ಭಾನುವಾರ, ಏಪ್ರಿಲ್ 13, 2014

ನಮ್ಮ ತಂಡದ ಹಿತೈಷಿ ಹುಲಿಕುಂಟೆ ಮೂರ್ತಿಯವರ ಮಾತುಗಳು

ಒಂದೆರಡು ವಿಷಯಗಳನ್ನು ಹಂಚಿಕೊಳ್ಳಲೇಬೇಕಿತ್ತು.. ಕಳೆದೆರಡು ದಿನಗಳಿಂದ ಕಂಪ್ಯೂಟರ್ ನನ್ನನ್ನು ಮುಂದೆ ಕೂರಿಸಿಕೊಳ್ಳದ ಕಾರಣ ತಡವಾಗಿ ಹೇಳುತ್ತಿದ್ದೇನೆ.....

ಮೊದಲನೆಯದ್ದು: ನನ್ನ ಇಷ್ಟದ ಮೇಷ್ಟ್ರು ಡಾ.ನಟರಾಜ್ ಹುಳಿಯಾರ್ ಮೊನ್ನೆ ನಮ್ಮ ಮೌಲ್ಯಮಾಪನ ಕೇಂದ್ರಕ್ಕೆ ತಮ್ಮ 'ಇಂತಿ ನಮಸ್ಕಾರಗಳು' ಪ...ುಸ್ತಕ ಮತ್ತು ಮಗ ಶೋಯಿಂಕಾ ನೊಂದಿಗೆ ಬಂದಿದ್ದರು. ನಮ್ಮ ಜತೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಇದ್ದು, ಕೀರಂ, ಎಂಡಿಎನ್, ಲಂಕೇಶ್, ಡಿಆರ್ ಎನ್ ಬಗ್ಗೆ ತುಂಬಾ ಮಾತಾಡಿದರು. ಒಂಥರಾ ಹಗುರವಾದ ಭಾವ ಆವತ್ತಿನಿಂದ..

ಎರಡನೆಯದ್ದು ಇದೇ ಹನ್ನೊಂದನೇ ತಾರೀಖು ಗೆಳೆಯ ಹನುಮಂತ ಹಾಲಗೇರಿ ನಾಟಕ 'ಊರು ಸುಟ್ಟರೂ ಹನುಮಪ್ಪ ಹೊರಗ' ನಾಟಕವನ್ನು ಗೆಳೆಯ ಮಂಜು ಜತೆಗೆ ನೋಡಿದ್ದು.
ಮೊದಲನೆಯದಾಗಿ ಗೆಳೆಯ ಮಹದೇವ ಹಡಪದ್ ರ 'ಆಟಮಾಟ' ತಂಡಕ್ಕೆ ಅಭಿನಂದನೆ ಹೇಳಬೇಕು. ಈ ನಾಟಕ ಬೆಂಗಳೂರಿಗೆ ಬೇಕಿತ್ತು. ರಂಗಭೂಮಿಯನ್ನು ತೆವಲಿನ ಮಟ್ಟಕ್ಕೆ ಇಳಿಸಿಕೊಂಡು ಹುಸಿ ಕಲಾವಂತಿಕೆಯನ್ನು ನಟಿಸುವ ಜನರ ನಡುವೆ ಈ ತಂಡ ತೆರೆದಿಟ್ಟ ಸಾಧ್ಯತೆ ದೊಡ್ಡದು.

'ಊರು ಸುಟ್ಟರೂ ಹನುಮಪ್ಪ ಹೊರಗ' ತುಂಬಾ ಗಂಭೀರ ನಾಟಕ. ಆಲೋಚನೆ ಹಳೆಯದಾದರೂ ನಮ್ಮ ಸಮಾಜದ ಬ್ರಾಹ್ಮಣೇತ್ತರ ತಳ ಜಾತಿಗಳ ನಡುವಿನ ದೈವ ಕುರಿತ ನಂಬಿಕೆಯನ್ನು ತೆರೆದಿಡುವ ನಾಟಕ. ಇದು ಎಲ್ಲ ಹಳ್ಳಿಗಳ ಕತೆ. ನಮ್ಮ ಜನರಿಗೆ ದೇವರು ತಮ್ಮ ನಡುವೆ ಸಹಜೀವನ ನಡೆಸುವ ಅಸಾಧಾರಣ ವ್ಯಕ್ತಿಯಷ್ಟೇ. ಅವರ ಸಿಟ್ಟು-ಸೆಡವು, ಪ್ರೇಮ-ಕಾಮ- ಹಗೆ, ತಮಾಶೆ ಎಲ್ಲವೂ ಆ ದೇವರ ಸುತ್ತಲೂ ಹೆಣೆಯಲ್ಪಟ್ಟಿರುತ್ತವೆ. ಈ ಥರದ ವಿಷಯಗಳನ್ನು ಅಂಬೇಡ್ಕರ್ ನೋಟಕ್ರಮದಲ್ಲಿ ನೋಡಿದರೆ ಅವುಗಳು ಅರ್ಥವಾಗುವ ಕ್ರಮವೇ ಬೇರೆ. ಹಾಲಗೇರಿ ತಾವು ಬದುಕುತ್ತಿರುವ ಸಮಾಜವೊಂದರ ಒಳ ಸಂಬಂಧಗಳ ಅವನತಿಗೆ ದೂರದ ಕಾರಣಗಳನ್ನು ಹುಡುಕುತ್ತಿರುವಂತೆ ಕಂಡರೂ, ಸಮಕಾಲೀನ ವಿಚಾರವಂತಿಕೆಯ ಪರಿಸರದಲ್ಲಿ ಈ ನಾಟಕ ಇತ್ಯಾತ್ಮಕ ಬದುಕಿನ ಕ್ರಮಗಳನ್ನೂ ತನಗೇ ಅರಿವಿಲ್ಲದಂತೆ ಮಂಡಿಸುತ್ತದೆ. ನಮಗೆ ದೇವರ ಅಗತ್ಯವೇ ಇಲ್ಲವೆನ್ನುವ ತಳಜಾತಿಗಳ ಅಂಬೇಡ್ಕರ್ ನೋಟಕ್ರಮದಿಂದ ನಾಟಕ ನೋಡುವವರಿಗೂ, ನಮ್ಮ ಸಮುದಾಯಗಳು ವೈದಿಕ ಕುತಂತ್ರಗಳಿಂದ ತಮ್ಮ ತಮ್ಮ ಒಳಗೇ ಸೀಳಿಕೊಳ್ಳುತ್ತಿವೆ ಎಂದು ನೋಡುವ ತಳಜಾತಿಗಳ ಜನರಿಗೂ ಏಕಕಾಲಕ್ಕೆ ಈ ನಾಟಕ ಒಂದು ತಾತ್ವಿಕ ನೆಲೆಯನ್ನು ಒದಗಿಸುತ್ತದೆ. ಈ ಕಾರಣಕ್ಕಾಗಿ ಮೊದಲ ನಾಟಕದಲ್ಲೇ ಅನುಭವಿ ನಾಟಕಕಾರರಂತೆ ಕಾಣುವ ಹನುಮಂತ ಹಾಲಗೇರಿಯವರ ರಂಗಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಬಹುದು.
‘ಆಟ ಮಾಟ’ ತಂಡದ ಬಗ್ಗೆ ಹೇಳಲೇಬೇಕು. ನಾಟಕದ ಉದ್ದಕ್ಕೂ ಬಿದ್ದು ಬಿದ್ದು ನಗುವಷ್ಟು ವ್ಯಂಗ್ಯಭರಿತ ಮಾತು- ಅಭಿನಯದಿಂದ ಇಡೀ ತಂಡದ ನಟರು ಗಮನ ಸೆಳೆಯುತ್ತಾರೆ. ಅದರಲ್ಲೂ ಮಹದೇವ ಹಡಪದ್ ನಿರ್ವಹಿಸಿದ ಶಾಸಕನ ಪಾತ್ರ ಹಾಗೂ ಪೋಲೀಸಪ್ಪನ ಪಾತ್ರಗಳು ನಮ್ಮೊಳಗೆ ನಗೆಯೊಂದಿಗೆ ಚಾಪ್ಲಿನ್ ಹುಟ್ಟಿಸಬಲ್ಲ ಗಾಢ ವಿಷಾಧ ಹಾಗೂ ಚಿಂತನೆಗೆ ಹಚ್ಚುತ್ತವೆ. ನಾಟಕವನ್ನು ನಿರ್ದೇಶನ ಮಾಡಿ ಎರಡು ಮೂರು ಪಾತ್ರಗಳನ್ನೂ ನಿರ್ವಹಿಸಿರುವ ಯತೀಶ್ ಕೊಳ್ಳೇಗಾಲ ಎಲ್ಲರ ಮನದಲ್ಲಿ ಉಳಿಯುತ್ತಾರೆ. ಉಳಿದಂತೆ ಊರಗೌಡ, ಯುವನಾಯಕ ಹನುಮೇಶ್, ಪೂಜಾರಿಗಳು, ಪೂಜಾರಿಯ ಹೆಂಡತಿ ಎಲ್ಲರೂ... ಪ್ರೇಕ್ಷಕರ ಕಣ್ಣುಗಳ ಮೂಲಕ ಎದೆಯೊಳಗೆ ಜಾಗ ಗಿಟ್ಟಿಸುತ್ತಾರೆ...
‘ಸಂಸ’ ರಂಗಮಂದಿರದಲ್ಲಿ ನಾನು ನೋಡಿದ ಅದ್ಭುತ- ಆಪ್ತ ನಾಟಕವಿದು... ನಾಟಕವೇ...; ಪ್ರಯೋಗವೇನಲ್ಲ.
ಒಂದು ತಾಜಾ.. ಆರ್ದ್ರ ರಂಗಾನುಭವ ನೀಡಿದ ಗೆಳೆಯ ಮಹದೇವ ಹಡಪದ್ ರನ್ನು ಒಮ್ಮೆ ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದೆ. ನನ್ನನ್ನೇ ಅಭಿನಂದಿಸಿಕೊಂಡಂತಾಯಿತು.. ಥ್ಯಾಂಕ್ಸ್ ಟು ‘ಆಟಮಾಟ’ ಹಾಗೂ ಹನುಮಂತ ಹಾಲಗೇರಿ...

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...