ಸೋಮವಾರ, ನವೆಂಬರ್ 11, 2013

ಮಕ್ಕಳೊಂದಿಗಿನ ರಂಗ ಪಯಣ ಕೆಲವು ಸಿಹಿ ಸಿಹಿ ನೆನಪುಗಳು



ರಂಗಭೂಮಿಯ ನನ್ನ ಇದುವರೆಗಿನ ಪಯಣದಲ್ಲಿ ಅತಿ ಹೆಚ್ಚು ಅವಧಿಯನ್ನು ನಾನು ಕಳೆದದ್ದು ಮಕ್ಕಳೊಂದಿಗೆ. ಬದುಕಿನ ಸಂಭ್ರಮ ಹೆಚ್ಚಿಸಿದ, ಆಟಕಟ್ಟು, ಈ ನಡೆಯಲ್ಲಿ ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆ ಒಂದಾಗಿ ಬೆರಗು ಹುಟ್ಟಿಸಿದ ಕ್ಷಣಗಳು ಹಲವು. ಅವುಗಳಲ್ಲಿ ಕೆಲವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೇನೆ.
೧೯೯೭ರ ಸಂದರ್ಭ. ನಾನು ಹಾವೇರಿ ಜಿಲ್ಲೆಯ ಹಿರೇಕೆರೂರಿನ ಕಚವಿ ಎಂಬ ಹಳ್ಳಿಯಲ್ಲಿ ಪ್ರೌಢಶಾಲಾ ಶಿಕ್ಷಕನಾಗಿದ್ದೆ. ಬಸ್ ವ್ಯವಸ್ಥೆಯೂ ಕಷ್ಟ. ಅಲ್ಲಿ ನಾಗರಾಜರಂತಹ ಸ್ನೇಹಿತರ ಸಹಾಯದಿಂದ ಸುಮಾರು ಹತ್ತಕ್ಕೂ ಹೆಚ್ಚು ವರ್ಷ ನಾಟಕಗಳನ್ನಾಡಿಸಿದೆ. ಅಲ್ಲಿಯ ಮಕ್ಕಳು ರಾಜ್ಯ – ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿ ಪಡೆದರು. ಒಮ್ಮೆ ‘ನಕ್ಕಳಾ ರಾಜಕುಮಾರಿ’ ನಾಟಕವಾಡಿಸುತ್ತಿದ್ದೆ. ರಾಜು ಪಾಟೀಲ ಎಂಬ ಹುಡುಗನೊಬ್ಬ ಅಂಜುತ್ತಲೇ ಬಂದ. ‘ಸರ್ ನನಗೆ ಓದೋಕೆ ಬರಲ್ಲ. ನಾಟಕದಲ್ಲಿ ಪಾತ್ರ ಮಾಡೋ ಆಸೆ. ಮಾತಿಲ್ಲದ, ಬಾಗಿಲು ಕಾಯುವವನ ಪಾತ್ರ ಕೊಡುತ್ತೀರಾ’ ಅಂದ. ‘ಬಾ’ ಅಂದೆ.
ಒಂದಿಷ್ಟು ಚಟುವಟಿಕೆಗಳನ್ನು ಮಾಡಿಸುತ್ತಿದ್ದಂತೆ ಅವನ ಅಸಾಧಾರಣ ಸಾಮರ್ಥ್ಯದ ಅರಿವಾಯಿತು. ಅವನಿಗೆ ಓದಲು ಬರೆಯಲು ಬರುತ್ತಿರಲಿಲ್ಲ. ಆದರೆ ಏನು ಹೇಳಿದರೂ ಚೆನ್ನಾಗಿ ನೆನಪಿಡುವ ಮತ್ತು ಅನುಸರಿಸುವ ಅದ್ಭುತ ಸಾಮರ್ಥ್ಯ ಇತ್ತು. ಅವನಿಗೆ ಮುಖ್ಯ ಪಾತ್ರ ಕೊಟ್ಟೆ. ಹೆದರಿ ಓಡಿಯೇ ಹೋದ. ಹೊಲದಲ್ಲಿ ಅವಿತಿದ್ದ ಅವನನ್ನು ಸ್ನೇಹಿತರ ಸಹಾಯದಿಂದ ಹಿಡಿದು ತರಿಸಿದೆ. ತರಬೇತಿ ಆರಂಭವಾಯಿತು. ನಾನೊಮ್ಮೆ ಅವನ ಮುಂದೆ ನಾಟಕವನ್ನು ಭಾವಪೂರ್ಣವಾಗಿ ಓದಿದರೆ ತೀರಿತು.
ಅವನು ಅದನ್ನು ಚಿತ್ರವತ್ತಾಗಿ ಮನಸ್ಸಿನಲ್ಲಿ ಕಟ್ಟಿಕೊಳ್ಳುತ್ತಿದ್ದ. ಮುಂದೆ ನಾನಿಲ್ಲದಾಗ ರಿಹರ್ಸಲ್ ತೆಗೆದುಕೊಳ್ಳುವವ ಅವನೇ ಆದ. ಅವನನ್ನು ಎಸ್.ಎಸ್.ಎಲ್.ಸಿ. ತನಕ ತರೋದಕ್ಕೆ ನನಗೆ ಸಾಧ್ಯವಾಯ್ತು. ಆದರೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಭಯಕ್ಕೆ ಮನೆಬಿಟ್ಟು ಓಡಿಹೋದ. ಕೇರಳದಲ್ಲಿ ಕೆಲಸಕ್ಕೆ ಸೇರಿಕೊಂಡನಂತೆ. ಆನಂತರ ಕೆಲವರ್ಷದ ನಂತರ ಸಿಕ್ಕಿದವನು ಕಂಬನಿದುಂಬಿ ಹೇಳಿದ. ನಿಜ, ನಮ್ಮ ಪಠ್ಯಕ್ರಮಕ್ಕೆ ಆತ ನಾಲಾಯಕ್ ಆಗಿದ್ದ. ಆದರೆ ಅದೇ ಸಂದರ್ಭದಲ್ಲಿ ಅವನಿಗೆ ನಮ್ಮ ಪಠ್ಯಕ್ರಮವೇ ನಾಲಾಯಕ್ ಆಗಿತ್ತು.
ಉಡುಪಿಯ ಬ್ರಹ್ಮಾವರ ಸಮೀಪ ಕುರಾಡಿ ಎಂಬ ಹಳ್ಳಿ. ಅಲ್ಲಿಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಸೀತಾರಾಮಶೆಟ್ಟಿ ಎಂಬ ರಂಗತಜ್ಞರು. ಒಮ್ಮೆ ಅವರ ಆಹ್ವಾನದ ಮೇಲೆ ಅಲ್ಲಿ ನಾಟಕ ಕಲಿಸಲು ಹೋದೆ. ಪಕ್ಕಾ ಹಳ್ಳಿ ಹೈದರು. ಅಲ್ಲಿಯ ಮಕ್ಕಳಿಗೆ ನಾಟಕದ ವ್ಯಾಕರಣ ಗೊತ್ತಿತ್ತು. ಅವರಿಗೆ ಕಾವ್ಯದ ಸಾಹಚರ್ಯ ಮಾಡಿಸೋಣ ಅನ್ನಿಸಿತು. ಎಚ್.ಎಸ್.ವಿ. ಅವರ ‘ಕಂಸಾಯಣ’ ತೆಗೆದುಕೊಂಡೆ. ಮೊದಲಿಗೆ ಕಥೆಹೇಳಿ ಆಶು ವಿಸ್ತರಣೆ ಮಾಡಿಸುವದು ಪರಿಪಾಠ.
ಆದರೆ ನಾನು ಅಲ್ಲಿ ಅವರಿಗೆ ವೆಂಕಟೇಶಮೂರ್ತಿಯವರ ನಾಟಕವನ್ನು ಸಾಭಿನಯಪೂರ್ವಕವಾಗಿ ಓದಿತೋರಿಸಿದೆ. ಕಂಸನ ಮಾತು.. ಕೃಷ್ಣನ ಮಾತು.. ಅದ್ಭುತ ಹಾಡುಗಳು.. ಮಕ್ಕಳು ಫಿದಾ ಆಗಿ ಹೋದರು. ಸರಿಯಾಗಿ ೧೦ನೇ ದಿನಕ್ಕೆ ನಾಟಕ ರೆಡಿ. ಮುಂದೆ ಅದು ದೆಹಲಿಯ ಜಶ್ನೆಬಚಪನ್ ರಾಷ್ಟ್ರೀಯ ನಾಟಕೋತ್ಸವಕ್ಕೆ ಆಯ್ಕೆ ಆಯಿತು. ಮಕ್ಕಳೆಲ್ಲ ದೆಹಲಿಗೆ ಹೊರಟರು. ನಾಟಕದ ಆರಂಭದಲ್ಲೊಂದು ಹಾಡಿದೆ. ‘ನಾವು ಹಳ್ಳಿಹೈದರು ನಮ್ಮನೆಲ್ಲಿಗೊಯ್ದರು’ ಅಂತ. ನಮ್ಮ ಮಕ್ಕಳು ಅದನ್ನು ಸ್ವಲ್ಪ ತಿದ್ದಿಕೊಂಡರು. ‘ನಾವು ಹಳ್ಳಿಹೈದರು ನಮ್ಮ ದಿಲ್ಲಿಗೊಯ್ದರು’ ಅಂತ. ದೆಹಲಿಯಲ್ಲಿ ನಮ್ಮ ನಾಟಕದ ಹಾಡುಗಳದ್ದೇ ಪ್ರಚಾರ. ಯಾರು ಕೇಳಿದರೂ ನಮ್ಮ ಮಕ್ಕಳು ತಕ್ಷಣ ಹಾಡಿ ಕುಣಿಯುತ್ತಿದ್ದರು.
ಬಸ್ಸಲ್ಲಿ, ರೋಡಲ್ಲಿ, ಗೇಟಲ್ಲಿ ಹೀಗೆ... ಹಾಡುಗಳೆಲ್ಲ ಅಲ್ಲಿ ಬಹಳ ಪ್ರಸಿದ್ಧವಾದವು. ನಾಟಕಪ್ರಯೋಗದ ಮಾರನೇ ದಿನ ಚರ್ಚೆ ಇತ್ತು. ಯಾರೋ ಕೇಳಿದರು ‘ನಾಟಕ ಕಟ್ಟೋದಕ್ಕೆ ಎಷ್ಟು ಸಮಯ ತೆಗೆದುಕೊಂಡಿರಿ’ ಅಂತ. ೧೦ ದಿನ ಅಂದೆವು. ಅವರು ‘ಅದು ಸುಳ್ಳು’ ಎಂದರು. ಪಠ್ಯ ಅಷ್ಟು ಆಳಕ್ಕೆ ಇಳಿದಿರಲು ಕನಿಷ್ಠ ೩ ತಿಂಗಳು ಅಭ್ಯಾಸಬೇಕು ಅಂದರು. ‘ಅಭಿ’ ಅನ್ನೋ ಹುಡುಗ; ಆತ ಕಂಸನ ಪಾತ್ರ ಮಾಡುತ್ತಿದ್ದ. ಅವನೆದ್ದು ‘ನಿಮಗೆ ಗೊತ್ತಿಲ್ಲ, ನಮ್ಮ ನಿರ್ದೇಶಕರು ಹೀಗೆ ಎದ್ದು ಕಾಲನ್ನು ನೆಲಕ್ಕೆ ಒದ್ದರೆ ನಮ್ಮ ಮೈ ಝುಂ ಅನ್ನುತ್ತಿತ್ತು’ ಅಂದು ಅಭಿನಯಿಸಿ ತೋರಿದ.
ಕೇಳಿದವರು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದರು. ಅಲ್ಲಿ ಇನ್ನೊಂದು ತಂಡ ಬೆಂಗಾಲಿ ಹುಡುಗರದಿತ್ತು. ಅವರೂ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಇವರ ಹಾಡು ಕುಣಿತಗಳನ್ನು ಕಣ್ಣರಳಿಸಿ ನೋಡಿದ್ದರು. ವಾಪಾಸು ರೂಮಿಗೆ ಬರುವಾಗ ನಮ್ಮ ಜತೆ ವೆಹಿಕಲ್‌ ಹತ್ತಿದರು. ಸ್ವಲ್ಪ ಹೊತ್ತಿನಲ್ಲೇ ಇಬ್ಬರೂ ಸೇರಿ ಹಾಡಿ ಕುಣಿಯಲು ಆರಂಭಿಸಿದ್ದರು. ಇಬ್ಬರಿಗೂ ಇನ್ನೊಬ್ಬರ ಭಾಷೆ ಬರುತ್ತಿರಲಿಲ್ಲ. ದೈಹಿಕ ಭಾಷೆ ಮಾತ್ರ ಅರ್ಥವಾಗುತ್ತಿತ್ತು. ಆದರೆ ಆ ಅಲ್ಪ ಸಮಯದಲ್ಲಿ ಅವರೆಲ್ಲ ಎಷ್ಟು ಬೆರೆತು ಹೋಗಿದ್ದರೆಂದರೆ ರಾತ್ರಿ ಎಷ್ಟೋ ಸಮಯದ ನಂತರ ಅವರವರ ರೂಮಿಗೆ ನಾವು ಬಲವಂತವಾಗಿ ಹುಡುಗರನ್ನು ದಬ್ಬಬೇಕಾಯ್ತು. ನಮಗೆ ಮುಂಜಾನೆ ಐದಕ್ಕೇ ಹೊರಡಬೇಕಿತ್ತು.
ಮಣಿಪಾಲದ ರಾಜು ಮತ್ತು ನಾಗೇಂದ್ರ ಪೈ ಅವರ ಚಿನ್ನಾರಿ ತಂಡದ ಹುಡುಗರಿಗೆ ಬಿ. ಸುರೇಶರ ‘ರೆಕ್ಕೆ ಕಟ್ಟುವಿರಾ’ ನಾಟಕ ಮಾಡಿಸುತ್ತಿದ್ದೆ. ಅವರಿಗೆ ಯುದ್ಧದ ಭೀಕರತೆಯ ಹಲವು ಸಿನಿಮಾಗಳನ್ನೂ ತೋರಿಸಲಾಗಿತ್ತು. ನಾಟಕದಲ್ಲಿ ಜಪಾನಿನಲ್ಲಿ ಬಾಂಬಿಗೆ ಬಲಿಯಾದ ತಾಯಿ ಮತ್ತು ಮಕ್ಕಳಿಬ್ಬರ ಕಥನವಿದೆ. ಕೊನೆಯ ದೃಶ್ಯದಲ್ಲಿ ನಾಟಕದಲ್ಲಿ ಇಲ್ಲದ ಆದರೆ ಪೇಪರ್‌ಗಳಲ್ಲಿ ಪ್ರಕಟವಾದ ಬಾಂಬಿನಿಂದ ನೊಂದ ಹಲವರ ಕಥನಗಳನ್ನೂ ನಿರೂಪಣೆ ಮಾಡಲಾಗಿತ್ತು. ನಾಟಕ ಪ್ರಯೋಗದ ಹಿಂದಿನ ದಿನ ಪ್ರಾಯೋಗಿಕ ಪ್ರದರ್ಶನದ ನಂತರ ನಡೆದ ಚರ್ಚೆಯಲ್ಲಿ, ನಾಟಕದ ಕೊನೆಯಲ್ಲಿ ಸೇರಿಸಿದ ಈ ನಿರೂಪಣೆಗಳು ನಾಟಕದ ಒಟ್ಟೂ ಸೌಂದರ್ಯವನ್ನು ಹಾಳುಮಾಡುತ್ತವಾದ್ದರಿಂದ ಅದನ್ನು ತೆಗೆದುಬಿಡುವುದು ಒಳಿತು ಅಂತ ಮಾತಾಯ್ತು. ಮಕ್ಕಳೆಂದರು– ‘ಸರ್ ಅದು ಇರಲಿ. ಬಾಂಬಿನಿಂದ ನೊಂದವರ ಹಲವು ಕತೆಗಳು ಇದ್ದಾವೆ ಅಲ್ಲಿ. ಅದು ನಾಟಕದಷ್ಟೇ ಮುಖ್ಯ’.
ಕಳೆದ ೨೫ ವರ್ಷಗಳಿಂದ ಮಕ್ಕಳ ರಂಗಭೂಮಿಯ ಜತೆ ಇದ್ದೇನೆ. ನಿಜವಾದ ಶಿಕ್ಷಣ ಅಂತಿದ್ದರೆ ಅದು ರಂಗಭೂಮಿಯೇ ಅಂತ ನನಗೆ ಈಗಲೂ ಅನಿಸಿದೆ. ಮಕ್ಕಳು ನನಗೆ ರಂಗಭೂಮಿಯ ಮತ್ತು ಬದುಕಿನ ಹಲವು ಪಾಠಗಳನ್ನು ಕಲಿಸಿದ್ದಾರೆ. ಗೋವಿನ ಹಾಡಿನಲ್ಲಿ ‘ಹುಲಿ’ ಯಾಕೆ ಸಾಯಬೇಕೆಂಬ ಪ್ರಶ್ನೆ ಮಾಡಿ ಚಿಣ್ಣರಮೇಳಗಳ ಗೋವಿನ ಕತೆಯನ್ನೇ ಬದಲು ಮಾಡಿಸಿದ ಮಕ್ಕಳು, ನಾಟಕವೆಂದರೆ ಏನೆಂಬ ಪ್ರಶ್ನೆಗೆ ‘ನಾಟಕವೆಂದರೆ ಸ್ವಾತಂತ್ರ್ಯ’ ಎಂದು ಹೇಳಿ ಅಚ್ಚರಿಗೊಳಿಸಿದ ಹುಡುಗಿಯರು, ‘ಸರ್ ನಮಗೆ ಕಲಿಸಲು ದಿನವೂ ನೀವೇ ಬರುತ್ತೀರಾ ಪ್ಲೀಸ್’ ಎಂದು ಕೇಳಿ ಕಣ್ಣಲ್ಲಿ ನೀರು ತರಿಸಿದ ರಿಮ್ಯಾಂಡ್‌ಹೋಂನ ಮಕ್ಕಳು, ‘ನಂಗೆ ರಾಮ ಬೇಡ ಅವನು ಹೊಡೀತಾನೆ ರಾವಣನೇ ಬೇಕು’ ಎಂದು ರಾವಣನ ಕೈಯಲ್ಲಿ ಕೈಇಟ್ಟು ಓಡಾಡುತ್ತ ನಗೆ ಉಕ್ಕಿಸಿದ ‘ಮಕ್ಕಳ ರಾಮಾಯಣ’ದ ಸೀತೆ... ಹೀಗೆ ಅನೇಕರು ಪಯಣವನ್ನು ಸಾರ್ಥಕಗೊಳಿಸಿದ್ದಾರೆ.

ಮಂಗಳವಾರ, ಸೆಪ್ಟೆಂಬರ್ 17, 2013

ಠಾಕೂರಜೀ ಒಂದು ನಿಮಿಷ ನಾಟಕದ ದೃಶ್ಯಗಳು













ಆಟ-ಮಾಟ ತಂಡದ ಯತೀಶ ಕೊಳ್ಳೆಗಾಲ ಅವರ ನೇತೃತ್ವದಲ್ಲಿ 2010ರಲ್ಲಿ ರವೀಂದ್ರನಾಥ ಠಾಕೂರರ ಮೂರು ಕತೆಗಳು ಮತ್ತು ಕಾಲಯಾತ್ರೆ ಎಂಬ ನಾಟಕವನ್ನು ಕೊಲ್ಯಾಜ್ ಮಾಡಿ ಈ ಪ್ರದರ್ಶನವನ್ನು ಸಿದ್ಧಗೊಳಿಸಲಾಗಿತ್ತು.
ವಿನಿತಕುಮಾರ ಚಿಕ್ಕಮಗಳೂರು
ಸವಿತಾ ಔರಸಂಗ ಬಿಜಾಪೂ
ಅನೀಲ ರೇವೂರು
ಬಸಮ್ಮ ಅರಳಿಕಟ್ಟಿ ಧಾರವಾಡ
ಮಾರಪ್ಪ ಬಿಜ್ಜಿಹಳ್ಳಿ ತುಮುಕೂರು
ಮಂಜುನಾಥ ಹಿರೆಮಠ ಹರಿಹರ
ಯತೀಶ ಕೊಳ್ಳೆಗಾಲ
ಪ್ರಭುರಾಜ ಸೋಮಲಾಪೂರ ರಾಯಚೂರು
ಈ ಎಲ್ಲ ತರಬೇತಾದ ನಟರು ಈ ಅಡ್ಯಾಟವನ್ನು ಯಶಸ್ವಿಯಾಗಿ ಕರ್ನಾಟಕದಾದ್ಯಂತ ನಡೆಸಿಕೊಟ್ಟಿದ್ದಾರೆ

ಸೋಮವಾರ, ಸೆಪ್ಟೆಂಬರ್ 16, 2013

ಮೆಟ್ರೋ ನಗರದಲ್ಲಿ ಶೇಕ್ಸ್‌ಪಿಯರ್! -ಧನಂಜಯ ದಿಡಗ

ತನ್ನ ಅದ್ಭುತ ಪ್ರತಿಭಾ ಸಂಪನ್ನತೆಯಿಂದ ಜಗತ್ತಿನ ಜ್ಞಾನ ಪರಂಪರೆಯನ್ನು ಪ್ರಭಾವಿಸಿದ, ಬೆರಗುಗೊಳಿಸಿದ ರಸಸಿದ್ಧಿಯ ಮಾಂತ್ರಿಕ ಕವಿ- ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್.
ತನ್ನ ಸೃಜನಶೀಲತೆಯ ಕಮ್ಮಾರ ಶಾಲೆಯೊಳಗೆ, ಮಾನವ ಸಂಬಂಧಗಳನ್ನು, ಅವುಗಳ ಆರ್ದ್ರತೆ, ಮಾಧುರ್ಯವನ್ನು, ಕ್ರೌರ್ಯವನ್ನು, ಮಾನವ ಬದುಕಿನ ನಿರರ್ಥಕತೆ ಅದರಾಚೆಗಿನ ಸಾರ್ಥಕತೆಯನ್ನು, ಕರುಣೆಯನ್ನು, ಕಣ್ಣೀರನ್ನು, ಕಣ್ಣೀರೊಳಗೆ ಮಡುಗಟ್ಟಿದ ದ್ವೇಷ; ದ್ವೇಷದೊಳಗೆ ಬೆಳ್ಳಗೆ ಹೊಳೆಯುವ ಪ್ರೀತಿಯನ್ನು, ಮಾನವ ಸಹಜ ನಗುವನ್ನ, ಎಲ್ಲವನ್ನು ಹಾಕಿ, ಕಾಸಿ, ತಟ್ಟಿ ನಾಟಕವೆಂಬ ಕನ್ನಡಿಗೆ ಬಂಗಾರದ ಕಟ್ಟು ಹಾಕಿ, ಇದು ನಾನು ಕಂಡುಕೊಂಡ ಬದುಕ ಕನ್ನಡಿ ನೋಡಿಕೊಳ್ಳಿ ಎಂದು ಕೊಡುತ್ತಾನೆ ಶೇಕ್ಸ್‌ಪಿಯರ್.
ಬಂಗಾರದ ಕಟ್ಟಿನ ಕನ್ನಡಿಯೊಳಗೆ ಕಾಣುವ ಲಿಯರ್, ಒಥೆಲೋ, ಹ್ಯಾಮ್ಲೆಟ್, ಮ್ಯಾಕಬೆತ್ ಎಲ್ಲರೊಳಗೂ ಪ್ರತಿಬಿಂಬಗೊಳ್ಳುವುದು ನಮಗೇ ಗೊತ್ತಿಲ್ಲದ ನಮ್ಮದೇ ಮುಖ. ಅವುಗಳನ್ನು ನೋಡಿ ಒಂದು ಕ್ಷಣ ಬೆಚ್ಚುತ್ತೇವೆ. ಹುಚ್ಚಾಗುತ್ತೇವೆ. ಮೆಚ್ಚುತ್ತೇವೆ. ತಲ್ಲಣಗೊಳ್ಳುತ್ತೇವೆ. ಇದು ಶೇಕ್ಸ್‌ಪಿಯರ್ ಮಹಾಕವಿಗಿರುವ ಶಕ್ತಿ.
ಬೆಂಗಳೂರಿನ ಥಿಯೇಟರ್ ತತ್ಕಾಲ್ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ‘ಶೇಕ್ಸ್‌ಪಿಯರ್ ಮನೆಗೆ ಬಂದ’(ರಚನೆ: ನಟರಾಜ ಹುಳಿಯಾರ್ ನಿರ್ದೇಶನ: ನಟರಾಜ ಹೊನ್ನವಳ್ಳಿ) ನಾಟಕವನ್ನು ಪ್ರದರ್ಶಿಸಿತು.
ಗೆಲುವು, ಸೋಲು ಇತ್ಯಾದಿ...
ಅಸಲು ಶೇಕ್ಸ್‌ಪಿಯರನ ವಿಮರ್ಶಾ ಲೋಕದಲ್ಲಿ ವಿಹರಿಸುತ್ತಾ ಅವನ ವಿಮರ್ಶೆಯನ್ನು ಅರಗಿಸಿಕೊಂಡ ಮಂದಿಗೆ ನಾಟಕ ಕಚಗುಳಿ ಇಡುತ್ತದೆ, ಇದುವರೆಗೂ ಬಂದ ಶೇಕ್ಸ್‌ಪಿಯರ್ ನಾಟಕಗಳಿಗಿಂತ ಭಿನ್ನವಾದ, ಶೇಕ್ಸ್‌ಪಿಯರನೇ ಪಾತ್ರವಾಗಿರುವ ಈ ನಾಟಕದ ಬಹುಮುಖ್ಯ ತೊಡಕಿರುವುದು, ಅವನ ಮೂಲಕವೇ ಅವನ ವಿಮರ್ಶಾ ಲೋಕವನ್ನು ಆಖ್ಯಾನ ಮಾಡುವ ಪ್ರಯತ್ನದಲ್ಲಿ.
ನಾಟಕದ ಭಾಷೆ, ಅದರ ಸ್ಥಳೈಕ್ಯ ಪರಿಕಲ್ಪನೆಯನ್ನು ನಿಖರವಾಗಿಸುವಲ್ಲಿ  ಆ ಪ್ರಯತ್ನ ಸೋಲುತ್ತದೆ. ಕ್ರಿ.ಶ.1611ರಲ್ಲಿ  ನಡೆಯುವ ಕಥೆ, ನಿಜವೇ ಕಾಲ್ಪನಿಕವೇ ಎಂಬುದು ಸ್ಪಷ್ಟವಾಗದೆ ಕಥೆ ಓಡುತ್ತದೆ. ಶೇಕ್ಸ್‌ಪಿಯರನೇ ಕಾಲೈಕ್ಯ, ಕ್ರಿಯೈಕ್ಯ, ಸ್ಥಳೈಕ್ಯವನ್ನು ಉಲ್ಲಂಘಿಸುತ್ತಾನೆಂಬುದು ನಿಜವಾದರೂ, ಆ ಉಲ್ಲಂಘನೆಗೆ ಒಂದು ತಥ್ಯವಿರಬೇಕು. ಇಲ್ಲದಿದ್ದರೆ ಗೊಂದಲ ಹುಟ್ಟುವುದು ಸಹಜ.
1611ರಲ್ಲಿನ ಲೋಕಲ್‌ಗಳು, ಇಗೋ ಇಂಗ್ಲಿಷ್‌ನ ವ್ಯಾನ್ ಕೋಟ್ ಸೋಬ್ಸ್ (ಇಗೋ ಕನ್ನಡ ಬರೆಯುತ್ತಿದ್ದ ಜಿ.ವೆಂಕಟ ಸುಬ್ಬಯ್ಯ), ಜಿ.ಕೆ. ಗೋವಿಂದರಾವ್ ಅವರನ್ನು ಉದ್ಧರಿಸುವ ತಥ್ಯ ಅರ್ಥವಾಗುವುದಿಲ್ಲ. ಶೇಕ್ಸ್‌ಪಿಯರ್ ಪ್ರಪಂಚವನ್ನು, ಒಥೆಲೊ/ ಕಿಂಗ್‌ಲಿಯರ್/ಮ್ಯಾಕ್‌ಬೆತ್/ ಹ್ಯಾಮ್ಲೆಟ್ ಮೂಲಕ ನೆಲದಣ್ಣನಿಗೂ ದಕ್ಕುವ ನಾಟಕದ ನೈಜ ಸುಖ ಸ್ವಲ್ಪ ಮುಕ್ಕಾದಂತೆನಿಸುತ್ತದೆ. ಆದರೆ ನಟರ ಅಭಿನಯ, ನಾಜೂಕಾದ ಸಂಗೀತ, ನಾಟಕಕ್ಕೆ ಒಂದು ಬಗೆಯ ಓಘವನ್ನು ತಂದುಕೊಟ್ಟು, ಒಂದೂ ಮುಕ್ಕಾಲು ಗಂಟೆ ಏಕಾಗ್ರತೆಯಿಂದ ನೋಡುವಂತೆ ಮಾಡುತ್ತದೆ.
ಕಥೆಯೇನೆಂದರೆ...
ಸ್ಟ್ರಾಟ್‌ಫರ್ಡ್‌ನ ಹೆಮ್ಮೆಯ ಮಗ, ಪ್ರಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಇಂಗ್ಲೆಂಡಿಗೆ ಬರುವುದು. ಅವನಿಗೆ ಅದ್ದೂರಿ ಸನ್ಮಾನವಿದೆ. ಅವನೀಗಾಗಲೇ ವಿಶ್ವದ ಬಹುದೊಡ್ಡ ನಾಟಕಕಾರನಾಗಿ ಹೆಸರು ಮಾಡಿದ್ದಾನೆ. ಅವನ ಹೆಂಡತಿ ಆ್ಯನ್ ಹ್ಯಾತ್‌ವೇ, ಅವಳೇ ಹೇಳುವಂತೆ ತನ್ನ ಗಂಡ ಈಗ ಬಹುದೊಡ್ಡ ನಾಟಕಕಾರ. ಜಗತ್ತು ಅವನನ್ನು ಮೆಚ್ಚಿ ಕೊಂಡಾಡುತ್ತಿದೆ. ಹಾರ ತುರಾಯಿ, ಆ ಸಿಟಿ–ಈ ಸಿಟಿ, ಇವನ ಡೈಲಾಗ್ಸ್ ಅರ್ಥವಾಗದಿದ್ದರೂ ಕೇಳುವ, ಸುಮ್ಮಸುಮ್ಮನೆ ಚಪ್ಪಾಳೆ ತಟ್ಟುವ ಆಡಿಯೆನ್ಸು. ವೈನ್ ಅಡ್ಡಾಗಳು ಗರ್ಲ್‌ಫ್ರೆಂಡು, ಬಾಯ್ ಫ್ರೆಂಡು ಹೀಗೆ ಅವನ ಬಗೆಗಿನ ವಿಮರ್ಶಾ ಸಾಲು ಮೊದಲು ಅವನ ಹೆಂಡತಿಯಿಂದಲೇ ಆರಂಭವಾಗುತ್ತದೆ.
ಅಲ್ಲೇ ಸ್ಟ್ರಾಟ್‌ಫರ್ಡಿನಲ್ಲಿ ಶೇಕ್ಸ್‌ಪಿಯರ್ ಸೃಷ್ಟಿಸಿದ ಪಾತ್ರಗಳದ್ದೇ ರೀತಿಯ ವ್ಯಕ್ತಿಗಳಿದ್ದಾರೆ. ಶೇಕ್ಸ್‌ಪಿಯರನೆಂದರೆ ಅವರಿಗೆ ಮೆಚ್ಚು, ಹುಚ್ಚು. ಯಾಕೆಂದರೆ ಅವನು ಸ್ಟ್ರಾಟ್‌ಫರ್ಡಿನ ಮಗ. ಅವರನ್ನು  ಲೋಕಲ್ ಎಂಬ ವಿಶೇಷೋಕ್ತಿ ಸೇರಿಸಿ ಕರೆಯಲಾಗುತ್ತದೆ. ಉದಾಹರಣೆಗೆ ಲೋಕಲ್ ಲಿಯರ್, ಲೋಕಲ್ ಒಥೆಲೋ, ಲೋಕಲ್ ಇಯಾಗೋ... ಹೀಗೆ. ಇವರ ಜೊತೆಗೆ ಒಬ್ಬ ವೈಸ್ ಮ್ಯಾನ್; ಇವನೊಂದು ರೀತಿ ಸೂತ್ರಧಾರನಿದ್ದಂತೆ. ಇವನ ಪ್ರತಿ ಮಾತು ಶೇಕ್ಸ್‌ಪಿಯರ್‌ನಿಂದಲೇ ಪ್ರಾರಂಭ. ಶೇಕ್ಸ್‌ಪಿಯರ್‌ನ ಪ್ರತಿಯೊಂದು ಮಾತು, ಪಾತ್ರ, ನಾಟಕ ಸಾನೆಟ್ಟಿನ ಅರ್ಥವಿವರಣೆಯನ್ನು ವಿದ್ವತ್ಪೂರ್ಣ ಅಧಿಕಾರದಿಂದ ಮಾಡಬಲ್ಲಾತ. ಇಷ್ಟೂ ಪಾತ್ರಗಳು ಶೇಕ್ಸ್‌ಪಿಯರನೊಟ್ಟಿಗೆ ಮಾತಾಡುತ್ತವೆ, ಹಾಡುತ್ತವೆ, ಕುಣಿಯುತ್ತವೆ, ಕೀಟಲೆ ಮಾಡುತ್ತವೆ. ಅವನ ಪಾತ್ರಗಳನ್ನು ಗೇಲಿ ಮಾಡುತ್ತಾರೆ, ಅವನ ಎದುರಿಗೇ ಅವನ ನಾಟಕಗಳನ್ನು ಪ್ರತಿಕೃತಿಯಂತೆ ಅಭಿನಯಿಸಿ ತೋರಿಸುತ್ತಾರೆ.
ಶೇಕ್ಸ್‌ಪಿಯರ್‌ಗೆ ತಾನು ಸೃಷ್ಟಿಸಿದ ಪಾತ್ರಗಳು, ನಾಟಕ ಕಣ್ಣ ಮುಂದೆ ನಡೆಯುತ್ತಾ ತಾನರಿಯದ ಹೊಸ ಅರ್ಥ, ಹೊಸ ದೃಷ್ಟಿಕೋನ, ಹೊಸ ಹೊಳಹು ಶೇಕ್ಸ್‌ಪಿಯರಿನಿಗೇ ಹೊಳೆಯುವಂತೆ ಮಾಡುತ್ತಾರೆ. ಕೆಲವೊಮ್ಮೆ ಶೇಕ್ಸ್‌ಪಿಯರ್ ಪಾತ್ರವಾಗುತ್ತಾನೆ, ನಿಂತು ನೋಡಿ ಅಚ್ಚರಿಪಡುತ್ತಾನೆ. ತಾನು ಕಟ್ಟಿದ ಪಾತ್ರವೀಗ ಬೇರೆಯದೇ ಅರ್ಥ ಪಡೆದು ನಿಂತಿದೆಯಲ್ಲಾ ಎಂದು ಕಳವಳಗೊಳ್ಳುತ್ತಾನೆ. ಅದರೊಟ್ಟಿಗೆ ವೈಸ್‌ಮ್ಯಾನ್ ಶೇಕ್ಸ್‌ಪಿಯರ ಹಿರಿಮೆ ಗರಿಮೆ ದಂತಕಥೆಗಳು ಹೀಗೆ, ಶೇಕ್ಸ್‌ಪಿಯರ್ ಬಗೆಗಿನ ವಿಮರ್ಶಾ ಲೋಕದೊಟ್ಟಿಗೆ ಎಂದೂ ಪಾತ್ರವಾಗಿ ನಾವು ನೋಡದ ಶೇಕ್ಸ್‌ಪಿಯರ್ ಪಾತ್ರವಾಗುತ್ತಲೂ, ತನ್ನ ಅನಿಸಿಕೆ, ನಂಬಿಕೆ ಹೇಳಿಕೆಗಳಿಗೆ ಸಮರ್ಥನೆ ಕೊಡುತ್ತಲೂ, ಸಾಗುತ್ತದೆ ನಾಟಕ.
ಮುಖ್ಯವಾಗಿ ನಾಟಕಕಾರರ ತಂತ್ರಗಾರಿಕೆ ಇರುವುದು, ಶೇಕ್ಸ್‌ಪಿಯರ್‌ನವೇ ಪಾತ್ರಗಳಾದ ಲಿಯರ್, ಇಯಾಗೋ, ರೋಮಿಯೋ, ಬಾಟಮ್, ಶೈಲಾಕ್‌ರನ್ನ ಅಲ್ಲಿನ ಸ್ಥಳೀಯರನ್ನಾಗಿ ಮಾಡಿ, ಅವುಗಳ ಮೂಲಕವೇ ಶೇಕ್ಸ್‌ಪಿಯರನಿಗೆ ಪ್ರಶ್ನೆ ಕೇಳಿಸುವುದರಲ್ಲಿ, ಆ ಮೂಲಕ ಒಂದು ನೇರ ವಿಮರ್ಶೆ ನಾಟಕದ ಮೇಲೆ ಹೇರಬಹುದಾಗಿದ್ದ ಹೊರೆಯನ್ನು ಪಾತ್ರಗಳ ಮೂಲಕ ಮಾಡಿಸಿ ಅದನ್ನು ತಪ್ಪಿಸಿರುವುದರಲ್ಲಿ. ಒಂದು ವಿಮರ್ಶೆಯನ್ನು ನಾಟಕವಾಗಿಸುವ ಅತ್ಯುತ್ತಮ ತಂತ್ರಗಾರಿಕೆ ಇದು.
ನಿರ್ದೇಶಕ ನಟರಾಜ ಹೊನ್ನವಳ್ಳಿ ಈಗಾಗಲೇ ಕನ್ನಡ ರಂಗಭೂಮಿಯ ಬಹುಮುಖ್ಯ ನಿರ್ದೇಶಕರೆಂದು ಗುರುತಿಸಿಕೊಂಡವರು. ಅವರು ರಂಗಕ್ಕಿಳಿಸಿದ ಕನ್ನಡದ ಬಹು ಮುಖ್ಯ ಕಾದಂಬರಿಗಳಾದ ಪುಣೇಕರರ ‘ನಟನಾರಾಯಣಿ’, ತೇಜಸ್ವಿಯವರ ‘ಜುಗಾರಿ ಕ್ರಾಸ್’ ಬಹುಮಟ್ಟಿಗೆ ಹೊಸತನದಿಂದ ಗಮನ ಸೆಳೆದ ನಾಟಕಗಳು. ಅವೆಲ್ಲವುಗಳಲ್ಲಿ ತೋರಿದ ಕೌಶಲ, ನಿರೂಪಣಾ ವಿಧಾನ, ತಂತ್ರಗಳನ್ನು ನೋಡಿದರೆ, ‘ಶೇಕ್ಸ್‌ಪಿಯರ್ ಮನೆಗೆ ಬಂದ’ ನಾಟಕದಲ್ಲೂ ಅವೇ ಕೆಲವು ಹಳೇ ತಂತ್ರಗಳ ಪುನರಾವರ್ತನೆ ಕಾಣುತ್ತದೆ.
ಉದಾಹರಣೆಗೆ ಅವರ ಹಳೇ ನಾಟಕಗಳಲ್ಲೂ ಕಾಣಬರುವ ನಿರೂಪಕರ ಸೃಷ್ಟಿ. ನಿರೂಪಕರೂ ಆದ  ಲೋಕಲ್ ಮತ್ತು ವೈಸ್ಮ್ಯಾನ್‌ನನ್ನು ಅವರು ನಾಟಕದ ಪರಿಕ್ರಮಕ್ಕೆ, ಓಘಕ್ಕೆ ಬಳಸಿಕೊಂಡಿರುವ ರೀತಿ ಹೊಸ ಬಾಟಲಿಯಲ್ಲಿ ಹಳೆಯ ಮದ್ಯವೇ. ಹೊನ್ನವಳ್ಳಿಯವರಂತಹ ನಿರ್ದೇಶಕರು ನಟರಿಗೆ ಕೆಲವು ವಿಚಾರದಲ್ಲಿ  ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ.  ‘ಲೋಕಲ್‌’ಗಳ ಪಾತ್ರದಲ್ಲಿ ಅವರು ನೀಡಿರುವ ಸ್ವಾತಂತ್ರ್ಯ ಕೆಲವು ಕಡೆ ದುಬಾರಿಯಾಗುತ್ತದೆ. ಪಂಚ್‌ಗಳ ಮೇಲೆ ಪಂಚ್‌ಗಳನ್ನು ಸಿಡಿಸುವ ಈ ಪಾತ್ರಗಳ ನಟರು ಕೆಲವೊಮ್ಮೆ ನಾಟಕದಲ್ಲಿಲ್ಲದ, ತಾವೇ ತುರುಕಿದ ಮಾತುಗಳಿಂದ, ನಾಟಕದ ಭಾಷೆಯ ಓಟ ತಿರುವು ಮುರುವು ಹಾದಿ ಹಿಡಿಯುವುದು ನಿಜ. ಆದರೆ ನಾಟಕದಲ್ಲಿ ಎದ್ದು ಕಾಣುವುದು ವೈಸ್‌ಮ್ಯಾನ್ (ಗಣಪತಿ) ಸೇರಿದಂತೆ ಇವೇ ಪಾತ್ರಗಳೆಂಬುದೂ ನಿಜವೇ.
ಶೇಕ್ಸ್‌ಪೀರಿಯನ್ ಯುಗದ ಮೂಡ್ ಸೃಷ್ಟಿಸಲು, ಪ್ರಯತ್ನಸುವ ಸಂಗೀತ ಕೆಲವೊಮ್ಮೆ ಅದರ ದ್ವನಿ ನಿಯಂತ್ರಣದ ಸಂದರ್ಭದಲ್ಲಿ ನಟರ ಮಾತುಗಳನ್ನು ಓವರ್‌ಲ್ಯಾಪ್ ಮಾಡಿಬಿಡುತ್ತದೆ. ಮತ್ತೂ ಕೆಲವುಕಡೆ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಆದರೆ, ರೆಕಾರ್ಡೆಡ್ ಸಂಗೀತದ ಕೃತಕತೆ ಲೈವ್ ಸಂಗೀತದಷ್ಟು ಆನಂದವನ್ನುಂಟು ಮಾಡುವುದಿಲ್ಲ.
ನಾಟಕದ ಕೆಲವು ದೃಶ್ಯಗಳಲ್ಲಿ  ಮಾಯಾಲೋಕವನ್ನು ಸೃಷ್ಟಿಸುವುದು, ಬೆಳಕು (ಜಗದೀಶ್) ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಮೆಲು ಸಂಗೀತ. ‘ಲೋಕಲ್’ಗಳು ಸೇರಿ ಕಟ್ಟಿಕೊಡುವ ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್‌’ನ ಒಂದು ಕಾಡಿನ ಯಕ್ಷಲೋಕದ ದೃಶ್ಯ ನಿಜವಾಗಿಯೂ ನೋಟಕ್ಕೆ ಮುದಕೊಡುತ್ತದೆ. ನೀಲಿ ಬೆಳಕು, ನಟರು ಊದುಗುಳ್ಳೆಗಳ ಮೂಲಕ ರಂಗದ ತುಂಬ ಗುಳ್ಳೆಗಳನ್ನು ಸೃಷ್ಟಿಸುವುದು. ಆ ಇಡೀ ವಾತಾವರಣ ಹೊಸತಾಗಿ ನಮಗೊಂದು ತಾಜಾ ನೋಟ ಕೊಡುತ್ತದೆ.
ಹೊಸದೊಂದು ಪ್ರಯತ್ನದ ಹಿಂದೆ ನಟರಾಜ ಹುಳಿಯಾರ್, ನಟರಾಜ ಹೊನ್ನವಳ್ಳಿ ಮತ್ತು ನಟವರ್ಗದವರ ಅಪಾರ ಪರಿಶ್ರಮವಿರುವುದು ಕಂಡರೂ ನಾಟಕ ಜನರಿಗೆ ತಲುಪುವ ಪ್ರಯತ್ನ ಅರ್ಧದಷ್ಟು ಸಫಲವಾಗಿದೆ ಎನ್ನಬೇಕು. ಶೇಕ್ಸ್‌ಪಿಯರನ ನಾಟಕ ‘ವಿಂಟರ್‍್್ ಸ್ಟೇಲ್’ (ನೀನಾಸಂ ಬಳಗ. ಅನುವಾದ ನಿರ್ದೇಶನ; ಕೆ.ವಿ. ಅಕ್ಷರ) ನಂತರ ಶೇಕ್ಸ್‌ಪಿಯರನೇ ಪಾತ್ರವಾಗಿರುವ ಈ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ತುಂಬಿದ ಪ್ರದರ್ಶನ ಕಾಣುವುದರಲ್ಲಿ ಯಶಸ್ವಿಯಾಯಿತು.

ಶೇಕ್ಸ್‌ಪಿಯರ್ ಕಾ ಚೋಟಾ ಪ್ಯಾಕೆಟ್

ಶೇಕ್ಸ್‌ಪಿಯರ್ ಕಾ ಚೋಟಾ ಪ್ಯಾಕೆಟ್
ಒಬ್ಬ ಸಾಹಿತಿಯ ಯಶಸ್ಸು ಒಂದು ಕೃತಿಯಲ್ಲಿ ಅಡಗಿರುವುದಿಲ್ಲ. ಒಂದು ಕೃತಿ ಮುತ್ತಾಗಿದ್ದರೆ, ಮತ್ತೊಂದು ರತ್ನವಾಗಿರುತ್ತದೆ ಇನ್ನೊಂದು ವಜ್ರವಾಗಿ ಕಂಗೊಳಿಸಬಹುದು. ಅಂತಹ ಕೃತಿಗಳನ್ನು ಒಂದೊಂದಾಗಿ ಓದುವುದೋ, ನಾಟಕವಾಗಿದ್ದರೆ ನೋಡುವುದೋ ರೂಢಿಗತವಾಗಿ ಬಂದ ಯಶಸ್ಸಿನ ಸೂತ್ರ. ಜೀವಮಾನದ ಸಾಧನೆಗೆ ಪ್ರಶಸ್ತಿ ಪಡೆಯುವ ಸಂದರ್ಭ ಹೊರತು ಪಡಿಸಿದರೆ ಆ ಸೂತ್ರ ಲೇಖಕನಿಗೆ ಅಥವಾ ನಾಟಕಕಾರನಿಗೆ ಒಳಿತನ್ನುಂಟು ಮಾಡುತ್ತದೆ. ಅದನ್ನು ಸವಿಯುವ ರಸಿಕರು ಕೂಡ ಒಮ್ಮೆಗೆ ಎಷ್ಟು ಡೋಸೇಜ್ ಸಹಿಸಬಲ್ಲರೋ ಅಷ್ಟೇ ಡೋಸೇಜ್ ಆಫ್ ಎಂಟರ್‌ಟೇಯ್ನ್‌ಮೆಂಟ್‌ಗೆ ಒಡ್ಡಿಕೊಳ್ಳಬಹುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಕುವೆಂಪು ಬರೆದ ಬಿರುಗಾಳಿ ನಾಟಕದಲ್ಲಿ ಬರುವ ಬಾಣಸಿಗ ಭೀಮಣ (ವಿಲಿಯಮ್ ಶೇಕ್ಸ್‌ಪಿಯರ್‌ನ ಕುಕ್) ಊಟವನ್ನು ಬಡಿಸುವ ಮೊದಲೇ ಅನ್ನ, ಸಾರು, ಕಾಯಿ, ಪಲ್ಲೆ, ಹೋಳಿಗೆ, ಕೋಸಂಬರಿ ಇವೆಲ್ಲವನ್ನೂ ಮೊದಲೇ ಕಲಸಿ ನಂತರ ಶೇಕ್ಸ್‌ಪಿಯರ್‌ನ ಪ್ರಾಸ್ಪೆರೋಗೆ ಬಡಿಸುವ ಧೈರ್ಯ ಮಾಡಿದರೆ ಏನಾಗಬಹುದು. ರಿಸಲ್ಟ್ ನಿಮಗೆ ಗೊತ್ತಿದೆ. ಆದರೆ ಅನೇಕ ಲೇಖಕರ ಸಾಹಿತ್ಯದ ಕೃತಿಗಳು, ಸಮಗ್ರವಾಗಿ ನೋಡುವ ಉದ್ದೇಶದಿಂದ, ಈ ಬಗೆಯ ಫಾಸ್ಟ್ ಫುಡ್ ಕಲ್ಚರ್‌ಗೆ ಒಳಗಾಗಿವೆ. ಅಷ್ಟು ಸಾಲದೆಂಬಂತೆ ಆ ಕೃತಿಗಳನ್ನೆಲ್ಲಾ ಒಂದೆಡೆ ಗುಡ್ಡೆ ಹಾಕಿಕೊಂಡು, ಅವುಗಳನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸಿ, ವಿವಿಧ ವಾದಗಳ ಹಾಗೂ ಇಸಂಗಳ ಎಳೆಗಳನ್ನು ಹೆಕ್ಕಿ ತೆಗೆದು ಲೇಖಕ ಇಂಥವ ಎಂದು ಅವನ ಹಣೆಬರಹ ಬರೆದುಬಿಡುವ ಕೆಲಸವೂ ಅವ್ಯಾಹತವಾಗಿ ಸಾಗುತ್ತಿದೆ. ಆ ಲೇಖಕ ಭೂತಕಾಲದಲ್ಲಿ ಬದುಕಿದ್ದೇ ದೊಡ್ಡ ಅವಕಾಶ!! ಅದನ್ನು ಡಿಫೆಂಡ್ ಮಾಡಿಕೊಳ್ಳಲು ಅವನಿರುವುದಿಲ್ಲ ಎಂಬ ಅಗಾಧವಾದ ಆತ್ಮವಿಶ್ವಾಸ. ನಿಜವಾದ ರಸಿಕರಿಗೆ ಇಂತಹ ಬೆಳವಣಿಗೆಗಳ ಜ್ಞಾನವೇ ಇರುವುದಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ನಟರಾಜ್ ಹುಳಿಯಾರ್ ಬರೆದ 'ಶೇಕ್ಸ್‌ಪಿಯರ್ ಮನೆಗೆ ಬಂದ' ನಾಟಕ ಇಂತಹ ಎಡಬಿಡಂಗಿತನವನ್ನು ಹೀಯಾಳಿಸುತ್ತಾ ಸಾಗುತ್ತದೆ. ಆದರೆ ಮತ್ತದೇ ಸಮಗ್ರವೆಂಬ ಚೌಕಟ್ಟಿನಲ್ಲಿ ಬಂಧಿಯಾಗಿಬಿಡುತ್ತದೆ. ಶೇಕ್ಸ್‌ಪಿಯರ್ ಸೃಷ್ಟಿಸಿದ ಪಾತ್ರಗಳು ಕಾಲ ದೇಶಗಳನ್ನು ದಾಟಿ ವಿಸ್ತಾರಗೊಂಡು ಸ್ತ್ರೀವಾದದ ತೆಕ್ಕೆಯಲ್ಲೂ ಸುಖಿಸಿ, ಲೇಖಕನಿಗೇ ಗುರುತು ಸಿಗದಷ್ಟು ಬದಲಾಗಿಬಿಡುವ ರೂಪಕದಲ್ಲಿ, ಆ ಪ್ರಯೋಗವೇ ಪ್ರಯೋಗಕ್ಕೆ ಪ್ರಶ್ನೆಯಾಗಿ ನಿಲ್ಲುವಂತೆ ಮಾಡಿಬಿಡುತ್ತಾರೆ ಹುಳಿಯಾರ್. ಶೇಕ್ಸ್‌ಪಿಯರ್ ಮನೆಗೆ ಬಂದ ಒಂದು ಇಂಡಿಪೆಂಡೆಂಟ್ ನಾಟಕವೇ? ಖಂಡಿತಾ ಅಲ್ಲ. ಆ ಎಚ್ಚರದ ಇಟ್ಟಿಗೆಗಳಿಂದಲೇ ನಿರ್ಮಾಣವಾಗಿರುವ ಈ ಕೊಲಾಜ್, ಸ್ವತಂತ್ರ ಕೃತಿಯ ಪರಿಕಲ್ಪನೆಗಳನ್ನೇ ಧೂಳೀಪಟ ಮಾಡುತ್ತದೆ. ಅದು ಸತ್ಯದ ಹಾದಿ ಕೂಡ. ಅದಕ್ಕೆ ಜಸ್ಟಿಫಿಕೇಶನ್ ಸ್ವತಃ ಶೇಕ್ಸ್‌ಪಿಯರ್ ಕೊಟ್ಟರೆ ಇನ್ನೂ ಚೆನ್ನ ಅಲ್ಲವೇ? ಎನಗಿಂತ ಹಿರಿಯರ ಅನುಭವವನ್ನು ಕದಿಯುವುದು ಕಳ್ಳತನವಾಗುವುದಿಲ್ಲ. ಅದು ಬದುಕಿನ ಹಾದಿ. ತನ್ನ ದುಡಿಮೆಯ ಹಾದಿಯಾಗಿ ನಾಟಕ ಕಲೆ ಆಯ್ದುಕೊಂಡ ಶೇಕ್ಸ್‌ಪಿಯರ್ ವಿಮರ್ಶಕರ ಬಾಯಿ ಮುಚ್ಚಿಸುವುದಕ್ಕಾಗಿ ಪದ್ಯಗಳನ್ನೂ ಬರೆದನಂತೆ! ಹೀಗೆ ಇನ್ನೂ ಅನೇಕ ರೋಚಕ ಸಂಗತಿಗಳನ್ನು ಒಂದೊಂದಾಗಿ ಬಿಚ್ಚಿಡುವ ನಾಟಕಕಾರರು, ಪೋಸ್ಟ್ ಬ್ಲಾಗಿಸಂನ ಈ ಯುಗದಲ್ಲಿ ಒಂದು ಡೈಲಾಗ್ ಬರೆಯುವುದನ್ನು ಮರೆತಿದ್ದಾರೆ. ಅಥವಾ ನವೋದಯದಲ್ಲಿ ಅರಳಿದ ಶೇಕ್ಸ್‌ಪಿಯರ್‌ನ ನಾಲಿಗೆಯಲ್ಲಿ ಈ ಮಾತುಗಳನ್ನು ಕನ್ನಡದಲ್ಲಿ ಆಡಿಸಲು ಅವರು ಹಿಂಜರಿದಿರಬೇಕು. ಆದರೂ ಸ್ತ್ರೀವಾದವನ್ನು ಮೆನ್ಷನ್ ಮಾಡುವ ಹುಳಿಯಾರರ ಶೇಕ್ಸ್‌ಪಿಯರ್ ಈ ಡೈಲಾಗ್ ಹೇಳಲು ಹಿಂಜರಿಯುವುದಿಲ್ಲ: 'ನನ್ನ ನಾಟಕಗಳು ಕಾರ್ಖಾನೆಯಿಂದ ಹೊರ ಬರುವ ಚೆಂದದ ಕಾರುಗಳಿದ್ದ ಹಾಗೇ. ನಳನಳಿಸುವ ನುಣುಪಾದ ಮೇಲ್ಮೈ ಪಡೆಯಲು ಸಾಣೆ ಹಿಡಿಯುವಾಗ ಕಬ್ಬಿಣದ ಧೂಳು ಉದುರುತ್ತಿತ್ತಲ್ಲ, ಆ ಧೂಳಿನಂತೆ ಸ್ತ್ರೀವಾದ ಮತ್ತು ಪುರುಷವಾದ. ಕಾರು ಚೆಂದ ಕಾಣುವುದು ಜೊತೆಯಲ್ಲಿ ಪ್ರೇಯಸಿ ಇದ್ದಾಗ ಅಥವಾ ಪ್ರಿಯಕರ ಇದ್ದಾಗ.'

ಆಕಸ್ಮಾತ್ ಈ ನಾಟಕ ಪುಸ್ತಕರೂಪಿಯಾಗಿ ಕೈಗೆ ದೊರಕಿ ಅದರ ಬೆನ್ನುಡಿ ಅಥವಾ ಮುನ್ನುಡಿಯ ಸಾಲುಗಳ ಮೇಲೊಮ್ಮೆ ಕಣ್ಣು ಹಾಯಿಸಿದ್ದರೆ, ಟಿ ಪಿ ಕೈಲಾಸಂರನ್ನು ಒಮ್ಮೆಲೆ ಒಂದೇ ಮುಷ್ಟಿಯಲ್ಲಿ ಹಿಡಿದಿಡುವ ಪ್ರಯತ್ನವಾಗಿತ್ತಲ್ಲ, ಇದು ಅಂತಹ ಒಂದು ಯತ್ನ ಎಂದುಕೊಂಡು ಸುಮ್ಮನಿದ್ದುಬಿಡಬಹುದಾಗಿತ್ತು. ಆದರೆ ಶೇಕ್ಸ್‌ಪಿಯರ್ ಹೆಸರೇ (ಹೆಸರಿನ್ಲಲೇನಿದೆ ಎಂದು ಹುಬ್ಬೇರಿಸಬೇಡಿ) ಸಾಕು ಥಿಯೇಟರ್‌ನ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಲು. ಅದಕ್ಕಾಗಿಯೇ ಆ ಕೃತಿ ಮೊತ್ತಮೊದಲ ಬಾರಿ ರಂಗರೂಪಿಯಾಗಿ ಪ್ರದರ್ಶನಗೊಂಡಾಗಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಜಾಮ್ ಪ್ಯಾಕ್ಡ್ ಆಗಿತ್ತು. ಆ ಶ್ರೇಯಸ್ಸು ಥಿಯೇಟರ್ ತತ್ಕಾಲ್ ತಂಡಕ್ಕೆ ಸಲ್ಲಬೇಕು. ಶೇಕ್ಸ್‌ಪಿಯರ್‌ನ ಮ್ಯಾಜಿಕ್, ಹುಳಿಯಾರ್ ಮ್ಯಾಜಿಕ್ ಮತ್ತು ನಟರಾಜ್ ಹೊನ್ನವಳ್ಳಿ ಮ್ಯಾಜಿಕ್ ಒಟ್ಟೊಟ್ಟಾಗಿ ಕೆಲಸ ಮಾಡಿತ್ತು. ರವೀಂದ್ರ ಕಲಾಕ್ಷೇತ್ರದ ದನಿ ವ್ಯವಸ್ಥೆ ನಿರ್ವಹಿಸುವವರು ನೋಡುಗರು, ಕೇಳುಗರೂ ಹೌದು ಎಂಬುದನ್ನು ಅರ್ಥ ಮಾಡಿಕೊಂಡಿದ್ದರೆ ನಾಟಕದ ಅಭಿಮಾನಿಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು. ಅಥವಾ ಅದನ್ನು ಖಂಡಿಸುವವರ ಸಂಖ್ಯೆ!

ಮಂಗಳವಾರ, ಸೆಪ್ಟೆಂಬರ್ 10, 2013

ಬದುಕಿಗೆ ಬೆಳಕು ತೋರುವ ‘ಮೆಕ್ಕಾ ದಾರಿ’


ಶಶಿಕಾಂತ ಯಡಹಳ್ಳಿ


ಮ್ಯಾಕ್ಸಿಂ ಗಾರ್ಕಿಯ ತಾಯಿ ಕಾದಂಬರಿ/ನಾಟಕದ ‘ತಾಯಿ’ ಪಾತ್ರದಷ್ಟೇ ಸಶಕ್ತವಾಗಿ ಮೂಡಿ ಬಂದ ಮತ್ತೊಂದು ಪಾತ್ರವೆಂದರೆ ಅಥೋಲ್ ಫುಗಾರ್ಡರ ‘ಮೆಕ್ಕಾ ದಾರಿ’ ನಾಟಕದ ಹೆಲೆನ್ ಪಾತ್ರ. ಮಹಿಳೆಯರ ಶೋಷಣೆಯ ಆಯಾಮಗಳನ್ನು ವಿಭಿನ್ನ ರೀತಿಯಲ್ಲಿ ಅನಾವರಣಗೊಳಿಸುವ ಹೆಲೆನ್ ಪಾತ್ರವು ಸಮಕಾಲೀನ ಅಷ್ಟೇ ಅಲ್ಲಾ ಸಾರ್ವಕಾಲಿಕ ಮಹಿಳಾ ಶೋಷಣೆಯನ್ನು ತೋರಿಸುವಂತಿದೆ. ದೇಶ ಯಾವುದಾದರೇನು ಮಹಿಳೆಯರ ತಳಮಳ ತಲ್ಲಣಗಳಿಗೆ ಕೊನೆಯಿಲ್ಲ, ದಕ್ಷಿಣ ಆಫ್ರಿಕಾ ಮೂಲದ ಈ ನಾಟಕದ ಪ್ರಮುಖ ಪಾತ್ರವಾದ ಹೆಲೆನ್ಳಂತಹ ಮಹಿಳೆಯರು ಇಲ್ಲಿ ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ, ನಮ್ಮ ನಡುವೆಯೇ ಬೇಕಾದಷ್ಟು ಜನ ಸಿಕ್ಕುತ್ತಾರೆ. ಅವರ ನೋವಿನ ನೆಲೆಗಳು ಬೇರೆ ಬೇರೆಯಾಗಿದ್ದರೂ ಶೋಷಣೆಯ ಮೂಲ ಇಡೀ ವ್ಯವಸ್ಥೆಯಲ್ಲಿದೆ. ವರ್ಣಬೇಧ, ಲಿಂಗಬೇಧ, ಧರ್ಮಾಂಧತೆ ಮತ್ತು ಶೋಷಣೆಯನ್ನು ಮನಮುಟ್ಟುವಂತೆ ತೆರೆದಿಡುವ ಒಂದು ಸಾರ್ಥಕ ರಂಗಪ್ರಯೋಗವೇ ಮೆಕ್ಕಾ ದಾರಿ.
ದಕ್ಷಿಣ ಆಫ್ರಿಕಾದ ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಅಥೋಲ್ ಫುಗಾರ್ಡರ ರೋಡ್ ಟು ಮೆಕ್ಕಾ ನಾಟಕವನ್ನು ಹಿರಿಯ ರಂಗಕರ್ಮಿ ಪ್ರಸನ್ನರವರು ಮೆಕ್ಕಾ ದಾರಿ ಹೆಸರಲ್ಲಿ ಭಾವಾನುವಾದ ಮಾಡಿ ‘ತರಿಕಿಟ ಕಲಾ ಕಮ್ಮಟ’ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. 2013 ಸೆಪ್ಟೆಂಬರ್ 4 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ, ಬೆಳಕಿನ ತಜ್ಙ ದಿ. ಅ.ನ.ರಮೇಶರವರ ನೆನಪಿನಲ್ಲಿ ‘ಅನಾವರಣ’ ರಂಗತಂಡ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ನಾಟಕವು ಪ್ರದರ್ಶನಗೊಂಡು ನೋಡುಗರಲ್ಲಿ ವಿಶೇಷ ಅನುಭೂತಿಯನ್ನುಂಟುಮಾಡಿತು.
ಇದೊಂದು ಸತ್ಯಕಥೆ ಆಧಾರಿತ ನಾಟಕ. ದಕ್ಷಿಣ ಆಫ್ರಿಕಾದ ಕೆಫ್ಟೌನ್ನಿಂದ ಉತ್ತರಕ್ಕೆ ಸುಮಾರು ಎಂಟುನೂರು ಮೈಲಿ ದೂರವಿರುವ ಕುಗ್ರಾಮದಲ್ಲಿ ಹೆಲೆನ್ ಎನ್ನುವ ಅನಾಥ ವಿಧವೆ ಮುದುಕಿ ವಾಸಿಸುತ್ತಿದ್ದಳು. ಗಂಡ ಸತ್ತ ನಂತರ ತನ್ನ ಒಂಟಿತನವನ್ನು ಕಳೆಯಲು ಕಲಾಸೃಷ್ಟಿಯಲ್ಲಿ ಬೆಳಕನ್ನು ಕಾಣುತ್ತಿದ್ದಳು. ಗಾಜಿನ ಚೂರು, ಟೈಲ್ಸ ತುಂಡುಗಳು, ಸಿಮೆಂಟು, ಮರಳು ಹೀಗೆ.. ವ್ಯರ್ಥವೆನಿಸುವ ಪದಾರ್ಥಗಳಿಂದ ಒಂಟೆ, ಗೂಬೆ, ನವಿಲು, ಮೆಕ್ಕಾ ಮುಂತಾದ ಅನೇಕ ಜಾನಪದ ಮಾದರಿಯ ಕಲಾಕೃತಿಗಳನ್ನು ಸೃಷ್ಟಿಸಿ ನೆಮ್ಮದಿಯಾಗಿರಲು ಪ್ರಯತ್ನಿಸುತ್ತಿದ್ದಳು. ತನ್ನಷ್ಟಕ್ಕೆ ತಾನಿದ್ದವಳನ್ನು ಸುಮ್ಮನೆ ಬಿಡದ ಕ್ರೈಸ್ತ ಮತಾಂಧ ಸಮಾಜ ಆಕೆಯನ್ನು ದೈವವಿರೋಧಿಯಾಗಿ ಭಾವಿಸಿತು. ಆಕೆಯ ಕಲಾಕೃತಿಯಲ್ಲಿ ಪಾಖಂಡಿತನವನ್ನು ಆರೋಪಿಸಿತು. ಆಕೆಯ ಬಗ್ಗೆ ಅಪಪ್ರಚಾರ ಮಾಡಲಾಯಿತು. ಆಕೆಯ ಮನೆಗೆ ಕಲ್ಲು ಹೊಡೆಸಲಾಯಿತು. ಆಕೆಯ ಮನೆ-ಆಸ್ತಿಯನ್ನು ಕಬಳಿಸಿ ಹೆಲೆನ್ಳನ್ನು ವೃದ್ಧಾಶ್ರಮಕ್ಕೆ ತಳ್ಳಲು ಕುತಂತ್ರವನ್ನು ರಚಿಸಲಾಯಿತು. ಆದರೆ ಆ ಮುದುಕಿಯ ಗೆಳತಿ ಎಲ್ಸಿ ಬಂದು ಹೆಲೆನ್ಳ ಅಸಹಾಯಕತೆ, ಮುಗ್ದತೆಗಳನ್ನು ಬಳಸಿಕೊಂಡು ಪಾದ್ರಿ ಮಾಡುವ ವಂಚನೆಯನ್ನು ಬಯಲುಗೊಳಿಸಿ ಹೆಲೆನ್ಳಲ್ಲಿ ಆತ್ಮಸ್ತೈರ್ಯವನ್ನು ತುಂಬುತ್ತಾಳೆ. ಕೊನೆಗೆ ವೃದ್ದಾಶ್ರಮದ ಅಜರ್ಿಗೆ ಸಹಿಹಾಕುವುದನ್ನು ನಿರಾಕರಿಸಿದ ಹೆಲೆನ್ ತನ್ನ ಆರೋಗ್ಯವನ್ನು ಕಾಪಾಡಿಕೊಂಡು ಸ್ವತಂತ್ರವಾಗಿ ಬದುಕುವ ಪಣತೊಡುತ್ತಾಳೆ. ಇದು ನಾಟಕದ ಕಥೆ ಹಾಗೂ ಹೆಲೆನ್ ಎನ್ನುವ ನಿಜವಾಗಿ ಬದುಕಿದ್ದ ಮಹಾನ್ ಕಲಾವಿದೆಯೊಬ್ಬಳ ಭಾಗಶಃ ಆತ್ಮಕಥೆ.

ಹೆಲೆನ್ಳ ಮರಣಾನಂತರ ದಕ್ಷಿಣ ಆಫ್ರಿಕಾದ ಸರಕಾರವು 1991 ರಲ್ಲಿ ಆಕೆಯ ಎಲ್ಲಾ ಶಿಲ್ಪಕಲಾಕೃತಿಗಳನ್ನು ಪ್ರಸಿದ್ದ ಕಲಾವಸ್ತು ಸಂಗ್ರಹಾಲಯವನ್ನಾಗಿಸಿ ಆಕೆಯ ಕಲೆಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಮುಕ್ತವಾಗಿಸಿತು. ಅಂತಹ ಅನಾಮಿಕ ಅದ್ಭುತ ಕಲಾವಿದೆಯ ಬದುಕನ್ನು ನಾಟಕವಾಗಿಸಿದ ಅಥೋಲ್ ಫುಗಾರ್ಡ ಮತ್ತು ಆ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿ ನಿದರ್ೆಶಿಸಿದ ಪ್ರಸನ್ನ ಹಾಗೂ ಪ್ರಸನ್ನನವರನ್ನು ಒತ್ತಾಯಿಸಿ ಈ ನಾಟಕದ ಪ್ರದರ್ಶನಕ್ಕೆ ಕಾರಣರಾದ ಮಹಿಳಾ ಹೋರಾಟಗಾರ್ತಿ ದು.ಸರಸ್ವತಿ ಇವರೆಲ್ಲಾ ಅಭಿನಂದನಾರ್ಹರು.
ಇಡೀ ನಾಟಕ ವ್ಯಕ್ತಿ ಸ್ವಾತಂತ್ರ್ಯದ ಕುರಿತದ್ದಾಗಿದೆ. ಹೆಲೆನ್ಳು ಕಲೆಯಲ್ಲಿ ತನ್ನ ಬದುಕನ್ನು ಕಾಣಲು, ತನ್ನ ಕಲಾಸೃಷ್ಟಿಯ ಮೂಲಕ ಬೆಳಕನ್ನು ನೋಡಲು ಪ್ರಯತ್ನಿಸುತ್ತಾಳೆ. ಯಾರ ಹಂಗಿಲ್ಲದೆ ಸ್ವತಂತ್ರವಾಗಿ ತನ್ನಗಿಷ್ಟಬಂದ ರೀತಿಯಲ್ಲಿ ಬದುಕಲು ಇಚ್ಚಿಸುತ್ತಾಳೆ. ಆದರೆ ಮತಾಂಧ ಪಾದ್ರಿ ಮತ್ತು ಧಮರ್ಾಂದರಾದ ಜನ ಅಸಹಾಯಕ ಒಂಟಿ ಮುದುಕಿಯನ್ನು ತನ್ನಷ್ಟಕ್ಕೆ ಬದುಕಲು ಬಿಡದೇ ಗೋಳುಹುಯ್ದುಕೊಳ್ಳುತ್ತಾರೆ. ಧರ್ಮ ಎನ್ನುವುದು ತನ್ನ ಪರಿಧಿಯೊಳಗೆ ಬರದವರನ್ನು ಹಲವಾರು ಆಸೆ ಆಮಿಷಗಳನ್ನು ತೋರಿಸಿ ಮಣಿಸಲು ನೋಡುತ್ತದೆ. ವಿರೋಧಿಸಿದವರನ್ನು ನಾಶ ಮಾಡಲು ಪ್ರಯತ್ನಿಸುತ್ತದೆ ಎನ್ನುವುದರ ಸೊಗಸಾದ ಚಿತ್ರಣ ಇಲ್ಲಿದೆ.
ಧಾರ್ಮಿಕ ಶೋಷಣೆ ಹೆಚ್ಚಾದಂತೆಲ್ಲಾ ಹೆಲೆನ್ ಚರ್ಚ್‌ನಿಂದ ವಿಮುಖಳಾಗುತ್ತಾಳೆ. ಆದರೆ ಆಕೆಯನ್ನು ಯಾಕೆ ಮುಸ್ಲಿಮರು ಆರಾಧಿಸುವ ಮೆಕ್ಕಾ ಸೆಳೆಯುತ್ತದೆ? ಮೆಕ್ಕಾದ ಭವ್ಯ ದೇವಸ್ಥಾನದಲ್ಲಿರುವ ಕನ್ನಡಿಯಿಂದಾವೃತವಾದ ಕೋಣೆ ಆಕರ್ಷಿಸುತ್ತದೆ? ಯಾಕೆ ಆಕೆಗೆ ಒಂಟೆಗಳ ಮೇಲೆ ಮೆಕ್ಕಾಕೆ ಪ್ರಯಾಣ ಮಾಡುವವರೆಲ್ಲಾ ಜಾಣರಂತೆ ತೋರುತ್ತಾರೆ? ಗೊತ್ತಿಲ್ಲಾ. ಎಲ್ಲಾ ಧರ್ಮಗಳಲ್ಲೂ ಮತಾಂಧತೆ, ಶೋಷಣೆ ಇದ್ದೇ ಇರುತ್ತದೆಂಬ ಪರಿಕಲ್ಪನೆಯೂ ಇಲ್ಲದ ಮುಗ್ಧ ಮುದುಕಿ ಆಕೆ. ತಾನಿರುವ ಧರ್ಮದಲ್ಲಿ ಕತ್ತಲಿದೆ ಅದಕ್ಕಾಗಿ ಬೆಳಕನ್ನು ಇನ್ನೊಂದು ಧರ್ಮದ ಸಂಕೇತದಲ್ಲಿ ಹುಡುಕುವ ಆಕೆಯ ಪ್ರಯತ್ನ ವೈಚಾರಿಕತೆಯನ್ನು ಮೀರಿದ್ದಾಗಿದೆ. ಒಂದು ನಂಬಿಕೆಯನ್ನು ಕಳೆದುಕೊಳ್ಳಲು ಇನ್ನೊಂದು ನಂಬಿಕೆಯನ್ನು ಅಪ್ಪಿಕೊಳ್ಳುವ ಅನಿವಾರ್ಯತೆಯೂ ಹೆಲೆನ್ಳದ್ದಾಗಿದ್ದರಿಂದ ಮೆಕ್ಕಾ ಆಕೆಯ ಬದುಕಿನ ಬೆಳಕಿನ ದಾರಿಯಾಗಿ ತೋರುತ್ತದೆ.
‘ಮೆಕ್ಕಾ ದಾರಿ’ಯಲ್ಲಿ ಹಳ್ಳಿ ಮತ್ತು ನಗರಗಳ ಸಾಂಸ್ಕೃತಿಕ ಭಿನ್ನತೆ ಹಾಗೂ ಬದುಕಿನ ನೂನ್ಯತೆ ಅನಾವರಣಗೊಂಡಿದೆ. ಈ ನಾಟಕದಲ್ಲಿ ಎರಡು ಪ್ರಮುಖ ಮಹಿಳಾ ಪಾತ್ರಗಳು ಮುಖಾಮುಖಿಯಾಗುತ್ತವೆ. ಹೆಲೆನ್ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದರೆ, ‘ಎಲ್ಸಿ’ ಶಹರದ ಬಿಂದಾಸ್ ಸಂಸ್ಕೃತಿಯ ಪ್ರತೀಕವಾಗಿದ್ದಾಳೆ. ಸಿಗರೇಟು, ಕುಡಿತ ಮತ್ತು ವಿವಾಹಪೂರ್ವ ಪ್ರಣಯಗಳ ಸುಳಿಯಲ್ಲಿ ಸುಖಿಸುವ ಎಲ್ಸಿ ದೊಡ್ಡ ನಗರದ ಶಾಲೆಯೊಂದರ ಶಿಕ್ಷಕಿಯೆನ್ನುವುದೊಂದು ವಿಪರ್ಯಾಸ. ಆಕೆ ಶಾಲಾ ಮಕ್ಕಳಿಗೆ ಸ್ವತಂತ್ರ ಆಲೋಚನೆಯ ಪಾಠ ಹೇಳಲು ಹೋಗಿ ಶಾಲಾ ಆಡಳಿತ ಮಂಡಳಿಯ ಕೆಂಗೆಣ್ಣಿಗೆ ಗುರಿಯಾಗಿರುತ್ತಾಳೆ. ಹಾಗಾದರೆ ಎಲ್ಸಿ ಪಾತ್ರದ ಸ್ವಾತಂತ್ರ್ಯದ ಪರಿಕಲ್ಪನೆ ಎಂದರೆ ಧೂಮಪಾನ, ಮಧ್ಯಪಾನ ಹಾಗೂ ವಿವಾಹಪೂರ್ವ ಬಸಿರಾಗುವುದಾ? ಅಥವಾ ವಿವಾಹಿತನ ಕುಟುಂಬವನ್ನು ಮುರಿದು ತನ್ನ ಬದುಕು ಕಟ್ಟಿಕೊಳ್ಳುವುದಾ? ಇಂತಹ ವಿಕೃತ ಸ್ವಾತಂತ್ರ್ಯದ ಸವಿಯನ್ನು ಸವಿದು ಅದರ ದುಷ್ಪರಿಣಾಮವನ್ನೂ ಅನುಭವಿಸಿದ ಎಲ್ಸಿ ತನ್ನ ಶಾಲಾ ಮಕ್ಕಳಿಗೆ ಹಾಗೂ ಹಳ್ಳಿಯ ಮುಗ್ದ ಮುದುಕಿಗೆ ಸ್ವಾತಂತ್ರ್ಯದ ಪಾಠ ಮಾಡುವುದು ಈ ನಾಟಕದ ವಿಪಯರ್ಾಸವಾಗಿದೆ. ಸ್ವಾತಂತ್ರ್ಯದ ಕಲ್ಪನೆಯೂ ಇಲ್ಲದ ಅಸಹಾಯಕ ಹೆಂಗಸು ಹೆಲೆನ್ ಬಂದಂತೆ ಬದುಕನ್ನು ಸ್ವೀಕರಿಸುತ್ತಾ ತನ್ನ ಕಲಾಕಾಯಕದಲ್ಲಿ ಬೆಳಕನ್ನು ಕಾಣುತ್ತಾಳೆ. ವಿವಾಹಿತನೆಂದು ಗೊತ್ತಿದ್ದೂ ಸಂಬಂಧ ಬೆಳೆಸಿ ಮೋಸಹೋಗಿದ್ದನ್ನು ನಂಬಿಕೆದ್ರೋಹ ಎಂದು ಸಾರುವ ನಗರವಾಸಿ ಎಲ್ಸಿ ಯಾರನ್ನೂ ನಂಬಬಾರದು ಎನ್ನುವ ತತ್ವ ಪ್ರತಿಪಾದಿಸುತ್ತಾಳೆ. ಆದರೆ ತನ್ನ ಜನರಿಂದ, ತಾನು ನಂಬಿದ ಧರ್ಮದವರಿಂದ ತೊಂದರೆ ಅನುಭವಿಸಿದರೂ ಹಳ್ಳಿಯ ಹೆಲೆನ್ ನಂಬಿಕೆದ್ರೋಹ ಆಗಿಲ್ಲ ಎನ್ನುತ್ತಾಳೆ.
ಈ ಎರಡೂ ಮಹಿಳಾ ಪಾತ್ರಗಳೂ ಸ್ವಭಾವದಲ್ಲಿ ಭಿನ್ನವಾಗಿವೆ. ಸ್ವೇಚ್ಚಾಚಾರವನ್ನು ಸ್ವಾತಂತ್ರ್ಯವೆಂದು ಭ್ರಮಿಸುವ ಎಲ್ಸಿ ಜಾಗತೀಕರಣದ ಸಂಕೇತವಾದರೆ, ಸ್ವಾತಂತ್ರ್ಯರಹಿತ ಶೋಷಣೆಯ ಬದುಕಿನಲ್ಲೂ ತನ್ನ ಕಾಯಕದ ಮೂಲಕ ಬೆಳಕನ್ನು ಪರಿಭಾವಿಸುವ ಹೆಲೆನ್ ಯಥಾಸ್ಥಿತಿವಾದದ ಪ್ರತೀಕವಾಗಿದ್ದಾಳೆ. ಈ ಎರಡೂ ಭಿನ್ನ ವಯೋಮಾನದ, ವಿಭಿನ್ನ ಮಾದರಿಯ ವೈರುದ್ಯದ ಪಾತ್ರಗಳು ಆತ್ಮೀಯ ಗೆಳೆತನದ ಸಂಬಂಧ ಹೊಂದಿರುವುದೇ ಒಂದು ಅಚ್ಚರಿ. ಈ ಪಾತ್ರಗಳ ಸೃಷ್ಟಿಯಿಂದಾಗಿ ಗ್ರಾಮ ಮತ್ತು ನಗರವಾಸಿಗಳಾದವರ ಸ್ವಾತಂತ್ರ್ಯದ ಪರಿಕಲ್ಪನೆಗಳು ಈ ನಾಟಕದಲ್ಲಿ ಮನೋಜ್ಞವಾಗಿ ಅನಾವರಣಗೊಂಡಿವೆ.
ದಲಿತ ಮತ್ತು ಮಹಿಳಾಪರ ಹೋರಾಟಗಾರ್ತಿ, ‘ಮಾನಸ’ ಪತ್ರಿಕೆಯ ಸಂಪಾದಕಿ ದು.ಸರಸ್ವತಿಯವರ ಸ್ತ್ರೀಪರ ಆಶಯಕ್ಕೆ ಪೂರಕವಾಗಿ ಸ್ತ್ರೀವಾದಿ ಚಿಂತನೆಗಳ ಆಯಾಮಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ‘ಮೆಕ್ಕಾ ದಾರಿ’ ನಾಟಕ ಪ್ರಸ್ತುತಗೊಂಡಿದೆ. ಸ್ವತಃ ಸರಸ್ವತಿಯವರೇ ಹೆಲನ್ ಪಾತ್ರವನ್ನು ಅಭಿನಯಿಸಿದ್ದು ಅನನ್ಯವಾಗಿದೆ. ಆ ಪಾತ್ರಕ್ಕೆ ಬೇಕಾದ ಅಸಹಾಯಕತೆ, ಮುಗ್ಧತೆಗಳಿಗೆ ಸರಸ್ವತಿಯವರು ಹೇಳಿ ಮಾಡಿಸಿದಂತಿದ್ದಾರೆ, ಎಲ್ಸಿ ಪಾತ್ರಕ್ಕೆ ವಾಣಿ ಪೆರಿಯೋಡಿಯವರು ಜೀವತುಂಬಿ ಅಭಿನಯಿಸಿದ್ದಾರೆ. ಪ್ರಸಾಧನಕಲೆಯಲ್ಲಿ ಪಳಗಿದ ಮೇಕಪ್ಮ್ಯಾನ್ ರಾಮಕೃಷ್ಣ ಬೆಳ್ತೂರ್ ನಟನೆಯಲ್ಲೂ ತಮ್ಮ ಕೌಶಲವನ್ನು ತೋರಿಸಿದ್ದು ಪಾದ್ರಿ ಮಾರಿಸಸ್ ಪಾತ್ರಕ್ಕೆ ನ್ಯಾಯವದಗಿಸಲು ತುಂಬಾನೇ ಶ್ರಮಿಸಿದ್ದಾರೆ. ಈ ಮೂವರೂ ಕಲಾವಿದರಲ್ಲಿ ಯಾರೂ ಅಭಿನಯದಲ್ಲಿ ಪಳಗಿದವರಲ್ಲಾ, ವೃತ್ತಿಪರ ನಟರೂ ಅಲ್ಲಾ, ನೀನಾಸಂ-ಎನ್ಎಸ್ಡಿ ಪದವೀದರರೂ ಅಲ್ಲಾ, ಆದರೆ ಪ್ರಸನ್ನರವರಂತಹ ನಿದರ್ೆಶಕರ ಕೈಗೆ ಸಿಕ್ಕರೆ ಹೇಗೆ ವ್ಯಕ್ತಿಗಳು ಪಾತ್ರಗಳಾಗಿ ರೂಪಾಂತರ ಹೊಂದುತ್ತಾರೆ ಎನ್ನುವುದಕ್ಕೆ ಈ ನಾಟಕದಲ್ಲಿ ಆ ಮೂವರ ಅಭಿನಯವೇ ಸಾಕ್ಷಿ.
ಪ್ರತಿಯೊಂದು ಚಲನೆ, ಬ್ಲಾಕಿಂಗ್, ಆಗಮನ, ನಿರ್ಗಮನ ಎಲ್ಲವೂ ಕರಾರುವಕ್ಕಾಗಿತ್ತು. ಇದು ಬರೀ ಮಾತಿನ ನಾಟಕ. ನಾಟಕದ ತುಂಬಾ ಬರೀ ಮಾತು ಮಾತು ಮಾತು, ಆದರೆ ಮಾತಿನ ಏರಿಳಿತ, ಸಂಭಾಷನೆಗಳ ಸ್ವಾರಸ್ಯ, ವ್ಯಂಗ್ಯವನ್ನು ಪಂಚ್ ಮಾಡುವ ವಿಧಾನ ಎಲ್ಲವೂ ನೇರವಾಗಿ ಪ್ರೇಕ್ಷಕರ ಗ್ರಹಿಕೆಗೆ ತಲುಪುವಂತಿದ್ದವು. ಅಪೂರ್ವ ಸೆಟ್ ಪರಿಕರಗಳಿಲ್ಲದೇ, ಹಾಡು ಸಂಗೀತಗಳ ಮಧುರತೆಗಳಿಲ್ಲದೇ, ಬೆಳಕಿನ ಚಮತ್ಕಾರಗಳಿಲ್ಲದೇ, ಹಿನ್ನಲೆ ಸೌಂಡ್ ಎಫೆಕ್ಟ್ಗಳಿಲ್ಲದೇ, ದೃಶ್ಯವೈಭವಗಳಿಲ್ಲದೇ ಸರಿ ಸುಮಾರು ಎರಡು ಗಂಟೆಗಳ ಕಾಲ ಕೇವಲ ಮೂರು ಪಾತ್ರಗಳನ್ನಿಟ್ಟುಕೊಂಡು ಮಾತಿನ ಮೂಲಕ ಏಕಾಂಕ ನಾಟಕವನ್ನು ಕಟ್ಟಿಕೊಡುವುದು ಅಷ್ಟು ಸುಲಭಸಾಧ್ಯವಲ್ಲ. ಬಹು ವರ್ಷಗಳ ನಂತರ ನಾಟಕವೊಂದನ್ನು ನಿದರ್ೆಶಿಸಿದ ಪ್ರಸನ್ನರವರು ತಮ್ಮಲ್ಲಿರುವ ನಿದರ್ೆಶಕ ಇನ್ನೂ ಕ್ರಿಯಾಶೀಲವಾಗಿದ್ದಾನೆ ಎಂಬುದನ್ನು ಈ ನಾಟಕದ ಮೂಲಕ ಸಾಬೀತುಪಡಿಸಿದ್ದಾರೆ.
ಮೂಡ್ ಸೃಷ್ಟಿಸಲು ಆಗಾಗ ಆಲಾಪಗಳನ್ನು ಬಳಸಲಾಗಿದೆಯಾದರೂ ಅವು ಕೆಲವೊಮ್ಮೆ ಸಂಭಾಷನೆಗೆ ಓವರ್ಲ್ಯಾಪ್ ಆಗಿದ್ದು ಮಾತನ್ನು ನುಂಗಿಹಾಕುವಂತಿತ್ತು. ಬೆಳಕಿನಲ್ಲಿ ಏನೂ ವ್ಯತ್ಯಾಸವಿಲ್ಲ. ಇಡೀ ನಾಟಕ ನಿಂತಿದ್ದೇ ಬೆಳಕಿನ ರೂಪಕದ ಮೇಲೆ. ಆದರೆ ಬೆಳಕಿನ ವಿನ್ಯಾಸವೇ ತುಂಬಾ ಪೇಲರವವಾಗಿತ್ತು. ಶಶಿಧರ ಅಡಪರವರ ರಂಗಸಜ್ಜಿಕೆಯಲ್ಲಿ ಏನೇನು ವಿಶೇಷವಿರಲಿಲ್ಲ. ಯಾವುದೇ ಕೋನದಲ್ಲಿಯೂ ಅದೊಂದು ಕಲಾವಿದೆಯ ಮನೆ ಎಂಬುದಕ್ಕೆ ಕನಿಷ್ಟ ಕುರುಹುಗಳು ಇರಲಿಲ್ಲ. ತುಂಬಾ ಸರಳವಾಗಿ ನಾಟಕವನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ನಟನೆಯಿಂದಲೇ ನಾಟಕ ಪ್ರೇಕ್ಷಕರಿಗೆ ತಲುಪಬೇಕೆ ಹೊರತು ಇತರ ಪೂರಕ ರಂಗಸಾಮಗ್ರಿಗಳಿಂದಲ್ಲ ಎಂದು ತಮ್ಮೆಲ್ಲಾ ನಾಟಕಗಳ ಮೂಲಕ ಪ್ರತಿಪಾದಿಸಿದ ಪ್ರಸನ್ನರವರು ನಟರ ಅಭಿನಯದ ಮೇಲೆ ತಮ್ಮೆಲ್ಲಾ ಗಮನವನ್ನು ಕೇಂದ್ರೀಕರಿಸಿದ್ದಾರೆ. ಆ ಮೂರು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ‘ನಟನೆಯ ಪಾಠ’ಗಳನ್ನು ಹೇಳಿಕೊಟ್ಟಿದ್ದಾರೆಂದೆನಿಸುತ್ತದೆ.
ಕಥೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತದೆ. ಪಾತ್ರದಾರಿಗಳ ಹೆಸರು ಊರಿನ ಹೆಸರುಗಳು ಆ ದೇಶದ್ದೇ ಆಗಿವೆ. ಆದರೆ ಪ್ರಸ್ತುತಗೊಂಡ ಪಾತ್ರಗಳು, ಅವುಗಳ ವೇಷ ಭೂಷಣಗಳು ಮಾತ್ರ ದಕ್ಷಿಣ ಭಾರತದ್ದಾಗಿವೆ. ಬಿಳಿಯ ಪಾದ್ರಿ ಎಂದು ನಾಟಕದಲ್ಲಿ ಪಾತ್ರಗಳು ಹೇಳುತ್ತವೆ ಆದರೆ ಕರಿಯ ಪಾದ್ರಿಯನ್ನು ರಂಗದ ಮೇಲೆ ಸೃಷ್ಟಿಸಲಾಗಿದೆ. ಈ ವೈರುಧ್ಯವನ್ನು ಸರಿಮಾಡಿದ್ದರೆ ಸಾಮಾನ್ಯ ಪ್ರೇಕ್ಷಕರಲ್ಲುಂಟಾಗಬಹುದಾದ ಗೊಂದಲವನ್ನು ತಪ್ಪಿಸಬಹುದಾಗಿತ್ತು. ಭಾಷೆಯನ್ನು ಹೊರತುಪಡಿಸಿ ಪೂತರ್ಿ ನಾಟಕ ದಕ್ಷಿಣ ಆಫ್ರಿಕಾದ ಸಂಸ್ಕೃತಿಯನ್ನಾದರೂ ಬಿಂಬಿಸಬೇಕಾಗಿತ್ತು, ಇಲ್ಲವೇ ಈ ನೆಲದ ಸಂಸ್ಕೃತಿಗೆ ತಕ್ಕಂತೆ ವೇಷ, ಹೆಸರು, ಮೇಕಪ್ಗಳನ್ನು ಹೊಂದಿಸಬೇಕಾಗಿತ್ತು. ಆದರೆ ಎರಡು ಭಿನ್ನ ದೇಶಗಳ ವಿಭಿನ್ನ ಜನಸಂಸ್ಕೃತಿಗಳನ್ನು ಬ್ಲೆಂಡ್ ಮಾಡಿದ್ದು ಒಂದಿಷ್ಟು ಗೊಂದಲಕಾರಿಯಾಗಿದೆ.
ಹೆಲೆನ್ಳ ನಿಜಜೀವನ ಕೊನೆ ಹಾಗೂ ಅಥೋಲ್ರವರ ಮೂಲ ನಾಟಕದ ಅಂತ್ಯ ದುಃಖಾಂತ್ಯವಾಗಿದ್ದರೂ, ಪ್ರಸನ್ನರವರ ಸುಧೀರ್ಘ ಮಾತಿನ ಈ ನಾಟಕ ಸುಖಾಂತ್ಯವಾಗಿ ಕೊನೆಗೊಳ್ಳುತ್ತದೆ, ಆದರೆ ನಾಟಕದ ನಂತರ ಸಾಮಾನ್ಯ ಪ್ರೇಕ್ಷಕರ ತಲೆಯಲ್ಲಿ ಕೆಲವು ತಾಕರ್ಿಕ ಪ್ರಶ್ನೆಗಳು ಹುಳುವಿನಂತೆ ಕೊರೆಯುತ್ತವೆ. ಕ್ರಿಶ್ಚಿಯನ್ ಸಮುದಾಯದಲ್ಲೇ ಹುಟ್ಟಿ ಬೆಳೆದ ಹಳ್ಳಿಯ ಮುಗ್ಧ ಮುದುಕಿಗೆ ಇಸ್ಲಾಂ ಧರ್ಮದ ಮೆಕ್ಕಾದ ಮೇಲೆ ಮೋಹ ಬೆಳೆಯುವುದು ಹೇಗೆ? ಅದಕ್ಕೆ ಪ್ರೇರಣೆಯಾದರೂ ಏನು? ವಿದ್ಯಾವಂತ ಪಾದ್ರಿನೇ ಮೆಕ್ಕಾದ ಇರುವನ್ನು ಭೂಪಟದಲ್ಲಿ ಹುಡುಕುತ್ತೇನೆನ್ನುವಾಗ ಇನ್ನು ತನ್ನ ಮನೆಯನ್ನು ಬಿಟ್ಟು ಎಲ್ಲೂ ಹೋಗದ, ಒಂಟಿಯಾಗಿರುವ ಮುದುಕಿಗೆ ಮೆಕ್ಕಾದ ಪರಿಕಲ್ಪನೆ ಬರಲು ಇರುವ ಕಾರಣಗಳಾದರೂ ಏನು? ನಗರದಲ್ಲಿ ಸ್ವೇಚ್ಚಾಚಾರದ ಬದುಕು ನಡೆಸುತ್ತಿದ್ದ ಮಹಿಳೆಯು ಮಕ್ಕಳಿಗೆ ಶಾಲೆಯಲ್ಲಿ ಸ್ವತಂತ್ರ ಅಭಿವ್ಯಕ್ತಿಯ ಪಾಠ ಮಾಡುವುದು ಸಮರ್ಥನೀಯವೇ? ಅಂತಹ ದುರಭ್ಯಾಸಗಳಿರುವ ಹೆಣ್ಣು ಶಿಕ್ಷಕಿಯಾಗಿರಲು ಯೋಗ್ಯವೇ? ಅವಳ ಪ್ರಕಾರ ಸ್ವಾತಂತ್ರ್ಯ ಅಂದರೆ ದೂಮಪಾನ, ಕುಡಿತ, ವಿವಾಹಬಾಹಿರ ಸಂಬಂಧಗಳಾ? ತನ್ನ ಬದುಕನ್ನೇ ನೆಟ್ಟಗೆ ಕಟ್ಟಿಕೊಳ್ಳಲಾಗದ ಆಕೆ ಹಳ್ಳಿಯ ಮುಗ್ದ ಮಹಿಳೆಗೆ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಲು ಹೇಳುವುದರಲ್ಲಿ ಯಾವ ತರ್ಕವಿದೆ? ಯಾವುದರಲ್ಲಿಯೂ ಸಾಮ್ಯತೆ ಇಲ್ಲದ ಈ ಇಬ್ಬರೂ ಮಹಿಳೆಯರು ಅತ್ಯಂತ ಆತ್ಮೀಯ ಗೆಳೆತನ ಹೊಂದಿರುತ್ತಾರೆಂಬುದು ನಂಬಲು ಸಾಧ್ಯವೇ? ಮಹಿಳಾವಾದಕ್ಕೆ, ಸ್ವಾತಂತ್ರ್ಯದ ಪರಿಕಲ್ಪನೆಗೆ ವಿರುದ್ಧವಾದ ರೀತಿಯಲ್ಲಿ ಎಲ್ಸಿ ಎನ್ನುವ ಪಾತ್ರ ಸೃಷ್ಟಿಯಾಗಿದ್ದು ಈ ನಾಟಕದ ನಿಜವಾದ ಆಶಯಕ್ಕೆ ದಕ್ಕೆಯಾಗಲಿಲ್ಲವೇ? ಆ ದೇಶದ ಸಂಸ್ಕೃತಿಗೆ ಎಲ್ಸಿ ಪಾತ್ರಪೋಷಣೆ ಸೂಕ್ತವಾಗಿರಬಹುದು ಆದರೆ ನಮ್ಮಲ್ಲಿ ಅಂತಹ ಅನಾದರ್ಶ ಶಿಕ್ಷಕಿಯನ್ನು ಒಪ್ಪಿಕೊಳ್ಳಲು ಸಾಧ್ಯವೆ?
ಹೀಗೆ… ಹತ್ತು ಹಲವು ಸಂದೇಹಗಳು ಕಾಡುತ್ತವೆ. ಈ ಸಂದೇಹಗಳು ಬುದ್ದಿಜೀವಿ ಪ್ರೇಕ್ಷಕರಿಗೆ ಬರದಿರಬಹುದು. ಯಾಕೆಂದರೆ ಅವರು ಪ್ರಭುದ್ದರು. ನಾಟಕದ ಆಶಯವನ್ನಷ್ಟೇ ಗಮನಿಸಿ ಆ ಆಶಯಕ್ಕೆ ವ್ಯತಿರಿಕ್ತವಾಗಿದ್ದನ್ನು ನಿರ್ಲಕ್ಷಿಸುತ್ತಾರೆ. ಆದರೆ ಸಾಮಾನ್ಯ ಪ್ರೇಕ್ಷಕರ ಗ್ರಹಿಕೆಗೆ ಚಿಕ್ಕಪುಟ್ಟ ವಿಪಯರ್ಾಸಗಳೂ ದೊಡ್ಡ ಸಂದೇಹವನ್ನುಂಟುಮಾಡುತ್ತವೆ. ಏನೇ ಆಗಲಿ ವೈರುದ್ಯಗಳಲ್ಲೇ ವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಹೇಳುವುದರಲ್ಲಿ ‘ಮೆಕ್ಕಾ ದಾರಿ’ ಯಶಸ್ವಿಯಾಗಿದೆ.

ಶುಕ್ರವಾರ, ಸೆಪ್ಟೆಂಬರ್ 6, 2013

ಶಶಿಕಾಂತ ಯಡಹಳ್ಳಿ ವಿಮರ್ಶೆ: ಬಲಿದಾನಕುಂಟೆ ಕೊನೆ?

September 6, 2013
by G
ಕುವೆಂಪುರವರ ‘ಬಲಿದಾನ’ದಲ್ಲಿ ಸಾರ್ವಕಾಲಿಕ ದರ್ಶನ
ಶಶಿಕಾಂತ ಯಡಹಳ್ಳಿ
ಬಲಿಪರಂಪರೆವೇಳ್ಕುಮೀ ಸ್ವಾತಂತ್ರ್ಯ ಸಾಧನೆಗೆ,
ಪಡೆಯೆ ಬಲಿದಾನಂ; ಪಡೆದುದ ಪಿಡಿಯೇ ಬಲಿದಾನಂ;
ಪಿಡಿದುದಂ ನಡೆಯೆ ಬಲಿದಾನಂ! ಬಲಿದಾನಕುಂಟೆ ಕೊನೆ ?
ಬಲಿಪರಂಪರೆಯಲ್ತೆ ಸ್ವಾತಂತ್ರ್ಯ ಜೀವನಂ !
ಮೇಲಿನ ಈ ಸಾಲುಗಳು ಇಡೀ ‘ಬಲಿದಾನ’ ನಾಟಕದ ಅಂತಃಸತ್ವವಾಗಿದೆ. ಸ್ವಾತಂತ್ರ್ಯದ ಅಗತ್ಯತೆ ಮತ್ತು ಬಲಿದಾನದ ಅನಿವಾರ್ಯತೆಗಳನ್ನು ಕುವೆಂಪುರವರು ಈ ‘ಬಲಿದಾನ’ ನಾಟಕದಲ್ಲಿ ನಿರೂಪಿಸಿದ್ದಾರೆ. ಭಾರತದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಹಾಗೂ ಸಮಕಾಲೀನತೆ ಕಳೆದುಕೊಂಡ ಹಳೆಯ ವಸ್ತು-ವಿಷಯವನ್ನು ಹೊಂದಿರುವ ನಾಟಕವಿದೆೆಂದು ಜಾಗತೀಕರಣ ಕಾಲದ ನೋಡುಗರಿಗೆ ಮೇಲ್ನೋಟಕ್ಕೆ ಅನ್ನಿಸಬಹುದಾದರೂ ಅದರ ಆಳಕ್ಕಿಳಿದು ಆಲೋಚಿಸಿದರೆ ಇದು ಕೇವಲ ನಾಟಕವಲ್ಲ ಅಪೂರ್ವವಾದ ‘ದಾರ್ಶನಿಕ ರೂಪಕ’ ಎಂಬುದು ಅರಿವಾಗುತ್ತದೆ. ಕುವೆಂಪುರವರ ಪ್ರತಿಮಾತ್ಮಕ ದರ್ಶನ ಪ್ರಜ್ಞೆಯ ವಿರಾಟ ರೂಪ ಈ ರೂಪಕದಲ್ಲಿ ಹಾಸುಹೊಕ್ಕಾಗಿದೆ.
ಭಾಷೆ ಮತ್ತು ನಿರೂಪಣೆಯಲ್ಲಿ ಕ್ಲಿಷ್ಟಕರವೆನಿಸುವ ‘ಬಲಿದಾನ’ ನಾಟಕವನ್ನು ಚಂದ್ರಶೇಖರ್ ಪ್ರತಿಷ್ಠಾನವು ನಿಮರ್ಿಸಿದ್ದು ಮಹಾಂತೇಶ ದೇಗಾಂವಿ ನಿದರ್ೆಶಿಸಿದ್ದಾರೆ. 2013, ಆಗಸ್ಟ್ 30 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಚಂದ್ರಶೇಖರ್ ಪ್ರತಿಷ್ಠಾನವು ಆಯೋಜಿಸಿದ್ದ ‘ಕುವೆಂಪು ಸಂಸ್ಕೃತಿ ಚೇತನ’ ಕಾರ್ಯಕ್ರಮದಲ್ಲಿ ‘ಬಲಿದಾನ’ ನಾಟಕವು ಪ್ರದರ್ಶನಗೊಂಡಿತು.
ಬಲಿದಾನ ನಾಟಕದಲ್ಲಿ ಪ್ರಮುಖವಾಗಿ ಇರುವುದು ಎರಡೇ ಪಾತ್ರಗಳು. ಒಂದು ಭಾರತಮಾತೆ ಇನ್ನೊಂದು ಭರತಸುತ. ಅದಕ್ಕೆ ಪೂರಕವಾಗಿ ಎರಡು ಆತ್ಮ ಪಾತ್ರಗಳು ಹಾಗೂ ಒಂದು ಛಾಯಾದ್ವನಿ ಪಾತ್ರಗಳು ಸೃಷ್ಟಿಗೊಂಡಿವೆ. ಶಿಥಿಲಗೊಂಡ ಕಾಳಿಕಾಮಂದಿರದಲ್ಲಿ ಬಂಧಿಸಲ್ಪಟ್ಟ ಭಾರತಮಾತೆಯ ದುಸ್ಥಿತಿಗೆ ಆಕ್ರೋಶಗೊಂಡ ಭಾರತಸುತ ಆಕೆಯ ದಾಸ್ಯಸಂಕೋಲೆಯ ಕೀಲಿಕೈಯನ್ನು ತರಲು ಹೊರಡುತ್ತಾನೆ. ದೇಶಭಕ್ತರ ಬಲಿದಾನದಿಂದಾಗಿ ಪರಕೀಯರ ಜೊತೆ ಹೋರಾಡಿ ಸ್ವಾತಂತ್ರ್ಯ ಪಡೆದು ಬಂದು ಭಾರತಾಂಬೆಯ ಸಂಕೋಲೆಗಳನ್ನು ಕಳಚುತ್ತಾನೆ. ಮತ್ತೆ ಮತೀಯ ಗಲಭೆಗಳಿಂದಾಗಿ ಅಸಂಖ್ಯಾತ ಜನರ ಬಲಿಯಾಗಿದ್ದರಿಂದ ಭಾರತಮಾತೆ ತಳಮಳಿಸುತ್ತಾಳೆ. ಗಾಂಧೀಜಿಯ ಪ್ರಯತ್ನಕ್ಕೆ ಮೆಚ್ಚುವ ಭಾರತಮಾತೆ ಗಾಂಧಿ ಬಲಿದಾನದಿಂದ ತಲ್ಲಣಗೊಳ್ಳುತ್ತಾಳೆ. ಮತೀಯ ಸೌಹಾರ್ದತೆ ಇಲ್ಲದಿದ್ದರೆ ಸ್ವಾತಂತ್ರ್ಯ ಅರ್ಥಹೀನ ಎನ್ನುತ್ತಾಳೆ. ಭವಿಷ್ಯದ ಭಾರತವನ್ನು ಕಂಡು ಭಾರತಾಂಬೆ ದುಃಖಿತಳಾಗುತ್ತಾಳೆ. ಭಾರತೀಸುತನಿಗೆ ಮುಂದಾಗುವುದನ್ನೂ ಪ್ರತಿಮಾವಿಧಾನದಿಂದ ತೋರಿಸುತ್ತಾಳೆ. ನೀಂ ಕಂಡ ದರ್ಶನದೊಳ್ ಅಖಿಳಾರ್ಥ ಮಂ ತಿಳಿದು ಕಾಣ್! ಸ್ವಾತಂತ್ರ್ಯ ಜೀವನಂ ಬಲಿಪರಂಪರೆಯೆಂಬುದಂ, ಬಲಿದಾನ ತತ್ತ್ವಮಂ, ಭಾವಿಸಿ ಮನಗಾಣ್! ಎಂಬ ಭಾರತಮಾತೆಯ ಸಾರ್ವಕಾಲಿಕ ಪ್ರಜ್ಞೆಯ ಮಾತುಗಳಿಂದ ನಾಟಕ ಕೊನೆಯಾಗುವ ಜೊತೆಗೆ ‘ಸ್ವಾತಂತ್ರ್ಯ ಬೇಕು ಅಂದರೆ ಬಲಿದಾನಕ್ಕೆ ಸಿದ್ದರಾಗಲೇಬೇಕು’ ಎಂಬ ಸಾರ್ವತ್ರಿಕ ಸಂದೇಶವನ್ನು ಕೊಡುತ್ತದೆ.
‘ಬಲಿದಾನ’ವು ಒಂದು ಏಕಾಂಕ ನಾಟಕವೆಂದು ಅನ್ನಿಸಿದರೂ ಮೂರು ದೃಶ್ಯಗಳನ್ನು ಹೊಂದಿದೆ. ಭೂತ, ವರ್ತಮಾನ ಹಾಗೂ ಭವಿಷ್ಯವನ್ನು ಈ ಮೂರು ದೃಶ್ಯಗಳು ಅನುಕ್ರಮವಾಗಿ ದಶರ್ಿಸುತ್ತವೆ. ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯನಂತರದ ಭಾರತದ ಸನ್ನಿವೇಶಗಳನ್ನು ಸಾಂಕೇತಿಸುವ ಈ ಮೂರು ದೃಶ್ಯಗಳನ್ನು ಪ್ರತಿಮಾವಿಧಾನದಲ್ಲಿ ಕುವೆಂಪುರವರು ನಾಟಕವಾಗಿಸಿದ್ದಾರೆ. ಇಡೀ ನಾಟಕದಾದ್ಯಂತ ಪ್ರತಿಮೆಗಳೇ ರೂಪಕಗಳಾಗಿ ನೋಡುಗರನ್ನು ದಿಗ್ಬ್ರಮೆಗೊಳಿಸುತ್ತವೆ. ಪ್ರತಿಯೊಂದು ಸನ್ನಿವೇಶ ಹಾಗೂ ಸಂಭಾಷನೆಗಳನ್ನು ಅಥರ್ೈಸಿಕೊಳ್ಳುತ್ತಾ ಹೋದರೆ ರೂಪಕದ ಅನನ್ಯತೆ ಅರಿವಾಗುತ್ತದೆ.
ಶಿಥಿಲಗೊಂಡ ಕಾಳಿಗುಡಿ ಸ್ವಾತಂತ್ರ್ಯಪೂರ್ವದ ಭಾರತದ ದುಸ್ಥಿತಿಯನ್ನು ತೋರಿದರೆ, ಯಾರು ನೀನು? ಎಂದು ಭಾರತಾಂಬೆಯನ್ನೇ ಪ್ರಶ್ನಿಸುವ ಭರತಸುತ ಗುಲಾಮಗಿರಿಯಲ್ಲಿ ಸ್ವಾತಂತ್ರ್ಯಪ್ರಜ್ಞೆಯನ್ನೇ ಮರೆತ ಭಾರತೀಯರ ಆಗಿನ ಮನಸ್ಥಿತಿಯನ್ನು ಸಂಕೇತಿಸುತ್ತಾನೆ. ”ನನ್ನ ಮನೆಯಲ್ಲಿ ನಾನೇ ತೊತ್ತಾಗಿ ಬಿದ್ದಿರುವೆ!… ನಾನು ಹಳೆಯ ಕಾಲದ ಮುದುಕಿ ಎಂದು ತನ್ನ ಅಸಹಾಯಕತೆಯನ್ನು ಭಾರತಮಾತೆ ತೋಡಿಕೊಳ್ಳುವ ಮೂಲಕ ತನ್ನ ದುರಾವಸ್ಥೆಯನ್ನು ಹೇಳುತ್ತಾಳೆ. ಮುದುಕಿಯಾದರೂ ತರಳೆಯಂತೆ ತೋರುವುದು ಒಳಗಿರುವ ಬೆಳಕಿಂದ” ಎನ್ನುವ ಭಾರತಾಂಬೆಯ ಮಾತು ಈ ದೇಶದ ಆಂತರಿಕ ಶಕ್ತಿಯನ್ನು ತೋರುತ್ತದೆ.
ಆದರೆ… ಕುವೆಂಪುರವರ ‘ಬಲಿದಾನ’ ರೂಪಕದ ಒಳಾರ್ಥಗಳು ನಿದರ್ೆಶಕರ ಗ್ರಹಿಕೆಗೆ ಪೂರ್ಣವಾಗಿ ದಕ್ಕಿಲ್ಲ. ರೂಪಕದ ಬಾಹ್ಯವನ್ನು ಮಾತ್ರ ಗ್ರಹಿಸಿದ ಅವರು ಅದರ ಆಂತರಿಕ ಪ್ರತಿಮಾ ಪ್ರಜ್ಞೆಯನ್ನು ಅವಜ್ಞೆಗೊಳಿಸಿದ್ದಾರೆ ಎಂಬ ಸಂದೇಹ ಬಾರದಿರದು. ಕುವೆಂಪುರವರು ತಮ್ಮ ರಂಗಪಠ್ಯದಲ್ಲಿ ರೂಪಕ ದರ್ಶನವನ್ನು ಕಾಣಿಸುತ್ತಾರೆ. ಆದರೆ ಈ ನಾಟಕ ಪ್ರದರ್ಶನದಲ್ಲಿ ಘಟನೆಗಳ ಪ್ರಸ್ತುತಿ ಕಾಣುತ್ತದೆ. ಕುವೆಂಪುರವರೇ ಹೇಳಿದ ಹಾಗೆ ಅವರ ನಾಟಕಗಳನ್ನು ಮನೋರಂಗಭೂಮಿಯಲ್ಲಿಯೇ ಸೃಷ್ಟಿಸಿ ದೃಷ್ಟಿಸಬೇಕು. ರಂಗದಂಗಳದಲ್ಲಿ ಪ್ರದಶರ್ಿಸಿದಾಗ ಅವರ ರೂಪಕ ದರ್ಶನದ ಆಯಾಮಗಳು ಮಿತಗೊಳ್ಳುತ್ತವೆ ಎಂಬುದು ಈ ‘ಬಲಿದಾನ’ ನಾಟಕ ನೋಡಿದರೆ ಅನುಭವವಾಗುತ್ತದೆ. ಇಡೀ ನಾಟಕದಲ್ಲಿ ಆಂಗಿಕಾಭಿನಯಕ್ಕೆ ಕೊಟ್ಟಷ್ಟೇ ಮಹತ್ವವನ್ನು ಅಂತಃಸತ್ವ ನಿರೂಪಣೆಗೆ ಕೊಟ್ಟಿದ್ದರೆ ಕುವೆಂಪುರವರ ಈ ನಾಟಕಕ್ಕೆ ಇನ್ನೂ ಹೆಚ್ಚು ನ್ಯಾಯವದಗಿಸಬಹುದಾಗಿತ್ತು. ಮಾತು ಮತ್ತು ಅಭಿನಯವನ್ನು ಮೀರಿದ ಪ್ರತಿಮಾವಿಧಾನ ಪ್ರಾಧಾನ್ಯತೆ ಈ ನಾಟಕ ಪ್ರಯೋಗಕ್ಕೆ ಅಗತ್ಯವಾಗಿದೆ.
ಪ್ರಸ್ತುತಗೊಂಡ ಈ ನಾಟಕದಲ್ಲಿ ಮೂರೂ ದೃಶ್ಯಗಳನ್ನು ಒಂದೇ ಅಂಕದಲ್ಲಿ ತೋರಿಸಿಲಾಗಿದೆ. ಆದರೆ ಮೂರು ದೃಶ್ಯಗಳ ಸನ್ನಿವೇಶ ಭಿನ್ನವಾಗಿವೆ. ಕಾಲಘಟ್ಟದಲ್ಲಿಯೂ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಬೆಳಕಿನ ತೀವ್ರತೆಯಲ್ಲಿ ಬದಲಾವಣೆ ಮಾಡುವ ಮೂಲಕ, ಸೆಟ್ ಪರಿಕರಗಳಲ್ಲಿ ವ್ಯತ್ಯಾಸ ಮಾಡುವ ಮೂಲಕ ತೋರಿಸಬಹುದಾಗಿತ್ತು. ರಂಗಪಠ್ಯದಲ್ಲಿ 2ನೇ ದೃಶ್ಯದಲ್ಲಿ ಬೆಳಕು ಹೆಚ್ಚಾದಾಗ ಗೂಬೆಯೊಂದು ಕೂಗಿ ಹಾರಿಹೋಗುವುದನ್ನು ಬ್ರಿಟೀಷರೆಂಬ ಗೂಬೆಗಳು ತೊಲಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬುದನ್ನು ಸಂಕೇತಾರ್ಥದಲ್ಲಿ ಕುವೆಂಪುರವರು ಹೇಳುತ್ತಾರೆ. ಆದರೆ ಈ ಪ್ರಮುಖವಾದ ಪ್ರತಿಮಾರೂಪಕ ದೇಗಾಂವಿಯವರ ನಾಟಕದಲ್ಲಿ ಇಲ್ಲವೇ ಇಲ್ಲ. ಸನ್ನಿವೇಶಕ್ಕೆ ತಕ್ಕ ಹಾಗೆ ಬೆಳಕನ್ನು ಬಳಸಿ ಇನ್ನೂ ಹಲವಾರು ಪ್ರತಿಮೆಗಳನ್ನು ಸೃಷ್ಟಿಸಬಹುದಾಗಿತ್ತು. ಆದರೆ ನಾಟಕದಾದ್ಯಂತ ಒಂದೇ ತೆರನಾದ ಸ್ಥಿರವಾದ ಸೆಟ್ ಮತ್ತು ಹೆಚ್ಚೇನು ವ್ಯತ್ಯಾಸವಿಲ್ಲದ ಬೆಳಕಿನ ವಿನ್ಯಾಸದಿಂದಾಗಿ ದೃಶ್ಯಗಳಲ್ಲಿ ಹಾಗೂ ಸನ್ನಿವೇಶಗಳಲ್ಲಿ ಯಾವುದೇ ವ್ಯತ್ಯಾಸ ಕಾಣದೇ ನೋಡುಗರು ಸಂಭಾಷಣೆಗಳನ್ನೇ ಅವಲಂಬಿಸಬೇಕಾಗಿತ್ತು. ಆ ಸಂಭಾಷಣೆಗಳೆಲ್ಲಾ ಸರಳರಗಳೆಯ ನಡುಗನ್ನಡದಲ್ಲಿರುವುದರಿಂದ ಜನಸಾಮಾನ್ಯ ಪ್ರೇಕ್ಷಕನಿಗೆ ಸುಲಭಕ್ಕೆ ಅರ್ಥವಾಗುವುದು ಸಾಧ್ಯವೂ ಇಲ್ಲಾ. ಹೀಗೆ ಭಾಷೆಯ ಸಂವಹನ ಸಮಸ್ಯೆಯಾದಾಗ ನಾಟಕದ ಪೂರಕ ಅಂಶಗಳ ಮೂಲಕ ಮೂಡ್ ಸೃಷ್ಟಿಸಬಹುದಾಗಿದೆ.
ಪ್ರತಿಮಾಪ್ರಧಾನ ರೂಪಕವನ್ನು ಆಂಗಿಕಾಭಿನಯ ಪ್ರಧಾನ ನಾಟಕವಾಗಿಸುವಲ್ಲಿ ನಿದರ್ೆಶಕರು ಶ್ರಮಿಸಿದ್ದಾರೆ. ನೀನಾಸಂನಲ್ಲಿ ಅಭಿನಯದಲ್ಲಿ ಪಳಗಿದ ಸಿತಾರಾ ಇಡೀ ನಾಟಕದಾದ್ಯಂತ ತಮ್ಮ ಆಂಗಿಕಾಭಿನಯ ಪ್ರೌಢಿಮೆ ಮತ್ತು ಸ್ಪಷ್ಟವಾದ ವಾಚಿಕಾಭಿನಯದಿಂದಾಗಿ ಭಾರತಾಂಬೆಯಾಗಿ ಗಮನ ಸೆಳೆಯುತ್ತಾರೆ. ಭರತಸುತನಾಗಿ ಸಾಜಿದ್ ನಟನೆ ಪಾತ್ರೋಚಿತವಾಗಿತ್ತು. ನೀನಾಸಂನಿಂದ ಬಂದ ಮಹತ್ವಾಂಕಾಂಕ್ಷೆಯ ಯುವಕ ಮಹಾಂತೇಶ ದೇಗಾಂವಿ ನೀನಾಸಂ ಮಾದರಿಯ ನೆರಳಲ್ಲೇ ಇಡೀ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ನಾಟಕದ ನಿರೂಪಣೆಯಲ್ಲಿ ಭಿನ್ನತೆ ಮೆರೆದಿದ್ದರೆ, ಪ್ರಸ್ತುತಿಯಲ್ಲಿ ಸ್ವಂತಿಕೆಯನ್ನು ರೂಢಿಸಿಕೊಂಡಿದ್ದರೆ, ನಾಟಕದ ಒಳತೋಟಿಗಳನ್ನು ಗ್ರಹಿಸಿ ನಾಟಕ ಕಟ್ಟಿಕೊಟ್ಟಿದ್ದರೆ ದೇಗಾಂವಿಯವರ ಈ ‘ಬಲಿದಾನ’ ನಾಟಕ ರಂಗಭೂಮಿಯಲ್ಲಿ ಮಹತ್ತರವಾಗಬಹುದಾಗಿತ್ತು.
ಇಡೀ ನಾಟಕಕ್ಕೆ ಮೆರಗನ್ನು ಕೊಟ್ಟಿದ್ದು ಸಂಗೀತದ ಮೇಳ. ನಟರಿಗಿಂತ ಈ ಮೇಳದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದು ನಾಟಕದ ಪ್ರತಿ ಚಲನೆಗೂ ಪ್ರತಿಕ್ರಿಯಿಸಿದ ರೀತಿ ಅನನ್ಯ. ಕೆಲವೊಮ್ಮೆ ನಟನೆಗೂ ಹಿನ್ನಲೆ ಸಂಗೀತದ ಎಪೆಕ್ಟಗೂ ಸಿಂಕ್ ಆಗದೇ ಹೋದದ್ದನ್ನು ನಿರ್ಲಕ್ಷಿಸಿದರೆ ನಾಟಕಕ್ಕೆ ಅಗತ್ಯವಾದ ಮೂಡನ್ನು ಹುಟ್ಟಿಸುವಲ್ಲಿ ಹಾಡು ಮತ್ತು ಸಂಗೀತ ಯಶಸ್ವಿಯಾಗಿದೆ. ”ರಘುಪತಿ ರಾಘವ ರಾಜಾರಾಂ ಮತ್ತು ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು …” ಹಾಡುಗಳು ಕೇಳುಗರಲ್ಲಿ ವಿದ್ಯುತ್ ಸಂಚಾರ ಮಾಡಿತು. ಜನಗಣಮಣ ಹಾಡು ಪೂತರ್ಿ ಹಾಡುವ ಅಗತ್ಯ ಇರಲಿಲ್ಲ.
ಒಟ್ಟಾರೆಯಾಗಿ ಕ್ಲಿಷ್ಟಕರ ಭಾಷೆಯ, ಕಾವ್ಯಮಯ ಸಂಭಾಷಣೆಯ, ಸಿದ್ದಕಥಾನಕವಿಲ್ಲದಂತಹ ಪ್ರತಿಮಾಪ್ರಧಾನ ನಾಟಕವೊಂದನ್ನು ಪ್ರಸ್ತುತಗೊಳಿಸಿದ ಪ್ರಯತ್ನವೇ ಅಭಿನಂದನಾರ್ಹ. ಕುವೆಂಪುರವರ ಸ್ಮಶಾನಕುರುಕ್ಷೇತ್ರ, ಬೆರಳ್ಗೆ ಕೊರಳ್, ಬಿರುಗಾಳಿ, ಜಲಗಾರ ನಾಟಕಗಳಿಗೆ ಹೋಲಿಸಿದರೆ ‘ಬಲಿದಾನ’ ನಾಟಕದ ಪ್ರಯೋಗಗಳಾಗಿದ್ದು ತುಂಬಾ ಕಡಿಮೆ. ಅಂತಹ ಅಪರೂಪದ ಹಾಗೂ ಸಮಕಾಲೀನತೆಯನ್ನು ಸಾರ್ವಕಾಲಿಕಗೊಳಿಸಿದಂತಹ ‘ಬಲಿದಾನ’ ನಾಟಕವನ್ನು ನಿದರ್ೆಶಿಸಿದ ಯುವ ನಿದರ್ೆಶಕನ ಸಾಹಸ ಮೆಚ್ಚುವಂತಹುದು.
ಸ್ವಾತಂತ್ರ್ಯ ಪಡೆಯುವುದಕ್ಕೆ ಮಾತ್ರ ಬಲಿದಾನ ಕೊಟ್ಟರೆ ಸಾಲದು, ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಿಕ್ಕೂ ಬಲಿದಾನ ಅನಿವಾರ್ಯ, ಬಲಿಪರಂಪರೆಯಿಂದಲೇ ಸ್ವಾತಂತ್ರ ಬದುಕು ಸಾಧ್ಯ ಎನ್ನುವ ಸಾರ್ವಕಾಲಿಕ ಸಂದೇಶವನ್ನು ಕೊಡುವ ‘ಬಲಿದಾನ’ ನಾಟಕದ ಈ ಕೆಳಗಿನ ಸಾಲುಗಳು ಇಡೀ ನಾಟಕದ ಬಹು ಮುಖ್ಯ ಆಶಯವಾಗಿವೆ.
ಬಲಿದಾನಕುಂಟೆ ಕೊನೆ?
ಬಲಿಪರಂಪರೆಯಲ್ತೆ ಸ್ವಾತಂತ್ರ್ಯ ಜೀವನಂ!

ಗುರುವಾರ, ಆಗಸ್ಟ್ 29, 2013

ಸಿನೆಮಾದ ಭಾಷೆ ಅಂದ್ರೆ ಯಾವುದು,,.? -ಮಹದೇವ ಹಡಪದ



ನಾಟಕೀಯತೆಯನ್ನು ದೈನಂದಿನ ಬದುಕಿನಲ್ಲಿ ನಾವು ಗುರುತಿಸಿಕೊಳ್ಳಬಹುದಾಗಿದೆ.  ಅಂತೆಯೇ ಸಿನಿಮೀಯ ಮಾದರಿಗಳನ್ನು ನಾವು ಇಂದು ವಿಶೇಷವಾಗಿ  ಸುದ್ದಿವಾಹಿನಿಗಳಲ್ಲಿ ಕಾಣುತ್ತೇವೆ. ಬಲ್ಮೆಯ ಉನ್ಮತ್ತ ಚಾಲಾಕಿ ದೃಶ್ಯಗಳು, ಅತಿರಂಜಿತ ಕ್ರೌರ್ಯ, ಅತ್ಯುತ್ಸಾಹಿ ಅಪರಾಧ ಪ್ರಜ್ಞೆಯನ್ನು ಬೆಳೆಸುತ್ತವೆ ಎಂದು ಯಾವುದನ್ನು ಕರೆಯಬಹುದೋ ಅಂಥ ದೃಶ್ಯಗಳು ಮನುಷ್ಯ ಸಹಜವಾಗಿ ಎಲ್ಲಿಯೂ ಕಾಣಸಿಗುವುದಿಲ್ಲ. ಸಿನಿಮೀಯ ಭಾಗಗಳು ಬಾವೋತ್ಕರ್ಷೆಯಲ್ಲಿ ಪರದೆಯ ಮೇಲೆ ಮಾತ್ರ ಕಾಣಿಸಿಕೊಳ್ಳುತ್ತವೆ. ಅಂಥ ಗುಣಾವಗುಣಗಳುಳ್ಳ ಘಟನೆಗಳು ಇಂದು ಸಾಮಾನ್ಯನ ಸಾರ್ವಜನಿಕ ಜೀವನದಲ್ಲೂ ತೀರಾ ಸಹಜವೆಂಬಂತೆ ನೋಡುತ್ತಿದ್ದೇವೆ. ಸ್ವಭಾವದ ಪ್ರೇರಣೆ ಏನೇ ಆಗಿರಲಿ ವಿಕಾರಗಳು ಹುಟ್ಟುವ ಮೂಲ ಸಾಂಸ್ಕೃತಿಕ ಬೇಜವಾಬ್ದಾರಿತನದ್ದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
 ಸಾಂಸ್ಕೃತಿಕ ಪ್ರಜ್ಞೆ ಯಾವತ್ಕಾಲಕ್ಕೂ ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕಿಂತ ಕುರಿತಾದ ಅನುಮಾನ ಅಸಮಾಧಾನಗಳನ್ನು ಹುಟ್ಟುಹಾಕುವ ಮೂಲಕ ಮನುಷ್ಯನ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತದೆ. ಸಾಧ್ಯತೆಗಳನ್ನು ಭವಿಷ್ಯತ್ತಿನ ಚಲಚ್ಚಿತ್ರಗಳಲ್ಲಿ ಕಾಣುತ್ತೇವೆ. ಸೂಕ್ಷ್ಮಬಾವಗಳು ಕೂಡ ತೀಕ್ಷ್ಣ ಸಂವೇದನೆಯ ಮೊನಚನ್ನು ಹೊಂದಿರುತ್ತವೆ. ಅಂಥ ಸಿನೇಮಾಗಳನ್ನು ಕನ್ನಡದ ಪ್ರೇಕ್ಷಕರಿಗೆ ಕೊಡುವ ಒಂದು ಗುಂಪು ಸದಾ ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಸಂತಸದ ಸಂಗತಿ. ಕನ್ನಡದ ಸಾಹಿತ್ಯಿಕ ಕೃತಿಗಳನ್ನಾಯ್ದು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಗುಂಪು ಸಹಿತ ಪ್ರಶಸ್ತಿಯ ಗರಿಗಾಗಿ ಕೆಲಸ ಮಾಡುತ್ತವೆ ಎಂದು ಓರೆಗಣ್ಣಲ್ಲಿ ನೋಡಿಸಿಕೊಳ್ಳುತ್ತವೆ.  ಆದರೆ ಸೃಜನಶೀಲ ಕೆಲಸಕ್ಕಾಗಿ ಬೇರೆಲ್ಲ ಮಾದರಿಯ ಜನಪ್ರಿಯಗಳನ್ನು ನಗಣ್ಯಗೊಳಿಸಿ ಜನಪರವಾದ ರೀತಿಯಲ್ಲಿ ಕಲಾಕೃತಿಗಳನ್ನು ಕಟ್ಟುತ್ತಾರೆ. ಅವರ ಚಲನಚಿತ್ರಗಳು ಕಥೆಯ ಸಂವಿಧಾನವನ್ನು ಮೀರಿಸಿ ಆಯಾಮಗಳನ್ನು ಸೃಷ್ಟಿಸುವ ಕಾರಣಕ್ಕಾಗಿಯೇ ಕನ್ನಡ ಕಲಾಪ್ರಪಂಚವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡುವ ಸಿನೇಮಾಗಳಾಗಿ ಸಹೃದಯರ ಮನಸ್ಸನ್ನು ಸೂರೆಗೊಳ್ಳುತ್ತವೆ. ಅಂಥ ಚಿತ್ರಗಳ ಪರಂಪರೆ ಇದ್ದಾಗ್ಯೂ ಕನ್ನಡದಲ್ಲಿ ಜನಪ್ರಿಯ ಮಾದರಿಯಲ್ಲಿ ಬರುವ ಚಿತ್ರಗಳು ಯಾವ ಸಂವೇದನೆಯನ್ನು ಕಟ್ಟುತ್ತಿವೆ ಅನ್ನುವುದು ಪ್ರಶ್ನೆಯಾಗಿದೆ..?
 ಚಲನಚಿತ್ರಗಳು ಸದಭಿರುಚಿ ಬೆಳೆಸಬೇಕಾದ ಸಂದರ್ಭದಲ್ಲಿಯೇ ಆಡಳಿತಶಾಹಿಯ ಅಪೇಕ್ಷೆಗೆ ತಕ್ಕಂತೆ ಮೈಮರೆಸುವ ತಂತ್ರವನ್ನಷ್ಟೆ ಪೋಷಿಸಲಾರಂಭಿಸಿದವು. ಕಾರಣಕ್ಕಾಗಿಯೇ ಕರ್ತೃ, ಕೃತಿ(ಕಲೆ), ಪ್ರೇಕ್ಷಕರ ಟ್ರಯಾಂಗಲ್ ನಡುವೆ ವ್ಯವಸ್ಥಿತ ಹುನ್ನಾರವೊಂದು ತನ್ನ ಅಭಿಪ್ರಾಯ ರೂಪಿಸಲೋಸುಗ ಕಲಾಭಿರುಚಿಯನ್ನು ತನ್ನ ಆಶಯದಂತೆ ರೂಪಿಸತೊಡಗಿತು. ಅಲ್ಲಿನ ವಿರಾಮಗಳ ನಂತರದ ಕಥನ ಪಲ್ಲಟದ ಸಿನಿಮೀಯ ಗುಣ ಮತ್ತು ಎರಡು ಗಂಟೆಗಳ ಕಾಲ ಪ್ರೇಕ್ಷಕನೊಳಗೆ ಯಾವ ಪ್ರಶ್ನೆಗಳು -  ಸಂಕಷ್ಟಗಳೂ ಅನುಭವಕ್ಕೆ ಬಾರದಂತೆ ಹಿಡಿದಿಟ್ಟುಕೊಳ್ಳುವ ಕೌಶಲದ ಕಥಾಹಂದರದಲ್ಲಿ ಚಿತ್ರ ತಯಾರಾದರೆ ಅದೊಂದು ಭ್ರಮಾಜಗತ್ತಿನ ಸಮ್ಮೋಹನ ಕಲೆ,   ಚಿತ್ರಮಂದಿರದ ಹೊರಗೆ ಕಾಲಿಡುತ್ತಿದ್ದಂತೆಯೇ ಹೊರಬೆಳಕಿನ  ಪ್ರಖರತೆಯಲ್ಲಿ ಚಿತ್ರದ ಅನುಭವ ಬರೀ ಚಾಕಚಕ್ಯೆತೆಯ ಸ್ಟೋರಿಯಾಗಿ ತಲೆಯಲ್ಲಿ ಉಳಿಯುವುದರಿಂದ ಅದರ ಕೀಳು ಮನೋರಂಜನೆ ಕ್ಷಣದ ಸಂತೋಷವನ್ನು ನೀಡುತ್ತದೆ. ಆದರೆ ಶೈಲೀಕೃತ ಬದುಕು ನೋಡುಗನ ವರ್ತನೆಗಳನ್ನು ಬದಲಿಸುತ್ತ, ಆಸೆ-ಭಾಷೆಗಳನ್ನು ಜಾಗತಿಕ ಬದುಕಿನ ಸವಾಲುಗಳ ನಡುವೆ ತಂದು ನಿಲ್ಲಿಸುತ್ತದೆ. ಆಗ ಸಿನಿಮೀಯ ಗುಣಗಳು ನಾಗರೀಕ ಸಮಾಜದ ಸರ್ವೇಸಾಮಾನ್ಯ ಲಕ್ಷಣಗಳ ಹಾಗೆ ಗೋಚರಿಸತೊಡಗುತ್ತವೆ. ನಾವು ಯಾವದನ್ನು ಕಾಣಬೇಕಿತ್ತೋ ಅದನ್ನು ಕಾಣಿಸದೇ ಇರುವ ಸಾಂಸ್ಕೃತಿಕ ಲೋಕ ನಮಗೆ ತೋರಿಸುವ ಚಿತ್ರಗಳ ಚಿತ್ರಕಶಕ್ತಿಯಲ್ಲಿ ಯಾವ ರಸಾನುಭವದ ಲವಲೇಶಗಂಧವೂ ಇರದಿದ್ದರೂ ವಿಕೃತ ಸಂತೋಷವನ್ನು ಅತಿರಂಜಿತವಾಗಿ ನೀಡುವ ಮುಖೇನ  ಅದು ಮೈಮರೆಸುತ್ತದೆ. ಮೈಮರೆವಿನಲ್ಲಿ ವಾಸ್ತವದ ಲಕ್ಷಣಗಳು ಮಾಯವಾಗುತ್ತ ನೋಡುವ ಭ್ರಮೆಯನ್ನು ಮಾತ್ರ ನಮ್ಮದಾಗಿಸಿ ವ್ಯವಸ್ಥೆಯ ಕುರೂಪಗಳನ್ನು ಮುಚ್ಚಿಹಾಕುತ್ತದೆ. ಆಗ ನೋಡುಗನ ಪ್ರತಿನಿಧಿಯಾಗಿ ಪಾತ್ರಗಳು ಮೂಡುವುದಿಲ್ಲ, ಪಾತ್ರಧಾರಿಯ ಪ್ರತಿನಿಧಿಯಾಗಿ ನೋಡುಗ ತನ್ನತನ ಬಿಟ್ಟುಕೊಡುತ್ತಾನೆ. ಹೀಗೆ ಪರಿಣಾಮ ಬೀರುವ ಚಿತ್ರಗಳು ನಮಗೆ ಬೇಕೇ… ? ಜನಪರ ಚಿತ್ರಗಳನ್ನು ನೋಡುವ ಮನಸ್ಸುಗಳ ಮೌನದಲ್ಲಿ ಸಮೃದ್ಧ ಸಾಂಸ್ಕೃತಿಕ ರೂಪು ಮೂಡುತ್ತದೆ. ಅಂಥ ಚಿತ್ರಗಳನ್ನು ಹುಡುಕಿಕೊಂಡು ಹೋಗಿ ನೋಡಬೇಕಾದ ಮನಃಸ್ಥಿತಿ ಕನ್ನಡದಲ್ಲಿದ್ದರೂ ಅಂಥ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗದಿರುವುದು ದುರಂತ.    
ಆದರೆ ಇವತ್ತಿನ ಚಲನಚಿತ್ರ ಮಾಧ್ಯಮದ ಜನಪ್ರಿಯತೆ ಯಾವ ಮಾದರಿಯ ಅಭಿರುಚಿಯನ್ನು ಪ್ರೇರೇಪಿಸುತ್ತಿದೆ? ಯಾಕಾಗಿ ಇಂಥ ಕಥಾ ಮಾದರಿಗಳನ್ನು ದೃಶ್ಯೀಕರಿಸಿ ಜನರ ಸಹೃದಯತೆಯನ್ನು ಹಾಳುಗೆಡುವುತ್ತಿದೆ, ಇಂಥ ಚಲನಚಿತ್ರಗಳು ಸಮುದಾಯದ ಆಳದ ನೋವನ್ನು ಮರೆಮಾಚುವ ಕಾರಣವಾದರೂ ಏನು? ಇದೆಲ್ಲದರ ಹಿಂದೆ ಕಾರ್ಪೋರೇಟ್ ಜಗತ್ತಿನ ಆಶಯಗಳು ಕೆಲಸ ಮಾಡುತ್ತಿರುವುದಂತೂ ಸ್ಪಷ್ಟವಾಗಿವೆ

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...