ಭಾನುವಾರ, ಸೆಪ್ಟೆಂಬರ್ 9, 2012

ನಗರ ಭ್ರಮೆಯೂ…ಬಹುಮುಖಿ ನಾಟಕವೂ

ನಗರ ಜೀವನದ ಹುಸಿಸಂಬಂಧಗಳನ್ನ,ಭಂಡತನಗಳನ್ನ. ಢಾಂಬಿಕ ನಡೆಗಳನ್ನ ತೆರೆದಿಡುವ ನಾಟಕಗಳನ್ನು ಕನ್ನಡದಲ್ಲಿ ಮೊದಲು ಬರೆಯಲು ತೊಡಗಿದವರು ಲಂಕೇಶರು. ಪಾತ್ರಗಳು ಒದ್ದಾಡುವ ಹುಂಬುತನದಲ್ಲಿಯೇ ನಗರ ಜೀವನದ ಅಸ್ತವ್ಯಸ್ತ ಬದುಕಿನ ಪಲ್ಲಟಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಅವರ ಕ್ರಮ ನಾಟಕಗಳಿಂದ ನಾಟಕಗಳಿಗೆ ಜಿಗಿಯುತ್ತ ನಾಟಕೀಯತೆ ಮತ್ತಷ್ಟು ಬಿಗಿಗೊಂಡು ಸಂಕೀರ್ಣವಾದ ವಿಭಿನ್ನಗುಣವುಳ್ಳ ನಾಟಕಗಳು ಲಂಕೇಶರಿಂದ ಸೃಷ್ಟಿಗೊಂಡವು. ಆದರೆ ಅವರು ಮೊದಮೊದಲು ಬರೆದ ನಾಟಕಗಳ ಕೇಂದ್ರ ಪಾತ್ರದ ಸಂದಿಗ್ಧತೆ ನಂತರದ ನಾಟಕಗಳಲ್ಲಿ ವ್ಯಷ್ಟಿಪ್ರಜ್ಞೆಯಿಂದ ಸಮಷ್ಟಿಪ್ರಜ್ಞೆಗೆ ದಾಟಿದಂತೆ ಕಾಣುತ್ತವೆ ಹೊರತು ಲಂಕೇಶರ ಯಾವ ನಾಟಕಗಳೂ ನಾಟಕೀಯ ಭಾವತೀವ್ರತೆಯನ್ನು ಬಿಟ್ಟುಕೊಟ್ಟಿಲ್ಲ. ಹಾಗಾಗಿ ಅವರ ಎಲ್ಲ ನಾಟಕಗಳೂ ಅತ್ತ್ಯುತ್ತಮವಾಗಿಯೇ ಇವೆ. ಅದೆಷ್ಟೋ ವರ್ಷಗಳಾದ ಮೇಲೆ ಅಂಥದೇ ಸೊಗಡಿನ ನಾಟಕವೊಂದು ಕನ್ನಡ ಸಾಹಿತ್ಯಲೋಕದಲ್ಲಿ ಬಂದಿದೆ.
ಅದೇ..! ನಗರ ಜೀವನದ ನಾಗರೀಕ ಜಗತ್ತಿನ ಗೆಲ್ಲುವ ಕುದುರೆಗಳೂ, ಬದುಕಲು ಹಂಬಲಿಸುವ ಸಾಮಾನ್ಯನೂ, ಅಸ್ತಿತ್ವದ ಬೇರು ಗಟ್ಟಿಗೊಳಿಸಲು ಒದ್ದಾಡುವ ವ್ಯಕ್ತಿಗಳು, ಕಥನ ಕಟ್ಟುವ ಕಲೆಗಾರಿಕೆಯೂ… ಒಂದೇ ವಸ್ತುವಿನ ಒಳಗೆ ಅಡಕಗೊಂಡ ಪಾಕದಂತೆ ವಿವೇಕ ಶಾನಭಾಗರು ತಮ್ಮ ಬಹುಮುಖಿ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಕಥನ ತಂತ್ರ ಬಹಳ ಸರಳ ಎನ್ನಿಸಬಹುದಾದ ರೀತಿಯಲ್ಲಿದ್ದಾಗ್ಯೂ ದೃಶ್ಯಗೊಳ್ಳುವ ಹಂತದಲ್ಲಿ ನಟ-ನಿರ್ದೇಶಕ ತೊಡಗಿಕೊಳ್ಳುವುದು – ಅಂದರೆ ಹೆಚ್ಚು ಕಡಿಮೆ ಪಾತ್ರದ ಆವರಣವೊಂದು ತಯಾರಾಗುವುದು – ಶೇಖರ ಕೆಂಪೇಗೌಡ ಆದ ಹಾಗಿರುತ್ತದೆ. ಒಂದು ಪಾತ್ರ ಹೊರಡುವ ಹಾದಿಯಲ್ಲಿ ಮತ್ತೊಂದು ಕಥನದ ಪಾತ್ರ ಎದುರಾಗುತ್ತದೆ. ತ್ರಿವಿಧ ವಿಕಾರಗಳು ಸೂತ್ರಿಕರಿಸಲ್ಪಟ್ಟ ನಾಟಕದ ಬಂಧದೊಳಗೆ ಒದಗಿಬಂದಿದ್ದಾವೆ ಹೊರತು ಖಾಲಿಯಾದ ಟೂತ್ ಪೇಸ್ಟ ಹಾಗೆ ಒತ್ತಿ ಬಂದಿಲ್ಲವೆನ್ನುವುದು ರಚನಾವಿನ್ಯಾಸದಲ್ಲಿಯೇ ಕಾಣಬರುತ್ತದೆ. ನಾಟಕದ ಆರಂಭವೇ ಕ್ರಿಯಾತ್ಮಕವಾಗಿ ಸಂಜಯನನ್ನು ಸ್ಟೋರಿ ಹುಡುಕಿಕೊಂಡು ಬರಬೇಕಾದ ಸಂಕಷ್ಟಕ್ಕೆ ನೂಕುತ್ತದೆ. ಬಿರಾಜದಾರನ ಅಂಧಕಾಲತ್ತಿನ ಮೊದಲ ವರದಿಯ-ದುರ್ಗಲಾಲ್ ಸ್ಟೋರಿ- ಮಾದರಿಯಲ್ಲಿ ಹೊಸ ಹುಡುಗರೂ ಸ್ಟೋರಿ ಮಾಡಬೇಕೆಂಬುದು ಹೊಸ ಹುರುಪಿಗೆ ಕಿರಕಿರಿಯಾದರೂ ತಲೆ ಮ್ಯಾಲೆ ಹೊಡೆದಂತ ಸ್ಟೋರಿ ಕೊಡಬೇಕು ಅನ್ನೋದು ಮುಖ್ಯ ಆಗುತ್ತದೆ.
ಜೀವನ; ಹಿಸ್ಟರಿ ಮಿಸ್ಟರಿ ಅಂತಿದೆ ಹೋತ. ಅದೇ ಏನಾದರೂ ಮಾಡು. ಬೆಂಗಳೂರಲ್ಲೇನೂ ಸಿಗಲ್ಲ. ಹಂಪಿಗೋ ಮೈಸೂರಿಗೋ ಹೋಗು. ಯೂ ಮೇ ಫೈಂಡ್ ಯುವರ್ ದುರ್ಗಲಾಲ್. ಬೇಕಾದರೆ ಆ ಸ್ಟೋರೀನ ಓದಿಕೊಂಡು ಹೋಗು. ನನ್ನ ಹತ್ತಿರ ಜರಾಕ್ಷ ಇದೆ.
ಈ ಮಾತು ಸಂಜಯನಿಗೆ ಮುಂದಲ ದೃಶ್ಯದಲ್ಲಿ ಸಿಗುವ ಕೆಂಪೇಗೌಡನನ್ನ ನಂಬಲು ಪ್ರೇರಣೆ ಕೊಡುತ್ತದೆ. ಸಂಪಾದಕನ ತಲೆ ಒಳಗಿದ್ದದ್ದು ಹಿಸ್ಟರಿ ಅಂತ ಗೊತ್ತಾದ ಗೆಳೆಯನ ಸಲಹೆ ನಾಟಕ ಬೀಜಾಂಕುರ ಮಾಡುತ್ತದೆ. ಗುಡಿಗಾರ ಗಲ್ಲಿಯ ಸಂಜು ಬೇರು ಬಿಡಿಸಿಕೊಳ್ಳುವ ತವಕದಲ್ಲಿ ತನಗೆ ತಾನೆ ಕಗ್ಗಂಟು ಸುತ್ತಿಕೊಂಡು ನಗರ ಜೀವನದ ನಾನಾ ಮುಖಗಳ ಬೆನ್ನು ಬೀಳುತ್ತಾನೆ. ಆಗ ತೋರುವ ಬಣ್ಣದ ಬಹುಮುಖಗಳು ಒಂದೊಂದಾಗಿ ತಮ್ಮ ಕತೆಗಳನ್ನ ಹೇಳಿಕೊಳ್ಳುತ್ತವೆ. ಸಂಪಾದಕ ಬಿರಾಜದಾರ, ಶೇಖರ, ನಾಯಕ್, ಜಕ್ಕೂಜಿ ಅಲ್ಲದೆ ಹಂದರದಲ್ಲಿ ಕಥನಕ್ಕೆ ಪೂರಕವಾಗಿ ಬರುವ ಪಾತ್ರಗಳ ಸೋಗೂ ಒಂದರ ಹಿಂದೆ ಒಂದು ಓಡುತ್ತದೆ. ಮಾನಸಿಕ ನೆಮ್ಮದಿಯನ್ನೂ ಮಾರುವ ದಂಧೆಯ ರೂಪ ಬದಲಾಗಿದೆ. ನಂಬುವವರ ನಂಬಿಕೆಗೆ ತಕ್ಕ ಕತೆಗಳು ಊರ್ಮಿಳೆ ಅಡುಗೆ ಮಾಡಿದಷ್ಟೆ ಸುಲಭದ್ದಾಗಿದೆ, ನವರಸಗಳು ಮೇಳೈಸಿಕೊಂಡು ತಯಾರಾದ ವರದಿ ಪತ್ರಿಕೆಯ ಆಫಿಸ ತಲುಪುವ ಹೊತ್ತು ಮತ್ತು ಬಿರಾಜದಾರನ ಅದೃಷ್ಟ, ಸಂಜಯನ ನಶೀಬು,ಜಕ್ಕೂಜಿಯ ಲಕ್ಕು,ಪರದೇಶಿ ಶೇಖರನ ಪರಿಸ್ಥಿತಿಗಳು ಹೀಗೆ ಒಟ್ಟು ನಾಟಕದಲ್ಲಿ ವ್ಯಾಪಾರದ ಬುದ್ದಿಯನ್ನು ಬಲಗೊಳಿಸುತ್ತಿರುವ ಜಗತ್ತು ಅನಾವರಣಗೊಳ್ಳುತ್ತದೆ. ಇಲ್ಲಿ ಎಲ್ಲರ ಜುಟ್ಟು ಬೇರೊಬ್ಬನ ಕೈಯಲ್ಲಿ ಸಿಕ್ಕಿದೆ. ಈ ಎಲ್ಲ ಪಾತ್ರಗಳ ಅಂಕೆಯನ್ನು ಏಳು ಸಮುದ್ರದಾಚೆಯ ರಕ್ಕಸರ ಕಾವಲಿನ, ಏಳು ಹೆಡೆಯ ಸರ್ಪಗಾವಲಿನ ಬಂಧನದಲ್ಲಿ ಇಟ್ಟಿಲ್ಲ ಅನ್ನೋದು ವಾಸ್ತವದ ಅರಿವಾಗಿದೆ.
ಭ್ರಮೆಯ ಭಾವ ಲೋಕವೇ ಪೀಕಲಾಟದಲ್ಲಿ ಬಿದ್ದದ್ದು ಕಂಡರು ಯಾವುದು ಯಾವುದನ್ನು ನಿರ್ದೇಶಿಸುತ್ತಿದೆ ಅನ್ನುವುದು ಮಾತ್ರ ಅಸ್ಪಷ್ಟ. ಇಲ್ಲಿ ಊಹಾಪೋಹಗಳ ನಡುವೆ ಪೇಪರ್ ಹಾಸಿಕೊಂಡು ಕುಳಿತಿರುವ ಸಂಪಾದಕ, ಪಾರ್ಟಿ ನಡೆವಲ್ಲಿ ಇನವೆಷ್ಟಿಗೇಶನ್ ನಡೆಸುವ ನಾಯಕ್, ಕನಸು ಮತ್ತು ಪ್ರೀತಿಗಾಗಿ ಕನವರಿಸುವ ಶಕ್ಕೂ ಶೇಖರ, ಉರ್ಮಿಳೆ ಸಂಜೂ, ಜಕ್ಕೂ ಮತ್ತವನ ಮಹಿಳಾ ಭಕ್ತಗಣ ಎಲ್ಲರೂ ಅಸ್ವಸ್ಥರಾಗಿದ್ದೂ ಸ್ವಾಸ್ಥ್ಯ ಜೀವನ ಅರಸುತ್ತಿದ್ದಾರೆ. ಗದ್ದಲದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಂಜಯನ ಅಸಹಾಯಕತೆಗೆ ಖಾಸಾ ಗೆಳೆಯ ಜಗನ್ನಾಥ ಆಸರಾಗುತ್ತಾನೆ. ಇಲ್ಲಿ ಊರಿನ ಬೇರೊಂದು ಒರತೆಯಾಗಿ ನಿಲ್ಲುತ್ತದೆ, ಆದರೆ ಊರಿನ ಕೊಂಡಿಯನ್ನೇ ಕಳಚಿಕೊಂಡ ಮತ್ತೊಂದು ಪಾತ್ರದ ತಳಮಳಕ್ಕೆ ಜಗನ್ನಾಥ ಜಕ್ಕೂಜಿಯಾಗಿ ವರ್ತಿಸುತ್ತಾನೆ. ಅರೆಸ್ಟ್ ಹಿಮ್ ಎಂಬ ಸೂಚನೆ ಸಾಕು. ಆಸರಿಲ್ಲದ ಬಳ್ಳಿ ಯಕಃಶ್ಚಿತ್ ಹುಳುವಾಗಿ ಜೇಡರ ಬಲಿಯೊಳಗೆ ಸಿಕ್ಕಿಬೀಳುತ್ತದೆ.
ಸಾಮಾನ್ಯನೊಬ್ಬ ವ್ಯವಸ್ಥೆಗೆ ವ್ಯಂಗ್ಯವಾಗಿ, ತುಘಲಕನಿಗೆ ಪ್ರತಿಯಾಗಿ -ಆಝೀಜ್- ಕಾಣಿಸಿಕೊಳ್ಳುವ ನಾಟಕೀಯತೆ ಇಲ್ಲಿ ಧ್ವನಿಸುವ ಶೇಖರನಲ್ಲಿ ಸಾಧ್ಯವಾಗದಿರುವುದು ಮೋಜಾಗಿದೆ. ಆತ ಬಂಧನಕ್ಕೊಳಗಾಗಿದ್ದಾನೆ. ನಿದ್ದೆಗೆ ಜಾರಿರುವ, ಕಿವುಡಾಗಿರುವ ಅನುಕಂಪಕ್ಕೆ ತನ್ನ ಹೊಸಹೊಸ ರೂಪದ ಕತೆಗಳನ್ನ ಹೇಳಿಕೊಳ್ಳುತ್ತಲೇ ಇರುವಾಗ ಥಟ್ಟನೆ ಕತ್ತಲಾವರಿಸಿಕೊಳ್ಳುವವರೆಗೂ ಸಾಧ್ಯತೆಗಳನ್ನ ಹುಡುಕುತ್ತ ಹೋಗುತ್ತಾನೆ. ಬಿಗಿಯಾದ ನಾಟಕದ ಬಂಧದಲ್ಲಿ ಶಹರ ಜೀವನಕ್ರಮ ಬೋಗಸ್ ಆಗಿ ದಾಖಲಾಗುತ್ತದೆ. ಒಟ್ಟು ಈ ಕಾಲಘಟ್ಟದ ಅತಂತ್ರ ಅಸ್ಥಿರತೆಯನ್ನು, ಪೊಳ್ಳುತನದ ಪುರಾಣವನ್ನು ನಾಟಕ ಆಪ್ತವಾಗಿ ಚಿತ್ರಿಸುತ್ತದೆ.
————-ಮಹಾದೇವ ಹಡಪದ.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...