ಭಾನುವಾರ, ಸೆಪ್ಟೆಂಬರ್ 9, 2012

ಕನ್ನಡ ನಾಟಕ – ಪರಂಪರೆ ಆಗಬೇಕು

ನಾಟಕದ ಬಗ್ಗೆ ಎಲ್ಲರೂ ಮಾತಾಡಲು ಸುರುಮಾಡುತ್ತಾರೆ, ಕೆಲವರು ಹಾಗಿರಬೇಕಿತ್ತು ಹೀಗಿರಬೇಕಿತ್ತು ಎಂಬಿತ್ಯಾದಿ ಆಶಾವಾದದ ಉಚಿತ ಸಲಹೆಗಳನ್ನು ಕೊಡಲು ಪ್ರಾರಂಭಿಸುತ್ತಾರೆ. ನಾಟಕದ ತಳಹದಿ ಯಾವ ರೂಪದಲ್ಲೇ ಇರಲಿ ತಮ್ಮ ತಲೆಯೊಳಗಿನ ಚಿತ್ರದ ಗಡಿ ದಾಟಿಕೊಂಡು ನಾಟಕ ನೋಡುವುದೇ ಇಲ್ಲ. ಹಾಗೆ ಮಾತಾಡುವವರು ಚಿತ್ರಗಳ ಬಗ್ಗೆ ಮಾತಾಡುವುದಿಲ್ಲ, ಕವಿತೆಗಳ ಬಗ್ಗೆ ಮಾತಾಡುವುದಿಲ್ಲ ಶಿಲ್ಪಗಳ ಕುರಿತಾಗಿ ಮಾತಾಡುವುದಿಲ್ಲ..! ಆಶ್ಚರ್ಯವೆಂದರೆ ನಾಟ್ಯಭಂಗಿಗಳ ಬಗ್ಗೆ ಸಹಿತ ವಿವೇಚನೆ ಮಾಡುವುದಿಲ್ಲ. ಸಾಧಾರಣವಾಗಿ ನಾಟಕ ನೋಡಿದ ಮೇಲೆ ಒಂದು ಸಣ್ಣ ಚರ್ಚೆ ಇಟ್ಟಾಗ ಪ್ರೇಕ್ಷಕರಲ್ಲಿ ಕೆಲವು ಗೊಂದಲಗಳು ಏಳುತ್ತವೆ. ಅದ್ಯಾವದೋ ನೆನಪಿನ ಸುರುಳಿಯಲ್ಲಿ ಇಡೀ ನಾಟಕ ಗ್ರಹಿಸಿರುತ್ತಾರಾದ್ದರಿಂದ ಅದೇ ತೆರನಾದ ಭಾವಪ್ರಪಂಚದ ಒಳಹೊಗಲು ಪ್ರಯತ್ನಿಸುತ್ತಿರುತ್ತಾರೆ. ಒಮ್ಮೆ ರಸವತ್ತಾಗಿ ಅಭಿನಯಿಸಲ್ಪಟ್ಟ ನಾಟಕವೊಂದು ಮತ್ತೊಮ್ಮೆ ಅಷ್ಟೆ ರಸವತ್ತಾಗಿ ತಟ್ಟಬೇಕಾದ್ದು ಏನೂ ಇರುವುದಿಲ್ಲ. ಅದು ಸಂಪೂರ್ಣ ನಟ/ನಟಿಯ ಅಭಿವ್ಯಕ್ತಿಯಾಗಿ ರೂಪಗೊಳ್ಳುವುದು ಭಾವತುಂಬಿ ಅಬಿನಯಿಸಿದಾಗ ಮಾತ್ರ… ಆದರೆ ನಾವು ದಿನನಿತ್ಯದ ಬದುಕಿನಲ್ಲಿ ಅಂಥ ಭಾವಪೂರ್ಣವಾದ ಕ್ಷಣಗಳನ್ನ ಕಂಡಿದ್ದ ಕಾರಣಕ್ಕಾಗಿ ನಾಟಕ ನೋಡುಗನೊಂದಿಗೆ ಸಹ ಪ್ರಯಾಣ ಆರಂಭಿಸಿಬಿಟ್ಟಿರುತ್ತದೆ. ಅಷ್ಟು ಸಹಜವಾಗಿ ನಮ್ಮ ಒಳ-ಹೊರಗೇಕಾಗಿ ನಾಟಕದ ಎರಡು ಸಂವಹನಗಳು ಸಾಧ್ಯವಾಗುತ್ತಿರುತ್ತವೆ. ಅಂಥ ಸಂವಾದ ಬೇರೆ ಯಾವ ಮಾಧ್ಯಮದಿಂದ ಸಾಧ್ಯವಾಗಲಾರದು ಎಂದು ಹೇಳಲಾಗದು ಯಾಕಂದ್ರೆ ಆ ಎಲ್ಲ ಕಲಾಪ್ರಕಾರಗಳು ತನ್ನ ಅರಿವಿನ ವಿಸ್ತಾರದಲ್ಲಿ ಕೊಡುಕೊಳ್ಳುವ ಒಂದು ವ್ಯಾಪಾರ ಮನೋಧರ್ಮವನ್ನು ಬೆಳೆಸಿಕೊಂಡಿರುತ್ತವೆ.
ಈಗ ಹೊಸ ಹುಡುಗರು ಸಾಲುಗಟ್ಟಿ ನಾಟಕಕ್ಕೆ ಬರುತ್ತಿದ್ದಾರೆ. ವರ್ಷವೊಂದರಲ್ಲಿ ಕನ್ನಡ ರಂಗಭೂಮಿಯಲ್ಲಿ ಕನಿಷ್ಟ ಎಂಬತ್ತು ಜನ ಯುವಕರು ನಾಟಕದ ವಿಷಯದ ಮೇಲೆ ಡಿಪ್ಲೋಮ ಪದವಿ ಪಡೆದುಕೊಳ್ಳುತ್ತಾರೆ. ಇದೊಂದು ಸಂತಸದ ಸಂಗತಿ ಆದರೂ ಅವರ ಅಧ್ಯಯನ ಕ್ರಮದಲ್ಲಿ ಸಹಜತೆಗೆ ಹೊರತಾದ ಕೆಲ ಕೋತಿ ಚೇಷ್ಟೆಗಳು, ತಂತ್ರಗಳು, ಸಿದ್ಧಮಾದರಿಯ ಅಭಿನಯಗಳು ರೂಢಿಯಾಗಿಬಿಡುತ್ತವೆ. ಕನ್ನಡ ಅಕ್ಷರಗಳ ಸ್ಪಷ್ಟ ಉಚ್ಛಾರಣೆ ಕಲಿಸುವುದರೊಂದಿಗೆ ದೇಹಸಂಸ್ಕಾರ ಮಾಡಿಸುವುದರೊಳಗೆ ಅವರ ಕಲಿಕೆಯ ಆಸಕ್ತಿ ನಿಂತು ಹೋಗಿಬಿಟ್ಟಿರುತ್ತದೆ. (ಇದು ನನಗು ಅನ್ವಯಿಸುತ್ತದೆ) ಮುಂದೆ ಅವರ ಮುಖದ ಮುಂದಿನ ಕನಸುಗಳೆಲ್ಲ ಬೆಂಗ್ಳೂರು ಒಳಗೊಂಡು ರಚಿತವಾಗುವ ಕಾರಣಕ್ಕೋ ಏನೋ ಬಂದ ಯುವಕರು ಹಾಗೆ ಎಲ್ಲೋ ಕಾಣದಾಗಿಬಿಡುತ್ತಾರೆ. ಆ ಫ್ರೇಮ್ ಸಂಸ್ಕೃತಿಗೆ ಬೇಕಾದ ಅಭಿನಯದ ಮಾದರಿಯನ್ನ ಅವರು ಕಲಿಯದ ಕಾರಣಕ್ಕಾಗಿ ಏನೋ ಅವರು ಅಷ್ಟಾಗಿ ಸ್ಕ್ರೀನ್ ಮೇಲೆ ಕಾಣಿಕೊಳ್ಳುವುದಿಲ್ಲ. ಇದೆಲ್ಲ ಆಗುವ ಹೊತ್ತಿಗೆ ಅವರ ಉತ್ಸಾಹವೇ ಹಿಂಗಿ ತಾಂತ್ರಿಕ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿಬಿಡುತ್ತಾರೆ. ನೋಡಿ ರಂಗದ ಮೇಲೆ ನಿಂತು ನಾಟಕ ಮಾಡುವ ಹೊತ್ತಲ್ಲಿ ಅವರ ಅಭಿವ್ಯಕ್ತಿಗೆ ಬಹು ಆಯಾಮಗಳು ಒದಗಿ ಬಂದು ಪ್ರೇಕ್ಷಕರೊಳಗೆ ಹತ್ತೆಂಟು ಪ್ರಶ್ನೆಗಳನ್ನು ಪ್ರಚೋದಿಸಿದ ನಟ ಹೀಗೆ ಎಲ್ಲೋ ಕಾಣದಾದಾಗ ಕನ್ನಡ ರಂಗಭೂಮಿ ಪರಂಪರೆ ಆಗಿ ಉಳಿಯುವುದಾದರೂ ಹೇಗೆ? ಅದಿರಲಿ ನಟನೊಬ್ಬ ಹತ್ತೆಂಟು ವರ್ಷಗಳ ಕಾಲ ಬರೀ ನಾಟಕದ ಸಾಧನೆಯೊಳಗೆ ಬದುಕಿ ಉಳಿಯುವುದು ಕಷ್ಟ, ಯಾವನೋ ಒಬ್ಬ ಹಾಗೆ ಬದುಕುತ್ತೇನೆಂದು ಹಠ ಹಿಡಿದರೂ ಅವನ ಸ್ವಂತ ಬದುಕಿನ ಸಂಕಟಗಳನ್ನು ಯಾವ ಮುಖವಾಣಿಯಲ್ಲಿ ಹೇಳಿಕೊಳ್ಳಬೇಕು? ಇನ್ನು ಕೆಲ ನಟರು ಹೊಟ್ಟೆ-ಬಟ್ಟೆಗೆ ಬೇರೆ ಬೇರೆ ಕೆಲಸಗಳನ್ನು ನಚ್ಚಿಕೊಂಡು ಬಿಡುವಿನ ಸಂದರ್ಭದಲ್ಲಿ ನಾಟಕ ಮಾಡುತ್ತ ಬಂದಿದ್ದಾರೆ. ಅಂಥವರು ಸಹಿತ ಈ ತರಬೇತಾದ ಹೊಸ ಹುಡುಗರನ್ನ ಕೊಂಚ ‘ಏನು ಮಾಡುತ್ತಾರೋ ನೋಡೋಣ’ ಎಂಬ ವಕ್ರದೃಷ್ಟಿಯಲ್ಲಿ ನೋಡುವಾಗ ಅವರ ಪರಂಪರೆ ಇವರಿಗೆ ಬಳುವಳಿಯಾಗಿ ಬರುವುದಾದರೂ ಹೇಗೆ ಸಾಧ್ಯ? ಇನ್ನು ತರಬೇತಾದ ಕೆಲವರು ಹವ್ಯಾಸವೆಂದು ನಾಟಕ ಮಾಡುವವರನ್ನು ಗರ್ವದಿಂದ ನೋಡುವುದೂ ಒಂದಿದೆ… ಅದು ತಾವು ಆ ಕುರಿತಾಗಿ ತಿಳುವಳಿಕೆ ಉಳ್ಳವರು ಎಂಬ ಸೊಕ್ಕು ಅದು-ಹಾಗಂದ ಮಾತ್ರಕ್ಕೆ ಅವರನ್ನು ದೂರಿಕೊಂಡು ಅವರು ಅಲ್ಲಿ ಓದಿದವರು ಇವರು ಇಲ್ಲಿ ಓದಿದವರು ಎಂದು ಮಾತೃ ಸಂಸ್ಥೆಯೊಂದಿಗಿನ ಇವರ ಹೊಟ್ಟೆಕಿಚ್ಚನ್ನ ಹೊಸ ಹುಡುಗರ ಮೇಲೆ ತೀರಿಸಿಕೊಳ್ಳಲು ಪ್ರಯತ್ನಿಸುವುದು ಇದ್ದೆ ಇರುತ್ತದೆ. ಇದೆಲ್ಲದರ ನಡುವೆ ಹೊಸ ತಲೆಮಾರಿನ ನಮಗೆಲ್ಲ ನಾಟಕ ಪರಂಪರೆಯಾಗಿ ಉಳಿಸಬೇಕೆಂಬ ಆಶಯವೇನೋ ಇದೆ..1 ಆದರೆ ಕನ್ನಡದ ನಟನಾ ಪರಂಪರೆ ಗಟ್ಟಿಯಾಗುಳಿಯಲು ನಮ್ಮ ನೆಲದ ಒಂದು ಅಭಿನಯ ಪದ್ಧತಿ ಕುರಿತಾದ ಸಂಶೋಧನೆ ಆಗಲಾರದ ಹೊರತು ಮತ್ತು ನಾಟಕದಲ್ಲಿ ನಟಿಸುವ ನಟನಿಗೆ ಪಗಾರ ಸಿಗದ ಹೊರತು ನಾಟಕ ಪರಂಪರೆಯಾಗಿ ಉಳಿಯಲಾರದು. ನಾಲ್ಕು ನಾಟಕ ಮಾಡಿದವ ನಿರ್ದೇಶನ ಮಾಡಲು ಆರಂಭಿಸುತ್ತಾನೆ. ತನ್ನದೇ ಆದ ಸರ್ಕಲ್ಲೊಂದರ ಮೂಲಕ ಪ್ರಚಾರಕ್ಕೆ ಬಿದ್ದು ಶ್ರೇಷ್ಟತೆಯ ಗುಂಗಿನಲ್ಲಿ ಮುಳುಗಿಬಿಡುತ್ತಾನೆ. ಅಂಥವರೆಲ್ಲ ನಾಟಕ ಪರಂಪರೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಾರರು. ಹೌದು ನಾಟಕ ಪರಂಪರೆ ಆಗಲೇಬೇಕು
mahadev hadapad
             

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...