿರಿ ಗಿಟ್ಟಿಸಿಕೊಳ್ಳುತ್ತಿದ್ದೆ. ನನ್ನ ಈ ಚಾಳಿ ಕನ್ನಡ ವಿದ್ವಾಂಸರಾಗಿದ್ದ ನ್ನ ತಂದೆಯವರಿಗೆ ಗೊತ್ತಾಗಿ ನನಗೊಂದು ಇಂಗ್ಲಿಷ್ ಬಿರುದು ನೀಡಿದ್ದರು: `ಎನಿಮಿ ಆಫ್ ಸರಸ್ವತಿ'. 

ಭಾವುಕ ಸಿನಿಮಾ -ನಾಟಕಗಳಷ್ಟೇ, ಎಂ. ಜಿ. ಆರ್. ಅವರ ಡಿಶುಂಡಿಶುಂ ನನಗೆ ಪ್ರಿಯವಾಗಿದ್ದವು. ನಮ್ಮ ಮನೆಯ ಹಿತ್ತಲಿನ ಸಂಪಿಗೆ ಮರದ ಕೊಂಬೆಗಳನ್ನು ಮುರಿದು ಅದನ್ನೇ ಕತ್ತಿ ಎಂದು ಕಲ್ಪಿಸಿಕೊಂಡು ಅದೃಶ್ಯ ಎದುರಾಳಿಯ ಜೊತೆಗೆ ಕತ್ತಿವರಸೆ ಮಾಡುತ್ತಿದ್ದೆ.
 
ಅಕ್ಕಪಕ್ಕದ ನನ್ನ ಥರದ `ಸರಸ್ವತಿ ಶತ್ರು'ಗಳನ್ನು ಕಲೆ ಹಾಕಿಕೊಂಡು ಸಿನಿಮಾಗಳಿಂದ ಕದ್ದ ದೃಶ್ಯಗಳನ್ನು ನಾಟಕ ಮಾಡಿ ತೋರಿಸುತ್ತಿದ್ದೆ. ಆಸುಪಾಸಿನ ಮನೆಗಳ ಹೆಂಗಸರು, ಅಜ್ಜಿಯರು ನಮ್ಮ ಪ್ರೇಕ್ಷಕರು. ಒಂದು ದಿವಸ ನಾನೂ ಮತ್ತು ನಮ್ಮ ನೆರೆಯ ನಾಗರಾಜಾಚಾರಿ ಒಂದು ನಾಟಕ ಮಾಡಿದೆವು. ಅವನು ಯುದ್ಧದಲ್ಲಿ ಗೆದ್ದು ಸಿಂಹಾಸನ ಹತ್ತಲು ಹೋಗುತ್ತಿರುತ್ತಾನೆ.
ಆದರೆ ಸೋದರಮಾವನ ಕಡೆಯವರು ಅವನನ್ನು ಹಿಂದಿನಿಂದ ಬಂದು ಇರಿಯುತ್ತಾರೆ. ಅವನ ತಮ್ಮನ ಪಾತ್ರ ವಹಿಸಿದ್ದ ನಾನು ಕ್ಷಣಾರ್ಧದಲ್ಲಿ ಅಲ್ಲಿಗೆ ಧಾವಿಸಿ ಎಂ. ಜಿ. ಆರ್. ಮಾದರಿಯ ಡಿಶುಂಡಿಶೂಂ ಬಾಕ್ಸಿಂಗ್ ಮಾಡಿ ಅವರೆಲ್ಲರನ್ನೂ ಕೊಲ್ಲುತ್ತೇನೆ.  ಅಮೇಲೆ `ಅಣ್ಣಾ ನಿನ್ನ ಈ ತಮ್ಮನನ್ನು ಅನಾಥನಾಗಿಸಿ ಆ ಲೋಕನಾಥನ ಪಾದಗಳನ್ನು ಸೇರಿದೆಯಾ? ಸಿಂಹಾಸನವನ್ನೇರಿ ಸೂರ್ಯಪ್ರಕಾಶವಾಗಿ ಶತ್ರುಗಳ ಕಣ್ಣು ಕುಕ್ಕಿಸಬೇಕಾಗಿದ್ದ ನೀನು ಶತ್ರುಗಳ ಮೋಸದೇಟಿಗೆ ಗುರಿಯಾದೆಯಾ? ನೀನಿಲ್ಲದ ರಾಜ್ಯ ನನಗೇಕೆ? ನೀನಿಲ್ಲದ ಪ್ರಾಣ ನನಗೇಕೆ? ಇಗೋ ನಾನೂ ಆ ಲೋಕಕ್ಕೆ ಬರುತ್ತಿದ್ದೇನೆ' ಎಂದು ಕತ್ತಿಯಾಗಿ ಮಾಡಿಕೊಂಡಿದ್ದ ಸಂಪಿಗೆ ಕೊಂಬೆಯಿಂದ ನನ್ನನ್ನು ನಾನೇ ತಿವಿದುಕೊಂಡು ಅವನ ಹೊಟ್ಟೆಯ ಮೇಲೆ ದೊಪ್ಪನೆ ಬೀಳುತ್ತೇನೆ.
 
ನಾನು ಎಂದೂ ಮರೆಯಲಾಗದ ಹೂಸು ಮತ್ತು ಸಿಂಬಳದ ಪ್ರಸಂಗ ಆಗಲೇ ಸಂಭವಿಸಿದ್ದು. ಹಿಂದಿನ ದಿನ ಆ ನಾಗರಾಜಾಚಾರಿ ಕೋಳಿಮಟ್ಟೆ ಸ್ಕೂಲು ಪಕ್ಕದ ಬೋಂಡಾ ಅಂಗಡಿಯಲ್ಲಿ ಸಖತ್ ಬೋಂಡಾ ತಿಂದಿದ್ದ. ಜೊತೆಗೆ ತುಂಬಾ ನೆಗಡಿಯೂ ಆಗಿತ್ತು. ನಾನು ಹೋಗಿ ಅವನ ಹೊಟ್ಟೆ ಮೇಲೆ ಬಿದ್ದಿದ್ದೇ ತಡ ಸಿಡಿಲು-ಗುಡುಗಿನೋಪಾದಿಯಲ್ಲಿ ಹೂಸುಬಿಟ್ಟು ಆ ವಾಸನೆಯನ್ನು ತಡಕೊಳ್ಳುವುದು ನನಗಾಗಲೀ ಅಥವಾ ನಮ್ಮ ಭವ್ಯ ನಾಟಕ ನೋಡಲು ಬಂದಿದ್ದ ಮಹಿಳಾಮಣಿಗಳಿಗೆ ಅಸದಳವಾಗುತ್ತಿದ್ದ ಸಂದರ್ಭದಲ್ಲೇ ಜೋರಾಗಿ ಸೀನಿದ. ಅವನ ಮೂಗಿನಿಂದ ಬೆಟ್ಟನೆಲ್ಲಿ ಕಾಯಿ ಗಾತ್ರದ ಸಿಂಬಳದ ಉಂಡೆಯೊಂದು ಚಿಟ್ಟೆಯಂತೆ ಜಿಗಿದು ನ್ನ ಬಲಗೆನ್ನೆಯ ಮೇಲೆ ಬಂದು ಕೂತಿತು. ಅವನು ತಬ್ಬಿಬ್ಬಾಗಿ ಮೇಲೆದ್ದ. ನಾನು `ಥೂಥ್ತೇರಿಕೆ' ಅಂತ ಬೈಯ್ಯುತ್ತಾ ಒರೆಸಿಕೊಳ್ಳತೊಡಗಿದೆ.
 
ನಮ್ಮ ಘನಗಂಭೀರ ನಾಟಕ ನೋಡಬಂದಿದ್ದವರೆಲ್ಲಾ ಗೊಳ್ಳೆಂದು ನಗತೊಡಗಿದ್ದರು. ಆ ಹೂಸು ಮತ್ತು ಸಿಂಬಳದ ಪ್ರಸಂಗದ ನಂತರ, ನಾನು ನಾಟಕ ಮಾಡುವುದನ್ನೇ ಬಿಟ್ಟೆ. ನನಗೆ ದೇವರು ಒಳ್ಳೆ ಬುದ್ಧಿ ಕೊಟ್ಟನೆಂದು ನಮ್ಮ ತಾಯಿ ಸಂತೋಷಪಟ್ಟರು.
 
ಈ ಪ್ರಸಂಗದ ಬಗ್ಗೆ ಇಷ್ಟು ವಿವರವಾಗಿ ಬರೆಯುವುದಕ್ಕೆ ಕಾರಣ ಕೇವಲ ಬಾಲ್ಯ ಕುರಿತ ಹಳಹಳಿಕೆಯಲ್ಲ. ಭಾವುಕತೆ ರೋಚಕತೆಗಳೇ ನಟನೆಯ ಜೀವಾಳವೆಂದು ತಿಳಿದಿದ್ದ ನನಗೆ ಆ ರೀತಿಯ ನಟನೆಯ ಬಗೆಗೇ ಅಸಹನೆ ಬಂತು. ಬೇರೆ ಥರದ ನಾಟಕಗಳ ಕಲ್ಪನೆ ನನಗಾಗ ಲಭ್ಯವಿರಲಿಲ್ಲ. ಆದ್ದರಿಂದ ನಾಟಕವನ್ನೇ ಕೈಬಿಟ್ಟೆ. ಸಿನಿಮಾ ನೋಡುವುದನ್ನು ಬಿಟ್ಟು ಪುಸ್ತಕಗಳ ಬೆನ್ನಿಗೆ ಬಿದ್ದೆ.
ಮುಂದೆ ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಡುಮುಕಿ ಹೊಡೆದ ಕಾರಣ ಪಿ.ಯು. ಸಿ.ಯ ನಂತರ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾದಾಗ ಷೇಕ್ಸ್‌ಪಿಯರನ ನಾಟಕಗಳನ್ನು ಓದತೊಡಗಿದಾಗ ಇನ್ನೊಂದು ರಂಗಕಲ್ಪನೆ ಅಸ್ಪಷ್ಟವಾಗಿ ಮನದಾಳದಲ್ಲಿ  ಮೂಡತೊಡಗಿತು. ನಾನು ಡಿಗ್ರಿ ಓದುವ ಸಂದರ್ಭದಲ್ಲಿ ಆಧುನಿಕ ನಾಟಕ ಮತ್ತು ರಂಗಭೂಮಿಗಳ ಪರಿಚಯ ನನಗಾಗತೊಡಗಿತು. ಬಿ.ವಿ. ಕಾರಂತರ ನಿರ್ದೇಶನದ ಹೊಸ ನಾಟಕಗಳನ್ನು ನೋಡಿದಾಗ ಹೊಸದೊಂದು ಜಗತ್ತು ತೆರೆದುಕೊಂಡಿತು.
ಆಮೇಲೆ `ಸಮುದಾಯ'ದ ಬುದ್ಧಿಜೀವಿ ನಾಟಕಗಳ ಪರಿಚಯವಾಯಿತು. ಪ್ರಸನ್ನ ನಿರ್ದೇಶನದ  `ಗೆಲಿಲಿಯೊ'  ನೋಡಿದಾಗ ಇನ್ನೊಂದು ಆಯಾಮ ತೆರೆದುಕೊಂಡಿತು. ಆದರೂ ಏನೋ ಸಾಲದು ಅನಿಸುತ್ತಿತ್ತು.
 
ಕೆಲವು ವರ್ಷಗಳ  ನಂತರ ನೌಕರಿಗಾಗಿ ನಾನು ತುಮಕೂರು ನಿವಾಸಿಯಾದ ಸಮಯದಲ್ಲಿ     `ಸಮುದಾಯ'ದವರು ಅಲ್ಲಿ ಒಂದು ಸಲ `ಕನ್ಹೈಲಾಲ್' ಎಂಬುವವರ  `ಪೆಬೆ'  ನಾಟಕವನ್ನಾಡಿಸಿದರು. ಅದು ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು. ತಾಯಿಹಕ್ಕಿಯೊಂದು ತನ್ನ ಮರಿಹಕ್ಕಿಗಳನ್ನು ಮೇಲೆರಗಿ ಬರುವ ಹದ್ದುಗಳಿಂದ ಹೇಗೆ ಕಾಪಾಡುತ್ತದೆಂಬುದು ಆ ನಾಟಕದ ಹುರುಳು. ಅದರ ಅಭಿನಯ ಕ್ರಮ ನಾನು ಆ ಹಿಂದೆ ನೋಡಿದ ಎಲ್ಲ ನಾಟಕಗಳಿಗಿನ್ನಾ ಬೇರೆಯಾಗಿತ್ತು. ನನ್ನ ಬಾಲ್ಯದ ಸಿನಿಮಾ-ನಾಟಕಗಳಂತೆ ಅದು ಭಾವುಕವಾಗಲೀ ರೋಚಕವಾಗಲೀ ಇರಲಿಲ್ಲ. ಅಥವಾ ಬುದ್ಧಿಜೀವಿ ನಾಟಕಗಳಂತೆ ವಾಗ್ವಾದಗಳ ಮೇಲೂ ನಿಂತಿರಲಿಲ್ಲ. ಭಾವುಕ ನಟ ಪಾತ್ರದಲ್ಲಿ ಮುಳುಗಿ ಹೋಗಿ ನೋಡುಗನನ್ನೂ ಮುಳುಗಿಸಿಬಿಡುತ್ತಾನೆ. ಬುದ್ಧಿಜೀವಿ ನಟ ಅನುಭವದೂರನಾಗಿ ನಿಲ್ಲುವುದರಿಂದ ಹೃದಯವಿಹೀನ ಸಿನಿಕತೆಯನ್ನುಂಟುಮಾಡುತ್ತಾನೆ.
 
ಭಾವುಕ ರಂಗಭೂಮಿಯ ಹಗಲುಗನಸಿನ ವರ್ತುಲದಲ್ಲಾಗಲಿ, ಬುದ್ಧಿಜೀವಿ ರಂಗಭೂಮಿಯ ಪರಕೀಯ ವಾತಾವರಣದಲ್ಲಾಗಲಿ ಕನ್ಹೈಲಾಲರ ನಟರು ಅಭಿನಯಿಸುತ್ತಿರಲಿಲ್ಲ. ಅವರ ಚಲನವಲನಗಳು ಒಂದು ಪ್ರಾಚೀನ ಕ್ರಿಯಾವಿಧಿಯ ಲಯಬದ್ಧತೆಯಿಂದ ಕೂಡಿದ್ದವು. ಜಾಗರಕ್ಕಿಂತಲೂ, ಚಿಂತನೆ-ಭಾವನೆಗಳಿಗಿಂತಲೂ ಆಳವಾದ ಮನೋವಲಯದ ಘಟನಾವಳಿಗಳನ್ನು ಅವು ಪ್ರತ್ಯಕ್ಷಗೊಳಿಸುತ್ತಿದ್ದವು.
ಮಾತುಗಳನ್ನು ಮಂತ್ರಗಳಂತೆ ಉಚ್ಚರಿಸುತ್ತಿದ್ದವು. ನಮ್ಮ ತಳಮನಸ್ಸಿನ ಅಗೋಚರ ಆದಿಮಭಾವಗಳನ್ನು, ಭೀತಿಗಳನ್ನು, ಬಯಕೆಗಳನ್ನು ರಂಗದ ಮಾಂತ್ರಿಕ ವಾತಾವರಣದಲ್ಲಿ ಕಟ್ಟಿಕೊಡುತ್ತಾ ನಮ್ಮನ್ನು ಕಲಕಿ ಬಗೆಯಾಳದ ಗಂಟುಗಳನ್ನು ಬಿಡಿಸುತ್ತಾ ಮೈ-ಮನ-ಬುದ್ಧಿ-ಭಾವಗಳನ್ನು ಹಗುರಗೊಳಿಸುತ್ತಿದ್ದವು. ತೆರೆದ ಕಣ್ಣಿನಿಂದ ಸ್ವಪ್ನವೊಂದನ್ನು ವೀಕ್ಷಿಸುತ್ತಾ ಅದರ ರಹಸ್ಯಮಯ ಪಾಠಗಳನ್ನು ನಮಗರಿವಿಲ್ಲದಂತೆ ಅರಿಯಪಡಿಸುವ ವಿಸ್ಮಯಕಾರಿಯಾದ ಪ್ರಯೋಗ ಅದು.
 
ಆ ಅನುಭವ ಮುಂದೆ ನನ್ನ ನಾಟಕಗಳ ರಚನೆಯನ್ನು ನನಗೇ ಗೊತ್ತಿಲ್ಲದ ರೀತಿಯಲ್ಲಿ ಪ್ರಭಾವಿಸಿತು. ಆಗ ಇನ್ನೊಂದು ಲೋಕದ ಜೀವಿಯಂತೆ ನನಗೆ ಕಂಡಿದ್ದ ಕನ್ಹೈಲಾಲರು ಮುಂದೆ ನನಗೆ ಆತ್ಮೀಯರಾಗುತ್ತಾರೆಂದಾಗಲಿ ಅವರ ಜೊತೆ ಕೆಲಸ ಮಾಡುವ, ಆಲೋಚಿಸುವ ಅವಕಾಶ ನನಗೊಮ್ಮೆ ದೊರೆಯುತ್ತದೆಂದಾಗಲಿ ನನಗಾಗ ಗೊತ್ತಿರಲಿಲ್ಲ. ಈಗ ಅವರು ರಚನೆ ಮಾಡಿರುವ ರಂಗತತ್ತ್ವವನ್ನು ಕುರಿತ  `ರಿಚುಯಲ್ ಥಿಯೇಟರ್'  ಪುಸ್ತಕಕ್ಕೆ ನಾನೀಗ ಮುನ್ನುಡಿ ಬರೆಯಹೊರಟಿರುವಾಗ ಮೇಲಿನ ನೆನಪುಗಳು ಸುಳಿದುಹೋದವು.  ಯಾಕೆಂದರೆ ರಂಗಭೂಮಿಯ ಬಗೆಗಿನ ನನ್ನ ತಿಳಿವಳಿಕೆ ನಂಬಿಕೆಗಳಿಗೆ ಕನ್ಹೈಲಾಲರ ಪ್ರಯೋಗವೇ ನನಗೆ ಗಮ್ಯಸ್ಥಾನವಾಗಿದೆ.
 
ನಾನು ಮೊದಲಿಗೆ ಅವರ ಪ್ರಯೋಗ ನೋಡಿದಾಗ ಉಂಟಾದ ಅನಿರ್ವಚನೀಯ ಸ್ಪಂದನಗಳನ್ನು ಈ ಅಪ್ರಕಟಿತ ಕೃತಿ ನಿರ್ವಚನಗೊಳಿಸುತ್ತಿರುವುದು ನನಗಾದ ವೈಯಕ್ತಿಕ ಪ್ರಯೋಜನ. ಇದನ್ನೂ ಮೀರಿದ ಸಾರ್ವಜನಿಕ ಪ್ರಯೋಜನವನ್ನು  ಈ ಕೃತಿ ಉಂಟುಮಾಡುತ್ತದೆ. ಇಡೀ ಕಲೆಯ ಬಗೆಗಿನ ನಮ್ಮ ತಿಳಿವಳಿಕೆಯನ್ನು ಆಮೂಲಾಗ್ರವಾಗಿ ಬದಲಾಯಿಸುವಂಥ ನಿಖರತೆಯನ್ನು ಇದು ಹೊಂದಿದೆ. ಜೊತೆಗೆ ಸಾಮಾಜಿಕ ಪಡಿಪಾಟಲುಗಳಿಂದ ಬಿಡುಗಡೆಯನ್ನು ಕಲೆಯ ಮೂಲಕ ಇಲ್ಲೇ, ಈಗಲೇ ಪಡೆದುಕೊಳ್ಳುವ ಹೆದ್ದಾರಿಯನ್ನು ಇದು ಹಾಕಿಕೊಡುತ್ತದೆ.
 
ಎಲ್ಲ ಆಳದ ಮಾತುಗಳಂತೆ ಕನ್ಹೈಲಾಲರ ಗ್ರಹಿಕೆಗಳನ್ನು ಶಬ್ದರೂಪದಲ್ಲಿ, ತಾರ್ಕಿಕವಾಗಿ ವಿವರಿಸುವುದು ಕಠಿಣ. ಆದ್ದರಿಂದ ಅವರು ತಮ್ಮ ಚಿಂತನೆಯ ನಿವೇದನೆಗೆ ವಿಚಾರಗಳ ಸಮನೆಲದ ಹಾದಿಯನ್ನು ಹಿಡಿಯದೆ ನೆನಪುಗಳ, ಪ್ರಶ್ನೋತ್ತರಗಳ, ಆತ್ಮಕಥನಗಳ ಮೂಲಕ ತಮ್ಮನ್ನು ಅಭಿವ್ಯಕ್ತಿಗೊಳಿಸಿಕೊಳ್ಳುತ್ತಾರೆ. ಕಲೆ ಮತ್ತು ಬದುಕಿನ ಬಗೆಗಿನ ನಮ್ಮ ಗೃಹೀತಗಳಿಗೆ ಪುನರ್ಜನ್ಮ ನೀಡಬಲ್ಲ ಶರವನ್ನು ಅಡಗಿಸಿಕೊಂಡಿರುವ ಕನ್ಹೈಲಾಲರ ಪುಸ್ತಕವನ್ನು ಕೆಳಕಂಡ ರೀತಿಯಲ್ಲಿ ಸಂಗ್ರಹಿಸಬಹುದೇನೋ.
 
ಕನ್ಹೈಲಾಲರ ರಂಗಚಿಂತನೆಗೆ ವಿಶ್ವಾತ್ಮಕ ಹೊರಚಾಚುಗಳಿದ್ದರೂ ಅವರು ತಮ್ಮ ಹೊಳಹುಗಳನ್ನು ಅರ್ಥೈಸುವುದು ತಮ್ಮ ಪ್ರದೇಶವಾದ ಮಣಿಪುರದ ಹಿಂಸ್ರ ರಾಜಕೀಯ ವಾತಾವರಣದಲ್ಲಿ. ತಮ್ಮ ರಕ್ತಸಿಕ್ತ ಸಮಾಜ ಮತ್ತು ಪರಿಸರದ ಗಾಯಗಳನ್ನು, ನೋವುಗಳನ್ನು ಸೃಜನಾತ್ಮಕವಾಗಿ ರಂಗದ ಮೇಲೆ ಅಭಿನಯಿಸಿ ಅವುಗಳಿಂದ ನಟರನ್ನು, ಪ್ರೇಕ್ಷಕರನ್ನು ಬಿಡುಗಡೆಗೊಳಿಸುವುದು ಅವರ ಧ್ಯೇಯ.
 
ಇದಕ್ಕಾಗಿ ಅವರು ಆಶ್ರಯಿಸುವ ರಂಗಭೂಮಿ ತಲತಲಾಂತರದಿಂದ ಬಂದ ಟ್ರಿಕ್ಕುಗಳನ್ನು ಹೊಸ ಮಸಾಲೆ ಜೊತೆ ಪ್ರದರ್ಶಿಸುವ ಜಾನಪದ ಅಥವಾ ಶಾಸ್ತ್ರೀಯ ರಂಗಭೂಮಿಯಂತಲ್ಲ. ಅಥವಾ ದೇಹಮನಸುಗಳನ್ನು ತಟ್ಟದೆ ಮುಟ್ಟದೆ ಅಮೂರ್ತ ಅನುಭವವನ್ನು ವಿಶ್ಲೇಷಿಸುವ ಬುದ್ಧಿಜೀವಿ ರಂಗಭೂಮಿಯೂ ಅಲ್ಲ. ಅಥವಾ ರಂಜನೆಯ ಸರಕು ಮೊದಲೇ ಅಲ್ಲ. ಅವರ ಮಟ್ಟಿಗೆ ರಂಗಭೂಮಿಯೆಂದರೆ ಒಡಲೊಂದೆಸೆ ಮನವೊಂದೆಸೆ ಬುದ್ಧಿಯೊಂದೆಸೆಯಾಗಿರುವ ಇಂದಿನ ನಮ್ಮನ್ನು ರಂಗಕ್ರಿಯೆಯ ಮೂಲಕ ಮತ್ತೆ ಒಟ್ಟುಗೂಡಿಸಿ ನಮ್ಮೆಲ್ಲ ಶಕ್ತಿಗಳೊಂದಿಗೆ ಇಂದಿನ ದಂದುಗಗಳಿಗೆ ಎದಿರುಗೊಳ್ಳುವಂತೆ ಮಾಡುವ ಕ್ರಮ. ಆದ್ದರಿಂದಲೇ ಅದು ವಿಮೋಚನಾತ್ಮಕ.
 
ಕನ್ಹೈಲಾಲರು ತಮ್ಮ ರಂಗಚಿಂತನೆ-ಪ್ರಯೋಗಗಳಲ್ಲಿ ಇಂದಿನ ಮನರಂಜನಾ ಕಲೆಗಳ ಮೂಲಗುಣವಾದ ಹುಸಿ ಯಥಾರ್ಥವಾದವನ್ನು ಪೂರ್ತಿ ಕೈಬಿಡುತ್ತಾರೆ. ಸಿದ್ಧ-ಪ್ರಸಿದ್ಧ ರಂಗಕ್ರಮಗಳ ವ್ಯಾಕರಣಗಳನ್ನು ಗಾಳಿಗೆ ತೂರುತ್ತಾರೆ. ವೈಯಕ್ತಿಕ ಆಳಗಳಲ್ಲಿ  ಸಾರ್ವತ್ರಿಕ ನೋವುಗಳನ್ನು ಅನುಭವಿಸಿ ಅದಕ್ಕೊಂದು ರೂಪ ಕೊಡುವ ಆದಿಮ ಕತೆಯನ್ನೋ ಗೀತೆಯನ್ನೋ ಆಶ್ರಯಿಸಿ ಅದನ್ನು ತ್ರಿಕರಣಪೂರ್ವಕವಾಗಿ ಪುನಃಪುನಃಪುನರಭಿನಯಿಸುತ್ತಾ, ಪುನರನುಭವಿಸುತ್ತಾ ನಟರ ಮೈ, ಪ್ರಾಣ, ಉಸಿರಿನ ಭಂಗಿ ಮತ್ತು ಚಲನೆಗಳ ಮೂಲಕ ಆದಿವಾಸಿ ಕಲೆಗಳ ಆದಿಲಯಗಳ ಮೂಲಕ ಮೂರ್ತೀಕರಿಸುತ್ತಾ ಹೋಗುತ್ತಾರೆ.
ನೋವಿನ ಬೇರುಗಳನ್ನರಸುತ್ತಾ ಅವರ ಕಲೆ ಮನುಕುಲದ ಬೇರುಗಳ ಗತಕ್ಕೆ ಹೋದರೂ ಕೂಡ ಅದು ಇಂದಿನ ದಂದುಗಗಳನ್ನೇ ಕಲಾತ್ಮಕವಾಗಿ ಧ್ಯಾನಿಸುತ್ತಾ ಪ್ರಸ್ತುತದ ಜೊತೆಗೆ ಮುಖಾಮುಖಿಯಾಗುತ್ತದೆ. ಇಂದಿನ ಕೃತಕ ಸಾಮಾಜಿಕ ವಾತಾವರಣದಲ್ಲಿ ಸ್ವಾಭಾವಿಕತೆಯನ್ನು ಕೃತಕವಾಗಿ ಮತ್ತೆ ನಿರ್ಮಿಸಿಕೊಂಡು ತನ್ಮೂಲಕ ನಟ ಮತ್ತು ನೋಡುಗರನ್ನು ತಮ್ಮ ಸಾಮಾಜಿಕ, ಪ್ರಾಕೃತಿಕ ಮೂಲಗಳಿಗೆ ವಾಪಸಾಗಿಸಿ ನಮಗೆ ನಮ್ಮ ಸಮಾಜಕ್ಕೆ ನಮ್ಮ ಸಮಸ್ತ ಶಕ್ತಿಗಳನ್ನು ಮರುಗಳಿಸಿಕೊಡುತ್ತದೆ.
 
ಆದ್ದರಿಂದಲೇ ಅವರ ರಂಗನಿರ್ಮಿತಿ ಮತ್ತದರ ಅನುಭವ ಪ್ರಾಚೀನ ಕ್ರಿಯಾವಿಧಿಗಳಿಗೆ, ಪುರಾಣಗಳಿಗೆ ಹತ್ತಿರ. ಲಾಗಾಯ್ತಿನ ಪುರಾಣಗಳು ಕಾಲ್ಪನಿಕ ಗತದ ಕತೆಯನ್ನು ಮಾತ್ರ ಹೇಳುತ್ತಿರುವುದಿಲ್ಲ. ಮುಂದಿನ ಘಟನೆಗಳನ್ನೂ ಪೂರ್ವಾಭಿನಯಿಸುತ್ತವೆ.
 
ಇದಕ್ಕೊಂದು ಉದಾಹರಣೆ: ತಮ್ಮ ಪ್ರದೇಶದ ಮೇಲೆರಗಿ ಬಂದ ಹಲ್ಲೆಕೋರರ ವಿರುದ್ಧ ತಮ್ಮ ನೆಲದ ಸ್ತ್ರೀಶಕ್ತಿ ಅಂತಿಮ ಪ್ರತಿಭಟನೆಯನ್ನು ತನ್ನ ನಗ್ನತೆಯ ಮೂಲಕ ವ್ಯಕ್ತಪಡಿಸುವ ಬಹುಚರ್ಚಿತ ದೃಶ್ಯವನ್ನು ಅವರು ರಂಗದ ಮೇಲೆ ತಮ್ಮ  `ದ್ರೌಪದಿ'  ನಾಟಕದಲ್ಲಿ ತಂದರು. ಅದನ್ನು ನೋಡಿದ ಅನೇಕರು ಬೆಚ್ಚಿಬಿದ್ದರು. ಮುಖ್ಯ ಪಾತ್ರವಹಿಸಿದ ಅವರ ಮಡದಿ ಮತ್ತು ಆದರ್ಶ ನಟಿ ಸಾಬಿತ್ರಿ ಅವರನ್ನು ರಂಗದ ಮೇಲೆ ಬತ್ತಲೆಗೊಳಿಸಿ ಮಣಿಪುರದ ಸ್ತ್ರೀಯರಿಗೆ ಘೋರ ಅಪಮಾನ ಮಾಡಿದರೆಂದು ಜನ ದೂಷಿಸಿದರು.
ಆದರೆ ಕೆಲವೇ ವರ್ಷಗಳ ನಂತರ ತಮ್ಮ ಮೇಲೆ ಹಲ್ಲೆಕೋರರು ಮತ್ತೆ ಮತ್ತೆ ಎಸಗುತ್ತಿದ್ದ ಮಾನಭಂಗದ ಪ್ರಸಂಗಗಳನ್ನು ವಿರೋಧಿಸಲೋಸುಗ ಮಣಿಪುರದ ಹೆಂಗಸರು ಸಾರ್ವಜನಿಕವಾಗಿ ನಗ್ನರಾಗಿ ತಮ್ಮ ಕಡುಗೋಪ ಮತ್ತು ವಿರೋಧಗಳನ್ನು ವ್ಯಕ್ತಪಡಿಸಿದರು.
 
ಆಗ ಗೊತ್ತಾಯಿತು, ಪ್ರಸ್ತುತದ ಅಪಮಾನಗಳನ್ನು, ಅವು ಪ್ರೇರೇಪಿಸುವ ವಿರೋಧಗಳನ್ನೂ ಪೂರ್ವಾಭಿನಯಿಸುವ ಪ್ರವಾದಿತ್ವ ಕನ್ಹೈಲಾಲರ  ರಂಗಭೂಮಿಗಿದೆಯೆಂದು.
ಹೀಗಾಗಿ ಕನ್ಹೈಲಾಲರ ಕಲೆ ತಥ್ಯದ ಬಿಂಬವಾಗಲಿ ಟೀಕೆಯಾಗಲಿ ಅಲ್ಲ. ತಥ್ಯದ ನಿರ್ಮಾಣ ಮತ್ತು ಪರಿವರ್ತನಾಕ್ರಿಯೆಯಲ್ಲಿ ಭಾಗಿಯಾಗುವ  ಕ್ರಿಯಾವಿಧಿ.

ಬುಧವಾರ, ಡಿಸೆಂಬರ್ 19, 2012

ಗೋಸಾಯಿ ಜನಾಂಗದ ಸಾಮಾಜಿಕ ಅಧ್ಯಯನ


avadhi.com (krupe)

- ಡಾ.ಪ್ರಕಾಶ ಗ. ಖಾಡೆ

ಬಹುಮುಖಿ ಸಂಸ್ಕೃತಿಯ ಹಲವು ಜನಾಂಗಗಳು ಈ ಧರೆಯ ಮೇಲೆ ತೆರೆದುಕೊಳ್ಳುತ್ತ ಸಾಗಿವೆ. ಒಂದೇ ಜೀವ ಜಾತಿಗೆ ಸೇರಿದ ಮಾನವರಲ್ಲಿ ಕಂಡು ಬರುವ ಅನೇಕ ಜನಾಂಗಗಳು ರೂಪುಗೊಂಡ ಬಗೆಯೇ ತುಂಬಾ ಅಚ್ಚರಿ ಮತ್ತು ಕುತೂಹಲದ ಸರಕಾಗಿದೆ. ಈ ಜನಾಂಗ ಪರಿಕಲ್ಪನೆ ಮಾನವ ಜಾತಿಯ ಒಂದು ಬಗೆಯ ವಗರ್ೀಕರಣ. ಒಂದು ಧರ್ಮಕ್ಕೆ ಸೇರಿದವರನ್ನು, ಒಂದು ಭಾಷೆ ಆಡುವವರನ್ನು, ಒಂದು ಪ್ರದೇಶದಲ್ಲಿ ವಾಸಿಸುವವರನ್ನು ಅಥವಾ ಒಂದು ಸಾಂಸ್ಕೃತಿಕ ಗುಂಪಿಗೆ ಸೇರಿದವರನ್ನು ಒಂದು ಪ್ರತ್ಯೇಕ ಜನಾಂಗವಾಗಿ ನೋಡುವ ಮತ್ತು ಅಧ್ಯಯನಿಸುವ ಕೆಲಸಗಳು ಇಂದು ಅಕಾಡೆಮಿಕ್ ವಲಯದಲ್ಲಿ ತುಂಬಾ ತೀವ್ರವಾಗಿಯೇ ನಡೆದಿವೆ ಮತ್ತೂ ನಡೆಯಬೇಕಾಗಿದೆ.ಈ ಬಗೆಯಲ್ಲಿ ಡಾ. ಅಶೋಕ ನರೋಡೆ ಅವರ `ಗೋಸಾಯಿಗಳು ಜನಾಂಗಿಕ ಅಧ್ಯಯನ’ ಕೃತಿಯು ಅಪ್ರತಿಷ್ಠಿತ ಉಪಸಂಸ್ಕೃತಿಯೊಂದರ ಸಾಮಾಜೀಕರಣದ ನೆಲೆ ಶೋಧಿಸುವ ವಿಶಿಷ್ಟ ಸಂಶೋಧನಾ ಕೃತಿಯಾಗಿದೆ.
ಪ್ರಧಾನ ಸಂಸ್ಕೃತಿಯ ಅಧ್ಯಯನಕ್ಕೆ ಚರಿತ್ರೆಯಲ್ಲಿ ಜಾಗ ಸಿಕ್ಕಿದೆ. ಆದರೆ ಉಪಸಂಸ್ಕೃತಿಯ ತೀರಾ ಕಣ್ಮರೆಯಲ್ಲಿರುವ ಅನೇಕಾನೇಕ ಸಮುದಾಯಗಳ ಇತಿಹಾಸ, ಭೂಗೋಲದ ಪರಿಕಲ್ಪನೆಯೇ ತೆರೆದುಕೊಳ್ಳದ ಹೊತ್ತಿನಲ್ಲಿ ಡಾ. ಅಶೋಕ ನರೋಡೆ ಅವರ ಈ ಕೃತಿ ತುಂಬಾ ಗಮನಾರ್ಹವಾಗುತ್ತದೆ. ಒಂದು ಜನಸಮುದಾಯದ ನೆಲೆ ಶೋಧಿಸಿ, ಅದರ ಅನುವಂಶೀಕ ಪರಿಗ್ರಹಣ ಗುರುತಿಸಿ, ವಲಸೆಯ ಸಕಾರಣ ಹುಡುಕಿ, ಸಾಮಾಜಿಕವಾದ ಪ್ರಮುಖ ಸ್ಥಿತಿಯ ಹುಡುಕಾಟ ಅರಸಿ ವಿಶಿಷ್ಟವಾಗಿ ರಚಿತವಾದ ಈ ಕೃತಿಯು ಕನ್ನಡದ ಜನಾಂಗೀಕ ಅಧ್ಯಯನ ಶಾಸ್ತ್ರಕ್ಕೆ ಸಂಬಂಧಿಸಿದಂತೆ ತುಂಬಾ ಉಪಯುಕ್ತವಾಗಿದೆ.
ಭಾರತ ಜನನಿಯ ತನುಜಾತೆಯ ಕನರ್ಾಟಕದಲ್ಲಿ ವಾಸಿಸುವ ಜನರಲ್ಲಿ ಜನಾಂಗೀಕ ಲಕ್ಷಣಗಳನ್ನು ಅನೇಕ ಮಾನವ ಶಾಸ್ತ್ರಜ್ಞರು ಅಧ್ಯಯನ ಮಾಡುತ್ತ ಬಂದಿದ್ದಾರೆ. ಈ ನೆಲೆಯಲ್ಲಿ ಸಾಹಿತಿ, ಸಂಶೋಧಕರಾಗಿರುವ ಡಾ. ಅಶೋಕ ನರೋಡೆ ಅವರು ಮಾನವಶಾಸ್ತ್ರೀಯ ಅಧ್ಯಯನನಿಷ್ಠರಾಗಿ ಈ ಕೃತಿಯ ಮೂಲಕ ಹೊಸ ಕ್ಷೇತ್ರವನ್ನು ಪ್ರವೇಶಿಸಿ ಅಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.
ಅರೆ ಅಲೆಮಾರಿ ಜನಾಂಗದ ಗೋಸಾಯಿಗಳು ಕನರ್ಾಟಕದ ಹಲವು ಕಡೆಗಳಲ್ಲಿ ನೆಲೆಸಿದ್ದಾರೆ. ವಲಸೆ ಕಾರಣವಾಗಿ ಒಂದೆಡೆ ನೆಲೆನಿಂತು ಅಲ್ಲಿನ ಪ್ರಾಕೃತಿಕ ಮತ್ತು ಸಾಮಾಜಿಕ ಸಂದರ್ಭಗಳಿಗೆ ಹೊಂದಿಕೊಂಡು ಸಂಕರೀಕಣಗೊಂಡಿದ್ದಾರೆ. ಇಲ್ಲಿ ಡಾ.ನರೋಡೆ ಅವರು ಧಾರವಾಡದ `ಲಕ್ಷ್ಮೀ ಸಿಂಗನಕೇರಿ’ ಯನ್ನು ಮುಖ್ಯವಾಗಿಟ್ಟುಕೊಂಡು ಕನರ್ಾಟಕ-ಮಹಾರಾಷ್ಟ್ರಗಳ ಗಡಿಗಳಲ್ಲಿರುವ ಕೆಲವು ಪ್ರದೇಶಗಳನ್ನು ಭೇಟಿ ನೀಡಿ ಈ ಅಧ್ಯಯನವನ್ನು ಕಟ್ಟಿಕೊಟ್ಟಿದ್ದಾರೆ.
ಅಧ್ಯಯನಕ್ಕೆ ಒಂದು ಶಿಸ್ತು ಬರುವಂತೆ ಮತ್ತು ವಿಷಯ ಪುನರಪಿಯಾಗದಂತೆ ಐದು ಅಧ್ಯಾಯಗಳಲ್ಲಿ ಮತ್ತು ಅವುಗಳಲ್ಲಿ ಉಪಶೀಷರ್ಿಕೆಗಳನ್ನು ಕೊಟ್ಟು ವಿಷಯವನ್ನು ಮಂಡಿಸಿರುವುದು ಸರಳ ಓದಿಗೆ ತುಂಬಾ ಸಹಕಾರಿಯಾಗಿದೆ. ಗೋಸಾಯಿಗಳ ಜನಾಂಗೀಕ ಅಧ್ಯಯನದ ಮೊದಲ ಅಧ್ಯಾಯದಲ್ಲಿ ಗೋಸಾಯಿ ಜನಾಂಗದ ಮೂಲ, ಭಾಷೆ, ಪಂಗಡ ಹಾಗೂ ಕಾಯಕ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. ಮೊದಲ ಅಧ್ಯಾಯವೇ ಹೊಸ ಸಂಸ್ಕೃತಿಯೊಂದರ ಕುತೂಹಲದ ಓದಿಗೆ ಸಾಕ್ಷಿಯಾಗುತ್ತದೆ. ನಮ್ಮ ನಡುವೆಯೇ ಇದ್ದು, ನಮ್ಮೊಂದಿಗೆ ಬೆರೆತು ಬೇರೆಯಾದ ಭಾಷೆ, ಆಚರಣೆಗಳಿಂದ ಗುರುತಿಸಿಕೊಂಡು ನಮ್ಮವರಾಗಿಯೇ ಬದುಕು ಸಾಗಿಸಿಕೊಂಡು ನಡೆಯುತ್ತಿರುವ ಜನಾಂಗ ಒಂದರ ಈ ಅಧ್ಯಯನವು ಈ ಬಗೆಯ ಅಧ್ಯಯನಕ್ಕೆ ತೋರುಬೆರಳಾಗುತ್ತದೆ.
ಮೊದಲ ಅಧ್ಯಾಯದಲ್ಲಿ ಗೋಸಾಯಿಗಳ ಜನಾಂಗದ ಮೂಲವು ಮಹಾರಾಷ್ಟ್ರ, ಗುಜರಾತ ಹಾಗೂ ಕನರ್ಾಟಕ ರಾಜ್ಯಗಳಿಗೆ ತಳಕು ಹಾಕಿಕೊಳ್ಳುತ್ತದೆ. “ನಾವು ಗುಜರಾತದವರು, ವ್ಯಾಪಾರ ಮಾಡುತ್ತ ಮಹಾರಾಷ್ಟ್ರಕ್ಕೆ ಬಂದೆವು. ಕಾಲಾ ನಂತರದಲ್ಲಿ ನಾವು ಕನರ್ಾಟಕಕ್ಕೆ ಬಂದಿರುವೆವು” ಎಂಬ ಜನಾಂಗದ ಮುಖಂಡರ ಹೇಳಿಕೆಯ ಮೂಲಕ ಈ ಅಧ್ಯಯನವು ತೆರೆದುಕೊಳ್ಳುತ್ತದೆ ಮತ್ತು ಈ ಜನಾಂಗದ ಭಾಷೆಯೂ ಸಂಕರಣಗೊಂಡಿದೆ. ಮರಾಠಿ, ಗುಜರಾತಿ, ಉದರ್ು, ಕನ್ನಡ, ಲಂಬಾಣಿ ಭಾಷೆಗಳ ಮಿಶ್ರಣವಾಗಿ ಒಂದು ವಿಶಿಷ್ಟವಾದ `ಗೋಸಾಯಿ ಭಾಷೆ’ ರೂಪು ಪಡೆದ ಬಗೆಯನ್ನು ಇಲ್ಲಿ ಡಾ. ನರೋಡೆ ಅವರು ಗುರುತಿಸುತ್ತಾರೆ. ಆಧುನಿಕ ಭಾಷಾ ವಿಜ್ಞಾನಿಗಳಿಗೆ ಗೋಸಾಯಿ ಭಾಷೆಯೊಂದು ಆಕರ್ಷಕ ಕ್ಷೇತ್ರವಾಗಿದೆ ಎಂದು ಮುಂದಿನ ಅಧ್ಯಯನಕ್ಕೆ ಹಾದಿ ಹಾಕಿಕೊಟ್ಟಿದ್ದಾರೆ. ಬುಡಕಟ್ಟು ಜನಾಂಗದ ಒಂದು ಪ್ರತ್ಯೇಕವಾದ ಭಾಷಾಧ್ಯಯನ ನಡೆಯಬೇಕಾದ ಅಗತ್ಯವನ್ನೂ ಸಂಶೋಧಕರು ಎತ್ತಿ ಹೇಳಿದ್ದಾರೆ.
`ಗೋಸಾಯಿ’ ಪದದ ನಿಷ್ಪತ್ತಿಯನ್ನು ಬೇರೆ ಬೇರೆ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ಗೋಸಾಯಿ ಪದ `ಗ್ವಾಸರು’ ಎಂದರೆ ವೇಷ ಬದಲಿಸುವವರು ಪದದಿಂದ ಬಂದಿರುವುದೆಂದು ಹೇಳುತ್ತ, ಕಾಯಕದ ನೆಲೆಯಲ್ಲಿ ಗೋವುಗಳನ್ನು ಸಾಕಿಕೊಂಡು ಕೃಷಿ ಚಟುವಟಿಕೆ ನಡೆಸಿ, ಗೋಸಾಯಿಗಳಾದರೆಂದು ಹೇಳುತ್ತ, ಇಸ್ಲಾಂ ಆಡಳಿತಗಾರರ ಆಕ್ರಮಣ ಹಾಗೂ ಜನಾಂಗೀಕ ದಬ್ಬಾಳಿಕೆಯಿಂದ ಪಾರಾಗಲು ಘೋಷಾ ಧರಿಸಿ `ಗೋಸಾ’ಯಿಗಳಾಗಿರಬಹುದೆಂದೂ ಉಲ್ಲೇಖಿಸುತ್ತಾರೆ. ಹೀಗೆ ಜನಾಂಗವೊಂದರ ಹೆಸರಿನ ನಿಷ್ಪತ್ತಿಯನ್ನು ಹಲವು ನೆಲೆಗಳಲ್ಲಿ ಡಾ. ನರೋಡೆಯವರು ಗುರುತಿಸುತ್ತಾರೆ.
ಕನರ್ಾಟಕದ `ಕ್ಷತ್ರಿಯ’ ಜನ ಸಮುದಾಯ ಹಲವಾರು ಜನಾಂಗದ ಒಂದು ಮೊತ್ತವಾಗಿ ಹೊರಹೊಮ್ಮುತ್ತಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಈ ಬಗೆಯ ಜನಾಂಗಗಳನ್ನು ಒಂದೇ ಕ್ಷತ್ರಿಯ ಛತ್ರದಡಿಯಲ್ಲಿ ತರುವ ಪ್ರಯತ್ನಗಳು ಈ ಶತಮಾನದ ಆರಂಭದಲ್ಲಿ ನಡೆದಿವೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಈ ಬಗೆಯ ಎರಡು ಬೃಹತ್ ಸಮಾಗಮಗಳು ಜರುಗಿವೆ. ಗೋಸಾಯಿಗಳು ಕ್ಷತ್ರಿಯ ಜನಾಂಗಕ್ಕೆ ಸೇರಿದವರೆಂಬ ನಿರೂಪಣೆಯನ್ನು ಡಾ. ನರೋಡೆ ಅವರು ಒದಗಿಸುತ್ತಾರೆ. ಛತ್ರಪತಿ ಶಿವಾಜಿಯು ಸೈನ್ಯ ಕಟ್ಟುವಾಗ ಈ ಬುಡಕಟ್ಟಿನ ಜನರನ್ನೇ ಬಳಸಿಕೊಂಡು ಬಲಿಷ್ಠವಾದ ಸೈನ್ಯ ರೂಪಿಸಿದ. ಕೂಟ ಯುದ್ಧದಲ್ಲಿ ಪರಿಣತಿ ಪಡೆದ ಬಲಿಷ್ಠ ಸೈನಿಕರಿಂದಲೇ ಶಿವಾಜಿಯು ಔರಂಗಜೇಬನಿಗೆ ಚಳ್ಳೆಹಣ್ಣು ತಿನ್ನಿಸಿದ ಎಂಬ ಸಂಗತಿಯನ್ನು ದಾಖಲಿಸುತ್ತ ಶಿವಾಜಿಯ ಸೈನ್ಯದಲ್ಲಿ `ಗೋಸಾಯಿ’ಗಳು ಕೆಲವು ಉನ್ನತ ಹುದ್ದೆಗಳಲ್ಲಿದ್ದರೆಂದು ದಾಖಲಿಸುತ್ತಾರೆ.
ಆಚರಣೆಗಳ ಹಿಂದಿನ ವಾಸ್ತವಿಕತೆ:
`ಗೋಸಾಯಿ ಜನಾಂಗದ ಕೌಟುಂಬಿಕ ವ್ಯವಸ್ಥೆ’ ಯನ್ನು ವಿವರಿಸುವ ಎರಡನೆಯ ಅಧ್ಯಾಯವು ಗೋಸಾಯಿಗಳ ವಿಶಿಷ್ಟ ಪದ್ಧತಿ, ನಂಬುಗೆ, ಆಚರಣೆಗಳನ್ನು ದಾಖಲಿಸುತ್ತದೆ. ಹಲವು ಆಚರಣೆಗಳ ಶೋಧದಿಂದ ರೂಪಿತವಾಗುವ ಜನಾಂಗವೊಂದರ ಪರಿಚಯ ಬೇರೆ ಜನಾಂಗದಿಂದ ಹೇಗೆ ವಿಶಿಷ್ಟವಾಗುತ್ತದೆ ಎಂಬುದನ್ನು ಇಲ್ಲಿ ಕಾಣಬಹುದು. ಗೋಸಾಯಿಗಳ ಆಚರಣೆಗಳು ವಿಶಿಷ್ಟವಾಗಿವೆ. ಹುಟ್ಟು, ಸಾವು, ಮದುವೆ, ನಾಮಕರಣ ಹೀಗೆ ಕೌಟುಂಬಿಕವಾಧ ಸಂದರ್ಭಗಳಲ್ಲಿ ನಂಬಿಕೊಂಡು ಬಂದ ಪದ್ಧತಿ, ಆಚರಣೆ, ಸಂಪ್ರದಾಯಗಳ ವಿವರಣೆಯನ್ನು ತುಂಬಾ ವ್ಯಾಪಕವಾಗಿ ಡಾ. ನರೋಡೆಯವರು ಗುರುತಿಸಿ ಸುಲಭವಾಗಿ ವಿವರಿಸಿದ್ದಾರೆ. ಸಿತಳಾ ಭವಾನಿ ಪೂಜೆ, ಷಟವಿ ಪೂಜೆ ಮುಂತಾದ ಆರಾಧನಾ ವಿಧಗಳನ್ನು ಆಚರಣೆಗಳ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ. ಹೀಗೆ ನಿರೂಪಿಸುವಲ್ಲಿ ಗೋಸಾಯಿಗಳ ನಂಬಿಕೆ ಹಾಗೂ ಅವುಗಳ ವೈಜ್ಞಾನಿಕ ಕಾರಣವನ್ನೂ ನೀಡುವುದರಿಂದ ಆಚರಣೆಗಳ ಹಿಂದಿನ ವಾಸ್ತವಿಕತೆ ಸ್ಪಷ್ಟವಾಗುತ್ತದೆ. ನಂಬಿಕೆ, ಆಚರಣೆಗಳ ವಿವರಣೆಯೊಂದಿಗೆ ಅವುಗಳು ಸ್ತ್ರೀ ಸಮುದಾಯದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ವಿಶ್ಲೇಷಿಸುತ್ತಾರೆ. ಸ್ತ್ರೀ ಶೋಷಣೆ, ಪುರುಷ ಪರವಾದ ಆಚರಣೆಗಳನ್ನು ವಿವರಿಸುವಾಗ ಸ್ತ್ರೀ ಪರವಾದ ನಿಲುವು ತಾಳುತ್ತಾರೆ. ತಪ್ಪು ಮಾಡಿದ ಪುರುಷ ಸಮಾಜದ ಕ್ಷಮೆ ಕೇಳಿದರೆ, ತನ್ನ ಅಪರಾಧ ಮನ್ನಿಸಲು ಪ್ರಾಥರ್ಿಸಿದರೆ ಸಮಾಜ ಮುಖಂಡರಿಗೆ ತಪ್ಪು ದಂಡಕೊಟ್ಟು ಓಲೈಸಿದರೆ ಆತ ನಿರಪರಾಧಿಯಾಗಿ ಸಮಾಜದಲ್ಲಿ ತಲೆ ಎತ್ತಿ ನಡೆಯಬಹುದು. ಆದರೆ ಶೋಷಿತಳಾದ, ಅವಮಾನಿತಳಾದ ಹೆಣ್ಣು ಮೂಲೆ ಸೇರಬೇಕಾದುದು ದುರಂತ ಎಂದು ಹೇಳುವ ಮೂಲಕ ಪ್ರತಿ ಜನಾಂಗದಲ್ಲೂ ಈ ಬಗೆಯ ಸ್ತ್ರೀ ಶೋಷಣಾ ಪರವಾದ ನಿಲುವುಗಳಿರುವುದನ್ನು ಉಲ್ಲೇಖಿಸುತ್ತಾ ಡಾ. ನರೋಡೆಯವರು ಖಂಡಿಸಿ, ತಮ್ಮೊಳಗಿನ ಬಂಡಾಯ ಮನೋಭಾವವನ್ನು ಅಧ್ಯಯನದ ಜೊತೆ ಸಮ್ಮಿಳಿತಗೊಳಿಸಿದ್ದಾರೆ. ಈ ಅಧ್ಯಾಯದಲ್ಲಿ ಗೋಸಾಯಿಗಳ ಮದುವೆ, ಬಹು ಪತ್ನಿತ್ವ, ವಿಧವಾ ವಿವಾಹ, ಮಹಿಳೆಯರ ಪಾತ್ರ, ಮುಟ್ಟು-ಸೂತಕ, ಕುಬಸ, ಬಾಣಂತನ, ನಾಮಕರಣ… ಹೀಗೆ ಬಹು ವಿಧದ ಆಚರಣೆಗಳನ್ನೂ ವಿವರಿಸಿದ್ದಾರೆ. ಗೋಸಾಯಿಗಳ ಕೌಟುಂಬಿಕ ಚಿತ್ರಣವನ್ನು ಕಟ್ಟಿಕೊಡುವ ಈ ಅಧ್ಯಾಯ ಅಧ್ಯಯನದ ಮುಖ್ಯ ಘಟ್ಟವಾಗಿದೆ.
ಗೋಸಾಯಿಗಳ ಧಾಮರ್ಿಕ ಚಟುವಟಿಕೆಗಳನ್ನು ವಿವರಿಸುವ ಮೂರನೆಯ ಅಧ್ಯಾಯವು ಹಬ್ಬ ಹರಿದಿನಗಳಲ್ಲಿ ಕಂಡು ಬರುವ ಆಚರಣೆಗಳ ಚಿತ್ರಣ ನೀಡುತ್ತದೆ. ಗೋಸಾಯಿಗಳು ಶಿಷ್ಟ ಮತ್ತು ದೇಸೀ ದೈವಗಳ ಆರಾಧಕರೆಂಬುದನ್ನು ವಿವರಿಸುತ್ತಾರೆ. ಜಾತ್ರೆ, ಉತ್ಸವ, ಆಚರಣೆಗಳ ಸಂದರ್ಭದಲ್ಲಿ ಅವರ ಆಹಾರ ಪದ್ಧತಿಯನ್ನೂ, ಉಡುಗೆ ತೊಡುಗೆ ವಿಧಗಳನ್ನೂ ಪರಸ್ಪರ ಪ್ರೀತಿ, ಗೌರವ, ಬಾಂಧವ್ಯದ ಸಂದರ್ಭಗಳನ್ನು ಡಾ.ನರೋಡೆಯವರು ಇಲ್ಲಿ ಅಭ್ಯಾಸಪೂರ್ಣವಾಗಿ ನಿರೂಪಿಸಿದ್ದಾರೆ. ಆಚರಣೆಗಳಿಂದ ಸಮುದಾಯದಲ್ಲಿ ಮೂಡುವ ಒಗ್ಗಟ್ಟು ಹಾಗೂ ಪರಂಪರೆಯ ಮುಂದುವರಿಕೆಗೆ ಸಾಧ್ಯವಾಗುವ ಸಂದರ್ಭಗಳನ್ನೂ ವಿವರಿಸಿದ್ದಾರೆ. ಗೋಸಾಯಿಗಳು ಸ್ತ್ರೀಪರವಾದ, ಶಕ್ತಿ ದೇವತೆಗಳ ಆರಾಧಕರೆಂಬುದನ್ನು ಎಲ್ಲ ಹಬ್ಬ ಹರಿದಿನ ಆಚರಣೆಗಳ ಮೂಲಕ ಸಾಧಿಸುತ್ತಾರೆ. ತುಳಜಾ ಭವಾನಿ, ಅಂಬಾ ಭವಾನಿ, ಕೊಲ್ಲಾಪುರದ ಮಹಾಲಕ್ಷ್ಮಿ, ಸವದತ್ತಿ ಎಲ್ಲಮ್ಮ ಹೀಗೆ ಶಕ್ತಿ ದೇವತೆಗಳ ಆರಾಧಕರಾಗಿ ಬೆಳೆದುಕೊಂಡು ಬಂದ ಜನಾಂಗದ ಚರಿತ್ರೆಯನ್ನು ಡಾ. ನರೋಡೆಯವರು ಬಿಚ್ಚಿಡುತ್ತಾರೆ.
ದೇವರು, ದೆವ್ವ, ಮಾಟ, ಮಂತ್ರಗಳಲ್ಲಿ ಈ ಜನಾಂಗ ನಂಬಿಕೊಂಡು ಬಂದ ಸತ್ಯವನ್ನು ಕೌತುಕುವಾಗಿ ನಿರೂಪಿಸುತ್ತಾರೆ. ಆಧುನಿಕ ಕಾಲದ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯ ಹಿನ್ನೆಲೆಯಲ್ಲಿಯೂ ದೇಸೀ ಪದ್ಧತಿಯ ಆರೋಗ್ಯಾಚಾರಣೆಗಳು, ದೈವಾರಾಧನೆಯ ಹಿನ್ನೆಲೆಯಲ್ಲಿ ಉಳಿಸಿಕೊಂಡು ಬಂದ ಪರಿಯನ್ನು ಡಾ. ನರೋಡೆ ಯವರು ವಿವರಿಸುತ್ತಾ ಪ್ರತಿಯೊಂದು ಕಾರ್ಯವನ್ನು ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಆರಂಭಿಸುವುದನ್ನೂ ಉಲ್ಲೇಖಿಸುತ್ತಾರೆ. ಈ ಅಧ್ಯಾಯವು ಗೋಸಾಯಿಗಳ ಹಬ್ಬದಾಚರಣೆಗಳ ವೈಶಿಷ್ಟ್ಯಕ್ಕೆ ಪೂರಕವಾಗಿದೆ.
ವ್ಯವಸ್ಥೆಯ ದಾರುಣತೆ:
ಗೋಸಾಯಿ ಜನಾಂಗದ ಸಾಮಾಜಿಕ, ಆಥರ್ಿಕ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ನಾಲ್ಕನೆಯ ಅಧ್ಯಾಯವು ಗೋಸಾಯಿಗಳ ಸ್ಥಿತಿಗತಿ, ಶಿಕ್ಷಣ, ವೃತ್ತಿ, ಆಹಾರ, ಉಡುಗೆ-ತೊಡುಗೆ ಮೊದಲಾದ ಚಿತ್ರಣವನ್ನು ನೀಡುತ್ತದೆ. ಹೀಗೆ ಅಪ್ರತಿಷ್ಠಿತ ಜನಾಂಗವೊಂದರ ಬದುಕಿನ ಚಿತ್ರಣ ನೀಡುವಾಗ ಅಲ್ಲಿನ ವ್ಯವಸ್ಥೆಯ ದಾರುಣತೆಯನ್ನು ಕಟ್ಟಿಕೊಡುತ್ತಾರೆ. ಗೋಸಾಯಿಗಳು ಹೆಚ್ಚು ವಾಸಿಸುವ ಧಾರವಾಡೆದ `ಲಕ್ಷ್ಮೀ ಸಿಂಗನಕೇರಿ’ಯ ದುಸ್ಥಿತಿಯನ್ನು ನಿರೂಪಿಸುವಲ್ಲಿ ಲೇಖಕರೊಳಗಿನ ಪತ್ರಿಕಾಕರ್ತ ಜಾಗೃತನಾಗುತ್ತಾನೆ. ಡಾ. ನರೋಡೆ ಅವರ ಸಾಲುಗಳಲ್ಲಿಯೇ ಅಲ್ಲಿನ ಚಿತ್ರಣ ಹೀಗೆ ವಿವರಿಸಬಹುದು- “ಗೋಸಾಯಿ ಕೇರಿಗೆ ರಸ್ತೆಯಿಲ್ಲ, ಗಲ್ಲಿ ಗಲ್ಲಿಗಳಲ್ಲಿ ಗಟಾರುಗಳಿಲ್ಲ. ಮಳೆಯಾದರೆ ಕೇರಿಯಲ್ಲಿ ರಾಡಿ ನೀರು ಹೊಂಡವಾಗಿ ಬಿಡುತ್ತದೆ. ರಸ್ತೆಯಲ್ಲಿ ಗಟಾರವೊ, ಗಟಾರದಲ್ಲಿ ರಸ್ತೆಯೋ ಗೊತ್ತಾಗುವುದಿಲ್ಲ. ಬೇಸಿಗೆಯಲ್ಲಿ ಹುಡಿ ಹಾರುವ ಧೂಳು, ಧೂಳಿನಲ್ಲಿಯೇ ಇವರ ಬಾಳು ಕಳೆಯುತ್ತದೆ. ರಸ್ತೆ, ವಿದ್ಯುತ್, ನೀರು, ಗಟಾರಗಳಿಲ್ಲದ, ಮೂಲಭೂತ ಸೌಕರ್ಯಗಳಿಲ್ಲದ, ಈ ಕೇರಿಗಳಲ್ಲೀಗ ಸಾರ್ವಜನಿಕ ಶೌಚಾಲಯಗಳು, ಸಾರ್ವಜನಿಕ ಗ್ರಂಥಾಲಯ, ಆರೋಗ್ಯ ಸಮುದಾಯ, ಮಹಿಳಾ ಸೌಲಭ್ಯಗಳು ಇತ್ಯಾದಿಗಳು ಕನಸಿನ ಮಾತೇ ಆಗಿವೆ” ಎಂಬಲ್ಲಿ ಗೋಸಾಯಿಗಳ ನಿಕೃಷ್ಟ ಬದುಕಿಗೆ ಆಡಳಿತ ವ್ಯವಸ್ಥೆಯು ಕಾರಣವಾಗಿರುವುದನ್ನು ಡಾ. ನರೋಡೆಯವರು ತುಂಬಾ ರೋಷ ಮತ್ತು ವಿಷಾದದಿಂದ ದಾಖಲಿಸುತ್ತಾರೆ. ಊರ ತುಂಬ ತಿರುಗಿ, ಗುಜರಿ ಆಯ್ದು ಊರ ಸ್ವಚ್ಛತೆಗೆ ಪರ್ಯಾಯವಾಗಿ ಕಾರಣರಾಗುವ ಈ ಜನಾಂಗದ ಬೀದಿಗಳು ಅವ್ಯವಸ್ಥೆಗೆ ಕಾರಣವಾಗಿರಲು ಶಿಕ್ಷಣ ವಂಚಿತ ಅವಕಾಶಗಳೂ ಒಂದು ಕಾರಣ ಎಂಬುದನ್ನು ವಿವರಿಸುತ್ತಾರೆ. ಈ ಜನಾಂಗದ ಒಟ್ಟು ಅಭಿವೃದ್ಧಿಗಾಗಿ ಬುಡಕಟ್ಟು ಜನಾಂಗಕ್ಕೆ ಧ್ವನಿಯಾಧ ಡಾ. ಸುದರ್ಶನರಂಥವರ ಅಗತ್ಯ ತುಂಬಾ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಈ ಕೃತಿಯ ಕೊನೆಯ ಅಧ್ಯಾಯ `ಗೋಸಾಯಿ ಜನಾಂಗದ ಅಭಿವೃದ್ಧಿಗೆ ಹೊಸ ಕಾಯಕಲ್ಪ’ ಶಿಷರ್ಿಕೆಯಡಿಯಲ್ಲಿ ಒಟ್ಟು ಅಧ್ಯಯನದ ಫಲಿತಗಳ ಹಿನ್ನೆಲೆಯಲ್ಲಿ ಯೋಜಿಸಬೇಕಾದ ಒಟ್ಟು ಅಧ್ಯಯನದ ದಿಕ್ಸೂಚಿ ಇದೆ. ತುಂಬಾ ಹಿಂದುಳಿದ, ಶೈಕ್ಷಣಿಕವಾಗಿ, ಆಥರ್ಿಕವಾಗಿ ದುರ್ಬಲರಾಗಿರುವ ಈ ಜನಾಂಗದ ಸಕಲ ಅಭಿವೃದ್ಧಿಗಾಗಿ ಇರುವ ಆಡಳಿತದ ಯೋಜನೆಗಳು ತುಂಬಾ ಪ್ರಾಮಾಣಿಕವಾಗಿ ಜಾರಿಗೆ ಬರಬೇಕಾಗಿದೆ ಎಂಬುದನ್ನು ಡಾ. ನರೋಡೆಯವರು ಸೂಚಿಸುವ ಮೂಲಕ ವ್ಯವಸ್ಥೆಯನ್ನು ಎಚ್ಚರಿಸುತ್ತಾರೆ.

ಬುಧವಾರ, ಡಿಸೆಂಬರ್ 5, 2012

ತಲಾಶ್‌: ಆಮಿರ್‌ನ ಹೊಸ ಹುಡುಕಾಟ - ಮುಸಾಫಿರ್‌


ಆಮಿರ್‌ಖಾನ್‌ನನ್ನು ಯಾರೋ ಬ್ಲಾಕ್ ಮೇಲ್ ಮಾಡಿದ್ದಾರೆಂಬ ವದಂತಿ. ‘‘ಒಂದು ಕೋಟಿ ನೀಡದಿದ್ದರೆ ತಲಾಶ್ ಚಿತ್ರದ ಸಸ್ಪೆನ್ಸ್ ಏನು ಎನ್ನುವುದನ್ನು ಫೇಸ್‌ಬುಕ್‌ನಲ್ಲಿ ಹಾಕಿ ಬಿಡ್ತೇನೆ’’ ಎಂಬ ಬ್ಲಾಕ್‌ಮೇಲ್‌ಗೆ ತಕ್ಷಣ ಮಣಿದ ಆಮಿರ್, ಒಂದು ಕೋಟಿ ನೀಡಿದ್ದಾನೆನ್ನುವುದು ಇನ್ನೊಂದು ವದಂತಿ. ಯಾಕೆಂದರೆ ಒಂದು ಕೋಟಿಗೆ ಆಸೆಪಟ್ಟು ನೂರು ಕೋಟಿ ವೇಸ್ಟ್ ಆಗಬಾರದಲ್ಲ. ಸಾಧಾರಣವಾಗಿ ಸಸ್ಪೆನ್ಸ್ ಚಿತ್ರದ ಮಿತಿಯೂ, ಅದರ ಧನಾತ್ಮಕ ಅಂಶವೂ ಅದರ ಕ್ಲೈಮಾಕ್ಸ್ ಆಗಿರುತ್ತದೆ. ಒಂದು ವೇಳೆ ಕ್ಲೈಮಾಕ್ಸ್‌ನಲ್ಲಿ ನಿಜವಾದ ಖಳ ಯಾರು ಎನ್ನುವುದು ಬಯಲಾಗಿ ಬಿಟ್ಟರೆ, ಇಡೀ ಚಿತ್ರ ಅತ್ಯಂತ ಬಾಲಿಶವಾಗಿ ಕಾಣ ತೊಡಗುತ್ತದೆ. ಈ ಕಾರಣಕ್ಕೆ ಇರಬೇಕು, ‘‘ದಯವಿಟ್ಟು ಸಸ್ಪೆನ್ಸ್‌ನ್ನು ಬಹಿರಂಗಪಡಿಸಬೇಡಿ’’ ಎಂದು ಆಮಿರ್‌ಖಾನ್ ಪತ್ರಿಕೆಗಳಲ್ಲಿ ಮನವಿ ಮಾಡಿರೋದು.ಅದೇನೇ ಇರಲಿ. ಸಾಧಾರಣವಾಗಿ ಒಂದು ಸಸ್ಪೆನ್ಸ್‌ನ್ನು ಬೆಳೆಸುತ್ತಾ ಹೋಗುವುದರಲ್ಲಿ ಕತೆಗಾರನ, ನಿರ್ದೇಶಕನ ಕಲೆಗಾರಿಕೆಯಿರುತ್ತದೆ. ರೀಮಾ ಕಡ್ಕಿಯವರ ತಲಾಶ್ ನಮಗೆ ಇಷ್ಟವಾಗುವುದು ಬರೇ ಸಸ್ಪೆನ್ಸ್ ಕಾರಣದಿಂದಲ್ಲ.
ಒಂದು ವಿಭಿನ್ನ ಮನಸ್ಥಿತಿಯ ನಾಯಕನನ್ನು ಕಟ್ಟಿಕೊಟ್ಟ ರೀತಿಗೂ ನಾವು ನೀರ್ದೇಶಕಿಯನ್ನು ಅಭಿನಂದಿಸಬೇಕಾಗಿದೆ. ಒಂದು ಘಟನೆಯ ಹಿಂದೆ ಸಾಗುವ ನಾಯಕ, ಆ ಘಟನೆ ಬೇರೆ ಬೇರೆ ಜನರ ಕಣ್ಣಲ್ಲಿ ಬೆಳೆಯುವ ರೀತಿ ಅದರ ಜೊತೆ ಜೊತೆಗೂ ನಾಯಕನ ವ್ಯಕ್ತಿತ್ವ ಅನಾವರಣಗೊಳ್ಳುವ ಪರಿ ಒಟ್ಟು ತಲಾಶ್‌ನ ಹೆಗ್ಗಳಿಕೆ. ಆ ನಿಟ್ಟಿನಲ್ಲಿ ಚಿತ್ರ ಯಶಸ್ವಿಯಾಗಿದೆಯೆಂದೇ ಹೇಳಬೇಕು. ಒಂದು ರೀತಿಯಲ್ಲಿ ಕಹಾನಿಯಂತೆಯೇ ಈ ಚಿತ್ರವೂ ಬೆಳೆಯುತ್ತದೆ. ಅಲ್ಲಿ ಕೊಲ್ಕತಾ ಮುಖ್ಯ ವಸ್ತುವಾದರೆ ಇಲ್ಲಿ ಮುಂಬೈ ರಾತ್ರಿಗಳು ಮುಖ್ಯ ಪಾತ್ರವಹಿಸುತ್ತದೆ.
ಮುಂಬೈ ರಾತ್ರಿಯ ಬಾರ್‌ಗಳು, ವೇಶ್ಯೆಯರು, ಪಿಂಪ್‌ಗಳು, ಕಳ್ಳಕೊರಮರು ಕೂಡ ಕತೆಯ ನೆಯ್ಗೆಯಲ್ಲಿ ಮುಖ್ಯವೆನಿಸುತ್ತಾರೆ. ಸಸ್ಪೆನ್ಸ್ ಸ್ಫೋಟಗೊಳ್ಳುವುದಕ್ಕೆ ಇವರದೆಲ್ಲ ಕಾಣ್ಕೆಗಳು ತನ್ನದೇ ಆದ ರೀತಿಯಲ್ಲಿವೆ. ಕತೆ ನಾಯಕ ಕೇಂದ್ರಿತವಾಗಿದೆ. ಆತನ ಅನ್ವೇಶನ್ ಬರೇ ಹೊರಗಡೆಯದು ಮಾತ್ರವಲ್ಲ. ಒಳಗಡೆಯದ್ದು ಕೂಡ. ಆದುದರಿಂದಲೇ ಚಿತ್ರ ಜನಪ್ರಿಯ ಮಾದರಿಯಲ್ಲಿಲ್ಲದೆ ಕಲಾತ್ಮಕವಾಗಿದೆ. ಕರೀನಾ ಕಪೂರ್ ತನಗೆ ಸಿಕ್ಕಿದ ವೇಶ್ಯೆಯ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ.
‘ಹಿರೋಯಿನ್’ ಚಿತ್ರಕ್ಕಿಂತಲೂ ತೀಕ್ಷ್ಣವಾಗಿ ಕಾಣಿಸುತ್ತಾರೆ ತಲಾಶ್‌ನಲ್ಲಿ. ಹಾಗೆಯೇ ನವಾಜುದ್ದೀನ್ ಸಿದ್ದೀಕಿಯ ಪಾತ್ರವೂ ನಮ್ಮೆದೆಯನ್ನು ನಾಟುತ್ತದೆ. ಆಮಿರ್ ಖಾನ್ ಅಂತೂ ತಮ್ಮ ಪಾತ್ರಕ್ಕೆ ಭಾರೀ ಕೊಡುಗೆಯನ್ನು ನೀಡಿದ್ದಾರೆ. ಇದು ಮಾಮೂಲಿ ಪೊಲೀಸ್ಆಫೀಸರ್ ಪಾತ್ರವಲ್ಲ. ಅವನೊಳಗೊಂದು ವ್ಯಕ್ತಿತ್ವವಿದೆ. ಅದನ್ನು ಚೆನ್ನಾಗಿಯೇ ಆವಾಹಿಸಿಕೊಂಡಿದ್ದಾರೆ ಆಮಿರ್. ಇಡೀ ಪಾತ್ರದ ಹುಡುಕಾಟಕ್ಕೆ ಪೂರಕವಾದ, ವ್ಯಕ್ತಿತ್ವ ಅದು. ಆತನ ಪತ್ನಿಯ ಪಾತ್ರದಲ್ಲಿ ರಾಣಿ ಮುಖರ್ಜಿ ಸಹನೆಯಿಂದ ನಟಿಸಿದ್ದಾರೆ. ಪಾತ್ರದ ಗಾಂಭೀರ್ಯಕ್ಕೆ ಒಪ್ಪುವಂತಿದೆ ಅವರ ವ್ಯಕ್ತಿತ್ವ.ರಾಮ್ ಸಂಪತ್ ಸಂಗೀತ ಚೆನ್ನಾಗಿದೆ.
ಮುಸ್ಕಾನೇನ್ ಝೂಟಿ ಮತ್ತು ಜಿಯ ಲಗೆ ನಾ...ಹಾಡು ನಮ್ಮ ಆಳದಲ್ಲಿ ಚಿತ್ರ ಮುಗಿದ ಮೇಲೂ ಜಿನುಗುತ್ತಿರುತ್ತವೆ. ಫರ್ಹಾನ್ ಅಖ್ತರ್ ಅವರ ಸಂಭಾಷಣೆಯಂತೂ ಖಡ್ಗದ ಅಲಗಿನಂತಿದೆ. ತಲಾಶ್ ಒಮ್ಮೆ ನೋಡಬಹುದಾದ, ನೋಡಲೇ ಬೇಕಾದ ಚಿತ್ರ. ಘಜನಿಯ ಹುಡುಕಾಟಕ್ಕೂ ತಲಾಶ್‌ನ ಹುಡುಕಾಟಕ್ಕೂ ಬಹುದೊಡ್ಡ ವ್ಯತ್ಯಾಸವಿದೆ. ಅದನ್ನು ಚಿತ್ರ ನೋಡುವ ಮೂಲಕವೇ ನೀವು ನಿಮ್ಮದಾಗಿಸಿಕೊಳ್ಳಬೇಕು.

ಮುರ್ಡೇಶ್ವರ ಕಡಲ ಕಿನಾರೆಯಲ್ಲಿ ಗಮನ ಸೆಳೆದ ಗೌಳಿ ನೃತ್ಯ -- ರಝಾ ಮಾನ್ವಿ


ಶಿಸುವ ಅಂಚಿನಲ್ಲಿರುವ ಜಾನಪದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹೋರಾ ಸಂಸ್ಥೆಯ ಸಂಸ್ಕೃತಿ ಸಿಂಚನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲಾದ್ಯಂತ ಅದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜಾನಪದ ಕಲೆಯ ರಕ್ಷಣೆ ಮಾಡುತ್ತಿದೆ. ಪ್ರಸ್ತುತ ದಿನಮಾನದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಒಂದು ಪ್ರಮುಖ ಆದಾಯ ಮೂಲವಾಗಿ ಹೊರಹೊಮ್ಮುತ್ತಿದ್ದು, ಇದಕ್ಕೆ ಉತ್ತರ ಕನ್ನಡ ಜಿಲ್ಲೆಯೂ ಹೊರತಾಗಿಲ್ಲ. ಜಿಲ್ಲೆಯ ನಿಸರ್ಗ-ಕಲೆ-ಸಂಸ್ಕೃತಿಗಳು ದಿನದಿಂದ ದಿನಕ್ಕೆ ಹೆಚ್ಚು-ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಿಸರ್ಗ ಆಧಾರಿತ (EcoTourism) ಪ್ರವಾಸೋದ್ಯಮದಲ್ಲಿ ಹೆಚ್ಚಿನ ಆಕರ್ಷಣೆ ಹೊಂದಿರುವ ಜಿಲ್ಲೆಯ ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಹಾಗೂ ಇಲ್ಲಿನ ಜಾನಪದ ಕಲೆ-ಸಂಸ್ಕೃತಿ ಉಳಿಯಬೇಕು ಜೊತೆಯಲ್ಲಿ ಇವೆಲ್ಲವೂ ಸ್ಥಳೀಯರಿಗೆ ಒಂದು ಆದಾಯ ಮೂಲವಾಗಬೇಕು ಎಂಬ ಉದ್ದೇಶದೊಂದಿಗೆ ಹೋರಾಟ ಸಂಸ್ಥೆಯು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಸಂಸ್ಕೃತಿ ಸಿಂಚನ ಯೋಜನೆಯನ್ನು ಕಳೆದ 4ವರ್ಷಗಳಿಂದ ಜಿಲ್ಲಾದ್ಯಂತ ಅನುಷ್ಠಾನಗೊಳಿಸುತ್ತಿದೆ.
ಈ ಯೋಜನೆಯ ಒಂದು ಭಾಗವಾದ ವಿನಾಶದ ಅಂಚಿನಲ್ಲಿರುವ ಜಾನಪದ ಕಲೆಗಳ ಉಳಿವಿಗಾಗಿ ಹಾಗೂ ಅವುಗಳ ಕುರಿತು ಪ್ರವಾಸಿಗರಿಗೆ ಜಾಗೃತಿ ನೀಡುವ ಕುರಿತಾಗಿ ಸಂಸ್ಥೆಯು ಜಾನಪದ ಕಲೆಗಳ ಪ್ರದರ್ಶನವನ್ನು ಪ್ರವಾಸಿ ತಾಣಗಳಲ್ಲಿ ಪ್ರದರ್ಶಿಸುತ್ತಾ ಬಂದಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಸಿದ್ಧ ಸುಂದರ ತಾಣಗಳಲ್ಲಿ ಒಂದಾದ ಮುರ್ಡೇಶ್ವರದ ಕಡಲ ಕಿನಾರೆಯಲ್ಲಿ ಜಿಲ್ಲೆಯ ಹೆಮ್ಮೆಯ ಕಲಾಪ್ರಕಾರಗಳಾದ ಗೌಳಿ ನೃತ್ಯ-ಮರಕಾಲು ಕೋಲಾಟ ಹಾಗೂ ಅಪರೂಪದ ಕೊಳಲಾಟದ ಪ್ರದರ್ಶನವನ್ನು ಸ್ಥಳೀಯ ಲಯನ್ಸ್ ಕ್ಲಬ್ ಮುರ್ಡೇಶ್ವರ, ಶ್ರೀ ಮಾತೋಬಾರ ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಗ್ರಾ.ಪಂ. ಮುರ್ಡೇಶ್ವರ ಹಾಗೂ ಶಬರ ಸಂಸ್ಥೆ ಇವುಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಜನರು ಜನಪದಲೋಕದ ವಿರಾಟ್ ದರ್ಶನ ಮಾಡಿದರು.
ಸಿದ್ದಾಪುರದ ಮಾಳಗಿಮನೆಯ ಮರಕಾಲು ಕೋಲಾಟ, ಯಲ್ಲಾಪುರದ ಗೌಳಿವಾಡದ ಗೌಳಿ ತಂಡದವರ ಗೌಳಿ ನೃತ್ಯ ಹಾಗೂ ಶಿರಸಿಯ ಜಡ್ಡಿಗದ್ದೆಯ ಕೊಳಲಾಟವನ್ನು ನೆರೆದ ಪ್ರವಾಸಿಗರು ವೀಕ್ಷಿಸಿ ಸಂಭ್ರಮಿಸಿದರು. ಲಯನ್ಸ್ ಕ್ಲಬ್ ಮುರ್ಡೇಶ್ವರದ ಅಧ್ಯಕ್ಷ ಮಂಜುನಾಥ ದೇವಾಡಿಗ ಹಾಗೂ ಸದಸ್ಯರು, ಗ್ರಾ.ಪಂ.ಮುರ್ಡೇಶ್ವರದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಶಿಸುತ್ತಿರುವ ಕಲೆ ಕೊಳಲಾಟವನ್ನು ಪ್ರದರ್ಶಿಸಿದ ಸರ್ವೇ ಗೌಡ ಹಾಗೂ ತಿಮ್ಮೇಗೌಡರನ್ನು ಲಯನ್ಸ್ ಕ್ಲಬ್‌ನ ಸದಸ್ಯರುಗಳು ಶಾಲು ಹೊದಿಸಿ ಸನ್ಮಾನಿಸಿದರು. ಶಬರ ಸಂಸ್ಥೆಯ ನಾಗರಾಜ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಲಯನ್ಸ್‌ ಕ್ಲಬ್ ಮುರ್ಡೇಶ್ವರದ ಎಮ್.ವಿ.ಹೆಗಡೆಯವರು ಸ್ವಾಗತ ಕೋರಿದರು. ಹೋರಾಟ ಸಂಸ್ಥೆಯ ಮುಖ್ಯಸ್ಥ ಸುಹಾಸ್ ಪ್ರಾಸ್ತಾವಿಕ ಮಾತನಾಡಿದರು.


ಬುಧವಾರ, ನವೆಂಬರ್ 28, 2012

ರಂಗಸ್ಥಳ ---- ಉಷಾ ಕಟ್ಟೆಮನೆ

ಮುರಳಿಯ ಮೋಹನ ಗಾನವದೆಲ್ಲಿ?

ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಗೀತ ನಾಟಕಗಳ ಪ್ರಯೋಗ ಆಗಿದ್ದು ಕಡಿಮೆ. ಅದರ ಪ್ರಯೋಗಕ್ಕೆ ಬೇಕಾದ ಅಗತ್ಯಗಳು ಬೇರೆಯೇ ತೆರನಾಗಿರುವುದು ಅದಕ್ಕೆ ಕಾರಣ.
ಗೀತ ನಾಟಕವೆಂದರೆ ಗೀತೆಗಳಿಂದಲೇ ಕ್ರಿಯೆಯು ನಡೆಯುವ ನಾಟಕ. ಇಲ್ಲಿ ನಾಟಕೀಯ ಘಟನೆಗಳಿಗಿಂತ ಸಾಹಿತ್ಯ, ಕಾವ್ಯ ಮತ್ತು ಸಂಗೀತವೇ ಪ್ರಧಾನ ಪಾತ್ರ ವಹಿಸುತ್ತವೆ. ಹಾಗೂ ಇದರಲ್ಲಿ ಅಭಿನಯದ ಜತೆಗೆ ಸಂಗೀತ ಜ್ನಾನವೂ ಕಲಾವಿದರಿಗೆ ಅತ್ಯಗತ್ಯ. ಸ್ವಲ್ಪಮಟ್ಟಿನ ನೃತ್ಯದ ಅರಿವು ಕೂಡಾ. ನಿರ್ದೇಶಕನಿಗೆ ಇದೆಲ್ಲೆದರ ಮೇಳೈಸುವಿಕೆ ಸಾಧ್ಯವಾದರೆ ಆ ಪ್ರಯೋಗ ಯಶಸ್ವಿಯಾಗುತ್ತದೆ..
ತೆಲುಗು, ತಮಿಳು, ಬಂಗಾಲಿ ಭಾಷೆಗಳಲ್ಲಿ.ಗೀತ ನಾಟಕಗಳು ಇದ್ದರೂ ಕನ್ನಡದಲ್ಲಿ ಇವುಗಳ ಸಂಖ್ಯೆ ಜಾಸ್ತಿ. ಒಂದು ರೀತಿಯಲ್ಲಿ ಭಾರತೀಯ ಸಾಹಿತ್ಯ ಪರಂಪರೆಗೆ ಗೀತ ನಾಟಕಗಳು ಕನ್ನಡದ ವಿಶಿಷ್ಟ ಕೊಡುಗೆ ಎನ್ನಬಹುದು. ಪು.ತಿ.ನ ಎರಡೇ ಗೀತ ನಾಟಕಗಳನ್ನು ಬರೆದರೂ ಈ ಪ್ರಕಾರದಲ್ಲಿ ಅವರ ಹೆಸರು  ದೊಡ್ಡದು. ಮೇಲು ಕೋಟೆಯ ಈ ಕವಿ ಕೃಷ್ಣನ ಅನನ್ಯ ಭಕ್ತ. ಭಕ್ತಿ ಪರಂಪರೆಯ ಮುಂದುವರಿಕೆಯ ಭಾಗ ಇವರ ಕಾವ್ಯ ಸೃಷ್ಟಿ.
’ಗೋಕುಲ ನಿರ್ಗಮನ’ ೧೯೪೯ರಲ್ಲಿ ಪು.ತಿ.ನ ಬರೆದ ಎರಡನೆಯ ಗೀತ ನಾಟಕ. ’ಅಹಲ್ಯೆ’ ೧೯೪೧ ರಲ್ಲಿ ಪ್ರಕಟವಾಗಿತ್ತು.
ಬಾರತೀಯ ರಂಗಭೂಮಿ ಇತಿಹಾಸದಲ್ಲಿ ಕಾರಂತರದ್ದು ದೊಡ್ಡ ಹೆಸರು. ಅವರ ನಾಟಕಗಳಲ್ಲಿ ಸಂಗೀತವೇ ವಿಜೃಂಭಿಸುತ್ತದೆ. ಅದರಲ್ಲೂ ಜಾನಪದ ವಾದ್ಯ ಸಂಗೀತ ಮತ್ತು ಜಾನಪದ ಮಟ್ಟುಗಳು ಯಾವಾಗಲೂ ಮುನ್ನೆಲೆಯಲ್ಲಿ ಇರುತ್ತವೆ. ಹೊಸ ಹೊಸ ಪ್ರಯೋಗಗಳಿಗೆ ಅವರು ಸದಾ ಮುಂದಾಗುತ್ತಾರೆ. ಇಂತಹ ಕಾರಂತರು  ಪು.ತಿ,ನ. ರವರ ’ಗೋಕುಲ ನಿರ್ಗಮನ’ವನ್ನು ನೀನಾಸಂ ತಿರುಗಾಟಕ್ಕಾಗಿ ಹತ್ತು ವರುಷಗಳ ಹಿಂದೆ ನಿರ್ದೇಶಿಸಿದ್ದರು. ಆಗ ಅದು ಯಶಸ್ವಿಯಾಗಿ ನೂರೈವತ್ತಕ್ಕೂ ಹೆಚ್ಚಿನ ಪ್ರದರ್ಶನವನ್ನು ಕಂಡಿತ್ತು.
ಇದೇ ಕಾರಂತರು ಹುಟ್ಟು ಹಾಕಿದ್ದ ’ ಬೆನಕ’ ನಾಟಕ ತಂಡ ಈಗ ’ಗೋಕುಲ ನಿರ್ಗಮನ’ವನ್ನು ಮತ್ತೆ ರಂಗದ ಮೇಲೆ ತಂದಿದೆ. ಇದರ ನಿರ್ದೇಶಕರು ಟಿ.ಎಸ್.ನಾಗಾಭರಣ. ಈಗ ಸಿನೇಮಾ ಮತ್ತು ಕಿರುತೆರೆಯೆಡೆ ತಮ್ಮ ಗಮನವನ್ನು ಬಹು ಮಟ್ಟಿಗೆ ಕೇಂದ್ರೀಕರಿಸಿರುವ ನಾಗಾಭರಣ ಒಂದು ಕಾಲದಲ್ಲಿ ರಂಗಭೂಮಿಯಲ್ಲಿ ನಟರಾಗಿ, ನಿರ್ದೇಶಕರಾಗಿ ಹೆಸರು ಮಾಡಿದವರು.
ಹಲವಾರು ಪುನರ್ ಪ್ರದರ್ಶನಗಳನ್ನು ಕಂಡ ನಾಟಕವೊಂದನ್ನು ಇನ್ನೊಬ್ಬ ನಿರ್ದೇಶಕ ಕೈಗೆತ್ತಿಕೊಂಡಾಗ ಆತನ ಮುಂದಿರುವ ಸವಾಲು ಮತ್ತು ಜವಾಬ್ದಾರಿ ಹೆಚ್ಚು. ಅಲ್ಲಿ ಆತ ತನ್ನ ಸೃಜನಶೀಲತೆಯನ್ನು ತೋರಬೇಕಾಗುವುದು ಅನಿರ್ವಾಯ. ಈ ದೃಷ್ಟಿಯಿಂದ ನೋಡಿದರೆ ಹಳೆಯ ಪಾತ್ರಧಾರಿಗಳ ಬದಲು ಹೊಸ ನಟ-ನಟಿಯರು ಕಾಣಿಸಿಕೊಂಡಿದ್ದಾರೆ ಅಷ್ಟೇ. ಕಾರಂತರ ಪ್ರಯೋಗದ ಯಥಾವತ್ ಕಾಪಿ ಇದು. ನಾಗಾಭರಣರ ಉದ್ದೇಶ ಅದೇ ಇದ್ದಿರಬಹುದೇನೋ ಗೊತ್ತಿಲ್ಲ.

ತಮಗೆ ಒಪ್ಪಿಸಿದ ಕೆಲಸವನ್ನು ಈ ಪಾತ್ರಧಾರಿಗಳು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ಶ್ರೀಕೃಷ್ಣ ಪಾತ್ರಧಾರಿ ಮೈಕೋ ಮಂಜುನಾಥ್ ತುಂಟ ಕೃಷ್ಣನಾಗಿ, ಮುರಳಿಲೋಲನಾಗಿ ಪಾತ್ರಕ್ಕೆ ಶಕ್ತಿ ಮೀರಿ ಜೀವ ತುಂಬಿದ್ದಾರೆ. ಆದರೆ ಅವರಿಗೆ ಸರಿ ಜೋಡಿಯಾಗಿ ಪಾತ್ರ ನಿರ್ವಹಿಸಲು ರಾಧೆಯಾಗಿ ಅಭಿನಯಿಸಿದ ವಿದ್ಯಾವೆಂಕಟರಾಂಗೆ ಸಾಧ್ಯವಾಗಿಲ್ಲ. ರಾಧೆಯದು ಅರ್ಪಣಾ ಭಾವ. ಅದಕ್ಕೆ ಮುಗ್ಧ ಮುಖಭಾವದ ನಟಿ ಬೇಕು.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಗೋಕುಲ ನಿರ್ಗಮನದಲ್ಲಿ ನಟಿಸಿದ ಹೆಚ್ಚಿನ ಎಲ್ಲಾ ನಟ-ನಟಿಯರು ಕಿರುತೆರೆಯಲ್ಲಿ ತೊಡಗಿಸಿಕೊಂಡವರು. ಅದವರಿಗೆ ಬದುಕಿನ ಹಾದಿ. ಹಾಗಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಅವರ ಪಾತ್ರಗಳು ಸೂಪರ್ ಇಂಪೋಸ್ ಆಗುತ್ತಿದ್ದವು. ಮುಕ್ತವಾಗಿ ನೋಡುವುದು ಕಷ್ಟವಾಗುತ್ತಿತ್ತು.

ಬಲರಾಮನಾಗಿ ಪೂರ್ಣಚಂದ್ರ ತೇಜಸ್ವಿ, ಅಕ್ರೂರನಾಗಿ ಟಿ.ಎನ್.ಗಿರೀಶ್ ಕಿರುತೆರೆಯ ಹ್ಯಾಂಗೋವರ್ ನಿಂದ ಸಂಪೂರ್ಣವಾಗಿ ಬಿಡಿಸಿಕೊಂಡಂತಿತ್ತು. ಅಲ್ಲಲ್ಲಿ ಚದುರಿ ಹೋಗಿದ್ದ ಈ ನಟ-ನಟಿಯರನ್ನು ಬೆನಕ ಮತ್ತೆ ರಂಗಭೂಮಿಗೆ ಎಳೆದು ತಂದಿದೆ. ಈ ಎಳೆಯ ಕಲಾವಿದರು ಅಲ್ಲಿ-ಇಲ್ಲಿ ಎರಡೂ ಕಡೆಯೂ ಹೊಂದಾಣಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಬೆನಕದ ಕಿರಿಯ ತಲೆಮಾರು ಹಿರಿಯರ ಯಶಸ್ವಿ ನಾಟಕಗಳನ್ನು ಮತ್ತೆ ರಂಗದ ಮೇಲೆ ಪ್ರದರ್ಶಿಸುವ ತಯಾರಿಯಲ್ಲಿದೆ. ಇದು ಒಂದು ರೀತಿಯಲ್ಲಿ ಸ್ವಾಗತಾರ್ಹವೇ ಆದರೂ ಹಿರಿಯರ ನೆರಳಿನಿಂದ ಈಚೆ ಬರುವ ಪ್ರಯತ್ನ ಒಳ್ಳೆಯದು. ಮುಂದಿನ ದಿನಗಳಲ್ಲಿ ಹಯವದನ, ಸಂಗ್ಯಾಬಾಳ್ಯ, ಜೋಕುಮಾರಸ್ವಾಮಿ ಪ್ರದರ್ಶನ ಕಾಣಲಿವೆ. ಹಿಂದಿನ ನಾಟಕಗಳಿಗೆ ಅವರು ಕಾಯಕಲ್ಪ ಮಾಡದಿದ್ದರೆ ಏನನ್ನೂ ಸಾಧಿಸಿದಂತಾಗುವುದಿಲ್ಲ. ಒಂದು ಕೃತಿ ಕಾಲದ ನಿಕಷಕ್ಕೆ ಸಿಕ್ಕಿ ಹೊಳಪುಗೊಳ್ಳುತ್ತಲೇ ಇರಬೇಕು. ಮೊದಲ ಬಾರಿಗೆ ಗೋಕುಲ ನಿರ್ಗಮನವನ್ನು ಹೊಳಪುಗೊಳಿಸಿದವರು ಬಿ.ವಿ.ಕಾರಂತರು. ಅದರ ಸಾರ ಸರ್ವಸ್ವವನ್ನೆಲ್ಲಾ ಹೀರಿ ಅದನ್ನು ರಂಗದ ಮೇಲಿನ ದೃಶ್ಯಕಾವ್ಯವಾಗಿಸಿದರು. ಜನರ ಹತ್ತಿರ ತಂದರು. ಜನರು ಪು.ತಿ.ನರನ್ನು, ಅವರ ಬರವಣಿಗೆಯನ್ನು ಮುಖ್ಯವಾಗಿ ಗೋಕುಲ ನಿರ್ಗಮನವನ್ನು ಮತ್ತೊಮ್ಮೆ ಪುಟ ತಿರುಗಿಸಿ ನೋಡುವಂತಾಯ್ತು.

ಗೋಕುಲ ನಿರ್ಗಮನವನ್ನು ಈಗ ನೀನಾಸಂನವರು ಆಡುತ್ತಿಲ್ಲ. ಆದರೆ ತಮ್ಮ ಶೋ ಅನ್ನು ಅವರು ವಿಡಿಯೋ ಚಿತ್ರೀಕರಣ ಮಾಡಿ ಕಾಯ್ದಿರಿಸಿಕೊಂಡಿದ್ದಾರೆ. ಈ ಬಾರಿಯ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಅದನ್ನು ವ್ಯಾಖ್ಯಾನ, ವಿಮರ್ಶೆಗಳೊಂದಿಗೆ ಪ್ರದರ್ಶಿಸಲಾಯ್ತು. ಅಲ್ಲಿಯ ಶಿಬಿರಾರ್ಥಿಗಳು ಅದನ್ನು ಮಂತ್ರಮುಗ್ಧರಾಗಿ ವೀಕ್ಷಿಸಿದರು. ಭಾವುಕರಾಗಿ ಅದರ ಚರ್ಚೆಯಲ್ಲಿ ಪಾಲ್ಗೊಂಡರು.

ಒಂದು ರಂಗಪ್ರಯೋಗದ ಫಲಶ್ರುತಿಯ ಬಗ್ಗೆ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ಅಭಿಪ್ರಾಯಗಳಿರಬಹುದು. ಆದರೆ ಗೋಕುಲ ನಿರ್ಗಮನದ  ಪ್ರದರ್ಶನ ನೀಡುವ ಅನುಭವ ಅಲೌಕಿಕವಾದುದು. ಅದು ನಮ್ಮ ಭಾವಲೋಕದ ಮೃದು ಮಧುರವಾದ ಭಾವನೆಗಳನ್ನು ಮೀಟುವುದರ ಜೊತೆಗೆ ಯಾವುದೋ ಅಲೌಕಿಕವಾದುದರ ಕಡೆಗೂ ನಮ್ಮ ಲಕ್ಷ್ಯವನ್ನು ಸೆಳೆಯುತ್ತದೆ. ಗೀತ ನಾಟಕಗಳ ಯಶಸ್ಸು ಇರುವುದೇ ಇಲ್ಲಿ. ವಾಸ್ತವದಿಂದ ದೂರ ಸರಿದಷ್ಟು ಭಾವಲೋಕ ಶ್ರೀಮಂತಗೊಳ್ಳುತ್ತದೆ.

ಗೋಕುಲ ನಿರ್ಗಮನಕ್ಕೆ ಇನ್ನೊಮ್ಮೆ ಸಾಣೆ ಹಿಡಿಯುವ ಸಂದರ್ಭ ನಾಗಾಭರಣರಿಗೆ ಒದಗಿ ಬಂದಿತ್ತು. ಆದರೆ ಅವರು ಅದರೆಡೆಗೆ ಗಮನ ಹರಿಸಲಿಲ್ಲ. ಅಂದು ಸ್ವಾತಂತ್ರ್ಯ ಪೂರ್ವದಲ್ಲಿ ಪು.ತಿ.ನರವರು ಗೊಲ್ಲತಿಯ ಭಾವ ತಳೆದು ಗೋಕುಲ ನಿರ್ಗಮನವನ್ನು ಬರೆದಂತೆ ಇಂದು ಈ ಕಾಲಘಟ್ಟದಲ್ಲಿ ನಿಂತು ಆ ಗೋಕುಲದ ಪಾತ್ರಗಳ ಪರಕಾಯ ಪ್ರವೇಶ ಮಾಡಿ ಅವರ ಮನಸ್ಸು ಬಗೆದಿದ್ದರೆ ಹೊಸ ವ್ಯಾಖ್ಯಾನಗಳು ದೊರೆಯುತ್ತಿದ್ದವೇನೋ..!

ಕಳೆದ ವರ್ಷ ಸುರೇಶ್ ಅನಗಳ್ಳಿಯವರು ಮೇಘದೂತವನ್ನು ಎಡಪಂಥೀಯ ದೃಷ್ಟಿಕೋನದಿಂದ ನೋಡಿ ರಂಗದ ಮೇಲೆ ತಂದಿದ್ದರು. ಒಬ್ಬ ವ್ಯಕ್ತಿಯ ಭಾವಲೋಕದ ವಿವರಗಳಿಗೆ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನ ಸಾಧ್ಯವಾಗುವುದಾದರೆ ಗೋಕುಲ ನಿರ್ಗಮನದಂತಹ ಹಲವು ಆಯಾಮದ ಕೃತಿಗೆ ಯಾಕೆ ಸಾಧ್ಯವಾಗಲಾರದು?

ಕನ್ನಡದ ಪ್ರಸಿದ್ಧ ವಿಮರ್ಶಕರಾಗಿದ್ದ ಡಾ.ಡಿ.ಆರ್ ನಾಗರಾಜ್ ರವರು ಗೋಕುಲ ನಿರ್ಗಮನದಲ್ಲಿ ಧರ್ಮ-ಕಾಮದ ಸಂಘರ್ಷವನ್ನು ಕಂಡಿದ್ದಾರೆ. ಕೊಳಲನ್ನು ಜೀವ ಕಾಮದ ಸಂಕೇತವಾಗಿ ನೋಡಿದ್ದಾರೆ. ಇನ್ನು ಕೆಲವರು ಗ್ರಾಮ ಸಂಸ್ಕೃತಿ ಮತ್ತು ನಗರ ಸಂಸ್ಕೃತಿಯ ಸಂಘರ್ಷವನ್ನು ಇಲ್ಲಿ ಕಂಡಿದ್ದಾರೆ. ಕಿ.ರಂ. ನಾಗರಾಜ್ ರವರು ಗೋಕುಲದ ಪರಿಸರದಲ್ಲಿ ತಾಯ್ತನ, ಹೆಣ್ತನದ ಭಾವವನ್ನು ಕಂಡಿದ್ದಾರೆ. ಈ ಕಾಲಘಟ್ಟದಲ್ಲಿ ನಿಂತು ನೋಡಿದರೆ ಹೆಣ್ಣು ಜೀವವೊಂದಕ್ಕೆ ಈ ಕೃತಿ ಪ್ರಕೃತಿ-ಪುರುಷರ ನಡುವಿನ ನಿರಂತರ ಆಕರ್ಷಣೆ ಮತ್ತುವಿಯೋಗದ ಸ್ಥಾಯೀ ಭಾವವಾಗಿ ಕಾಣುತ್ತದೆ. ರಾಧೆ ಆ ನಿರಂತರ ಪ್ರೇಮದ ಮೂರ್ತ ರೂಪ. ಅದು ಅಲೌಕಿಕವಾದುದು. ಆಕೆಯಲ್ಲಿರುವ ಅರ್ಪಣಾ ಭಾವಕ್ಕೆ ಲೌಕಿಕದ ಯಾವ ಕಟ್ಟುಪಾಡುಗಳೂ ಇಲ್ಲ. ಈ ಬಾವದಲ್ಲಿ ಆಕೆಯ ಸಖಿಯರೂ ಪಾಲ್ಗೊಳ್ಳುತ್ತಾರೆ. ಗೋಪಾಲಕರೂ ಸೇರಿದಂತೆ ಇಡೀ ನಂದಗೋಕುಲ ಭಾಗಿಯಾಗುತ್ತದೆ; ಸಾಮೂಹಿಕ ಅರ್ಪಣಾ ಭಾವ.

ಎಲ್ಲವನ್ನೂ ಸ್ವೀಕರಿಸಿ ತನ್ನಲ್ಲಿ ಕಾಪಿಡುವ ಪ್ರಕೃತಿ. ಒಂದು ಹಂತದವರೆಗೆ ಮಾತ್ರ ಆಕೆಯಲ್ಲಿ ಜೀವಶಕ್ತಿ ತುಂಬಿ ನಂತರ ನಿರ್ಗಮಿಸುವ ಪುರುಷ, ಇಂದಿಗೂ ಆಧುನಿಕ ಸ್ತ್ರೀಯರನ್ನು ಕಾಡುವ ನಿಗೂಢ. ಸಂಸಾರದಲ್ಲಿ ಇದ್ದುಕೊಂಡೇ ಅದರಿಂದ ಬಿಡುಗಡೆಗಾಗಿ ಹಂಬಲಿಸುವ ಆಕೆಗೆ ಮುರಳಿಗಾನ ಬದುಕನ್ನು ಮುನ್ನಡೆಸುವ ಶಕ್ತಿ.

ಇಷ್ಟೆಲ್ಲಾ ಸಾಧ್ಯತೆಗಳು, ಆಳ-ವಿಸ್ತಾರಗಳನ್ನೊಳಗೊಂಡ ಕೃತಿಯನ್ನು ಒಂದು ರಮ್ಯಕಥನವಾಗಿಸಿ ದೃಶ್ಯಕಾವ್ಯವಾಗಿಸಿದ್ದಾರೆ ಬಿ.ವಿ.ಕಾರಂತರು. ನಾಗಾಭರಣ ಇದರಲ್ಲಿರುವ ಧ್ವನಿಶಕ್ತಿಯನ್ನು ಗುರುತಿಸಿ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನ ಮಾಡಬಹುದಿತ್ತು. ಆದರೆ ಅದು ಒಂದು ’ಸಿಂಡ್ರೆಲ್ಲಾ’ ಶೋದ ಮಟ್ಟಕಷ್ಟೇ ಸೀಮಿತಗೊಂಡಿದೆ.

[’ಹಂಗಾಮ’ ನಿಯತಕಾಲಿಕದ ೨೦೦೪ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಲೇಖನ ]

ವೀರಗಾಸೆ ವೀರರು


ಸುದೇಶ ದೊಡ್ಡಪಾಳ್ಯ   

-ಚಿತ್ರಗಳು-ಪವನ್ ಪಿ.ಶ್ರೀನಿವಾಸ್

ಕೃಪೆ: ಪ್ರಜಾವಾಣಿ,ಕಾಮನಬಿಲ್ಲು ಪುರವಣಿ, 29.11.2012
 


`ನಾವು ಕಲಾವಿದರು, ಆದರೂ ನಮ್ಮನ್ನು ಕೂಲಿ ಕಾರ್ಮಿಕರಂತೆ ನಡೆಸಿಕೊಳ್ಳಲಾಗುತ್ತದೆ. ನಾವು ಹಣಕ್ಕಾಗಿ ಕಲೆಯನ್ನು ಆರಿಸಿಕೊಂಡಿಲ್ಲ. ಕಲೆಗಾಗಿ, ಅದರ ಸೆಳೆತಕ್ಕಾಗಿ, ಸಂಪ್ರದಾಯವನ್ನು ಉಳಿಸುವ ಸಲುವಾಗಿ ಆಸೆಪಟ್ಟು ಆಯ್ಕೆ ಮಾಡಿಕೊಂಡಿದ್ದೇವೆ`- ಮೈಸೂರಿನ ಹೆಸರಾಂತ ವೀರಗಾಸೆ ಕಲಾವಿದ ಕಿರಾಳು ಮಹೇಶ್ ಬೇಸರದಿಂದಲೇ ಇಷ್ಟು ಹೇಳಿ ಸುಮ್ಮನಾದರು.

ಆದರೆ ಅವರ ಪಕ್ಕದಲ್ಲಿ ಕುಳಿತಿದ್ದ ಯುವ ಕಲಾವಿದ ರಮೇಶ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ಗುರುಗಳಾದ ಮಹೇಶ್ ಹೇಳದೇ ಉಳಿಸಿದ್ದ ಮಾತುಗಳನ್ನು ಹೇಳಿಬಿಡುವ ಧಾವಂತದಲ್ಲಿದ್ದರು. `ನಾವು ವೀರಗಾಸೆಯಿಂದ ನಾಲ್ಕು ಕಾಸು ಸಂಪಾದಿಸಿ, ಊರಲ್ಲಿ ಮನೆ, ಮೈಸೂರಲ್ಲಿ ಸೈಟು ತೆಗೆದುಕೊಳ್ಳಬೇಕು ಎನ್ನುವ ಆಸೆ ಇಲ್ಲ. ಇಂಥ ಆಸೆಯನ್ನು ನಮ್ಮಂಥ ಕಲಾವಿದರು ಇಟ್ಟುಕೊಳ್ಳುವುದು ಹಗಲುಗನಸಾಗುತ್ತದೆ.

ಎಷ್ಟೇ ನೋವುಗಳಿದ್ದರೂ ಅವುಗಳನ್ನು ನುಂಗಿಕೊಂಡು ವೀರಗಾಸೆ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದ್ದೇವೆ` ಎಂದು ಅಭಿಮಾನಪಟ್ಟರು.

ಕಿರಾಳು ಮಹೇಶ್ ಬೇಸರಕ್ಕೂ, ರಮೇಶ್ ಅವರ ವೀರಾವೇಷದ ಅಭಿಮಾನದ ನುಡಿಗೂ ಸಂಬಂಧವಿದೆ. ಜಾನಪದದಲ್ಲಿ ಗಂಡು ಕಲೆ ಎಂದು ಕರೆಸಿಕೊಳ್ಳುವ `ವೀರಗಾಸೆ` ನೃತ್ಯ ಪ್ರಕಾರವನ್ನು ಇವರೆಲ್ಲರೂ ಉಸಿರಾಗಿಸಿಕೊಂಡಿದ್ದಾರೆ.

ವೀರಗಾಸೆ ಸಂಪ್ರದಾಯವನ್ನು ತಲೆಯಿಂದ ತಲೆಗೆ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಒಂದು ವೇಳೆ ಮುತ್ತಾತ, ತಾತ, ತಂದೆಯವರಂತೆ ವೀರಗಾಸೆಗಾಗಿ ಇವರ ಮನಸ್ಸು ತುಡಿಯದೇ ಹೋಗಿದ್ದರೆ ವೀರಗಾಸೆ ಸಂಪ್ರದಾಯದ ಕಥೆ ಏನಾಗಬೇಕು? ವೀರಗಾಸೆ ಸೆಳೆತವೇ ಅಂಥದ್ದು, ಕರಡಿ ವಾದ್ಯದ ಸದ್ದು ಕಿವಿ ಮೇಲೆ ಬಿದ್ದರೆ ಸಾಕು, ಎ.ಆರ್.ರೆಹಮಾನ್ ಸಂಗೀತಕ್ಕೆ ಹೆಜ್ಜೆಹಾಕಲು ಹಿಂದೆ ಮುಂದೆ ನೋಡುವ ಮಂದಿಯೂ ನಿಂತಲ್ಲೇ ಹೆಜ್ಜೆ ಬದಲಿಸುವುದು ಗ್ಯಾರಂಟಿ.


ಅಂದಮೇಲೆ ನಿತ್ಯವೂ ಊರ ಗುಡಿಯ ಮುಂದೆ ಕರಡಿ ವಾದ್ಯದ ನಿನಾದ ಹೊಮ್ಮಿದರೆ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ನಾಲ್ಕು ಹೆಜ್ಜೆ ಹಾಕಿಯೇ ತೀರಬೇಕು. ಇಂತಹ ಒಳ ಸೆಳೆತವೇ ನೂರಾರು ಮಂದಿ ವೀರಗಾಸೆ ಕಲಾವಿದರನ್ನು ರೂಪಿಸಿದೆ.
ಕಿರಾಳು ಮಹೇಶ್ ವೀರಗಾಸೆ ನೃತ್ಯದಲ್ಲಿ ಅನುಭವಿ.

ಇವರು ಹೆಜ್ಜೆ ಹಾಕುವುದು, ವೀರಾವೇಷದಿಂದ ಕಣ್ಣುಗಳನ್ನು ಅರಳಿಸಿ ಗೋಲಿಯಂತೆ ಹೊರಳಿಸುವುದನ್ನು ನೋಡುವಾಗ ಭಯವಾಗುತ್ತದೆ. ಒಡಪುಗಳನ್ನು ಹೇಳುವುದನ್ನು ಕೇಳಬೇಕು ಎನಿಸುತ್ತದೆ. ಇಂತಹ ಮಹೇಶ್ `ಅಭಿನವಶ್ರೀ ವೀರಭದ್ರ ನೃತ್ಯ ತಂಡ` ಕಟ್ಟಿದ್ದಾರೆ. ಇವರ ತಂಡದಲ್ಲಿ 50ಕ್ಕೂ ಹೆಚ್ಚು ಯುವ ಕಲಾವಿದರು ಇದ್ದಾರೆ.

ರಮೇಶ್, ಬಿ.ಎಸ್.ಮಂಜುನಾಥ್, ಕೆ.ಎಂ.ಸೋಮಶೇಖರ್, ನಟರಾಜ, ರಾಜೇಶ್, ಮಹೇಶ್, ಕೆ.ಎಂ.ಭಾಸ್ಕರ್, ಎಂ.ಪ್ರಕಾಶ್, ಪ್ರಭು ಸೇರಿದಂತೆ ವೀರಗಾಸೆ ತಂಡದಲ್ಲಿರುವ ಎಲ್ಲ ಕಲಾವಿದರದೂ ಒಂದೇ ಕಥೆ. ಆದರೆ ಊರು, ಹೆಸರು, ವಯಸ್ಸು, ವಿದ್ಯಾಭ್ಯಾಸ ಮಾತ್ರ ಬೇರೆ ಬೇರೆ!

ರಮೇಶ್ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮೂಡಹಳ್ಳಿಯವರು. ಓದಿದ್ದು 9ನೇ ತರಗತಿ. ಮುಂದೆ ಕೈ ಬೀಸಿ ಕರೆದಿದ್ದು ವೀರಗಾಸೆ. ಹದಿನೈದನೇ ವಯಸ್ಸಿಗೆ ವೀರಗಾಸೆಗಾಗಿ ಮುಖಕ್ಕೆ ಬಣ್ಣ ಬಳಿದುಕೊಂಡು, ತಲೆ ಮೇಲೆ ಕಿರೀಟ ಇಟ್ಟುಕೊಂಡು ಕೈಯಲ್ಲಿ ಕತ್ತಿ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕರಡಿ ವಾದ್ಯದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ವೀರಾವೇಷದಿಂದ ಕುಣಿಯತೊಡಗಿದರು. ಬಳಿಕ ಏನೇ ಮಾಡಿದರೂ ವೀರಗಾಸೆ ಇವರನ್ನು ಬಿಟ್ಟುಕೊಡಲಿಲ್ಲ. ತಲೆಯೊಳಗೆ ವೀರಗಾಸೆ ಕಲೆ ತುಂಬಿಕೊಂಡ ಮೇಲೆ ವಿದ್ಯೆಗೆ ಜಾಗ ಇಲ್ಲದಂತಾಯಿತು. ಹೀಗಾಗಿ ಹೆಚ್ಚು ಮಂದಿ ವೀರಗಾಸೆ ಕಲಾವಿದರು ಕಾಲೇಜು ಮುಖವನ್ನೇ ನೋಡಿಲ್ಲ.

ಇದು ಎಲ್ಲರ ಕಥೆಯೂ ಹೌದುರಮೇಶ್‌ಗೆ ಏಳೆಂಟು ವರ್ಷಗಳಿರಬೇಕು. ಹೊಲದಲ್ಲಿ ದನಕರುಗಳನ್ನು ಮೇಯಿಸಲು ಹೋಗುತ್ತಿದ್ದರು. ಅಲ್ಲಿ ಗೆಳೆಯರೊಂದಿಗೆ ಸೇರಿ ವೀರಗಾಸೆ ಆಟವಾಡುತ್ತಿದ್ದರು. ಹೆಗಲ ಮೇಲಿದ್ದ ಟವೆಲನ್ನು ಸೊಂಟಕ್ಕೆ ಸುತ್ತಿಕೊಂಡು, ದನ ಕಾಯುವ ಕೋಲನ್ನು ಕತ್ತಿಯಂತೆ ಹಿಡಿದು, ಧೂಳನ್ನೇ ವಿಭೂತಿಯಂತೆ ಹಣೆಗೆ ಹಚ್ಚಿಕೊಳ್ಳುತ್ತಿದ್ದರು.

ಕೆಲವರು ಪ್ಲಾಸ್ಟಿಕ್ ಬಿಂದಿಗೆಯನ್ನೇ ಕರಡಿ ವಾದ್ಯವನ್ನಾಗಿ ಮಾಡಿಕೊಂಡು ನುಡಿಸುತ್ತಿದ್ದರು. ಗದ್ದೆ ಬಯಲಿನಲ್ಲಿ ಸಿಗುವ ತರಗಲೆಯನ್ನು ಗುಡ್ಡೆ ಮಾಡಿ ಅದಕ್ಕೆ ಬೆಂಕಿ ಹಾಕುತ್ತಿದ್ದರು. ಆಗ ರಮೇಶ್ ವೀರಾವೇಷದಿಂದ ಹೆಜ್ಜೆ ಹಾಕುತ್ತಾ ಮೈಮರೆತು ಕುಣಿಯುತ್ತಿದ್ದರು. ಇಂಥ ಸಮಯದಲ್ಲಿ ಬೆಂಕಿಯನ್ನು ಕೊಂಡವೆಂದು ಭಾವಿಸಿ ಹಾಯುತ್ತಿದ್ದರು.

ಚಾಮರಾಜನಗರ ಜಿಲ್ಲೆಯ ಬಿಸಲವಾಡಿಯ ಬಿ.ಎಸ್.ಮಂಜುನಾಥ್ ತನ್ನ ಗೆಳೆಯ ರಮೇಶ್ ಅವರ ಕಥೆಯನ್ನು ಮುಂದುವರಿಸಿದಂತೆ ಹೇಳುತ್ತಿದ್ದರು. ಶಾಲೆ ಬಿಟ್ಟ ಕೂಡಲೇ ಮಂಜುನಾಥ್ ಮತ್ತು ಗೆಳೆಯರು ಊರ ಗುಡಿ ಹತ್ತಿರಕ್ಕೆ ಓಡುತ್ತಿದ್ದರು. ಅಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ರಟ್ಟಿನ ಬಾಕ್ಸ್‌ಗೆ ದಾರ ಕಟ್ಟಿ ಕುತ್ತಿಗೆಗೆ ನೇತು ಹಾಕುತ್ತಿದ್ದರು. ಅವರು ಅದನ್ನೆ ಕರಡಿ ವಾದ್ಯದಂತೆ ಬಾರಿಸುತ್ತಿದ್ದರು.

ಉಳಿದವರು ವೀರಗಾಸೆ ವೇಷ ಹಾಕುತ್ತಿದ್ದರು. ಮದುವೆ ಸಂದರ್ಭದಲ್ಲಿ ಗಂಗೆ ತರುವ ಪದ್ಧತಿ ಇದೆ. ಕೊಡದಲ್ಲಿ ನೀರು ತುಂಬಿಸಿಕೊಂಡು ಮಹಿಳೆಯರು ಅವುಗಳನ್ನು ಹೊತ್ತುಕೊಂಡು ಬರುವಾಗ ಮಡಿ ಬಟ್ಟೆ ಹಾಸಲಾಗುತ್ತದೆ. ಆಮೇಲೆ ತೆಂಗಿನಕಾಯಿ ಒಡೆದ ನಂತರ ಮನೆಯೊಳಕ್ಕೆ ಓಡಿ ಹೋಗುವುದು ಸಂಪ್ರದಾಯ. ಗಂಗೆ ತರುವುದನ್ನು ಮಂಜುನಾಥ್ ಮತ್ತು ತಂಡ `ಅನುಕರಣೆ` ಮಾಡುತ್ತಿತ್ತು.

ಬಾಲ್ಯದಲ್ಲೇ ವೀರಗಾಸೆ ಮನಸ್ಸು ಹೊಕ್ಕ ಮೇಲೆ ಹೊರಕ್ಕೆ ಹಾಕುವುದಾದರೂ ಹೇಗೆ? ನೀನು ಒಲಿದಂತೆ ಹಾಡುವೆ ಎನ್ನುತ್ತಾ ವೀರಗಾಸೆಯೊಂದಿಗೇ ಮಿಳಿತಗೊಂಡಿದ್ದಾರೆ. ಮಂಜುನಾಥ್ ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಆಗಮ ಕಲಿತು ಅರ್ಚಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಹೆಚ್ಚಿನ ಕಲಾವಿದರು ಕೃಷಿಯನ್ನೇ ನಂಬಿದ್ದಾರೆ. ಊರಿನಲ್ಲಿರುವ ಹೊಲ, ಗದ್ದೆಗಳಲ್ಲಿ ಫಸಲು ತೆಗೆಯುತ್ತಾರೆ. ವೀರಗಾಸೆ ಸಂಪ್ರದಾಯ ಮತ್ತು ಕಲೆಗೆ ಒಲಿದಿರುವುದರಿಂದ ಕೃಷಿಯ ನಡುವೆಯೇ ವೀರಗಾಸೆ ವ್ಯವಸಾಯವನ್ನೂ ಮಾಡುತ್ತಿದ್ದಾರೆ. ವೀರಗಾಸೆಯನ್ನು ನಂಬಿ ಬದುಕುವುದು ಉಂಟೆ? ಏಕೆಂದರೆ ವರ್ಷಕ್ಕೆ ತುಂಬಾ ಬ್ಯುಸಿ ಕಲಾವಿದ ಎನಿಸಿಕೊಂಡವರೂ 50 ರಿಂದ 60 ಸಾವಿರ ಸಂಪಾದಿಸುವಲ್ಲಿ ಸುಸ್ತಾಗುತ್ತಾರೆ. ಅಂದರೆ ತಿಂಗಳಿಗೆ 5 ರಿಂದ 6 ಸಾವಿರ ಆದಾಯ! ಇದಕ್ಕಾಗಿ ಊರು, ರಾಜ್ಯದ ಮೂಲೆ ಮೂಲೆಗಳನ್ನು ಹಗಲು ರಾತ್ರಿ ಎನ್ನದೆ ಸುತ್ತಬೇಕು.

ಉತ್ಸವಗಳಲ್ಲಿ ಮುಂದೆವೀರಗಾಸೆ ನೃತ್ಯ ಮದುವೆ, ಗೃಹ ಪ್ರವೇಶಗಳಂತಹ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿತ್ತು. ವೀರಗಾಸೆಯವರು ಹೊಸ ಮನೆಗೆ ನುಗ್ಗಿದರೆ ಅಲ್ಲಿರುವ ದುಷ್ಟಶಕ್ತಿಗಳು ಓಡಿ ಹೋಗುತ್ತವೆ ಎನ್ನುವ ನಂಬಿಕೆ ಇದೆ. ಇಂಥ ನಂಬಿಕೆಯೇ ವೀರಗಾಸೆ ನೃತ್ಯ ಪ್ರಕಾರವನ್ನು ಇನ್ನೂ ಉಳಿಸಿಕೊಂಡು ಬರುತ್ತಿದೆ!

ಕೆಲವು ವರ್ಷಗಳಿಂದ ವೀರಗಾಸೆ ಹೆಚ್ಚಾಗಿ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುತ್ತಿದೆ. ಮೆರವಣಿಗೆ, ರಾಜ್ಯೋತ್ಸವ ಮತ್ತು ಧಾರ್ಮಿಕ ಸಮಾರಂಭಗಳೇ ಇರಲಿ, ಅಲ್ಲಿ ವೀರಗಾಸೆ ನೃತ್ಯ ಕಡ್ಡಾಯ ಎನ್ನುವಂತಾಗಿದೆ. ಹೀಗಾಗಿ ವೀರಗಾಸೆ ಕಲಾವಿದರು ನಾಲ್ಕು ಕಾಸಿನ ಮುಖ ನೋಡುವಂತಾಗಿದೆ. ಇಲ್ಲದೇ ಹೋದರೆ ಇವರು ಮದುವೆ, ಗೃಹ ಪ್ರವೇಶ ಮಾಡುವವರ ಕರೆಗಾಗಿ ಕಾಯುತ್ತಾ ಕೂರಬೇಕು.

ಗೌರವ, ಮನ್ನಣೆ ನೀಡಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರನ್ನು ಸರಿಯಾಗಿ ನಡೆಸಿ ಕೊಳ್ಳುವುದಿಲ್ಲ ಎನ್ನುವವರ ಪಟ್ಟಿಗೆ ವೀರಗಾಸೆ ಕಲಾವಿದರೂ ಸೇರುತ್ತಾರೆ. ಇನ್ನು ಸಂಘ, ಸಂಸ್ಥೆಗಳು ಹಬ್ಬ, ಜಾತ್ರೆ, ಉತ್ಸವ, ಸಮಾರಂಭಗಳ ಸಮಯದಲ್ಲಿ ಕರೆಸುತ್ತಾರೆ. ಕೆಲವರು ಪ್ರೀತಿಯಿಂದಲೇ ನಡೆಸಿಕೊಂಡರೆ, ಹಲವರು ದುಡ್ಡು ಕೊಟ್ಟಿಲ್ಲ ಎನ್ನುತ್ತಾರೆ. ಆದರೆ ನಮ್ಮ ಸ್ಥಿತಿಯನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಕಲಾವಿದರು ಬೇಸರದಿಂದಲೇ ಹೇಳುತ್ತಾರೆ.

ಈ ತಂಡದಲ್ಲಿರುವ ಎಲ್ಲ ಕಲಾವಿದರೂ ಮೈಸೂರು ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಆರಂಭದಲ್ಲಿ ಜಂಬೂ ಸವಾರಿ ಮೆರವಣಿಗೆಯಲ್ಲಿ ವೀರಾವೇಷದಿಂದ ಹೆಜ್ಜೆಹಾಕಿ ಜನರಿಂದ `ಸೈ` ಎನಿಸಿಕೊಳ್ಳಲು ತುದಿಗಾಲ ಮೇಲೆ ನಿಲ್ಲುತ್ತಿದ್ದ ಕಲಾವಿದರು ಐದಾರು ದಸರಾ ಉತ್ಸವದಲ್ಲಿ ಪಾಲ್ಗೊಂಡ ಮೇಲೆ ಉತ್ಸಾಹವನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಇದಕ್ಕೆ ಕಾರಣ, ಸರ್ಕಾರ ಜಾನಪದ ಕಲಾವಿದರನ್ನು ನಿಕೃಷ್ಟವಾಗಿ ಕಾಣುವುದು.

`ಇಪ್ಪತೈದು ಕೆ.ಜಿ ತೂಕದ ವೇಷಭೂಷಣವನ್ನು ಹಾಕಿಕೊಂಡು ಬಿಸಿಲು, ಮಳೆಯನ್ನು ಲೆಕ್ಕಿಸದೆ ಆರೇಳು ಕಿಲೋಮೀಟರ್ ಪ್ರದರ್ಶನ ನೀಡುತ್ತೇವೆ. ಆದರೆ ಸವಲತ್ತು ಮತ್ತು ಸಂಭಾವನೆ ವಿಚಾರದಲ್ಲಿ ನಮ್ಮದು ಕೊನೆಯ ಸ್ಥಾನ` ಎಂದು ಕಿರಾಳು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಕಷ್ಟ, ಸುಖ, ನೋವು, ನಲಿವು, ಅವಮಾನ, ಸನ್ಮಾನ ಯಾವ ಕ್ಷೇತ್ರವನ್ನು ಬಿಟ್ಟಿದೆ ಹೇಳಿ? ಅದೇ ರೀತಿ ವೀರಗಾಸೆಯನ್ನೂ ಬಿಟ್ಟಿಲ್ಲ. ಆದರೂ ಹಳ್ಳಿಗಾಡಿನ ಯುವ ಮನಸ್ಸುಗಳು ಮತ್ತೆ ಮತ್ತೆ ವೀರಗಾಸೆಯ ವೇಷವನ್ನು ತೊಟ್ಟು ವಚನಗಳನ್ನು ಹೇಳುತ್ತಾ, ವೀರಾವೇಷದಿಂದ ಕುಣಿದು, ಜನರಿಂದ ಸೈ ಎನಿಸಿಕೊಳ್ಳುವುದನ್ನು ಬಯಸುತ್ತಲೇ ಇವೆ. ಆದರೆ ಸಮಾಜ, ಸರ್ಕಾರ ಮಾತ್ರ ಜಾನಪದ ಕಲಾ ಪ್ರಕಾರ ಮತ್ತು ಕಲಾವಿದರನ್ನು `ಬಡವರು` `ಹಳ್ಳಿಗರ ಕಲೆ` ಎನ್ನುವಂತೆ ನೋಡುತ್ತಿವೆ.

ಪಂಡಿತರು, ವಿದ್ವಾಂಸರಿಗೆ ಲಕ್ಷ ಲಕ್ಷ ರೂಪಾಯಿ ಸಂಭಾವನೆ ಕೊಟ್ಟು ಐಷಾರಾಮಿ ಹೋಟೆಲ್‌ಗಳಲ್ಲಿ ಇಳಿಸಿ, ಹವಾನಿಯಂತ್ರಿತ ಕಾರುಗಳಲ್ಲಿ ಅವರನ್ನು ವೇದಿಕೆ ಬಳಿಗೆ ಕರೆ ತರುತ್ತಾರೆ. ಆದರೆ ಈ ನೆಲದ ಜನಪದರ ಬದುಕಿನಿಂದ ಹುಟ್ಟಿ ಬಂದಿರುವ ಜಾನಪದ ಕಲೆಯನ್ನು ಬದುಕಾಗಿಸಿಕೊಂಡಿರುವವರನ್ನು ನೋಡುವ ಮನೋಭಾವ ಬದಲಾಗಬೇಕು.

ಆಕರ್ಷಕ ವೇಷಭೂಷಣವೀರಗಾಸೆಗೆ ವೀರಭದ್ರ ಕುಣಿತ ಎನ್ನುವ ಹೆಸರೂ ಇದೆ. ಹೆಚ್ಚಾಗಿ ಶಿವಾರ್ಚಕರು ಈ ಕಲೆಯನ್ನು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪುರವಂತರು ಹೆಸರಿನಿಂದ ಕರೆಯಲಾಗುತ್ತದೆ.

ಮೈಸೂರು ಭಾಗದ ವೀರಗಾಸೆ ಕಲಾವಿದರು ಆಕರ್ಷಕ ವೇಷಭೂಷಣದೊಂದಿಗೆ ಪ್ರದರ್ಶನ ನೀಡುವುದರಿಂದ ಜನಮನವನ್ನು ಗೆಲ್ಲುತ್ತಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ.

ತಲೆ ಮೇಲೆ ಕಿರೀಟ, ಕೊರಳಿಗೆ ರುದ್ರಾಕ್ಷಿ ಮಾಲೆ, ಎದೆಗೆ ವೀರಭದ್ರನ ಕವಚ, ರುಂಡ ಮಾಲೆ, ತೋಳಲ್ಲಿ ನಾಗಸರ್ಪ, ತಲೆಯ ಚಂಡಮೃಗದ ಬಾಲ, ಕೀರ್ತಮುಖಗಳು, ಹಣೆಗೆ ವಿಭೂತಿ, ಕಿವಿಗೆ ನಾಗಕೊಂಡಲಿ, ಮುಂಗೈಯಲ್ಲಿ ಅರಿದಾಳು ಕೀರ್ತಮುಖ, ಕೈಯಲ್ಲಿ ಕತ್ತಿ, ಬಾಕು, ಗುರಾಣಿ ಹಿಡಿದು ವೀರಭದ್ರನ ಒಡಪುಗಳನ್ನು ಹೇಳುತ್ತಾ, ದಕ್ಷಬ್ರಹ್ಮ, ರೇವಣ್ಣ ಸಿದ್ದೇಶ್ವರ, ಮಾರುತಿ ಲಿಂಗಧಾರಣೆ, ಮಲೈ ಮಹದೇಶ್ವರ, ಶರಬವತಾರದ ಕಥೆಗಳನ್ನು ಹೇಳುತ್ತಾರೆ.


ವೀರಗಾಸೆ ಹುಟ್ಟುದಕ್ಷಬ್ರಹ್ಮನ ಮಗಳು ದಾಕ್ಷಾಯಿಣಿ ಈಶ್ವರನ ಹೆಂಡತಿ. ಈಕೆ ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಈಶ್ವರನನ್ನು ಮದುವೆಯಾಗಿರುತ್ತಾಳೆ. ಹೀಗಾಗಿ ದಕ್ಷಬ್ರಹ್ಮ ತಾನು ಮಾಡುವ ಯಜ್ಞಕ್ಕೆ ಮಗಳನ್ನು ಆಹ್ವಾನಿಸುವುದಿಲ್ಲ. ವಿಷಯ ತಿಳಿದ ದಾಕ್ಷಾಯಿಣಿ ತಂದೆ ನಡೆಸುತ್ತಿರುವ ಯಜ್ಞದಲ್ಲಿ ಪಾಲ್ಗೊಳ್ಳಲು ತೆರಳುತ್ತಾಳೆ.

ಅಲ್ಲಿ ದಕ್ಷಬ್ರಹ್ಮ ಮಗಳು ದಾಕ್ಷಾಯಿಣಿ ಮತ್ತು ಅಳಿಯ ಈಶ್ವರನನ್ನು ನಿಂದಿಸುತ್ತಾನೆ. ಪತಿ ನಿಂದನೆಗೆ ನೊಂದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಳ್ಳುತ್ತಾಳೆ. ಈ ವಿಷಯ ತಿಳಿದ ಈಶ್ವರ ರುದ್ರಾವತಾರ ತಾಳುತ್ತಾನೆ. ತನ್ನ ಹಣೆಯಲ್ಲಿ ಮೂಡುವ ಬೆವರನ್ನು ತೆಗೆದು ಒಗೆಯುತ್ತಾನೆ. ಆ ಬೆವರಿನಲ್ಲಿ ಹುಟ್ಟುವವನೇ ವೀರಭದ್ರ. ಈತ ವೀರಾವೇಷದಿಂದ ಗಣಗಳ ಜೊತೆ ನುಗ್ಗಿ ಯಜ್ಞವನ್ನು ಹಾಳು ಮಾಡಿ ದಕ್ಷಬ್ರಹ್ಮನ ತಲೆಯನ್ನು ಕತ್ತರಿಸಿ ಯಜ್ಞ ಕುಂಡಕ್ಕೆ ಹಾಕುತ್ತಾನೆ. ಹೀಗೆ ವೀರಗಾಸೆ ನೃತ್ಯ ಹುಟ್ಟಿಕೊಂಡಿತು.

ಗುರು ಕಿರಾಳು ಮಹೇಶ್ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವೀರಗಾಸೆ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಿರಾಳು ಮಹೇಶ್ ಕಾರಣ. ಇವರು ಬಿಡುವಿನ ವೇಳೆಯಲ್ಲಿ ಆಸಕ್ತ ಮತ್ತು ಉತ್ಸಾಹಿ ತರುಣರಿಗೆ ವೀರಗಾಸೆ ನೃತ್ಯವನ್ನು ಕಲಿಸುತ್ತಿದ್ದಾರೆ. ಸ್ವತಃ ತಂಡವನ್ನು ಕಟ್ಟಿಕೊಂಡು ಊರು-ಕೇರಿ, ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

ಇವರು ಹಲವು ಬೇಸಿಗೆ ಶಿಬಿರಗಳಲ್ಲಿ ಎಳೆಯರಿಗೆ ವೀರಗಾಸೆ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ. ಕಿರಾಳು ಮಹೇಶ್ ಅವರ ಪುತ್ರ ಕೆ.ಎಂ.ಭಾಸ್ಕರ್ ಜೆಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ಅಭ್ಯಾಸ ಮಾಡುತ್ತಿದ್ದಾರೆ. ಇವರೂ ಸಹ ವೀರಗಾಸೆ ನೃತ್ಯವನ್ನು ಕಲಿತಿದ್ದಾರೆ. ಮಹೇಶ್ ಗರಡಿಯಲ್ಲಿ 150 ಕ್ಕೂ ಹೆಚ್ಚು ಮಂದಿ ಪಳಗಿದ್ದಾರೆ.

ಗುರುವಾರ, ನವೆಂಬರ್ 22, 2012

ಇಕ್ಬಾಲ್ ಎಂಬ ರಂಗ ಮಾಂತ್ರಿಕ!

(avadhi krupe)


ಇಕ್ಬಾಲ್ ಎಂಬ ರಂಗಮಾಂತ್ರಿಕನ ಫ್ಯಾಂಟಸಿ ದುನಿಯಾ

- ಮಹಾದೇವ ಹಡಪದ


ರಂಗದ ಮೇಲೆ ನಟ ನಿಂತಾಗ ದೇಹಕ್ಕೆ ಹೆಚ್ಚು ಸಾಧ್ಯತೆಗಳಿರುತ್ತವೆ, ನಟನಿಗೆ ಆ ಸಾಧ್ಯತೆಯ ಅರಿವಿದ್ದರೆ ಕ್ರಿಯೆ-ಪ್ರತಿಕ್ರಿಯೆಗಳು ಚುಟುಕಾಗಿ ಚುರುಕಾಗಿ ಮೂಡುತ್ತವೆ. ಆಗ ನಾಟಕದ ಸಂವಹನ ಆಂಗಿಕವಾಗಿ ಸಾಧ್ಯವಾಗುತ್ತದೆ. ನಟನ ದೇಹದ ಲಯದೊಂದಿಗೆ ಅವನಾಡುವ ಮಾತಿನ ಏರಿಳಿತವೂ ಪೂರಕವಾಗಿರುತ್ತದೆ. -ಇಕ್ಬಾಲ್ ಅಹ್ಮದ್.
ಶಿಕಾರಿಪುರದ ಸಂಪ್ರದಾಯಸ್ಥ ಮುಸ್ಲಿಮ್ ಮುದಾಯದ ಮಧ್ಯಮ ವರ್ಗೀಯ ಕುಟುಂಬದಿಂದ ಬಂದ ಇಕ್ಬಾಲ್ ಅಹ್ಮದ್ ಅಂದ್ರೆ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಶೈಲಿಯಿಂದಲೇ ಗುರುತಿಸಿಕೊಂಡವರು. ನಾಟಕದವರಿಗೆ ಸಾಮಾಜಿಕ ಮನ್ನಣೆಗಳು ಇಲ್ಲವೇ ಇಲ್ಲ ಎಂಬ ಕೊರಗಿದ್ದರೂ ನಟನಾದವ- ನಾಟಕಕಾರ, ನಿರ್ದೇಶಕನಿಗಿಂತ ಹೆಚ್ಚು ಪ್ರಸ್ತುತಗೊಳ್ಳಬೆಕು. ನಟನ ನಟನೆ ಹೆಚ್ಚು ವಿಮರ್ಶೆಗೆ ಒಳಪಡಬೇಕೆಂದು, ನಟನ ದೇಹದ ಅಂತಃಸ್ಪೂರ್ತಿಯಿಂದಲೇ ನಾಟಕ ಕಟ್ಟುವ ಕ್ರಿಯೆಯನ್ನು ತಮ್ಮದೇ ಆದ ರಂಗಶೈಲಿಯನ್ನಾಗಿ ರೂಢಿಸಿಕೊಂಡವರು ಇಕ್ಬಾಲ್ ಅಹ್ಮದ್. ಸಾಗರದ ಉದಯ ಕಲಾವಿದರ ಅಟ್ಟದ ಹೆಸರಾಂತ ಕನ್ನಡದ ನಿರ್ದೇಶಕ ಎನ್.ಆರ್.ಮಾಸೂರ ಅವರ ನಿರ್ದೇಶನದಲ್ಲಿ ಕನ್ನಡ ರಂಗಭೂಮಿ ಪ್ರವೇಶಿಸಿ, ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಅಭ್ಯಾಸ ಮಾಡಿ ದೇಶದ ಹಲವಾರು ರಂಗಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಪಡೆದ ಅನುಭವದಿಂದ ಸ್ವತಂತ್ರವಾಗಿ ಮಕ್ಕಳ ರೆಪರ್ಟರಿಯನ್ನು ಕಟ್ಟಿ ಕರ್ನಾಟಕದಾದ್ಯಂತ ಪ್ರದರ್ಶನಗಳನ್ನು ಕೊಟ್ಟಿದ್ದಾರೆ. ಅವರ ವಿಶಿಷ್ಟ ಶೈಲಿ ಪರಂಪರೆ ಆಗಿ ಉಳಿಯಬೇಕೆಂಬ ಹಂಬಲದಿಂದಲೇ ಗುಡಿ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಿ ಕೆಲಸ ಆರಂಭಿಸಿದ್ದಾರೆ.
ಕಲಾಜಗತ್ತಿನ ಕನಸುಗಳಿಗೆ- ಜೇಡಿಮಣ್ಣಿನಲ್ಲಿ ಆಕೃತಿಗಳನ್ನು ತೀಡುತ್ತಿದ್ದ ಬಾಲ್ಯದ ಹುಚ್ಚುತನವೇ ಪ್ರೇರಣೆ. ಗ್ಯಾರೇಜು, ಆಟೋ, ಡ್ರೈವಿಂಗೂ ಅಂತ ಕಾಲಕಳೆಯಬೇಕಾಗಿದ್ದ ನನಗೆ ‘ಭಾರತ ಭಾಗ್ಯವಿಧಾತ’ ನಾಟಕ ರಂಗಭೂಮಿಯ ಬದುಕಿಗೆ ಬುನಾದಿ ಹಾಕಿತು. ಎನ್.ಆರ್.ಮಾಸೂರ ಅಂದ್ರೆ ಶ್ರೀರಂಗರ ನಾಟಕಗಳ ನಿರ್ದೇಶಕರು ಎಂದೇ ಹೆಸರಾದವರು. ಅವರು ಮಾತುಗಾರಿಕೆ, ಮಾತಿನ ಓಘ, ಘಾತ, ಲಯದ ಮೇಲೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಆದರೆ ನನಗೆ ನನ್ನ ಭಾಷೆಯ ಬಗ್ಗೆ ಮುಜುಗರ ಇತ್ತು. ಮಾತಿನ ಇಂಟೋನೇಶನ್ ಸರಿಯಾಗಿ ಬರದಿದ್ದಲ್ಲಿ ಅವರು ನನ್ನ ಬೆನ್ನ ಮೇಲೆ ಗುದ್ದಿ ತಿದ್ದುತ್ತಿದ್ದರು. ಆಗೆಲ್ಲ ಅವರು ನಾನು ಹೇಳದೆ ಬಿಟ್ಟು ಓಡಿಹೋಗ್ತೇನೆ ಅಂದುಕೊಂಡಿದ್ದರು. ಆದರೆ ನಾನು ಹಠದಿಂದ ಮಾತುಗಾರಿಕೆಯನ್ನು ಸಾಧಿಸುತ್ತಿದ್ದೆ. ಅಷ್ಟೆ ಅಲ್ಲ ರಂಗಭೂಮಿಯಲ್ಲೂ ನೆಲೆ ಕಂಡಿದ್ದೇನೆ. ಎಂದು ತಮ್ಮ ರಂಗಭೂಮಿಯ ಸುರುವಾತಿನ ದಿನಗಳ ನೆನೆದು ಭಾವುಕರಾಗುವ ಇಕ್ಬಾಲ್ ಅವರ ವ್ಯಕ್ತಿತ್ವದಲ್ಲಿ ಸುಬ್ಬಣ್ಣ, ಕಾರಂತರು, ಮಾಸೂರರು ಮತ್ತು ಶ್ರೀರಂಗ, ಕೈಲಾಸಂ, ದಾರಿಯೋ ಪೋ, ಷೇಕ್ಷಪೀಯರ ಮಹಾಶಯರು ನಿರ್ಮಿಸಿರುವ ಉದಾತ್ತ ಪಾತ್ರಗಳೂ ಮಿಲನಗೊಂಡಿವೆ.

`ಮಕ್ಕಳ ರಂಗಭೂಮಿ ಕನಸು ಆರಂಭವಾದದ್ದು ಭಾರತ ಭವನ ರಂಗಮಂಡಲದಿಂದ ಅನ್ನಬಹುದು. ನಾನು ನೀನಾಮ್ ವಿದ್ಯಾರ್ಥಿಗಳಿಗೆ ಬುರ್ಜ್ವಾ ದಿ ಜಂಟಲಮನ್ ನಾಟಕ ಮಾಡಿಸಿದ್ದೆ. ಆ ನಾಟಕದ ವಿನ್ಯಾಸ ಹೆಗ್ಗೋಡಿನ ಹಿತೈಷಿಗಳಿಗೆ ಬೆರಗು ಮೂಡಿಸಿತ್ತು. ಆ ಸುದ್ದಿ ಬಿ.ವಿ.ಕಾರಂತರ ಕಿವಿಗೆ ಬಿದ್ದದ್ದೆ ನನ್ನನ್ನು ಭೋಪಾಲಿಗೆ ಬರಲು ಹೇಳಿ ಕಳುಹಿಸಿದರು. ಆಗ ನಾನು ಕಾಸರಗೋಡಿನಲ್ಲಿ ನಾಟಕ ಮಾಡಿಸುತ್ತಿದ್ದೆ. ನಾಟಕ ಮುಗಿಸಿ ಬಂದಾಗ ಕಾರಂತರು ಕರೆದೊಯ್ಯಲು ಹೆಗ್ಗೋಡಿಗೆ ಬಂದಿದ್ದರು. ಮುಂದೆ ರಂಗಮಂಡಲದಿಂದ ರೈಲಿನಲ್ಲಿ ಹಿಂದಿರುಗುವಾಗ ನನಗೆ ಮಕ್ಕಳಿಗಾಗಿ ದೊಡ್ಡವರು ನಾಟಕ ಮಾಡುವ ಆಲೋಚನೆ ಬಂತು. ಅಲ್ಲಿಂದ ಬಂದವನೆ ಚಿಣ್ಣ-ಬಣ್ಣ ರೆಪರ್ಟರಿ ಆರಂಭಿಸಿದೆ.
ಮುವ್ವತ್ತೈದು ವರ್ಷಗಳ ರಂಗಭೂಮಿಯ ಜೀವನದಲ್ಲಿ ಚಿಣ್ಣ-ಬಣ್ಣ ರೆಪರ್ಟರಿ ಸ್ಥಾಪಿಸಿ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ಚಿತ್ರ-ಶಿಲ್ಪಕಲೆಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ರಾಜ್ಯದಾದ್ಯಂತ ನಾಟಕ ಸಂಸ್ಕೃತಿ ಬೆಳೆಸುವಲ್ಲಿ ಪ್ರಮುಖರಾದ ನಿದರ್ೇಶಕರುಗಳಲ್ಲಿ ಇವರ ಹೆಸರೂ ಮಾನ್ಯವಾಗಿದೆ. ಹ್ಯಾಮ್ಲೆಟ್, ಪೋಲಿಕಿಟ್ಟಿ, ಬೂರ್ಜ್ವಾ ದಿ ಜಂಟಲ್ ಮನ್, ವಿದಿಶೆಯೇ ವಿದೂಷಕ, ಉಂಡಾಡಿ ಗುಂಡ, ಸೂಳೆ ಸನ್ಯಾಸಿ ಇವರು ಮಾಡಿಸಿರುವ ಪ್ರಮುಖ ನಾಟಕಗಳು. ರಂಗಾಯಣದ ಚಿಣ್ಣರಮೇಳ, ಆದಿಮ ಸಂಸ್ಥೆಯ ಮಕ್ಕಳ ಶಿಬಿರಗಳು ಇವರ ಸಾರಥ್ಯದಲ್ಲಿಯೇ ಆರಂಭಗೊಂಡವು.
ಒಬ್ಬ ಏನೆಲ್ಲ ಆಗಬಲ್ಲ – ಆದರೆ ಕ್ರಿಯಾಶೀಲನಾಗಿ ಎಷ್ಟು ಸಾಧಿಸಬಲ್ಲ ಎಂಬ ಮಾತಿಗೆ ಇವರ ಫ್ಯಾಂಟಸಿಯ ದುನಿಯಾ ವಿಶಾಲವಾದುದು. ರಂಗನಿರ್ದೇಶಕ, ರಂಗವಿನ್ಯಾಸಕ, ಚಿತ್ರಕಾರ, ಶಿಲ್ಪಿ, ನೃತ್ಯಸಂಯೋಜಕ, ಸಂಘಟಕರಾಗಿಯೂ ಗುರುತಿಸಿಕೊಂಡವರು. ವಿಶೇಷವಾಗಿ ಅವರ ಶೈಲಿಯ ನಾಟಕಗಳಲ್ಲಿ ಆದಿಮ ಸಂಸ್ಕೃತಿಯ ಭಾವಸ್ಫಂದನೆಯ ಗುಣಗಳು ನಟನ ದೇಹಕ್ಕೆ ಪೂರಕವಾಗಿ, ಭಾವಪ್ರೇರಕವಾಗಿ ಅಭಿವ್ಯಕ್ತಗೊಳ್ಳುವ ವಿಧಾನವೊಂದು ಕ್ರಿಯೆಯಾಗಿ ಒದಗಿಬರುತ್ತದೆ. ಅದು ವ್ಯವಹರಿಸುವ ಜ್ಞಾನ ಸಹಜವಾದ್ದು ಅನ್ನುವ ಕಾರಣದಿಂದ ಅದರ ಗ್ರಹಿಕೆ ಮೇಲ್ಮಟ್ಟಕ್ಕೆ ಲೈಂಗಿಕ ಅಪೇಕ್ಷೆಯ ಹಾಗೆ ಅಥವಾ ಕ್ಲೀಷೆ ಎಂದೆನ್ನಿಸಬಹುದು. ಆದರೆ ಲೋಕರೂಢಿಯಲ್ಲಿ ದಮನಿಸಲ್ಪಟ್ಟ ಆಕಾಂಕ್ಷೆಗಳನ್ನು ಆಯಾ ಪಾತ್ರದ ಆವರಣಕ್ಕೆ ಸಂಬಂಧಪಟ್ಟಂತೆ ಮರು ನಿರೂಪಿಸುವ ಅವರ ಅಭಿನಯ ಕ್ರಮ ರಮ್ಯವಾಗಿದೆ. ನಾಟಕದ ಆರಂಭದಿಂದ ಅಂತ್ಯದವರೆಗೆ ಎಲ್ಲಾ ಪಾತ್ರಗಳಲ್ಲೂ ಒತ್ತೊತ್ತಿ ಬರುವ ಬಾಹ್ಯಚೇಷ್ಟೆಗಳು, ಆ ಆಂಗಿಕಕ್ಕೆ ಸರಿಹೊಂದುವ ಮಾತಿನಶೈಲಿಯೂ, ರಂಗವಿನ್ಯಾಸವೂ, ವಸ್ತ್ರಾದಿಯಾಗಿ ಒಟ್ಟೂ ರಂಗತಂತ್ರವೂ ವಿಭಿನ್ನಶೈಲಿಯಲ್ಲಿ ಮೂರ್ತಗೊಂಡಿರುತ್ತವೆ. ಈ ರೀತಿಯ ರಂಗಶೈಲಿಯ ಅಧ್ಯಯನದ ಹುಡುಕಾಟವನ್ನು ಇನ್ನೂ ಗಟ್ಟಿಗೊಳಿಸುವ ಸಲುವಾಗಿ ಇಕ್ಬಾಲ್ ಅಹ್ಮದ್ ಅವರು ಶಿಕಾರಿಪುರದಲ್ಲಿ ‘ಗುಡಿ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಿದ್ದಾರೆ. ಅದು ರಂಗಭೂಮಿಯವರ ಲ್ಯಾಬ್ (ಪ್ರಯೋಗಾಲಯ) ಆಗಿ ಬೆಳೆಸಬೇಕೆಂಬ ಹಂಬಲವೂ ಅವರಿಗಿದೆ.

ಶನಿವಾರ, ನವೆಂಬರ್ 17, 2012

ಶ್ರೀಕೃಷ್ಣ ಸಂಧಾನ ನಾಟಕದ ಕೆಲ ದೃಶ್ಯಗಳು







ಇಂದಿನ ಕಥೆ



ದೀಪಾವಳಿಯ ಶುಭಾಶಯಗಳೊಂದಿಗೆ. . ,

*ಹಿಂದೊಂದು ದಿನ, ಮಾನವ ಸಕಲ ಜೀವ ಕೋಟಿಗಳಲ್ಲಿ ಕೇವಲ ಒಂದು ಪ್ರಾಣಿಯಾಗಿದ್ದ. . .
*ಮುಂದೊಂದು ದಿನ ದಿಢೀರ್‌ ನಾಗರೀಕನಾಗಿಬಿಟ್ಟ. . .
*ಹೀಗೊಂದು ದಿನ ತನ್ನ ನಾಗರೀಕ ಬದುಕಿನಲ್ಲಿ ಪ್ರತಿ ನಿತ್ಯದ ಕಾರ್ಯವಾಗಿ ಹಲ್ಲುಜ್ಜಲು ಶುರುಮಾಡಿದ. . .
*ಈಗೊಂದು ದಿನ ಬಿಗ್‌ ಬಜಾರ್‌, ಮೋರ್‌ನಂತಹ ಶಾಪಿಂಗ್‌ ಮಾಲ್‌ಗಳ ಒಂದು ಮೂಲೆಯಲ್ಲಿ :ಒಂದು ಕಡೆ  ಬೇವು, ಮೆಣಸು, ಉಪ್ಪು ಮಿಶ್ರಿತಪುಡಿ : ಇನ್ನೊಂದು ಕಡೆ ದೊಡ್ಡ ಕಂಪನಿಗಳ ಆಕರ್ಷಕ ಟೂತ್‌ ಪೇಸ್ಟ್‌ಗಳು ಹಲ್ಲುಜ್ಜೋಕೆ. . .
*ಇದರ ಮುಂದೆ ನಾಗರೀಕ ಗ್ರಾಹಕ. . .
*ಇದು ಕಥೆ.


ನಂ. ಯತೀಶ (ಯಶೀ)
ಕೊಳ್ಳೇಗಾಲ
yashee.82@gmail.com
೯೪೮೨೩೦೮೦೬೬.
----------

ಶನಿವಾರ, ಅಕ್ಟೋಬರ್ 13, 2012

ಜನಪದದಲ್ಲಿ ಕಲೆ – ಚಿತ್ರಕಲೆ

ಜನಪದ ಚಿತ್ರಕಲೆ


- ಡಾ. ಪ್ರಕಾಶ ಗ. ಖಾಡೆ

ಜಾನಪದ ಎಂಬುದು ಬರೀ ಹಾಡು, ಕುಣಿತವಲ್ಲ. ಅದು ಬದುಕಿನ ಎಲ್ಲ ಮಗ್ಗುಲಗಳನ್ನು ಒಳಗೊಂಡ ವಿಶ್ವವ್ಯಾಪಿ ಅನಾವರಣ. ಜಾನಪದ ಜಗದಗಲ ಮುಗಿಲಗಲ ವ್ಯಾಪಕತೆ ಹೊಂದಿದೆ. ಯಾವ ಮಡಿವಂತಿಕೆ ಇಲ್ಲದೇ ದೇಸಿ ಬದುಕಿನ ಅಕ್ಷಯ ನಿಧಿ ಜಾನಪದ. ಇಂದು ಜಾನಪದ ಬಗೆಗಿನ ಅಧ್ಯಯನ ಕ್ಷೇತ್ರ ವ್ಯಾಪಕಗೊಳ್ಳುತ್ತಿರುವ ಹೊತ್ತಿನಲ್ಲಿ ಆಧುನಿಕ ಸಂದರ್ಭದಲ್ಲೂ ಜಾನಪದದ ಮಹತಿಯ ಅರಿವಾಗುತ್ತಿದೆ. ನೆಲ ಮುಗಿಲ ಸಕಲ ಚರಾಚರ ವಸ್ತುಗಳಲ್ಲೂ ಜಾನಪದವಿದೆ. ಬಹು ಶಿಸ್ತಿನ ಅಧ್ಯಯನ ನೆಲೆಗಳೆಲ್ಲ ಇವತ್ತು ಜಾನಪದದ ನೆಲೆಗಟ್ಟಿನಿಂದ ಆರಂಭವಾಗುತ್ತಿರುವುದು ಜಾನಪದ ಹಿರಿಮೆಯನ್ನು ಸಾರುತ್ತಿದೆ.
ಜನಪದ ಕಲೆಗಳು ಜನಾಂಗದಿಂದ ಜನಾಂಗಕ್ಕೆ ಕೊಡುಗೆಗಳಾಗಿ ಬಂದಿವೆ. ಕೈಗಾರಿಕಾ ಕ್ರಾಂತಿಯಿಂದ ಜನರು ಹಳ್ಳಿಗಳನ್ನು ತೊರೆದು ನಗರದತ್ತ ಮುಖ ಮಾಡಿದಾಗ ಜಾನಪದದ ಅಳಿವು ಆರಂಭವಾಯಿತೆಂದೇ ಭಾವಿಸಲಾಗಿತ್ತು. ಈ ಆತಂಕವನ್ನು ನಮ್ಮ ಪಂಡಿತ ಜನ ಬುಗಿಲೆಬ್ಬಿಸಿ ಜಾನಪದವನ್ನು ಸಂಕುಚಿತವಾಗಿ ಕಾಣುವ ಸಂದರ್ಭ ತಂದಿಟ್ಟರು. ಆದರೆ, ಜಾನಪದವೆಂಬುದು ಸಾಯುವ ಸರಕಲ್ಲ, ಅದು ಪರಂಪರೆಯಿಂದ ಪರಂಪರೆಗೆ ಕಾಲಕ್ಕನುಗುಣವಾಗಿ ಬದಲಾಗುತ್ತ ಹೊಸರೂಪ ತಾಳುತ್ತ ಉಳಿದುಕೊಂಡು ಬಂದಿದೆ. ಬರುತ್ತಿದೆ. ಹೀಗಾಗಿ ಜಾನಪದವು ಗತಕಾಲದ ಪ್ರತಿಧ್ವನಿ ಮಾತ್ರವಲ್ಲ, ಸಮಕಾಲೀನ ಸಂದರ್ಭದ ಸಶಕ್ತ ಧ್ವನಿಯಾಗಿದೆ.
ಜಾನಪದ ಬಳಕೆ ಇಂದು ದ್ವಿಮುಖಿಯಾಗಿದೆ. ಸಹಜ ಮತ್ತು ಕೃತಕ ಜೀವನದ ನಡೆಯಲ್ಲಿ ನಾವು ಜಾನಪದವನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಕಾರಣವಾಗಿ ಆಧುನಿಕರ ಕೈಯಲ್ಲಿ ಜಾನಪದವೆಂಬದು ಬಳಸಿ ಬೀಸಾಕುವ ಸಂಸ್ಕೃತಿ ಎನ್ನಿಸಿದೆ. ಹಾಡು ಕಟ್ಟುವುದು. ಚಿತ್ರ ಬಿಡಿಸುವುದು, ಗಾದೆ, ಒಗಟು, ಒಡಪು ಹೇಳುವುದು ಎಲ್ಲ ಸಹಜ ಕಲೆಗಳಾದರೆ, ಇವು ಪ್ರದರ್ಶನ ಸಂದರ್ಭದಲ್ಲಿ ವ್ಯಾಪಾರೀಕಣದ ಬಾಹುಗಳಲ್ಲಿ ತುಂಬಾ ಕೃತಕವಾಗಿ ಬಿಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಜಾನಪದವನ್ನು ಸಹಜ, ಸರಳ ಹಾಗೂ ತಾಜಾತನದ ಅನುಭವಗಳಿಂದ ಗ್ರಹಿಸಬಲ್ಲ ಮನಸ್ಸುಗಳು ಮಾತ್ರ ಜಾನಪದವನ್ನು ಅರಿಯಬಲ್ಲ ಭೂಮಿಕೆಗಳಾಗಿವೆ.
ಜನಪದ ಚಿತ್ರಕಲೆಗೆ ಪ್ರಾಚೀನ ಕಾಲದ ಇತಿಹಾಸವಿದೆ. ಜನಪದದ ಬಹುಪಾಲು ಕಲೆಗಳಿಗೆ ಲಿಖಿತ ಆಧಾರ ಗುರುತಿಸುವುದು ಕಷ್ಟ. ಮಾನವನ ಬದುಕಿನಲ್ಲಿ ರೇಖೆಗಳ ಬಳಕೆಯೊಂದಿಗೆ ಚಿತ್ರಕಲೆ ಮೊದಲಾಯಿತು. ಭಾಷೆಗೆ ಮುನ್ನ ಸಂಜ್ಞೆಗಳಿದ್ದಂತೆ, ಲಿಪಿಗೆ ಮುನ್ನ ಚಿತ್ರಕಲೆ ಬಳಕೆಯಲ್ಲಿತ್ತು. ಮಾನವನ ಸಂವಹನ ಮಾಧ್ಯಮವಾಗಿ ರೇಖೆಗಳ ಸಂಕೇತಗಳು ಬಳಕೆಯಲ್ಲಿದ್ದವು. ಜಗತ್ತಿನ ಅತ್ಯಂತ ಪ್ರಾಚೀನ ಚಿತ್ರಕಲೆಯ ಕುರುಹುಗಳು ಸ್ಪೇನಿನ ಗುಹೆಗಳಲ್ಲಿ ಹಾಗು ಫ್ರಾನ್ಸಿನ ಡೊರಡೊನ್ ಪ್ರಾಂತ್ಯದ ಲಾಗ್ರೀಜ್ ಎಂಬ ಗವಿಗಳಲ್ಲಿ ದೊರೆತಿವೆ. ಹಾಗೆನೇ ಸುಮಾರು ಇಪ್ಪತ್ತೇಳು ಸಾವಿರ ವರ್ಷಗಳ ಹಿಂದೆ ಅರಿನೇಷಿಯನ್ ನಾಗರಿಕತೆಯ ಕಾಲದಲ್ಲಿ ದೊರೆತ ಮನುಷ್ಯಾಕೃತಿಯ ಚಿತ್ರಗಳೇ ಹಳೇಯವು ಎಂಬ ಅಭಿಪ್ರಾಯವಿದೆ.
ಆದಿ ಮಾನವನ ಬದುಕಿನ ಘಟನಾವಳಿಗಳನ್ನು ಅವರು ಬಿಟ್ಟುಹೋದ ಚಿತ್ರಕಲೆಯಿಂದ ಅರಿಯುತ್ತೇವೆ. ಪ್ರಾಚೀನ ಮಾನವರು ಬಂಡೆ, ಗುಹೆಗಳಷ್ಟೇ ಅಲ್ಲದೇ, ವೃಕ್ಷಗಳ ತೊಗಟೆ, ಚರ್ಮ, ಎಲುಬು, ಕೊಂಬು ಇತ್ಯಾದಿ ವಸ್ತುಗಳ ಮೇಲೆ ಚಿತ್ರ ಬಿಡಿಸುತ್ತಿದ್ದರು. ಇವುಗಳ ಮೇಲೆ ಪ್ರಾಣಿ, ಪಕ್ಷಿ, ಕೃಷಿ, ಯುದ್ಧ, ಮಾಟ ಮಂತ್ರಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸುತ್ತಿದ್ದರು.
ಭಾರತದ ಪ್ರಾಚೀನ ಚಿತ್ರಕಲೆಯ ಕುರುಹುಗಳು ಕನರ್ಾಟಕದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ “ಗೊಂಬಿಗುಡ್ಡ”ದಲ್ಲಿ ಕಾಣುತ್ತೇವೆ. ಪ್ರಾಗೈತಿಹಾಸಿಕ ಕಾಲದ ಈ ಗುಡ್ಡದ ಬಂಡೆಗಳ ಮೇಲಿರುವ ಚಿತ್ರಗಳು ಆ ಕಾಲದವರ ಕಲಾಭಿಜ್ಞತೆಗೆ ಸಾಕ್ಷಿಯಾಗಿವೆ. ಇಲ್ಲಿ ಪಲ್ಲಕ್ಕಿ, ಜಿಂಕೆ, ಆನೆ, ಸಾರಂಗ ಮುಂತಾದ ಪ್ರಾಣಿಗಳ ಒಂಟಿ ಚಿತ್ರಗಳಲ್ಲದೇ, ಒಂಟಿ ಸವಾರರು, ಹೋರಿ ಕಾಳಗ, ಬೇಟೆಯಾಡುವ ಮನುಷ್ಯರು ಈ ಮೊದಲಾದ ಚಿತ್ರಗಳಿವೆ. ಹೀಗೆ ಬಂಡೆಗಳ ಮೇಲೆ ಚಿತ್ರ ಬಿಡಿಸಿದ ನಮ್ಮ ಜನಪದರು ಕಾಲಕ್ರಮದಲ್ಲಿ ಭಿತ್ತಿ ಚಿತ್ರಗಳು, ಹಬ್ಬದ ಸಂದರ್ಭದ ಚಿತ್ರಗಳನ್ನು ಬಿಡಿಸುತ್ತ ಮನೆ, ಮಠ, ದೇವಾಲಯ, ಅರಮನೆಗಳಲ್ಲೂ ಸ್ಥಾನ ಪಡೆದು ಜನಪದ ಚಿತ್ರಕಲೆಗೆ ತುಂಬಾ ವ್ಯಾಪಕವಾದ ಕ್ಯಾನವಾಸ್ ರೂಪಿಸಿದರು.
ಆರಾಧನಾ ಸಂಸ್ಕೃತಿಯೇ ಮೂಲ:
ಜನಪದ ಚಿತ್ರಕಲೆ ಕೇವಲ ಗೃಹಾಲಂಕಾರದ ಚಿತ್ರ ವಿನ್ಯಾಸಕ್ಕೆ ವಸ್ತುವಾಗದೇ ಆರಾಧನಾ ಮೂಲ ಸಂಸ್ಕೃತಿಯಿಂದ ರೂಪಿತವಾದವು. ನಾಗರ ಪಂಚಮಿ, ದೀಪಾವಳಿ, ಯುಗಾದಿ ಮೊದಲಾದ ಹಬ್ಬಗಳ ಸಂದರ್ಭಗಳಲ್ಲಿ ಜನಪದರು ಬಿಡಿಸುವ ಚಿತ್ರಗಳು ಪರಂಪರಾಗತ ಕಲೆಯ ಮುಂದುವರಿಕೆಯಾಗಿವೆ. ಜನಪದರ ಮನೆಯ ಗೋಡೆ, ಮಾಳಿಗೆಗಳಿಗೆ ಮಾಡಿದ ಅಲಂಕರಣ ಚಿತ್ರಗಳು “ಬಿತ್ತಿ ಚಿತ್ರ”ಗಳಾಗಿ ಹೆಸರಾಗಿವೆ. ಕನರ್ಾಟಕದ ಹಿರಿಯೂರು, ಸಿರಾ, ಶ್ರೀರಂಗಪಟ್ಟಣ, ಶ್ರವಣಬೆಳಗೂಳ, ಗುಳೇದಗುಡ್ಡ, ಇಳಕಲ್ಲು ಮೊದಲಾದ ಕಡೆಯ ಬಿತ್ತಿ ಚಿತ್ರಗಳು ತುಂಬಾ ಜನಪ್ರಿಯವಾಗಿವೆ. ರಾಮಾಯಣ, ಮಹಾಭಾರತ ದೃಶ್ಯಗಳು ಶಿವ, ವಿಷ್ಣು ಪರವಾದ ಕಥಾನಕಗಳು ಇಲ್ಲಿ ಚಿತ್ರರೂಪ ಕಂಡಿವೆ.

ಮನೆಗೆ ಸುಣ್ಣ ಹಚ್ಚುವುದು, ಹೊಸ್ತಿಲನ್ನು ಕೆಮ್ಮಣ್ಣಿನಿಂದ ಸಾರಿಸುವುದು. ಅಲ್ಲಲ್ಲಿ ಚಿತ್ರ ಬಿಡಿಸುವುದು ಜನಪದ ಚಿತ್ರಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ. ಮನೆ, ದೇವಾಲಯ ಮೊದಲಾದ ಕಡೆಗಳಲ್ಲಿ ಬಿಡಿಸುವ ರಂಗೋಲಿ ಕಲೆಯು ಜನಪದರ ಗೃಹಾಲಂಕಾರಕ್ಕೆ ಸಂಬಂಧಿಸಿದ ಒಂದು ಮಹತ್ವಪೂರ್ಣ ಚಿತ್ರಕಲೆಯಾಗಿದೆ. ಹೊಸ್ತಿಲು ಮುಂದಿನ ಬೆಳಗಿನ ಬೆಳದಿಂಗಳಾದ ರಂಗೋಲಿಯು ನಮ್ಮ ಹಳ್ಳಿ ಹೆಣ್ಣುಮಕ್ಕಳ ಕಲಾ ನೈಪುಣ್ಯಕ್ಕೆ, ಕಲ್ಪನಾ ಶಕ್ತಿಗೆ ಪ್ರತೀಕವಾಗಿದೆ. ಶಿವರಾಮ ಕಾರಂತರು “ರಂಗೋಲಿ” ಎಂದರೆ ಮನೆಯ ಮುಂದೆ ಬರೆಯುವ ಚಿತ್ರ ಕೆಲಸ ಎಂದಿದ್ದಾರೆ. ಆರನೆಯ ಶತಮಾನದಲ್ಲಿ ಬದುಕಿದ್ದ ಬಾಣಕವಿ ತನ್ನ “ಕಾದಂಬರಿ” ಯಲ್ಲಿ ಸೂತಿಕಾಗೃಹದ ಮುಂದೆ ರಂಗೋಲಿ ಹಾಕುವುದನ್ನು ವಿವರಿಸಿದ್ದಾನೆ. ಶುಭ ಹೆರಿಗೆ, ಬಾಣಂತಿ ರಕ್ಷಣೆಯ ಆಶಯದ ಹಿನ್ನೆಲೆಯಲ್ಲಿ ಈ ಕಲೆಯ ಬಳಕೆ ಕಾಣುತ್ತೇವೆ. ರಂಗೋಲಿಯ ಉಲ್ಲೇಖವು ಜನಪದ ಗೀತೆ, ಕಥೆ, ಒಗಟು, ಒಡಪು, ಗಾದೆಗಳಲ್ಲಿ ಕಾಣುತ್ತೇವೆ.
ಒಡಪು : ಅಂಗಳದಾಗ ರಂಗೋಲಿ ಹಳಕ
ಆಕಾಶದಾಗ ಚಂದ್ರನ ಬೆಳಕ
ನನ್ನ ಜೀವನದಾಗ ನನ್ನ ರಾಯರ ಥಳಕ
ಗಾದೆ : ಆತ ಚಾಪೆ ಕೆಳಗೆ ತೂರಿದರೆ
ನಾನು ರಂಗೋಲಿ ಕೆಳಗೆ ತೂರುತ್ತೇನೆ.
ರಂಗೋಲಿಯು ಭಾರತದ ಪ್ರಾಚೀನ ಜನಪದ ಕಲೆಯಾಗಿದೆ.
ಸೌಂದರ್ಯ ಪ್ರಜ್ಞೆಯ ಜೀವಾಳ:
ಜನಪದ ಚಿತ್ರಕಲೆ ಸೌಂದರ್ಯ ಪ್ರಜ್ಞೆಯ ಜೀವಾಳವಾಗಿದೆ. ಜನ್ಮಜಾತವಾಗಿ ಬಂದ ರೂಪದೊಂದಿಗೆ ಕಲೆಯ ಸೊಬಗನ್ನು ತಮ್ಮ ಮೈಮೇಲೆ ಬಿಡಿಸಕೊಂಡು ಇಮ್ಮಡಿ ಸೌಂದರ್ಯದ ಸಿರಿವಂತಿಕೆಯಿಂದ ನಮ್ಮ ಜನಪದರು ಗುರುತಿಸಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಜನಪದ “ಹಚ್ಚೆ” ಚಿತ್ರಕಲೆ ನಮ್ಮ ಕಣ್ಣ ಮುಂದಿದೆ.

ಜನಪದರ ದೃಶ್ಯಕಲೆಗೆ ಸೇರಿದ “ಹಚ್ಚೆ” ವಿಶ್ವದ ಅನೇಕ ಕಡೆಗೆ ಈಗಲೂ ಉಳಿದುಕೊಂಡು ಬಂದಿದೆ. ಹಚ್ಚೆ, ಅಚ್ಚೆ, ಹಂಚೆ, ಹಂಚಿಬಟ್ಟು, ಹಣಚಿ, ಅಣಚಿ, ಅಣ್ಣಿ ಈ ಮೊದಲಾದ ಹೆಸರುಗಳಿಂದ ಈ ಕಲೆಯನ್ನು ಕರೆಯುತ್ತೇವೆ. ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ರಸ ದೇಹದ ಮೇಲಿನ ಚಿತ್ರಗಳಿಗೆ ಹಳದಿ ಮಿಶ್ರಿತ ಹಸಿರು ಬಣ್ಣದ ಛಾಯೆಯನ್ನು ಕೊಡುವುದರಿಂದ ಈ ಕಲೆಗೆ ಹಚ್ಚೆ ಎಂದು ಹೆಸರು ಬಂದಿದೆ. ಗರತಿತನದ, ಸೌಭಾಗ್ಯದ ಸಂಕೇತವಾದ ಹಚ್ಚೆಯ ಬಗೆಗೆ ರೂಢಿ ಮಾತೊಂದು ಹೀಗಿದೆ “ಸತ್ತಾಗ ನಮಕೂಟ ಬರುವುದು ಹಚ್ಚೆ, ಬಂಗಾರ, ಬೆಳ್ಳಿ ಯಾವ ಒಡವೆಗಳಲ್ಲ” ನೋಟಕ್ಕೆ ಕಾಣುವ ದೇಹದ ಎಲ್ಲ ಭಾಗಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹೂವು, ಚಂದ್ರ, ನಕ್ಷತ್ರ, ಶಿಲುಬೆ, ಕಮಲ, ಚುಕ್ಕೆ, ಶಂಖ, ಮುತ್ತಿನ ಬಳ್ಳಿ, ಒಡವೆ, ಬಾಸಿಂಗ, ನವಿಲು, ಕುದುರೆ, ಬಾಳೆಗಿಡ, ತಾವರೆ ಹೂ, ನಿಂಬೆ ಸಸಿ, ನಂದಿಕೋಲು, ಜೋಗಿ ಜಡೆ, ಸೀತೆ ಸೆರಗು, ಶಿವನ ಬಾಸಿಂಗ, ಹಂಪಿ ತೇರು ಹೀಗೆ ಹಲವು ರೂಪಗಳಲ್ಲಿ ಹಚ್ಚೆ ಚಿತ್ರಗಳನ್ನು ಕಾಣುತ್ತೇವೆ. ಜನಪದ ಗೀತೆಗಳಲ್ಲಿ ಹಚ್ಚೆಯ ಹಾಡುಗಳು ಸಾಕಷ್ಟಿವೆ. ಹಚ್ಚೆ ಕಲಾವಿದರು ಜನಪದ ಗೀತೆಗಳನ್ನು ಹೇಳುತ್ತ ಹಚ್ಚೆ ಹಾಕುತ್ತಾರೆ. ಹಚ್ಚೆ ಉಲ್ಲೇಖದ ಒಂದು ಜನಪದ ಗೀತೆ ಹೀಗಿದೆ.
ಹಂಚಿ ಬೊಟ್ಟಿನ ಕೈಯ ಒತ್ತಿ ಹಿಡಿಯಲು
ಬ್ಯಾಡ, ನನರಾಯ ನೆತ್ತರಿಳಿದಾವ
ಕಿರಿಬಳ್ಳಿ
ಆಧುನಿಕ ಕಾಲದ ಮಹಿಳೆಯರ ಬದಲಾಗುತ್ತಿರುವ ಸೌಂದರ್ಯ ಪ್ರಜ್ಞೆಯ ಆತಂಕಕಾರಿ ಬೆಳವಣಿಗೆಯ ನಡುವೆಯೂ ಅನೇಕ ದೇಶಗಳಲ್ಲಿ “ಹಚ್ಚೆ” ಕಲೆ ಮಾಯವಾಗುತ್ತ ನಡೆದಿದೆ. ಆದರೂ ವಿಶ್ವದ ಹಿರಿಯಣ್ಣನಾದ ಅಮೇರಿಕೆಯೊಂದರಲ್ಲಿಯೇ ಮುನ್ನೂರು ಕೋಟಿ ಜನ ಹಚ್ಚೆ ಕಲೆ ಬಿಡಿಕೊಂಡಿರುವುದು ಈ ಕಲೆಯ ವಿಶ್ವಮಾನ್ಯತೆಯನ್ನು ಸಾರುತ್ತದೆ.

ಕಲೆಯ ಸಿರಿವಂತಿಕೆಯ ಬೆಡಗು :
ಜನಪದ ಚಿತ್ರಕಲೆ ಕಲಾತ್ಮಕತೆಗೆ ಮಿಗಿಲಾದುದು. ಸಹಜತೆ, ಸರಳತೆ ಹಾಗೂ ಮೋಹಕತೆಯಿಂದ ಯಾರನ್ನೂ ಸೆಳೆಯುವಂಥದು. ಜನಪದರ ಮದರಂಗಿ ಕಲೆ ಈ ಬಗೆಯ ಮೋಹಕತೆಯಿಂದ ತನ್ನ ಜನಪ್ರಿಯತೆ ಉಳಿಸಿಕೊಂಡು ಬಂದಿದೆ. ಮದುವೆ ಸಂದರ್ಭದಲ್ಲಿ ಶಾಸ್ತ್ರ ರೂಪವಾಗಿ ಮದರಂಗಿ ಕಲೆಯನ್ನು ಅಂಗೈ ಮತ್ತು ಪಾದಗಳ ಮೇಲೆ ಚಿತ್ರಿಸುವ ಆಚರಣೆ ಜನಪದರಲ್ಲಿ ರೂಢಿಗತವಾಗಿದೆ. ಮದರಂಗಿ ಕಲೆಯಲ್ಲಿ ಹಲವು ಬಗೆಯ ಚಿತ್ತಾರಗಳನ್ನು ಕಾಣುತ್ತೇವೆ. ಮಾನವ, ಪ್ರಾಣಿ, ಪಕ್ಷಿ ಆಕೃತಿಯ ಚಿತ್ರಗಳಿಗಿಂತ ಹೆಚ್ಚಾಗಿ ಬಳ್ಳಿ, ಆಕೃತಿ, ಸುಳುಹುಗಳ ಚಿತ್ರಗಳನ್ನು ಬಿಡಿಸುತ್ತಾರೆ. ಆರಾಧನಾ ಮೂಲ ಸಂಕೇತ ಪ್ರಧಾನ ಆಕೃತಿಗಳಾದ ಸ್ವಸ್ತಿಕ, ಓಂ, ಶ್ರೀ, ಸೂರ್ಯ, ಚಂದ್ರ ಮೊದಲಾದ ಕಲೆ ಕಾಣುತ್ತೇವೆ. ಹೆಣ್ಣು ಮಕ್ಕಳಿಗೆ ಹಬ್ಬದ ಸಂಭ್ರಮದ ಸಂಕೇತವಾಗಿ ಮದರಂಗಿ ಕಲೆ ಉಳಿದುಕೊಂಡು ಬಂದಿದೆ. ಸಣ್ಣ ಸಣ್ಣ ಚುಕ್ಕೆಗಳ ಮೂಲಕ ಹೂವಿನ, ಎಲೆಯ, ಬಳ್ಳಿಗಳ ಚಿತ್ರ ಬಿಡಿಸುತ್ತಾರೆ. ಅಂಗೈ, ಮುಂಗೈಗಳ ಮೇಲೆ ಬಿಡಿಸಿದ ಮದರಂಗಿಯ ಕೆಂಪನೆಯ ಚಿತ್ರಗಳು ಹೆಂಗಳೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವುದರ ಜೊತೆಗೆ ಆರೋಗ್ಯ ಮತ್ತು ತಾರುಣ್ಯವನ್ನು ಸಂಕೇತಿಸುತ್ತವೆ. ಮದರಂಗಿ ಕಲೆ ಬಿಡಿಸುವಾಗ ಹೆಣ್ಣುಮಕ್ಕಳು ಸೋಬಾನೆ ಮೊದಲಾದ ಜನಪದ ಗೀತೆಗಳನ್ನು ಹಾಡುತ್ತಾರೆ.
ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಕತ್ತರಿಸಿ, ವಿಶಿಷ್ಟ ಹೆಣಿಕೆಯ ಮೂಲಕ ಮೋಹಕ ಕಲೆಯನ್ನು ಎಳೆಗಳ ಮೂಲಕ ಬಿಡಿಸುವ ಜನಪದರ “ಕೌದಿ ಚಿತ್ರಕಲೆ” ತುಂಬಾ ಪ್ರಾಚೀನವಾದುದು. ಕ್ರಿ.ಶ. ಸುಮಾರು ಎರಡನೆಯ ಶತಮಾನದ ಆಯುವರ್ೇದ ಶಾಸ್ತ್ರ ಕೃತಿ “ಚರಕ ಸಂಹಿತಾ” ಕೌದಿಯನ್ನು ಉಲ್ಲೇಖಿಸುವ ಪ್ರಾಚೀನ ದಾಖಲೆಯಾಗಿದೆ. ನಮ್ಮ ಜನಪದರು ಕೌದಿಯಲ್ಲಿ ವೈವಿದ್ಯತೆಯ ಚಿತ್ತಾರಗಳನ್ನು ಬಿಡಿಸುತ್ತಾರೆ. ಹೀಗಾಗಿ ಕೌದಿಯು ಜನಪದ ಸ್ತ್ರೀಯರ ಸೌಂದರ್ಯ ಪ್ರಜ್ಞೆಯ ಅಭಿವ್ಯಕ್ತಿಯಾಗಿದೆ.
ಕೌದಿಗಳಲ್ಲಿ ನಮ್ಮ ಜನಪದರು ರಾಮಾಯಣ, ಮಹಾಭಾರತ ಪ್ರಸಂಗಗಳ ರಾಮನ ತೊಟ್ಟಿಲು, ಸೀತೆ, ಲವಕುಶ, ಮಾಯಾಮೃಗ, ರಾವಣ, ಹಣಮಂತ, ಪಗಡೆಯಾಟ ಮೊದಲಾದ ಚಿತ್ರಗಳನ್ನು ಐತಿಹಾಸಿಕ ಘಟನೆಗಳಾದ ಉಳುವಿ, ಹಂಪಿ, ಶ್ರೀಶೈಲ ಜಾತ್ರೆಗಳ ತೇರು, ಗುಡಿ, ಸಿದ್ಧಾರೂಢರು, ಶಿವಶರಣರು, ಏಸು, ಬುದ್ಧ, ಮಹಾವೀರ, ಪೈಗಂಬರ ಚಿತ್ರಗಳನ್ನು ಕೌದಿಗಳಲ್ಲಿ ಬಿಡಿಸುತ್ತಾರೆ. ಕೃಷಿಗೆ ಸಂಬಂಧಿಸಿದ ಕೃಷಿ ಸಲಕರಣೆಗಳು, ನಿಸರ್ಗ ಸೌಂದರ್ಯದ ಚಿತ್ರಗಳು, ಪಗಡೆ ಬಜಾರ, ಐದರ ಪಗಡಿ, ನಾಲ್ಕರ ಪಗಡಿ, ಕೊಳಲು, ಭಾವಿ ತೇರು, ಬಾಸಿಂಗ, ದಂಡೆ, ಗೆಳತಿಯರು, ಸೂರ್ಯ, ಚಂದ್ರ, ನಕ್ಷತ್ರ, ನವಿಲು, ಗಿಳಿ, ಆನೆ, ಒಂಟಿ, ಎಲೆಬಳ್ಳಿ, ಬಾಳೆಗೊನೆ, ಗುಬ್ಬಿ ಕಾಲು, ಹಕ್ಕಿಕಾಲು, ಪ್ರಾಣಿಯ ಹೆಜ್ಜೆ, ಸ್ವಸ್ತಿಕ ಮೊದಲಾದ ಚಿತ್ರಗಳು ಕೌದಿಯಲ್ಲಿ ಗ್ರಾಮೀಣರು ಬಿಡಿಸುತ್ತಾರೆ.
ಆಧುನಿಕ ಕಲಾ ಪ್ರಕಾರವಾದ ಕೋಲಾಜ್ದಲ್ಲಿ ಬಣ್ಣದ ಕಾಗದ ಹಾಗೂ ಬೇರೆ ಬೇರೆ ವಸ್ತುಗಳನ್ನು ವಿನ್ಯಾಸಗಳಿಗನುಗುಣವಾಗಿ ಕತ್ತರಿಸಿ ಹಾಳೆಗೆ ಅಂಟಿಸುವ ಮೂಲಕ ಸಾಂಕೇತಿಕ ಚಿತ್ರ ನಿರೂಪಿಸುತ್ತಾರೆ. ಹಾಗೆನೇ ನೇರವಾಗಿ ಬಣ್ಣ, ಕುಂಚ ಬಳಸದೇ ಬಣ್ಣ ಬಣ್ಣದ ಕೌದಿ ತುಂಡು ಬಟ್ಟೆಗಳಿಂದ ಚಿತ್ರ ಬಿಡಿಸುವ ಜನಪದದ ಚಿತ್ರಕಲೆಯು ಆಧುನಿಕ ಕೋಲಾಜ್ ಚಿತ್ರಕಲೆಯ ಹುಟ್ಟಿಗೆ ಕಾರಣವಾಗಿದೆ ಎನ್ನಬಹುದು.
ತುಂಬಾ ಜನಪ್ರಿಯವಾಗಿರುವ ಕಸೂತಿ ಕಲೆಯು ಜನಪದ ಚಿತ್ರಕಲೆಯ ಮತ್ತೊಂದು ಕೊಡುಗೆ. ಬಟ್ಟೆಯ ಮೇಲೆ ಸೂಜಿ ಬಳಸಿ ದಾರಗಳಿಂದ ಬಿಡಿಸುವ ಅಲಂಕಾರಿಕ ಕಲೆಯು ಸೂಜಿಯ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಕ್ರಿ.ಶ.ಪೂ. 3000 ದ್ದೆನ್ನಲಾದ ಮೊಹೆಂಜೊದಾರೊದಲ್ಲಿನ ಕಂಚಿನ ಸೂಜಿ ಕಸೂತಿ ಕಲೆಯ ಇತಿಹಾಸವನ್ನು ತುಂಬಾ ಪ್ರಾಚೀನಕ್ಕೆ ಕರೆದೊಯ್ಯುತ್ತದೆ. ನಮ್ಮ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಕಸೂತಿ ಕಲೆಯ ಕುಶಲತೆಯಲ್ಲಿ ತಮ್ಮ ಜಾಣ್ಮೆ ಮೆರೆದಿದ್ದಾರೆ. ಹೂಬಳ್ಳಿಗಳು, ಪಕ್ಷಿಗಳು, ಮನುಷ್ಯನಾಕೃತಿಗಳು, ನಿಸರ್ಗದ ಚಿತ್ರಗಳು, ಪೂಜಾ ಸಲಕರಣೆಗಳು, ಪ್ರೀತಿಯ ಸಂಕೇತಗಳು ಮೊದಲಾದವನ್ನು ಕಸೂತಿ ಕಲೆಯಲ್ಲಿ ಹೆಣಿಕೆ ಮಾಡುತ್ತಾರೆ.
ಜನಪದ ಕಲೆಗೆ ಆಕಾಶದಷ್ಟು ವ್ಯಾಪ್ತಿ, ಸಾಗರದಷ್ಟು ಆಳವಿದೆ. ನಮ್ಮ ಬದುಕಿನ ಎಲ್ಲ ಬಗೆಯ ಸೃಜನಶೀಲ ಸೃಷ್ಠಿಯು ಜನಪದ ಕಲೆಯಾಗಿ ಪರಿಣಮಿಸಿದೆ. ಆರಾಧನಾ ಸಂಸ್ಕೃತಿಯ ಮನೋಭಾವದಿಂದ ಹುಟ್ಟಿಕೊಂಡ ಜನಪದ ಚಿತ್ರಕಲೆಯು ಜನಪದದ ಸೌಂದರ್ಯಪ್ರಜ್ಞೆ, ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಯಿತು. ಜನಪದ ಚಿತ್ರಕಲೆಯ ಮೂಲಕ ಮಾನವ ಸಂಸ್ಕೃತಿಯು ಕಾಲ ಕ್ರಮೇಣ ಹೇಗೆ ರೂಪಗೊಂಡಿತು ಎಂಬುದನ್ನು ಅರಿಯಲು ಮಹತ್ವಪೂರ್ಣವಾದ ದಾಖಲೆಯಾಗಿ ನಿಲ್ಲುತ್ತದೆ. ಆದರಿಂದು ಆಧುನಿಕ ಸಂದರ್ಭದಲ್ಲಿ ಜನಪದಕ್ಕೆ ಅದರಲ್ಲೂ ಜನಪದ ಚಿತ್ರಕಲೆ ಮರೆಯಾಗುತ್ತಿದೆ. ಚಿತ್ರಕಲೆಯ ಅಳಿಗಾಲದಿಂದ ಪಯರ್ಾಯವಾಗಿ ನಮ್ಮ ಜನಪದರ ಹಾಡು ಸಂಸ್ಕೃತಿ ಅವಸಾನವಾಗುತ್ತಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ ಛಿದ್ರ ಛಿದ್ರವಾಗಿದೆ. ಆರೋಗ್ಯದಲ್ಲಿ ಆತಂಕ ಸೃಷ್ಠಿಯಾಗಿದೆ. ಧಾಮರ್ಿಕ ಆಚರಣೆಗಳು ಯಾಂತ್ರೀಕೃತವಾಗಿದೆ. ಮನುಷ್ಯ ಮನುಷ್ಯರ ನಂಬುಗೆಗಳು ಕಡಿಮೆಯಾಗಿವೆ. ಕಲೆಯನ್ನು ಪ್ರೀತಿಸುವ ಗೌರವಿಸುವವರ ಸಂಖ್ಯೆ ವಿರಳವಾಗಿದೆ. ಕೈಕುಶಲತೆಗಿಂತ ಯಂತ್ರ ಬಿಡಿಸುವ ಕಲೆಗೆ ಯುವ ಪೀಳಿಗೆ ಮೋಹಿತವಾಗಿದೆ. ಈ ಎಲ್ಲ ಆತಂಕಗಳು ಜನಪದ ಚಿತ್ರಕಲೆಯ ಅವಸಾನಕ್ಕೆ ಮೊದಲಾಗಿವೆ. ಪರಂಪರೆಯ ಜ್ಞಾನವನ್ನು ಆಧುನಿಕತೆಗೆ ಒಗ್ಗಿಸಿಕೊಳ್ಳುವುದಷ್ಟೇ ನಮ್ಮ ಮುಂದಿರುವ ಒಂದು ಪಯರ್ಾಯ ಅವಕಾಶ, ಹೀಗಾಗಿ ಆಧುನಿಕ ಚಿತ್ರ ಕಲಾಕಾರರು ಪರಂಪರೆಯ ಕೊಂಡಿಯಿಂದ ಕಳಚಿಕೊಳ್ಳದೇ ಇದನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಸೃಜನಶೀಲತೆಯ ಹೊಸ ಸೃಷ್ಠಿಯನ್ನು ತೆರೆದಿಡಬೇಕಾಗಿದೆ.

ಭಾನುವಾರ, ಅಕ್ಟೋಬರ್ 7, 2012

ಕ್ಷಮಿಸಿ, ನಾ ಅರಳಲೇಬೇಕು..!

 ladaiprakaashana krupe
ನಾಟಕ

(ಬೆಂಜಮಿನ್ ಮೊಲಾಯಿಸ್ ಜೀವನಾಧಾರಿತ)

ಸುಧಾ ಚಿದಾನಂದಗೌಡ




ಪಾತ್ರವಿವರ

ಬೆಂಜಮಿನ್ ಮೊಲಾಯಿಸ್  : ದಕ್ಷಿಣ ಆಫ್ರಿಕಾದ ಕಪ್ಪು ಕವಿ. (ಬಿಳಿಯ ಪೊಲೀಸ್ ಫಿಲಿಪ್ ಸೆಲೆಪೆಯನ್ನು ಕೊಂದ
                      ಆರೋಪದ ಮೇಲೆ ಗಲ್ಲು ಶಿಕ್ಷೆಗೊಳಗಾಗುತ್ತಾನೆ)
ಜನರಲ್                ಬೋಥಾನ ಜೈಲ್ ಉನ್ನತ ಅಧಿಕಾರಿಗಳಲ್ಲೊಬ್ಬ.
ವಿಲಿಯಂ              : ಪತ್ರಕರ್ತ, ಜನರಲ್ ಇವನನ್ನು ಬಾತ್ಮೀದಾರನಂತೆ ಬಳಸಿಕೊಳ್ಳುತ್ತಾನೆ
ಥಾಮಸ್              : ಯುವನೀಗ್ರೋ ,ಬೆಂಜಮಿನ್ ಅಭಿಮಾನಿ
ಅಬ್ರಹಾಂ              : ಪ್ರಬುದ್ಧ ನೀಗ್ರೋ. ಕವಿಗೋಷ್ಟಿಯ ಸಂಘಟಕ
ಸೂಸಾನ್ನ              : ನೀಗ್ರೋ ಯುವತಿ, ತನ್ನ ಜನಾಂಗದ ಸ್ಥಿತಿಗತಿಗಳ ಕುರಿತು ಚಿಂತಿಸುವವಳು
ಮರಿಯಂ             :  ಮಧ್ಯವಯಸ್ಕ ನೀಗ್ರೋ ಮಹಿಳೆ, ಸೂಸಾನ್ನಳ ಸೋದರಸಂಬಂಧಿ, ಸ್ವಾತಂತ್ರ್ಯದ ಹಂಬಲಿಕೆಯುಳ್ಳವಳು                ಬಿಳಿಯ ಪೊಲೀಸ್ ಮುಖ್ಯಸ್ಥ: ಜನರಲ್ ಆಣತಿಯಂತೆ ಕಾರ್ಯನಿರ್ವಹಿಸುವವನು
ಬಿಳಿಯ ನ್ಯಾಯಾಧೀಶ
ಇತರೆ                : ನಿಗ್ರೋ ನಾಗರಿಕರು, ಪೊಲೀಸರು

ದೃಶ್ಯ ೧

ಕ್ರಿ.ಶ.೧೯೮೨ನೇ ಇಸ್ವಿ ಮಳೆಗಾಲ
ಮೇಮ್ ಲೋದಿ ಗ್ರಾಮ
ಪ್ರಿಟೋರಿಯಾ
ದಕ್ಷಿಣ ಆಫ್ರಿಕಾ

ನೀಗ್ರೋ ೧    ಕವಿಗೋಷ್ಟಿಯಂತೆ..? ಮೇಮ್ ಲೋದಿಯ ಬುದ್ಧಿಜೀವಿಗಳಿಗೆ ಸಡಗರ. ನಾವು ಕೇಳೋಣ..

ನೀಗ್ರೋ ೨    ಹೂಂ..ಜೊತೆಗೆ ಆತಂಕ. ಕೆಲವರಲ್ಲಿ ಭಯಕೂಡ..  ಇರಬೇಕಾದ್ದೇ ಮತ್ತೆ..ಬಿಳಿಯ ಪೊಲೀಸರ ಓಡಾಟ ಹೆಚ್ಚಾಗಿರುವುದನ್ನು ಗಮನಿಸಿದೆಯ?

ನೀಗ್ರೋ ೩    ಹೆದರಿದರು ತೋರಿಸಿಕೊಳ್ಳಬಾರದು ಕಣ್ರಯ್ಯಾ... ನೋಡಿ, ಕೆಲವು ಯುವಕರು ಉದ್ವಿಗ್ನತೆಯಲ್ಲಿರುವರು. ಯಾರೇನು ಹೇಡಿಗಳಲ್ಲ ಇಲ್ಲಿ..

ನೀಗ್ರೋ ೧    ಹೆದರುವುದು ಹೇಡಿಗಳ ಕೆಲಸ ಎಂದು ಜೈಲೊಳಗಿಂದಲೇ ಗರ್ಜಿಸಿದ್ದಾರಲ್ಲ ಮಂಡೆಲಾ!

ಥಾಮಸ್     ಅವರು..ಬರ್‍ತಾರೆ ತಾನೆ..?

ಅಬ್ರಹಂ         ಯಾರಯ್ಯಾ..? (ರೇಗುವನು)

ಥಾಮಸ್     (ಉಗುಳು ನುಂಗುತ್ತ) ಅದೇ.. ..ಅವರು..

ಅಬ್ರಹಂ     (ಪ್ರಸನ್ನತೆ, ಹೆಮ್ಮೆಯಿಂದ) ಬೆಂಜಮಿನ್ ಮೊಲಾಯಿಸ್..? ಖಂಡಿತಾ ಬರ್‍ತಾರೆ. ತಪ್ಪಿಸೋದಿಲ್ಲ. ಅನುಮಾನವೇ ಇಟ್ಟುಕೋಬೇಡಯ್ಯಾ. ಬೆಂಜಮಿನ್ ಬಂದೇ ಬರ್‍ತಾರೆ. ಕವನ ಬರೆಯುವ ಹುಲಿಗೆ ಇವರೆಲ್ಲ ಲೆಕ್ಕವಾ?(ಬಿಳಿಯ ಪೋಲಿಸರತ್ತ ತಿರಸ್ಕಾರದ ನೋಟ ಹರಿಸುವನು)

ನೀಗ್ರೋ ೨     ಬಂದ್ರೂಬ॒ಂದ್ರೂ॒

ನೀಗ್ರೋ    ೩    ಓಹ್, ಇವರೇನಾ..ಇಷ್ಟು ಚಿಕ್ಕವರಾ.. ..?

(ಸಭೆ ನಿಶ್ಯಬ್ದವಾಗುವುದು ಬೆಂಜಮಿನ್ ಪ್ರವೇಶಿಸಿ ಮೆಲುದನಿಯಲ್ಲಿ ಪಕ್ಕದಲ್ಲಿದ್ದವರೊಡನೆ ಸಂಭಾಷಿಸುತ್ತ ವೇದಿಕೆಯೇರಿ ನಿಲ್ಲುವನು. ಸಮೂಹಗೀತೆಯಿಲ್ಲ. ಸ್ವಾಗತವಿಲ್ಲ. ನಿರೂಪಣೆಯಿಲ್ಲ. ಪರಿಚಯ ಭಾಷಣವೂ ಇಲ್ಲ. ಅಪ್ಪಟ ಕಪ್ಪುವರ್ಣದ ಗೂಂಗುರು ಕೂದಲು, ದಪ್ಪತುಟಿ, ಸಣ್ಣ ಕಣ್ಣುಗಳ, ಸರಳವಾದ ಸೂಟ್‌ನಲ್ಲಿರುವನು. ಅವನ ಸೆಟೆದ ಎದೆ, ಮಿಂಚಿನ ದೃಷ್ಟಿ, ಏನನ್ನೂ ಹೇಳದೆ ಮೌನವಾಗಿ ಜೇಬಿನಿಂದ ಕಾಗದವನ್ನು ತೆಗೆದು, ಬಿಡಿಸಿ, ಕವನ ಓದಲಾರಂಭಿಸುವನು.)

ಬೆಂಜಮಿನ್ ಮೊಲಾಯಿಸ್.
   
ನಾವು ಗೂಬೆಗಳಲ್ಲ.
    ಕತ್ತಲ ಗುಹೆ ನಮ್ಮ ಮನೆಯಲ್ಲ.
    ಮಲೆತು ನಿಂತ ನೀರು.
ಸೂರ್ಯನಿಲ್ಲದ ನೆಲ ನಾವೊಲ್ಲೆವು.
    ಈ ಕ್ಷಣ ಉಸಿರು ನಿಂತರೆ ಭಯವಿಲ್ಲ.
ನಮ್ಮದಾದ ನೆಲಕ್ಕೆ ರಕ್ತ ಹರಿಸುತ್ತೇವೆ.
ಒಳಗನ್ನು ಫಲಗೊಳಿಸುತ್ತೇವೆ.
    ಸ್ವಚ್ಛ ಗಾಳಿ, ಬೆಳಕಿಲ್ಲದ ಪ್ರಪಂಚ
    ಸ್ವಾತಂತ್ರ್ಯ ರವಿಯಿಲ್ಲದ ಆಕಾಶ
    ನಾವೊಲ್ಲೆವು.....

(ವೀಕ್ಷಕರಲ್ಲಿ ಸೂಸಾನ್ನ ಮತ್ತು ಮರಿಯಂ ಕುಳಿತಿರುವರು.. ..ಪ್ರೇಕ್ಷಕ ವರ್ಗದಲ್ಲಿ ಅಬ್ಬಾ..ಆಹಾ..ಉದ್ಗಾರಗಳು.. ..)

ಮರಿಯಂ:    ಎಷ್ಟು ಚೆನ್ನಾದ ನುಡಿ..! ಸತ್ಯವಾಗಬಹುದಿದ್ದರೆ ಎಷ್ಟು ಚೆನ್ನಿತ್ತು.! ಈ ಸ್ವಾತಂತ್ರ್ಯವೆಂಬುದು ಬಂದಾಗ ನಿಮ್ಮ ಮಾವ ನನ್ನನ್ನೂ ಮನುಷ್ಯಳಂತೆ ಕಾಣಬಹುದು ಅಲ್ಲವಾ.. ನರಕದ ಪಂಜರದಿಂದ ಪಾರಾಗಬಹುದಿತ್ತು ಅಲ್ಲವಾ ? ಒಳ್ಳೆ ಕಲ್ಪನೆ. ಒಳ್ಳೇದು..ಒಳ್ಳೇದು..

ಸೂಸಾನ್ನ        ಕಲ್ಪನೆ ಎಂದೇಕೆ ಅಂದುಕೊಳ್ಳಬೇಕು ಅತ್ತೇ..? ನಿಜವಾಗಲಾರದೇನು ಇದು..ಕೇಳಿಬಿಡೋಣ..

ಮರಿಯಂ        ಬೇಡ ಬೇಡ ಸುಮ್ಮನಿರು..ಅವರೇನೆಂದುಕೊಂಡಾರು..

ಥಾಮಸ್        ಕನಸುಗಳಿಗೆ ಸ್ವಾತಂತ್ರ್ಯದ ಬಣ್ಣಗಳನ್ನು ಮೆತ್ತಿರುವಂತಿದೆ ಈ ಕವಿತೆಗಳು..

ಬೆಂಜಮಿನ್‌ಮೊಲಾಯಿಸ್  ಇದು ಕೇವಲ ಕನಸಲ್ಲ ತಮ್ಮಾ..ನಾಳೆ ನಿಜವಾಗಬೇಕಾದ್ದು. ತಡವಾಗಬಹುದು..ಆದರೆ ಸ್ವಾತಂತ್ರ್ಯದ
ಬಣ್ಣಗಳು ನಮ್ಮ ಆತ್ಮಗಳನ್ನು ಖಂಡಿತ ತಾಗುವವು..

(ಬಿಳಿಯ ಪೊಲಿಸರ ಬೂಟುಗಳ ಟಕಟಕ ಶಬ್ದ ನೆರೆದವರ ಕಿವಿ ಬಿರಿಯುವುದು. ಬೆಂಜಮಿನ್ ಅತ್ತ ಲಕ್ಷ ಕೊಡದೆ, ಕವನ ವಾಚನ ಮುಂದುವರೆಸುವನು. ಪೊಲೀಸರಲ್ಲೊಬ್ಬ ಮೈಕನ್ನೂ, ಕಾಗದವನ್ನೂ ಒಟ್ಟಿಗೆ ಕಿತ್ತುಕೊಳ್ಳವನು. ಸಭೆ ಧಿಗ್ಗನೆ ಎದ್ದು ನಿಲ್ಲುವುದು. ಎಲ್ಲ ಕಣ್ಣುಗಳು ಕೆಂಡಗಳಾಗುವವು. ಬೆಂಜಮಿನ್ ಮೊಲಾಯಿಸ್ ಶಾಂತನಾಗಿ ಕೈಗಳೆರಡನ್ನೂ ಮೇಲೆತ್ತಿ ಸುಮ್ಮನಿರುವಂತೆ ಸೂಚಿಸುವನು. ನಂತರ ಏನೆಂಬಂತೆ ಪೊಲೀಸರತ್ತ ನೋಡುವನು.)

ಬಿಳಿಯ ಪೊಲೀಸ್         (ಒರಟಾಗಿ) ನಡೀ....

ಬೆಂಜಮಿನ್ ಮೊಲಾಯಿಸ್        (ಅಚ್ಚರಿಯಿಂದ) ಯಾಕೆ?

ಬಿಳಿಯ ಪೊಲೀಸ್ ಮುಖ್ಯಸ್ಥ    ಠಾಣೆಗೆ ನಡಿ.

ಬೆಂಜಮಿನ್ ಮೊಲಾಯಿಸ್         ಅದೇ ಯಾಕೇಂತಾ?

ಬಿಳಿಯ ಪೊಲೀಸ್ ಮುಖ್ಯಸ್ಥ    ಅದನ್ನ ಅಲ್ಲೆ ಹೇಳ್ತೇವೆ.

ಬೆಂಜಮಿನ್ ಮೊಲಾಯಿಸ್        ನನ್ನನ್ನು ಅರೆಸ್ಟ್ ಮಾಡ್ತಿದೀರಾ?

ಬಿಳಿಯ ಪೊಲೀಸ್ ಮುಖ್ಯಸ್ಥ    ಒಂದು ರೀತಿಯಲ್ಲಿ ಹೌದು.

ಬೆಂಜಮಿನ್ ಮೊಲಾಯಿಸ್        ವಾರೆಂಟ್ ಇದೆಯೇ?

ಬಿಳಿಯ ಪೊಲೀಸ್ ಮುಖ್ಯಸ್ಥ    ಅದೆಲ್ಲ ಪದ್ಧತಿ ನಿಮಗೆ ಅನ್ವಯಿಸುವುದಿಲ್ಲ.

ಬೆಂಜಮಿನ್ ಮೊಲಾಯಿಸ್        ನಮಗೆ ಅಂದರೆ ಕರಿಯರಿಗೆ?

ಬಿಳಿಯ ಪೊಲೀಸ್ ಮುಖ್ಯಸ್ಥ     ಸುಮ್ಮನೆ ನಡಿ. ಹೆಚ್ಚು ಪ್ರಶ್ನಿಸಬೇಡ (ರಟ್ಟೆಗೆ ಕೈ ಹಾಕುವನು)

ಬೆಂಜಮಿನ್ ಮೊಲಾಯಿಸ್    (ಮೃದುವಾಗಿಯೇ ಬಿಡಿಸಿಕೊಳ್ಳುತ್ತಾ) ಠಾಣೆಗೆ ಬರಲು ಅಭ್ಯಂತರವೇನಿಲ್ಲ ನನಗೆ. ಆದರೆ ಕಾರಣ ಹೇಳಿ.

ಬಿಳಿಯ ಪೊಲೀಸ್ ಮುಖ್ಯಸ್ಥ    (ಜನರತ್ತ ದೃಷ್ಟಿ ಬೀರುತ್ತ) ಅದನ್ನ ಅಲ್ಲಿಯೇ ಹೇಳ್ತೀವಿ ನಡೀ. ಇಲ್ದಿದ್ರೆ ಇಲ್ಲಿ ನಡಿಯೋ ರಕ್ತಪಾತಕ್ಕೆ ನೀನೆ ಜವಾಬ್ದಾರನಾಗ್ತೀಯ.

(ಜನರ ಗುಂಪಿನಲ್ಲಿ ಗೊಂದಲ ಗುಜುಗುಜು ಕ್ಷಣ ಯೋಚಿಸಿ, ಜನರೆಡೆಗೆ ತಿರುಗಿ)

ಬೆಂಜಮಿನ್ ಮೊಲಾಯಿಸ್        (ಗಟ್ಟಿಯಾಗಿ) ಶಾಂತಿಯಿಂದಿರಿ ಮತ್ತೆ ಭೇಟಿಯಾಗೋಣ. (ಪೊಲೀಸರತ್ತ ತಿರುಗಿ) ನಡೆಯಿರಿ.

(ಜಿಟಿಜಿಟಿ ಜಿನುಗವ ಮಳೆಯಲ್ಲಿ ಬೆಂಜಮಿನ್ ಮೊಲಾಯಿಸ್ ಬಿಳಿಯ ಪೊಲೀಸ್‌ರೊಂದಿಗೆ ನಿರ್ಗಮಿಸುವನು. ಅವರ ಕಡೆ ದಿಟ್ಟಿಸುತ್ತ.)


ದೃಶ್ಯ ೨

ಕ್ರಿ.ಶ.೧೯೮೪ರ ಜುನ್ ತಿಮಗಳು
ಕೇಂದ್ರ ಕಾರಾಗೃಹ
ಪ್ರಿಟೋರಿಯ

ಬೆಂಜಮಿನ್ ಮೊಲಾಯಿಸ್: ಈ ಕೊಠಡಿಯ ಸಂಖ್ಯೆ ಎಷ್ಟೆಂಬುದು ನನಗೆ ತಿಳಿದಿಲ್ಲ. ಅಷ್ಟೇಕೆ, ಹಗಲು ರಾತ್ರಿಗಳ ವ್ಯತ್ಯಾಸವೂ
ಗೊತ್ತಾಗುತ್ತಿಲ್ಲ. ಒಳಗೆ ಯಾವಾಗಲೂ ನಸುಗತ್ತಲಿನ ಮಬ್ಬು ಬೆಳಕು, ತಾಜಾ ಹವಾ, ಒಳ್ಳೆಯ ನೀರು ಕುಡಿದು ಎಷ್ಟು ದಿನಗಳಾಗಿರಬಹುದು? (ಲೆಕ್ಕ ಹಾಕಲೆತ್ನಿಸಿ) ಊಹೋ... ಒಂದು ವರ್ಷ...?ಅಲ್ಲ, ಎರಡು ವರ್ಷಗಳ ಮೇಲಾಗಿರಬಹುದೇ? ಸರಿಯಾಗಿ ಎಣಿಸಲಾಗುತ್ತಿಲ್ಲ. ಮಿದುಳು ಹಿಂದಿನಂತೆ ಚುರುಕಾಗಿ ಕೆಲಸ ಮಾಡುತ್ತಿಲ್ಲ. ಕೈ, ಕಾಳು, ಕೀಲುಸಂದಿಗಳ ಭಯಂಕರ ನೋವು ಬೇರೆ ಕಾಡುತ್ತದೆ. ಈ ಕೊಠಡಿಯಲ್ಲೋ ಒಂದು ಸಣ್ಣಗಾಯವೂ ಸೆಪ್ಟಿಕ್ ಆಗಿ, ಇನ್‌ಫೆಕ್ಷನ್ ತಗುಲಿಕೊಳ್ಳಲು ಪ್ರಶಸ್ತವಾಗಿದೆ. ಮನೆಯಲ್ಲಿದ್ದಾಗ ತನ್ನ ಕೊಠಡಿ, ಬಟ್ಟೆ, ಪುಸ್ತಕ, ಮೇಜು, ಕುರ್ಚಿ, ಹಾಸಿಗೆ, ಮಂಚ ಎಲ್ಲ ಎಷ್ಟು ನೀಟಾಗಿಡುತ್ತದೆ. ಅಮ್ಮ, ಅತ್ತಗೆಯರೇ ಮೆಚ್ಚುಗೆ ಸೂಚಿಸುತ್ತಿದ್ದರು. ಈಗ ಅವರೆಲ್ಲ ಏನು ಮಾಡುತ್ತಿರಬಹುದು? ಪಾಪ, ಅಮ್ಮ ಅತ್ತು, ಅತ್ತು ಕಣ್ಣೀರು ಬತ್ತಿಸಿಕೊಂಡಿರಬಹುದು. ಅಪ್ಪ ಮಾಮೂಲಿನಂತೆ ಕುರ್ಚಿಯ ಮೇಲೊರಗಿ, ’ಬೆಂಜಮಿನ್ ಕವನ ಬರೆಯಲು ಆರಂಭಿಸಿದೊಡನೆ ಪೆನ್ ಕಿತ್ತು ಬಿಸಾಡಬೇಕಾಗಿತ್ತು. ಆಗ ಜೈಲು, ಗೀಲು ಏನೂ ತಂಟೆಯಿರುತ್ತಿರಲಿಲ್ಲ’ ಎಂದು ಚಿಂತಿಸುತ್ತಿರಬಹುದು. ಹುಷ್, ಕೆಳಹೊಟ್ಟೆಯ ನೀರನ್ನು ಖಾಲಿ ಮಾಡಬೇಕೆನ್ನಿಸುತ್ತಿದೆ. ದಿನಕ್ಕೆ ಒಂದೇ ಬಾರಿ ಪಾಯಿಖಾನೆಗೆ ಹೋಗುವ ರಾಜಭೋಗ! ಉಳಿದ ಸಮಯದಲ್ಲಿ ಏನು ಮಾಡಬೇಕೆನಿಸಿದರೂ ಈ ಸೆಲ್‌ನ ಮೂಲೆಯಲ್ಲೇ ಮಾಡಿಕೋಬೇಕು. ಎಷ್ಟೋ ಸಲ ಆ ವಾಸನೆ ಹೊಟ್ಟೆ ತೊಳಸಿ, ವಾಂತಿ ಮಾಡಿಕೊಂಡಿದ್ದೇನೆ. ಬರುಬರುತ್ತ ವಾಸನೆ, ಮಬ್ಬುಗತ್ತಲು, ಒಂಟಿತನ, ಮೌನ ಎಲ್ಲ ಅಭ್ಯಾಸವಾದವು.

(ಕಿರ್ರನೆ ಬಾಗಿಲು ತೆರೆದುಕೊಳ್ಳುವುದು. ಬಂದವನು ಬಿಳಿಯ ಪೊಲೀಸ್‌ನವನಾದ್ದರಿಂದ ನೋಡುವ ಗೋಜಿಗೆ ಹೋಗುವುದಿಲ್ಲ.)

ಬೆಂಜಮಿನ್ ಮೊಲಾಯಿಸ್;    ಏನು ಹರ್‍ಕೊತಾನೋ ಹರ್‍ಕೊಳ್ಳಿ, ನನ್ನ ಮುಗುಳ್ನಗೆ ಮಾತ್ರ ಮುಖದ ಮೇಲದ್ದೇ ಇರುತ್ತೆ. ಅವನನ್ನು ಇನ್ನಷ್ಟು ರೇಗಿಸಲು!

(ಬಿಳಿಯ ಪೊಲೀಸ್ ಮುಖ್ಯಸ್ಥ ಒರಟಾಗಿ ಭುಜವನ್ನಿಡಿದು ತಿರುಗಿಸುವನು. ಕೂದಲು ಹಿಡಿದು ತಲೆ ಹಿಂದಕ್ಕೆ ಜಗ್ಗುವನು. ನೋವಿನಿಂದ ಚೀರಬೇಕೆನಿಸಿದರೂ ನುಂಗಿಕೊಂಡು ಮೆಲ್ಲಗೆ ನಗುವನು ಬೆಂಜಮಿನ್. ಮುಖ್ಯಸ್ಥನ ಪಳಗಿದ ಕೈ ರಪ್ಪನೆ ಮುಖಕ್ಕೆ ರಾಚುವುದು. ಉಪ್ಪುಪ್ಪಾಗಿ ನಾಲಿಗೆಗೆ ರಕ್ತ ಅಂಟುವುದು. ಕಾಲು ತೊಡರಿ ಬೀಳುತ್ತಿದ್ದವನನ್ನು ಅದುಮಿ ಹಿಡಿದು.)

ಬಿಳಿಯ ಪೊಲೀಸ್ ಮುಖ್ಯಸ್ಥ    ಏಳು, ನ್ಯಾಯಾಲಯಕ್ಕೆ ಹೋಗ್ಬೇಕು.

ಬೆಂಜಿಮಿನ್ ಮೊಲಾಯಿಸ್    (ಸಿಟ್ಟು ಬೇಡವೆಂದರೂ ಒತ್ತಿಕೊಂಡು ಬಂದು) ಎಷ್ಟು ಸಲ ಹೋಗೋದು ನಿಮ್ಮ ಅನ್ಯಾಯಾಲಯಕ್ಕೆ?

(ಎರಡು ವರ್ಷಗಳಲ್ಲಿ ಹೊಡೆದೂ ಹೊಡೆದೂ ಸುಸ್ತಾಗಿಹೋಗಿದ್ದ ಬಿಳಿಯ ಪೊಲೀಸ್ ಮುಖ್ಯಸ್ಥ. ಬೆಂಜಮಿನ್ ಮೊಲಾಯಿಸ್‌ನನ್ನು ಎಳೆದುಕೊಂಡು ಹೋಗಿ ವಾಹನದಲ್ಲಿ ಸರಕು ತುಂಬುವಂತೆ ತುರುಕುವನು. ಪುನಃ ಅದೇ ಪ್ರಿಟೋರಿಯದ ರಸ್ತೆಗಳು. ಸಾಲು ಮನೆಗಳು. ಬೀದಿಯಲ್ಲಿ ಓಡಾಡುವ ಜನ, ಯಾರಿಗೂ ಒಳಗಿರುವವರ ಗುರುತು ಹತ್ತದಂತೆ ಗಾಜು ಏರಿಸಿದ ವಾಹನ...)


 ದೃಶ್ಯ೩

(ಲಕಲಕಿಸುವ ಟೇಬಲ್, ಛೇರ್, ಫ್ಯಾನ್, ಹೂಕುಂಡಗಳು, ಮೇಜಿನ ಆಚೀಚೆ ಹಿಂದಿಬ್ಬರು ಬಿಳಿಯ ವಕೀಲರುಗಳು, ಅಷೆತ್ತರದ ಕುರ್ಚಿಯಲಿ ಕುಳಿತಿರುವ ಜಡ್ಜ್, ಅವನಲ್ಲಿ ಅಹಂಕಾರ, ಕಣ್ಣುಗಳಲ್ಲಿ ತಿರಸ್ಕಾರ ಕಾಣುತ್ತಿದೆ. ಅವನ ತಲೆಯ ಮೇಲೆ ನಿರಂಕುಶ ಜನರಲ್ ಬೋಥಾನ ಚಿತ್ರ.)

ಬಿಳಿಯ ವಕೀಲ        (ಕನ್ನಡಿ ಸರಿಪಡಿಸಿಕೊಳ್ಳುತ್ತಾ) ಏನು ಯೋಚನೆ ಮಾಡಿದೆ?

ಬೆಂಜಮಿನ್ ಮೊಲಾಯಿಸ್     (ಮುಗುಳ್ನಗುತ್ತಾ) ಯಾವುದರ ಬಗ್ಗೆ?

ಬಿಳಿಯ ವಕೀಲ     (ಹುಬ್ಬುಗಂಟಿಕ್ಕುತ್ತಾ) ಕೋರ್ಟಿನೊಂದಿಗೆ ಹುಡುಗಾಟ ಆಡಬೇಡ. ಕವನ ಬರೆದಷ್ಟು ಸುಲಭವಲ್ಲ ಕಾನೂನಿನಿಂದ ತಪ್ಪಿಸಿಕೊಳ್ಳೋದು.

ಬೆಂಜಮಿನ್ ಮೊಲಾಯಿಸ್  ಕಾನೂನಿಗೆ ವಿರುದ್ಧವಾದುದ್ದೇನನ್ನೂ ನಾನು ಮಾಡಿಲ್ಲವಲ್ಲ?

ಬಿಳಿಯ ವಕೀಲ        ಹಾಗಾದರೆ ಪಿಲಿಪ್ಸ್ ಸೆಲಿಪೆ ನಿನಗೊತ್ತಿಲ್ಲ?

ಬೆಂಜಮಿನ್ ಮೊಲಾಯಿಸ್     ಇಲ್ಲ!

ಬಿಳಿಯ ವಕೀಲ        ೧೯೮೨ನೇ ವರ್ಷದಲ್ಲಿ ನೀನವನೊಂದಿಗೆ ಗೆಳೆಯನಾಗಿದ್ದಿಲ್ಲ?

ಬೆಂಜಮಿನ್ ಮೊಲಾಯಿಸ್     ಇಲ್ಲ.

ಬಿಳಿಯ ವಕೀಲ        ಗೆಳೆಯನಂತೆ ನಟಿಸಿ, ಕೊನೆಗೆ ಅವನನ್ನು ಕೊಂದು ಹಾಕಲಿಲ್ಲ?

ಬೆಂಜಮಿನ್ ಮೊಲಾಯಿಸ್  ಖಂಡಿತಾ ಇಲ್ಲ.

ಬಿಳಿಯ ವಕೀಲ         ನೀನು ಸುಳ್ಳು ಹೇಳ್ತಿದೀ. ಸರ್ಕಾರದ ನಿಷ್ಠಾವಂತ ಪೊಲೀಸರನ್ನು ಕೊಲ್ಲುವುದೇ ನಿನ್ನ ಕೆಲಸ.

ಬೆಂಜಮಿನ್ ಮೊಲಾಯಿಸ್  ಅಲ್ಲ. ನನ್ನ ಕೆಲಸ ಕವನ ಬರೆಯುವುದು ಮಾತ್ರ.

ಬಿಳಿಯ ವಕೀಲ        ನೀನೇನು ದೊಡ್ಡ ಕವಿ. ವಿದ್ವಾಂಸನೋ?

ಬೆಂಜಮಿನ್ ಮೊಲಾಯಿಸ್     ಅಲ್ವೇ ಅಲ್ಲ. ನಾನೇನೂ ದೊಡ್ಡ ಕಾವ್ಯ ಬರೆದಿಲ್ಲ. ಒಂದಿಷ್ಟು ಕವಿತೆಗಳನ್ನು ಬರೆದಿದ್ದೇನಷ್ಟೇ.

ಬಿಳಿಯ ವಕೀಲ        ನೀನು ಬರೆದ ಕವಿತೆಗಳು ಆಡಳಿತಕ್ಕೆ ವಿರುದ್ಧವಾಗೇ ಇವೆಯಲ್ಲ?

ಬೆಂಜಮಿನ್ ಮೊಲಾಯಿಸ್     (ನಗುತ್ತಾ)ಅದಕ್ಕೆ ನಾನು ಜವಾಬ್ದಾರನಲ್ಲ. ನಾನು ನನ್ನ ಜನರ ಪರವಾಗಿ ಬರೆಯುತ್ತೇನಷ್ಟೇ.

ಬಿಳಿಯ ವಕೀಲ         ಇಂಥ ಮಾತುಗಳಿಮಧ ನ್ಯಾಯಾಲಯ ಮೋಸ ಹೋಗಲಾರದು.

ಬೆಂಜಮಿನ್ ಮೊಲಾಯಿಸ್    ಮೋಸ ಮಾಡುವ ಉದ್ದೇಶ ನನಗಿಲ್ಲ. ಫಿಲಿಪ್ಸ್ ಸೆಲಿಪೆ ಎಂಬ ಪೊಲೀಸ್ ಸಹಜವಾಗಿ ಸತ್ತನೆಂಬುದು ಎಲ್ಲರಿಗೂ ಗೊತ್ತಿದೆ. ನೀವದನ್ನು ಕೊಲೆ ಎಂದು ಕರೆದು. ಆಪಾದನೆ ನನ್ನ ಮೇಲೆ ಹೊರಿಸಿದರೆ, ನಾಳೆ ಪ್ರಪಂಚ ನಿಮ್ಮನ್ನೂ, ನಿಮ್ಮ ನ್ಯಾಯಾಲಯವನ್ನೂ ನೋಡಿ ನಗುತ್ತದೆ.

ಜಡ್ಜ್    ನಿನ್ನ ಮಾತು ಅತಿಯಾಯ್ತು ಬೆಂಜಮಿನ್, ದೇಶದ್ರೋಹದ ಸಾಹಿತ್ಯ ಸೃಷ್ಟಿಸಿದ್ದಲ್ಲದೇ, ಕಾನೂನನ್ನೇ ಅಪಹಾಸ್ಯ ಮಾಡ್ತೀದೀ.... ನಿನ್ನ ಅಪರಾಧವನ್ನು ಒಪ್ಪಿಕೊಂಡರೆ ನಿನಗೇ ಒಳಿತು.

ಬೆಂಜಮಿನ್ ಮೊಲಾಯಿಸ್     ನಾನು ಯಾವ ಅಪರಾಧವನ್ನು ಮಾಡಿಲ್ಲ.

ಜಡ್ಜ್            ಅಪರಾಧ ಸಾಬೀತಾಗಿದೆ. ನಿನಗೆ ಮರಣದಂಡನೆಯನ್ನು ಕೂಡ ವಿಧಿಸಬಹುದು. ಗೊತ್ತೇ?

ಬೆಂಜಮಿನ್ ಮೊಲಾಯಿಸ್    ನನ್ನ ಉತ್ತರದಲ್ಲಿ ಬದಲಾವಣೆಯೇನೂ ಇಲ್ಲ.

(ಇಡೀ ಕೋರ್ಟು ಸಿಟ್ಟಿನಿಂದ ಉರಿಯುವುದು, ಬೆಂಜಮಿನ್ ಮಾತ್ರ ಮುಗುಳ್ನಗುವನು, ಯಥಾಪ್ರಕಾರ ಬೆಂಜಮಿನ್ ಮೊಲಾಯಿಸ್‌ನನ್ನು ಮಬ್ಬುಗತ್ತಲಿನ ಸೆರೆಮನೆಯ ಕೊಠಡಿಗೆ ದೂಡುವರು, ದಿನಗಳು ಕಳೆಯತೊಡಗುವವು.)


ದೃಶ್ಯ ೪
ಜನರಲ್            ಬೇಡ.. ..ಬೇಡ..

ವಿಲಿಯಂ            ಇಲ್ಲ ಹಾಗೆ ಮಾಡಲಾಗುವುದಿಲ್ಲ

ಜನರಲ್            ನೀನೇನು ಕರಿಯನೋ..?   

ವಿಲಿಯಂ    ಕರಿಯನಲ್ಲ ನಾನು..ಖಂಡಿತ ಕರಿಯನಲ್ಲ. ಆದರೆ..ನೋಡಿ..ಅವನು.. ಆ ಬೆಂಜಮಿನ್ನು.. ಸಣ್ಣ ಸಣ್ಣ ಪದ್ಯ ಬರೆದು ದೊಡ್ಡದಾಗೆ ಹೆಸರು ಮಾಡಿಬಿಟ್ಟಿದಾನೆ..ಗೆಳೆಯರ ಬಳಗ ದೊಡ್ಡದಿದೆ ಅವನದು..

ಜನರಲ್    ಹೇಳಿದಷ್ಟು ಮಾಡು..ಕೇಳಿಸಿತೇ? ಹೇಳಿದಷ್ಟು ಮಾತ್ರ..ಗೊತ್ತಿರುವುದನ್ನೆಲ್ಲ ವರದಿ ಮಾಡಬೇಡ ಜನರೆದುರು..ತಿಳಿಯಿತೇ..?   

ವಿಲಿಯಂ    (ಸ್ವಗತ-ಸುದ್ದಿಗಾರರ ಕರ್ತವ್ಯ ಬಲುಕೆಟ್ಟದ್ದು..ಕೃತಜ್ಞಹೀನದ್ದು..) ಆದರೆ ನೋಡಿ..ಸಾವು ತನ್ನಷ್ಟಕ್ಕೆ ತಾನೆ ಸುದ್ದಿಯಾಗಬಲ್ಲದು..

ಜನರಲ್            ಸಾವು ಘಟಿಸುವವರೆಗು ಸುಮ್ಮನಿರು. ಗದ್ದಲವಾಗುವುದು ಬೇಡ..       

ವಿಲಿಯಂ            ಅಂದರೆ..ತೀರ್ಪು ಆಗಲೆ ಜಾರಿಯಾಗಿದೆ ಹಾಗಾದರೆ..ಬೆಂಜಮಿನ್‌ಗೆ ಗಲ್ಲು?॒

ಜನರಲ್    ನನ್ನ ಮಾತುಗಳನ್ನು ನಿನ್ನ ಬಾಯಿ ಮುಂಚಿತವಾಗಿ ಕದಿಯುವುದು ಬೇಡ. ಸುದ್ದಿಗಳೆಲ್ಲವು ನಿನ್ನ ಸ್ವಂತದ್ದಲ್ಲ..ತಿಳಿ..       

ವಿಲಿಯಂ            ಅವನ ಕವಿತೆಗಳೆ ಸುದ್ದಿ ಹರಡಬಲ್ಲವು..

ಜನರಲ್            ಹಾಂ..ಕವಿತೆ..? (ಸ್ವಗತ ಜೈಲಿನಲ್ಲು ಬರೆದಿರಬಹುದಲ್ಲವೆ?॒ ಹಾಂ..) ಅವುಗಳು ಎಲ್ಲೆಲ್ಲಿದಾವೆ
ತಂದುಕೊಡು..ನೀನೇ ತರಬೇಕು ಸಿಕ್ಕ ತಕ್ಷಣ..       

ವಿಲಿಯಂ    ಸಿಕ್ಕ ತಕ್ಷಣ ಏನ್ಬಂತೂ.. ..ಇ॒ಲ್ಲೆ ಇವೆ ನನ್ನ ಕಿಸೆಯೊಳಗೆ..ಅವುಗಳ ಪ್ರತಿ ಮಾಡಿಸಿ ತಂದೆ ಸಾಧ್ಯವಾದರೆ ಪ್ರಕಟಿಸುವ ಅಂತ....(ತಟ್ಟನೆ ನಾಲಿಗೆ ಕಚ್ಚಿಕೊಳ್ಳುವನು)ಅಯ್ಯೋ ಹೇಳಿಬಿಟ್ಟೆನಲ್ಲಾ..ಥೂ, ಸತ್ಯ ನುಡಿಯುವ ನನ್ನ ನಾಲಿಗೆಯೇ..ನೀನೆ ನನಗೆ ಶತೃ..

ಜನರಲ್    ಪ್ರಕಟಿಸೋದಾ..?ಎಷ್ಟು ದಿನಗಳು ಬದುಕಬೇಕೆಂದು ಲೆಕ್ಕ ಹಾಕಿದ್ದೀಯೇನು.॒? ಕೊಡಿಲ್ಲಿ..ಅದೊಂದು ದಿನ ಬರುತ್ತೆ..ಈ ಕಾವ್ಯಗೀವ್ಯ ಎಲ್ಲ ನಿಷಿದ್ಧವಾಗಿರುತ್ತೆ ನನ್ನ ಕೈ ಕೆಳಗೆ.. ..   

ವಿಲಿಯಂ    (ಸ್ವಗತ) ಮುಗೀತು... ಇವುಗಳ ಕಥೆ ಮುಗೀತು..ಕ್ಷಮಿಸು ಬೆಂಜಮಿನ್.. ಅಯ್ಯೋ.. .. ವಾರ್ತೆಗಳ ಹರಡುವ ಬಾಯಿಗೆ ಮೊದಲ ಉರುಳು ಬೀಳಲಿ...

ಜನರಲ್            ಏನೋ ಅಂದೆಯಲ್ಲ.. ..?           

ವಿಲಿಯಂ            ಏನಿಲ್ಲ.. ..ಏನಿಲ್ಲ.. ..

ಜನರಲ್    ನಿಗ ಇರಲಿ ನಾಲಿಗೆ ಮೇಲೆ.. .. ಬೆಂಜಮಿನ್ ಕುರಿತ ಯಾವ ಸುದ್ದಿಯೂ ನಿನ್ನಿಂದ ಹೊರಹೋಗುವುದು ಬೇಡ.. ..        

ವಿಲಿಯಂ            ಹಾಗೆ ಆಗಲಿ.. ..(ಸ್ವಗತ- ಹೀಗೆ ಹೇಳದೆ ವಿಧಿಯಿಲ್ಲ..)

ಜನರಲ್            ಅಲ್ಲಿಯ ಸುದ್ದಿ.. ..ಅವನ ಗೆಳೆಯರ ಸುದ್ದಿ.. ..ತಕ್ಷಣ ನನಗೆ ಸಿಗಬೇಕು.. ..ತಕ್ಷಣ..

ವಿಲಿಯಂ    ಹಾಗೇ ಆಗಲಿ..ನಾನಿನ್ನು ಬರಲೇ.. ..?( ಸ್ವಗತ-ನನಗೇ ಉಸಿರುಗಟ್ಟುತ್ತಿದೆ ಇಲ್ಲ.. ..ಅವನ ಕವನಗಳಿಗಾಗುವ ಗತಿಯನ್ನು ನೋಡಲಾರೆ..ನೋಡಲಾರೆ..)

ಜನರಲ್    ನಡಿ..ನಿನ್ನ ಈ ಹೊತ್ತಿನ ಕೆಲಸ ನಿಜವಾಗಿ ಮುಗೀತು.. ..

(ವಿಲಿಯಂ ಹೋದಬಳಿಕ ಕವನಗಳ ಹಾಳೆಗಳನ್ನು ಸಿಟ್ಟಿನಿಂದ ನೋಡುತ್ತ ಚೂರುಚೂರಾಗಿ ಹರಿಯುವನು..    ಮುಷ್ಟಿಯಲ್ಲಿ ಉಂಡೆ ಮಾಡುತ್ತಾ..ಕೊನೆಗೆ ಕೆಳಗೆ ಹಾಕಿ ತುಳಿಯುವನು..)

ದೃಶ್ಯ ೫

ಕ್ರಿ ಶ. ೧೯೮೫, ಅಕ್ಟೋಬರ್ ೧೮

ಕೊಠಡಿಯ ಬಾಗಿಲು ತೆರೆದುಕೊಳ್ಳುವುದು. ಪೊಲೀಸರ ಗುಂಪು ಒಳಬರುವುದು. ಮುಖ್ಯಸ್ಥ ಸನ್ನೆ ಮಾಡುವನು. ಒಬ್ಬ ಮುಂದೆ ಬಂದು ಬೂದಿಬಣ್ಣದ ಕಾಗದವನ್ನು ಎದುರಿಗೆ ಹಿಡಿದು,

ಬಿಳಿಯ ಪೊಲೀಸ್    ಬೆಂಜಮಿನ್ ಮೊಲಾಯಿಸ್ ಎಂಬ ಹೆಸರಿನ ದೇಶದ್ರೋಹಿ ಬಂಡಾಯವೇಳುವಂತೆ ಜನರನ್ನು ಕವನಗಳ ಮೂಲಕ ಪ್ರಚೋದಿಸಿದ್ದಲ್ಲದೆ, ಆಡಳಿತದ ನಿಷ್ಠಾವಂತ ಪೊಲೀಸ್ ಫಿಲಿಪ್ಸ್ ಸೆಲಿಪೆಯನ್ನು ಕೊಂದು ಹಾಕಿರುವುದಾ ಸಾಬೀತಾಗಿ, ಬೆಂಜಮಿನ್ ಮೊಲಾಯಿಸ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಊe shouಟಜ be hಚಿಟಿgeಜ ಣiಟಟ ಜeಚಿಣh. ಪರಮಾಧಿಕಾರಿ ಭೋಥಾರ ಸಿಹಿಯೊಂದಿಗೆ ಈ ಆಜ್ಞೆ ಹೊರಡಿಸಲಾಗಿದೆ.

(ಬೆಂಜಮಿನ್ ಮೊಲಾಯಿಸ್ ಒಂದು ಕ್ಷಣ ಸ್ತಬ್ಧನಾಗುವನು. ಅನಂತರ ಮುಗುಳ್ನಗುತ್ತ ಎದ್ದು ನಿಲ್ಲುವನು. ಅಷ್ಟೂ ಜನ ಅಂಗರಕ್ಷಕರಂತೆ ಹಿಂಬಾಲಿಸುವರು. ಕಬ್ಬಣದ ಸರಳುಗಳ ಬಾಗಿಲು ಎದುರಾಗುವುದು. ಅದರಾಚೆಗೆ ನೇಣುಗಂಬದ ಕೋಣೆ! ಬೆಂಜಮಿನ್ ಮೊಲಾಯಿಸ್ ನಿಂತಲ್ಲೇ ನಿಂತು ತಲೆಯೆತ್ತಿ ಸೂರನ್ನು ದಿಟ್ಟಿಸಿ, ಕಣ್ಮುಚ್ಚಿಕೊಂಡು ಪ್ರಾರ್ಥಿಸುವನು.)

ಬೆಂಜಮಿನ್ ಮೊಲಾಯಿಸ್    ನಾನು ಮತ್ತೆ ಆಫ್ರಿಕಾದ ನೀಗ್ರೋನಾಗಿಯೇ ಹುಟ್ಟಬಯಸ್ತೇನೆ. ದೇವರೇ. ಆಗ ಈ ನೆಲ ಸ್ವತಂತ್ರವಾಗಿರಲಿ. ನನ್ನ ಜನರ ಕೈಯಲ್ಲಿ ಆಡಳಿತವಿರಲಿ. ಅವರೆಲ್ಲ ಮನುಷ್ಯರಂತೆ ಬದುಕಲಿ.

(ಮುಗುಳ್ನಗೆಯನ್ನು ಮುಖಕ್ಕೆ ತಂದುಕೊಂಡು ಕೋಣೆಯೊಳಗಡೆ ಕಾಲಿಡುವನು. ಹೊರಗೆ. ನಸುಕಿನ ಸೂರ್ಯ ಮೆಲ್ಲಗೆ ಮೇಲೇರತೊಡಗುವನು.)

ವೇದಿಕೆ ಕತ್ತಲಾಗುವುದು.

   ******************************************************************************************************

ಸುಧಾ ಚಿದಾನಂದಗೌಡ
ಹಗರಿಬೊಮ್ಮನಹಳ್ಳಿ-೫೮೩೨೧೨
ಬಳ್ಳಾರಿ(ಜಿಲ್ಲೆ)

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...