ಭಾನುವಾರ, ಅಕ್ಟೋಬರ್ 7, 2012

ಕ್ಷಮಿಸಿ, ನಾ ಅರಳಲೇಬೇಕು..!

 ladaiprakaashana krupe
ನಾಟಕ

(ಬೆಂಜಮಿನ್ ಮೊಲಾಯಿಸ್ ಜೀವನಾಧಾರಿತ)

ಸುಧಾ ಚಿದಾನಂದಗೌಡ




ಪಾತ್ರವಿವರ

ಬೆಂಜಮಿನ್ ಮೊಲಾಯಿಸ್  : ದಕ್ಷಿಣ ಆಫ್ರಿಕಾದ ಕಪ್ಪು ಕವಿ. (ಬಿಳಿಯ ಪೊಲೀಸ್ ಫಿಲಿಪ್ ಸೆಲೆಪೆಯನ್ನು ಕೊಂದ
                      ಆರೋಪದ ಮೇಲೆ ಗಲ್ಲು ಶಿಕ್ಷೆಗೊಳಗಾಗುತ್ತಾನೆ)
ಜನರಲ್                ಬೋಥಾನ ಜೈಲ್ ಉನ್ನತ ಅಧಿಕಾರಿಗಳಲ್ಲೊಬ್ಬ.
ವಿಲಿಯಂ              : ಪತ್ರಕರ್ತ, ಜನರಲ್ ಇವನನ್ನು ಬಾತ್ಮೀದಾರನಂತೆ ಬಳಸಿಕೊಳ್ಳುತ್ತಾನೆ
ಥಾಮಸ್              : ಯುವನೀಗ್ರೋ ,ಬೆಂಜಮಿನ್ ಅಭಿಮಾನಿ
ಅಬ್ರಹಾಂ              : ಪ್ರಬುದ್ಧ ನೀಗ್ರೋ. ಕವಿಗೋಷ್ಟಿಯ ಸಂಘಟಕ
ಸೂಸಾನ್ನ              : ನೀಗ್ರೋ ಯುವತಿ, ತನ್ನ ಜನಾಂಗದ ಸ್ಥಿತಿಗತಿಗಳ ಕುರಿತು ಚಿಂತಿಸುವವಳು
ಮರಿಯಂ             :  ಮಧ್ಯವಯಸ್ಕ ನೀಗ್ರೋ ಮಹಿಳೆ, ಸೂಸಾನ್ನಳ ಸೋದರಸಂಬಂಧಿ, ಸ್ವಾತಂತ್ರ್ಯದ ಹಂಬಲಿಕೆಯುಳ್ಳವಳು                ಬಿಳಿಯ ಪೊಲೀಸ್ ಮುಖ್ಯಸ್ಥ: ಜನರಲ್ ಆಣತಿಯಂತೆ ಕಾರ್ಯನಿರ್ವಹಿಸುವವನು
ಬಿಳಿಯ ನ್ಯಾಯಾಧೀಶ
ಇತರೆ                : ನಿಗ್ರೋ ನಾಗರಿಕರು, ಪೊಲೀಸರು

ದೃಶ್ಯ ೧

ಕ್ರಿ.ಶ.೧೯೮೨ನೇ ಇಸ್ವಿ ಮಳೆಗಾಲ
ಮೇಮ್ ಲೋದಿ ಗ್ರಾಮ
ಪ್ರಿಟೋರಿಯಾ
ದಕ್ಷಿಣ ಆಫ್ರಿಕಾ

ನೀಗ್ರೋ ೧    ಕವಿಗೋಷ್ಟಿಯಂತೆ..? ಮೇಮ್ ಲೋದಿಯ ಬುದ್ಧಿಜೀವಿಗಳಿಗೆ ಸಡಗರ. ನಾವು ಕೇಳೋಣ..

ನೀಗ್ರೋ ೨    ಹೂಂ..ಜೊತೆಗೆ ಆತಂಕ. ಕೆಲವರಲ್ಲಿ ಭಯಕೂಡ..  ಇರಬೇಕಾದ್ದೇ ಮತ್ತೆ..ಬಿಳಿಯ ಪೊಲೀಸರ ಓಡಾಟ ಹೆಚ್ಚಾಗಿರುವುದನ್ನು ಗಮನಿಸಿದೆಯ?

ನೀಗ್ರೋ ೩    ಹೆದರಿದರು ತೋರಿಸಿಕೊಳ್ಳಬಾರದು ಕಣ್ರಯ್ಯಾ... ನೋಡಿ, ಕೆಲವು ಯುವಕರು ಉದ್ವಿಗ್ನತೆಯಲ್ಲಿರುವರು. ಯಾರೇನು ಹೇಡಿಗಳಲ್ಲ ಇಲ್ಲಿ..

ನೀಗ್ರೋ ೧    ಹೆದರುವುದು ಹೇಡಿಗಳ ಕೆಲಸ ಎಂದು ಜೈಲೊಳಗಿಂದಲೇ ಗರ್ಜಿಸಿದ್ದಾರಲ್ಲ ಮಂಡೆಲಾ!

ಥಾಮಸ್     ಅವರು..ಬರ್‍ತಾರೆ ತಾನೆ..?

ಅಬ್ರಹಂ         ಯಾರಯ್ಯಾ..? (ರೇಗುವನು)

ಥಾಮಸ್     (ಉಗುಳು ನುಂಗುತ್ತ) ಅದೇ.. ..ಅವರು..

ಅಬ್ರಹಂ     (ಪ್ರಸನ್ನತೆ, ಹೆಮ್ಮೆಯಿಂದ) ಬೆಂಜಮಿನ್ ಮೊಲಾಯಿಸ್..? ಖಂಡಿತಾ ಬರ್‍ತಾರೆ. ತಪ್ಪಿಸೋದಿಲ್ಲ. ಅನುಮಾನವೇ ಇಟ್ಟುಕೋಬೇಡಯ್ಯಾ. ಬೆಂಜಮಿನ್ ಬಂದೇ ಬರ್‍ತಾರೆ. ಕವನ ಬರೆಯುವ ಹುಲಿಗೆ ಇವರೆಲ್ಲ ಲೆಕ್ಕವಾ?(ಬಿಳಿಯ ಪೋಲಿಸರತ್ತ ತಿರಸ್ಕಾರದ ನೋಟ ಹರಿಸುವನು)

ನೀಗ್ರೋ ೨     ಬಂದ್ರೂಬ॒ಂದ್ರೂ॒

ನೀಗ್ರೋ    ೩    ಓಹ್, ಇವರೇನಾ..ಇಷ್ಟು ಚಿಕ್ಕವರಾ.. ..?

(ಸಭೆ ನಿಶ್ಯಬ್ದವಾಗುವುದು ಬೆಂಜಮಿನ್ ಪ್ರವೇಶಿಸಿ ಮೆಲುದನಿಯಲ್ಲಿ ಪಕ್ಕದಲ್ಲಿದ್ದವರೊಡನೆ ಸಂಭಾಷಿಸುತ್ತ ವೇದಿಕೆಯೇರಿ ನಿಲ್ಲುವನು. ಸಮೂಹಗೀತೆಯಿಲ್ಲ. ಸ್ವಾಗತವಿಲ್ಲ. ನಿರೂಪಣೆಯಿಲ್ಲ. ಪರಿಚಯ ಭಾಷಣವೂ ಇಲ್ಲ. ಅಪ್ಪಟ ಕಪ್ಪುವರ್ಣದ ಗೂಂಗುರು ಕೂದಲು, ದಪ್ಪತುಟಿ, ಸಣ್ಣ ಕಣ್ಣುಗಳ, ಸರಳವಾದ ಸೂಟ್‌ನಲ್ಲಿರುವನು. ಅವನ ಸೆಟೆದ ಎದೆ, ಮಿಂಚಿನ ದೃಷ್ಟಿ, ಏನನ್ನೂ ಹೇಳದೆ ಮೌನವಾಗಿ ಜೇಬಿನಿಂದ ಕಾಗದವನ್ನು ತೆಗೆದು, ಬಿಡಿಸಿ, ಕವನ ಓದಲಾರಂಭಿಸುವನು.)

ಬೆಂಜಮಿನ್ ಮೊಲಾಯಿಸ್.
   
ನಾವು ಗೂಬೆಗಳಲ್ಲ.
    ಕತ್ತಲ ಗುಹೆ ನಮ್ಮ ಮನೆಯಲ್ಲ.
    ಮಲೆತು ನಿಂತ ನೀರು.
ಸೂರ್ಯನಿಲ್ಲದ ನೆಲ ನಾವೊಲ್ಲೆವು.
    ಈ ಕ್ಷಣ ಉಸಿರು ನಿಂತರೆ ಭಯವಿಲ್ಲ.
ನಮ್ಮದಾದ ನೆಲಕ್ಕೆ ರಕ್ತ ಹರಿಸುತ್ತೇವೆ.
ಒಳಗನ್ನು ಫಲಗೊಳಿಸುತ್ತೇವೆ.
    ಸ್ವಚ್ಛ ಗಾಳಿ, ಬೆಳಕಿಲ್ಲದ ಪ್ರಪಂಚ
    ಸ್ವಾತಂತ್ರ್ಯ ರವಿಯಿಲ್ಲದ ಆಕಾಶ
    ನಾವೊಲ್ಲೆವು.....

(ವೀಕ್ಷಕರಲ್ಲಿ ಸೂಸಾನ್ನ ಮತ್ತು ಮರಿಯಂ ಕುಳಿತಿರುವರು.. ..ಪ್ರೇಕ್ಷಕ ವರ್ಗದಲ್ಲಿ ಅಬ್ಬಾ..ಆಹಾ..ಉದ್ಗಾರಗಳು.. ..)

ಮರಿಯಂ:    ಎಷ್ಟು ಚೆನ್ನಾದ ನುಡಿ..! ಸತ್ಯವಾಗಬಹುದಿದ್ದರೆ ಎಷ್ಟು ಚೆನ್ನಿತ್ತು.! ಈ ಸ್ವಾತಂತ್ರ್ಯವೆಂಬುದು ಬಂದಾಗ ನಿಮ್ಮ ಮಾವ ನನ್ನನ್ನೂ ಮನುಷ್ಯಳಂತೆ ಕಾಣಬಹುದು ಅಲ್ಲವಾ.. ನರಕದ ಪಂಜರದಿಂದ ಪಾರಾಗಬಹುದಿತ್ತು ಅಲ್ಲವಾ ? ಒಳ್ಳೆ ಕಲ್ಪನೆ. ಒಳ್ಳೇದು..ಒಳ್ಳೇದು..

ಸೂಸಾನ್ನ        ಕಲ್ಪನೆ ಎಂದೇಕೆ ಅಂದುಕೊಳ್ಳಬೇಕು ಅತ್ತೇ..? ನಿಜವಾಗಲಾರದೇನು ಇದು..ಕೇಳಿಬಿಡೋಣ..

ಮರಿಯಂ        ಬೇಡ ಬೇಡ ಸುಮ್ಮನಿರು..ಅವರೇನೆಂದುಕೊಂಡಾರು..

ಥಾಮಸ್        ಕನಸುಗಳಿಗೆ ಸ್ವಾತಂತ್ರ್ಯದ ಬಣ್ಣಗಳನ್ನು ಮೆತ್ತಿರುವಂತಿದೆ ಈ ಕವಿತೆಗಳು..

ಬೆಂಜಮಿನ್‌ಮೊಲಾಯಿಸ್  ಇದು ಕೇವಲ ಕನಸಲ್ಲ ತಮ್ಮಾ..ನಾಳೆ ನಿಜವಾಗಬೇಕಾದ್ದು. ತಡವಾಗಬಹುದು..ಆದರೆ ಸ್ವಾತಂತ್ರ್ಯದ
ಬಣ್ಣಗಳು ನಮ್ಮ ಆತ್ಮಗಳನ್ನು ಖಂಡಿತ ತಾಗುವವು..

(ಬಿಳಿಯ ಪೊಲಿಸರ ಬೂಟುಗಳ ಟಕಟಕ ಶಬ್ದ ನೆರೆದವರ ಕಿವಿ ಬಿರಿಯುವುದು. ಬೆಂಜಮಿನ್ ಅತ್ತ ಲಕ್ಷ ಕೊಡದೆ, ಕವನ ವಾಚನ ಮುಂದುವರೆಸುವನು. ಪೊಲೀಸರಲ್ಲೊಬ್ಬ ಮೈಕನ್ನೂ, ಕಾಗದವನ್ನೂ ಒಟ್ಟಿಗೆ ಕಿತ್ತುಕೊಳ್ಳವನು. ಸಭೆ ಧಿಗ್ಗನೆ ಎದ್ದು ನಿಲ್ಲುವುದು. ಎಲ್ಲ ಕಣ್ಣುಗಳು ಕೆಂಡಗಳಾಗುವವು. ಬೆಂಜಮಿನ್ ಮೊಲಾಯಿಸ್ ಶಾಂತನಾಗಿ ಕೈಗಳೆರಡನ್ನೂ ಮೇಲೆತ್ತಿ ಸುಮ್ಮನಿರುವಂತೆ ಸೂಚಿಸುವನು. ನಂತರ ಏನೆಂಬಂತೆ ಪೊಲೀಸರತ್ತ ನೋಡುವನು.)

ಬಿಳಿಯ ಪೊಲೀಸ್         (ಒರಟಾಗಿ) ನಡೀ....

ಬೆಂಜಮಿನ್ ಮೊಲಾಯಿಸ್        (ಅಚ್ಚರಿಯಿಂದ) ಯಾಕೆ?

ಬಿಳಿಯ ಪೊಲೀಸ್ ಮುಖ್ಯಸ್ಥ    ಠಾಣೆಗೆ ನಡಿ.

ಬೆಂಜಮಿನ್ ಮೊಲಾಯಿಸ್         ಅದೇ ಯಾಕೇಂತಾ?

ಬಿಳಿಯ ಪೊಲೀಸ್ ಮುಖ್ಯಸ್ಥ    ಅದನ್ನ ಅಲ್ಲೆ ಹೇಳ್ತೇವೆ.

ಬೆಂಜಮಿನ್ ಮೊಲಾಯಿಸ್        ನನ್ನನ್ನು ಅರೆಸ್ಟ್ ಮಾಡ್ತಿದೀರಾ?

ಬಿಳಿಯ ಪೊಲೀಸ್ ಮುಖ್ಯಸ್ಥ    ಒಂದು ರೀತಿಯಲ್ಲಿ ಹೌದು.

ಬೆಂಜಮಿನ್ ಮೊಲಾಯಿಸ್        ವಾರೆಂಟ್ ಇದೆಯೇ?

ಬಿಳಿಯ ಪೊಲೀಸ್ ಮುಖ್ಯಸ್ಥ    ಅದೆಲ್ಲ ಪದ್ಧತಿ ನಿಮಗೆ ಅನ್ವಯಿಸುವುದಿಲ್ಲ.

ಬೆಂಜಮಿನ್ ಮೊಲಾಯಿಸ್        ನಮಗೆ ಅಂದರೆ ಕರಿಯರಿಗೆ?

ಬಿಳಿಯ ಪೊಲೀಸ್ ಮುಖ್ಯಸ್ಥ     ಸುಮ್ಮನೆ ನಡಿ. ಹೆಚ್ಚು ಪ್ರಶ್ನಿಸಬೇಡ (ರಟ್ಟೆಗೆ ಕೈ ಹಾಕುವನು)

ಬೆಂಜಮಿನ್ ಮೊಲಾಯಿಸ್    (ಮೃದುವಾಗಿಯೇ ಬಿಡಿಸಿಕೊಳ್ಳುತ್ತಾ) ಠಾಣೆಗೆ ಬರಲು ಅಭ್ಯಂತರವೇನಿಲ್ಲ ನನಗೆ. ಆದರೆ ಕಾರಣ ಹೇಳಿ.

ಬಿಳಿಯ ಪೊಲೀಸ್ ಮುಖ್ಯಸ್ಥ    (ಜನರತ್ತ ದೃಷ್ಟಿ ಬೀರುತ್ತ) ಅದನ್ನ ಅಲ್ಲಿಯೇ ಹೇಳ್ತೀವಿ ನಡೀ. ಇಲ್ದಿದ್ರೆ ಇಲ್ಲಿ ನಡಿಯೋ ರಕ್ತಪಾತಕ್ಕೆ ನೀನೆ ಜವಾಬ್ದಾರನಾಗ್ತೀಯ.

(ಜನರ ಗುಂಪಿನಲ್ಲಿ ಗೊಂದಲ ಗುಜುಗುಜು ಕ್ಷಣ ಯೋಚಿಸಿ, ಜನರೆಡೆಗೆ ತಿರುಗಿ)

ಬೆಂಜಮಿನ್ ಮೊಲಾಯಿಸ್        (ಗಟ್ಟಿಯಾಗಿ) ಶಾಂತಿಯಿಂದಿರಿ ಮತ್ತೆ ಭೇಟಿಯಾಗೋಣ. (ಪೊಲೀಸರತ್ತ ತಿರುಗಿ) ನಡೆಯಿರಿ.

(ಜಿಟಿಜಿಟಿ ಜಿನುಗವ ಮಳೆಯಲ್ಲಿ ಬೆಂಜಮಿನ್ ಮೊಲಾಯಿಸ್ ಬಿಳಿಯ ಪೊಲೀಸ್‌ರೊಂದಿಗೆ ನಿರ್ಗಮಿಸುವನು. ಅವರ ಕಡೆ ದಿಟ್ಟಿಸುತ್ತ.)


ದೃಶ್ಯ ೨

ಕ್ರಿ.ಶ.೧೯೮೪ರ ಜುನ್ ತಿಮಗಳು
ಕೇಂದ್ರ ಕಾರಾಗೃಹ
ಪ್ರಿಟೋರಿಯ

ಬೆಂಜಮಿನ್ ಮೊಲಾಯಿಸ್: ಈ ಕೊಠಡಿಯ ಸಂಖ್ಯೆ ಎಷ್ಟೆಂಬುದು ನನಗೆ ತಿಳಿದಿಲ್ಲ. ಅಷ್ಟೇಕೆ, ಹಗಲು ರಾತ್ರಿಗಳ ವ್ಯತ್ಯಾಸವೂ
ಗೊತ್ತಾಗುತ್ತಿಲ್ಲ. ಒಳಗೆ ಯಾವಾಗಲೂ ನಸುಗತ್ತಲಿನ ಮಬ್ಬು ಬೆಳಕು, ತಾಜಾ ಹವಾ, ಒಳ್ಳೆಯ ನೀರು ಕುಡಿದು ಎಷ್ಟು ದಿನಗಳಾಗಿರಬಹುದು? (ಲೆಕ್ಕ ಹಾಕಲೆತ್ನಿಸಿ) ಊಹೋ... ಒಂದು ವರ್ಷ...?ಅಲ್ಲ, ಎರಡು ವರ್ಷಗಳ ಮೇಲಾಗಿರಬಹುದೇ? ಸರಿಯಾಗಿ ಎಣಿಸಲಾಗುತ್ತಿಲ್ಲ. ಮಿದುಳು ಹಿಂದಿನಂತೆ ಚುರುಕಾಗಿ ಕೆಲಸ ಮಾಡುತ್ತಿಲ್ಲ. ಕೈ, ಕಾಳು, ಕೀಲುಸಂದಿಗಳ ಭಯಂಕರ ನೋವು ಬೇರೆ ಕಾಡುತ್ತದೆ. ಈ ಕೊಠಡಿಯಲ್ಲೋ ಒಂದು ಸಣ್ಣಗಾಯವೂ ಸೆಪ್ಟಿಕ್ ಆಗಿ, ಇನ್‌ಫೆಕ್ಷನ್ ತಗುಲಿಕೊಳ್ಳಲು ಪ್ರಶಸ್ತವಾಗಿದೆ. ಮನೆಯಲ್ಲಿದ್ದಾಗ ತನ್ನ ಕೊಠಡಿ, ಬಟ್ಟೆ, ಪುಸ್ತಕ, ಮೇಜು, ಕುರ್ಚಿ, ಹಾಸಿಗೆ, ಮಂಚ ಎಲ್ಲ ಎಷ್ಟು ನೀಟಾಗಿಡುತ್ತದೆ. ಅಮ್ಮ, ಅತ್ತಗೆಯರೇ ಮೆಚ್ಚುಗೆ ಸೂಚಿಸುತ್ತಿದ್ದರು. ಈಗ ಅವರೆಲ್ಲ ಏನು ಮಾಡುತ್ತಿರಬಹುದು? ಪಾಪ, ಅಮ್ಮ ಅತ್ತು, ಅತ್ತು ಕಣ್ಣೀರು ಬತ್ತಿಸಿಕೊಂಡಿರಬಹುದು. ಅಪ್ಪ ಮಾಮೂಲಿನಂತೆ ಕುರ್ಚಿಯ ಮೇಲೊರಗಿ, ’ಬೆಂಜಮಿನ್ ಕವನ ಬರೆಯಲು ಆರಂಭಿಸಿದೊಡನೆ ಪೆನ್ ಕಿತ್ತು ಬಿಸಾಡಬೇಕಾಗಿತ್ತು. ಆಗ ಜೈಲು, ಗೀಲು ಏನೂ ತಂಟೆಯಿರುತ್ತಿರಲಿಲ್ಲ’ ಎಂದು ಚಿಂತಿಸುತ್ತಿರಬಹುದು. ಹುಷ್, ಕೆಳಹೊಟ್ಟೆಯ ನೀರನ್ನು ಖಾಲಿ ಮಾಡಬೇಕೆನ್ನಿಸುತ್ತಿದೆ. ದಿನಕ್ಕೆ ಒಂದೇ ಬಾರಿ ಪಾಯಿಖಾನೆಗೆ ಹೋಗುವ ರಾಜಭೋಗ! ಉಳಿದ ಸಮಯದಲ್ಲಿ ಏನು ಮಾಡಬೇಕೆನಿಸಿದರೂ ಈ ಸೆಲ್‌ನ ಮೂಲೆಯಲ್ಲೇ ಮಾಡಿಕೋಬೇಕು. ಎಷ್ಟೋ ಸಲ ಆ ವಾಸನೆ ಹೊಟ್ಟೆ ತೊಳಸಿ, ವಾಂತಿ ಮಾಡಿಕೊಂಡಿದ್ದೇನೆ. ಬರುಬರುತ್ತ ವಾಸನೆ, ಮಬ್ಬುಗತ್ತಲು, ಒಂಟಿತನ, ಮೌನ ಎಲ್ಲ ಅಭ್ಯಾಸವಾದವು.

(ಕಿರ್ರನೆ ಬಾಗಿಲು ತೆರೆದುಕೊಳ್ಳುವುದು. ಬಂದವನು ಬಿಳಿಯ ಪೊಲೀಸ್‌ನವನಾದ್ದರಿಂದ ನೋಡುವ ಗೋಜಿಗೆ ಹೋಗುವುದಿಲ್ಲ.)

ಬೆಂಜಮಿನ್ ಮೊಲಾಯಿಸ್;    ಏನು ಹರ್‍ಕೊತಾನೋ ಹರ್‍ಕೊಳ್ಳಿ, ನನ್ನ ಮುಗುಳ್ನಗೆ ಮಾತ್ರ ಮುಖದ ಮೇಲದ್ದೇ ಇರುತ್ತೆ. ಅವನನ್ನು ಇನ್ನಷ್ಟು ರೇಗಿಸಲು!

(ಬಿಳಿಯ ಪೊಲೀಸ್ ಮುಖ್ಯಸ್ಥ ಒರಟಾಗಿ ಭುಜವನ್ನಿಡಿದು ತಿರುಗಿಸುವನು. ಕೂದಲು ಹಿಡಿದು ತಲೆ ಹಿಂದಕ್ಕೆ ಜಗ್ಗುವನು. ನೋವಿನಿಂದ ಚೀರಬೇಕೆನಿಸಿದರೂ ನುಂಗಿಕೊಂಡು ಮೆಲ್ಲಗೆ ನಗುವನು ಬೆಂಜಮಿನ್. ಮುಖ್ಯಸ್ಥನ ಪಳಗಿದ ಕೈ ರಪ್ಪನೆ ಮುಖಕ್ಕೆ ರಾಚುವುದು. ಉಪ್ಪುಪ್ಪಾಗಿ ನಾಲಿಗೆಗೆ ರಕ್ತ ಅಂಟುವುದು. ಕಾಲು ತೊಡರಿ ಬೀಳುತ್ತಿದ್ದವನನ್ನು ಅದುಮಿ ಹಿಡಿದು.)

ಬಿಳಿಯ ಪೊಲೀಸ್ ಮುಖ್ಯಸ್ಥ    ಏಳು, ನ್ಯಾಯಾಲಯಕ್ಕೆ ಹೋಗ್ಬೇಕು.

ಬೆಂಜಿಮಿನ್ ಮೊಲಾಯಿಸ್    (ಸಿಟ್ಟು ಬೇಡವೆಂದರೂ ಒತ್ತಿಕೊಂಡು ಬಂದು) ಎಷ್ಟು ಸಲ ಹೋಗೋದು ನಿಮ್ಮ ಅನ್ಯಾಯಾಲಯಕ್ಕೆ?

(ಎರಡು ವರ್ಷಗಳಲ್ಲಿ ಹೊಡೆದೂ ಹೊಡೆದೂ ಸುಸ್ತಾಗಿಹೋಗಿದ್ದ ಬಿಳಿಯ ಪೊಲೀಸ್ ಮುಖ್ಯಸ್ಥ. ಬೆಂಜಮಿನ್ ಮೊಲಾಯಿಸ್‌ನನ್ನು ಎಳೆದುಕೊಂಡು ಹೋಗಿ ವಾಹನದಲ್ಲಿ ಸರಕು ತುಂಬುವಂತೆ ತುರುಕುವನು. ಪುನಃ ಅದೇ ಪ್ರಿಟೋರಿಯದ ರಸ್ತೆಗಳು. ಸಾಲು ಮನೆಗಳು. ಬೀದಿಯಲ್ಲಿ ಓಡಾಡುವ ಜನ, ಯಾರಿಗೂ ಒಳಗಿರುವವರ ಗುರುತು ಹತ್ತದಂತೆ ಗಾಜು ಏರಿಸಿದ ವಾಹನ...)


 ದೃಶ್ಯ೩

(ಲಕಲಕಿಸುವ ಟೇಬಲ್, ಛೇರ್, ಫ್ಯಾನ್, ಹೂಕುಂಡಗಳು, ಮೇಜಿನ ಆಚೀಚೆ ಹಿಂದಿಬ್ಬರು ಬಿಳಿಯ ವಕೀಲರುಗಳು, ಅಷೆತ್ತರದ ಕುರ್ಚಿಯಲಿ ಕುಳಿತಿರುವ ಜಡ್ಜ್, ಅವನಲ್ಲಿ ಅಹಂಕಾರ, ಕಣ್ಣುಗಳಲ್ಲಿ ತಿರಸ್ಕಾರ ಕಾಣುತ್ತಿದೆ. ಅವನ ತಲೆಯ ಮೇಲೆ ನಿರಂಕುಶ ಜನರಲ್ ಬೋಥಾನ ಚಿತ್ರ.)

ಬಿಳಿಯ ವಕೀಲ        (ಕನ್ನಡಿ ಸರಿಪಡಿಸಿಕೊಳ್ಳುತ್ತಾ) ಏನು ಯೋಚನೆ ಮಾಡಿದೆ?

ಬೆಂಜಮಿನ್ ಮೊಲಾಯಿಸ್     (ಮುಗುಳ್ನಗುತ್ತಾ) ಯಾವುದರ ಬಗ್ಗೆ?

ಬಿಳಿಯ ವಕೀಲ     (ಹುಬ್ಬುಗಂಟಿಕ್ಕುತ್ತಾ) ಕೋರ್ಟಿನೊಂದಿಗೆ ಹುಡುಗಾಟ ಆಡಬೇಡ. ಕವನ ಬರೆದಷ್ಟು ಸುಲಭವಲ್ಲ ಕಾನೂನಿನಿಂದ ತಪ್ಪಿಸಿಕೊಳ್ಳೋದು.

ಬೆಂಜಮಿನ್ ಮೊಲಾಯಿಸ್  ಕಾನೂನಿಗೆ ವಿರುದ್ಧವಾದುದ್ದೇನನ್ನೂ ನಾನು ಮಾಡಿಲ್ಲವಲ್ಲ?

ಬಿಳಿಯ ವಕೀಲ        ಹಾಗಾದರೆ ಪಿಲಿಪ್ಸ್ ಸೆಲಿಪೆ ನಿನಗೊತ್ತಿಲ್ಲ?

ಬೆಂಜಮಿನ್ ಮೊಲಾಯಿಸ್     ಇಲ್ಲ!

ಬಿಳಿಯ ವಕೀಲ        ೧೯೮೨ನೇ ವರ್ಷದಲ್ಲಿ ನೀನವನೊಂದಿಗೆ ಗೆಳೆಯನಾಗಿದ್ದಿಲ್ಲ?

ಬೆಂಜಮಿನ್ ಮೊಲಾಯಿಸ್     ಇಲ್ಲ.

ಬಿಳಿಯ ವಕೀಲ        ಗೆಳೆಯನಂತೆ ನಟಿಸಿ, ಕೊನೆಗೆ ಅವನನ್ನು ಕೊಂದು ಹಾಕಲಿಲ್ಲ?

ಬೆಂಜಮಿನ್ ಮೊಲಾಯಿಸ್  ಖಂಡಿತಾ ಇಲ್ಲ.

ಬಿಳಿಯ ವಕೀಲ         ನೀನು ಸುಳ್ಳು ಹೇಳ್ತಿದೀ. ಸರ್ಕಾರದ ನಿಷ್ಠಾವಂತ ಪೊಲೀಸರನ್ನು ಕೊಲ್ಲುವುದೇ ನಿನ್ನ ಕೆಲಸ.

ಬೆಂಜಮಿನ್ ಮೊಲಾಯಿಸ್  ಅಲ್ಲ. ನನ್ನ ಕೆಲಸ ಕವನ ಬರೆಯುವುದು ಮಾತ್ರ.

ಬಿಳಿಯ ವಕೀಲ        ನೀನೇನು ದೊಡ್ಡ ಕವಿ. ವಿದ್ವಾಂಸನೋ?

ಬೆಂಜಮಿನ್ ಮೊಲಾಯಿಸ್     ಅಲ್ವೇ ಅಲ್ಲ. ನಾನೇನೂ ದೊಡ್ಡ ಕಾವ್ಯ ಬರೆದಿಲ್ಲ. ಒಂದಿಷ್ಟು ಕವಿತೆಗಳನ್ನು ಬರೆದಿದ್ದೇನಷ್ಟೇ.

ಬಿಳಿಯ ವಕೀಲ        ನೀನು ಬರೆದ ಕವಿತೆಗಳು ಆಡಳಿತಕ್ಕೆ ವಿರುದ್ಧವಾಗೇ ಇವೆಯಲ್ಲ?

ಬೆಂಜಮಿನ್ ಮೊಲಾಯಿಸ್     (ನಗುತ್ತಾ)ಅದಕ್ಕೆ ನಾನು ಜವಾಬ್ದಾರನಲ್ಲ. ನಾನು ನನ್ನ ಜನರ ಪರವಾಗಿ ಬರೆಯುತ್ತೇನಷ್ಟೇ.

ಬಿಳಿಯ ವಕೀಲ         ಇಂಥ ಮಾತುಗಳಿಮಧ ನ್ಯಾಯಾಲಯ ಮೋಸ ಹೋಗಲಾರದು.

ಬೆಂಜಮಿನ್ ಮೊಲಾಯಿಸ್    ಮೋಸ ಮಾಡುವ ಉದ್ದೇಶ ನನಗಿಲ್ಲ. ಫಿಲಿಪ್ಸ್ ಸೆಲಿಪೆ ಎಂಬ ಪೊಲೀಸ್ ಸಹಜವಾಗಿ ಸತ್ತನೆಂಬುದು ಎಲ್ಲರಿಗೂ ಗೊತ್ತಿದೆ. ನೀವದನ್ನು ಕೊಲೆ ಎಂದು ಕರೆದು. ಆಪಾದನೆ ನನ್ನ ಮೇಲೆ ಹೊರಿಸಿದರೆ, ನಾಳೆ ಪ್ರಪಂಚ ನಿಮ್ಮನ್ನೂ, ನಿಮ್ಮ ನ್ಯಾಯಾಲಯವನ್ನೂ ನೋಡಿ ನಗುತ್ತದೆ.

ಜಡ್ಜ್    ನಿನ್ನ ಮಾತು ಅತಿಯಾಯ್ತು ಬೆಂಜಮಿನ್, ದೇಶದ್ರೋಹದ ಸಾಹಿತ್ಯ ಸೃಷ್ಟಿಸಿದ್ದಲ್ಲದೇ, ಕಾನೂನನ್ನೇ ಅಪಹಾಸ್ಯ ಮಾಡ್ತೀದೀ.... ನಿನ್ನ ಅಪರಾಧವನ್ನು ಒಪ್ಪಿಕೊಂಡರೆ ನಿನಗೇ ಒಳಿತು.

ಬೆಂಜಮಿನ್ ಮೊಲಾಯಿಸ್     ನಾನು ಯಾವ ಅಪರಾಧವನ್ನು ಮಾಡಿಲ್ಲ.

ಜಡ್ಜ್            ಅಪರಾಧ ಸಾಬೀತಾಗಿದೆ. ನಿನಗೆ ಮರಣದಂಡನೆಯನ್ನು ಕೂಡ ವಿಧಿಸಬಹುದು. ಗೊತ್ತೇ?

ಬೆಂಜಮಿನ್ ಮೊಲಾಯಿಸ್    ನನ್ನ ಉತ್ತರದಲ್ಲಿ ಬದಲಾವಣೆಯೇನೂ ಇಲ್ಲ.

(ಇಡೀ ಕೋರ್ಟು ಸಿಟ್ಟಿನಿಂದ ಉರಿಯುವುದು, ಬೆಂಜಮಿನ್ ಮಾತ್ರ ಮುಗುಳ್ನಗುವನು, ಯಥಾಪ್ರಕಾರ ಬೆಂಜಮಿನ್ ಮೊಲಾಯಿಸ್‌ನನ್ನು ಮಬ್ಬುಗತ್ತಲಿನ ಸೆರೆಮನೆಯ ಕೊಠಡಿಗೆ ದೂಡುವರು, ದಿನಗಳು ಕಳೆಯತೊಡಗುವವು.)


ದೃಶ್ಯ ೪
ಜನರಲ್            ಬೇಡ.. ..ಬೇಡ..

ವಿಲಿಯಂ            ಇಲ್ಲ ಹಾಗೆ ಮಾಡಲಾಗುವುದಿಲ್ಲ

ಜನರಲ್            ನೀನೇನು ಕರಿಯನೋ..?   

ವಿಲಿಯಂ    ಕರಿಯನಲ್ಲ ನಾನು..ಖಂಡಿತ ಕರಿಯನಲ್ಲ. ಆದರೆ..ನೋಡಿ..ಅವನು.. ಆ ಬೆಂಜಮಿನ್ನು.. ಸಣ್ಣ ಸಣ್ಣ ಪದ್ಯ ಬರೆದು ದೊಡ್ಡದಾಗೆ ಹೆಸರು ಮಾಡಿಬಿಟ್ಟಿದಾನೆ..ಗೆಳೆಯರ ಬಳಗ ದೊಡ್ಡದಿದೆ ಅವನದು..

ಜನರಲ್    ಹೇಳಿದಷ್ಟು ಮಾಡು..ಕೇಳಿಸಿತೇ? ಹೇಳಿದಷ್ಟು ಮಾತ್ರ..ಗೊತ್ತಿರುವುದನ್ನೆಲ್ಲ ವರದಿ ಮಾಡಬೇಡ ಜನರೆದುರು..ತಿಳಿಯಿತೇ..?   

ವಿಲಿಯಂ    (ಸ್ವಗತ-ಸುದ್ದಿಗಾರರ ಕರ್ತವ್ಯ ಬಲುಕೆಟ್ಟದ್ದು..ಕೃತಜ್ಞಹೀನದ್ದು..) ಆದರೆ ನೋಡಿ..ಸಾವು ತನ್ನಷ್ಟಕ್ಕೆ ತಾನೆ ಸುದ್ದಿಯಾಗಬಲ್ಲದು..

ಜನರಲ್            ಸಾವು ಘಟಿಸುವವರೆಗು ಸುಮ್ಮನಿರು. ಗದ್ದಲವಾಗುವುದು ಬೇಡ..       

ವಿಲಿಯಂ            ಅಂದರೆ..ತೀರ್ಪು ಆಗಲೆ ಜಾರಿಯಾಗಿದೆ ಹಾಗಾದರೆ..ಬೆಂಜಮಿನ್‌ಗೆ ಗಲ್ಲು?॒

ಜನರಲ್    ನನ್ನ ಮಾತುಗಳನ್ನು ನಿನ್ನ ಬಾಯಿ ಮುಂಚಿತವಾಗಿ ಕದಿಯುವುದು ಬೇಡ. ಸುದ್ದಿಗಳೆಲ್ಲವು ನಿನ್ನ ಸ್ವಂತದ್ದಲ್ಲ..ತಿಳಿ..       

ವಿಲಿಯಂ            ಅವನ ಕವಿತೆಗಳೆ ಸುದ್ದಿ ಹರಡಬಲ್ಲವು..

ಜನರಲ್            ಹಾಂ..ಕವಿತೆ..? (ಸ್ವಗತ ಜೈಲಿನಲ್ಲು ಬರೆದಿರಬಹುದಲ್ಲವೆ?॒ ಹಾಂ..) ಅವುಗಳು ಎಲ್ಲೆಲ್ಲಿದಾವೆ
ತಂದುಕೊಡು..ನೀನೇ ತರಬೇಕು ಸಿಕ್ಕ ತಕ್ಷಣ..       

ವಿಲಿಯಂ    ಸಿಕ್ಕ ತಕ್ಷಣ ಏನ್ಬಂತೂ.. ..ಇ॒ಲ್ಲೆ ಇವೆ ನನ್ನ ಕಿಸೆಯೊಳಗೆ..ಅವುಗಳ ಪ್ರತಿ ಮಾಡಿಸಿ ತಂದೆ ಸಾಧ್ಯವಾದರೆ ಪ್ರಕಟಿಸುವ ಅಂತ....(ತಟ್ಟನೆ ನಾಲಿಗೆ ಕಚ್ಚಿಕೊಳ್ಳುವನು)ಅಯ್ಯೋ ಹೇಳಿಬಿಟ್ಟೆನಲ್ಲಾ..ಥೂ, ಸತ್ಯ ನುಡಿಯುವ ನನ್ನ ನಾಲಿಗೆಯೇ..ನೀನೆ ನನಗೆ ಶತೃ..

ಜನರಲ್    ಪ್ರಕಟಿಸೋದಾ..?ಎಷ್ಟು ದಿನಗಳು ಬದುಕಬೇಕೆಂದು ಲೆಕ್ಕ ಹಾಕಿದ್ದೀಯೇನು.॒? ಕೊಡಿಲ್ಲಿ..ಅದೊಂದು ದಿನ ಬರುತ್ತೆ..ಈ ಕಾವ್ಯಗೀವ್ಯ ಎಲ್ಲ ನಿಷಿದ್ಧವಾಗಿರುತ್ತೆ ನನ್ನ ಕೈ ಕೆಳಗೆ.. ..   

ವಿಲಿಯಂ    (ಸ್ವಗತ) ಮುಗೀತು... ಇವುಗಳ ಕಥೆ ಮುಗೀತು..ಕ್ಷಮಿಸು ಬೆಂಜಮಿನ್.. ಅಯ್ಯೋ.. .. ವಾರ್ತೆಗಳ ಹರಡುವ ಬಾಯಿಗೆ ಮೊದಲ ಉರುಳು ಬೀಳಲಿ...

ಜನರಲ್            ಏನೋ ಅಂದೆಯಲ್ಲ.. ..?           

ವಿಲಿಯಂ            ಏನಿಲ್ಲ.. ..ಏನಿಲ್ಲ.. ..

ಜನರಲ್    ನಿಗ ಇರಲಿ ನಾಲಿಗೆ ಮೇಲೆ.. .. ಬೆಂಜಮಿನ್ ಕುರಿತ ಯಾವ ಸುದ್ದಿಯೂ ನಿನ್ನಿಂದ ಹೊರಹೋಗುವುದು ಬೇಡ.. ..        

ವಿಲಿಯಂ            ಹಾಗೆ ಆಗಲಿ.. ..(ಸ್ವಗತ- ಹೀಗೆ ಹೇಳದೆ ವಿಧಿಯಿಲ್ಲ..)

ಜನರಲ್            ಅಲ್ಲಿಯ ಸುದ್ದಿ.. ..ಅವನ ಗೆಳೆಯರ ಸುದ್ದಿ.. ..ತಕ್ಷಣ ನನಗೆ ಸಿಗಬೇಕು.. ..ತಕ್ಷಣ..

ವಿಲಿಯಂ    ಹಾಗೇ ಆಗಲಿ..ನಾನಿನ್ನು ಬರಲೇ.. ..?( ಸ್ವಗತ-ನನಗೇ ಉಸಿರುಗಟ್ಟುತ್ತಿದೆ ಇಲ್ಲ.. ..ಅವನ ಕವನಗಳಿಗಾಗುವ ಗತಿಯನ್ನು ನೋಡಲಾರೆ..ನೋಡಲಾರೆ..)

ಜನರಲ್    ನಡಿ..ನಿನ್ನ ಈ ಹೊತ್ತಿನ ಕೆಲಸ ನಿಜವಾಗಿ ಮುಗೀತು.. ..

(ವಿಲಿಯಂ ಹೋದಬಳಿಕ ಕವನಗಳ ಹಾಳೆಗಳನ್ನು ಸಿಟ್ಟಿನಿಂದ ನೋಡುತ್ತ ಚೂರುಚೂರಾಗಿ ಹರಿಯುವನು..    ಮುಷ್ಟಿಯಲ್ಲಿ ಉಂಡೆ ಮಾಡುತ್ತಾ..ಕೊನೆಗೆ ಕೆಳಗೆ ಹಾಕಿ ತುಳಿಯುವನು..)

ದೃಶ್ಯ ೫

ಕ್ರಿ ಶ. ೧೯೮೫, ಅಕ್ಟೋಬರ್ ೧೮

ಕೊಠಡಿಯ ಬಾಗಿಲು ತೆರೆದುಕೊಳ್ಳುವುದು. ಪೊಲೀಸರ ಗುಂಪು ಒಳಬರುವುದು. ಮುಖ್ಯಸ್ಥ ಸನ್ನೆ ಮಾಡುವನು. ಒಬ್ಬ ಮುಂದೆ ಬಂದು ಬೂದಿಬಣ್ಣದ ಕಾಗದವನ್ನು ಎದುರಿಗೆ ಹಿಡಿದು,

ಬಿಳಿಯ ಪೊಲೀಸ್    ಬೆಂಜಮಿನ್ ಮೊಲಾಯಿಸ್ ಎಂಬ ಹೆಸರಿನ ದೇಶದ್ರೋಹಿ ಬಂಡಾಯವೇಳುವಂತೆ ಜನರನ್ನು ಕವನಗಳ ಮೂಲಕ ಪ್ರಚೋದಿಸಿದ್ದಲ್ಲದೆ, ಆಡಳಿತದ ನಿಷ್ಠಾವಂತ ಪೊಲೀಸ್ ಫಿಲಿಪ್ಸ್ ಸೆಲಿಪೆಯನ್ನು ಕೊಂದು ಹಾಕಿರುವುದಾ ಸಾಬೀತಾಗಿ, ಬೆಂಜಮಿನ್ ಮೊಲಾಯಿಸ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಊe shouಟಜ be hಚಿಟಿgeಜ ಣiಟಟ ಜeಚಿಣh. ಪರಮಾಧಿಕಾರಿ ಭೋಥಾರ ಸಿಹಿಯೊಂದಿಗೆ ಈ ಆಜ್ಞೆ ಹೊರಡಿಸಲಾಗಿದೆ.

(ಬೆಂಜಮಿನ್ ಮೊಲಾಯಿಸ್ ಒಂದು ಕ್ಷಣ ಸ್ತಬ್ಧನಾಗುವನು. ಅನಂತರ ಮುಗುಳ್ನಗುತ್ತ ಎದ್ದು ನಿಲ್ಲುವನು. ಅಷ್ಟೂ ಜನ ಅಂಗರಕ್ಷಕರಂತೆ ಹಿಂಬಾಲಿಸುವರು. ಕಬ್ಬಣದ ಸರಳುಗಳ ಬಾಗಿಲು ಎದುರಾಗುವುದು. ಅದರಾಚೆಗೆ ನೇಣುಗಂಬದ ಕೋಣೆ! ಬೆಂಜಮಿನ್ ಮೊಲಾಯಿಸ್ ನಿಂತಲ್ಲೇ ನಿಂತು ತಲೆಯೆತ್ತಿ ಸೂರನ್ನು ದಿಟ್ಟಿಸಿ, ಕಣ್ಮುಚ್ಚಿಕೊಂಡು ಪ್ರಾರ್ಥಿಸುವನು.)

ಬೆಂಜಮಿನ್ ಮೊಲಾಯಿಸ್    ನಾನು ಮತ್ತೆ ಆಫ್ರಿಕಾದ ನೀಗ್ರೋನಾಗಿಯೇ ಹುಟ್ಟಬಯಸ್ತೇನೆ. ದೇವರೇ. ಆಗ ಈ ನೆಲ ಸ್ವತಂತ್ರವಾಗಿರಲಿ. ನನ್ನ ಜನರ ಕೈಯಲ್ಲಿ ಆಡಳಿತವಿರಲಿ. ಅವರೆಲ್ಲ ಮನುಷ್ಯರಂತೆ ಬದುಕಲಿ.

(ಮುಗುಳ್ನಗೆಯನ್ನು ಮುಖಕ್ಕೆ ತಂದುಕೊಂಡು ಕೋಣೆಯೊಳಗಡೆ ಕಾಲಿಡುವನು. ಹೊರಗೆ. ನಸುಕಿನ ಸೂರ್ಯ ಮೆಲ್ಲಗೆ ಮೇಲೇರತೊಡಗುವನು.)

ವೇದಿಕೆ ಕತ್ತಲಾಗುವುದು.

   ******************************************************************************************************

ಸುಧಾ ಚಿದಾನಂದಗೌಡ
ಹಗರಿಬೊಮ್ಮನಹಳ್ಳಿ-೫೮೩೨೧೨
ಬಳ್ಳಾರಿ(ಜಿಲ್ಲೆ)

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...