ಬುಧವಾರ, ನವೆಂಬರ್ 28, 2012

ರಂಗಸ್ಥಳ ---- ಉಷಾ ಕಟ್ಟೆಮನೆ

ಮುರಳಿಯ ಮೋಹನ ಗಾನವದೆಲ್ಲಿ?

ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಗೀತ ನಾಟಕಗಳ ಪ್ರಯೋಗ ಆಗಿದ್ದು ಕಡಿಮೆ. ಅದರ ಪ್ರಯೋಗಕ್ಕೆ ಬೇಕಾದ ಅಗತ್ಯಗಳು ಬೇರೆಯೇ ತೆರನಾಗಿರುವುದು ಅದಕ್ಕೆ ಕಾರಣ.
ಗೀತ ನಾಟಕವೆಂದರೆ ಗೀತೆಗಳಿಂದಲೇ ಕ್ರಿಯೆಯು ನಡೆಯುವ ನಾಟಕ. ಇಲ್ಲಿ ನಾಟಕೀಯ ಘಟನೆಗಳಿಗಿಂತ ಸಾಹಿತ್ಯ, ಕಾವ್ಯ ಮತ್ತು ಸಂಗೀತವೇ ಪ್ರಧಾನ ಪಾತ್ರ ವಹಿಸುತ್ತವೆ. ಹಾಗೂ ಇದರಲ್ಲಿ ಅಭಿನಯದ ಜತೆಗೆ ಸಂಗೀತ ಜ್ನಾನವೂ ಕಲಾವಿದರಿಗೆ ಅತ್ಯಗತ್ಯ. ಸ್ವಲ್ಪಮಟ್ಟಿನ ನೃತ್ಯದ ಅರಿವು ಕೂಡಾ. ನಿರ್ದೇಶಕನಿಗೆ ಇದೆಲ್ಲೆದರ ಮೇಳೈಸುವಿಕೆ ಸಾಧ್ಯವಾದರೆ ಆ ಪ್ರಯೋಗ ಯಶಸ್ವಿಯಾಗುತ್ತದೆ..
ತೆಲುಗು, ತಮಿಳು, ಬಂಗಾಲಿ ಭಾಷೆಗಳಲ್ಲಿ.ಗೀತ ನಾಟಕಗಳು ಇದ್ದರೂ ಕನ್ನಡದಲ್ಲಿ ಇವುಗಳ ಸಂಖ್ಯೆ ಜಾಸ್ತಿ. ಒಂದು ರೀತಿಯಲ್ಲಿ ಭಾರತೀಯ ಸಾಹಿತ್ಯ ಪರಂಪರೆಗೆ ಗೀತ ನಾಟಕಗಳು ಕನ್ನಡದ ವಿಶಿಷ್ಟ ಕೊಡುಗೆ ಎನ್ನಬಹುದು. ಪು.ತಿ.ನ ಎರಡೇ ಗೀತ ನಾಟಕಗಳನ್ನು ಬರೆದರೂ ಈ ಪ್ರಕಾರದಲ್ಲಿ ಅವರ ಹೆಸರು  ದೊಡ್ಡದು. ಮೇಲು ಕೋಟೆಯ ಈ ಕವಿ ಕೃಷ್ಣನ ಅನನ್ಯ ಭಕ್ತ. ಭಕ್ತಿ ಪರಂಪರೆಯ ಮುಂದುವರಿಕೆಯ ಭಾಗ ಇವರ ಕಾವ್ಯ ಸೃಷ್ಟಿ.
’ಗೋಕುಲ ನಿರ್ಗಮನ’ ೧೯೪೯ರಲ್ಲಿ ಪು.ತಿ.ನ ಬರೆದ ಎರಡನೆಯ ಗೀತ ನಾಟಕ. ’ಅಹಲ್ಯೆ’ ೧೯೪೧ ರಲ್ಲಿ ಪ್ರಕಟವಾಗಿತ್ತು.
ಬಾರತೀಯ ರಂಗಭೂಮಿ ಇತಿಹಾಸದಲ್ಲಿ ಕಾರಂತರದ್ದು ದೊಡ್ಡ ಹೆಸರು. ಅವರ ನಾಟಕಗಳಲ್ಲಿ ಸಂಗೀತವೇ ವಿಜೃಂಭಿಸುತ್ತದೆ. ಅದರಲ್ಲೂ ಜಾನಪದ ವಾದ್ಯ ಸಂಗೀತ ಮತ್ತು ಜಾನಪದ ಮಟ್ಟುಗಳು ಯಾವಾಗಲೂ ಮುನ್ನೆಲೆಯಲ್ಲಿ ಇರುತ್ತವೆ. ಹೊಸ ಹೊಸ ಪ್ರಯೋಗಗಳಿಗೆ ಅವರು ಸದಾ ಮುಂದಾಗುತ್ತಾರೆ. ಇಂತಹ ಕಾರಂತರು  ಪು.ತಿ,ನ. ರವರ ’ಗೋಕುಲ ನಿರ್ಗಮನ’ವನ್ನು ನೀನಾಸಂ ತಿರುಗಾಟಕ್ಕಾಗಿ ಹತ್ತು ವರುಷಗಳ ಹಿಂದೆ ನಿರ್ದೇಶಿಸಿದ್ದರು. ಆಗ ಅದು ಯಶಸ್ವಿಯಾಗಿ ನೂರೈವತ್ತಕ್ಕೂ ಹೆಚ್ಚಿನ ಪ್ರದರ್ಶನವನ್ನು ಕಂಡಿತ್ತು.
ಇದೇ ಕಾರಂತರು ಹುಟ್ಟು ಹಾಕಿದ್ದ ’ ಬೆನಕ’ ನಾಟಕ ತಂಡ ಈಗ ’ಗೋಕುಲ ನಿರ್ಗಮನ’ವನ್ನು ಮತ್ತೆ ರಂಗದ ಮೇಲೆ ತಂದಿದೆ. ಇದರ ನಿರ್ದೇಶಕರು ಟಿ.ಎಸ್.ನಾಗಾಭರಣ. ಈಗ ಸಿನೇಮಾ ಮತ್ತು ಕಿರುತೆರೆಯೆಡೆ ತಮ್ಮ ಗಮನವನ್ನು ಬಹು ಮಟ್ಟಿಗೆ ಕೇಂದ್ರೀಕರಿಸಿರುವ ನಾಗಾಭರಣ ಒಂದು ಕಾಲದಲ್ಲಿ ರಂಗಭೂಮಿಯಲ್ಲಿ ನಟರಾಗಿ, ನಿರ್ದೇಶಕರಾಗಿ ಹೆಸರು ಮಾಡಿದವರು.
ಹಲವಾರು ಪುನರ್ ಪ್ರದರ್ಶನಗಳನ್ನು ಕಂಡ ನಾಟಕವೊಂದನ್ನು ಇನ್ನೊಬ್ಬ ನಿರ್ದೇಶಕ ಕೈಗೆತ್ತಿಕೊಂಡಾಗ ಆತನ ಮುಂದಿರುವ ಸವಾಲು ಮತ್ತು ಜವಾಬ್ದಾರಿ ಹೆಚ್ಚು. ಅಲ್ಲಿ ಆತ ತನ್ನ ಸೃಜನಶೀಲತೆಯನ್ನು ತೋರಬೇಕಾಗುವುದು ಅನಿರ್ವಾಯ. ಈ ದೃಷ್ಟಿಯಿಂದ ನೋಡಿದರೆ ಹಳೆಯ ಪಾತ್ರಧಾರಿಗಳ ಬದಲು ಹೊಸ ನಟ-ನಟಿಯರು ಕಾಣಿಸಿಕೊಂಡಿದ್ದಾರೆ ಅಷ್ಟೇ. ಕಾರಂತರ ಪ್ರಯೋಗದ ಯಥಾವತ್ ಕಾಪಿ ಇದು. ನಾಗಾಭರಣರ ಉದ್ದೇಶ ಅದೇ ಇದ್ದಿರಬಹುದೇನೋ ಗೊತ್ತಿಲ್ಲ.

ತಮಗೆ ಒಪ್ಪಿಸಿದ ಕೆಲಸವನ್ನು ಈ ಪಾತ್ರಧಾರಿಗಳು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ಶ್ರೀಕೃಷ್ಣ ಪಾತ್ರಧಾರಿ ಮೈಕೋ ಮಂಜುನಾಥ್ ತುಂಟ ಕೃಷ್ಣನಾಗಿ, ಮುರಳಿಲೋಲನಾಗಿ ಪಾತ್ರಕ್ಕೆ ಶಕ್ತಿ ಮೀರಿ ಜೀವ ತುಂಬಿದ್ದಾರೆ. ಆದರೆ ಅವರಿಗೆ ಸರಿ ಜೋಡಿಯಾಗಿ ಪಾತ್ರ ನಿರ್ವಹಿಸಲು ರಾಧೆಯಾಗಿ ಅಭಿನಯಿಸಿದ ವಿದ್ಯಾವೆಂಕಟರಾಂಗೆ ಸಾಧ್ಯವಾಗಿಲ್ಲ. ರಾಧೆಯದು ಅರ್ಪಣಾ ಭಾವ. ಅದಕ್ಕೆ ಮುಗ್ಧ ಮುಖಭಾವದ ನಟಿ ಬೇಕು.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಗೋಕುಲ ನಿರ್ಗಮನದಲ್ಲಿ ನಟಿಸಿದ ಹೆಚ್ಚಿನ ಎಲ್ಲಾ ನಟ-ನಟಿಯರು ಕಿರುತೆರೆಯಲ್ಲಿ ತೊಡಗಿಸಿಕೊಂಡವರು. ಅದವರಿಗೆ ಬದುಕಿನ ಹಾದಿ. ಹಾಗಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಅವರ ಪಾತ್ರಗಳು ಸೂಪರ್ ಇಂಪೋಸ್ ಆಗುತ್ತಿದ್ದವು. ಮುಕ್ತವಾಗಿ ನೋಡುವುದು ಕಷ್ಟವಾಗುತ್ತಿತ್ತು.

ಬಲರಾಮನಾಗಿ ಪೂರ್ಣಚಂದ್ರ ತೇಜಸ್ವಿ, ಅಕ್ರೂರನಾಗಿ ಟಿ.ಎನ್.ಗಿರೀಶ್ ಕಿರುತೆರೆಯ ಹ್ಯಾಂಗೋವರ್ ನಿಂದ ಸಂಪೂರ್ಣವಾಗಿ ಬಿಡಿಸಿಕೊಂಡಂತಿತ್ತು. ಅಲ್ಲಲ್ಲಿ ಚದುರಿ ಹೋಗಿದ್ದ ಈ ನಟ-ನಟಿಯರನ್ನು ಬೆನಕ ಮತ್ತೆ ರಂಗಭೂಮಿಗೆ ಎಳೆದು ತಂದಿದೆ. ಈ ಎಳೆಯ ಕಲಾವಿದರು ಅಲ್ಲಿ-ಇಲ್ಲಿ ಎರಡೂ ಕಡೆಯೂ ಹೊಂದಾಣಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಬೆನಕದ ಕಿರಿಯ ತಲೆಮಾರು ಹಿರಿಯರ ಯಶಸ್ವಿ ನಾಟಕಗಳನ್ನು ಮತ್ತೆ ರಂಗದ ಮೇಲೆ ಪ್ರದರ್ಶಿಸುವ ತಯಾರಿಯಲ್ಲಿದೆ. ಇದು ಒಂದು ರೀತಿಯಲ್ಲಿ ಸ್ವಾಗತಾರ್ಹವೇ ಆದರೂ ಹಿರಿಯರ ನೆರಳಿನಿಂದ ಈಚೆ ಬರುವ ಪ್ರಯತ್ನ ಒಳ್ಳೆಯದು. ಮುಂದಿನ ದಿನಗಳಲ್ಲಿ ಹಯವದನ, ಸಂಗ್ಯಾಬಾಳ್ಯ, ಜೋಕುಮಾರಸ್ವಾಮಿ ಪ್ರದರ್ಶನ ಕಾಣಲಿವೆ. ಹಿಂದಿನ ನಾಟಕಗಳಿಗೆ ಅವರು ಕಾಯಕಲ್ಪ ಮಾಡದಿದ್ದರೆ ಏನನ್ನೂ ಸಾಧಿಸಿದಂತಾಗುವುದಿಲ್ಲ. ಒಂದು ಕೃತಿ ಕಾಲದ ನಿಕಷಕ್ಕೆ ಸಿಕ್ಕಿ ಹೊಳಪುಗೊಳ್ಳುತ್ತಲೇ ಇರಬೇಕು. ಮೊದಲ ಬಾರಿಗೆ ಗೋಕುಲ ನಿರ್ಗಮನವನ್ನು ಹೊಳಪುಗೊಳಿಸಿದವರು ಬಿ.ವಿ.ಕಾರಂತರು. ಅದರ ಸಾರ ಸರ್ವಸ್ವವನ್ನೆಲ್ಲಾ ಹೀರಿ ಅದನ್ನು ರಂಗದ ಮೇಲಿನ ದೃಶ್ಯಕಾವ್ಯವಾಗಿಸಿದರು. ಜನರ ಹತ್ತಿರ ತಂದರು. ಜನರು ಪು.ತಿ.ನರನ್ನು, ಅವರ ಬರವಣಿಗೆಯನ್ನು ಮುಖ್ಯವಾಗಿ ಗೋಕುಲ ನಿರ್ಗಮನವನ್ನು ಮತ್ತೊಮ್ಮೆ ಪುಟ ತಿರುಗಿಸಿ ನೋಡುವಂತಾಯ್ತು.

ಗೋಕುಲ ನಿರ್ಗಮನವನ್ನು ಈಗ ನೀನಾಸಂನವರು ಆಡುತ್ತಿಲ್ಲ. ಆದರೆ ತಮ್ಮ ಶೋ ಅನ್ನು ಅವರು ವಿಡಿಯೋ ಚಿತ್ರೀಕರಣ ಮಾಡಿ ಕಾಯ್ದಿರಿಸಿಕೊಂಡಿದ್ದಾರೆ. ಈ ಬಾರಿಯ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಅದನ್ನು ವ್ಯಾಖ್ಯಾನ, ವಿಮರ್ಶೆಗಳೊಂದಿಗೆ ಪ್ರದರ್ಶಿಸಲಾಯ್ತು. ಅಲ್ಲಿಯ ಶಿಬಿರಾರ್ಥಿಗಳು ಅದನ್ನು ಮಂತ್ರಮುಗ್ಧರಾಗಿ ವೀಕ್ಷಿಸಿದರು. ಭಾವುಕರಾಗಿ ಅದರ ಚರ್ಚೆಯಲ್ಲಿ ಪಾಲ್ಗೊಂಡರು.

ಒಂದು ರಂಗಪ್ರಯೋಗದ ಫಲಶ್ರುತಿಯ ಬಗ್ಗೆ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ಅಭಿಪ್ರಾಯಗಳಿರಬಹುದು. ಆದರೆ ಗೋಕುಲ ನಿರ್ಗಮನದ  ಪ್ರದರ್ಶನ ನೀಡುವ ಅನುಭವ ಅಲೌಕಿಕವಾದುದು. ಅದು ನಮ್ಮ ಭಾವಲೋಕದ ಮೃದು ಮಧುರವಾದ ಭಾವನೆಗಳನ್ನು ಮೀಟುವುದರ ಜೊತೆಗೆ ಯಾವುದೋ ಅಲೌಕಿಕವಾದುದರ ಕಡೆಗೂ ನಮ್ಮ ಲಕ್ಷ್ಯವನ್ನು ಸೆಳೆಯುತ್ತದೆ. ಗೀತ ನಾಟಕಗಳ ಯಶಸ್ಸು ಇರುವುದೇ ಇಲ್ಲಿ. ವಾಸ್ತವದಿಂದ ದೂರ ಸರಿದಷ್ಟು ಭಾವಲೋಕ ಶ್ರೀಮಂತಗೊಳ್ಳುತ್ತದೆ.

ಗೋಕುಲ ನಿರ್ಗಮನಕ್ಕೆ ಇನ್ನೊಮ್ಮೆ ಸಾಣೆ ಹಿಡಿಯುವ ಸಂದರ್ಭ ನಾಗಾಭರಣರಿಗೆ ಒದಗಿ ಬಂದಿತ್ತು. ಆದರೆ ಅವರು ಅದರೆಡೆಗೆ ಗಮನ ಹರಿಸಲಿಲ್ಲ. ಅಂದು ಸ್ವಾತಂತ್ರ್ಯ ಪೂರ್ವದಲ್ಲಿ ಪು.ತಿ.ನರವರು ಗೊಲ್ಲತಿಯ ಭಾವ ತಳೆದು ಗೋಕುಲ ನಿರ್ಗಮನವನ್ನು ಬರೆದಂತೆ ಇಂದು ಈ ಕಾಲಘಟ್ಟದಲ್ಲಿ ನಿಂತು ಆ ಗೋಕುಲದ ಪಾತ್ರಗಳ ಪರಕಾಯ ಪ್ರವೇಶ ಮಾಡಿ ಅವರ ಮನಸ್ಸು ಬಗೆದಿದ್ದರೆ ಹೊಸ ವ್ಯಾಖ್ಯಾನಗಳು ದೊರೆಯುತ್ತಿದ್ದವೇನೋ..!

ಕಳೆದ ವರ್ಷ ಸುರೇಶ್ ಅನಗಳ್ಳಿಯವರು ಮೇಘದೂತವನ್ನು ಎಡಪಂಥೀಯ ದೃಷ್ಟಿಕೋನದಿಂದ ನೋಡಿ ರಂಗದ ಮೇಲೆ ತಂದಿದ್ದರು. ಒಬ್ಬ ವ್ಯಕ್ತಿಯ ಭಾವಲೋಕದ ವಿವರಗಳಿಗೆ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನ ಸಾಧ್ಯವಾಗುವುದಾದರೆ ಗೋಕುಲ ನಿರ್ಗಮನದಂತಹ ಹಲವು ಆಯಾಮದ ಕೃತಿಗೆ ಯಾಕೆ ಸಾಧ್ಯವಾಗಲಾರದು?

ಕನ್ನಡದ ಪ್ರಸಿದ್ಧ ವಿಮರ್ಶಕರಾಗಿದ್ದ ಡಾ.ಡಿ.ಆರ್ ನಾಗರಾಜ್ ರವರು ಗೋಕುಲ ನಿರ್ಗಮನದಲ್ಲಿ ಧರ್ಮ-ಕಾಮದ ಸಂಘರ್ಷವನ್ನು ಕಂಡಿದ್ದಾರೆ. ಕೊಳಲನ್ನು ಜೀವ ಕಾಮದ ಸಂಕೇತವಾಗಿ ನೋಡಿದ್ದಾರೆ. ಇನ್ನು ಕೆಲವರು ಗ್ರಾಮ ಸಂಸ್ಕೃತಿ ಮತ್ತು ನಗರ ಸಂಸ್ಕೃತಿಯ ಸಂಘರ್ಷವನ್ನು ಇಲ್ಲಿ ಕಂಡಿದ್ದಾರೆ. ಕಿ.ರಂ. ನಾಗರಾಜ್ ರವರು ಗೋಕುಲದ ಪರಿಸರದಲ್ಲಿ ತಾಯ್ತನ, ಹೆಣ್ತನದ ಭಾವವನ್ನು ಕಂಡಿದ್ದಾರೆ. ಈ ಕಾಲಘಟ್ಟದಲ್ಲಿ ನಿಂತು ನೋಡಿದರೆ ಹೆಣ್ಣು ಜೀವವೊಂದಕ್ಕೆ ಈ ಕೃತಿ ಪ್ರಕೃತಿ-ಪುರುಷರ ನಡುವಿನ ನಿರಂತರ ಆಕರ್ಷಣೆ ಮತ್ತುವಿಯೋಗದ ಸ್ಥಾಯೀ ಭಾವವಾಗಿ ಕಾಣುತ್ತದೆ. ರಾಧೆ ಆ ನಿರಂತರ ಪ್ರೇಮದ ಮೂರ್ತ ರೂಪ. ಅದು ಅಲೌಕಿಕವಾದುದು. ಆಕೆಯಲ್ಲಿರುವ ಅರ್ಪಣಾ ಭಾವಕ್ಕೆ ಲೌಕಿಕದ ಯಾವ ಕಟ್ಟುಪಾಡುಗಳೂ ಇಲ್ಲ. ಈ ಬಾವದಲ್ಲಿ ಆಕೆಯ ಸಖಿಯರೂ ಪಾಲ್ಗೊಳ್ಳುತ್ತಾರೆ. ಗೋಪಾಲಕರೂ ಸೇರಿದಂತೆ ಇಡೀ ನಂದಗೋಕುಲ ಭಾಗಿಯಾಗುತ್ತದೆ; ಸಾಮೂಹಿಕ ಅರ್ಪಣಾ ಭಾವ.

ಎಲ್ಲವನ್ನೂ ಸ್ವೀಕರಿಸಿ ತನ್ನಲ್ಲಿ ಕಾಪಿಡುವ ಪ್ರಕೃತಿ. ಒಂದು ಹಂತದವರೆಗೆ ಮಾತ್ರ ಆಕೆಯಲ್ಲಿ ಜೀವಶಕ್ತಿ ತುಂಬಿ ನಂತರ ನಿರ್ಗಮಿಸುವ ಪುರುಷ, ಇಂದಿಗೂ ಆಧುನಿಕ ಸ್ತ್ರೀಯರನ್ನು ಕಾಡುವ ನಿಗೂಢ. ಸಂಸಾರದಲ್ಲಿ ಇದ್ದುಕೊಂಡೇ ಅದರಿಂದ ಬಿಡುಗಡೆಗಾಗಿ ಹಂಬಲಿಸುವ ಆಕೆಗೆ ಮುರಳಿಗಾನ ಬದುಕನ್ನು ಮುನ್ನಡೆಸುವ ಶಕ್ತಿ.

ಇಷ್ಟೆಲ್ಲಾ ಸಾಧ್ಯತೆಗಳು, ಆಳ-ವಿಸ್ತಾರಗಳನ್ನೊಳಗೊಂಡ ಕೃತಿಯನ್ನು ಒಂದು ರಮ್ಯಕಥನವಾಗಿಸಿ ದೃಶ್ಯಕಾವ್ಯವಾಗಿಸಿದ್ದಾರೆ ಬಿ.ವಿ.ಕಾರಂತರು. ನಾಗಾಭರಣ ಇದರಲ್ಲಿರುವ ಧ್ವನಿಶಕ್ತಿಯನ್ನು ಗುರುತಿಸಿ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನ ಮಾಡಬಹುದಿತ್ತು. ಆದರೆ ಅದು ಒಂದು ’ಸಿಂಡ್ರೆಲ್ಲಾ’ ಶೋದ ಮಟ್ಟಕಷ್ಟೇ ಸೀಮಿತಗೊಂಡಿದೆ.

[’ಹಂಗಾಮ’ ನಿಯತಕಾಲಿಕದ ೨೦೦೪ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಲೇಖನ ]

ವೀರಗಾಸೆ ವೀರರು


ಸುದೇಶ ದೊಡ್ಡಪಾಳ್ಯ   

-ಚಿತ್ರಗಳು-ಪವನ್ ಪಿ.ಶ್ರೀನಿವಾಸ್

ಕೃಪೆ: ಪ್ರಜಾವಾಣಿ,ಕಾಮನಬಿಲ್ಲು ಪುರವಣಿ, 29.11.2012
 


`ನಾವು ಕಲಾವಿದರು, ಆದರೂ ನಮ್ಮನ್ನು ಕೂಲಿ ಕಾರ್ಮಿಕರಂತೆ ನಡೆಸಿಕೊಳ್ಳಲಾಗುತ್ತದೆ. ನಾವು ಹಣಕ್ಕಾಗಿ ಕಲೆಯನ್ನು ಆರಿಸಿಕೊಂಡಿಲ್ಲ. ಕಲೆಗಾಗಿ, ಅದರ ಸೆಳೆತಕ್ಕಾಗಿ, ಸಂಪ್ರದಾಯವನ್ನು ಉಳಿಸುವ ಸಲುವಾಗಿ ಆಸೆಪಟ್ಟು ಆಯ್ಕೆ ಮಾಡಿಕೊಂಡಿದ್ದೇವೆ`- ಮೈಸೂರಿನ ಹೆಸರಾಂತ ವೀರಗಾಸೆ ಕಲಾವಿದ ಕಿರಾಳು ಮಹೇಶ್ ಬೇಸರದಿಂದಲೇ ಇಷ್ಟು ಹೇಳಿ ಸುಮ್ಮನಾದರು.

ಆದರೆ ಅವರ ಪಕ್ಕದಲ್ಲಿ ಕುಳಿತಿದ್ದ ಯುವ ಕಲಾವಿದ ರಮೇಶ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ಗುರುಗಳಾದ ಮಹೇಶ್ ಹೇಳದೇ ಉಳಿಸಿದ್ದ ಮಾತುಗಳನ್ನು ಹೇಳಿಬಿಡುವ ಧಾವಂತದಲ್ಲಿದ್ದರು. `ನಾವು ವೀರಗಾಸೆಯಿಂದ ನಾಲ್ಕು ಕಾಸು ಸಂಪಾದಿಸಿ, ಊರಲ್ಲಿ ಮನೆ, ಮೈಸೂರಲ್ಲಿ ಸೈಟು ತೆಗೆದುಕೊಳ್ಳಬೇಕು ಎನ್ನುವ ಆಸೆ ಇಲ್ಲ. ಇಂಥ ಆಸೆಯನ್ನು ನಮ್ಮಂಥ ಕಲಾವಿದರು ಇಟ್ಟುಕೊಳ್ಳುವುದು ಹಗಲುಗನಸಾಗುತ್ತದೆ.

ಎಷ್ಟೇ ನೋವುಗಳಿದ್ದರೂ ಅವುಗಳನ್ನು ನುಂಗಿಕೊಂಡು ವೀರಗಾಸೆ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದ್ದೇವೆ` ಎಂದು ಅಭಿಮಾನಪಟ್ಟರು.

ಕಿರಾಳು ಮಹೇಶ್ ಬೇಸರಕ್ಕೂ, ರಮೇಶ್ ಅವರ ವೀರಾವೇಷದ ಅಭಿಮಾನದ ನುಡಿಗೂ ಸಂಬಂಧವಿದೆ. ಜಾನಪದದಲ್ಲಿ ಗಂಡು ಕಲೆ ಎಂದು ಕರೆಸಿಕೊಳ್ಳುವ `ವೀರಗಾಸೆ` ನೃತ್ಯ ಪ್ರಕಾರವನ್ನು ಇವರೆಲ್ಲರೂ ಉಸಿರಾಗಿಸಿಕೊಂಡಿದ್ದಾರೆ.

ವೀರಗಾಸೆ ಸಂಪ್ರದಾಯವನ್ನು ತಲೆಯಿಂದ ತಲೆಗೆ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಒಂದು ವೇಳೆ ಮುತ್ತಾತ, ತಾತ, ತಂದೆಯವರಂತೆ ವೀರಗಾಸೆಗಾಗಿ ಇವರ ಮನಸ್ಸು ತುಡಿಯದೇ ಹೋಗಿದ್ದರೆ ವೀರಗಾಸೆ ಸಂಪ್ರದಾಯದ ಕಥೆ ಏನಾಗಬೇಕು? ವೀರಗಾಸೆ ಸೆಳೆತವೇ ಅಂಥದ್ದು, ಕರಡಿ ವಾದ್ಯದ ಸದ್ದು ಕಿವಿ ಮೇಲೆ ಬಿದ್ದರೆ ಸಾಕು, ಎ.ಆರ್.ರೆಹಮಾನ್ ಸಂಗೀತಕ್ಕೆ ಹೆಜ್ಜೆಹಾಕಲು ಹಿಂದೆ ಮುಂದೆ ನೋಡುವ ಮಂದಿಯೂ ನಿಂತಲ್ಲೇ ಹೆಜ್ಜೆ ಬದಲಿಸುವುದು ಗ್ಯಾರಂಟಿ.


ಅಂದಮೇಲೆ ನಿತ್ಯವೂ ಊರ ಗುಡಿಯ ಮುಂದೆ ಕರಡಿ ವಾದ್ಯದ ನಿನಾದ ಹೊಮ್ಮಿದರೆ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ನಾಲ್ಕು ಹೆಜ್ಜೆ ಹಾಕಿಯೇ ತೀರಬೇಕು. ಇಂತಹ ಒಳ ಸೆಳೆತವೇ ನೂರಾರು ಮಂದಿ ವೀರಗಾಸೆ ಕಲಾವಿದರನ್ನು ರೂಪಿಸಿದೆ.
ಕಿರಾಳು ಮಹೇಶ್ ವೀರಗಾಸೆ ನೃತ್ಯದಲ್ಲಿ ಅನುಭವಿ.

ಇವರು ಹೆಜ್ಜೆ ಹಾಕುವುದು, ವೀರಾವೇಷದಿಂದ ಕಣ್ಣುಗಳನ್ನು ಅರಳಿಸಿ ಗೋಲಿಯಂತೆ ಹೊರಳಿಸುವುದನ್ನು ನೋಡುವಾಗ ಭಯವಾಗುತ್ತದೆ. ಒಡಪುಗಳನ್ನು ಹೇಳುವುದನ್ನು ಕೇಳಬೇಕು ಎನಿಸುತ್ತದೆ. ಇಂತಹ ಮಹೇಶ್ `ಅಭಿನವಶ್ರೀ ವೀರಭದ್ರ ನೃತ್ಯ ತಂಡ` ಕಟ್ಟಿದ್ದಾರೆ. ಇವರ ತಂಡದಲ್ಲಿ 50ಕ್ಕೂ ಹೆಚ್ಚು ಯುವ ಕಲಾವಿದರು ಇದ್ದಾರೆ.

ರಮೇಶ್, ಬಿ.ಎಸ್.ಮಂಜುನಾಥ್, ಕೆ.ಎಂ.ಸೋಮಶೇಖರ್, ನಟರಾಜ, ರಾಜೇಶ್, ಮಹೇಶ್, ಕೆ.ಎಂ.ಭಾಸ್ಕರ್, ಎಂ.ಪ್ರಕಾಶ್, ಪ್ರಭು ಸೇರಿದಂತೆ ವೀರಗಾಸೆ ತಂಡದಲ್ಲಿರುವ ಎಲ್ಲ ಕಲಾವಿದರದೂ ಒಂದೇ ಕಥೆ. ಆದರೆ ಊರು, ಹೆಸರು, ವಯಸ್ಸು, ವಿದ್ಯಾಭ್ಯಾಸ ಮಾತ್ರ ಬೇರೆ ಬೇರೆ!

ರಮೇಶ್ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮೂಡಹಳ್ಳಿಯವರು. ಓದಿದ್ದು 9ನೇ ತರಗತಿ. ಮುಂದೆ ಕೈ ಬೀಸಿ ಕರೆದಿದ್ದು ವೀರಗಾಸೆ. ಹದಿನೈದನೇ ವಯಸ್ಸಿಗೆ ವೀರಗಾಸೆಗಾಗಿ ಮುಖಕ್ಕೆ ಬಣ್ಣ ಬಳಿದುಕೊಂಡು, ತಲೆ ಮೇಲೆ ಕಿರೀಟ ಇಟ್ಟುಕೊಂಡು ಕೈಯಲ್ಲಿ ಕತ್ತಿ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕರಡಿ ವಾದ್ಯದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ವೀರಾವೇಷದಿಂದ ಕುಣಿಯತೊಡಗಿದರು. ಬಳಿಕ ಏನೇ ಮಾಡಿದರೂ ವೀರಗಾಸೆ ಇವರನ್ನು ಬಿಟ್ಟುಕೊಡಲಿಲ್ಲ. ತಲೆಯೊಳಗೆ ವೀರಗಾಸೆ ಕಲೆ ತುಂಬಿಕೊಂಡ ಮೇಲೆ ವಿದ್ಯೆಗೆ ಜಾಗ ಇಲ್ಲದಂತಾಯಿತು. ಹೀಗಾಗಿ ಹೆಚ್ಚು ಮಂದಿ ವೀರಗಾಸೆ ಕಲಾವಿದರು ಕಾಲೇಜು ಮುಖವನ್ನೇ ನೋಡಿಲ್ಲ.

ಇದು ಎಲ್ಲರ ಕಥೆಯೂ ಹೌದುರಮೇಶ್‌ಗೆ ಏಳೆಂಟು ವರ್ಷಗಳಿರಬೇಕು. ಹೊಲದಲ್ಲಿ ದನಕರುಗಳನ್ನು ಮೇಯಿಸಲು ಹೋಗುತ್ತಿದ್ದರು. ಅಲ್ಲಿ ಗೆಳೆಯರೊಂದಿಗೆ ಸೇರಿ ವೀರಗಾಸೆ ಆಟವಾಡುತ್ತಿದ್ದರು. ಹೆಗಲ ಮೇಲಿದ್ದ ಟವೆಲನ್ನು ಸೊಂಟಕ್ಕೆ ಸುತ್ತಿಕೊಂಡು, ದನ ಕಾಯುವ ಕೋಲನ್ನು ಕತ್ತಿಯಂತೆ ಹಿಡಿದು, ಧೂಳನ್ನೇ ವಿಭೂತಿಯಂತೆ ಹಣೆಗೆ ಹಚ್ಚಿಕೊಳ್ಳುತ್ತಿದ್ದರು.

ಕೆಲವರು ಪ್ಲಾಸ್ಟಿಕ್ ಬಿಂದಿಗೆಯನ್ನೇ ಕರಡಿ ವಾದ್ಯವನ್ನಾಗಿ ಮಾಡಿಕೊಂಡು ನುಡಿಸುತ್ತಿದ್ದರು. ಗದ್ದೆ ಬಯಲಿನಲ್ಲಿ ಸಿಗುವ ತರಗಲೆಯನ್ನು ಗುಡ್ಡೆ ಮಾಡಿ ಅದಕ್ಕೆ ಬೆಂಕಿ ಹಾಕುತ್ತಿದ್ದರು. ಆಗ ರಮೇಶ್ ವೀರಾವೇಷದಿಂದ ಹೆಜ್ಜೆ ಹಾಕುತ್ತಾ ಮೈಮರೆತು ಕುಣಿಯುತ್ತಿದ್ದರು. ಇಂಥ ಸಮಯದಲ್ಲಿ ಬೆಂಕಿಯನ್ನು ಕೊಂಡವೆಂದು ಭಾವಿಸಿ ಹಾಯುತ್ತಿದ್ದರು.

ಚಾಮರಾಜನಗರ ಜಿಲ್ಲೆಯ ಬಿಸಲವಾಡಿಯ ಬಿ.ಎಸ್.ಮಂಜುನಾಥ್ ತನ್ನ ಗೆಳೆಯ ರಮೇಶ್ ಅವರ ಕಥೆಯನ್ನು ಮುಂದುವರಿಸಿದಂತೆ ಹೇಳುತ್ತಿದ್ದರು. ಶಾಲೆ ಬಿಟ್ಟ ಕೂಡಲೇ ಮಂಜುನಾಥ್ ಮತ್ತು ಗೆಳೆಯರು ಊರ ಗುಡಿ ಹತ್ತಿರಕ್ಕೆ ಓಡುತ್ತಿದ್ದರು. ಅಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ರಟ್ಟಿನ ಬಾಕ್ಸ್‌ಗೆ ದಾರ ಕಟ್ಟಿ ಕುತ್ತಿಗೆಗೆ ನೇತು ಹಾಕುತ್ತಿದ್ದರು. ಅವರು ಅದನ್ನೆ ಕರಡಿ ವಾದ್ಯದಂತೆ ಬಾರಿಸುತ್ತಿದ್ದರು.

ಉಳಿದವರು ವೀರಗಾಸೆ ವೇಷ ಹಾಕುತ್ತಿದ್ದರು. ಮದುವೆ ಸಂದರ್ಭದಲ್ಲಿ ಗಂಗೆ ತರುವ ಪದ್ಧತಿ ಇದೆ. ಕೊಡದಲ್ಲಿ ನೀರು ತುಂಬಿಸಿಕೊಂಡು ಮಹಿಳೆಯರು ಅವುಗಳನ್ನು ಹೊತ್ತುಕೊಂಡು ಬರುವಾಗ ಮಡಿ ಬಟ್ಟೆ ಹಾಸಲಾಗುತ್ತದೆ. ಆಮೇಲೆ ತೆಂಗಿನಕಾಯಿ ಒಡೆದ ನಂತರ ಮನೆಯೊಳಕ್ಕೆ ಓಡಿ ಹೋಗುವುದು ಸಂಪ್ರದಾಯ. ಗಂಗೆ ತರುವುದನ್ನು ಮಂಜುನಾಥ್ ಮತ್ತು ತಂಡ `ಅನುಕರಣೆ` ಮಾಡುತ್ತಿತ್ತು.

ಬಾಲ್ಯದಲ್ಲೇ ವೀರಗಾಸೆ ಮನಸ್ಸು ಹೊಕ್ಕ ಮೇಲೆ ಹೊರಕ್ಕೆ ಹಾಕುವುದಾದರೂ ಹೇಗೆ? ನೀನು ಒಲಿದಂತೆ ಹಾಡುವೆ ಎನ್ನುತ್ತಾ ವೀರಗಾಸೆಯೊಂದಿಗೇ ಮಿಳಿತಗೊಂಡಿದ್ದಾರೆ. ಮಂಜುನಾಥ್ ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಆಗಮ ಕಲಿತು ಅರ್ಚಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಹೆಚ್ಚಿನ ಕಲಾವಿದರು ಕೃಷಿಯನ್ನೇ ನಂಬಿದ್ದಾರೆ. ಊರಿನಲ್ಲಿರುವ ಹೊಲ, ಗದ್ದೆಗಳಲ್ಲಿ ಫಸಲು ತೆಗೆಯುತ್ತಾರೆ. ವೀರಗಾಸೆ ಸಂಪ್ರದಾಯ ಮತ್ತು ಕಲೆಗೆ ಒಲಿದಿರುವುದರಿಂದ ಕೃಷಿಯ ನಡುವೆಯೇ ವೀರಗಾಸೆ ವ್ಯವಸಾಯವನ್ನೂ ಮಾಡುತ್ತಿದ್ದಾರೆ. ವೀರಗಾಸೆಯನ್ನು ನಂಬಿ ಬದುಕುವುದು ಉಂಟೆ? ಏಕೆಂದರೆ ವರ್ಷಕ್ಕೆ ತುಂಬಾ ಬ್ಯುಸಿ ಕಲಾವಿದ ಎನಿಸಿಕೊಂಡವರೂ 50 ರಿಂದ 60 ಸಾವಿರ ಸಂಪಾದಿಸುವಲ್ಲಿ ಸುಸ್ತಾಗುತ್ತಾರೆ. ಅಂದರೆ ತಿಂಗಳಿಗೆ 5 ರಿಂದ 6 ಸಾವಿರ ಆದಾಯ! ಇದಕ್ಕಾಗಿ ಊರು, ರಾಜ್ಯದ ಮೂಲೆ ಮೂಲೆಗಳನ್ನು ಹಗಲು ರಾತ್ರಿ ಎನ್ನದೆ ಸುತ್ತಬೇಕು.

ಉತ್ಸವಗಳಲ್ಲಿ ಮುಂದೆವೀರಗಾಸೆ ನೃತ್ಯ ಮದುವೆ, ಗೃಹ ಪ್ರವೇಶಗಳಂತಹ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿತ್ತು. ವೀರಗಾಸೆಯವರು ಹೊಸ ಮನೆಗೆ ನುಗ್ಗಿದರೆ ಅಲ್ಲಿರುವ ದುಷ್ಟಶಕ್ತಿಗಳು ಓಡಿ ಹೋಗುತ್ತವೆ ಎನ್ನುವ ನಂಬಿಕೆ ಇದೆ. ಇಂಥ ನಂಬಿಕೆಯೇ ವೀರಗಾಸೆ ನೃತ್ಯ ಪ್ರಕಾರವನ್ನು ಇನ್ನೂ ಉಳಿಸಿಕೊಂಡು ಬರುತ್ತಿದೆ!

ಕೆಲವು ವರ್ಷಗಳಿಂದ ವೀರಗಾಸೆ ಹೆಚ್ಚಾಗಿ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುತ್ತಿದೆ. ಮೆರವಣಿಗೆ, ರಾಜ್ಯೋತ್ಸವ ಮತ್ತು ಧಾರ್ಮಿಕ ಸಮಾರಂಭಗಳೇ ಇರಲಿ, ಅಲ್ಲಿ ವೀರಗಾಸೆ ನೃತ್ಯ ಕಡ್ಡಾಯ ಎನ್ನುವಂತಾಗಿದೆ. ಹೀಗಾಗಿ ವೀರಗಾಸೆ ಕಲಾವಿದರು ನಾಲ್ಕು ಕಾಸಿನ ಮುಖ ನೋಡುವಂತಾಗಿದೆ. ಇಲ್ಲದೇ ಹೋದರೆ ಇವರು ಮದುವೆ, ಗೃಹ ಪ್ರವೇಶ ಮಾಡುವವರ ಕರೆಗಾಗಿ ಕಾಯುತ್ತಾ ಕೂರಬೇಕು.

ಗೌರವ, ಮನ್ನಣೆ ನೀಡಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರನ್ನು ಸರಿಯಾಗಿ ನಡೆಸಿ ಕೊಳ್ಳುವುದಿಲ್ಲ ಎನ್ನುವವರ ಪಟ್ಟಿಗೆ ವೀರಗಾಸೆ ಕಲಾವಿದರೂ ಸೇರುತ್ತಾರೆ. ಇನ್ನು ಸಂಘ, ಸಂಸ್ಥೆಗಳು ಹಬ್ಬ, ಜಾತ್ರೆ, ಉತ್ಸವ, ಸಮಾರಂಭಗಳ ಸಮಯದಲ್ಲಿ ಕರೆಸುತ್ತಾರೆ. ಕೆಲವರು ಪ್ರೀತಿಯಿಂದಲೇ ನಡೆಸಿಕೊಂಡರೆ, ಹಲವರು ದುಡ್ಡು ಕೊಟ್ಟಿಲ್ಲ ಎನ್ನುತ್ತಾರೆ. ಆದರೆ ನಮ್ಮ ಸ್ಥಿತಿಯನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಕಲಾವಿದರು ಬೇಸರದಿಂದಲೇ ಹೇಳುತ್ತಾರೆ.

ಈ ತಂಡದಲ್ಲಿರುವ ಎಲ್ಲ ಕಲಾವಿದರೂ ಮೈಸೂರು ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಆರಂಭದಲ್ಲಿ ಜಂಬೂ ಸವಾರಿ ಮೆರವಣಿಗೆಯಲ್ಲಿ ವೀರಾವೇಷದಿಂದ ಹೆಜ್ಜೆಹಾಕಿ ಜನರಿಂದ `ಸೈ` ಎನಿಸಿಕೊಳ್ಳಲು ತುದಿಗಾಲ ಮೇಲೆ ನಿಲ್ಲುತ್ತಿದ್ದ ಕಲಾವಿದರು ಐದಾರು ದಸರಾ ಉತ್ಸವದಲ್ಲಿ ಪಾಲ್ಗೊಂಡ ಮೇಲೆ ಉತ್ಸಾಹವನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಇದಕ್ಕೆ ಕಾರಣ, ಸರ್ಕಾರ ಜಾನಪದ ಕಲಾವಿದರನ್ನು ನಿಕೃಷ್ಟವಾಗಿ ಕಾಣುವುದು.

`ಇಪ್ಪತೈದು ಕೆ.ಜಿ ತೂಕದ ವೇಷಭೂಷಣವನ್ನು ಹಾಕಿಕೊಂಡು ಬಿಸಿಲು, ಮಳೆಯನ್ನು ಲೆಕ್ಕಿಸದೆ ಆರೇಳು ಕಿಲೋಮೀಟರ್ ಪ್ರದರ್ಶನ ನೀಡುತ್ತೇವೆ. ಆದರೆ ಸವಲತ್ತು ಮತ್ತು ಸಂಭಾವನೆ ವಿಚಾರದಲ್ಲಿ ನಮ್ಮದು ಕೊನೆಯ ಸ್ಥಾನ` ಎಂದು ಕಿರಾಳು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಕಷ್ಟ, ಸುಖ, ನೋವು, ನಲಿವು, ಅವಮಾನ, ಸನ್ಮಾನ ಯಾವ ಕ್ಷೇತ್ರವನ್ನು ಬಿಟ್ಟಿದೆ ಹೇಳಿ? ಅದೇ ರೀತಿ ವೀರಗಾಸೆಯನ್ನೂ ಬಿಟ್ಟಿಲ್ಲ. ಆದರೂ ಹಳ್ಳಿಗಾಡಿನ ಯುವ ಮನಸ್ಸುಗಳು ಮತ್ತೆ ಮತ್ತೆ ವೀರಗಾಸೆಯ ವೇಷವನ್ನು ತೊಟ್ಟು ವಚನಗಳನ್ನು ಹೇಳುತ್ತಾ, ವೀರಾವೇಷದಿಂದ ಕುಣಿದು, ಜನರಿಂದ ಸೈ ಎನಿಸಿಕೊಳ್ಳುವುದನ್ನು ಬಯಸುತ್ತಲೇ ಇವೆ. ಆದರೆ ಸಮಾಜ, ಸರ್ಕಾರ ಮಾತ್ರ ಜಾನಪದ ಕಲಾ ಪ್ರಕಾರ ಮತ್ತು ಕಲಾವಿದರನ್ನು `ಬಡವರು` `ಹಳ್ಳಿಗರ ಕಲೆ` ಎನ್ನುವಂತೆ ನೋಡುತ್ತಿವೆ.

ಪಂಡಿತರು, ವಿದ್ವಾಂಸರಿಗೆ ಲಕ್ಷ ಲಕ್ಷ ರೂಪಾಯಿ ಸಂಭಾವನೆ ಕೊಟ್ಟು ಐಷಾರಾಮಿ ಹೋಟೆಲ್‌ಗಳಲ್ಲಿ ಇಳಿಸಿ, ಹವಾನಿಯಂತ್ರಿತ ಕಾರುಗಳಲ್ಲಿ ಅವರನ್ನು ವೇದಿಕೆ ಬಳಿಗೆ ಕರೆ ತರುತ್ತಾರೆ. ಆದರೆ ಈ ನೆಲದ ಜನಪದರ ಬದುಕಿನಿಂದ ಹುಟ್ಟಿ ಬಂದಿರುವ ಜಾನಪದ ಕಲೆಯನ್ನು ಬದುಕಾಗಿಸಿಕೊಂಡಿರುವವರನ್ನು ನೋಡುವ ಮನೋಭಾವ ಬದಲಾಗಬೇಕು.

ಆಕರ್ಷಕ ವೇಷಭೂಷಣವೀರಗಾಸೆಗೆ ವೀರಭದ್ರ ಕುಣಿತ ಎನ್ನುವ ಹೆಸರೂ ಇದೆ. ಹೆಚ್ಚಾಗಿ ಶಿವಾರ್ಚಕರು ಈ ಕಲೆಯನ್ನು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪುರವಂತರು ಹೆಸರಿನಿಂದ ಕರೆಯಲಾಗುತ್ತದೆ.

ಮೈಸೂರು ಭಾಗದ ವೀರಗಾಸೆ ಕಲಾವಿದರು ಆಕರ್ಷಕ ವೇಷಭೂಷಣದೊಂದಿಗೆ ಪ್ರದರ್ಶನ ನೀಡುವುದರಿಂದ ಜನಮನವನ್ನು ಗೆಲ್ಲುತ್ತಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ.

ತಲೆ ಮೇಲೆ ಕಿರೀಟ, ಕೊರಳಿಗೆ ರುದ್ರಾಕ್ಷಿ ಮಾಲೆ, ಎದೆಗೆ ವೀರಭದ್ರನ ಕವಚ, ರುಂಡ ಮಾಲೆ, ತೋಳಲ್ಲಿ ನಾಗಸರ್ಪ, ತಲೆಯ ಚಂಡಮೃಗದ ಬಾಲ, ಕೀರ್ತಮುಖಗಳು, ಹಣೆಗೆ ವಿಭೂತಿ, ಕಿವಿಗೆ ನಾಗಕೊಂಡಲಿ, ಮುಂಗೈಯಲ್ಲಿ ಅರಿದಾಳು ಕೀರ್ತಮುಖ, ಕೈಯಲ್ಲಿ ಕತ್ತಿ, ಬಾಕು, ಗುರಾಣಿ ಹಿಡಿದು ವೀರಭದ್ರನ ಒಡಪುಗಳನ್ನು ಹೇಳುತ್ತಾ, ದಕ್ಷಬ್ರಹ್ಮ, ರೇವಣ್ಣ ಸಿದ್ದೇಶ್ವರ, ಮಾರುತಿ ಲಿಂಗಧಾರಣೆ, ಮಲೈ ಮಹದೇಶ್ವರ, ಶರಬವತಾರದ ಕಥೆಗಳನ್ನು ಹೇಳುತ್ತಾರೆ.


ವೀರಗಾಸೆ ಹುಟ್ಟುದಕ್ಷಬ್ರಹ್ಮನ ಮಗಳು ದಾಕ್ಷಾಯಿಣಿ ಈಶ್ವರನ ಹೆಂಡತಿ. ಈಕೆ ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಈಶ್ವರನನ್ನು ಮದುವೆಯಾಗಿರುತ್ತಾಳೆ. ಹೀಗಾಗಿ ದಕ್ಷಬ್ರಹ್ಮ ತಾನು ಮಾಡುವ ಯಜ್ಞಕ್ಕೆ ಮಗಳನ್ನು ಆಹ್ವಾನಿಸುವುದಿಲ್ಲ. ವಿಷಯ ತಿಳಿದ ದಾಕ್ಷಾಯಿಣಿ ತಂದೆ ನಡೆಸುತ್ತಿರುವ ಯಜ್ಞದಲ್ಲಿ ಪಾಲ್ಗೊಳ್ಳಲು ತೆರಳುತ್ತಾಳೆ.

ಅಲ್ಲಿ ದಕ್ಷಬ್ರಹ್ಮ ಮಗಳು ದಾಕ್ಷಾಯಿಣಿ ಮತ್ತು ಅಳಿಯ ಈಶ್ವರನನ್ನು ನಿಂದಿಸುತ್ತಾನೆ. ಪತಿ ನಿಂದನೆಗೆ ನೊಂದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಳ್ಳುತ್ತಾಳೆ. ಈ ವಿಷಯ ತಿಳಿದ ಈಶ್ವರ ರುದ್ರಾವತಾರ ತಾಳುತ್ತಾನೆ. ತನ್ನ ಹಣೆಯಲ್ಲಿ ಮೂಡುವ ಬೆವರನ್ನು ತೆಗೆದು ಒಗೆಯುತ್ತಾನೆ. ಆ ಬೆವರಿನಲ್ಲಿ ಹುಟ್ಟುವವನೇ ವೀರಭದ್ರ. ಈತ ವೀರಾವೇಷದಿಂದ ಗಣಗಳ ಜೊತೆ ನುಗ್ಗಿ ಯಜ್ಞವನ್ನು ಹಾಳು ಮಾಡಿ ದಕ್ಷಬ್ರಹ್ಮನ ತಲೆಯನ್ನು ಕತ್ತರಿಸಿ ಯಜ್ಞ ಕುಂಡಕ್ಕೆ ಹಾಕುತ್ತಾನೆ. ಹೀಗೆ ವೀರಗಾಸೆ ನೃತ್ಯ ಹುಟ್ಟಿಕೊಂಡಿತು.

ಗುರು ಕಿರಾಳು ಮಹೇಶ್ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವೀರಗಾಸೆ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಿರಾಳು ಮಹೇಶ್ ಕಾರಣ. ಇವರು ಬಿಡುವಿನ ವೇಳೆಯಲ್ಲಿ ಆಸಕ್ತ ಮತ್ತು ಉತ್ಸಾಹಿ ತರುಣರಿಗೆ ವೀರಗಾಸೆ ನೃತ್ಯವನ್ನು ಕಲಿಸುತ್ತಿದ್ದಾರೆ. ಸ್ವತಃ ತಂಡವನ್ನು ಕಟ್ಟಿಕೊಂಡು ಊರು-ಕೇರಿ, ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

ಇವರು ಹಲವು ಬೇಸಿಗೆ ಶಿಬಿರಗಳಲ್ಲಿ ಎಳೆಯರಿಗೆ ವೀರಗಾಸೆ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ. ಕಿರಾಳು ಮಹೇಶ್ ಅವರ ಪುತ್ರ ಕೆ.ಎಂ.ಭಾಸ್ಕರ್ ಜೆಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ಅಭ್ಯಾಸ ಮಾಡುತ್ತಿದ್ದಾರೆ. ಇವರೂ ಸಹ ವೀರಗಾಸೆ ನೃತ್ಯವನ್ನು ಕಲಿತಿದ್ದಾರೆ. ಮಹೇಶ್ ಗರಡಿಯಲ್ಲಿ 150 ಕ್ಕೂ ಹೆಚ್ಚು ಮಂದಿ ಪಳಗಿದ್ದಾರೆ.

ಗುರುವಾರ, ನವೆಂಬರ್ 22, 2012

ಇಕ್ಬಾಲ್ ಎಂಬ ರಂಗ ಮಾಂತ್ರಿಕ!

(avadhi krupe)


ಇಕ್ಬಾಲ್ ಎಂಬ ರಂಗಮಾಂತ್ರಿಕನ ಫ್ಯಾಂಟಸಿ ದುನಿಯಾ

- ಮಹಾದೇವ ಹಡಪದ


ರಂಗದ ಮೇಲೆ ನಟ ನಿಂತಾಗ ದೇಹಕ್ಕೆ ಹೆಚ್ಚು ಸಾಧ್ಯತೆಗಳಿರುತ್ತವೆ, ನಟನಿಗೆ ಆ ಸಾಧ್ಯತೆಯ ಅರಿವಿದ್ದರೆ ಕ್ರಿಯೆ-ಪ್ರತಿಕ್ರಿಯೆಗಳು ಚುಟುಕಾಗಿ ಚುರುಕಾಗಿ ಮೂಡುತ್ತವೆ. ಆಗ ನಾಟಕದ ಸಂವಹನ ಆಂಗಿಕವಾಗಿ ಸಾಧ್ಯವಾಗುತ್ತದೆ. ನಟನ ದೇಹದ ಲಯದೊಂದಿಗೆ ಅವನಾಡುವ ಮಾತಿನ ಏರಿಳಿತವೂ ಪೂರಕವಾಗಿರುತ್ತದೆ. -ಇಕ್ಬಾಲ್ ಅಹ್ಮದ್.
ಶಿಕಾರಿಪುರದ ಸಂಪ್ರದಾಯಸ್ಥ ಮುಸ್ಲಿಮ್ ಮುದಾಯದ ಮಧ್ಯಮ ವರ್ಗೀಯ ಕುಟುಂಬದಿಂದ ಬಂದ ಇಕ್ಬಾಲ್ ಅಹ್ಮದ್ ಅಂದ್ರೆ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಶೈಲಿಯಿಂದಲೇ ಗುರುತಿಸಿಕೊಂಡವರು. ನಾಟಕದವರಿಗೆ ಸಾಮಾಜಿಕ ಮನ್ನಣೆಗಳು ಇಲ್ಲವೇ ಇಲ್ಲ ಎಂಬ ಕೊರಗಿದ್ದರೂ ನಟನಾದವ- ನಾಟಕಕಾರ, ನಿರ್ದೇಶಕನಿಗಿಂತ ಹೆಚ್ಚು ಪ್ರಸ್ತುತಗೊಳ್ಳಬೆಕು. ನಟನ ನಟನೆ ಹೆಚ್ಚು ವಿಮರ್ಶೆಗೆ ಒಳಪಡಬೇಕೆಂದು, ನಟನ ದೇಹದ ಅಂತಃಸ್ಪೂರ್ತಿಯಿಂದಲೇ ನಾಟಕ ಕಟ್ಟುವ ಕ್ರಿಯೆಯನ್ನು ತಮ್ಮದೇ ಆದ ರಂಗಶೈಲಿಯನ್ನಾಗಿ ರೂಢಿಸಿಕೊಂಡವರು ಇಕ್ಬಾಲ್ ಅಹ್ಮದ್. ಸಾಗರದ ಉದಯ ಕಲಾವಿದರ ಅಟ್ಟದ ಹೆಸರಾಂತ ಕನ್ನಡದ ನಿರ್ದೇಶಕ ಎನ್.ಆರ್.ಮಾಸೂರ ಅವರ ನಿರ್ದೇಶನದಲ್ಲಿ ಕನ್ನಡ ರಂಗಭೂಮಿ ಪ್ರವೇಶಿಸಿ, ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಅಭ್ಯಾಸ ಮಾಡಿ ದೇಶದ ಹಲವಾರು ರಂಗಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಪಡೆದ ಅನುಭವದಿಂದ ಸ್ವತಂತ್ರವಾಗಿ ಮಕ್ಕಳ ರೆಪರ್ಟರಿಯನ್ನು ಕಟ್ಟಿ ಕರ್ನಾಟಕದಾದ್ಯಂತ ಪ್ರದರ್ಶನಗಳನ್ನು ಕೊಟ್ಟಿದ್ದಾರೆ. ಅವರ ವಿಶಿಷ್ಟ ಶೈಲಿ ಪರಂಪರೆ ಆಗಿ ಉಳಿಯಬೇಕೆಂಬ ಹಂಬಲದಿಂದಲೇ ಗುಡಿ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಿ ಕೆಲಸ ಆರಂಭಿಸಿದ್ದಾರೆ.
ಕಲಾಜಗತ್ತಿನ ಕನಸುಗಳಿಗೆ- ಜೇಡಿಮಣ್ಣಿನಲ್ಲಿ ಆಕೃತಿಗಳನ್ನು ತೀಡುತ್ತಿದ್ದ ಬಾಲ್ಯದ ಹುಚ್ಚುತನವೇ ಪ್ರೇರಣೆ. ಗ್ಯಾರೇಜು, ಆಟೋ, ಡ್ರೈವಿಂಗೂ ಅಂತ ಕಾಲಕಳೆಯಬೇಕಾಗಿದ್ದ ನನಗೆ ‘ಭಾರತ ಭಾಗ್ಯವಿಧಾತ’ ನಾಟಕ ರಂಗಭೂಮಿಯ ಬದುಕಿಗೆ ಬುನಾದಿ ಹಾಕಿತು. ಎನ್.ಆರ್.ಮಾಸೂರ ಅಂದ್ರೆ ಶ್ರೀರಂಗರ ನಾಟಕಗಳ ನಿರ್ದೇಶಕರು ಎಂದೇ ಹೆಸರಾದವರು. ಅವರು ಮಾತುಗಾರಿಕೆ, ಮಾತಿನ ಓಘ, ಘಾತ, ಲಯದ ಮೇಲೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಆದರೆ ನನಗೆ ನನ್ನ ಭಾಷೆಯ ಬಗ್ಗೆ ಮುಜುಗರ ಇತ್ತು. ಮಾತಿನ ಇಂಟೋನೇಶನ್ ಸರಿಯಾಗಿ ಬರದಿದ್ದಲ್ಲಿ ಅವರು ನನ್ನ ಬೆನ್ನ ಮೇಲೆ ಗುದ್ದಿ ತಿದ್ದುತ್ತಿದ್ದರು. ಆಗೆಲ್ಲ ಅವರು ನಾನು ಹೇಳದೆ ಬಿಟ್ಟು ಓಡಿಹೋಗ್ತೇನೆ ಅಂದುಕೊಂಡಿದ್ದರು. ಆದರೆ ನಾನು ಹಠದಿಂದ ಮಾತುಗಾರಿಕೆಯನ್ನು ಸಾಧಿಸುತ್ತಿದ್ದೆ. ಅಷ್ಟೆ ಅಲ್ಲ ರಂಗಭೂಮಿಯಲ್ಲೂ ನೆಲೆ ಕಂಡಿದ್ದೇನೆ. ಎಂದು ತಮ್ಮ ರಂಗಭೂಮಿಯ ಸುರುವಾತಿನ ದಿನಗಳ ನೆನೆದು ಭಾವುಕರಾಗುವ ಇಕ್ಬಾಲ್ ಅವರ ವ್ಯಕ್ತಿತ್ವದಲ್ಲಿ ಸುಬ್ಬಣ್ಣ, ಕಾರಂತರು, ಮಾಸೂರರು ಮತ್ತು ಶ್ರೀರಂಗ, ಕೈಲಾಸಂ, ದಾರಿಯೋ ಪೋ, ಷೇಕ್ಷಪೀಯರ ಮಹಾಶಯರು ನಿರ್ಮಿಸಿರುವ ಉದಾತ್ತ ಪಾತ್ರಗಳೂ ಮಿಲನಗೊಂಡಿವೆ.

`ಮಕ್ಕಳ ರಂಗಭೂಮಿ ಕನಸು ಆರಂಭವಾದದ್ದು ಭಾರತ ಭವನ ರಂಗಮಂಡಲದಿಂದ ಅನ್ನಬಹುದು. ನಾನು ನೀನಾಮ್ ವಿದ್ಯಾರ್ಥಿಗಳಿಗೆ ಬುರ್ಜ್ವಾ ದಿ ಜಂಟಲಮನ್ ನಾಟಕ ಮಾಡಿಸಿದ್ದೆ. ಆ ನಾಟಕದ ವಿನ್ಯಾಸ ಹೆಗ್ಗೋಡಿನ ಹಿತೈಷಿಗಳಿಗೆ ಬೆರಗು ಮೂಡಿಸಿತ್ತು. ಆ ಸುದ್ದಿ ಬಿ.ವಿ.ಕಾರಂತರ ಕಿವಿಗೆ ಬಿದ್ದದ್ದೆ ನನ್ನನ್ನು ಭೋಪಾಲಿಗೆ ಬರಲು ಹೇಳಿ ಕಳುಹಿಸಿದರು. ಆಗ ನಾನು ಕಾಸರಗೋಡಿನಲ್ಲಿ ನಾಟಕ ಮಾಡಿಸುತ್ತಿದ್ದೆ. ನಾಟಕ ಮುಗಿಸಿ ಬಂದಾಗ ಕಾರಂತರು ಕರೆದೊಯ್ಯಲು ಹೆಗ್ಗೋಡಿಗೆ ಬಂದಿದ್ದರು. ಮುಂದೆ ರಂಗಮಂಡಲದಿಂದ ರೈಲಿನಲ್ಲಿ ಹಿಂದಿರುಗುವಾಗ ನನಗೆ ಮಕ್ಕಳಿಗಾಗಿ ದೊಡ್ಡವರು ನಾಟಕ ಮಾಡುವ ಆಲೋಚನೆ ಬಂತು. ಅಲ್ಲಿಂದ ಬಂದವನೆ ಚಿಣ್ಣ-ಬಣ್ಣ ರೆಪರ್ಟರಿ ಆರಂಭಿಸಿದೆ.
ಮುವ್ವತ್ತೈದು ವರ್ಷಗಳ ರಂಗಭೂಮಿಯ ಜೀವನದಲ್ಲಿ ಚಿಣ್ಣ-ಬಣ್ಣ ರೆಪರ್ಟರಿ ಸ್ಥಾಪಿಸಿ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ಚಿತ್ರ-ಶಿಲ್ಪಕಲೆಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ರಾಜ್ಯದಾದ್ಯಂತ ನಾಟಕ ಸಂಸ್ಕೃತಿ ಬೆಳೆಸುವಲ್ಲಿ ಪ್ರಮುಖರಾದ ನಿದರ್ೇಶಕರುಗಳಲ್ಲಿ ಇವರ ಹೆಸರೂ ಮಾನ್ಯವಾಗಿದೆ. ಹ್ಯಾಮ್ಲೆಟ್, ಪೋಲಿಕಿಟ್ಟಿ, ಬೂರ್ಜ್ವಾ ದಿ ಜಂಟಲ್ ಮನ್, ವಿದಿಶೆಯೇ ವಿದೂಷಕ, ಉಂಡಾಡಿ ಗುಂಡ, ಸೂಳೆ ಸನ್ಯಾಸಿ ಇವರು ಮಾಡಿಸಿರುವ ಪ್ರಮುಖ ನಾಟಕಗಳು. ರಂಗಾಯಣದ ಚಿಣ್ಣರಮೇಳ, ಆದಿಮ ಸಂಸ್ಥೆಯ ಮಕ್ಕಳ ಶಿಬಿರಗಳು ಇವರ ಸಾರಥ್ಯದಲ್ಲಿಯೇ ಆರಂಭಗೊಂಡವು.
ಒಬ್ಬ ಏನೆಲ್ಲ ಆಗಬಲ್ಲ – ಆದರೆ ಕ್ರಿಯಾಶೀಲನಾಗಿ ಎಷ್ಟು ಸಾಧಿಸಬಲ್ಲ ಎಂಬ ಮಾತಿಗೆ ಇವರ ಫ್ಯಾಂಟಸಿಯ ದುನಿಯಾ ವಿಶಾಲವಾದುದು. ರಂಗನಿರ್ದೇಶಕ, ರಂಗವಿನ್ಯಾಸಕ, ಚಿತ್ರಕಾರ, ಶಿಲ್ಪಿ, ನೃತ್ಯಸಂಯೋಜಕ, ಸಂಘಟಕರಾಗಿಯೂ ಗುರುತಿಸಿಕೊಂಡವರು. ವಿಶೇಷವಾಗಿ ಅವರ ಶೈಲಿಯ ನಾಟಕಗಳಲ್ಲಿ ಆದಿಮ ಸಂಸ್ಕೃತಿಯ ಭಾವಸ್ಫಂದನೆಯ ಗುಣಗಳು ನಟನ ದೇಹಕ್ಕೆ ಪೂರಕವಾಗಿ, ಭಾವಪ್ರೇರಕವಾಗಿ ಅಭಿವ್ಯಕ್ತಗೊಳ್ಳುವ ವಿಧಾನವೊಂದು ಕ್ರಿಯೆಯಾಗಿ ಒದಗಿಬರುತ್ತದೆ. ಅದು ವ್ಯವಹರಿಸುವ ಜ್ಞಾನ ಸಹಜವಾದ್ದು ಅನ್ನುವ ಕಾರಣದಿಂದ ಅದರ ಗ್ರಹಿಕೆ ಮೇಲ್ಮಟ್ಟಕ್ಕೆ ಲೈಂಗಿಕ ಅಪೇಕ್ಷೆಯ ಹಾಗೆ ಅಥವಾ ಕ್ಲೀಷೆ ಎಂದೆನ್ನಿಸಬಹುದು. ಆದರೆ ಲೋಕರೂಢಿಯಲ್ಲಿ ದಮನಿಸಲ್ಪಟ್ಟ ಆಕಾಂಕ್ಷೆಗಳನ್ನು ಆಯಾ ಪಾತ್ರದ ಆವರಣಕ್ಕೆ ಸಂಬಂಧಪಟ್ಟಂತೆ ಮರು ನಿರೂಪಿಸುವ ಅವರ ಅಭಿನಯ ಕ್ರಮ ರಮ್ಯವಾಗಿದೆ. ನಾಟಕದ ಆರಂಭದಿಂದ ಅಂತ್ಯದವರೆಗೆ ಎಲ್ಲಾ ಪಾತ್ರಗಳಲ್ಲೂ ಒತ್ತೊತ್ತಿ ಬರುವ ಬಾಹ್ಯಚೇಷ್ಟೆಗಳು, ಆ ಆಂಗಿಕಕ್ಕೆ ಸರಿಹೊಂದುವ ಮಾತಿನಶೈಲಿಯೂ, ರಂಗವಿನ್ಯಾಸವೂ, ವಸ್ತ್ರಾದಿಯಾಗಿ ಒಟ್ಟೂ ರಂಗತಂತ್ರವೂ ವಿಭಿನ್ನಶೈಲಿಯಲ್ಲಿ ಮೂರ್ತಗೊಂಡಿರುತ್ತವೆ. ಈ ರೀತಿಯ ರಂಗಶೈಲಿಯ ಅಧ್ಯಯನದ ಹುಡುಕಾಟವನ್ನು ಇನ್ನೂ ಗಟ್ಟಿಗೊಳಿಸುವ ಸಲುವಾಗಿ ಇಕ್ಬಾಲ್ ಅಹ್ಮದ್ ಅವರು ಶಿಕಾರಿಪುರದಲ್ಲಿ ‘ಗುಡಿ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಿದ್ದಾರೆ. ಅದು ರಂಗಭೂಮಿಯವರ ಲ್ಯಾಬ್ (ಪ್ರಯೋಗಾಲಯ) ಆಗಿ ಬೆಳೆಸಬೇಕೆಂಬ ಹಂಬಲವೂ ಅವರಿಗಿದೆ.

ಶನಿವಾರ, ನವೆಂಬರ್ 17, 2012

ಶ್ರೀಕೃಷ್ಣ ಸಂಧಾನ ನಾಟಕದ ಕೆಲ ದೃಶ್ಯಗಳು







ಇಂದಿನ ಕಥೆ



ದೀಪಾವಳಿಯ ಶುಭಾಶಯಗಳೊಂದಿಗೆ. . ,

*ಹಿಂದೊಂದು ದಿನ, ಮಾನವ ಸಕಲ ಜೀವ ಕೋಟಿಗಳಲ್ಲಿ ಕೇವಲ ಒಂದು ಪ್ರಾಣಿಯಾಗಿದ್ದ. . .
*ಮುಂದೊಂದು ದಿನ ದಿಢೀರ್‌ ನಾಗರೀಕನಾಗಿಬಿಟ್ಟ. . .
*ಹೀಗೊಂದು ದಿನ ತನ್ನ ನಾಗರೀಕ ಬದುಕಿನಲ್ಲಿ ಪ್ರತಿ ನಿತ್ಯದ ಕಾರ್ಯವಾಗಿ ಹಲ್ಲುಜ್ಜಲು ಶುರುಮಾಡಿದ. . .
*ಈಗೊಂದು ದಿನ ಬಿಗ್‌ ಬಜಾರ್‌, ಮೋರ್‌ನಂತಹ ಶಾಪಿಂಗ್‌ ಮಾಲ್‌ಗಳ ಒಂದು ಮೂಲೆಯಲ್ಲಿ :ಒಂದು ಕಡೆ  ಬೇವು, ಮೆಣಸು, ಉಪ್ಪು ಮಿಶ್ರಿತಪುಡಿ : ಇನ್ನೊಂದು ಕಡೆ ದೊಡ್ಡ ಕಂಪನಿಗಳ ಆಕರ್ಷಕ ಟೂತ್‌ ಪೇಸ್ಟ್‌ಗಳು ಹಲ್ಲುಜ್ಜೋಕೆ. . .
*ಇದರ ಮುಂದೆ ನಾಗರೀಕ ಗ್ರಾಹಕ. . .
*ಇದು ಕಥೆ.


ನಂ. ಯತೀಶ (ಯಶೀ)
ಕೊಳ್ಳೇಗಾಲ
yashee.82@gmail.com
೯೪೮೨೩೦೮೦೬೬.
----------

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...