ಗುರುವಾರ, ಆಗಸ್ಟ್ 29, 2013

ಸಿನೆಮಾದ ಭಾಷೆ ಅಂದ್ರೆ ಯಾವುದು,,.? -ಮಹದೇವ ಹಡಪದ



ನಾಟಕೀಯತೆಯನ್ನು ದೈನಂದಿನ ಬದುಕಿನಲ್ಲಿ ನಾವು ಗುರುತಿಸಿಕೊಳ್ಳಬಹುದಾಗಿದೆ.  ಅಂತೆಯೇ ಸಿನಿಮೀಯ ಮಾದರಿಗಳನ್ನು ನಾವು ಇಂದು ವಿಶೇಷವಾಗಿ  ಸುದ್ದಿವಾಹಿನಿಗಳಲ್ಲಿ ಕಾಣುತ್ತೇವೆ. ಬಲ್ಮೆಯ ಉನ್ಮತ್ತ ಚಾಲಾಕಿ ದೃಶ್ಯಗಳು, ಅತಿರಂಜಿತ ಕ್ರೌರ್ಯ, ಅತ್ಯುತ್ಸಾಹಿ ಅಪರಾಧ ಪ್ರಜ್ಞೆಯನ್ನು ಬೆಳೆಸುತ್ತವೆ ಎಂದು ಯಾವುದನ್ನು ಕರೆಯಬಹುದೋ ಅಂಥ ದೃಶ್ಯಗಳು ಮನುಷ್ಯ ಸಹಜವಾಗಿ ಎಲ್ಲಿಯೂ ಕಾಣಸಿಗುವುದಿಲ್ಲ. ಸಿನಿಮೀಯ ಭಾಗಗಳು ಬಾವೋತ್ಕರ್ಷೆಯಲ್ಲಿ ಪರದೆಯ ಮೇಲೆ ಮಾತ್ರ ಕಾಣಿಸಿಕೊಳ್ಳುತ್ತವೆ. ಅಂಥ ಗುಣಾವಗುಣಗಳುಳ್ಳ ಘಟನೆಗಳು ಇಂದು ಸಾಮಾನ್ಯನ ಸಾರ್ವಜನಿಕ ಜೀವನದಲ್ಲೂ ತೀರಾ ಸಹಜವೆಂಬಂತೆ ನೋಡುತ್ತಿದ್ದೇವೆ. ಸ್ವಭಾವದ ಪ್ರೇರಣೆ ಏನೇ ಆಗಿರಲಿ ವಿಕಾರಗಳು ಹುಟ್ಟುವ ಮೂಲ ಸಾಂಸ್ಕೃತಿಕ ಬೇಜವಾಬ್ದಾರಿತನದ್ದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
 ಸಾಂಸ್ಕೃತಿಕ ಪ್ರಜ್ಞೆ ಯಾವತ್ಕಾಲಕ್ಕೂ ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕಿಂತ ಕುರಿತಾದ ಅನುಮಾನ ಅಸಮಾಧಾನಗಳನ್ನು ಹುಟ್ಟುಹಾಕುವ ಮೂಲಕ ಮನುಷ್ಯನ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತದೆ. ಸಾಧ್ಯತೆಗಳನ್ನು ಭವಿಷ್ಯತ್ತಿನ ಚಲಚ್ಚಿತ್ರಗಳಲ್ಲಿ ಕಾಣುತ್ತೇವೆ. ಸೂಕ್ಷ್ಮಬಾವಗಳು ಕೂಡ ತೀಕ್ಷ್ಣ ಸಂವೇದನೆಯ ಮೊನಚನ್ನು ಹೊಂದಿರುತ್ತವೆ. ಅಂಥ ಸಿನೇಮಾಗಳನ್ನು ಕನ್ನಡದ ಪ್ರೇಕ್ಷಕರಿಗೆ ಕೊಡುವ ಒಂದು ಗುಂಪು ಸದಾ ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಸಂತಸದ ಸಂಗತಿ. ಕನ್ನಡದ ಸಾಹಿತ್ಯಿಕ ಕೃತಿಗಳನ್ನಾಯ್ದು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಗುಂಪು ಸಹಿತ ಪ್ರಶಸ್ತಿಯ ಗರಿಗಾಗಿ ಕೆಲಸ ಮಾಡುತ್ತವೆ ಎಂದು ಓರೆಗಣ್ಣಲ್ಲಿ ನೋಡಿಸಿಕೊಳ್ಳುತ್ತವೆ.  ಆದರೆ ಸೃಜನಶೀಲ ಕೆಲಸಕ್ಕಾಗಿ ಬೇರೆಲ್ಲ ಮಾದರಿಯ ಜನಪ್ರಿಯಗಳನ್ನು ನಗಣ್ಯಗೊಳಿಸಿ ಜನಪರವಾದ ರೀತಿಯಲ್ಲಿ ಕಲಾಕೃತಿಗಳನ್ನು ಕಟ್ಟುತ್ತಾರೆ. ಅವರ ಚಲನಚಿತ್ರಗಳು ಕಥೆಯ ಸಂವಿಧಾನವನ್ನು ಮೀರಿಸಿ ಆಯಾಮಗಳನ್ನು ಸೃಷ್ಟಿಸುವ ಕಾರಣಕ್ಕಾಗಿಯೇ ಕನ್ನಡ ಕಲಾಪ್ರಪಂಚವನ್ನು ಇನ್ನಷ್ಟು ವಿಸ್ತರಿಸುವ ಕೆಲಸ ಮಾಡುವ ಸಿನೇಮಾಗಳಾಗಿ ಸಹೃದಯರ ಮನಸ್ಸನ್ನು ಸೂರೆಗೊಳ್ಳುತ್ತವೆ. ಅಂಥ ಚಿತ್ರಗಳ ಪರಂಪರೆ ಇದ್ದಾಗ್ಯೂ ಕನ್ನಡದಲ್ಲಿ ಜನಪ್ರಿಯ ಮಾದರಿಯಲ್ಲಿ ಬರುವ ಚಿತ್ರಗಳು ಯಾವ ಸಂವೇದನೆಯನ್ನು ಕಟ್ಟುತ್ತಿವೆ ಅನ್ನುವುದು ಪ್ರಶ್ನೆಯಾಗಿದೆ..?
 ಚಲನಚಿತ್ರಗಳು ಸದಭಿರುಚಿ ಬೆಳೆಸಬೇಕಾದ ಸಂದರ್ಭದಲ್ಲಿಯೇ ಆಡಳಿತಶಾಹಿಯ ಅಪೇಕ್ಷೆಗೆ ತಕ್ಕಂತೆ ಮೈಮರೆಸುವ ತಂತ್ರವನ್ನಷ್ಟೆ ಪೋಷಿಸಲಾರಂಭಿಸಿದವು. ಕಾರಣಕ್ಕಾಗಿಯೇ ಕರ್ತೃ, ಕೃತಿ(ಕಲೆ), ಪ್ರೇಕ್ಷಕರ ಟ್ರಯಾಂಗಲ್ ನಡುವೆ ವ್ಯವಸ್ಥಿತ ಹುನ್ನಾರವೊಂದು ತನ್ನ ಅಭಿಪ್ರಾಯ ರೂಪಿಸಲೋಸುಗ ಕಲಾಭಿರುಚಿಯನ್ನು ತನ್ನ ಆಶಯದಂತೆ ರೂಪಿಸತೊಡಗಿತು. ಅಲ್ಲಿನ ವಿರಾಮಗಳ ನಂತರದ ಕಥನ ಪಲ್ಲಟದ ಸಿನಿಮೀಯ ಗುಣ ಮತ್ತು ಎರಡು ಗಂಟೆಗಳ ಕಾಲ ಪ್ರೇಕ್ಷಕನೊಳಗೆ ಯಾವ ಪ್ರಶ್ನೆಗಳು -  ಸಂಕಷ್ಟಗಳೂ ಅನುಭವಕ್ಕೆ ಬಾರದಂತೆ ಹಿಡಿದಿಟ್ಟುಕೊಳ್ಳುವ ಕೌಶಲದ ಕಥಾಹಂದರದಲ್ಲಿ ಚಿತ್ರ ತಯಾರಾದರೆ ಅದೊಂದು ಭ್ರಮಾಜಗತ್ತಿನ ಸಮ್ಮೋಹನ ಕಲೆ,   ಚಿತ್ರಮಂದಿರದ ಹೊರಗೆ ಕಾಲಿಡುತ್ತಿದ್ದಂತೆಯೇ ಹೊರಬೆಳಕಿನ  ಪ್ರಖರತೆಯಲ್ಲಿ ಚಿತ್ರದ ಅನುಭವ ಬರೀ ಚಾಕಚಕ್ಯೆತೆಯ ಸ್ಟೋರಿಯಾಗಿ ತಲೆಯಲ್ಲಿ ಉಳಿಯುವುದರಿಂದ ಅದರ ಕೀಳು ಮನೋರಂಜನೆ ಕ್ಷಣದ ಸಂತೋಷವನ್ನು ನೀಡುತ್ತದೆ. ಆದರೆ ಶೈಲೀಕೃತ ಬದುಕು ನೋಡುಗನ ವರ್ತನೆಗಳನ್ನು ಬದಲಿಸುತ್ತ, ಆಸೆ-ಭಾಷೆಗಳನ್ನು ಜಾಗತಿಕ ಬದುಕಿನ ಸವಾಲುಗಳ ನಡುವೆ ತಂದು ನಿಲ್ಲಿಸುತ್ತದೆ. ಆಗ ಸಿನಿಮೀಯ ಗುಣಗಳು ನಾಗರೀಕ ಸಮಾಜದ ಸರ್ವೇಸಾಮಾನ್ಯ ಲಕ್ಷಣಗಳ ಹಾಗೆ ಗೋಚರಿಸತೊಡಗುತ್ತವೆ. ನಾವು ಯಾವದನ್ನು ಕಾಣಬೇಕಿತ್ತೋ ಅದನ್ನು ಕಾಣಿಸದೇ ಇರುವ ಸಾಂಸ್ಕೃತಿಕ ಲೋಕ ನಮಗೆ ತೋರಿಸುವ ಚಿತ್ರಗಳ ಚಿತ್ರಕಶಕ್ತಿಯಲ್ಲಿ ಯಾವ ರಸಾನುಭವದ ಲವಲೇಶಗಂಧವೂ ಇರದಿದ್ದರೂ ವಿಕೃತ ಸಂತೋಷವನ್ನು ಅತಿರಂಜಿತವಾಗಿ ನೀಡುವ ಮುಖೇನ  ಅದು ಮೈಮರೆಸುತ್ತದೆ. ಮೈಮರೆವಿನಲ್ಲಿ ವಾಸ್ತವದ ಲಕ್ಷಣಗಳು ಮಾಯವಾಗುತ್ತ ನೋಡುವ ಭ್ರಮೆಯನ್ನು ಮಾತ್ರ ನಮ್ಮದಾಗಿಸಿ ವ್ಯವಸ್ಥೆಯ ಕುರೂಪಗಳನ್ನು ಮುಚ್ಚಿಹಾಕುತ್ತದೆ. ಆಗ ನೋಡುಗನ ಪ್ರತಿನಿಧಿಯಾಗಿ ಪಾತ್ರಗಳು ಮೂಡುವುದಿಲ್ಲ, ಪಾತ್ರಧಾರಿಯ ಪ್ರತಿನಿಧಿಯಾಗಿ ನೋಡುಗ ತನ್ನತನ ಬಿಟ್ಟುಕೊಡುತ್ತಾನೆ. ಹೀಗೆ ಪರಿಣಾಮ ಬೀರುವ ಚಿತ್ರಗಳು ನಮಗೆ ಬೇಕೇ… ? ಜನಪರ ಚಿತ್ರಗಳನ್ನು ನೋಡುವ ಮನಸ್ಸುಗಳ ಮೌನದಲ್ಲಿ ಸಮೃದ್ಧ ಸಾಂಸ್ಕೃತಿಕ ರೂಪು ಮೂಡುತ್ತದೆ. ಅಂಥ ಚಿತ್ರಗಳನ್ನು ಹುಡುಕಿಕೊಂಡು ಹೋಗಿ ನೋಡಬೇಕಾದ ಮನಃಸ್ಥಿತಿ ಕನ್ನಡದಲ್ಲಿದ್ದರೂ ಅಂಥ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗದಿರುವುದು ದುರಂತ.    
ಆದರೆ ಇವತ್ತಿನ ಚಲನಚಿತ್ರ ಮಾಧ್ಯಮದ ಜನಪ್ರಿಯತೆ ಯಾವ ಮಾದರಿಯ ಅಭಿರುಚಿಯನ್ನು ಪ್ರೇರೇಪಿಸುತ್ತಿದೆ? ಯಾಕಾಗಿ ಇಂಥ ಕಥಾ ಮಾದರಿಗಳನ್ನು ದೃಶ್ಯೀಕರಿಸಿ ಜನರ ಸಹೃದಯತೆಯನ್ನು ಹಾಳುಗೆಡುವುತ್ತಿದೆ, ಇಂಥ ಚಲನಚಿತ್ರಗಳು ಸಮುದಾಯದ ಆಳದ ನೋವನ್ನು ಮರೆಮಾಚುವ ಕಾರಣವಾದರೂ ಏನು? ಇದೆಲ್ಲದರ ಹಿಂದೆ ಕಾರ್ಪೋರೇಟ್ ಜಗತ್ತಿನ ಆಶಯಗಳು ಕೆಲಸ ಮಾಡುತ್ತಿರುವುದಂತೂ ಸ್ಪಷ್ಟವಾಗಿವೆ

ಭಾನುವಾರ, ಏಪ್ರಿಲ್ 21, 2013

ನಶಿಸುತ್ತಿರುವ ಕುಂಬಾರಿಕೆಗೆ ಮತ್ತೆ ಜೀವಕಳೆ ಬಂದೀತೆ? -- ಮುಹಮ್ಮದ್ ರಝಾ ಮಾನ್ವಿ

*ಪ್ಲಾಸ್ಟಿಕ್ ವಸ್ತುಗಳ ಭರಾಟೆಯಲ್ಲಿ ಮರೆಯಾಗುತ್ತಿರುವ ಮಣ್ಣಿನ ಪಾತ್ರೆಗಳು

ಹೌದು ಇದು ಪ್ಲಾಸ್ಟಿಕ್ ಯುಗ. ನಮ್ಮ ಮನೆಯ ಇಂಚಿಂಚು ಜಾಗವನ್ನೂ ಪ್ಲಾಸ್ಟಿಕ್ ಕಬಳಿಸಿಕೊಂಡಿದೆ. ಈ ಪ್ಲಾಸ್ಟಿಕ್ ಭರಾಟೆಗೆ ಸಿಕ್ಕಿ ಅನಾದಿ ಕಾಲದಿಂದಲೂ ಉಪಯೋಗಿಸುತ್ತಿದ್ದ ಮಣ್ಣಿನ ಮಡಕೆ ಕುಡಿಕೆಗಳು ಮೂಲೆ ಸರಿದು ನೆಲೆ ಕಳೆದು ಕೊಂಡಿವೆ. ನಾವು ಚಿಕ್ಕವರಿದ್ದಾಗ ಕುಂಬಾರ ಓಣಿಗೆ ಹೋಗಿ ಬೇಳೆ ಬೇಯಿಸುವ ಮಡಕೆ ತರವುದೇ ಒಂದು ಸಾಹಸವಾಗಿತ್ತು. ಅದನ್ನು ಜೋಪಾನವಾಗಿ ಮನೆ ಮುಟ್ಟಿಸುವುದರೊಳಗೆ ಸಾಕುಸಾಕಾಗಿ ಹೋಗುತ್ತಿತ್ತು. ಈಗ ಅಂತಹ ಪ್ರಮೇಯವೇ ಇಲ್ಲ. ಏಕೆಂದರೆ ಮಡಕೆಯ ಬದಲಿಗೆ ಲೋಹದ ವಸ್ತುಗಳು ಅಡುಗೆ ಮನೆ ಸೇರಿಕೊಂಡಿವೆ. ಆಲಂಕಾರಿಕ ಮಣ್ಣಿನ ಪರಿಕರಕಗಳ ಬದಲಾಗಿ ಕೃತಕ ಪ್ಲಾಸ್ಟಿಕ್ ವಸ್ತುಗಳು ತಮ್ಮ ಜಾಗವನ್ನು ಪಡೆದುಕೊಂಡಿವೆ.
ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಾನ ಹಾರ್ಯಾರಿ ಮಣ್ಣಾ ತುಳಿದಾನ
ಹಾರಿ ಹಾರ್ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ ನಾರ್ಯಾರು ಹೊರುವಂತ ಐರಾಣಿ
ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡಾನ ಘಟ್ಟಿಸಿ ಮಣ್ಣಾ ತುಳಿದಾನ
ಘಟ್ಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ ಮಿತ್ರೇರು ಹೊರುವಂತ ಐರಾಣಿ
ಈ ಜಾನಪದ ಹಾಡಿನ ಕುಂಬಾರಣ್ಣ ಈಗ ನೆನಪು ಮಾತ್ರ. ಕುಂಬಾರಣ್ಣನೀಗ ಮುಂಜಾನೆದ್ದು ಹಾಲು ಬಾನು ಉಂಡು, ಹಾರ್ಯಾಡಿ ಮಣ್ಣನ್ನು ತುಳಿಯುವಂತಹ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಆಧುನಿಕತೆಯ ಭರಾಟೆಯಲ್ಲಿ ಜನರು ಕುಂಬಾರಣ್ಣ ಮಾಡಿದ ಮಣ್ಣಿನ ಮಡಿಕೆಗಳನ್ನು ಕೊಳ್ಳಲು ಸಿದ್ಧರಿಲ್ಲ. ಅಲ್ಲಲ್ಲಿ ಕೆಲವರು ತಮ್ಮ ಕುಲ ಕಸುಬನ್ನು ಹೇಗಾದರೂ ಮಾಡಿ ಉಳಿಸಿಕೊಂಡು ಹೋಗಬೇಕು ಎನ್ನುವ ಹಠದಿಂದ ತಮಗೆ ಲಾಭ ಇಲ್ಲದಿದ್ದರೂ, ತಮ್ಮ ಕಸುಬು ಬಿಡುತ್ತಿಲ್ಲ. ಇಲ್ಲದಿ ದ್ದರೆ ಇಂದಿನ ಆಧುನಿಕ ಮಕ್ಕಳಿಗೆ ಮಣ್ಣಿನ ಪಾತ್ರೆಗಳು ಕೇವಲ ಕಥೆಯಾಗಿ ಮಾತ್ರ ಉಳಿಯುತ್ತಿದ್ದವು.
ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಪಾರಂಪರಿಕ ವಾಗಿ ನಡೆದುಕೊಂಡು ಬಂದ ಅನೇಕ ಕಲೆಗಳಲ್ಲಿ ಕುಂಬಾರಿಕೆಯೂ(ಮಡಿಕೆ ತಯಾರಿಕೆ) ಒಂದು. ಇದು ಮಾನವ ಸಂಸ್ಕೃತಿಯ ಆರಂಭ ಕಾಲದಿಂದಲೂ ಬೆಳೆದು ಬಂದಿದ್ದು ಮನುಷ್ಯನ ಅತಿ ಅವಶ್ಯಕತೆಗಳಲ್ಲಿ ಒಂದಾಗಿತ್ತು. ಮಡಿಕೆ ತಯಾರಿಕಾ ಕಲೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇದುವರೆಗೂ ದೊರೆತ ನಾಗರಿಕತೆಗಳಲ್ಲಿ ಮಣ್ಣಿನ ಮಡಿಕೆಗಳು ಈ ಇತಿಹಾಸಕ್ಕೆ ಸಾಕ್ಷಿಯಾಗಿವೆ.
ಮಾನವ ಮಣ್ಣಿನ ಮಡಿಕೆಗಳನ್ನು ಪುರಾತನ ಕಾಲದಿಂದಲೂ ಸರ್ವೋಪಯೋಗಿ ಸಾಧನವಾಗಿ ಗುರುತಿಸಲ್ಪಡುತ್ತದೆ. ನೀರು ಸಂಗ್ರಹಿಸಲು, ದವಸ ಧಾನ್ಯಗಳ ಸಂಗ್ರಹಣೆಗೆ, ಅಲಂಕಾರಕ್ಕೆ, ದೇವರ ಮುಂದಿನ ದೀಪ ಧೂಪಗಳಿಗೆ ಪ್ರತಿಯೊಂದಕ್ಕೆ ಮಣ್ಣಿನಿಂದ ಮಾಡಿದ ಸಲಕರಣೆಗಳು ಉಪಯೋಗಿಸಲ್ಪಡುತ್ತಿದ್ದವು. ಮಡಿಕೆಗಳನ್ನು ತಯಾರಿಸುವ ಪ್ರಕ್ರಿಯೆಗೆ ಅಂದಾಜು 9ರಿಂದ 10ದಿನಗಳಾದರೂ ಬೇಕು. ಒಬ್ಬರು ಒಂದು ದಿನಕ್ಕೆ 10-12 ಮಡಕೆಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು ಅವುಗಳನ್ನು ಒಣಗಿಸಿ ಸುಟ್ಟು ನಂತರ ಮಾರಾಟಕ್ಕೆ ಸಜ್ಜುಗೊಳಿಸ ಬೇಕಾಗುತ್ತದೆ.
ಭಟ್ಕಳ ತಾಲೂಕಿನ ಚಿತ್ರಾಪುರ ಕುಂಬಾರ ಕೇರಿಯಲ್ಲಿ ಈಗಲೂ ಮಣ್ಣನ್ನು ಹದಕ್ಕಿಳಿಸಿ ಮಣ್ಣಿನ ಸುಂದರ ಕಲಾಕೃತಿಗಳನ್ನು ತಯಾರಿಸುವ ಗೋವಿಂದಪ್ಪ ನಾಗಪ್ಪ ಕುಂಬಾರ್ ಹಾಗೂ ಅವರ ಕುಟುಂಬ ತಮ್ಮ ಕುಲಕಸುಬನ್ನು ಕಷ್ಟಕಾಲ ದಲ್ಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಬಹಳ ದೂರದಿಂದ ಜೇಡಿಮಣ್ಣನ್ನು ಸಂಗ್ರಹಿಸಿ ತಂದು ಅದನ್ನು ನೆನಸಿ, ಒಣಗಿಸಿ, ಕುಟ್ಟಿ, ಗಾಳಿಸಿ ಶೇಡಿಮಣ್ಣಿನೊಂದಿಗೆ ಕಲಿಸಿ ನಂತರ ಮಡಿಕೆಯನ್ನು ತಯಾರಿಸುತ್ತಾರೆ. ಅದನ್ನು ಭಟ್ಟಿಯಲ್ಲಿ ಕೆಂಪು ಬಣ್ಣ ಬರುವವರೆಗೂ ಸುಟ್ಟು ನಂತರ ಮಾರಾಟ ಮಾಡುತ್ತಾರೆ.
ಹಿಂದೆ ಮಡಿಕೆ ಹೊತ್ತು ಸಂತೆ, ಜಾತ್ರೆಗಳಿಗೆ ತೆರಳುತ್ತಿದ್ದ ಇವರು ಈಗ ಅದರ ಬೇಡಿಕೆ ಕಡಿಮೆಯಿಂದಲೂ ಮಡಿಕೆ ತಯಾರಿಕೆಯ ಕಚ್ಚಾ ಸಾಮಗ್ರಿಗಳ ಅಲಭ್ಯತೆಯಿಂದಲೂ ಊರೂರು ಸುತ್ತುವ ಕಾರ್ಯಕ್ಕೆ ತಿಲಾಂಜಲಿಯನ್ನು ನೀಡಿದ್ದು ಕೇವಲ ಹೆಸರಿಗೆ ಮಾತ್ರ ಕುಂಬಾರಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಶ್ರಮದ ಕೆಲಸ: ಕುಂಬಾರಿಕೆ ಸುಲಭವಲ್ಲ. ಇದೊಂದು ಶ್ರಮಜೀವಿಗಳ ಕೆಲಸ. ಇಲ್ಲಿ ಲಾಭಕ್ಕಿಂತ ನಷ್ಟವೆ ಹೆಚು.್ಚ ಸ್ವಲ್ಪ ಜಾಗ್ರತೆ ತಪ್ಪಿದರೂ ಕೆಲಸ ಕೆಟ್ಟಂತೆಯೆ. ಹೊಲ ಕೆರೆಗಳಲ್ಲಿ ಸಿಗುವ ಜೇಡಿಮಣ್ಣನ್ನು ತಂದು ನೆನೆಹಾಕಿ ಕಲೆಸಿ ನಾಲ್ಕೈದು ದಿನಗಳ ನಂತರ ಅದನ್ನು ಸುಮಾರು ಒಂದು ಗಂಟೆ ಕಾಲ ತುಳಿದು ಹದ ಮಾಡಿ ಚಕ್ರದ ಸಹಾಯದಿಂದ ಮಡಕೆ ತಯಾರಿಸಬೇಕು. ಹಸಿಯಾದ ಮಣ್ಣು ಹದಕ್ಕೆ ಸರಿಯಾಗಿ ಆರಿದ ಮೇಲೆ ಬಡಿದು ಕೂರಿಸಿ ಒಂದು ದಿನ ನೆರಳಿನಲ್ಲಿ ಒಣಗಿಸಿ ನಂತರ ಸೌದೆ, ಸೋಗೆಗಳ ಸಹಾಯದಿಂದ ಭಟ್ಟಿಯಲ್ಲಿ ಸುಟ್ಟ ಮೇಲೆಯೆ ಅವುಗಳನ್ನು ಮಾರಾಟಕ್ಕೆ ಒಯ್ಯಬೇಕು.
ಇಷ್ಟೆಲ್ಲ ಕಷ್ಟದ ಕೆಲಸವನ್ನು ಈಗಿನ ಕಾಲದ ಮಂದಿ ಹೇಗೆ ತಾನೆ ಮಾಡಿಯಾರು? ಸುಲಭವಾಗಿ ಹಣಗಳಿಸುವ ಹೊಸ ಹೊಸ ವಿಧಾನಗಳು ಇಂದು ಆವಿಷ್ಕಾರಗೊಳ್ಳುತ್ತಿದ್ದು ಕುಂಬಾರ ಸಮುದಾಯದ ನವಪೀಳಿಗೆ ಇದನ್ನು ಬದಿಗಿಟ್ಟು ತಮ್ಮ ಭವಿಷ್ಯ ಅರಸಲು ಪಟ್ಟಣ ಸೇರುತ್ತಿರುವುದು ಕೂಡ ಕುಂಬಾರಿಕೆ ಕಲೆ ನಶಿಸಲು ಕಾರಣವಾಗಿ ಎನ್ನಬಹುದು.
ನಮ್ಮ ಚಿಕ್ಕಂದಿನಲ್ಲಿ ನಾವು ನೋಡಿದ ಹಾಗೆ ಕುಂಬಾರರು ಮಣ್ಣಿನ ಮಡಿಕೆಗಳನ್ನು ಹೊತ್ತು ಊರೂರು ಸುತ್ತುತ್ತಿದ್ದರು. ಜನ ಅವರಿಗೆ ದವಸ ಧಾನ್ಯಗಳನ್ನು ನೀಡಿ ಮಡಿಕೆಗಳನ್ನು ಪಡೆಯುತ್ತಿದ್ದರು. ಊರ ಮಂದಿ ಎಲ್ಲದ್ದಕ್ಕೂ ಮಣ್ಣಿನ ಪಾತ್ರೆ ಗಳನ್ನೆ ಬಳಸುತ್ತಿದ್ದರು. ಆದರೆ ಕಾಲಾಂತರದಲ್ಲಿ ಸ್ಟೀಲ್, ಪ್ಲಾಸ್ಟಿಕ್ ವಸ್ತುಗಳ ಉಪಯೋಗ ಹೆಚ್ಚಾದಂತೆ ಕುಂಬಾರರ ಮಡಿಕೆಗಳು ಅಡುಗೆ ಕೋಣೆಯಿಂದ ಮರೆಯಾಗತೊಡಗಿತು. ದನ ಕರುಗಳಿಗೆ ನೀರುಣಿಸಲು ಬಳಸುತ್ತಿದ್ದ ಬಾನಿಗಳು ದೂರಾದವು. ವಿದ್ಯುತ್‌ ದೀಪಗಳ ಬಳಕೆಯಿಂದ ಹಣತೆ ಮರೆಯಾಯಿತು. ಬಚ್ಚಲು ಮನೆಯಲ್ಲಿ ನೀರು ಸಂಗ್ರಹಣೆಗೆ ಸೋರೆಗಳ ಬದಲು ಲೋಹದ ಹಂಡೆಗಳು ಜಾಗಪಡೆದುಕೊಂಡವು. ಸೋಲಾರ್, ಗೀಸರ್‌ಗಳ ಉಪಯೋಗ ಹೆಚ್ಚಾದಂತೆ ಕುಂಬಾರಣ್ಣನ ಕಲೆಗಾರಿಕೆ ತೆರೆಯಿಂದ ಮರೆಯಾಗತೊಡಗಿತು.
ನೈಸರ್ಗಿಕ ಕೂಲರ್: ಪರಿಸ್ಥಿತಿ ಹೀಗಿದ್ದರೂ ಈಗಲೂ ಮಣ್ಣಿನ ಮಡಿಕೆಗಳಿಗೆ ಬೇಸಿಗೆಯಲ್ಲಿ ಭಾರೀ ಬೇಡಿಕೆ ಇರುತ್ತದೆ. ಏಕೆಂದರೆ ಇದೊಂದು ನೈಸರ್ಗಿಕ ಫ್ರಿಜ್ ಆಗಿದ್ದು ಮಡಿಕೆಯಲ್ಲಿ ಶೇಖರಿಸಿಟ್ಟ ನೀರು ಕುಡಿಯಲು ಅತ್ಯಂತ ತಂಪಾಗಿದ್ದ್ದು ಆರೋಗ್ಯಕ್ಕೂ ಉತ್ತಮ ಎನ್ನುವ ದೃಷ್ಟಿಯಿಂದ ಜನರು ಮತ್ತೆ ಮಣ್ಣಿನ ಮಡಿಕೆಗಳತ್ತ ಮುಖ ಮಾಡುತ್ತಿರುವುದು ಕುಂಬಾರರಿಗೆ ಆಶಾದಾಯಕ ವಾಗಿದೆ.
ಸಂಘಟಿತರಾಗುತ್ತಿರುವ ಕುಂಬಾರ ಸಮಾಜ:  ಇತ್ತೀಚೆಗೆ ಎಲ್ಲ ಸಮುದಾಯಗಳಲ್ಲಿ ಜಾಗೃತಿ ಉಂಟಾದ ಹಾಗೆ ಕುಂಬಾರ ಸಮುದಾಯವೂ ಜಾಗೃತವಾಗಿದ್ದು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಂಘಟಿತರಾಗಿ ಸರಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸುತ್ತಿದ್ದಾರೆ. ಹೋರಾಟದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನಗಳು ಸಾಗುತ್ತಿವೆ. ಆರ್ಥಿಕವಾಗಿ ಹಿಂದುಳಿದ ಕುಂಬಾರ ಸಮುದಾಯ ಆರ್ಥಿಕವಾಗಿ ಸಬಲತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದು ತಮ್ಮ ಕಲೆಯನ್ನು ಮುಂದುವರಿಸಿಕೊಂಡು ನಶಿಸು ತ್ತಿರುವ ಕುಂಬಾರಿಕೆಗೆ ಮತ್ತೆ ಜೀವಕಳೆ ತುಂಬಲೆಂದು ಎಲ್ಲರ ಹಾರೈಕೆಯಾಗಿದೆ.

ಶನಿವಾರ, ಏಪ್ರಿಲ್ 20, 2013











ಆಟಮಾಟ ಸಾಮಾಜಿಕವಾದ ಸಾಂಸ್ಕೃತಿಕ ಕಾಳಜಿಗಳನ್ನಿಟ್ಟುಕೊಂಡೇ ನಾಟಕ ಮಾಡುತ್ತ ಬಂದಿದೆ. ಈಗ ಕರ್ನಾಟಕದಲ್ಲಿ ರಂಗಾಯಣ ಬಿಟ್ಟರೆ ಪೂರ್ಣಾವಧಿ ರೆಪರ್ಟರಿಗಳು ಯಕ್ಷಗಾನ ಹೊರತುಪಡಿಸಿ ಇಲ್ಲವಾಗಿವೆ. ಹಾಗೊಂದು ಸ್ವತಂತ್ರ ವೃತ್ತಿ ರೆಪರ್ಟರಿಯನ್ನು ಕಟ್ಟುವ ಆಶಯ ನಮ್ಮದಾಗಿದ್ದರೂ ಸಾಧ್ಯವಾಗುತ್ತಿಲ್ಲ. ಆದರೆ “ಆಟಮಾಟ ಅಡ್ಯಾಟ”ಕ್ಕಾಗಿ ನಾವು ಏಳೆಂಟು ಜನ ರಂಗಭ್ಯಾಸಿಗಳು ವರ್ಷದಲ್ಲಿ ಮೂರು ತಿಂಗಳು ಬಿಡುವು ಮಾಡಿಕೊಂಡು, ಉಮೇದಿನಿಂದ ನಾವುನಾವೇ ಒಂದು ನಾಟಕ ನಿರ್ದೇಶಿಸಿಕೊಂಡು ನಾಟಕ ಮಾಡುತ್ತ ಬಂದಿದ್ದೇವೆ. ಒಮ್ಮೊಮ್ಮೆ ವರ್ಷದಲ್ಲಿ ಎರಡು ಸುತ್ತು ಎರಡೆರಡು ನಾಟಕಗಳನ್ನು ತಯಾರಿಸಿ ಕರ್ನಾಟಕದಾದ್ಯಂತ ಪ್ರದರ್ಶಿಸಿದ್ದೇವೆ. ಇಲ್ಲಿಗೆ ಆಟಮಾಟ ಐದು ವರ್ಷ ಪೂರೈಸಿದ್ದು ಒಂಬತ್ತು ನಾಟಕಗಳ ಅಡ್ಯಾಟ ಮಾಡಿರುವುದು ನಮ್ಮ ಹೆಮ್ಮೆಯಾಗಿದೆ. ಈ ಕೆಳಗಿ ಚಿತ್ರಗಳು ರಮಾಯಿ ನಾಟಕದ ದೃಶ್ಯಗಳು. ನಮ್ಮ ತಂಡದ ಪ್ರೀತಿಯ ಛಾಯಾಚಿತ್ರಗ್ರಾಹಿ ರಾಮಚಂದ್ರ ಕುಲಕರ್ಣಿ ಸೆರೆ ಹಿಡಿದ ನಾಟಕದ ಕ್ಷಣಗಳು ಇಲ್ಲಿವೆ. ನಾಟಕ-ರಮಾಯಿ. ನಿರ್ದೇಶನ- ಮಹಾದೇವ ಹಡಪದ ಸಾಲಾಪೂರ

ಶನಿವಾರ, ಫೆಬ್ರವರಿ 16, 2013

ಜಾಕನಪಲ್ಲಿಯ ಕಿಂದರಜೋಗಿ-ಸಂತೋಷ ಗುಡ್ಡಿಯಂಗಡ


ಜಾಕನಪಲ್ಲಿ. ಈ ಹೆಸರನ್ನು ಕೇಳಿದರೆ ಆಂಧ್ರಪ್ರದೇಶದ ಯಾವುದೋ ಊರಿರಬೇಕು ಎಂದು ತಕ್ಷಣಕ್ಕೆ ಅನಿಸಬಹುದು, ಇಂಥ ಪಲ್ಲಿಗಳು ಬರುವುದು ಆಂಧ್ರದಲ್ಲಿಯೇ. ಆದರೆ ಈ ಜಾಕನಪಲ್ಲಿ ಎಂಬ ಊರಿರುವುದು ಮಾತ್ರ ನಮ್ಮದೇ ರಾಜ್ಯದ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನಲ್ಲಿ. ದಿನಕ್ಕೆ ಒಂದು ಬಸ್ಸೂ ಸರಿಯಾಗಿ ಬಂದು ಹೋಗದ ಈ ಪುಟ್ಟ ಊರ ಜನರ ಮನೆ ಮಾತು ತೆಲುಗು. ಈ ಊರಿಗೆ ಹೋದರೆ ಆಂಧ್ರದ ಮೊಬೈಲ್ ನೆಟ್‌ವರ್ಕ್ ಸ್ವಾಗತ ಮಾಡುವ ಇಲ್ಲಿ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಿದೆ.
ಜನವರಿ ತಿಂಗಳ ಎರಡನೇ ವಾರದಂದು ಗುಲ್ಬರ್ಗಾದಿಂದ ಪ್ರಕಟಗೊಳ್ಳುವ ಎಲ್ಲಾ ಸಣ್ಣ ದೊಡ್ಡ ಪತ್ರಿಕೆಗಳು ಜಾಕನಪಲ್ಲಿಯನ್ನು ಹಾಡಿ ಹೊಗಳಿದವು. ಇದಕ್ಕೆ ಕಾರಣ ಈ ಪುಟ್ಟ ಊರಿನ ಪ್ರೌಢಶಾಲಾ ಮಕ್ಕಳು. ಈ ಬಾರಿಯ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ನಾಟಕ ಸ್ಪರ್ಧೆಯಲ್ಲಿ ಈ ಮಕ್ಕಳು ಪ್ರಥಮ ಸ್ಥಾನ ಗಳಿಸಿ, ಆತಿಥೇಯ ಗುಲ್ಬರ್ಗ ಜಿಲ್ಲೆಗೆ ಏಕೈಕ ಪ್ರಥಮ ಬಹುಮಾನದ ಕಾಣಿಕೆ ನೀಡಿದ್ದರು. ಈ ಮಕ್ಕಳ ಪ್ರತಿಭೆಯ ಹಿಂದೊಂದು ಸ್ಫೂರ್ತಿಯ ಚಿಲುಮೆಯಿದೆ. ಅದು ಜಾಕನಪಲ್ಲಿ ಪ್ರೌಢಶಾಲೆಯ ನಾಟಕದ ಮೇಸ್ಟ್ರು ಅಶೋಕ ತೊಟ್ನಳ್ಳಿ.
ಜಾಕನಪಲ್ಲಿಯ ಪ್ರೌಢಶಾಲೆಗೆ ಯಾರಾದರೂ ಹೋದರೆ ಅವರನ್ನು ಮೊದಲು ಸ್ವಾಗತಿಸುವುದು `ರಂಗ ಶಿಕ್ಷಣ'ದ ಕೊಠಡಿ. ಆ ಕೊಠಡಿಯಲ್ಲಿ ರಂಗಸಜ್ಜಿಕೆಯೊಂದು ನಾಟಕವಾಡುವುದಕ್ಕೆ ಸದಾ ತಯಾರಾಗಿರುತ್ತದೆ. ಮಕ್ಕಳು ಅದನ್ನು ತಮಗೆ ಹೇಗೆ ಬೇಕೋ ಹಾಗೆ ವಿನ್ಯಾಸ ಮಾಡಿಕೊಳ್ಳಲೂಬಹುದು. ಮಕ್ಕಳ ಕಾಡು ಹರಟೆ, ತಮಾಷೆ ರಂಗಸಜ್ಜಿಕೆಯ ಮೇಲೆಯೇ ನಡೆಯುವುದರಿಂದ ಅವುಗಳೇ ರಂಗ ತಾಲೀಮಿನಂತಿರುತ್ತವೆ. ಮಕ್ಕಳು ಅಲ್ಲಿ ಕೋಲಾಟ ಆಡುತ್ತಾರೆ, ಜಾನಪದ ನೃತ್ಯ ಮಾಡುತ್ತಾರೆ, ಹಂತಿಯ ಹಾಡುಗಳನ್ನು ಹೇಳುತ್ತಾರೆ, ಕತೆ ಓದುತ್ತಾರೆ, ಮುಖವಾಡಗಳನ್ನು ಮಾಡುತ್ತಾರೆ, ನಾಟಕಗಳನ್ನು ಕಲಿಯುತ್ತಾರೆ, ಲೈಟಿಂಗ್ ಮಾಡುತ್ತಾರೆ.
ಮಕ್ಕಳು ಸದಾ ಕ್ರಿಯಾತ್ಮಕವಾಗಿ ತೊಡಗುವಂತೆ ಆ ಕೊಠಡಿಯ ಸಜ್ಜುಗೊಳಿಸಿದ್ದಾರೆ ಸ್ವತಃ ಚಿತ್ರ ಕಲಾವಿದರೂ ಆ ರಂಗಶಿಕ್ಷಕ ಅಶೋಕ ತೊಟ್ನಳ್ಳಿ. ಅವರು ಚಿತ್ರಕಲೆಯಲ್ಲಿ ಪದವೀಧರ. ಹೆಗ್ಗೋಡಿನ ನೀನಾಸಂನಲ್ಲಿ ರಂಗಶಿಕ್ಷಣವನ್ನು ಪಡೆದವರು. ನಾಲ್ಕು ವರ್ಷಗಳ ಹಿಂದೆ ನಾಟಕ ಶಿಕ್ಷಕರಾಗಿ ನೇಮಕಗೊಂಡು ಜಾಕನಪಲ್ಲಿಗೆ ಬಂದ ಅಶೋಕ ಶಾಲೆಯ ಮಕ್ಕಳನ್ನಲ್ಲದೆ ಊರವರನ್ನೂ ಕ್ರಿಯಾಶೀಲರನ್ನಾಗಿ ಮಾಡುವತ್ತ ಹೆಜ್ಜೆ ಹಾಕಿದ್ದಾರೆ.
ಮೊದ ಮೊದಲು ಪ್ರತೀ ಶುಕ್ರವಾರ ಸಂಜೆ ಯಾರದೋ ಮನೆಯ ಟಿವಿಯನ್ನು ಬೇಡಿ ತಂದು ಮಕ್ಕಳಿಗೆ ಊರವರಿಗೆ ಸುಪ್ರಸಿದ್ಧ ಸಿನಿಮಾಗಳನ್ನು ತೋರಿಸಿದರಂತೆ. ಸಿನಿಮಾ ನೋಡಲು ಬಂದ ಹಿರಿಯರನ್ನು ಮಕ್ಕಳ ನಾಟಕ ನೋಡಲು ಕರೆದರು. `ತಿಂಗಳ ಸಂಜೆ' ಎಂಬಕಾರ್ಯಕ್ರಮವನ್ನು ರೂಪಿಸಿ ಪ್ರತೀ ತಿಂಗಳು ಊರವರು ಶಾಲೆಗೆ ಬರುವ ಹಾಗೆ ಮಾಡಿದರು. ತಿಂಗಳ ಸಂಜೆಕಾರ್ಯಕ್ರಮದಲ್ಲಿ ಮಕ್ಕಳ ನಾಟಕಗಳು ನಡೆದವು. ನಂತರ ಅದೇ ಊರಿನ ಕಲಾವಿದರು ಹಂತಿಯ ಹಾಡುಗಳನ್ನು ಹಾಡಿದರು. ಪಕ್ಕದೂರಿನ ಲಂಬಾಣಿ ತಾಂಡಾದವರು ಬಂದು ನೃತ್ಯಕಾರ್ಯಕ್ರಮ ನೀಡಿದರು.
ಜಾನಪದ ಕಥೆಗಾರರು ಬಂದು ಕಥೆ ಹೇಳಿದರು. ಊರ ಹೆಂಗಸರು ಬಂದು ಬೀಸುವ ಪದ, ಕುಟ್ಟೋ ಪದಗಳನ್ನು ಹಾಡಿದ್ದಾರೆ. ರೈತರು ಮತ್ತು ಮಕ್ಕಳ ತಂಡಗಳನ್ನಾಗಿ ಮಾಡಿ `ರಸನಿಮಿಷದ ರಸಪ್ರಶ್ನೆ'ಕಾರ್ಯಕ್ರಮ ನಡೆದವು. ಇಪ್ಪತ್ತು ವರ್ಷಗಳಿಂದ ಕೋಲನ್ನೇ ಮುಟ್ಟದ ಊರಿನ ಹಿರಿಯರು `ತಿಂಗಳ ಸಂಜೆ'ಗಾಗಿ ಕೋಲು ಹಿಡಿದರು. ಈ ಎಲ್ಲಾಕಾರ್ಯಕ್ರಮಗಳಲ್ಲಿ ಎಲ್ಲಾ ಜಾತಿಯವರು ಬಂದು, ಭಾಗವಹಿಸಿದ್ದು ವಿಶೇಷ.
ಇಂಥದ್ದೊಂದು ಭೂಮಿಕೆಯನ್ನು ನಿರ್ಮಾಣ ಮಾಡಿಕೊಂಡ ಅಶೋಕ ಅವರು ಕಾರ್ಯಕ್ರಮಗಳನ್ನು ಶಾಲಾ ಆವರಣದಿಂದ ಊರೊಳಕ್ಕೆ ಕೊಂಡುಹೋದರು. ಮಕ್ಕಳಿಗೆ ರಂಗಭೂಮಿಯ ಪಾಠಗಳನ್ನು ಹೇಳಿಕೊಡುತ್ತಲೇ, ಸಮಾಜದ ಓರೆಕೋರೆಗಳಿಗೆ ರಂಗಭೂಮಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಪ್ರಯೋಗದಲ್ಲಿಯೂ ತೊಡಗಿಕೊಂಡರು.
ಹಳ್ಳಿ ಎಂದ ಮೇಲೆ ಅಸಮಾನತೆ, ಭೇದ-ಭಾವ, ಜಾತಿ ತಾರತಮ್ಯ ಇರಲೇಬೇಕೆಂಬುದು ಭಾರತೀಯ ಪರಂಪರೆ ಕಂಡುಕೊಂಡ ಕಟು ಸತ್ಯ. ಜಾಕನಪಲ್ಲಿಯೂ ಇದಕ್ಕೆ ಹೊರತಾಗಿಲ್ಲ. ಜಾತಿಗೊಂದು ಓಣಿ, ಜಾತಿಗೊಂದು ಗುಡಿ. ಒಮ್ಮೆ ಇಲ್ಲಿನ ಮಕ್ಕಳು ಹಣಮದೇವರ ಗುಡಿಯ ಕಟ್ಟೆಯನ್ನೇ ರಂಗಸ್ಥಳವನ್ನಾಗಿ ಮಾಡಿಕೊಂಡು ನಾಟಕವಾಡಲು ಸಿದ್ಧವಾದರು. ಆದರೆ ತಂಡದಲ್ಲಿರುವ ಕೆಳಜಾತಿಯ ಮಕ್ಕಳು ಕಟ್ಟೆ ಹತ್ತಲು ಹಿಂಜರಿದರು.
ಆಗ ತಂಡದ ಇತರೆ ಮಕ್ಕಳು ಮೇಸ್ಟ್ರು ಊರ ಗೌಡರನ್ನು ಕೇಳಿದರು. `ಮಕ್ಕಳಲ್ಲವೇ ಹತ್ತಲಿ ಬಿಡಿ' ಎಂದ ಗೌಡರ ಒಪ್ಪಿಗೆಗೆ ಮಕ್ಕಳು ನಲಿದಾಡಿದರು. ಅಲ್ಲಿ ಜಾತಿ, ಮೈಲಿಗೆಯ ಮಾತೇ ಬರದೆ ಮಕ್ಕಳಷ್ಟೇ ಕಂಡರು. ಗುಡಿಯ ಕಟ್ಟೆಗೆ ಹತ್ತಿದ್ದ ಜಾತಿಯ ಭೂತ ಅಂದು ತೊಲಗಿತು. ಅದೇ ಮಕ್ಕಳು ನನಗೆ ಆ ಗುಡಿಯ ಮೇಲೆ ಕರೆದುಕೊಂಡು ಹೋಗಿ ಅಂದಿನ ಕಥೆ ತಿಳಿಸಿದ್ದರು. ಈಗ ಆ ಕಟ್ಟೆಯ ಮೇಲೆ ಒಂದಿಲ್ಲೊಂದು ಕಾರ್ಯಕ್ರಮವನ್ನು ಮಕ್ಕಳು ನಡೆಸುತ್ತಲೇ ಇರುತ್ತಾರೆ. ಗುಡಿಯಿಂದ ಈ ಮಕ್ಕಳ ರಂಗಮಂಚ ದರ್ಗಾಕ್ಕೆ ಸ್ಥಳಾಂತರವಾಯಿತು. ಊರ ಮನೆಗಳಿಂದ ಬಂದ ಮಲಗುವ ಮಂಚಗಳು ದರ್ಗಾದೊಳಗೆ ಸೇರಿ ಮಟ್ಟವಾಗಿ ವೇದಿಕೆ ನಿರ್ಮಾಣವಾಯಿತು. ಅಲ್ಲಿ ಮಕ್ಕಳ ನಾಟಕ ನಡೆಯಿತು. ಒಂದೇ ಊರಲ್ಲಿದ್ದರೂ ಬೇರೆ ಕೇರಿಗಳನ್ನು ನೋಡದ ಜನರು ಮಕ್ಕಳಿಗಾಗಿ ಬಂದರು, ನಾಟಕ ನೋಡಿದರು. ಜೊತೆಗೆ ದರ್ಗಾವನ್ನೂ ನೋಡಿಕೊಂಡು ಹೋದರು.
ಮೇಲ್ಜಾತಿಯ ಮಕ್ಕಳು ಕೆಳಜಾತಿಗಳ ಓಣಿಗೆ ಹೋಗುವುದಿಲ್ಲ. ಇದು ಮಕ್ಕಳು ಮನೆಗಳಲ್ಲಿ ಕಲಿಯುವ ಪಾಠ. ಅಶೋಕ ಮೇಸ್ಟ್ರು ಕಲಿಸುವ ಪಾಠ ಇದಕ್ಕೆ ವಿರುದ್ಧವಾದದ್ದು. ರಂಗಸಜ್ಜಿಕೆಯ ವಿನ್ಯಾಸದ ಪರೀಕ್ಷೆಯನ್ನು ಇವರು ಹಾಳೆಗಳ ಮೇಲೆ ಬರೆಯಿಸಲಿಲ್ಲ. ಬದಲು ಮಕ್ಕಳನ್ನು ಕೆಳಜಾತಿಗಳ ಮನೆಗಳಿಗೆ ಕರೆದುಕೊಂಡು ಹೋಗಿ ಒಂದೊಂದು ಮಗುವಿಗೆ ಒಂದೊಂದು ಆಯ್ಕೆ ಮಾಡಿಕೊಳ್ಳಲು ತಿಳಿಸಿದರು. ಅಲ್ಲಿಯೇ ಸಿಗುವ ಪರಿಕರಗಳನ್ನು ಉಪಯೋಗಿಸಿಕೊಂಡು ವಿನ್ಯಾಸ ಮಾಡಬೇಕಿತ್ತು. ಇದಕ್ಕೆ ಎಲ್ಲಾ ಮನೆಯವರ ಸಹಕಾರವೂ ದೊರೆಯಿತು. ಪರೀಕ್ಷೆಗಳು ಯಶಸ್ವಿಯಾದವು ಎನ್ನುತ್ತಾರೆ ಅಶೋಕ ತೊಟ್ನಳ್ಳಿ.
ಜಾಕನಪಲ್ಲಿಯ ಶಾಲೆಯ ಮಕ್ಕಳಿಗಾಗಿ ಖ್ಯಾತ ಕಲಾವಿದರು ಬಂದು ಹೋಗುತ್ತಿರುತ್ತಾರೆ. ಶಿಲ್ಪಕಲಾವಿದ ಗೌರಿಶಂಕರ ಗೋಗಿ, ಚಿತ್ರಕಲಾವಿದ ಪಿ.ಪರಶುರಾಮ, ಛಾಯಾಚಿತ್ರಕಾರ ಉದಯಕುಮಾರ ಬಗಲಿ, ಅಂತರರಾಷ್ಟ್ರೀಯ ಖ್ಯಾತಿಯ ಸಾಂಪ್ರದಾಯಿಕ ಚಿತ್ರಕಲಾವಿದ ವಿಜಯ ಹಾಗರಗುಂಡಿಗೆ, ಮೈಸೂರಿನ ಕಾಗದ ಕಲಾವಿದ ಎಸ್.ಎಫ್. ಹುಸೇನಿ, ಶಿಕ್ಷಣತಜ್ಞರಾದ ರೋಷನ್ ಸಾಹಿ, ಐ.ಎಫ್.ಎ.ಯ ಅನುಪಮಾ ಪ್ರಕಾಶ್ ಮುಂತಾದವರು ಈ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ, ತರಬೇತಿ ನೀಡಿದ್ದಾರೆ, ಛಾಯಾಚಿತ್ರ ಪ್ರದರ್ಶನಗಳನ್ನು ನೀಡಿದ್ದಾರೆ.
ಅಶೋಕ ತೊಟ್ನಳ್ಳಿ ಶಾಲೆಯ ನಾಟಕಗಳಿಗಾಗಿ ಲೈಟುಗಳನ್ನು ಖರೀದಿಸಿದ್ದಾರೆ. ಆಗಾಗ ಕೈ ಕೊಡುವ ವಿದ್ಯುತ್ ಸಮಸ್ಯೆಗೆ ಬೇಸತ್ತು ಸಾಲ ಮಾಡಿ ಒಂದು ಜನರೇಟರನ್ನು ತಂದಿದ್ದಾರೆ. ಇಂತಹ ಉದಾಹರಣೆ ಇನ್ನೊಂದು ಸಿಗಲಾರದು. ತಾವು ನಡೆಸುವ ಕಾರ್ಯಕ್ರಮಕ್ಕೆ ಯಾವುದೇ ಅನನುಕೂಲ ಆಗದಂತೆ ನೋಡಿಕೊಳ್ಳುವ ಈ ಮೇಸ್ಟ್ರು ತಮ್ಮ ರಂಗಶಿಕ್ಷಣಕ್ಕೆ ಬೇಕಾದ ಸಲಕರಣೆಗಳನ್ನು ತಯಾರಿಸುವುದು ಮಾತ್ರ ಯಾರಿಗೂ ಬೇಡವಾದ ತ್ಯಾಜ್ಯಗಳಿಂದ. ಯಾರೋ ಮನೆಯ ಮುರಿದ ಏಣಿ, ಒಡೆದ ಫ್ರಿಜ್ಜಿನ ತಳ, ಟೈರು, ತುಂಡಾದ ಪೈಪು, ಬುಟ್ಟಿ, ಹಳೇಬಟ್ಟೆ, ಚಪ್ಪಲಿ ಎಲ್ಲವು ಇವರ ನಾಟಕಗಳಲ್ಲಿ ಬಣ್ಣಗಟ್ಟಿ ನಳನಳಿಸುತ್ತವೆ. ಮೊನ್ನೆ ರಾಜ್ಯ ಪ್ರಶಸ್ತಿ ಪಡೆದ ಈ ಶಾಲೆಯ ನಾಟಕ `ಧರ್ಮ ಮತ್ತು ಮೋಚಿ'ಯ ಪೂರ್ಣ ರಂಗಸಜ್ಜಿಕೆ ತ್ಯಾಜ್ಯಗಳಿಂದಲೇ ನಿರ್ಮಿಸಿದ್ದು ಎನ್ನುತ್ತಾರೆ ತೊಟ್ನಳ್ಳಿ.
ಪಠ್ಯಪುಸ್ತಕಗಳಲ್ಲಿನ ಪಾಠಗಳನ್ನು ಆಧರಿಸಿ ಮಕ್ಕಳಿಂದ ನಾಟಕ ಆಡಿಸಿ ಮಕ್ಕಳ ಕಲಿಕೆಗೆ ಒತ್ತುಕೊಡುತ್ತಿದ್ದಾರೆ ರಂಗಶಿಕ್ಷಕ ಅಶೋಕ. ನಾಟಕ ಕಲಿಕೆ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿದೆ ಮಕ್ಕಳಲ್ಲಿನ ಹಿಂಜರಿಕೆಗಳು ಮಾಯವಾಗಿದೆ. ಈ ಪುಟ್ಟ ಊರಿನ ನಮ್ಮ ಮಕ್ಕಳು ಇಡೀ ರಾಜ್ಯಕ್ಕೇ ಮೊದಲ ಸ್ಥಾನ ಬಂದಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಭೀಮಶಪ್ಪ ಹುಟ್ಕೂರು. ನಮ್ಮದು ಕುಗ್ರಾಮ. ಆಂಧ್ರದ ಗಡಿಯಲ್ಲಿರುವ ನಮ್ಮ ಮನೆಮಾತು ತೆಲುಗು. ಹದಿನೈದುನೂರ ಜನಸಂಖ್ಯೆಯ ಈ ನಮ್ಮ ಪುಟ್ಟ ಊರ ಮಕ್ಕಳು ಇಡೀ ರಾಜ್ಯಕ್ಕೇ ಮೊದಲು ಬಂದಿರುವುದಕ್ಕೆ ಸಂತೋಷ ಆಗಿದೆ. ಕನ್ನಡವನ್ನೂ ತೆಲುಗಿನಂತೆ ಮಾತಾಡುವ ನಮ್ಮ ಮಕ್ಕಳನ್ನು ತಿದ್ದಿ ಸುಂದರವಾಗಿ ಕನ್ನಡ ಮಾತಾಡುವಂತೆ ಮಾಡಿದ್ದು ನಾಟಕ ಮತ್ತು ಅಶೋಕ ಮೇಸ್ಟ್ರು. ಈ ಮೇಸ್ಟ್ರು ಬಂದ ಮೇಲೆ ನಮ್ಮೂರ ಶಾಲೆ ಬಹಳಷ್ಟು ಪ್ರಗತಿಯಾಗಿದೆ ಎಂಬುದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ನಾರಾಯಣರೆಡ್ಡಿ ಪೊಲೀಸ್ ಪಾಟೀಲರ ಮಾತು.
ಮೇಸ್ಟ್ರು ಊರೊಳಗೆ ಹೋದರೆ ಕಿಂದರಿಜೋಗಿಯನ್ನು ಹಿಂಬಾಲಿಸಿದಂತೆ ಮಕ್ಕಳು ಬೆನ್ನಿಗೆ ನಡೆಯುತ್ತಾರೆ. ಅದರಲ್ಲಿ ಹಳೆ ವಿದ್ಯಾರ್ಥಿಗಳು, ಊರ ಯುವಕರೂ ಇರುತ್ತಾರೆ. ಸೇಡಂನಲ್ಲಿರುವ ಮೇಸ್ಟ್ರ ರೂಮಿನಲ್ಲೆ ಉಳಿದುಕೊಂಡು ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗಂತೂ ಮೇಸ್ಟ್ರ ಬಗ್ಗೆ ವಿಶೇಷ ಗೌರವ. ಬಸ್ಸು ಬಾರದ ಆ ಊರ ಮಕ್ಕಳು ಇಪ್ಪತ್ತೈದು ಕಿ.ಮೀ ದೂರದ ಸೇಡಂಗೆ ಹೋಗಿ ಕಾಲೇಜು ಓದುವುದು ಕನಸಿನ ಮಾತು. ಅಂತಹ ಕನಸು ಸಾಕಾರವಾದ ಖುಷಿ ಲಕ್ಷ್ಮಪ್ಪ ಮತ್ತು ಶಾಮಪ್ಪರದ್ದು. `ಮಕ್ಕಳ ಬದುಕು ವರ್ತಮಾನದಲ್ಲಿ ಅರಳುತ್ತದೆ ಮತ್ತು ವರ್ತಮಾನದಲ್ಲಿಯೇ ಬದುಕುವುದರಿಂದ ಮಕ್ಕಳ ಬೇಕುಗಳನ್ನ ತತ್‌ಕ್ಷಣದಲ್ಲಿ ಈಡೇರಿಸದಿದ್ದರೆ ಮಗು ಮಗುವಾಗಿ ಉಳಿಯುವುದಿಲ್ಲ ಮತ್ತು ಅದು ತನ್ನತನವನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಒಂದು ಇಡಿಯ ತಲೆಮಾರು ಸಾಂಸ್ಕೃತಿಕ ಸಾರವಿಲ್ಲದೆ ಬರಡಾಗುತ್ತದೆ' ಎನ್ನುತ್ತಾರೆ ಅಶೋಕ.
ತಾವು ಕಲಿಸುವುದಕ್ಕಾಗಿ ಬರಿಯ ಬೋಧನೆಯ ತಂತ್ರಗಳಿಗೆ ಕಟ್ಟುಬೀಳದೆ ಸದಾ ಕ್ರಿಯಾಶೀಲವಾಗಿರುತ್ತ ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗಿಸಿ ಮಕ್ಕಳ ಮನಸಿಗೆ ಆಪ್ತರಾಗುವ ಶಿಕ್ಷಕರು ಇಂದಿನ ತುರ್ತು. ಅಂಕಗಳಿಸುವ ಯಂತ್ರಗಳಾಗುತ್ತಿರುವ ಮಕ್ಕಳು ತಮ್ಮ ವಯೋ ಸಹಜ ಚಟುವಟಿಕೆಯನ್ನೇ ಕಳೆದುಕೊಂಡು ಜಡವಾಗುತ್ತಿದ್ದಾರೆ.
ಇದು ಹೀಗೆಯೇ ಮುಂದುವರಿದರೆ ನಮ್ಮ ಸಮಾಜದ ಸಾಂಸ್ಕ್ರತಿಕ ನೆಲೆಗಟ್ಟು ನಾಶವಾಗಬಹುದು. ಶಾಲೆಗಳು ಅಂಕಗಳ ಕಾರ್ಖಾನೆಗಳಾಗದೆ ಅದೊಂದು ಸಾಂಸ್ಕೃತಿಕ ಕೇಂದ್ರವಾಗಬೇಕು. ಮಕ್ಕಳು ಮಕ್ಕಳಾಗಿರಬೇಕು. ಹಾಗಾಗಬೇಕಾದರೆ ಶಾಲೆಗೊಬ್ಬ ಅಶೋಕರಂತಹ ಶಿಕ್ಷಕರಿರಬೇಕು. ಇಂದಿನ ಶಿಕ್ಷಣ ನೀತಿಗಳು ಕೂಡ ಶಾಲೆಗಳನ್ನು ಸೃಜನಶೀಲ ಚಟುವಟಿಕೆಗಳ ತಾಣಗಳಾಗುವಂತೆ ಪ್ರೇರೇಪಿಸುತ್ತಿವೆ. ಶಾಲೆಗಳಲ್ಲಿ ದೈಹಿಕ, ಚಿತ್ರಕಲಾ ಶಿಕ್ಷಕರಂತೆ ನಾಟಕ ಶಿಕ್ಷಕರನ್ನೂ ಹೆಚ್ಚು ಹೆಚ್ಚು ನೇಮಕಮಾಡಿಕೊಳ್ಳಬೇಕು ಎಂಬ ಇಂಗಿತ ಅವರದ್ದು. ಹೆಚ್ಚಲಿ ಇವರ ರಸಬಳ್ಳಿ ಎಂದು ಅಶೋಕರಂಥ ಶಿಕ್ಷಕರ ಕುರಿತು ಹಂಬಲಿಸಬಹುದು

ಗುರುವಾರ, ಜನವರಿ 10, 2013

ಗಿರೀಶ್ ಕಾರ್ನಾಡರ ಹೊಸ ನಾಟಕದ ಬಗ್ಗೆ ಜೋಗಿ

ಭಯಾನಕ ಬೆಂಗಳೂರು
ಮಹಾನಗರದ ಆತ್ಮಚರಿತ್ರೆ
ಒಂದು ಆಖ್ಯಾಯಿಕೆಯ ಪ್ರಕಾರ ಅರಸ ವೀರ ಬಲ್ಲಾಳ ಬೇಟೆಗೆಂದು ಹೊರಟವನು ಕಾಡಿನಲ್ಲಿ ದಾರಿತಪ್ಪಿ, ರಾತ್ರಿಯಿಡಿ ಸುತ್ತಾಡಿ ಹಸಿದು ಬಳಲಿ ಬಸವಳಿದಾಗ, ಒಬ್ಬಳು ಮುದುಕಿ ಅವನಿಗೆ ಬೆಂದ ಕಾಳುಗಳನ್ನು ನೀಡಿ ಅವನ ಪ್ರಾಣ ಉಳಿಸಿದಳು. ಆ ಉಪಕಾರವನ್ನು ಸ್ಮರಿಸಿ ಅರಸ ಆ ಸ್ಥಾನದಲ್ಲಿ ಬೆಂದಕಾಳೂರು’ ಎಂಬ ಊರನ್ನು ಸ್ಥಾಪಿಸಿದ. ಅದೇ ಮುಂದೆ ’ಬೆಂಗಳೂರು’ ಆಯಿತು. ಎಲ್ಲರ ಬೇಳೆಯೂ ಬೇಯುವಂಥ ಬೆಂಗಳೂರಿನ ಕುರಿತು ಗಿರೀಶ ಕಾರ್ನಾಡರು ಬರೆದಿರುವ ಹೊಸ ನಾಟಕ ’ಬೆಂದಕಾಳು ಆನ್ ಟೋಸ್ಟ್  ನ ಆರಂಭದಲ್ಲೇ ಹೀಗೊಂದು ಸಾಲಿದೆ. ಕಾರ್ನಾಡರು ಈ ಕತೆಗೊಂದು ಸಾಲು ಸೇರಿಸಿ, ಅದನ್ನು ಪಾಶ್ಚಾತ್ಯ ಜಗತ್ತಿಗೆ ಸಮೀಕರಿಸಿದ್ದಾರೆ. ಬೇಕ್ಡ್ ಬೀನ್ಸ್ ಆನ್ ಟೋಸ್ಟ್ (ಟೋಸ್ಟಿನ ಮೇಲೆ ಸುರಿದ ಬೇಯಿಸಿದ ಕಾಳು) ಪಾಶ್ಟಾತ್ಯ ಬ್ರೇಕ್ಫಾಸ್ಟ್ನ ಒಂದು ಪ್ರಮುಖ ಅಂಗವಾಗಿದೆ.
ಬೆಂಗಳೂರು ಕೂಡ ಹೀಗೆ ಇತಿಹಾಸ ಮತ್ತು ಆಧುನಿಕತೆಯನ್ನು ಬೆಸೆದುಕೊಂಡ ಊರಾ? ಇದು ಮಹಾನಗರವೆಂದು ಕರೆಸಿಕೊಳ್ಳುವ ಕೊಂಪೆಯಾ? ಕೊಂಪೆಯೆಂದು ಪರಿಭಾವಿಸಬಹುದಾದ ಮಹಾನಗರವಾ? ಒಂದು ಊರು ಬೆಳೆದು ದೊಡ್ಡದಾದ ಮಾತ್ರಕ್ಕೆ ಮಹಾನಗರಿ ಆಗುತ್ತದಾ? ಅದರೊಳಗೆ ಸೇರಿಕೊಂಡ ಮಂದಿಯ ಬೇಗುದಿ, ವ್ಯಾಮೋಹ, ವಂಚನೆ, ಒಳಗುದಿ ಇವೆಲ್ಲವನ್ನು ಒಟ್ಟಾಗಿ ಹಿಡಿಯುವುದಕ್ಕೆ ಒಂದು ಕೃತಿಗೆ ಸಾಧ್ಯವಾಗುತ್ತದಾ? ಹೀಗೆ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಕಾರ್ನಾಡರ ನಾಟಕ ನಮ್ಮನ್ನು ಒಳಗೊಳ್ಳುತ್ತಾ ಹೋಗುತ್ತದೆ.
ನಗರವೊಂದರ ಬಗ್ಗೆ ಬರೆಯ ಹೊರಡುವ ಕಾರ್ನಾಡರನ್ನು ಕಾಡಿದ್ದು ಶೂದ್ರಕನ ಮೃಚ್ಛಕಟಿಕ. ಆ ನಾಟಕದಲ್ಲಿ ನಾಯಕ, ನಾಯಿಕೆ, ಖಳನಾಯಕರು ನೆಪಮಾತ್ರ. ನಗರವೇ ಅದರ ಕೇಂದ್ರ. ಸಮೃದ್ಧವಾದ ನಗರವೊಂದರ ಜನಜಂಗುಳಿಯ ದೈನಂದಿನ ಆಗುಹೋಗುಗಳೇ ಮೃಚ್ಚಕಟಿಕದ ವಸ್ತು ಅನ್ನುತ್ತಲೇ ಕಾರ್ನಾಡರು ಇಪ್ಪತ್ತು ವರುಷಗಳಲ್ಲಿ ಅನಿರೀಕ್ಷಿತವಾಗಿ ಬೆಳೆದು ದೈತ್ಯ ಸ್ವರೂಪ ತಾಳಿರುವ ಬೆಂಗಳೂರಿನ ಜೊತೆ ಮಾತಾಡುತ್ತಾರೆ. ಬೆಂಗಳೂರಿನ ಸಂದಿಗೊಂದಿಗಳಲ್ಲಿ ಕಾಣಿಸಿಕೊಳ್ಳುವ ಚೈತನ್ಯ, ಅಸ್ವಸ್ಥತೆ ಮತ್ತು ಅರಾಜಕತೆಯನ್ನು ಮಾತುಗಳಲ್ಲಿ ಹಿಡಿಯಲು ಹೊರಡುತ್ತಾರೆ.

ಬೆಂದಕಾಳು ಆನ್ ಟೋಸ್ಟ್ ನಾಟಕವನ್ನು ಓದಿ ಮುಗಿಸುವ ಹೊತ್ತಿಗೆ ಈ ಮಹಾನಗರದಲ್ಲಿ ನಾವೆಲ್ಲಿದ್ದೇವೆ? ನಾವು ಯಾರು? ಕೆಲಸ ಕಳೆದುಕೊಂಡ ಪ್ರಭಾಕರ? ಸುಳ್ಳು ಸುಳ್ಳೇ ಸುಳ್ಳು ಹೇಳುವ ಪಾಪ್ಸ್ ಅಯ್ಯರ್? ರೇಸಿನ ಕ್ಷಣಭಂಗುರದಲ್ಲಿ ದೈವತ್ವಕ್ಕೆ ತುಡಿಯುವ ಅನಸೂಯಕ್ಕ? ಇಡೀ ನಾಟಕದಲ್ಲಿ ಎಲ್ಲೂ ಕಾಣಿಸಿಕೊಳ್ಳದ, ಆದರೆ ಗಟ್ಟಿಯಾಗಿ ನಿಂತಿರುವ ಮಿಸ್ಟರ್ ಪಡುಬಿದ್ರಿ? ಉರುಳಿ ಬಿದ್ದ ಮರಕ್ಕೋಸ್ಕರ ಕಣ್ಣೀರು ಹಾಕುವ ಅಂಜನಾ? ಮೋಸಗಾತಿ ಕೆಲಸದಾಕೆಯನ್ನು ತನ್ನ ನಾಯಕಿ ಅಂದುಕೊಳ್ಳುವ ಕುಣಾಲ? ಸಿಗದೇ ಇರುವ ಕೆಲಸಕ್ಕಾಗಿ ಇರುವ ಕೆಲಸ ಕಳಕೊಳ್ಳುವ ಪ್ರಭಾಕರ? ಮತ್ತೆ ಕೊಂಪೆಗೆ ಮರಳಲಾರೆ ಎನ್ನುವ ಸುಮಿತ್ರ, ಹಲವು ಅವತಾರಗಳಲ್ಲಿ, ವಿಚಿತ್ರ ಸಂಬಂಧಗಳಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುವ ವಿಮಲಾ, ಅವಳನ್ನು ನಯವಾಗಿಯೇ ಸೋಲಿಸಿ ಎಸೆಯುವ ಮುತ್ತು?
ಹೀಗೆ ನಮ್ಮ ಪಾತ್ರ ಯಾವುದು ಎನ್ನುವ ಪ್ರಶ್ನೆಯನ್ನು ನಾಟಕ ನಮ್ಮ ಮುಂದಿಡುತ್ತದೆ. ಮಹಾನಗರಕ್ಕೆ ಕರುಣೆಯಿಲ್ಲ. ಕಾನೂನೂ ಇಲ್ಲ. ಅದು ಕುರುಡರ ಸಂತೆ. ಒಬ್ಬರ ನಾಟಕಕ್ಕೆ ಮತ್ತೊಬ್ಬರು ಕುರುಡರಾಗಿರುತ್ತಾರೆ. ಒಬ್ಬರು ಇನ್ನೊಬ್ಬರನ್ನು ವಂಚಿಸಲೆಂದೇ ಹೊಂಚು ಹಾಕುತ್ತಾ, ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಿರುತ್ತಾರೆ. ಅಲ್ಲಿ ಯಾವುದಕ್ಕೂ ಅರ್ಥವಿಲ್ಲ. ಎಲ್ಲಕ್ಕೂ ಅರ್ಥವಿದೆ. ಈ ಅರ್ಥಹೀನತೆಯಲ್ಲೇ ಒಂದು ಮೆಥಡ್ ಇದೆ. ಶಾಸ್ತ್ರದಲ್ಲೇ ಅಶಾಸ್ತ್ರೀಯತೆಯೂ ಇರುವಂತೆ.

ಕಾರ್ನಾಡರು ಆಧುನಿಕತೆಗೆ ಎರವಾದವರಲ್ಲ. ಅವರ ಐತಿಹಾಸಿಕ ನಾಟಕಗಳಲ್ಲಾಗಲೀ, ಪೌರಾಣಿಕ ಹಿನ್ನೆಲೆಯ ನಾಟಕಗಳಲ್ಲಾಗಲೀ ಎದುರಾಗುವ ಘರ್ಷಣೆ ಮೂಲತಃ ಆಧುನಿಕವಾದದ್ದೇ. ಅಗ್ನಿ ಮತ್ತು ಮಳೆಯ ನಿತ್ತಿಲೆ ಇವತ್ತಿನ ಹೆಣ್ಣೇ ಅನ್ನುವುದನ್ನು ನಾವು ಗಮನಿಸಬೇಕು. ಹೀಗಾಗಿ ಬೆಂಗಳೂರಿನಂಥ ಮಹಾನಗರದ ತಲ್ಲಣಗಳನ್ನು ಅವರು ಕೆಲವೇ ಪಾತ್ರಗಳ ಮೂಲಕ ಹಿಡಿದಿಡುತ್ತಾರೆ. ಹೀಗಾಗಿ ನಾಟಕವನ್ನು ಓದುತ್ತಾ ಹೋದ ಹಾಗೆ ನಮಗೆ ಮಹಾನಗರದ ಆತ್ಮ ದಕ್ಕಿಬಿಡುತ್ತದೆ. ಬೆಂಗಳೂರಿನ ಹುಮ್ಮಸ್ಸು, ಅಸಹಾಯಕತೆ, ನಿಷ್ಠುರ ಕ್ರೌರ್ಯ, ಆಳದ ವಿಷಾದ, ಭಗ್ನಹೃದಯ, ಏಕಮಖೀ ಬದುಕು, ಹಂಬಲ, ತೀವ್ರತೆಗಾಗಿ ತುಡಿಯುವ ಸ್ಥಿತಿ, ಸಹಜವಾದದ್ದನ್ನೇ ತೀವ್ರವೆಂದು ಭಾವಿಸುವ ರೀತಿ, ಯಾಂತ್ರಿಕವಾದದ್ದರಲ್ಲೂ ಹೊಸತನವನ್ನು ಹುಡುಕುವ ಉತ್ಸಾಹ- ಇವೆಲ್ಲವನ್ನೂ ಪಾತ್ರದ ಮೂಲಕ ತೆರೆದಿಡುತ್ತಾ ಹೋಗುತ್ತಾರೆ ಗಿರೀಶ.
ಹಾಗೆ ನೋಡಿದರೆ, ನಾಟಕದ ಪ್ರಧಾನ ಪಾತ್ರ ಮಿಸ್ಟರ್ ಪಡುಬಿದ್ರೆ ಇಡೀ ನಾಟಕದಲ್ಲಿ ನಾಪತ್ತೆಯಾಗಿರುವುದೇ ಒಂದು ವ್ಯಂಗ್ಯ. ಅದೇ ಸತ್ಯ ಕೂಡ. ಮಿಸ್ಟರ್ ಪಡುಬಿದ್ರೆಯ ಮನೆಯಲ್ಲಿ ನಾಟಕದ ಎಲ್ಲ ಪಾತ್ರಧಾರಿಗಳೂ ಸೇರುತ್ತಾರೆ. ಮಾತಾಡುತ್ತಾರೆ. ಅಲ್ಲೇ ಬಹಳಷ್ಟು ಕ್ರಿಯೆಗಳು ನಡೆಯುತ್ತವೆ. ಆದರೆ ಪಡುಬಿದ್ರೆ ಎಂದೂ ಕಾಣಿಸಿಕೊಳ್ಳುವುದಿಲ್ಲ. ಒಂದು ಮಾತನ್ನೂ ಆಡುವುದಿಲ್ಲ. ಅವನು ಗಂಡ, ಅಪ್ಪ, ಮಗ, ಗೆಳೆಯ, ಅಧಿಕಾರಿ, ಬಾಸ್- ಎಲ್ಲವೂ ಆಗಿರುತ್ತಾನೆ. ಅವನಿಗೆ ಅಸ್ತಿತ್ವವೇ ಇಲ್ಲ ಮತ್ತು ಅಸ್ತಿತ್ವವಿಲ್ಲದ ಅವನಿಲ್ಲದೇ ಯಾವ ಪಾತ್ರಗಳಿಗೂ ಅಸ್ತಿತ್ವವಿಲ್ಲ, ಅದು ಬೆಂಗಳೂರು. ಅದು ಮಹಾನಗರಿ. ಅಸ್ತಿತ್ವದಲ್ಲೇ ಇಲ್ಲದ ಒಂದು ಸಂಗತಿಯ ಸುತ್ತ, ನಮ್ಮ ಅಸ್ತಿತ್ವವನ್ನು ನಾವು ಕಂಡುಕೊಳ್ಳಲು ಹೆಣಗಾಡುತ್ತಿರುತ್ತೇವೆ. ಆ ದನಿಯನ್ನು, ನೆರಳನ್ನು ನಿಜವೆಂದು ನಂಬುತ್ತೇವೆ.

ಹಾಗೇ ನಾಟಕದಲ್ಲಿ ಬರುವ ಕುಣಾಲ್ ಎಂಬ ಪಾತ್ರಧಾರಿಯ ಗೆಳತಿ ನಂದಿತಾ. ಅವಳಿಗೂ ಅಸ್ತಿತ್ವವಿಲ್ಲ. ಅವಳಿಂದ ಕುಣಾಲ್ ಪ್ರೇಮಕ್ಕಾಗಿ ಕಾತರಿಸುತ್ತಿದ್ದಾನೆ. ಅವಳಿಗೆ ಎಲ್ಲವನ್ನೂ ಹೇಳಿಕೊಳ್ಳುತ್ತಾನೆ. ಅವಳ ಪ್ರತಿಕ್ರಿಯೆಯೇ ಇಲ್ಲ. ಹೀಗೆ ಯಾರಾದರೊಬ್ಬರಿಗೆ ಹೇಳಿಕೊಳ್ಳುತ್ತಾ ಹೋಗುವ, ಹೇಳಿಕೊಳ್ಳಲು ಹಂಬಲಿಸುವ, ಕೇಳಿಸಿಕೊಳ್ಳುವವರೇ ಇಲ್ಲದಿದ್ದರೂ ಹೇಳುತ್ತಾ ಹೋಗುವ ಲೋಕದಲ್ಲಿ ಏನೆಲ್ಲ ಸಂಭವಿಸುತ್ತದೆ. ಏನೇನೆಲ್ಲ ಆಗಿಹೋಗುತ್ತದೆ.
ಪ್ರಭಾಕರ ಹೇಳುತ್ತಾನೆ : ಬೆಂಗಳೂರಿನ ಬೀದಿಗಳಲ್ಲಿ ನಿರಂತರ ಓಡಾಟದ ಎನರ್ಜಿಯ ಮೂಲ ಏನು ಗೊತ್ತಿದೆಯೇನು? hope. hope. ಎಂಥಾ ಟೊಪ್ಪಿಗೆ ಬಿದ್ದರೂ ಅದರಡಿಗೆ ಮೆದುಳಿನಲ್ಲಿ ಸಾಯದೇ ಮಿಡುಕುತಿರೋ ಆಸೆ. ಮೂಲೆಯ ಸುತ್ತ ಏನೋ ಸಿಕ್ಕೀತು ಎಂಬ ನಂಬಿಕೆ. ಬಯಕೆ, ಕನಸು, ಹುಚ್ಚು. ಏನು ಬೇಕಾದರೂ ಅನ್ನಿರಿ. ಆ ಭ್ರಾಂತಿಯನ್ನು ನಾನಿನ್ನೂ ಕಳಕೊಂಡಿಲ್ಲ. ಇನ್ನೂ ಏನೋ ಸಿಗಬಹುದು. ಸಿಕ್ಕೇ ಸಿಗುತ್ತದೆ. ನೀವು ನನ್ನನ್ನು ಎಷ್ಟು ದಾರಿ ತಪ್ಪಿಸಿದರೂ ಆ ಆಮಿಷದ ಮೋಹ ಹೋಗೋದಿಲ್ಲ.ದು ಮಹಾನಗರದ ಮಾಯೆ. ಬಯಕೆಗಳನ್ನು ಬೆಳೆಸುತ್ತಾ, ಆಮಿಷಗಳನ್ನು ತುಂಬುತ್ತಾ, ಮೋಹವನ್ನು ಮುಪ್ಪುರಿಗೊಳಿಸುತ್ತಾ, ಅಭಯವನ್ನು ನೀಡುತ್ತಾ, ಆತಂಕದಲ್ಲಿ ದೂಡುತ್ತಾ ಅದು ತನ್ನನ್ನು ತಾನು ಬದುಕಿಸಿಕೊಳ್ಳಲು ನೋಡುತ್ತದೆ.
ನಾವು ಮಹಾನಗರದಲ್ಲಿ ವಾಸಿಸುತ್ತಿದ್ದೇವೆ ಅಂತ ಹೆಮ್ಮೆ ಪಡುತ್ತಿರುವ ಹೊತ್ತಿಗೇ, ಮಹಾನಗರ ನಮ್ಮಿಳಗೆ ವಾಸಿಸುತ್ತಿರುತ್ತದೆ. ಅದರ ಛಾಯೆ, ಮುದ್ರೆ ಮತ್ತು ಪ್ರಭಾವ ಎಷ್ಟು ಆಳವಾಗಿರುತ್ತದೆ ಎಂದರೆ ಮಹಾನಗರವನ್ನು ಯಾರೂ ತೊರೆಯಲಾರರು, ತೊರೆದು ಬದುಕಲಾರರು, ತೊರೆದರೂ ಅದು ಒಳಗೇ ದೇಹದ ಒಳಗೇ ಉಳಿದುಬಿಟ್ಟ ಬುಲೆಟ್ಟಿನ ಚೂರಿನಂತೆ ನಮ್ಮಿಳಗೇ ಇರುತ್ತದೆ. ಬೆಂಗಳೂರು ಮತ್ತು ಬೆಂಗಳೂರಿನಂಥ ಮಹಾನಗರದ ಹುನ್ನಾರಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುವ ಕಾರ್ನಾಡರ ನಾಟಕ, ಕೇವಲ ನಾಟಕ ಅಲ್ಲ, ಅದು ಮಹಾನಗರದ ಆತ್ಮಚರಿತ್ರೆ.ದು ಕೊನೆಯಾಗುವುದು ಹೀಗೆನಾನು ಎರಡು ವರುಷದವನಾಗಿದ್ದಾಗಲೇ ಸಾಯಬಹುದಾಗಿತ್ತು. ಸಾಯಲಿಲ್ಲ. ಸತ್ತಿದ್ದರೆ ನಾನು ಈಗ ಈ ಜಗತ್ತಿನಲ್ಲಿ ಇರತಿದ್ದಿಲ್ಲ. ಆದರೆ ನಾನು ಇಲ್ಲಿ ಇಲ್ಲ ಅಂತ ಜಗತ್ತಿಗೆ ಯಾವುದೇ ಫರಕು ಬೀಳತಿದ್ದಿಲ್ಲ. ಈ ಬೆಂಗಳೂರು, ಈ ಮನೆ, ಈ ಕುಟುಂಬ, ಉಳಿದವರು, ನೀನು ಎಲ್ಲರೂ ಹೀಗೇ ಇರತಿದ್ದಿರಿ. ನಾನಿಲ್ಲದೇ, ನನ್ನ ಅವಶ್ಯಕತೇನೇ ಇಲ್ಲದೆ.
‘ಹಾಗೆ ಹೇಳುವ ಕುಣಾಲ ಸಂಗೀತದಲ್ಲಿ ಭಯಾನಕ ರಸ ಮೂಡಿಸುವ ನಿರ್ಧಾರ ಮಾಡುತ್ತಾನೆ. ಆ ಹೊಸ ರಾಗ, ಹೊಸ ಕೃತಿಯ ಹೆಸರು ಬೆಂಗಳೂರು ಭಯಾನಕ’ ಅನ್ನುತ್ತಾನೆ.
ವಿಪರ್ಯಾಸ ಎಂದರೆ ಕುಣಾಲನ ಅಪ್ಪ ಅದೇ ಸ್ಥಿತಿಯಲ್ಲಿದ್ದಾನೆ. ಅವನು ಇದ್ದರೂ ಇಲ್ಲದೇ ಇದ್ದರೂ ಯಾವುದೇ ವ್ಯತ್ಯಾಸ ಇಲ್ಲ. ಅವನ ಸುತ್ತಲೂ ಕಟ್ಟಿಕೊಳ್ಳುತ್ತಿರುವ ಘಟನಾವಳಿಗಳಿಗೆ ಅವನ ಹಂಗಿಲ್ಲ. ಅವನ ಹೆಂಡತಿ ಫೋನಿನಲ್ಲಿ ಮಾತಾಡುತ್ತಿರುವುದು ಅವನ ಜೊತೆಗೇನಾ? ಅವನು ಕೇಳಿಸಿಕೊಳ್ಳುತ್ತಾನಾ? ಗೊತ್ತಿಲ್ಲ. ನಿದ್ರೆ ಮಾತ್ರೆ ನುಂಗಿ ಸ್ವರ ಕಳಕೊಂಡ ಆಕೆ, ಸಾಯುತ್ತಿರುವ ರೋಗಿಗಾಗಿ ಹಾಡಿದ್ದೇ ಇಲ್ಲಿಯ ಪವಾಡ.ಂಥ ಪವಾಡಗಳು ಎಲ್ಲರಲ್ಲೂ ಸಂಭವಿಸುವುದೂ ಇಲ್ಲ!

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...