ಸೋಮವಾರ, ಸೆಪ್ಟೆಂಬರ್ 16, 2013

ಶೇಕ್ಸ್‌ಪಿಯರ್ ಕಾ ಚೋಟಾ ಪ್ಯಾಕೆಟ್

ಶೇಕ್ಸ್‌ಪಿಯರ್ ಕಾ ಚೋಟಾ ಪ್ಯಾಕೆಟ್
ಒಬ್ಬ ಸಾಹಿತಿಯ ಯಶಸ್ಸು ಒಂದು ಕೃತಿಯಲ್ಲಿ ಅಡಗಿರುವುದಿಲ್ಲ. ಒಂದು ಕೃತಿ ಮುತ್ತಾಗಿದ್ದರೆ, ಮತ್ತೊಂದು ರತ್ನವಾಗಿರುತ್ತದೆ ಇನ್ನೊಂದು ವಜ್ರವಾಗಿ ಕಂಗೊಳಿಸಬಹುದು. ಅಂತಹ ಕೃತಿಗಳನ್ನು ಒಂದೊಂದಾಗಿ ಓದುವುದೋ, ನಾಟಕವಾಗಿದ್ದರೆ ನೋಡುವುದೋ ರೂಢಿಗತವಾಗಿ ಬಂದ ಯಶಸ್ಸಿನ ಸೂತ್ರ. ಜೀವಮಾನದ ಸಾಧನೆಗೆ ಪ್ರಶಸ್ತಿ ಪಡೆಯುವ ಸಂದರ್ಭ ಹೊರತು ಪಡಿಸಿದರೆ ಆ ಸೂತ್ರ ಲೇಖಕನಿಗೆ ಅಥವಾ ನಾಟಕಕಾರನಿಗೆ ಒಳಿತನ್ನುಂಟು ಮಾಡುತ್ತದೆ. ಅದನ್ನು ಸವಿಯುವ ರಸಿಕರು ಕೂಡ ಒಮ್ಮೆಗೆ ಎಷ್ಟು ಡೋಸೇಜ್ ಸಹಿಸಬಲ್ಲರೋ ಅಷ್ಟೇ ಡೋಸೇಜ್ ಆಫ್ ಎಂಟರ್‌ಟೇಯ್ನ್‌ಮೆಂಟ್‌ಗೆ ಒಡ್ಡಿಕೊಳ್ಳಬಹುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಕುವೆಂಪು ಬರೆದ ಬಿರುಗಾಳಿ ನಾಟಕದಲ್ಲಿ ಬರುವ ಬಾಣಸಿಗ ಭೀಮಣ (ವಿಲಿಯಮ್ ಶೇಕ್ಸ್‌ಪಿಯರ್‌ನ ಕುಕ್) ಊಟವನ್ನು ಬಡಿಸುವ ಮೊದಲೇ ಅನ್ನ, ಸಾರು, ಕಾಯಿ, ಪಲ್ಲೆ, ಹೋಳಿಗೆ, ಕೋಸಂಬರಿ ಇವೆಲ್ಲವನ್ನೂ ಮೊದಲೇ ಕಲಸಿ ನಂತರ ಶೇಕ್ಸ್‌ಪಿಯರ್‌ನ ಪ್ರಾಸ್ಪೆರೋಗೆ ಬಡಿಸುವ ಧೈರ್ಯ ಮಾಡಿದರೆ ಏನಾಗಬಹುದು. ರಿಸಲ್ಟ್ ನಿಮಗೆ ಗೊತ್ತಿದೆ. ಆದರೆ ಅನೇಕ ಲೇಖಕರ ಸಾಹಿತ್ಯದ ಕೃತಿಗಳು, ಸಮಗ್ರವಾಗಿ ನೋಡುವ ಉದ್ದೇಶದಿಂದ, ಈ ಬಗೆಯ ಫಾಸ್ಟ್ ಫುಡ್ ಕಲ್ಚರ್‌ಗೆ ಒಳಗಾಗಿವೆ. ಅಷ್ಟು ಸಾಲದೆಂಬಂತೆ ಆ ಕೃತಿಗಳನ್ನೆಲ್ಲಾ ಒಂದೆಡೆ ಗುಡ್ಡೆ ಹಾಕಿಕೊಂಡು, ಅವುಗಳನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸಿ, ವಿವಿಧ ವಾದಗಳ ಹಾಗೂ ಇಸಂಗಳ ಎಳೆಗಳನ್ನು ಹೆಕ್ಕಿ ತೆಗೆದು ಲೇಖಕ ಇಂಥವ ಎಂದು ಅವನ ಹಣೆಬರಹ ಬರೆದುಬಿಡುವ ಕೆಲಸವೂ ಅವ್ಯಾಹತವಾಗಿ ಸಾಗುತ್ತಿದೆ. ಆ ಲೇಖಕ ಭೂತಕಾಲದಲ್ಲಿ ಬದುಕಿದ್ದೇ ದೊಡ್ಡ ಅವಕಾಶ!! ಅದನ್ನು ಡಿಫೆಂಡ್ ಮಾಡಿಕೊಳ್ಳಲು ಅವನಿರುವುದಿಲ್ಲ ಎಂಬ ಅಗಾಧವಾದ ಆತ್ಮವಿಶ್ವಾಸ. ನಿಜವಾದ ರಸಿಕರಿಗೆ ಇಂತಹ ಬೆಳವಣಿಗೆಗಳ ಜ್ಞಾನವೇ ಇರುವುದಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ನಟರಾಜ್ ಹುಳಿಯಾರ್ ಬರೆದ 'ಶೇಕ್ಸ್‌ಪಿಯರ್ ಮನೆಗೆ ಬಂದ' ನಾಟಕ ಇಂತಹ ಎಡಬಿಡಂಗಿತನವನ್ನು ಹೀಯಾಳಿಸುತ್ತಾ ಸಾಗುತ್ತದೆ. ಆದರೆ ಮತ್ತದೇ ಸಮಗ್ರವೆಂಬ ಚೌಕಟ್ಟಿನಲ್ಲಿ ಬಂಧಿಯಾಗಿಬಿಡುತ್ತದೆ. ಶೇಕ್ಸ್‌ಪಿಯರ್ ಸೃಷ್ಟಿಸಿದ ಪಾತ್ರಗಳು ಕಾಲ ದೇಶಗಳನ್ನು ದಾಟಿ ವಿಸ್ತಾರಗೊಂಡು ಸ್ತ್ರೀವಾದದ ತೆಕ್ಕೆಯಲ್ಲೂ ಸುಖಿಸಿ, ಲೇಖಕನಿಗೇ ಗುರುತು ಸಿಗದಷ್ಟು ಬದಲಾಗಿಬಿಡುವ ರೂಪಕದಲ್ಲಿ, ಆ ಪ್ರಯೋಗವೇ ಪ್ರಯೋಗಕ್ಕೆ ಪ್ರಶ್ನೆಯಾಗಿ ನಿಲ್ಲುವಂತೆ ಮಾಡಿಬಿಡುತ್ತಾರೆ ಹುಳಿಯಾರ್. ಶೇಕ್ಸ್‌ಪಿಯರ್ ಮನೆಗೆ ಬಂದ ಒಂದು ಇಂಡಿಪೆಂಡೆಂಟ್ ನಾಟಕವೇ? ಖಂಡಿತಾ ಅಲ್ಲ. ಆ ಎಚ್ಚರದ ಇಟ್ಟಿಗೆಗಳಿಂದಲೇ ನಿರ್ಮಾಣವಾಗಿರುವ ಈ ಕೊಲಾಜ್, ಸ್ವತಂತ್ರ ಕೃತಿಯ ಪರಿಕಲ್ಪನೆಗಳನ್ನೇ ಧೂಳೀಪಟ ಮಾಡುತ್ತದೆ. ಅದು ಸತ್ಯದ ಹಾದಿ ಕೂಡ. ಅದಕ್ಕೆ ಜಸ್ಟಿಫಿಕೇಶನ್ ಸ್ವತಃ ಶೇಕ್ಸ್‌ಪಿಯರ್ ಕೊಟ್ಟರೆ ಇನ್ನೂ ಚೆನ್ನ ಅಲ್ಲವೇ? ಎನಗಿಂತ ಹಿರಿಯರ ಅನುಭವವನ್ನು ಕದಿಯುವುದು ಕಳ್ಳತನವಾಗುವುದಿಲ್ಲ. ಅದು ಬದುಕಿನ ಹಾದಿ. ತನ್ನ ದುಡಿಮೆಯ ಹಾದಿಯಾಗಿ ನಾಟಕ ಕಲೆ ಆಯ್ದುಕೊಂಡ ಶೇಕ್ಸ್‌ಪಿಯರ್ ವಿಮರ್ಶಕರ ಬಾಯಿ ಮುಚ್ಚಿಸುವುದಕ್ಕಾಗಿ ಪದ್ಯಗಳನ್ನೂ ಬರೆದನಂತೆ! ಹೀಗೆ ಇನ್ನೂ ಅನೇಕ ರೋಚಕ ಸಂಗತಿಗಳನ್ನು ಒಂದೊಂದಾಗಿ ಬಿಚ್ಚಿಡುವ ನಾಟಕಕಾರರು, ಪೋಸ್ಟ್ ಬ್ಲಾಗಿಸಂನ ಈ ಯುಗದಲ್ಲಿ ಒಂದು ಡೈಲಾಗ್ ಬರೆಯುವುದನ್ನು ಮರೆತಿದ್ದಾರೆ. ಅಥವಾ ನವೋದಯದಲ್ಲಿ ಅರಳಿದ ಶೇಕ್ಸ್‌ಪಿಯರ್‌ನ ನಾಲಿಗೆಯಲ್ಲಿ ಈ ಮಾತುಗಳನ್ನು ಕನ್ನಡದಲ್ಲಿ ಆಡಿಸಲು ಅವರು ಹಿಂಜರಿದಿರಬೇಕು. ಆದರೂ ಸ್ತ್ರೀವಾದವನ್ನು ಮೆನ್ಷನ್ ಮಾಡುವ ಹುಳಿಯಾರರ ಶೇಕ್ಸ್‌ಪಿಯರ್ ಈ ಡೈಲಾಗ್ ಹೇಳಲು ಹಿಂಜರಿಯುವುದಿಲ್ಲ: 'ನನ್ನ ನಾಟಕಗಳು ಕಾರ್ಖಾನೆಯಿಂದ ಹೊರ ಬರುವ ಚೆಂದದ ಕಾರುಗಳಿದ್ದ ಹಾಗೇ. ನಳನಳಿಸುವ ನುಣುಪಾದ ಮೇಲ್ಮೈ ಪಡೆಯಲು ಸಾಣೆ ಹಿಡಿಯುವಾಗ ಕಬ್ಬಿಣದ ಧೂಳು ಉದುರುತ್ತಿತ್ತಲ್ಲ, ಆ ಧೂಳಿನಂತೆ ಸ್ತ್ರೀವಾದ ಮತ್ತು ಪುರುಷವಾದ. ಕಾರು ಚೆಂದ ಕಾಣುವುದು ಜೊತೆಯಲ್ಲಿ ಪ್ರೇಯಸಿ ಇದ್ದಾಗ ಅಥವಾ ಪ್ರಿಯಕರ ಇದ್ದಾಗ.'

ಆಕಸ್ಮಾತ್ ಈ ನಾಟಕ ಪುಸ್ತಕರೂಪಿಯಾಗಿ ಕೈಗೆ ದೊರಕಿ ಅದರ ಬೆನ್ನುಡಿ ಅಥವಾ ಮುನ್ನುಡಿಯ ಸಾಲುಗಳ ಮೇಲೊಮ್ಮೆ ಕಣ್ಣು ಹಾಯಿಸಿದ್ದರೆ, ಟಿ ಪಿ ಕೈಲಾಸಂರನ್ನು ಒಮ್ಮೆಲೆ ಒಂದೇ ಮುಷ್ಟಿಯಲ್ಲಿ ಹಿಡಿದಿಡುವ ಪ್ರಯತ್ನವಾಗಿತ್ತಲ್ಲ, ಇದು ಅಂತಹ ಒಂದು ಯತ್ನ ಎಂದುಕೊಂಡು ಸುಮ್ಮನಿದ್ದುಬಿಡಬಹುದಾಗಿತ್ತು. ಆದರೆ ಶೇಕ್ಸ್‌ಪಿಯರ್ ಹೆಸರೇ (ಹೆಸರಿನ್ಲಲೇನಿದೆ ಎಂದು ಹುಬ್ಬೇರಿಸಬೇಡಿ) ಸಾಕು ಥಿಯೇಟರ್‌ನ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಲು. ಅದಕ್ಕಾಗಿಯೇ ಆ ಕೃತಿ ಮೊತ್ತಮೊದಲ ಬಾರಿ ರಂಗರೂಪಿಯಾಗಿ ಪ್ರದರ್ಶನಗೊಂಡಾಗಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಜಾಮ್ ಪ್ಯಾಕ್ಡ್ ಆಗಿತ್ತು. ಆ ಶ್ರೇಯಸ್ಸು ಥಿಯೇಟರ್ ತತ್ಕಾಲ್ ತಂಡಕ್ಕೆ ಸಲ್ಲಬೇಕು. ಶೇಕ್ಸ್‌ಪಿಯರ್‌ನ ಮ್ಯಾಜಿಕ್, ಹುಳಿಯಾರ್ ಮ್ಯಾಜಿಕ್ ಮತ್ತು ನಟರಾಜ್ ಹೊನ್ನವಳ್ಳಿ ಮ್ಯಾಜಿಕ್ ಒಟ್ಟೊಟ್ಟಾಗಿ ಕೆಲಸ ಮಾಡಿತ್ತು. ರವೀಂದ್ರ ಕಲಾಕ್ಷೇತ್ರದ ದನಿ ವ್ಯವಸ್ಥೆ ನಿರ್ವಹಿಸುವವರು ನೋಡುಗರು, ಕೇಳುಗರೂ ಹೌದು ಎಂಬುದನ್ನು ಅರ್ಥ ಮಾಡಿಕೊಂಡಿದ್ದರೆ ನಾಟಕದ ಅಭಿಮಾನಿಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು. ಅಥವಾ ಅದನ್ನು ಖಂಡಿಸುವವರ ಸಂಖ್ಯೆ!

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...