ಗುರುವಾರ, ಸೆಪ್ಟೆಂಬರ್ 27, 2012

ರಂಗಾಯಣದಲ್ಲಿ ಚಿಂತನ ಚಿತ್ತಾರ..


avadhi krupe
ಈಗಲೂ ಸ್ವರ್ಗದಲ್ಲಿರುವ ಚಿಂತಕ ಡಿ. ಆರ್ . ನಾಗರಾಜ್ ಅವರು ಇಲ್ಲೇ ಇದ್ದಾಗ ಅನುವಾದಿಸಿದ
ಪುಸ್ತಕವೊಂದರ ಹೆಸರು: ವಸಂತ ಸ್ಮೃತಿ.
ಇದು ನಿಮಗೂ ತಿಳಿದಿರುವ ಹಾಗೆ ರೂಮಿ ಕವಿತೆಗಳ ಅನುವಾದ ಸಂಕಲನ. ಇದರಲ್ಲಿ ‘ದಾರಿ ತಪ್ಪಿದ
ಗಿಡುಗ’ ಎಂಬ ಹೆಸರಿನ ಕವಿತೆ ಇದೆ.
ಈ ಇಂಥಹ ಕವಿತೆಯನ್ನೇ ಬಾಳಿದ ಕಥೆಯಂತೆ ಚಿತ್ರಕಾರ ವ್ಯಾನ್ ಗೋನ ಜೀವನ ಭಾಸವಾಗುತ್ತದೆ; ಒಡಲು
ಮತ್ತು ಒಡಹುಟ್ಟಿನ ಮೂಲವನ್ನು
ಹಿಡಿದು ಅಲ್ಲಾಡಿಸುತ್ತದೆ. ಅಂದಹಾಗೆ; ಈ ಪುಸ್ತಕದ ಮರುಮುದ್ರಣ ಕನ್ನಡದಲ್ಲಿ ಕೆಲವು ತಿಂಗಳ
ಹಿಂದಷ್ಟೇ ಆಗಿದೆ (ನವಕರ್ನಾಟಕ ಪ್ರಕಾಶನ).
ಹೊಸ ತಲೆಮಾರಿನ ಹುಡುಗರು ಅದರಲ್ಲೂ ಮೈಸೂರಿನ ರಂಗಾಯಣದ ಗಾಳಿಯಲ್ಲಿ ಸುಳಿದಾಡುವವರಲ್ಲಿ ಈ
ಪುಸ್ತಕ: ನೋವಿಗದ್ದಿದ ಕುಂಚ ಹೊಸ
ಸಂಚಲನವನ್ನು ಉಂಟು ಮಾಡಿದೆ. ಈ ಕೃತಿಯ ಚರ್ಚೆ – ಸಂವಾದವು ೨೯.೦೯.೨೦೧೨ ರಂದು ರಂಗಾಯಣದ
ಶ್ರೀರಂಗದಲ್ಲಿ ಸಂಜೆ ೫ ಗಂಟೆಗೆ ಜರುಗಲಿದೆ.
ದಯವಿಟ್ಟು ನೀವು ನಿಮ್ಮ ಸ್ನೇಹಿತರು ಕೂಡಿ ಬನ್ನಿ. ಇದೇ ಸಂಧರ್ಭದಲ್ಲಿ ಈ ಸಲದ ಕಾರ್ಯಕ್ರಮದ
ಆಹ್ವಾನ ಪತ್ರಿಕೆಯನ್ನು ರೂಪಿಸಿರುವ ಮೈಸೂರಿನ ಚಿತ್ರಕಾರ ಕೆ.ಜೆ. ಸಚ್ಚಿದಾನಂದ ಅವರಿಗೆ
‘ಚಿಂತನ ಚಿತ್ತಾರ’ದ ವಂದನೆಗಳು.

ಹೀಗೊಬ್ಬ ಕತ್ತರಿ ಕಲಾ ಮಾಂತ್ರಿಕ, ಸಾಂಝೀ ಕಲೆಯ ಸರದಾರ ಹುಸೈನ್


- ಮೌನೇಶ್
varthabharathi

ಬಣ್ಣ, ಮಣ್ಣು, ಪ್ಲಾಸ್ಟರ್ ಪ್ಯಾರಿಸ್, ಪೈಬರ್ ಹೀಗೆ ಬೇರೆ ಬೇರೆ ವಸ್ತುಗಳಿಂದ ಕಲಾಕೃತಿ ರಚಿಸುವುದನ್ನು ನಾವು ಕಂಡಿದ್ದೇವೆ. ಆದರೆ ಕಾಗದ ಕತ್ತರಿಸಿಯೇ ಅದ್ಭುತ ಕಲಾಕೃತಿಗಳನ್ನು ರೂಪಿಸುವ ಕಲಾವಿದನನ್ನು ನೀವು ಕಂಡಿದ್ದೀರಾ..? ಹಾಗಾದರೆ ಇಲ್ಲಿ ಕೇಳಿ..ಇವರ ಕೈಗೆ ಕತ್ತರಿ ಮತ್ತೊಂದು ಕಾಗದ ಕೊಟ್ಟರೆ ಸಾಕು, ಅದ್ಭುತವನ್ನೇ ಸೃಷ್ಟಿಸಬಲ್ಲರು. ಈ ಕತ್ತರಿ ಮಾಂತ್ರಿಕನ ಹೆಸರು ಎಸ್.ಎಫ್. ಹುಸೈನ್. ಮೂಲತಃ ಮಂಡ್ಯದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತ ವ್ಯವಿದ್ದಾರೆ. ಇವರಿಗೆ ಅದ್ಯಾವ ಕಲೆ ಸಿದ್ಧಿಸಿ ದೆಯೋ ದೇವರೇ ಬಲ್ಲ. ಆದರೆ ಇವರ ಕೈಯಿಂದ ರೂಪಪಡಕೊಂಡ ಕಲಾಕೃತಿಗಳಂತೂ ಎಂತವರನ್ನೂ ಮರುಳು ಮಾಡಬಲ್ಲದು. ಯಾವುದೇ ಕಾಗದವನ್ನು ತನ್ನದೇ ದೃಷ್ಟಿ ಕೋನದಲ್ಲಿ ಸೂಕ್ಷ್ಮವಾಗಿ ಕತ್ತರಿಸಿ ಇವರಿಂದ ಮೂಡುವ ಮುಖವಾಡ, ಗೊಂಬೆ, ಪ್ರಾಣಿ,ಪಕ್ಷಿ, ರಾಜ-ರಾಣಿಯರ ಕಲಾಕೃತಿಗಳಂತೂ ಕಣ್ಣಿಗೆ ಕಟ್ಟುತ್ತವೆ. ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ ಎಂಬ ಮಾತೊಂದಿದೆ. ಅದರಲ್ಲೂ ಈ ಕಾಗದವನ್ನು ಕತ್ತರಿಸಿ ಕಲಾಕೃತಿಗಳನ್ನು ರಚಿಸುವ ಮನ ಮೋಹಕ ಸಾಂಝೀ ಕಲೆಯಲ್ಲಿ ಹುಸೈನ್ ಹಿಡಿತ ಸಾಧಿಸಿರುವುದು ನಿಜಕ್ಕೂ ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲ ಎನ್ನಬಹುದು.ಕೇವಲ ಕಾಗದ ಕತ್ತರಿಸಿ ಕಲಾಕೃತಿ ನಿರ್ಮಿಸು ವುದು ಮಾತ್ರ ಇವರ ಕಾರ್ಯವಲ್ಲ. ಜೊತೆಗೆ ಕಾಗದ ಕಲೆಯ ಕುರಿತಾಗಿ ಇವರು ಸಾಕಷ್ಟು ರೀತಿಯ ಸಂಶೋಧನೆಗಳನ್ನು ತನ್ನದೇ ಹಂತದಲ್ಲಿ ನಡೆಸುತ್ತಾ ಬಂದಿದ್ದಾರೆ.

ಅಪರೂಪದ ಕಲಾವಿದ ಮೈಸೂರು ಹುಸೇನ್...
ಎಸ್.ಎಫ್. ಹುಸೈನ್ (ಸಯ್ಯದ್ ಫಕ್ರುದ್ದೀನ್ ಹುಸೈನ್) ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನ ಸಮುದ್ರ ಎಂಬಲ್ಲಿಯವರು.ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ಪಡೆದಿರುವ ಇವರು, ಮೈಸೂರು ಹುಸೈನ್ ಎಂದೇ ಹೆಸರು ಪಡೆದವರು. ಮೈಸೂರಿನಲ್ಲಿರುವ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಪೈನ್ ಆರ್ಟ್ಸ್, ವೈಜಯಂತಿ ಕಲಾ ಶಾಲೆಯಲ್ಲಿ ಡಿಪ್ಲೊಮಾ ಇನ್ ಪೈನ್ ಆರ್ಟ್ಸ್, ಆರ್ಟ್ ಮಾಸ್ಟರ್(ಎ.ಎಂ), ಜೆ.ಡಿ. ಹಾಗೂ ಪೈಂಟಿಂಗ್ ಬಿ.ಎಪ್.ಎ. ವ್ಯಾಸಂಗ ಮಾಡಿದ್ದಾರೆ.

ಏನಿದು ಸಾಂಝೀ ಕಲೆ..
ಇದು ಕಳೆದ ಹಲವು ಶತಮಾನ ಗಳಿಂದ ಭಾರತದಲ್ಲಿ ರೂಢಿಯಲ್ಲಿರುವ ಒಂದು ಬಗೆಯ ಜಾನಪದ ಕಲೆ. ಕಾಗದವನ್ನು ಮನಮೋಹಕ ವಿನ್ಯಾಸಗಳಲ್ಲಿ ಕತ್ತರಿಸಿ,ಮದುವೆ ಮೊದಲಾದ ಶುಭ ಕಾರ್ಯಕ್ರಮಗಳಲ್ಲಿ ಅಲಂಕಾರಕ್ಕೆ ಉಪಯೋಗಿಸುತ್ತಾರೆ. ಈ ಕಲೆ ಭಕ್ತಿಯ ಹೆಸರಿನಲ್ಲಿ ಹುಟ್ಟಿಕೊಂಡ ಕಾರಣ ದೇವಾಲಯಗಳ ಅಲಂಕಾರಕ್ಕೂ ಬಳಕೆಯಾಗುತ್ತದೆ. ಸರಳವಾಗಿ ಹೇಳುವುದಾದರೆ ಇದು ಕಲಾತ್ಮಕವಾಗಿ ಕಾಗದವನ್ನು ಕತ್ತರಿಸುವ ಕಲೆ.ಹುಸೈನ್‌ರವರು ಕಳೆದ ಹಲವು ವರ್ಷಗಳ ಕಲಾ ಬದುಕಿನಲ್ಲಿ ಕಂಡುಕೊಂಡಂತೆ, ಈ ಸಾಂಝೀ ಕಲೆ, ರಂಗೋಲಿಗೂ ಆಧಾರವಂತೆ.‘ಸಾಂಝೀ’ ಪದಕ್ಕೆ ಅತ್ಯಂತ ಖಚಿತವಾದ ಮೂಲ ಇದ್ದಂತಿಲ್ಲ. ಅಲಂಕರಣ ಎಂಬರ್ಥದ ‘ಸಜಾವಟ್’ ಅಥವ ‘ಸಜ್ಜಾ’ ಎಂಬ ಪದ ಇದರ ಮೂಲವಿರಬಹುದು.
ಕೆಲವರು ‘ಸಂಧ್ಯಾ’ ಎಂಬ ಸಂಸ್ಕೃತ ಪದವೇ ಇದರ ಮೂಲ ಪದ ಎನ್ನುತ್ತಾರೆ. ಹಿಂದಿಯ ‘ಸಾಂಜ್’ (ಸಾಯಂಕಾಲ) ಸಹಾ ಈ ಶಬ್ದದ ಹುಟ್ಟಿಗೆ ಕಾರಣ ಇರಬಹುದು. ಬಹಳ ಹಿಂದೆ ಇದು ಬೆಳೆದು ಬಂದ ಮಥುರಾ ಮತ್ತು ಬೃಂದಾವನದ ಭಾಗಗಳಲ್ಲಿ (ಮುಖ್ಯವಾಗಿ ಬೃಜಭಾಷೆ ಉಪಯೋಗದಲ್ಲಿದ್ದ ಭಾಗಗಳಲ್ಲಿ) ಸಂಜೆಯ ವೇಳೆಗೆ ದಂಪತಿಗಳು ಮನೆಯ ಬಾಗಿಲು ಅಥವಾ ಜಗಲಿಯಲ್ಲಿ ಕುಳಿತು ಪರಸ್ಪರ ಸಂಭಾಷಿಸುತ್ತ ರಚಿಸುತ್ತಿದ್ದ ಆಕೃತಿಗಳೆಂದು ಇವು ಹೇಳಲಾಗುತ್ತದೆ.
ರಂಗೋಲಿ ರಚನೆಗೂ ಸಾಂಝಿಯೇ ಮೂಲವಾಗಿತ್ತಂತೆ. ಕಾಗದವನ್ನು ವಿವಿಧ ಮಡಿಕೆಗಳನ್ನಾಗಿ ಮಾಡಿ, ಅದನ್ನು ಪ್ರಮಾಣಬದ್ಧವಾಗಿ ಕತ್ತರಿಸಿ ಅದನ್ನು ನೆಲದ ಮೇಲೆ ಹಾಸಿ ಬಣ್ಣ ಬಣ್ಣದ ರಂಗೋಲಿ ಹುಡಿಯನ್ನು ಉದುರಿಸಿ, ಕಾಗದವನ್ನು ನಿಧಾನವಾಗಿ ಮೇಲೆತ್ತಿದರೆ ಸುಂದರ ರಂಗೋಲಿ ತಯಾರಾದಂತೆ.
ಅಂತಹಾ ಸಾಂಝಿ ಕಲೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಹುಸೈನ್, ಸಾಂಝೀ ಕಲೆಯ ಬಗ್ಗೆ ರಾಜ್ಯಾದ್ಯಂತ ಮಾಹಿತಿ ಪಸರಿಸುವ ಕಾರ್ಯ ನಡೆಸುತ್ತಿದ್ದಾರೆ. ರಾಜ್ಯದ ವಿವಿಧೆಡೆಗಳಲ್ಲಿ ನಡೆದಿರುವ ಇವರ ಕಲಾಕೃತಿಗಳ ಪ್ರದರ್ಶನ ಹಾಗೂ ಸಾಂಝೀ ಕಲಾಶಿಬಿರದ ತರಬೇತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಕಲಾಶಿಬಿರಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದು, ನೂರಾರು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಮೆ ಇವರದು.
ಪ್ರಾಣಿಗಳ ಮುಖವಾಡ, ಮನುಷ್ಯರ ಮುಖದ ಪ್ರತಿಬಿಂಬ, ಬಗೆಬಗೆಯ ಆಕೃತಿಗಳು, ದೀಪ, ಹಕ್ಕಿಗಳು ಹೀಗೆ ಇವರ ಕೈಯಿಂದ ಮೂಡುವ ಕಲಾಕೃತಿಗಳು ನೋಡುಗರನ್ನಂತೂ ಬೆರಗುಗೊಳಿಸುತ್ತದೆ. ತನ್ನ ಕಲಾ ಪ್ರೌಢಿಮೆಗೆ ಈಗಾಗಲೇ ಹಲವಾರು ಬಿರುದು ಸಮ್ಮಾನಗಳನ್ನು ಪಡೆದಿ ರುವ ಹುಸೈನ್‌ರಿಗೆ ಈ ಕಲೆಯನ್ನು ಮತ್ತೊಬ್ಬರಿಗೆ ಹೇಳಿಕೊಡುವುದರಲ್ಲಿ ಹೆಚ್ಚು ಆಸಕ್ತಿ. ಕಲೆ ಮತ್ತು ಕಲಾವಿದರು ಎಲ್ಲಡೆಯಲ್ಲಿ ಇರಬೇಕು ಎಂದು ಬಯಸುವ ಹುಸೈನ್ ಕರೆದಲ್ಲೆಲ್ಲಾ ಹೋಗಿ ತಮ್ಮ ಕಲಾವಂತಿಕೆಯನ್ನು ಪಸರಿಸುವ ಕಾರ್ಯ ಮಾಡುತ್ತಿದ್ದಾರೆ. ಇವರು ನಿಮ್ಮೂರಿಗೂ ಬರಬೇಕಾ.. ನಿಮ್ಮ ಊರಿನ ಮಕ್ಕಳೊಂದಿಗೆ ಬೆರೆಯಬೇಕಾ.. ಹಾಗಿದ್ದರೆ ತಡ ಯಾಕೆ.. 9845153277 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.

ಶುಕ್ರವಾರ, ಸೆಪ್ಟೆಂಬರ್ 21, 2012

ಇವಾಳಜ್ಜಿ ಮತ್ತು ಆದಮಜ್ಜನ ರಂಗಪ್ರವೇಶ - ಇಸ್ಮತ್ ಫಜೀರ್

varthabharathi krupe

ಮಂಗಳೂರಿನ ಉತ್ಸಾಹಿ ಯುವ ರಂಗ ಪ್ರತಿಭೆಗಳು ಸೇರಿಕೊಂಡು ಇತ್ತೀಚೆಗೆ ಕಟ್ಟಿದ ‘ಜರ್ನಿ ಥಿಯೇಟರ್ ಗ್ರೂಪ್’ ತನ್ನ ಪಯಣದ ಮೊದಲ ನಡೆಯನ್ನು ‘ಇವಾಳಜ್ಜಿಯೂ ಆದಮಜ್ಜನೂ’ ಎಂಬ ಪ್ರಖರ ಸ್ತ್ರೀವಾದಿ ಚಿಂತನೆಯ ನಾಟಕದ ಮೂಲಕ ಯಶಸ್ವಿಯಾಗಿ ದಾಖಲಿಸಿದೆ. ಸುಮಾರು ಒಂದು ಗಂಟೆಯ ನಾಟಕಕ್ಕೆ ಗಟ್ಟಿ ಕತೆಯೊಂದರ ಬಲವಿಲ್ಲದಿದ್ದಾಗ್ಯೂ ತಾವು ಪ್ರತಿಪಾದಿಸ ಹೊರಟ ಸ್ತ್ರೀ ಸಮಾನತೆ ಮತ್ತು ಮಹಿಳಾ ಸ್ವಾತಂತ್ರದ ಚಿಂತನೆಯನ್ನು ವಿಶಿಷ್ಟ ಶೈಲಿಯ ಸಂಭಾಷಣೆ ಮತ್ತು ಶ್ರೇಷ್ಠ ಗುಣಮಟ್ಟದ ಅಭಿನಯದ ಮೂಲಕ ಯುವರಂಗ ಪ್ರತಿಭೆಗಳಾದ ಮಂಜುಳಾ ಸುಬ್ರಹ್ಮಣ್ಯ ಮತ್ತು ವಿದ್ದು ಉಚ್ಚಿಲ್ ಸಮರ್ಥವಾಗಿ ಮಂಡಿಸಿದ್ದಾರೆ. ನಾಟಕ ಪ್ರಾರಂಭವಾಗಿ ಹತ್ತು ನಿಮಿಷಗಳ ವರೆಗೂ ಈ ನಾಟಕದ ಕಥೆ ಮತ್ತು ಥೀಮ್ ಏನಿರಬಹುದೆಂದು ಪ್ರೇಕ್ಷಕನಿಗೆ ಹೊಳೆಯುವುದೇ ಇಲ್ಲ. ಆದರೂ ಕೂಡಾ ಮಂಜುಳಾ ಸುಬ್ರಹ್ಮಣ್ಯ ಮತ್ತು ವಿದ್ದು ಉಚ್ಚಿಲ್ ತಮ್ಮ ಅಪೂರ್ವ ಶೈಲಿಯ ಸಂಭಾಷಣೆಯ ಮೂಲಕ ಪ್ರಾರಂಭದಿಂದಲೇ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೊಂದು ಸ್ತ್ರೀವಾದಿ ಚಿಂತನೆಯ ನಾಟಕವಾದರೂ ಈ ನಾಟಕದ ಶೀರ್ಷಿಕೆಯೂ ಬಹಳ ಅರ್ಥಗರ್ಭಿತ.
ಭೂಮಿಯಲ್ಲಿ ಆದಿಪಿತ ಆದಂ ಮತ್ತು ಆದಿಮಾತೆ ಈವ್ ಮೊಟ್ಟ ಮೊದಲಾಗಿ ಬದುಕು ಕಟ್ಟುವಂತೆಯೇ ಮನುಷ್ಯನ ವಾಸನೆಯೂ ಇಲ್ಲದ ದ್ವೀಪದಲ್ಲಿ ಅವರೀರ್ವರ ಹೊರತಾಗಿ ಬೇರೆ ಮಾನವ ಜೀವವಿರುವುದಿಲ್ಲ. ಈ ನಿಟ್ಟಿನಲ್ಲಿ ‘ಇವಾಳಜ್ಜಿಯೂ ಆದಮಜ್ಜನೂ’ ಶೀರ್ಷಿಕೆ ಅತ್ಯಂತ ಸೂಕ್ತವಾಗಿಯೇ ಇದೆ. ಹೆಣ್ಣಿನ ಒಡಲಾಳದ ಬೇಗುದಿಯನ್ನು ಮನ ಮುಟ್ಟುವಂತೆ ಅಭಿನಯಿಸಿ ಮಂಜುಳಾ ತನ್ನ ಪಾತ್ರ ಕ್ಕೆ ಜೀವ ತುಂಬಿದ್ದಾರೆ. ಆದರೆ ಮನುಷ್ಯ ಸಂಕುಲದ ಬೆಳವಣಿಗೆಯಲ್ಲಿ ಸ್ತ್ರೀ ಕುಲದ ಅಗತ್ಯ ಮತ್ತು ಮಹತ್ವದ ಕುರಿತಂತೆ ನಡೆಯುವ ಸಂಭಾಷಣೆಯಲ್ಲಿ ಸ್ತ್ರೀ ಪಾತ್ರಧಾರಿಯ ಧ್ವನಿಯಲ್ಲಿ ಅಗತ್ಯಕ್ಕಿಂತ ತುಸು ಹೆಚ್ಚಿನ ಏರಿಳಿತವಿತ್ತು.
ಒಂಟಿ ಮಹಿಳೆಯು ಬದುಕನ್ನು ಎದುರಿಸುವ ರೀತಿಯನ್ನು ನಟಿ ಸಮರ್ಥವಾಗಿ ಅಭಿವ್ಯಕ್ತಿಸಿ ತನ್ನ ಪ್ರತಿಪಾದನೆಗೆ ಹೆಚ್ಚಿನ ತೂಕ ನೀಡಿದ್ದಾರೆ. ಇಲ್ಲಿ ಗಂಡಿನ ಪಲಾಯನವಾದ, ಮತ್ತು ಹೆಣ್ಣಿನ ಸ್ಥಾಯಿಭಾವದ ಕುರಿತ ಅಭಿವ್ಯಕ್ತಿ ಯೂ ಸುಂದರವಾಗಿ ಮೂಡಿಬಂದಿದೆ. ನಿರ್ಜನ ದ್ವೀಪದಲ್ಲಿ ಒಂಟಿಯಾಗಿ ಬದುಕು ಸಾಗಿಸುವ ಹೆಣ್ಣು ತನಗೊಂದು ಸಂಗಾತಿ ಸಿಕ್ಕಾಗ ಅಲ್ಲೇ ಮನು ಕುಲದ ಬೆಳವಣಿಗೆಯ ಕುರಿತಂತೆ ಯೋಚಿಸುವುದು ಹೆಣ್ಣಿನ ಸ್ಥಾಯಿ ಭಾವವಾದರೆ, ಮನುಷ್ಯವಾಸವಿಲ್ಲದ ದ್ವೀಪದಿಂದ ಒಮ್ಮೆ ಪಾರಾಗಿ ಹೋಗುವುದು ಹೇಗೆಂಬ ಗಂಡಿನ ಚಿಂತೆಯೇ ಇಲ್ಲಿ ಕಾಣಸಿಗುವ ಪಲಾಯನವಾದ.
ಸ್ತ್ರೀ ಸಮಾನತೆಯ ಕುರಿತ ಸಂಭಾಷಣೆಯಲ್ಲಿ ಕಟುವಾಗಿಯೇ ಮಾತನಾಡುವ ನಟಿ ಅದರ ಮಧ್ಯೆಯೂ ಸ್ತ್ರೀ ಸಹಜವಾದ ವಾತ್ಸಲ್ಯವನ್ನು ಅಭಿವ್ಯಕ್ತಿಸುವಲ್ಲಿ ಯಶ ಕಂಡಿದ್ದಾರೆ. ಸಂಸಾರದ ಬಂಧನದಲ್ಲಿ ಕೂಡುವ ಕುರಿತಂತೆ ಗಂಡಿನ ತವಕವೂ, ತಾಯ್ತನಕ್ಕೆ ತುಡಿಯುವ ಹೆಣ್ಣಿನ ಅಭಿಲಾಷೆಯೂ ಇಲ್ಲಿ ವಿಭಿನ್ನ ರೀತಿಯಲ್ಲಿ ಕಾಣಸಿಗುತ್ತದೆ.
ಒಂಟಿ ಹೆಣ್ಣು ಮುಂದೆ ತನಗೆ ಹುಟ್ಟಲಿರುವ ಮಗು ಹೆಣ್ಣಾಗಲಿ ಎಂದು ಆಶಿಸುವ ಮೂಲಕ ಸ್ತ್ರೀ ಅಬಲೆಯಲ್ಲ ಎನ್ನುವ ತನ್ನ ವಾದವನ್ನು ಮತ್ತೆ ಪುಷ್ಟೀಕರಿಸುತ್ತಾಳೆ. ಇದು ಸ್ತ್ರೀ ಕುಲದ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಬಲ ಪ್ರತಿಪಾದನೆಯೂ ಹೌದು. ಅತ್ಯಂತ ಸರಳ ವೇಷಭೂಷಣ ಮತ್ತು ಸರಳ ರಂಗಸಜ್ಜಿಕೆಯ ಮೂಲಕ ಕಡಿಮೆ ಖರ್ಚಿನಲ್ಲಿ ರಂಗಪ್ರದರ್ಶನ ಏರ್ಪಡಿಸಿದ ವಿದ್ದು ಉಚ್ಚಿಲ್‌ರ ಕ್ರಿಯಾಶೀಲತೆ ನಾಟಕದುದ್ದಕ್ಕೂ ಗಮನ ಸೆಳೆಯು ತ್ತದೆ.ಕೆಲವೊಂದು ಇತಿಮಿತಿಗಳಿದ್ದಾಗಿಯೂ ಯುವ ರಂಗ ಪ್ರತಿಭೆಗಳ ಸಮ್ಮಿಲನದ ಈ ನಾಟಕವನ್ನು ಒಂದು ಉತ್ತಮ ನಾಟಕವೆನ್ನಲಡ್ಡಿಯಿಲ್ಲ.

 

ಭಾನುವಾರ, ಸೆಪ್ಟೆಂಬರ್ 9, 2012

ನಗರ ಭ್ರಮೆಯೂ…ಬಹುಮುಖಿ ನಾಟಕವೂ

ನಗರ ಜೀವನದ ಹುಸಿಸಂಬಂಧಗಳನ್ನ,ಭಂಡತನಗಳನ್ನ. ಢಾಂಬಿಕ ನಡೆಗಳನ್ನ ತೆರೆದಿಡುವ ನಾಟಕಗಳನ್ನು ಕನ್ನಡದಲ್ಲಿ ಮೊದಲು ಬರೆಯಲು ತೊಡಗಿದವರು ಲಂಕೇಶರು. ಪಾತ್ರಗಳು ಒದ್ದಾಡುವ ಹುಂಬುತನದಲ್ಲಿಯೇ ನಗರ ಜೀವನದ ಅಸ್ತವ್ಯಸ್ತ ಬದುಕಿನ ಪಲ್ಲಟಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಅವರ ಕ್ರಮ ನಾಟಕಗಳಿಂದ ನಾಟಕಗಳಿಗೆ ಜಿಗಿಯುತ್ತ ನಾಟಕೀಯತೆ ಮತ್ತಷ್ಟು ಬಿಗಿಗೊಂಡು ಸಂಕೀರ್ಣವಾದ ವಿಭಿನ್ನಗುಣವುಳ್ಳ ನಾಟಕಗಳು ಲಂಕೇಶರಿಂದ ಸೃಷ್ಟಿಗೊಂಡವು. ಆದರೆ ಅವರು ಮೊದಮೊದಲು ಬರೆದ ನಾಟಕಗಳ ಕೇಂದ್ರ ಪಾತ್ರದ ಸಂದಿಗ್ಧತೆ ನಂತರದ ನಾಟಕಗಳಲ್ಲಿ ವ್ಯಷ್ಟಿಪ್ರಜ್ಞೆಯಿಂದ ಸಮಷ್ಟಿಪ್ರಜ್ಞೆಗೆ ದಾಟಿದಂತೆ ಕಾಣುತ್ತವೆ ಹೊರತು ಲಂಕೇಶರ ಯಾವ ನಾಟಕಗಳೂ ನಾಟಕೀಯ ಭಾವತೀವ್ರತೆಯನ್ನು ಬಿಟ್ಟುಕೊಟ್ಟಿಲ್ಲ. ಹಾಗಾಗಿ ಅವರ ಎಲ್ಲ ನಾಟಕಗಳೂ ಅತ್ತ್ಯುತ್ತಮವಾಗಿಯೇ ಇವೆ. ಅದೆಷ್ಟೋ ವರ್ಷಗಳಾದ ಮೇಲೆ ಅಂಥದೇ ಸೊಗಡಿನ ನಾಟಕವೊಂದು ಕನ್ನಡ ಸಾಹಿತ್ಯಲೋಕದಲ್ಲಿ ಬಂದಿದೆ.
ಅದೇ..! ನಗರ ಜೀವನದ ನಾಗರೀಕ ಜಗತ್ತಿನ ಗೆಲ್ಲುವ ಕುದುರೆಗಳೂ, ಬದುಕಲು ಹಂಬಲಿಸುವ ಸಾಮಾನ್ಯನೂ, ಅಸ್ತಿತ್ವದ ಬೇರು ಗಟ್ಟಿಗೊಳಿಸಲು ಒದ್ದಾಡುವ ವ್ಯಕ್ತಿಗಳು, ಕಥನ ಕಟ್ಟುವ ಕಲೆಗಾರಿಕೆಯೂ… ಒಂದೇ ವಸ್ತುವಿನ ಒಳಗೆ ಅಡಕಗೊಂಡ ಪಾಕದಂತೆ ವಿವೇಕ ಶಾನಭಾಗರು ತಮ್ಮ ಬಹುಮುಖಿ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಕಥನ ತಂತ್ರ ಬಹಳ ಸರಳ ಎನ್ನಿಸಬಹುದಾದ ರೀತಿಯಲ್ಲಿದ್ದಾಗ್ಯೂ ದೃಶ್ಯಗೊಳ್ಳುವ ಹಂತದಲ್ಲಿ ನಟ-ನಿರ್ದೇಶಕ ತೊಡಗಿಕೊಳ್ಳುವುದು – ಅಂದರೆ ಹೆಚ್ಚು ಕಡಿಮೆ ಪಾತ್ರದ ಆವರಣವೊಂದು ತಯಾರಾಗುವುದು – ಶೇಖರ ಕೆಂಪೇಗೌಡ ಆದ ಹಾಗಿರುತ್ತದೆ. ಒಂದು ಪಾತ್ರ ಹೊರಡುವ ಹಾದಿಯಲ್ಲಿ ಮತ್ತೊಂದು ಕಥನದ ಪಾತ್ರ ಎದುರಾಗುತ್ತದೆ. ತ್ರಿವಿಧ ವಿಕಾರಗಳು ಸೂತ್ರಿಕರಿಸಲ್ಪಟ್ಟ ನಾಟಕದ ಬಂಧದೊಳಗೆ ಒದಗಿಬಂದಿದ್ದಾವೆ ಹೊರತು ಖಾಲಿಯಾದ ಟೂತ್ ಪೇಸ್ಟ ಹಾಗೆ ಒತ್ತಿ ಬಂದಿಲ್ಲವೆನ್ನುವುದು ರಚನಾವಿನ್ಯಾಸದಲ್ಲಿಯೇ ಕಾಣಬರುತ್ತದೆ. ನಾಟಕದ ಆರಂಭವೇ ಕ್ರಿಯಾತ್ಮಕವಾಗಿ ಸಂಜಯನನ್ನು ಸ್ಟೋರಿ ಹುಡುಕಿಕೊಂಡು ಬರಬೇಕಾದ ಸಂಕಷ್ಟಕ್ಕೆ ನೂಕುತ್ತದೆ. ಬಿರಾಜದಾರನ ಅಂಧಕಾಲತ್ತಿನ ಮೊದಲ ವರದಿಯ-ದುರ್ಗಲಾಲ್ ಸ್ಟೋರಿ- ಮಾದರಿಯಲ್ಲಿ ಹೊಸ ಹುಡುಗರೂ ಸ್ಟೋರಿ ಮಾಡಬೇಕೆಂಬುದು ಹೊಸ ಹುರುಪಿಗೆ ಕಿರಕಿರಿಯಾದರೂ ತಲೆ ಮ್ಯಾಲೆ ಹೊಡೆದಂತ ಸ್ಟೋರಿ ಕೊಡಬೇಕು ಅನ್ನೋದು ಮುಖ್ಯ ಆಗುತ್ತದೆ.
ಜೀವನ; ಹಿಸ್ಟರಿ ಮಿಸ್ಟರಿ ಅಂತಿದೆ ಹೋತ. ಅದೇ ಏನಾದರೂ ಮಾಡು. ಬೆಂಗಳೂರಲ್ಲೇನೂ ಸಿಗಲ್ಲ. ಹಂಪಿಗೋ ಮೈಸೂರಿಗೋ ಹೋಗು. ಯೂ ಮೇ ಫೈಂಡ್ ಯುವರ್ ದುರ್ಗಲಾಲ್. ಬೇಕಾದರೆ ಆ ಸ್ಟೋರೀನ ಓದಿಕೊಂಡು ಹೋಗು. ನನ್ನ ಹತ್ತಿರ ಜರಾಕ್ಷ ಇದೆ.
ಈ ಮಾತು ಸಂಜಯನಿಗೆ ಮುಂದಲ ದೃಶ್ಯದಲ್ಲಿ ಸಿಗುವ ಕೆಂಪೇಗೌಡನನ್ನ ನಂಬಲು ಪ್ರೇರಣೆ ಕೊಡುತ್ತದೆ. ಸಂಪಾದಕನ ತಲೆ ಒಳಗಿದ್ದದ್ದು ಹಿಸ್ಟರಿ ಅಂತ ಗೊತ್ತಾದ ಗೆಳೆಯನ ಸಲಹೆ ನಾಟಕ ಬೀಜಾಂಕುರ ಮಾಡುತ್ತದೆ. ಗುಡಿಗಾರ ಗಲ್ಲಿಯ ಸಂಜು ಬೇರು ಬಿಡಿಸಿಕೊಳ್ಳುವ ತವಕದಲ್ಲಿ ತನಗೆ ತಾನೆ ಕಗ್ಗಂಟು ಸುತ್ತಿಕೊಂಡು ನಗರ ಜೀವನದ ನಾನಾ ಮುಖಗಳ ಬೆನ್ನು ಬೀಳುತ್ತಾನೆ. ಆಗ ತೋರುವ ಬಣ್ಣದ ಬಹುಮುಖಗಳು ಒಂದೊಂದಾಗಿ ತಮ್ಮ ಕತೆಗಳನ್ನ ಹೇಳಿಕೊಳ್ಳುತ್ತವೆ. ಸಂಪಾದಕ ಬಿರಾಜದಾರ, ಶೇಖರ, ನಾಯಕ್, ಜಕ್ಕೂಜಿ ಅಲ್ಲದೆ ಹಂದರದಲ್ಲಿ ಕಥನಕ್ಕೆ ಪೂರಕವಾಗಿ ಬರುವ ಪಾತ್ರಗಳ ಸೋಗೂ ಒಂದರ ಹಿಂದೆ ಒಂದು ಓಡುತ್ತದೆ. ಮಾನಸಿಕ ನೆಮ್ಮದಿಯನ್ನೂ ಮಾರುವ ದಂಧೆಯ ರೂಪ ಬದಲಾಗಿದೆ. ನಂಬುವವರ ನಂಬಿಕೆಗೆ ತಕ್ಕ ಕತೆಗಳು ಊರ್ಮಿಳೆ ಅಡುಗೆ ಮಾಡಿದಷ್ಟೆ ಸುಲಭದ್ದಾಗಿದೆ, ನವರಸಗಳು ಮೇಳೈಸಿಕೊಂಡು ತಯಾರಾದ ವರದಿ ಪತ್ರಿಕೆಯ ಆಫಿಸ ತಲುಪುವ ಹೊತ್ತು ಮತ್ತು ಬಿರಾಜದಾರನ ಅದೃಷ್ಟ, ಸಂಜಯನ ನಶೀಬು,ಜಕ್ಕೂಜಿಯ ಲಕ್ಕು,ಪರದೇಶಿ ಶೇಖರನ ಪರಿಸ್ಥಿತಿಗಳು ಹೀಗೆ ಒಟ್ಟು ನಾಟಕದಲ್ಲಿ ವ್ಯಾಪಾರದ ಬುದ್ದಿಯನ್ನು ಬಲಗೊಳಿಸುತ್ತಿರುವ ಜಗತ್ತು ಅನಾವರಣಗೊಳ್ಳುತ್ತದೆ. ಇಲ್ಲಿ ಎಲ್ಲರ ಜುಟ್ಟು ಬೇರೊಬ್ಬನ ಕೈಯಲ್ಲಿ ಸಿಕ್ಕಿದೆ. ಈ ಎಲ್ಲ ಪಾತ್ರಗಳ ಅಂಕೆಯನ್ನು ಏಳು ಸಮುದ್ರದಾಚೆಯ ರಕ್ಕಸರ ಕಾವಲಿನ, ಏಳು ಹೆಡೆಯ ಸರ್ಪಗಾವಲಿನ ಬಂಧನದಲ್ಲಿ ಇಟ್ಟಿಲ್ಲ ಅನ್ನೋದು ವಾಸ್ತವದ ಅರಿವಾಗಿದೆ.
ಭ್ರಮೆಯ ಭಾವ ಲೋಕವೇ ಪೀಕಲಾಟದಲ್ಲಿ ಬಿದ್ದದ್ದು ಕಂಡರು ಯಾವುದು ಯಾವುದನ್ನು ನಿರ್ದೇಶಿಸುತ್ತಿದೆ ಅನ್ನುವುದು ಮಾತ್ರ ಅಸ್ಪಷ್ಟ. ಇಲ್ಲಿ ಊಹಾಪೋಹಗಳ ನಡುವೆ ಪೇಪರ್ ಹಾಸಿಕೊಂಡು ಕುಳಿತಿರುವ ಸಂಪಾದಕ, ಪಾರ್ಟಿ ನಡೆವಲ್ಲಿ ಇನವೆಷ್ಟಿಗೇಶನ್ ನಡೆಸುವ ನಾಯಕ್, ಕನಸು ಮತ್ತು ಪ್ರೀತಿಗಾಗಿ ಕನವರಿಸುವ ಶಕ್ಕೂ ಶೇಖರ, ಉರ್ಮಿಳೆ ಸಂಜೂ, ಜಕ್ಕೂ ಮತ್ತವನ ಮಹಿಳಾ ಭಕ್ತಗಣ ಎಲ್ಲರೂ ಅಸ್ವಸ್ಥರಾಗಿದ್ದೂ ಸ್ವಾಸ್ಥ್ಯ ಜೀವನ ಅರಸುತ್ತಿದ್ದಾರೆ. ಗದ್ದಲದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಂಜಯನ ಅಸಹಾಯಕತೆಗೆ ಖಾಸಾ ಗೆಳೆಯ ಜಗನ್ನಾಥ ಆಸರಾಗುತ್ತಾನೆ. ಇಲ್ಲಿ ಊರಿನ ಬೇರೊಂದು ಒರತೆಯಾಗಿ ನಿಲ್ಲುತ್ತದೆ, ಆದರೆ ಊರಿನ ಕೊಂಡಿಯನ್ನೇ ಕಳಚಿಕೊಂಡ ಮತ್ತೊಂದು ಪಾತ್ರದ ತಳಮಳಕ್ಕೆ ಜಗನ್ನಾಥ ಜಕ್ಕೂಜಿಯಾಗಿ ವರ್ತಿಸುತ್ತಾನೆ. ಅರೆಸ್ಟ್ ಹಿಮ್ ಎಂಬ ಸೂಚನೆ ಸಾಕು. ಆಸರಿಲ್ಲದ ಬಳ್ಳಿ ಯಕಃಶ್ಚಿತ್ ಹುಳುವಾಗಿ ಜೇಡರ ಬಲಿಯೊಳಗೆ ಸಿಕ್ಕಿಬೀಳುತ್ತದೆ.
ಸಾಮಾನ್ಯನೊಬ್ಬ ವ್ಯವಸ್ಥೆಗೆ ವ್ಯಂಗ್ಯವಾಗಿ, ತುಘಲಕನಿಗೆ ಪ್ರತಿಯಾಗಿ -ಆಝೀಜ್- ಕಾಣಿಸಿಕೊಳ್ಳುವ ನಾಟಕೀಯತೆ ಇಲ್ಲಿ ಧ್ವನಿಸುವ ಶೇಖರನಲ್ಲಿ ಸಾಧ್ಯವಾಗದಿರುವುದು ಮೋಜಾಗಿದೆ. ಆತ ಬಂಧನಕ್ಕೊಳಗಾಗಿದ್ದಾನೆ. ನಿದ್ದೆಗೆ ಜಾರಿರುವ, ಕಿವುಡಾಗಿರುವ ಅನುಕಂಪಕ್ಕೆ ತನ್ನ ಹೊಸಹೊಸ ರೂಪದ ಕತೆಗಳನ್ನ ಹೇಳಿಕೊಳ್ಳುತ್ತಲೇ ಇರುವಾಗ ಥಟ್ಟನೆ ಕತ್ತಲಾವರಿಸಿಕೊಳ್ಳುವವರೆಗೂ ಸಾಧ್ಯತೆಗಳನ್ನ ಹುಡುಕುತ್ತ ಹೋಗುತ್ತಾನೆ. ಬಿಗಿಯಾದ ನಾಟಕದ ಬಂಧದಲ್ಲಿ ಶಹರ ಜೀವನಕ್ರಮ ಬೋಗಸ್ ಆಗಿ ದಾಖಲಾಗುತ್ತದೆ. ಒಟ್ಟು ಈ ಕಾಲಘಟ್ಟದ ಅತಂತ್ರ ಅಸ್ಥಿರತೆಯನ್ನು, ಪೊಳ್ಳುತನದ ಪುರಾಣವನ್ನು ನಾಟಕ ಆಪ್ತವಾಗಿ ಚಿತ್ರಿಸುತ್ತದೆ.
————-ಮಹಾದೇವ ಹಡಪದ.

ಕನ್ನಡ ನಾಟಕ – ಪರಂಪರೆ ಆಗಬೇಕು

ನಾಟಕದ ಬಗ್ಗೆ ಎಲ್ಲರೂ ಮಾತಾಡಲು ಸುರುಮಾಡುತ್ತಾರೆ, ಕೆಲವರು ಹಾಗಿರಬೇಕಿತ್ತು ಹೀಗಿರಬೇಕಿತ್ತು ಎಂಬಿತ್ಯಾದಿ ಆಶಾವಾದದ ಉಚಿತ ಸಲಹೆಗಳನ್ನು ಕೊಡಲು ಪ್ರಾರಂಭಿಸುತ್ತಾರೆ. ನಾಟಕದ ತಳಹದಿ ಯಾವ ರೂಪದಲ್ಲೇ ಇರಲಿ ತಮ್ಮ ತಲೆಯೊಳಗಿನ ಚಿತ್ರದ ಗಡಿ ದಾಟಿಕೊಂಡು ನಾಟಕ ನೋಡುವುದೇ ಇಲ್ಲ. ಹಾಗೆ ಮಾತಾಡುವವರು ಚಿತ್ರಗಳ ಬಗ್ಗೆ ಮಾತಾಡುವುದಿಲ್ಲ, ಕವಿತೆಗಳ ಬಗ್ಗೆ ಮಾತಾಡುವುದಿಲ್ಲ ಶಿಲ್ಪಗಳ ಕುರಿತಾಗಿ ಮಾತಾಡುವುದಿಲ್ಲ..! ಆಶ್ಚರ್ಯವೆಂದರೆ ನಾಟ್ಯಭಂಗಿಗಳ ಬಗ್ಗೆ ಸಹಿತ ವಿವೇಚನೆ ಮಾಡುವುದಿಲ್ಲ. ಸಾಧಾರಣವಾಗಿ ನಾಟಕ ನೋಡಿದ ಮೇಲೆ ಒಂದು ಸಣ್ಣ ಚರ್ಚೆ ಇಟ್ಟಾಗ ಪ್ರೇಕ್ಷಕರಲ್ಲಿ ಕೆಲವು ಗೊಂದಲಗಳು ಏಳುತ್ತವೆ. ಅದ್ಯಾವದೋ ನೆನಪಿನ ಸುರುಳಿಯಲ್ಲಿ ಇಡೀ ನಾಟಕ ಗ್ರಹಿಸಿರುತ್ತಾರಾದ್ದರಿಂದ ಅದೇ ತೆರನಾದ ಭಾವಪ್ರಪಂಚದ ಒಳಹೊಗಲು ಪ್ರಯತ್ನಿಸುತ್ತಿರುತ್ತಾರೆ. ಒಮ್ಮೆ ರಸವತ್ತಾಗಿ ಅಭಿನಯಿಸಲ್ಪಟ್ಟ ನಾಟಕವೊಂದು ಮತ್ತೊಮ್ಮೆ ಅಷ್ಟೆ ರಸವತ್ತಾಗಿ ತಟ್ಟಬೇಕಾದ್ದು ಏನೂ ಇರುವುದಿಲ್ಲ. ಅದು ಸಂಪೂರ್ಣ ನಟ/ನಟಿಯ ಅಭಿವ್ಯಕ್ತಿಯಾಗಿ ರೂಪಗೊಳ್ಳುವುದು ಭಾವತುಂಬಿ ಅಬಿನಯಿಸಿದಾಗ ಮಾತ್ರ… ಆದರೆ ನಾವು ದಿನನಿತ್ಯದ ಬದುಕಿನಲ್ಲಿ ಅಂಥ ಭಾವಪೂರ್ಣವಾದ ಕ್ಷಣಗಳನ್ನ ಕಂಡಿದ್ದ ಕಾರಣಕ್ಕಾಗಿ ನಾಟಕ ನೋಡುಗನೊಂದಿಗೆ ಸಹ ಪ್ರಯಾಣ ಆರಂಭಿಸಿಬಿಟ್ಟಿರುತ್ತದೆ. ಅಷ್ಟು ಸಹಜವಾಗಿ ನಮ್ಮ ಒಳ-ಹೊರಗೇಕಾಗಿ ನಾಟಕದ ಎರಡು ಸಂವಹನಗಳು ಸಾಧ್ಯವಾಗುತ್ತಿರುತ್ತವೆ. ಅಂಥ ಸಂವಾದ ಬೇರೆ ಯಾವ ಮಾಧ್ಯಮದಿಂದ ಸಾಧ್ಯವಾಗಲಾರದು ಎಂದು ಹೇಳಲಾಗದು ಯಾಕಂದ್ರೆ ಆ ಎಲ್ಲ ಕಲಾಪ್ರಕಾರಗಳು ತನ್ನ ಅರಿವಿನ ವಿಸ್ತಾರದಲ್ಲಿ ಕೊಡುಕೊಳ್ಳುವ ಒಂದು ವ್ಯಾಪಾರ ಮನೋಧರ್ಮವನ್ನು ಬೆಳೆಸಿಕೊಂಡಿರುತ್ತವೆ.
ಈಗ ಹೊಸ ಹುಡುಗರು ಸಾಲುಗಟ್ಟಿ ನಾಟಕಕ್ಕೆ ಬರುತ್ತಿದ್ದಾರೆ. ವರ್ಷವೊಂದರಲ್ಲಿ ಕನ್ನಡ ರಂಗಭೂಮಿಯಲ್ಲಿ ಕನಿಷ್ಟ ಎಂಬತ್ತು ಜನ ಯುವಕರು ನಾಟಕದ ವಿಷಯದ ಮೇಲೆ ಡಿಪ್ಲೋಮ ಪದವಿ ಪಡೆದುಕೊಳ್ಳುತ್ತಾರೆ. ಇದೊಂದು ಸಂತಸದ ಸಂಗತಿ ಆದರೂ ಅವರ ಅಧ್ಯಯನ ಕ್ರಮದಲ್ಲಿ ಸಹಜತೆಗೆ ಹೊರತಾದ ಕೆಲ ಕೋತಿ ಚೇಷ್ಟೆಗಳು, ತಂತ್ರಗಳು, ಸಿದ್ಧಮಾದರಿಯ ಅಭಿನಯಗಳು ರೂಢಿಯಾಗಿಬಿಡುತ್ತವೆ. ಕನ್ನಡ ಅಕ್ಷರಗಳ ಸ್ಪಷ್ಟ ಉಚ್ಛಾರಣೆ ಕಲಿಸುವುದರೊಂದಿಗೆ ದೇಹಸಂಸ್ಕಾರ ಮಾಡಿಸುವುದರೊಳಗೆ ಅವರ ಕಲಿಕೆಯ ಆಸಕ್ತಿ ನಿಂತು ಹೋಗಿಬಿಟ್ಟಿರುತ್ತದೆ. (ಇದು ನನಗು ಅನ್ವಯಿಸುತ್ತದೆ) ಮುಂದೆ ಅವರ ಮುಖದ ಮುಂದಿನ ಕನಸುಗಳೆಲ್ಲ ಬೆಂಗ್ಳೂರು ಒಳಗೊಂಡು ರಚಿತವಾಗುವ ಕಾರಣಕ್ಕೋ ಏನೋ ಬಂದ ಯುವಕರು ಹಾಗೆ ಎಲ್ಲೋ ಕಾಣದಾಗಿಬಿಡುತ್ತಾರೆ. ಆ ಫ್ರೇಮ್ ಸಂಸ್ಕೃತಿಗೆ ಬೇಕಾದ ಅಭಿನಯದ ಮಾದರಿಯನ್ನ ಅವರು ಕಲಿಯದ ಕಾರಣಕ್ಕಾಗಿ ಏನೋ ಅವರು ಅಷ್ಟಾಗಿ ಸ್ಕ್ರೀನ್ ಮೇಲೆ ಕಾಣಿಕೊಳ್ಳುವುದಿಲ್ಲ. ಇದೆಲ್ಲ ಆಗುವ ಹೊತ್ತಿಗೆ ಅವರ ಉತ್ಸಾಹವೇ ಹಿಂಗಿ ತಾಂತ್ರಿಕ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿಬಿಡುತ್ತಾರೆ. ನೋಡಿ ರಂಗದ ಮೇಲೆ ನಿಂತು ನಾಟಕ ಮಾಡುವ ಹೊತ್ತಲ್ಲಿ ಅವರ ಅಭಿವ್ಯಕ್ತಿಗೆ ಬಹು ಆಯಾಮಗಳು ಒದಗಿ ಬಂದು ಪ್ರೇಕ್ಷಕರೊಳಗೆ ಹತ್ತೆಂಟು ಪ್ರಶ್ನೆಗಳನ್ನು ಪ್ರಚೋದಿಸಿದ ನಟ ಹೀಗೆ ಎಲ್ಲೋ ಕಾಣದಾದಾಗ ಕನ್ನಡ ರಂಗಭೂಮಿ ಪರಂಪರೆ ಆಗಿ ಉಳಿಯುವುದಾದರೂ ಹೇಗೆ? ಅದಿರಲಿ ನಟನೊಬ್ಬ ಹತ್ತೆಂಟು ವರ್ಷಗಳ ಕಾಲ ಬರೀ ನಾಟಕದ ಸಾಧನೆಯೊಳಗೆ ಬದುಕಿ ಉಳಿಯುವುದು ಕಷ್ಟ, ಯಾವನೋ ಒಬ್ಬ ಹಾಗೆ ಬದುಕುತ್ತೇನೆಂದು ಹಠ ಹಿಡಿದರೂ ಅವನ ಸ್ವಂತ ಬದುಕಿನ ಸಂಕಟಗಳನ್ನು ಯಾವ ಮುಖವಾಣಿಯಲ್ಲಿ ಹೇಳಿಕೊಳ್ಳಬೇಕು? ಇನ್ನು ಕೆಲ ನಟರು ಹೊಟ್ಟೆ-ಬಟ್ಟೆಗೆ ಬೇರೆ ಬೇರೆ ಕೆಲಸಗಳನ್ನು ನಚ್ಚಿಕೊಂಡು ಬಿಡುವಿನ ಸಂದರ್ಭದಲ್ಲಿ ನಾಟಕ ಮಾಡುತ್ತ ಬಂದಿದ್ದಾರೆ. ಅಂಥವರು ಸಹಿತ ಈ ತರಬೇತಾದ ಹೊಸ ಹುಡುಗರನ್ನ ಕೊಂಚ ‘ಏನು ಮಾಡುತ್ತಾರೋ ನೋಡೋಣ’ ಎಂಬ ವಕ್ರದೃಷ್ಟಿಯಲ್ಲಿ ನೋಡುವಾಗ ಅವರ ಪರಂಪರೆ ಇವರಿಗೆ ಬಳುವಳಿಯಾಗಿ ಬರುವುದಾದರೂ ಹೇಗೆ ಸಾಧ್ಯ? ಇನ್ನು ತರಬೇತಾದ ಕೆಲವರು ಹವ್ಯಾಸವೆಂದು ನಾಟಕ ಮಾಡುವವರನ್ನು ಗರ್ವದಿಂದ ನೋಡುವುದೂ ಒಂದಿದೆ… ಅದು ತಾವು ಆ ಕುರಿತಾಗಿ ತಿಳುವಳಿಕೆ ಉಳ್ಳವರು ಎಂಬ ಸೊಕ್ಕು ಅದು-ಹಾಗಂದ ಮಾತ್ರಕ್ಕೆ ಅವರನ್ನು ದೂರಿಕೊಂಡು ಅವರು ಅಲ್ಲಿ ಓದಿದವರು ಇವರು ಇಲ್ಲಿ ಓದಿದವರು ಎಂದು ಮಾತೃ ಸಂಸ್ಥೆಯೊಂದಿಗಿನ ಇವರ ಹೊಟ್ಟೆಕಿಚ್ಚನ್ನ ಹೊಸ ಹುಡುಗರ ಮೇಲೆ ತೀರಿಸಿಕೊಳ್ಳಲು ಪ್ರಯತ್ನಿಸುವುದು ಇದ್ದೆ ಇರುತ್ತದೆ. ಇದೆಲ್ಲದರ ನಡುವೆ ಹೊಸ ತಲೆಮಾರಿನ ನಮಗೆಲ್ಲ ನಾಟಕ ಪರಂಪರೆಯಾಗಿ ಉಳಿಸಬೇಕೆಂಬ ಆಶಯವೇನೋ ಇದೆ..1 ಆದರೆ ಕನ್ನಡದ ನಟನಾ ಪರಂಪರೆ ಗಟ್ಟಿಯಾಗುಳಿಯಲು ನಮ್ಮ ನೆಲದ ಒಂದು ಅಭಿನಯ ಪದ್ಧತಿ ಕುರಿತಾದ ಸಂಶೋಧನೆ ಆಗಲಾರದ ಹೊರತು ಮತ್ತು ನಾಟಕದಲ್ಲಿ ನಟಿಸುವ ನಟನಿಗೆ ಪಗಾರ ಸಿಗದ ಹೊರತು ನಾಟಕ ಪರಂಪರೆಯಾಗಿ ಉಳಿಯಲಾರದು. ನಾಲ್ಕು ನಾಟಕ ಮಾಡಿದವ ನಿರ್ದೇಶನ ಮಾಡಲು ಆರಂಭಿಸುತ್ತಾನೆ. ತನ್ನದೇ ಆದ ಸರ್ಕಲ್ಲೊಂದರ ಮೂಲಕ ಪ್ರಚಾರಕ್ಕೆ ಬಿದ್ದು ಶ್ರೇಷ್ಟತೆಯ ಗುಂಗಿನಲ್ಲಿ ಮುಳುಗಿಬಿಡುತ್ತಾನೆ. ಅಂಥವರೆಲ್ಲ ನಾಟಕ ಪರಂಪರೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಾರರು. ಹೌದು ನಾಟಕ ಪರಂಪರೆ ಆಗಲೇಬೇಕು
mahadev hadapad
             

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...