ಭಾನುವಾರ, ಏಪ್ರಿಲ್ 29, 2012

ನಟರೊಳಗಿನ ಜಗತ್ತು


                                    ಬೇಲಿಯೊಳಗಣ ಬದುಕು….
 ಭಯಂಕರ ಬರಗಾಲ ಬಿದ್ದದ್ದು ನನಗಿನ್ನು ಮಸಕು ಮಸಕಾಗಿ ನೆನಪಿದೆ. ನನ್ನ ಕಡೆಯ ತಂಗಿ ಹುಟ್ಟಿದ ಮರುವರ್ಷವೇ ಆ ಬರದ ಸಂಕಟವನ್ನು ಅನುಭವಿಸಿದ್ದರಿಂದ ನಾನು ಯಾವಾಗಲೂ ನನ್ನ ತಂಗಿಯನ್ನ ಬರಗಾಲದಾಗ ಹುಟ್ಟಿದಾಕಿ ಅಂತ ಆಡಿಕೊಳ್ಳುತ್ತಿದ್ದ ಕಾರಣಕ್ಕೋ ಏನೋ ಆ ಬರಗಾಲ ನಿಚ್ಚಳ ನೆನಪಿದೆ. ಬಿಕೋ ಅನ್ನುವ ರಣಬಿಸಿಲಿನ ಜಳಕ್ಕ ತತ್ತರಿಸಿ ಹೋದ ದನಕರುಗಳಿಗೆ ಟ್ರಕ್ಕನ್ಯಾಗ ಹುಲ್ಲು ಬರೂತಲೆ ಪಾಳೆಕ್ಕ ನಿಂತು ಹುಲ್ಲು ಬೇಡುತ್ತಿದ್ದ ಮಂದಿಯ ಹಪಹಪಿ ಕಣ್ಣಾಗ ಮೂಡಿದ ಗೊಂಬ್ಯಾಗಿ ಉಳದದ. ಊರ ಜನಗಳು ಕೊಡೋ ಆಯಾ ನಂಬಿ ಬದುಕೋ ನಮ್ಮಂಥ ಸಣ್ಣ ಸಮುದಾಯಗಳಿಗಂತೂ ಬರಗಾಲ ಮೈಮುಳ್ಳಿನ್ಹಂಗ ಚುಚ್ಚತಿರತದ ಅನ್ನೋದು ಸುಳ್ಳಲ್ಲ. ಉಳ್ಳವರು ಗುಳೆ ಹೋಗೋ ಹೊತ್ತಿನ್ಯಾಗ ನಮ್ಮ ಕಸುಬಿಗೆ ಕವಡೆ ಕಿಮ್ಮತ್ತು ಇರತಿರಲಿಲ್ಲ. ನನ್ನಪ್ಪನ ಮುಖದ ಮ್ಯಾಲ ಇದ್ದಕ್ಕಿದ್ದಂತೆ ವಯಸ್ಸಿನ ನೆರಿಗೆಗಳು ಮೂಡಿ ಒಂಥರಾ ದೈನೇಸಿ ಮೂತಿ ಇಟ್ಟಕೊಂಡು ತನ್ನ ಹಸುಬೆ ಸಾಮಾನು ಕಟ್ಟಿಟ್ಟು ‘ನಾವೂ ಎಲ್ಲಿಗಾದರೂ ದೂರ ದುಡಿಲಿಕ್ಕ ಹೋಗೂಣೇನು?’ ಅಂದಾಗ ಅಂತೂ ಕೈಕಾಲು ತಣ್ಣಗಾಗತಿದ್ದವು. ನಮ್ಮಪ್ಪ ಸಣಕಲು ಪೀಚಲು ಮನಶ್ಯಾ… ಖರೆ ಅಂದ್ರ ಅವ ಸಣ್ಣಂದಿರತ ದುಡಿದವನಲ್ಲ. ನಮ್ಮವ್ವನ ದುಡಿಮೆ ನಾವು ಆರು ಜನ ಎಳಸಲು ಪಳಸಲು ಹುಡುಗೋರನ್ನ ಕಟ್ಕೊಂಡು ದುಡಿಯಾಕ ಹೋಗುದಾದರೂ ಎಲ್ಲಿಗೆ ಅನ್ನೋದು ಅವ್ವನ ಪ್ರಶ್ನೆ ಆಗಿತ್ತು. ಕೆರೆಗೆ ತೂಬೂ ಕಟ್ಟುವ ಬರಗಾಲದ ಕಾಮಗಾರಿ ಸುರುವಾದ ಮ್ಯಾಲಂತೂ ಅಪ್ಪನ ಮೂತಿ ನೋಡಲಿಕ್ಕ ಆಗತಿರಲಿಲ್ಲ.
ಆಗ, ನಮಗ ಖರೇ ಹೊಟ್ಟಿ ಎರಡರಷ್ಟಾಗಿಬಿಟ್ಟಿತ್ತು. ನಾವು ನಾಲ್ಕೂ ಜನ ಒಂದು ಆಕಳದ ನೆಪ ಹೇಳಿಕೊಂಡು ಗೋಶಾಲೆಯೊಳಗ ಊಟ ಹೊಡದು ಬರತಿದ್ದಿವಿ, ಟ್ರಕ್ಕ ಬಂದು ನಿಂತಾಗ ರೇಷನ್ನ್ ಸಲುವಾಗಿ ಆಜೂಬಾಜೂಕಿನವರ ಕೂಡ ಕಿತ್ತಾಡತಿದ್ದಿವಿ. ನಮ್ಮನ್ನ ಜಗಳಗಂಟರು ಅಂತ ಗುರುತಿಸುತ್ತಿದ್ದ ಊರ ಜನ ಕೆರೆ ಕಾಮಗಾರಿ ಮಾಡಿ ದಣಿದು ಬರುವ ನಮ್ಮಪ್ಪನ ಮುಂದೆ ಒಂದಿಲ್ಲೊಂದು ತಕರಾರು ಹೇಳಿ ಹೊಡೆಸುತ್ತಿದ್ದರು. ಒಂದೊಂದು ದಿನ ಪಾಳೆಕ್ಕ ನಿಂತು ಊಟ ಹಾಕಿಸಿಕೊಳ್ಳುವಾಗ ದೊಡ್ಡವರೆಲ್ಲ ನಮ್ಮನ್ನ ತಳ್ಳಿ ಹಿಂದು ಹಾಕಿದರು. ಅಪ್ಪನ ಆಜ್ಞಾ ಪ್ರಕಾರ ನಾವು ಸಂಭಾವಿತರಾಗಿಯೇ ಇರಬೇಕಾಗಿತ್ತು. ಹಸಿದ ನನ್ನ ತಂಗಿ ಮುಖ ಈಟೇ ಈಟಾಗಿ ಅಳು ತುಂಬಿಕೊಂಡಿತ್ತು. ಅಣ್ಣ ಹಾಗೂ ಹೀಗೂ ಕಷ್ಟಪಟ್ಟು ತಟಕು ಅನ್ನಸಾರು ಬಿಡಿಸಿಕೊಂಡದ್ದು ಯಾವ ಮೂಲೆಗೂ ಸಾಕಾಗಿರಲಿಲ್ಲ. ಆ ಇಡೀ ದಿನ ನನ್ನ ತಂಗಿ ಹೊರತುಪಡಿಸಿ ನಾವು ಮೂವರು ನೀರುಂಡು ದಿನಗಳೆದೆವು. ಬೇಲಿಯೊಳಗಿನ ಅಸ್ಪೃಶ್ಯರು ನಾವು ನಮಗೆ ಏನು ತಿಂದ್ರಿ ? ಹೊಟ್ಟೆ ಬಟ್ಟೆ ಹೇಗೆ ತುಂಬಿಸಿಕೊಳ್ಳುತ್ತೀರಿ ? ನೆರೆ-ಹೊರೆಯವರು ತೋರಿಸೋ ಸಹಕಾರ ಹೇಗಿದೆ ? ಅಂತ ಯಾರೂ ಕೇಳಲಾರರು. ಮಳೆ ಆಗಿ ಬೆಳೆ ಬಂದ ಮೇಲೆ ರೈತನ ಉಪ ಹೊಟ್ಟೆಯಾಗಿರುವ ನಾವು ಬದುಕುವುದು ಆಯಾದ ಕಾಳಿನಿಂದಲೇ…  ಜಾತಿಯಿಂದ ನಾಯಿಂದರಾಗಿರುವ ನಾವು ತಲೆ ಬೋಳಿಸುತ್ತೇವೆ- ಗಡ್ಡ ಕೆರೆದು ಮುಖ ತೊಳೆದು ಸ್ವಚ್ಛ ಮಾಡುತ್ತೇವೆ ಹೊರತು ಊರಿನ ಯಾರ ಮನೆತನವನ್ನೂ ಹಾಳು ಮಾಡುವವರಲ್ಲ ಆದರೂ ಕೆತಗ ಅನ್ನುವ ಅವಮಾನ ಅನುಭವಿಸುತ್ತೇವೆ.
ನಮ್ಮೂರಾಗ ಮುಂಜಾನೆದ್ದು ನಾವು ಯಾರಿಗೂ ಮುಖ ತೋರಸೋ ಹಂಗಿಲ್ಲ. ಮುಖ ನೋಡುತಲೇ ಅವಮಾನ ಮಾಡತಿದ್ದರು. ಥೂ ಥೂ ಅಂತ ಉಗಳತಿದ್ದರು. ‘ಮುಂಜಾನೆದ್ದ ಈ ಹಜಾಮ ಮೂತಿ ತೋರಿಸಿದ ಏನು ಸುಖಾ ಇಲ್ಲ ತಗಿ’ ಅಂತ ಮಾರಿಗೆ ಹೊಡದಂಗ ಹೇಳತಿದ್ದರು. ರಾತ್ರಿ ಆಗೂತಲೆ ನಾವು ಮುಖ ತೋರಸಬಾರದು, ದಾರಿಗೆ ಎದರಾಗಬಾರದು ಅನ್ನೋ ವಿಚಿತ್ರ ನಡವಳಿಕೆ ನನಗಂತೂ ಮುಜುಗರ ಹುಟ್ಟಸತಿತ್ತು. ಆದರ ಒಂದು ಮಜಾ ಏನು ಅಂದ್ರ ಹಾಗೆ ಥೂ ಅಂತ ಹಚಾಗುಟ್ಟತಿದ್ದವರು ಯಾರೂ ಗಂಡಸರಲ್ಲ, ಹೆಂಗಸರು. ಕೆಲವು ಕಡೆ ಗಂಡಸರು ಹಂಗ ಮಾಡತಿದ್ದರು. ಆದರ ಅವರಿಗೆಲ್ಲ ನಮ್ಮಪ್ಪನ ಕೈಯೊಳಗಿನ ಕತ್ತಿ,ಕತ್ರಿ ಎಂಬ ನಮ್ಮ ಮನೆತನದ ಆಯುಧಗಳ ಬಗ್ಗೆ ಹೆದರಿಕೆ ಇತ್ತು. ಆ ಉಚ್ಚ ಜಾತಿಯವರೆಲ್ಲ ನಮ್ಮಪ್ಪನ ಮುಂದ ತಲೆತಗ್ಗಿಸಿ ಕುಳಿತಾಗ ನನಗಂತೂ ಹೆಮ್ಮೆ ಅನ್ನಿಸತಿತ್ತು. ನಮ್ಮಪ್ಪ ಖುದ್ದ ಬಿಜ್ಜಳರಾಯನೇ ಆಗಿರತಿದ್ದ. 
          ---- ಮಹದೇವ ಹಡಪದ.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...