ಶುಕ್ರವಾರ, ನವೆಂಬರ್ 22, 2019

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನಾಟಕಗಳನ್ನು ಇಲ್ಲಿಗೆ ಬಂದು ಪ್ರದರ್ಶನ ನೀಡಬೇಕೆಂದು ಹಲವು ನಾಟಕ ತಂಡಗಳು ಅವಕಾಶಕ್ಕಾಗಿ ಕಾಯುತ್ತವೆ. ನಾನು ೧೯೯೭ ರಲ್ಲಿ ಧಾರವಾಡಕ್ಕೆ ಬಂದಾಗ ವಾರದಲ್ಲೊಂದಾದರೂ ಸಂಗೀತ ಕಛೇರಿ ಇದ್ದೇ ಇರುತ್ತಿತ್ತು. ಕಲಾಭವನದಲ್ಲಿ ಸಂಗೀತ ಕಛೇರಿ ಇದ್ದರೆ ಇಡೀ ಕಡಪಾ ಮೈದಾನ ಸೈಕಲ್, ಬೈಕ್, ಕಾರುಗಳಿಂದ ತುಂಬಿರುತ್ತಿತ್ತು. ಇಷ್ಟು ಪ್ರಮಾಣದಲ್ಲಿದ್ದ ಸಹೃದಯರು ಈಗ ನಡೆಯುವ ಸಂಗೀತ ಕಛೇರಿಗೆ ಬರುವುದೇ ಇಲ್ಲ. ನಾಟಕಗಳೂ ತತ್ವಸಿದ್ಧಾಂತಗಳ ಮಣಭಾರದ ಭಾವಗಳನ್ನು ಹೊತ್ತು ಪ್ರೇಕ್ಷಕರನ್ನು ಗೋಳು ಹೊಯ್ದುಕೊಳ್ಳುವ ಕಾರಣದಿಂದಾಗಿ ರಂಗಮಂದಿರಗಳೂ ತುಂಬುತ್ತಿಲ್ಲವೇನೋ ಎಂಬ ಅನುಮಾನ ಮೂಡುತ್ತಿದೆ. ಇದೆಲ್ಲದರ ನಡುವೆ ಧಾರವಾಡ ಇಂದಿಗೂ ಸಾಂಸ್ಕೃತಿಕ ನಗರಿಯಾಗಿಯೇ ಉಳಿದಿದೆ.

ಧಾರವಾಡ ತಾಲ್ಲೂಕಿನ ಮುಗದ ಗ್ರಾಮದಲ್ಲಿ  ಕ್ರಿ.ಶ೧೦೪೭ರಲ್ಲಿ ಸ್ಥಾಪಿಸಲ್ಪಟ್ಟ ಒಂದು ಶಾಸನದ ಪ್ರಕಾರ ಕನ್ನಡದ ಮೊಟ್ಟಮೊದಲ ನಾಟ್ಯಶಾಲೆ ಈ ನೆಲದಲ್ಲಿಯೇ ಇತ್ತು. ತಂತುಪುರ ನಾಟಕ ಮಂಡಳಿ ಎಂಬ ಕಂಪನಿಯು ಈ ಸೀಮೆಯಿಂದ ಹೊರಟು ಆಂಧ್ರದಲ್ಲಿನ ಕಂಪನಿ ನಾಟಕಗಳ ಹುಟ್ಟಿಗೆ ಮೂಲಪ್ರೇರಣೆಯಾಯ್ತು ಎಂಬ ಇತಿಹಾಸವನ್ನು ತೆಲುಗು ನಾಡಿನವರು ಇಂದಿಗೂ ಓದುತ್ತಾರೆ. ಹತ್ತು ಹಲವು ನಾಟಕ ಕಂಪನಿಗಳು, ನಾಟಕ ಕರ್ತೃಗಳು, ಹೆಸರಾಂತ ನಟರನ್ನೂ ಈ ಹಳೆಯ ಅವಿಭಜಿತ ಧಾರವಾಡ ಜಿಲ್ಲೆಯು ಕನ್ನಡ ನಾಡಿಗೆ ಕೊಟ್ಟಿದೆ. ಇಷ್ಟೆಲ್ಲ ಸಾಂಸ್ಕೃತಿಕ ಇತಿಹಾಸವಿರುವ ಈ ಭಾಗದಲ್ಲಿ ಅಕಾಡೆಮಿಕ್ ಆಗಿ ಕಲಿಯಲು ಒಂದೇಒಂದು ನಾಟಕ ಶಾಲೆಗಳಿಲ್ಲ. ನಾಟಕ ಶಾಲೆ ಹೋಗಲಿ ಸಂಗೀತದ ಶಾಲೆಗಳೂ ಇಲ್ಲದಿರುವುದು ಬೇಸರದ ಸಂಗತಿ‌. ಎಷ್ಟೊಂದು ಜನ ಹಿಂದುಸ್ಥಾನಿ ಸಂಗೀತದ ವಿದ್ವಾಂಸರು ಧಾರವಾಡದವರೇ ಆಗಿದ್ದರು ಕೂಡ ಅವರು ತಮ್ಮ ಬದುಕಿನ ಅತ್ಯುತ್ತಮ ದಿನಗಳನ್ನು ಮುಂಬೈನಲ್ಲಿ ಕಳೆದರು.   ಈ ಧಾರವಾಡ ಪರಿಸರದಲ್ಲಿ ಇರುವ ಕಲಾಧ್ಯಾನವನ್ನು ಪೋಷಿಸಬೇಕಾದ ಅಗತ್ಯ ಇವತ್ತಿಗಿದೆ.

ಉತ್ತರ ಕರ್ನಾಟಕ ೧೮೨೫ರ ನಂತರ ಯಾವುದೇ ರಾಜಮನೆತನದ ಅಧೀನದಲ್ಲಿ ಇರಲಿಲ್ಲವಾದ್ದರಿಂದ ಸಾಂಸ್ಕೃತಿಕ ಪೋಷಣೆ ಈ ಭಾಗಕ್ಕೆ ಸಿಕ್ಕಲಿಲ್ಲ. ಮೈಸೂರಿನ ಅರಸರು, ಸಾಂಗ್ಲಿಯ ರಾಜಮನೆತನಗಳು ಸಾಕಷ್ಟು ಕಲಾಪೋಷಣೆ ಮಾಡಿರುವ ಇತಿಹಾಸ ನಮಗೆ ಸಿಗುತ್ತದೆ. ಆದರೆ ಧಾರವಾಡ ತನ್ನ ಸ್ವಾವಲಂಬನೆಯಲ್ಲಿಯೇ ಈವರೆಗೂ ತನ್ನ ಕಲಾವಂತಿಕೆಯನ್ನು ಕಾಪಾಡಿಕೊಂಡು ಬಂದಿದೆ. ಕಲೆ-ಸಾಹಿತ್ಯದ ಅಭಿರುಚಿ ಇರುವ ಯಾರೇ ಆಗಲಿ ಧಾರವಾಡದಲ್ಲಿ ತನ್ನ ನಿವೃತ್ತ ಬದುಕನ್ನು ಕಳೆಯಲು ಅಪೇಕ್ಷಿಸುವಷ್ಟು ಆಕರ್ಷಣೀಯವಾಗಿದ್ದರೂ ಕೂಡ ಇಂದು ಸ್ವಾವಲಂಬನೆಯ ಗುಣಸ್ವಭಾವಗಳನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತನ್ನ ಸಹಯೋಗದಲ್ಲಿ  ನಮ್ಮ ಧಾರವಾಡಕ್ಕೆ ವ್ಯವಸ್ಥಿತವಾದ ಸಾಂಸ್ಕೃತಿಕ ಆಯಾಮವನ್ನು ನೀಡಲು ಒಂದಷ್ಟು ಬೇಡಿಕೆಗಳನ್ನು ಈಡೇರಿಸಬೇಕೆಂದು ಕಳಕಳಿಯಿಂದ ವಿನಂತಿಸುತ್ತೇನೆ.

ನಮ್ಮ ವಿನಂತಿಗಳು

೧ ನಾಟ್ಯಸಂಗೀತ ಅಧ್ಯಯನ ಶಾಲೆಯನ್ನು ಧಾರವಾಡ ರಂಗಾಯಣದ ಮೂಲಕ ಆರಂಭಿಸಬೇಕು.(ಪ್ರತಿದಿನ ಸಂಜೆ) ಸಾಧ್ಯವಾದರೆ ನಾಟ್ಯಸಂಗೀತ ಮಹಾವಿದ್ಯಾಲಯ ಸ್ಫಾಪಿಸಲು ಅನುಕೂಲ ಮಾಡಬೇಕು.

೨ ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರಾಂತ್ಯ ನಾಟಕ ಶಾಲೆಯನ್ನು ರಂಗಾಯಣದ ಮೂಲಕ ಕಡ್ಡಾಯವಾಗಿ ಆರಂಭಿಸಬೇಕು.

೩ ಧಾರವಾಡದಲ್ಲಿಯೇ ಅತಿಹೆಚ್ಚು ಟ್ರಸ್ಟಗಳು ಇರುವುದರಿಂದ ಸಾಹಿತ್ಯ ಅಧ್ಯಯನ ಶಿಬಿರಗಳನ್ನು, ಕಾಲೇಜು ಮಕ್ಕಳಿಗಾಗಿ ಪ್ರತಿಯೊಂದು ಟ್ರಸ್ಟ್ ವಿಭಿನ್ನ ಸಾಹಿತ್ಯ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಬೇಕು.

೪ ಶ್ರೀರಂಗ ರಂಗ ಅಧ್ಯಯನ ಕೇಂದ್ರ ಸ್ಥಾಪಿಸಬೇಕು.

೫ ಪ್ರತಿ ವರ್ಷ ತಂತುಪುರ ರಾಷ್ಟ್ರೀಯ ನಾಟಕೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಏರ್ಪಿಡಿಸುವಂತಾಗಬೇಕು.

೬ ಧಾರವಾಡಕ್ಕೊಂದು ಜಿಲ್ಲಾ ರಂಗಮಂದಿರ ಕಟ್ಟಿಸಿದರೆ‌ ನಾಟಕ ಪ್ರದರ್ಶನಗಳಿಗೆ ಹೆಚ್ಚು ಅನುಕೂಲವಾಗುತ್ತದೆ.

೭ ವ್ಯವಸ್ಥಿತವಾದ ಸರಕಾರೀ ಜಾಗದಲ್ಲಿ  ಬೆಂಗಳೂರಿನ ಗುಬ್ಬಿವೀರಣ್ಣ ರಂಗಮಂದಿರದ ಮಾದರಿಯಲ್ಲಿ ನಾಟಕ ಕಂಪನಿಗಳು ಕ್ಯಾಂಪ್ ಹಾಕುವ ಹಾಗೆ ಒಂದು ಪರ್ಮನೆಂಟ್ ರಂಗಮಂದಿರವಾಗಬೇಕು.

೮ ಈಗಿರುವ ಚಿತ್ರಕಲಾಶಾಲೆಯನ್ನು ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿಸಬೇಕು.

೯ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಗೆ ಪ್ರತ್ಯೇಕ ಅನುದಾನ ನೀಡಬೇಕು.

೧೦ ಪ್ರತಿ ವರ್ಷ ಹುಬ್ಬಳ್ಳಿ ಧಾರವಾಡದಲ್ಲಿ ಚಿತ್ರೋತ್ಸವ ಆಗುವಂತೆ ಮಾಡಿದರೆ ನಮ್ಮ ಭಾಗದವರೂ ಜಗತ್ತಿನ ಶ್ರೇಷ್ಠ ಚಲನಚಿತ್ರ ನೋಡಲು ಅವಕಾಶ ಒದಗಿಸಬೇಕು.

೧೧ ಧಾರವಾಡ ಜಿಲ್ಲಾ ಉತ್ಸವಕ್ಕೆ ದಿನಾಂಕ ನಿಗದಿಗೊಳಿಸಿ. ಪ್ರತಿವರ್ಷವೂ ಅದೇ ದಿನಾಂಕದಂದು ಉತ್ಸವ ನಡೆಸುವ ಹಾಗೆ ಸೂಚಿಸಿದರೆ... ಅದೊಂದು ಧಾರವಾಡದ ಹಬ್ಬವಾಗುತ್ತದೆ.

೧೨ ಧಾರವಾಡಕ್ಕೊಂದು ಸಾಂಸ್ಕೃತಿಕ ಸಂಕೀರ್ಣ  (ಕಲ್ಚರಲ್ ಹಬ್) ಬೇಕು.

ಇದಿಷ್ಟು ಕೆಲಸಗಳನ್ನು ಧಾರವಾಡ ಹುಬ್ಬಳ್ಳಿ ಕೇಂದ್ರೀಕರಿಸಿ ಕಾರ್ಯರೂಪಕ್ಕೆ ತಂದರೆ ನಮ್ಮ ನೆಲದ ಬೇರುಗಳನ್ನು ಇನ್ನಷ್ಟು ಆಳದಲ್ಲಿ ಉಳಿಸಿ ಪೋಷಿಸಲು ಅನುಕೂಲವಾಗುತ್ತದೆ.

ಧನ್ಯವಾದಗಳೊಂದಿಗೆ

ಮಹಾದೇವ ಹಡಪದ ನಟುವರ
೯೯೭೨೩೫೨೧೬೩

ಬುಧವಾರ, ಮಾರ್ಚ್ 22, 2017

ಮನೆಮನೆಗೆ ನಾಟಕ ಪ್ರದರ್ಶನ

ಈ ವರ್ಷದ ನಮ್ಮ ಆಟಮಾಟ ತಂಡದ ಅಡ್ಯಾಟ ನಾಟಕದ ಪೋಸ್ಟರ್ಗಳು... ಜೂನ್ ಆರರಿಂದ ತಿರುಗಾಟ ಆರಂಭ


ನಮ್ಮ ತಂಡದ ಬ್ರೋಶರ್ಸಗಳು









ಭಾನುವಾರ, ಏಪ್ರಿಲ್ 13, 2014

ನಮ್ಮ ತಂಡದ ಹಿತೈಷಿ ಹುಲಿಕುಂಟೆ ಮೂರ್ತಿಯವರ ಮಾತುಗಳು

ಒಂದೆರಡು ವಿಷಯಗಳನ್ನು ಹಂಚಿಕೊಳ್ಳಲೇಬೇಕಿತ್ತು.. ಕಳೆದೆರಡು ದಿನಗಳಿಂದ ಕಂಪ್ಯೂಟರ್ ನನ್ನನ್ನು ಮುಂದೆ ಕೂರಿಸಿಕೊಳ್ಳದ ಕಾರಣ ತಡವಾಗಿ ಹೇಳುತ್ತಿದ್ದೇನೆ.....

ಮೊದಲನೆಯದ್ದು: ನನ್ನ ಇಷ್ಟದ ಮೇಷ್ಟ್ರು ಡಾ.ನಟರಾಜ್ ಹುಳಿಯಾರ್ ಮೊನ್ನೆ ನಮ್ಮ ಮೌಲ್ಯಮಾಪನ ಕೇಂದ್ರಕ್ಕೆ ತಮ್ಮ 'ಇಂತಿ ನಮಸ್ಕಾರಗಳು' ಪ...ುಸ್ತಕ ಮತ್ತು ಮಗ ಶೋಯಿಂಕಾ ನೊಂದಿಗೆ ಬಂದಿದ್ದರು. ನಮ್ಮ ಜತೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಇದ್ದು, ಕೀರಂ, ಎಂಡಿಎನ್, ಲಂಕೇಶ್, ಡಿಆರ್ ಎನ್ ಬಗ್ಗೆ ತುಂಬಾ ಮಾತಾಡಿದರು. ಒಂಥರಾ ಹಗುರವಾದ ಭಾವ ಆವತ್ತಿನಿಂದ..

ಎರಡನೆಯದ್ದು ಇದೇ ಹನ್ನೊಂದನೇ ತಾರೀಖು ಗೆಳೆಯ ಹನುಮಂತ ಹಾಲಗೇರಿ ನಾಟಕ 'ಊರು ಸುಟ್ಟರೂ ಹನುಮಪ್ಪ ಹೊರಗ' ನಾಟಕವನ್ನು ಗೆಳೆಯ ಮಂಜು ಜತೆಗೆ ನೋಡಿದ್ದು.
ಮೊದಲನೆಯದಾಗಿ ಗೆಳೆಯ ಮಹದೇವ ಹಡಪದ್ ರ 'ಆಟಮಾಟ' ತಂಡಕ್ಕೆ ಅಭಿನಂದನೆ ಹೇಳಬೇಕು. ಈ ನಾಟಕ ಬೆಂಗಳೂರಿಗೆ ಬೇಕಿತ್ತು. ರಂಗಭೂಮಿಯನ್ನು ತೆವಲಿನ ಮಟ್ಟಕ್ಕೆ ಇಳಿಸಿಕೊಂಡು ಹುಸಿ ಕಲಾವಂತಿಕೆಯನ್ನು ನಟಿಸುವ ಜನರ ನಡುವೆ ಈ ತಂಡ ತೆರೆದಿಟ್ಟ ಸಾಧ್ಯತೆ ದೊಡ್ಡದು.

'ಊರು ಸುಟ್ಟರೂ ಹನುಮಪ್ಪ ಹೊರಗ' ತುಂಬಾ ಗಂಭೀರ ನಾಟಕ. ಆಲೋಚನೆ ಹಳೆಯದಾದರೂ ನಮ್ಮ ಸಮಾಜದ ಬ್ರಾಹ್ಮಣೇತ್ತರ ತಳ ಜಾತಿಗಳ ನಡುವಿನ ದೈವ ಕುರಿತ ನಂಬಿಕೆಯನ್ನು ತೆರೆದಿಡುವ ನಾಟಕ. ಇದು ಎಲ್ಲ ಹಳ್ಳಿಗಳ ಕತೆ. ನಮ್ಮ ಜನರಿಗೆ ದೇವರು ತಮ್ಮ ನಡುವೆ ಸಹಜೀವನ ನಡೆಸುವ ಅಸಾಧಾರಣ ವ್ಯಕ್ತಿಯಷ್ಟೇ. ಅವರ ಸಿಟ್ಟು-ಸೆಡವು, ಪ್ರೇಮ-ಕಾಮ- ಹಗೆ, ತಮಾಶೆ ಎಲ್ಲವೂ ಆ ದೇವರ ಸುತ್ತಲೂ ಹೆಣೆಯಲ್ಪಟ್ಟಿರುತ್ತವೆ. ಈ ಥರದ ವಿಷಯಗಳನ್ನು ಅಂಬೇಡ್ಕರ್ ನೋಟಕ್ರಮದಲ್ಲಿ ನೋಡಿದರೆ ಅವುಗಳು ಅರ್ಥವಾಗುವ ಕ್ರಮವೇ ಬೇರೆ. ಹಾಲಗೇರಿ ತಾವು ಬದುಕುತ್ತಿರುವ ಸಮಾಜವೊಂದರ ಒಳ ಸಂಬಂಧಗಳ ಅವನತಿಗೆ ದೂರದ ಕಾರಣಗಳನ್ನು ಹುಡುಕುತ್ತಿರುವಂತೆ ಕಂಡರೂ, ಸಮಕಾಲೀನ ವಿಚಾರವಂತಿಕೆಯ ಪರಿಸರದಲ್ಲಿ ಈ ನಾಟಕ ಇತ್ಯಾತ್ಮಕ ಬದುಕಿನ ಕ್ರಮಗಳನ್ನೂ ತನಗೇ ಅರಿವಿಲ್ಲದಂತೆ ಮಂಡಿಸುತ್ತದೆ. ನಮಗೆ ದೇವರ ಅಗತ್ಯವೇ ಇಲ್ಲವೆನ್ನುವ ತಳಜಾತಿಗಳ ಅಂಬೇಡ್ಕರ್ ನೋಟಕ್ರಮದಿಂದ ನಾಟಕ ನೋಡುವವರಿಗೂ, ನಮ್ಮ ಸಮುದಾಯಗಳು ವೈದಿಕ ಕುತಂತ್ರಗಳಿಂದ ತಮ್ಮ ತಮ್ಮ ಒಳಗೇ ಸೀಳಿಕೊಳ್ಳುತ್ತಿವೆ ಎಂದು ನೋಡುವ ತಳಜಾತಿಗಳ ಜನರಿಗೂ ಏಕಕಾಲಕ್ಕೆ ಈ ನಾಟಕ ಒಂದು ತಾತ್ವಿಕ ನೆಲೆಯನ್ನು ಒದಗಿಸುತ್ತದೆ. ಈ ಕಾರಣಕ್ಕಾಗಿ ಮೊದಲ ನಾಟಕದಲ್ಲೇ ಅನುಭವಿ ನಾಟಕಕಾರರಂತೆ ಕಾಣುವ ಹನುಮಂತ ಹಾಲಗೇರಿಯವರ ರಂಗಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಬಹುದು.
‘ಆಟ ಮಾಟ’ ತಂಡದ ಬಗ್ಗೆ ಹೇಳಲೇಬೇಕು. ನಾಟಕದ ಉದ್ದಕ್ಕೂ ಬಿದ್ದು ಬಿದ್ದು ನಗುವಷ್ಟು ವ್ಯಂಗ್ಯಭರಿತ ಮಾತು- ಅಭಿನಯದಿಂದ ಇಡೀ ತಂಡದ ನಟರು ಗಮನ ಸೆಳೆಯುತ್ತಾರೆ. ಅದರಲ್ಲೂ ಮಹದೇವ ಹಡಪದ್ ನಿರ್ವಹಿಸಿದ ಶಾಸಕನ ಪಾತ್ರ ಹಾಗೂ ಪೋಲೀಸಪ್ಪನ ಪಾತ್ರಗಳು ನಮ್ಮೊಳಗೆ ನಗೆಯೊಂದಿಗೆ ಚಾಪ್ಲಿನ್ ಹುಟ್ಟಿಸಬಲ್ಲ ಗಾಢ ವಿಷಾಧ ಹಾಗೂ ಚಿಂತನೆಗೆ ಹಚ್ಚುತ್ತವೆ. ನಾಟಕವನ್ನು ನಿರ್ದೇಶನ ಮಾಡಿ ಎರಡು ಮೂರು ಪಾತ್ರಗಳನ್ನೂ ನಿರ್ವಹಿಸಿರುವ ಯತೀಶ್ ಕೊಳ್ಳೇಗಾಲ ಎಲ್ಲರ ಮನದಲ್ಲಿ ಉಳಿಯುತ್ತಾರೆ. ಉಳಿದಂತೆ ಊರಗೌಡ, ಯುವನಾಯಕ ಹನುಮೇಶ್, ಪೂಜಾರಿಗಳು, ಪೂಜಾರಿಯ ಹೆಂಡತಿ ಎಲ್ಲರೂ... ಪ್ರೇಕ್ಷಕರ ಕಣ್ಣುಗಳ ಮೂಲಕ ಎದೆಯೊಳಗೆ ಜಾಗ ಗಿಟ್ಟಿಸುತ್ತಾರೆ...
‘ಸಂಸ’ ರಂಗಮಂದಿರದಲ್ಲಿ ನಾನು ನೋಡಿದ ಅದ್ಭುತ- ಆಪ್ತ ನಾಟಕವಿದು... ನಾಟಕವೇ...; ಪ್ರಯೋಗವೇನಲ್ಲ.
ಒಂದು ತಾಜಾ.. ಆರ್ದ್ರ ರಂಗಾನುಭವ ನೀಡಿದ ಗೆಳೆಯ ಮಹದೇವ ಹಡಪದ್ ರನ್ನು ಒಮ್ಮೆ ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದೆ. ನನ್ನನ್ನೇ ಅಭಿನಂದಿಸಿಕೊಂಡಂತಾಯಿತು.. ಥ್ಯಾಂಕ್ಸ್ ಟು ‘ಆಟಮಾಟ’ ಹಾಗೂ ಹನುಮಂತ ಹಾಲಗೇರಿ...

ಹನುಮಪ್ಪನ ಆಧುನಿಕ ಪುರಾಣದಲ್ಲಿ ಅನಾವರಣಗೊಂಡ ಸಾಮಾಜಿಕ ಅವ್ಯವಸ್ಥೆ


 ಶಶಿಕಾಂತ ಯಡಹಳ್ಳಿ 


                                        
ಶ್ರೀರಾಮನ ಪರಮಭಕ್ತ ಹನುಮಂತನು ರಾಮಾಯಣ ಮಹಾಕಾವ್ಯದ ಒಂದು ವಿಶಿಷ್ಟ ಪಾತ್ರ. ಕೋತಿಯೊಂದು ತನ್ನ ಪರಾಕ್ರಮ ಮತ್ತು ಆತ್ಮಸ್ತೈರ್ಯದಿಂದ ವಿರಾಟರೂಪ ಪಡೆದು ಅವತಾರ ಪುರುಷ ರಾಮನಿಂದ ಅಸಾಧ್ಯವಾದುದನ್ನು ಸುಲಭವಾಗಿ ಮಾಡಿತೋರಿಸಿದ ಒಂದು ಪ್ಯಾಂಟಸಿ ಪಾತ್ರ. ಆಂಜನೇಯನಿಗೆ ಪುರಾಣ ಪರಿಕಲ್ಪಣೆಯಲ್ಲಿ ತನ್ನದೇ ಆದ ಒಂದು ಮಹತ್ವ ಇದೆ. ಸ್ವಾಮಿನಿಷ್ಟೆಗೆ ಇನ್ನೊಂದು ಹೆಸರೆ ಹನುಮಂತ ಎನ್ನುವುದು ಪ್ರತೀಕವಾಗಿದೆ. ಹಿಂದೂಗಳ ಆರಾಧ್ಯದೈವಗಳ ಪಟ್ಟಿಯಲ್ಲಿರುವ ಹನುಮಂತ ತನ್ನ ವಿಚಿತ್ರ ವಿರಾಟ ಆಕಾರ ಹಾಗೂ ಕೋತಿಯತ್ವದಿಂದಾಗಿ ಜನರಲ್ಲಿ ಭಯ ಭಕ್ತಿ ಹಾಗೂ ವಿನೋದವನ್ನು ಹುಟ್ಟಿಸುವಂತಹ ದೇವರಾಗಿದ್ದಾನೆ. ನಮ್ಮ ಹನುಮನನ್ನು ಕೇಂದ್ರವಸ್ತುವಾಗಿಟ್ಟುಕೊಂಡು ಪ್ರಸನ್ನರವರು ಮಹಿಮಾಪುರ ಎನ್ನುವ ನಾಟಕ ಬರೆದು ಧಾರ್ಮಿಕ ವ್ಯವಸ್ಥೆಯ ಬೂಟಾಟಿಕೆಯನ್ನು ಬಯಲು ಮಾಡಿದ್ದರು. ಈಗ ಹನುಮಂತ ಹಾಲಗೇರಿಯವರು ಊರು ಸುಟ್ಟರೂ ಹನಮಪ್ಪ ಹೊರಗ ಎನ್ನುವ ತಮ್ಮದೇ ಕಥೆ ಆಧರಿಸಿದ ನಗೆನಾಟಕವನ್ನು ರಚಿಸಿ, ಹನುಮದೇವರನ್ನೇ ಕೇಂದ್ರವಾಗಿರಿಸಿಕೊಂಡು ಹಳ್ಳಿಯ ಅರಾಜಕಾರಣವನ್ನು ಅನಾವರಣಗೊಳಿಸಿದ್ದಾರೆ
ಆಟ-ಮಾಟ ಎನ್ನುವ ಧಾರವಾಡ ಮೂಲದ ಅರೆರೆಪರ್ಟರಿ ತಂಡದ ಕಲಾವಿದರು ಯತೀಶ ಕೊಳ್ಳೇಗಾಲರ ನಿರ್ದೇಶನದಲ್ಲಿ ಊರು ಸುಟ್ಟರೂ..... ನಾಟಕವನ್ನು ಸಿದ್ದಪಡಿಸಿದ್ದು ಸಂಸ ಪತ್ರಿಕೆ ಆಯೋಜಿಸಿದ್ದ ಮೂರು ದಿನಗಳ ತಳ ಸಂಸ್ಕೃತಿಯ ನೆಲೆ ನಾಟಕೋತ್ಸವದಲ್ಲಿ 2014 ಎಪ್ರಿಲ್ 11ರಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ಮಂದಿರದಲ್ಲಿ ಪ್ರದರ್ಶನಗೊಂಡು ನೋಡುಗರನ್ನು ನಗೆಗಡಲಲ್ಲಿ ತೇಲಿಸಿತು.
  
ನಾಟಕದ ಕಥಾವಸ್ತು ಹೀಗಿದೆ. ವಜ್ರಮಟ್ಟಿ ಮತ್ತು ಧರಗಟ್ಟಿ ಎನ್ನುವ ಎರಡು ಅಕ್ಕಪಕ್ಕದ ಹಳ್ಳಿಗಳು. ಧರಗಟ್ಟಿಯ ಹನುಮಂತ ದೇವರ ವಿಗ್ರಹ ಮೂಲದಲ್ಲಿ ತಮ್ಮ ಊರಿನದೆಂದು ಆರೋಪಿಸಿದ ಕೆಲವರು ರಾತ್ರೋ ರಾತ್ರಿ ವಜ್ರಮಟ್ಟಿಯಿಂದ ವಿಗ್ರಹ ಕದ್ದುತಂದು ತಮ್ಮೂರ ಗುಡಿಯಲ್ಲಿ ಪ್ರತಿಷ್ಟಾಪಿಸುತ್ತಾರೆ. ಇದರಿಂದಾಗಿ ಎರಡೂ ಊರಿನಲ್ಲಿ ವೈಷಮ್ಯದ ಬೆಂಕಿ ಹೊತ್ತಿಕೊಳ್ಳುತ್ತದೆ. ಕೊನೆಗೆ ಪೊಲೀಸ ಕಂಪ್ಲೇಂಟ್ ಆಗಿ ವಿಗ್ರಹವನ್ನು ಪೊಲೀಸ್ ಸ್ಟೇಶನ್ನಲ್ಲಿ ಇಡಲಾಗುತ್ತದೆ. ಆಮೇಲೆ ವಿವಾದ ಕೋರ್ಟ ಮೆಟ್ಟಲೇರಿ ಹನುಮಪ್ಪ ಕೋರ್ಟ ಸುಪರ್ಧಿಗೆ ಒಳಗಾಗುತ್ತದೆ. ಎರಡೂ ಹಳ್ಳಿಯವರು ಪ್ರತಿಷ್ಟೆಯ ಪೈಪೋಟಿಗೆ ಬಿದ್ದು ತಮ್ಮಲ್ಲಿ ಇದ್ದ ನಗನಾಣ್ಯ ಆಸ್ತಿಗಳನ್ನೆಲ್ಲಾ ಮಾರಿ ವಕೀಲರನ್ನಿಟ್ಟು ಕೇಸ್ ನಡೆಸಿ ಪಾಪರ್ ಆಗುತ್ತಾರೆ. 15 ವರ್ಷ ಕೇಸ್ ನಡೆದು ಕೊನೆಗೆ ವಜ್ರಮಟ್ಟಿ ಊರವರಿಗೆ ಜಯ ಸಿಗುತ್ತದೆ. ಆದರೆ ಅಷ್ಪೊತ್ತಿಗೆ ಬರ ಬಂದು ಎರಡೂ ಊರವರೆಲ್ಲಾ ದುಡಿಯಲೆಂದು ಗುಳೆ ಹೋಗತೊಡಗಿರುತ್ತಾರೆ. ಯಾವ ಹನುಮಂತನ ವಿಗ್ರಹಕ್ಕಾಗಿ ತಮ್ಮ ಪ್ರತಿಷ್ಟೆ ಪಣಕ್ಕೊಡ್ಡಿದ ಜನ ಎಲ್ಲವನ್ನೂ ಕಳೆದುಕೊಂಡರೋ ಅಂತವರ ಊರಿಗೆ ವಿಗ್ರಹ ಬಂದಾಗ ಯಾರಿಗೂ ಬೇಡವಾಗಿ ಹನುಮಂತ ಬೀದಿಪಾಲಾಗುತ್ತಾನೆ. ಇಲ್ಲಿಗೆ ನಾಟಕ ಮುಗಿಯುತ್ತದೆ. ಆದರೆ ಅದು ಹುಟ್ಟುಹಾಕಿದ ನಗು ನೋಡುಗರಿಗೆ ಮುದನೀಡುತ್ತದೆ.
ಇಡೀ ನಾಟಕ ನವೀರಾದ ಹಾಸ್ಯದೊಂದಿಗೆ ಮನುಷ್ಯನೊಳಗಿನ ಸ್ವಾರ್ಥ, ದ್ವೇಷ, ಮೌಡ್ಯತೆ ಹಾಗೂ ಹುಂಬುತನಗಳನ್ನು ತೆರೆದಿಡುತ್ತದೆ. ಅದು ಹೇಗೆ ಸ್ವಪ್ರತಿಷ್ಟೆಗೆ ಬಿದ್ದು ಜನ ಹಾಳಾಗುತ್ತಾರೆ ಎನ್ನುವುದರ ಪ್ರಾತ್ಯಕ್ಷಿಕತೆ ನಾಟಕದಲ್ಲಿದೆ. ಇಲ್ಲಿ ಹನುಮಂತ ದೇವರು ಕೇವಲ ನೆಪವಾಗಿದ್ದರೂ ಆತನ ಹೆಸರಲ್ಲಿ ಮನುಷ್ಯರು ಮಾಡುವ ರಾಜಕೀಯ ಆಯಾಮಗಳು ನಾಟಕದಲ್ಲಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಪುರೋಹಿತಶಾಹಿ ಪೂಜಾರಿಗಳ ತಂತ್ರ, ಹಳ್ಳಿಗರ ಜಗಳದಲ್ಲಿ ಮೂಗು ತೂರಿಸುವ ರಾಜಕಾರಣಿಗಳ ಕುತಂತ್ರ, ಯಾವುದೋ ಒಂದು ಘಟನೆಗೆ ಇಲ್ಲದ್ದನ್ನು ಆರೋಪಿಸಿ ಬ್ರೇಕಿಂಗ್ ನ್ಯೂಸ್ ಮಾಡುವ ಪತ್ರಿಕೆ ಹಾಗೂ ಚಾನೆಲ್ಗಳ ಹೊನಗೇಡಿತನ,  ಸಮಸ್ಯೆಯನ್ನು ಶಮನಗೊಳಿಸುವ ಬದಲು ಕ್ಲಿಷ್ಟಗೊಳಿಸುವ ಪೊಲೀಸರ ಬೇಜವಾಬ್ದಾರಿತನ, ನ್ಯಾಯಾಲಯದ ವಿಳಂಬ ನೀತಿ ಮತ್ತು ನ್ಯಾಯವಾಧಿಗಳ ಧನದಾಹಗಳನ್ನು ಲೇವಡಿ ಮಾಡುವಲ್ಲಿ ನಾಟಕ ಯಶಸ್ವಿಯಾಗಿದೆ.   ನಾಟಕ ನೋಡಿಸಿಕೊಂಡು ಹೋಗುವುದು ಅದರಲ್ಲಿ ಬಳಸಲಾದ ಉತ್ತರ ಕರ್ನಾಟಕದ ಭಾಷಾ ಸೊಗಡು ಮತ್ತು ಅದರಿಂದ ಹೊರಹೊಮ್ಮುವ ನಗೆಯಿಂದಾಗಿ. ನಾಟಕದಲ್ಲಿ ಹರಿಕತೆ ಮಾದರಿಯ ಆರಂಭ ಹಾಗೂ ತತ್ವ ಪದಗಳನ್ನು ಮತ್ತು ಹಳ್ಳಿಗಳ ಭಜನಾ ಶೈಲಿಯ ಹಾಡುಗಳನ್ನು ಬಳಸಿದ್ದು ನಾಟಕದ ಸೊಗಸನ್ನು ಹೆಚ್ಚಿಸಿದೆ
ಮನುಷ್ಯರು ತಮ್ಮ ಸ್ವಯಂಕೃತ ಅಪರಾಧದಿಂದಾಗಿ ಮಾಡಿಕೊಳ್ಳಬಹುದಾದ ಎಲ್ಲಾ ಅವಘಟಗಳಿಗೆ ದೇವರನ್ನೇ ಆರೋಪಿಸುವುದು ನಮ್ಮ ಸಮಾಜದ ವೈಚಿತ್ರ್ಯವಾಗಿದೆ.   ಇಲ್ಲಿ ದೇವರು ಎನ್ನುವವ ಕೇವಲ ತೋರುಂಬ ಲಾಭ ಎನ್ನುವ ಪರಮಸತ್ಯವನ್ನು ನಾಟಕದಲ್ಲಿ ತೋರಿಸಲಾಗಿದೆ. ಜನ ತಮ್ಮ ಒಣಪ್ರತಿಷ್ಟೆಗಾಗಿ ಹನುಮವಿಗ್ರಹ ಬೇಕೆಂದು ಕೋರ್ಟಿಗೆ ಹೋಗಿ ಬಡಿದಾಡಿ ಅತಃಪತನ ಹೊಂದಿ ಕೊನೆಗೆ ದೇವರನ್ನೇ ಅದಕ್ಕೆ ಕಾರಣವಾಗಿಸಿ ವಿಗ್ರಹವನ್ನೇ ತಿರಸ್ಕರಿಸುವ ರೀತಿಯನ್ನು ಬಲು ವಿಡಂಬಣಾತ್ಮಕವಾಗಿ ಊರು ಸುಟ್ಟರೂ .... ನಾಟಕದಲ್ಲಿ ತೋರಿಸಲಾಗಿದೆ. ಸಮಾಜದ ಗುನಾವಗುಣಗಳನ್ನು ವಿಶ್ಲೇಷಿಸುವ ನಾಟಕದ ಆಶಯ ವಿಶಿಷ್ಟವಾಗಿದೆಯಾದರೂ ಆಶಯವನ್ನು ಹೇಳುವ ರೀತಿಯಲ್ಲಿ ಹಲವಾರು ಸಮಸ್ಯೆಗಳಿವೆ. ರಂಗಪಠ್ಯದ ಸಂದೇಶವನ್ನು ರಂಗಪ್ರದರ್ಶನ ಸಾಕಾರಗೊಳಸುವಲ್ಲಿ ಇನ್ನೂ ಪರಿಷ್ಕರಣೆಗೊಳಗಾಗಬೇಕಿದೆ.
 
ಇದು ಹಾಸ್ಯನಾಟಕ ಎನ್ನುವುದರಿಂದಲೋ ಏನೋ ನಾಟಕದಲ್ಲಿ ತರ್ಕ ಮಾಯವಾಗಿದೆ. ಗೊಂದಲಗಳೂ ಅತಿಯಾಗಿವೆ. ಜನರನ್ನು ನಗಿಸುವುದನ್ನೇ ಪ್ರಮುಖ ಗುರಿಯಾಗಿರಿಸಿಕೊಂಡಿದ್ದರಿಂದ ನಾಟಕದ ಬಂಧ ಜಾಳುಜಾಳಾದಂತೆನಿಸುತ್ತದೆ. ವಿನೋದವೇ ಇಲ್ಲಿ ಸ್ಥಾಯಿಯಾಗಿ ಮೂಡಿಬಂದಿದ್ದು  ಅಂತಿಮವಾಗಿ ಅದು ಮೂಡಿಸಬೇಕಾದ ವಿಷಾದ ಮಾಯವಾಗಿದೆ. ನಗೆಯ ನಾಗಾಲೋಟದಲ್ಲಿ ನಾಟಕದ ನಿಜವಾದ ಆಶಯ ಮರೆಯಾಗಿದೆ. ನಾಟಕದ ಕೊನೆಗೆ ಪ್ರತಿಷ್ಟೆಗೆ ಬಿದ್ದು ಪ್ರಪಾತಕ್ಕೆ ಬಿದ್ದ ಹಳ್ಳಿ ಜನರ ದಾರುಣ ಬದುಕನ್ನು ಕಟ್ಟಿಕೊಡಬೇಕಾದಾಗ ವಿಷಾದವನ್ನು ಮೂಡಿಸಬೇಕಾಗಿತ್ತು. ಆದರೆ ಪ್ರಮುಖವಾದ ಸನ್ನಿವೇಶವನ್ನು ಕೇವಲ ಒಂದು ಹಾಡಿನ ಮೂಲಕ ಹೇಳಿ ಜನರ ದುರಂತತೆಯನ್ನು ತೇಲಿಸಿದಂತಿದೆ. ನಿರ್ದೇಶಕರಿಗೆ ನಾಟಕದ ಆಶಯಕ್ಕಿಂತ ಅತಿಶಯವೇ ಮಹತ್ವದ್ದಾಗಿದ್ದು ನಾಟಕ ಹಿಡಿತಕ್ಕೆ ಸಿಗದೇ ಚಿತ್ತಬಂದತ್ತ ಹಾಸ್ಯಸವಾರಿ ಓಡಿದಂತಿದೆ.
ನಾಟಕದ ಕ್ಯಾನ್ವಾಸ್ ಎರಡು ಹಳ್ಳಿ ಹಾಗೂ ಒಂದು ಪಟ್ಟಣದಲ್ಲಿ ಆವರಿಸಿಕೊಂಡಿದೆ. ಅನೇಕಾನೇಕ ಪಾತ್ರಗಳು ಬರುತ್ತವೆ. ಆದರೆ ಕೇವಲ ಎಂಟೇ ಜನ ಕಲಾವಿದರು ಸಕಲೆಂಟು ಪಾತ್ರಗಳನ್ನು ಅಭಿನಯಿಸಿದ್ದರಿಂದ ನೋಡುಗರಲ್ಲಿ ಗೊಂದಲವನ್ನುಂಟು ಮಾಡುವಂತಿದೆ. ಊರಿನವರು ಊರಿನಲ್ಲೂ ಇರುತ್ತಾರೆ. ಊರಿನ ಗುಡಿ ಪೂಜಾರಿ ಊರಿನಲ್ಲೂ ಕಾಣಸಿಗುತ್ತಾನೆ. ಹೀಗಾಗಿ ಯಾವ ಪಾತ್ರ ಯಾವ ಊರಿನದು ಎನ್ನುವುದೇ ಕನ್ಪೂಜ್. ಜೊತೆಗೆ ಒಬ್ಬೊಬ್ಬ ನಟ ನಾಲ್ಕೈದು ಪಾತ್ರಗಳನ್ನು ಮಾಡುವುದರಿಂದ ಹಾಗೂ ಮುಖವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲದೇ ಇರುವುದರಿಂದ ಪ್ರೇಕ್ಷಕರಲ್ಲಿ ಇನ್ನೂ ಹೆಚ್ಚಿನ ಗೊಂದಲ ಮೂಡುತ್ತದೆ. ಇಡೀ ನಾಟಕದ ಪ್ರದರ್ಶನದ ಪಾರ್ಮ್ಯಾಟ್ ಪಕ್ಕಾ ಬೀದಿ ನಾಟಕವೊಂದನ್ನು ನೋಡಿದಂತಾಯಿತು. ನಟರು ಅಭಿನಯಿಸುವ ರೀತಿಯಲ್ಲಿ ವೃತ್ತಿ ಕಂಪನಿ ಶೈಲಿ ಹಾಗು ಆಧುನಿಕ ನಾಟಕದ ಶೈಲಿಗಳು ಸಮ್ಮಿಶ್ರಗೊಂಡಿದ್ದವು. ಇದನ್ನೊಂದು ನಾಟಕ ಎನ್ನುವುದಕ್ಕಿಂತಲೂ ಸ್ಟ್ಯಾಂಡಅಪ್ ಕಾಮೆಡಿ ಶೋ ಎನ್ನುವುದು ಸರಿ ಎನ್ನಿಸುತ್ತದೆ. ಯಾಕೆಂದರೆ ಯಾವುದೇ ಹೇಳಿಕೊಳ್ಳುವಂತಹ ಸೆಟ್ ಪ್ರಾಪರ್ಟಿಗಳಿಲ್ಲ, ರಂಗವೇದಿಕೆಯ ಆಯಾಮಗಳನ್ನು ಬಳಸಿಕೊಳ್ಳಲಿಲ್ಲ.  ಬೆಳಕಿನ ವಿನ್ಯಾಸದಲ್ಲಿ ವ್ಯತ್ಯಾಸವಿಲ್ಲ. ಹಲವು ಪಾತ್ರಗಳು ಬರುತ್ತವೆ ತಮ್ಮ ಪಂಚ್ ಡೈಲಾಗಗಳನ್ನು ಹೇಳುತ್ತವೆ ಮತ್ತು ಚಿತ್ತ ಬಂದತ್ತ ಹೊರಹೊಗುತ್ತವೆ. ರಂಗಶಿಸ್ತು ಎನ್ನುವುದು ಇಡೀ ನಾಟಕದಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ
 
ಹಳ್ಳಿ ಜಾತ್ರೆಗಳಲ್ಲಿ ವರ್ಷಕ್ಕೊಮ್ಮೆ ಊರವರೆಲ್ಲಾ ಸೇರಿ ಒಂದು ನಾಟಕವನ್ನು ಕಲಿತು ಆಡುತ್ತಾರಲ್ಲಾ ಹಾಗೆಯೇ ನಾಟಕ ಕೂಡಾ ಮೂಡಿ ಬಂದಿದೆ. ಗ್ರಾಮೀಣ ಕಲಾವಿದರಾಗಿದ್ದರೆ ಅಥವಾ ನಾಟಕಕ್ಕೆ ಹೊಸದಾಗಿ ಬಂದ ನಟ-ನಿರ್ದೇಶಕರಾಗಿದ್ದರೆ ಪರವಾಗಿಲ್ಲ ಎನ್ನಬಹುದಾಗಿತ್ತು, ಆದರೆ ನಾಟಕದಲ್ಲಿರುವ ಎಲ್ಲಾ ನಟರೂ ರಂಗಭೂಮಿಯಲ್ಲಿ ಪಳಗಿದವರು. ನೀನಾಸಂ, ಶಿವಸಂಚಾರ ಹಾಗೂ ಎನ್ಎಸ್ಡಿ ಬೆಂಗಳೂರು ಚಾಪ್ಟರ್ಗಳಲ್ಲಿ ತರಬೇತಿ ಪಡೆದು ರೆಪರ್ಟರಿ ಪ್ರೊಡಕ್ಷನ್ಗಳಲ್ಲಿ ಅನುಭವ ಹೊಂದಿದವರು. ಇಂತಹ ಅನುಭವಸ್ತ ನಟರಿಂದ ಶಿಸ್ತುಬದ್ದ ನಾಟಕವನ್ನು ಬೆಂಗಳೂರಿನ ಪ್ರೇಕ್ಷಕರು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ನಿರಾಸೆಯಲ್ಲ ಬದಲಾಗಿ ಕೇವಲ ದಕ್ಕಿದಷ್ಟು ನಕ್ಕು ಖುಷಿಪಟ್ಟಿದ್ದಷ್ಟೇ ಸಾರ್ಥಕವಾಯಿತು. ಕನಿಷ್ಟ ಆಗಮನ ನಿರ್ಗಮನಗಳ ಅರಿವಾದರೂ ಬೇಕಾಗಿತ್ತು. ನಟರಿಗೆ ಸನ್ನಿವೇಶ ಹಾಗೂ ಸೆಟ್ ಪರಿಕಲ್ಪನೆ ಇರಬೇಕಾಗಿತ್ತು. ಹೋಗಲಿ ಕಂಟಿನ್ಯೂಟಿ ಸೆನ್ಸ ಆದರೂ ಬೇಕಾಗಿತ್ತು. ಹಳ್ಳಿಯಿಂದ ಜನರನ್ನು ಪೊಲೀಸರು ಇದ್ದಕ್ಕಿದ್ದಂತೆ ಬಂಧಿಸಿ ಜೀಪಿನಲ್ಲಿ ಹಾಕಿಕೊಂಡು ಬರುತ್ತಾರೆ. ಗುಂಪಲ್ಲಿ ಬರಿಗೈಯಲ್ಲಿ ಬಂದ ಪೂಜಾರಿಯ ಕೈಗೆ  ಠಾಣೆಗೆ ಬರುವುದರೊಳಗೆ ಹಾರ್ಮೋನಿಯಂ ಪೆಟ್ಟಿಗೆ ಬಂದಿರುತ್ತದೆ. ಹೋಗಲಿ ದಾರಿಯಲ್ಲಿ ತಂದಿರಬಹುದು ಎಂದುಕೊಳ್ಳೋಣ. ಪೆಟ್ಟಿಗೆ ಸಮೇತ ಪೂಜಾರಿಯನ್ನು ಠಾಣೆಯ ಒಳಗೆ ಬಂಧಿಸಲಾಗುತ್ತದೆ. ಅದು ಹೇಗೆ ಎಲ್ಲರೂ ಬಿಡುಗಡೆಗೊಂಡಾಗ ಬರಿಕೈಯಲ್ಲಿ ಪೂಜಾರಿ ಸಮೇತ ಎಲ್ಲರೂ ಹೊರಹೋಗುತ್ತಾರೆ. ಆದರೆ ಅದೇ ಪೂಜಾರಿ ಮತ್ತೊಮ್ಮೆ ಪೊಲೀಸ್ ಠಾಣೆಗೆ ಬಂದಾಗ ಕೈಯಲ್ಲಿ ಹಾರಮೋನಿಯಂ ಪೆಟ್ಟಿಗೆ ಹಿಡಿದುಕೊಂಡೇ ಬರುತ್ತಾರೆ. ರೀತಿಯ ಹಲವಾರು ಕಂಟಿನ್ಯೂಟಿ ಸಮಸ್ಯೆಗಳು ನಾಟಕದಲ್ಲಿವೆ.
  
ಕೇವಲ ಜನ ನಗುತ್ತಾರೆ ಎನ್ನುವುದು ನಾಟಕದ ಯಶಸ್ಸಿನ ಸಂಕೇತವಲ್ಲ. ಒಂದು ನಾಟಕದಲ್ಲಿ ರಂಗಶಿಸ್ತು ಇಲ್ಲದೇ ಹೋದರೆ ಅದು ಪರಿಪೂರ್ಣ ನಾಟಕವಾಗಲಾರದು. ಜನರನ್ನು ನಗಿಸುವುದಕ್ಕೆಂದೇ ನಾಟಕದಲ್ಲಿ ಅಪರೂಪಕ್ಕೊಮ್ಮೆ ಡಬಲ್ ಮೀನಿಂಗ್ ಡೈಲಾಗ್ ಕೂಡಾ ಬಳಸಲಾಗಿದೆ. ಹಳೆಯ ಜೋಕ್ಸಗಳಿವೆ ಜೊತೆಗೆ ಉತ್ತರ ಕರ್ನಾಟಕದ ದೇಸಿ ಬೈಗಳುಗಳು ಪುಂಕಾನುಪುಂಕವಾಗಿವೆ. ಇನ್ನೇನು ಬೇಕು ಬೇರೆ ಕಾರಣ ನಗು ಉಕ್ಕಿಸಲು. ಹಿಂದೆ ನಾಟಕದ ಪರದೆ ಮಾದರಿಯಲ್ಲಿ ಬ್ಯಾಕ್ ಡ್ರಾಪ್ ಹಾಕಲಾಗಿದೆ. ಅದರ ಎಡ ಬಲಕ್ಕೆ ಜನರ ಗುಂಪು ನಗುವ ಕಾರ್ಟೂನ್ ಚಿತ್ರಗಳನ್ನು ಬಿಡಿಸಲಾಗಿದೆ. ಅರ್ಧ ಭಾಗ ತೆರೆದಿದ್ದರೆ ಇನ್ನರ್ಧ ಭಾಗವನ್ನು  ನಾಟಕದಾದ್ಯಂತ ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ. ಇದೆಲ್ಲ ಅನಗತ್ಯವಾಗಿತ್ತು. ಇರುವ ಬ್ಯಾಕ್ಡ್ರಾಪನ್ನೂ ಸಹ ಸಮರ್ಪಕವಾಗಿ ಬಳಸದೆ ನಾಟಕದಲ್ಲಿ ಆಭಾಸವನ್ನು ಸೃಷ್ಟಿಸಲಾಯಿತು. ನೇರವಾಗಿ ಮುಖಮಾಡಿದ ಹನುಮಂತನನ್ನು   ನಾಟಕದಲ್ಲಿ ಮಾತ್ರ ಕಾಣಲು ಸಾಧ್ಯ. ಬಹುತೇಕ ಹಳ್ಳಿಗಳಲ್ಲಿ ಹನುಮಂತ ದೇವರ ಮುಖ ಯಾವಾಗಲೂ ಎಡಕ್ಕೆ ಇಲ್ಲವೇ ಬಲಕ್ಕೆ ತಿರುಗಿರುತ್ತದೆ. ನಾಟಕದ ವಿಶೇಷತೆ ನೇರ ಮೂತಿಯ ಹನುಮಪ್ಪ.
 
ಯತೀಶ್ ಕೊಳ್ಳೆಗಾಲ ಉತ್ತಮ ನಟ ಎನ್ನುವುದು ನಾಟಕದಲ್ಲಿ ಅವರು ಮಾಡಿದ ವಿವಿಧ ಪಾತ್ರಗಳ ಅಭಿನಯದಿಂದ ಗೊತ್ತಾಗುತ್ತದೆ. ಆದರೆ ಅವರು ನಿರ್ದೇಶನದ ಪಟ್ಟುಗಳನ್ನು ಇನ್ನೂ ರೂಢಿಸಿಕೊಳ್ಳಬೇಕಿದೆ. ಬರೀ ಮಾತಿನ ಮೂಲಕ ನಾಟಕ ಕಟ್ಟದೇ ವಿವಿಧ ರಂಗ ಆಯಾಮಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕಿದೆ. ರಂಗಶಿಸ್ತು ಹಾಗೂ ಕಂಟಿನ್ಯೂಟಿಗಳತ್ತ ಗಮನಹರಿಸಬೇಕಿದೆ. ಪಾತ್ರಪೋಷಣೆಗಳನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಬ್ಲಾಕಿಂಗ್ ಮತ್ತು ಮೂವಮೆಂಟ್ಗಳಲ್ಲಿ ಇನ್ನೂ ಶ್ರಮಿಸಬೇಕಿದೆ. ಯುವತಿಯರಿಗೆ ಗಂಡು ವೇಷತೊಡಿಸಿ ಗಂಡಸಿನ ಪಾತ್ರ ಹಂಚಿಕೆ ಮಾಡಿದಾಗ ಕನಿಷ್ಟ ಆಕೆಯ ಮೂಗುನತ್ತನ್ನು ಬಿಚ್ಚಿಡಿಸಬೇಕು ಎನ್ನುವ ಸಾಮಾನ್ಯ ತಿಳುವಳಿಕೆ ಬೇಕಾಗುತ್ತದೆ. ಯಾಕೆಂದರೆ ಜೋಗಪ್ಪಗಳನ್ನು ಹೊರತು ಪಡಿಸಿ ಯಾವುದೇ ಗಂಡಸು ಮೂಗುಬೊಟ್ಟು ತೊಟ್ಟು ಓಡಾಡುವುದು ರೂಡಿಗತವಾದದ್ದಲ್ಲ. ಕಾಸ್ಟೂಮ್ಸಗಳ ಆಯ್ಕೆಯಲ್ಲೂ ನಿರ್ದೇಶಕರು ಗಮನಕೊಡಬೇಕಾಗಿದೆ. ಉತ್ತರ ಕರ್ನಾಟಕದ ಹಳ್ಳಿಯಲ್ಲಿ ಅನಕ್ಷರಸ್ತರು ಪೈಜಾಮ ಹಾಕಿಕೊಳ್ಳುವುದು, ಪೂಜಾರಿ ನಾಟಕದಾದ್ಯಂತ ಬಿಳಿ ಲುಂಗಿ ತೊಟ್ಟಿರುವುದು, ಕೆಲವರಿಗೆ ದೋತರವನ್ನೂ ಸರಿಯಾಗಿ ಉಟ್ಟುಕೊಳ್ಳಲೂ ಬಾರದಿರುವುದು, ಪೊಲೀಸ್ ಡ್ರೆಸ್ನಲ್ಲಿ ವಾಸ್ತವತೆ ಇಲ್ಲದೇ ಇರುವುದು, ಬರ್ಮುಡಾದಂತಹ ಮುಕ್ಕಾಲು ಪ್ಯಾಂಟ್ಗಳನ್ನು ತೊಡಿಸಿರುವುದು... ಮುಂತಾದವು ನಾಟಕದ ಪ್ರಾದೇಶಿಕತೆ ಆಧರಿಸಿದ ಪಾತ್ರಗಳನ್ನು ಕಟ್ಟಿಕೊಡುವಲ್ಲಿ ವ್ಯತಿರಿಕ್ತವೆನಿಸುತ್ತವೆ. ಬಹುಷಃ ನಾಟಕದ ನಿರ್ದೇಶಕ ಕೊಳ್ಳೆಗಾಲದವರಾಗಿದ್ದರಿಂದ ಉತ್ತರ ಕರ್ನಾಟಕದ ಹಳ್ಳಿಗಳ ಸಂಸ್ಕೃತಿಯ ಅರಿವು ಪೂರ್ಣಪ್ರಮಾಣದಲ್ಲಿ ಇಲ್ಲವಾಗಿದೆ.
  
ನಾಟಕದ ಪಾತ್ರದಾರಿಗಳಲ್ಲಿ ಲವಲವಿಕೆ ಇದೆ. ಪೂಜಾರಿ ಹಾಗೂ ಭಾಗವತನಾಗಿ ಧನಂಜಯ ಮತ್ತು ಚೇರಮನ್ ಹಾಗೂ ಹನುಮನಾಗಿ ಮಾರಪ್ಪ ಬೆಜ್ಜಿಹಳ್ಳಿ ಉತ್ತಮವಾಗಿ ಅಭಿನಯಿಸಿದ್ದಾರೆ. ಪಿಎಸ್ಐ ಹಾಗು ಹುಚ್ಚ ಪಾತ್ರದಲ್ಲಿ ಯತೀಶ್ ತಮ್ಮ ಓವರ್ ಆಕ್ಟಿಂಗ್ ಶೈಲಿಯಿಂದಾಗಿ ಗಮನಸೆಳೆದಿದ್ದಾರೆ. ಎಂಎಲ್ಎ ಹಾಗೂ ಪೊಲೀಸ್ ಪೇದೆಯಾಗಿ ಅಭಿನಯಿಸಿದ ಮಹದೇವ್ ಹಡಪದ ತಮ್ಮ ವಿಶಿಷ್ಟ ವೃತ್ತಿ ಕಂಪನಿ ನಾಟಕದ ನಟನಾ ಶೈಲಿಯಿಂದಾಗಿ ಜನರನ್ನು  ನಕ್ಕು ನಗಿಸುತ್ತಾರೆ. ರೇಖಾ ಹೊಂಗಲ್ ಮತ್ತು ಗೀತಾ ಇಬ್ಬರೂ ಯುವತಿಯರು ನಾಟಕದ ಗಂಡು ಹಾಗೂ ಹೆಣ್ಣು ಎರಡೂ ರೀತಿಯ ಪಾತ್ರಗಳಲ್ಲಿ ಸೊಗಸಾಗಿ ನಟಿಸಿದ್ದಾರೆ. ಎಲ್ಲಾ ನಟರ ಟೈಂ ಸೆನ್ಸ ಹಾಗೂ ಪಂಚ್ ಡೈಲಾಗ್ ಡೆಲಿವರಿ ಚೆನ್ನಾಗಿ ವರ್ಕಔಟ್ ಆಗಿದೆ. ಆದರೆ ನಟರಿಗೆ ತಮ್ಮ ನಟನೆಯಲ್ಲಿದ್ದಷ್ಟೇ ಶ್ರದ್ದೆ ರಂಗತಂತ್ರಗಳ ಬಳಕೆಯಲ್ಲೂ ಇದ್ದರೆ ನಾಟಕ ಇನ್ನೂ ಸೊಗಸಾಗಿ ಮೂಡಿಬರಬಹುದಾಗಿತ್ತು. ಮೂವತ್ತರಷ್ಟು ಪಾತ್ರಗಳನ್ನು  ಆರೇ ಜನ ಕಲಾವಿದರು ಹಂಚಿಕೊಂಡು ಅಭಿನಯಿಸುವುದು ಸವಾಲಿನ ಕೆಲಸ. ಸವಾಲನ್ನು ಮೆಟ್ಟಿನಿಲ್ಲಲು ಇನ್ನೂ ಎಲ್ಲರೂ ಪ್ರಯತ್ನಿಸಬೇಕಿದೆ. ಐದೈದು ನಿಮಿಷಕ್ಕು ಪ್ರತಿ ವ್ಯಕ್ತಿಯ ಪಾತ್ರಗಳು ಬದಲಾಗುತ್ತಿರುವುದರಿಂದ ಪಾತ್ರದೊಳಗೆ ಯಾವುದೆ ಕಲಾವಿದನಿಗೆ ಪ್ರವೇಶಿಸಲು ಅವಕಾಶವೇ ಇಲ್ಲವಾಯಿತು. ಆಂಗಿಕ ಹಾಗೂ ವಾಚಿಕಾಭಿನಯಕ್ಕಿರುವ ಅವಕಾಶ ಸಾತ್ವಿಕಾಭಿನಯಕ್ಕೆ ಇಲ್ಲದೇ ಹೋಯಿತು. ಆಹಾರ್ಯಾಭಿನವಂತೂ ಅದ್ವಾನವಾಗಿತ್ತು.
ಸಾಮಾಜಿಕ ಅವ್ಯವಸ್ಥೆಯನ್ನು ಹಾಸ್ಯದ ಮೂಲಕ ಲೇವಡಿ ಮಾಡುವ ನಾಟಕಕಾರನ ಉದ್ದೇಶ ಉತ್ತಮವಾದದ್ದಾಗಿದೆ. ಆದರೆ ಅದು ನಾಟಕ ಪ್ರದರ್ಶನದಲ್ಲಿ ಮೂಡಿ ಬರದಿರುವುದೇ ಕೊರತೆಯಾಗಿದೆ. ಇಡೀ ನಾಟಕದ ಅನಗತ್ಯ ಭಾಗವನ್ನು ಎಡಿಟ್ ಮಾಡಿದರೆ, ಅನಗತ್ಯ ಹಾಗೂ ಪುನರಾವರ್ತನೆಗೊಳ್ಳುವ ಬೈಗುಳಗಳನ್ನು ನಿಯಂತ್ರಿಸಿದರೆ, ನಾಟಕದಾದ್ಯಂತ ರಂಗಶಿಸ್ತನ್ನು ರೂಢಿಸಿಕೊಂಡಿದ್ದರೆ. ಬೀದಿ ನಾಟಕದ ಮಾದರಿಯಲ್ಲಿ ಪ್ರದರ್ಶಿಸಲಾದ ನಾಟಕದ ಫಾರ್ಮ್ಯಾಟನ್ನು ಪ್ರಿಸೀನಿಯಂ ನಾಟಕ ಶೈಲಿಗೆ ಬದಲಾಯಿಸಿದರೆ. ನಾಟಕದಲ್ಲಿ ಬರುವ ಸನ್ನಿವೇಶಗಳಿಗೆ ತಾರ್ಕಿಕ ಲಿಂಕ್ಗಳನ್ನು ಒದಗಿಸಿದರೆ, ರಂಗತಂತ್ರಗಳನ್ನು ಸರಿಯಾಗಿ ಬಳಸಿಕೊಂಡರೆ, ಗೊಂದಲಕಾರಿಯಾದ ಹಿನ್ನೆಲೆ ಬ್ಯಾಕ್ ಡ್ರಾಪ್ನಲ್ಲಿ ಸೂಕ್ತ ಮಾರ್ಪಾಡನ್ನು ಮಾಡಿಕೊಂಡರೆ, ನಾಟಕದ ಕ್ಲೈಮ್ಯಾಕ್ಸಿನಲ್ಲಿ ಹಳ್ಳಿಗರ ದುರಂತತೆಯನ್ನು ಸಾರುವಂತಹ ಹಾಗೂ ಮೂಲಕ ವಿಷಾದವನ್ನು ಹುಟ್ಟಿಸುವಂತಹ ದೃಶ್ಯವನ್ನು ಸೃಷ್ಟಿಸಿದ್ದರೆ... ನಾಟಕ ಅತ್ಯುತ್ತಮ ನಾಟಕವಾಗಬಹುದಾದ ಎಲ್ಲಾ ಸಾಧ್ಯತೆಗಳಿವೆ. ಇವುಗಳತ್ತ ನಿರ್ದೇಶಕರು ಗಮನಕೊಡುವುದು ಉತ್ತಮ
ನಿರ್ದೇಶಕ ಯತೀಶ್
ಏನೇ ಆದರೂ ಆರು ಜನ ಯುವಕರು ಹಾಗೂ ಇಬ್ಬರು ಯುವತಿಯರ ರಂಗ ಪ್ರಯತ್ನ ಮಾತ್ರ ಎಲ್ಲರೂ ಮೆಚ್ಚುವಂತಹುದು. ನಾಡಿನ ಬೇರೆ ಬೇರೆ ರೆಪರ್ಟರಿಗಳಿಂದ ಬಂದ ಕಲಾವಿದರುಗಳು, ಟಿವಿ ನಟನೆಯ ಆಕರ್ಷನೆಯಲ್ಲಿ ಕಳೆದು ಹೋಗದೆ ಅಥವಾ ಅವಕಾಶಗಳು ಸಿಗಲಿಲ್ಲವೆಂದು ತಮ್ಮ ಮೂಲ ವೃತ್ತಿಗೆ ಮರಳದೇ ಆಟಾ-ಮಾಟ ಎನ್ನುವ ವ್ಯವಸ್ಥಿತ ತಂಡವೊಂದನ್ನು ೨೦೦೭ ರಲ್ಲಿ ಧಾರವಾಡದಲ್ಲಿ ಹುಟ್ಟುಹಾಕಿ ನಾಟಕ ಪ್ರದರ್ಶನಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಯಾವುದೇ ಮಠದ ಸಂಪನ್ಮೂಲಗಳಿಲ್ಲದೇ, ಯಾವುದೇ ಸ್ಥಾಪಿತ ಸಂಘಟನೆಯಾಗಿರದೇ, ಸರಕಾರ ಅಥವಾ ಸರಕಾರೇತರ ಸಂಸ್ಥೆಗಳ ಆರ್ಥಿಕ ಬೆಂಬಲವಿಲ್ಲದೇ, ಯಾವುದೇ ಫಾರೆನ್ ಫಂಡ್ಗಳ ಹಂಗಿಲ್ಲದೇ ಒಂದು ರೆಪರ್ಟರಿ ಮಾದರಿಯ ತಂಡವನ್ನು ಕೇವಲ ತಮ್ಮ ಇಚ್ಚಾಸಕ್ತಿ ಹಾಗೂ ರಂಗಪ್ರೀತಿಯಿಂದ ಮುನ್ನೆಡೆಸಿಕೊಂಡು ಬರುತ್ತಿರುವ ಎಂಟೂ ಜನ ಕಲಾವಿದರಿಗೆ ರಂಗನಮನ. ಕೇವಲ ರಂಗವೃತ್ತಿಯಿಂದಾಗಿ ವೃತ್ತಿಪರರೆನ್ನಿಸಿಕೊಳ್ಳದೇ ತಮ್ಮ ನಾಟಕಗಳಲ್ಲಿ ವೃತ್ತಿಪರತೆಯನ್ನು ರೂಢಿಸಿಕೊಂಡು ಅತ್ಯುತ್ತಮ ನಾಟಕಗಳನ್ನು, ವಿಭಿನ್ನ ಮಾದರಿಯ ರಂಗಪ್ರಯೋಗಗಳನ್ನು ಆಟಾ-ಮಾಟ ತಂಡ ನಿರ್ಮಿಸಿ ಪ್ರದರ್ಶಿಸಲಿ ಎಂದು ಆಶಿಸಬಹುದಾಗಿದೆ. ಇಡೀ ಕರ್ನಾಟಕದ ಜನತೆ ಹಾಗೂ ಸಂಘ ಸಂಸ್ಥೆಗಳು ಯುವಕರ ರಂಗಸಾಹಸಕ್ಕೆ ಪ್ರೋತ್ಸಾಹ ನೀಡಿ ಅವರ ಆಸಕ್ತಿಗೆ ಸಹಕರಿಸಬೇಕಿದೆ. ಅಪಾತ್ರರಿಗೆಲ್ಲಾ ಹಣದಾನ ಮಾಡುವ ಸಂಸ್ಕೃತಿ ಇಲಾಖೆ ಹಾಗೂ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಗಳು ಇಂತಹ ನಿಜವಾದ ರಂಗಾಸಕ್ತಿ ಇರುವವರನ್ನು ಗುರುತಿಸಿ ಪೂರ್ಣಪ್ರಮಾಣದಲ್ಲಿ ಹಣ ಸಹಾಯ ಮಾಡಿ ಚಿಕ್ಕಪುಟ್ಟ ರೆಪರ್ಟರಿಗಳನ್ನು ಬೆಂಬಲಿಸಿ ಬೆಳಸಬೇಕಿದೆ. ಆಟಾ-ಮಾಟ ತಂಡದ ರಂಗಕ್ರಿಯೆ ನಿರಂತರವಾಗಿರಲಿ. ಯುವ ಕಲಾವಿದರ ರಂಗಾಸಕ್ತಿ ಎಂದೂ ಬತ್ತದಿರಲಿ ಹಾಗೂ ಆಟಾ-ಮಾಟ ತಂಡ ರಂಗಸಾಧನೆಯ ಉತ್ತುಂಗಕ್ಕೇರಲಿ ಎನ್ನುವುದು ರಂಗಾಸಕ್ತರ ಹಾರೈಕೆಯಾಗಿದೆ.    
                                   -ಶಶಿಕಾಂತ ಯಡಹಳ್ಳಿ  

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...